Sunday, May 4, 2025

ಜೈವಿಕ ಸಂವರ್ಧನೆಯ ಆಟಾಟೋಪ

 ಜೈವಿಕ ಸಂವರ್ಧನೆಯ ಆಟಾಟೋಪ

ಲೇಖಕರು : ರಮೇಶ, ವಿ,ಬಳ್ಳಾ

ಅಧ್ಯಾಪಕರು

ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು (ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ

 ಮೊ: 9739022186

ಭೂವಿಯ ಮೇಲಿನ ಸಕಲ ಜೀವಿಗಳು ತಮ್ಮದೇ ಆದ ರೀತಿಯಲ್ಲಿ ಬದುಕು ಕಟ್ಟಿಕೊಂಡಿವೆ. ಆಹಾರ, ಆಶ್ರಯ, ಮತ್ತು ಸಂತಾನ ಮುಖ್ಯ ಉದ್ದೇಶವಾದರೂ ಇವುಗಳಿಗಾಗಿಯೇ ಜೀವನ ಹೋರಾಟ ನಡೆಯುತ್ತಲೇ ಇರುತ್ತದೆ. ಈ ಜೀವಿಗಳು ತಿನ್ನುವ ಆಹಾರವೇ ಅವುಗಳ ಉಳಿವಿಗೆ ಮುಖ್ಯ ಕಾರಣ ಹಾಗೂ ಪೋಷಕ ಶಕ್ತಿ ಕೂಡ.

ಈ ಶಕ್ತಿಯ ಅವಶ್ಯಕತೆ ಪ್ರತಿ ಜೀವಿಯಲ್ಲೂ ಒಂದೇ ತೆರನಾಗಿಲ್ಲ. ಅದು ಆ ಜೀವಿಗಳ ಗಾತ್ರ, ಶಕ್ತಿ ಬಳಕೆಯ ಪ್ರಮಾಣ, ಸಾಮರ್ಥ್ಯ ಇತ್ಯಾದಿಗಳನ್ನು ಅವಲಂಬಿಸಿದೆ. ಅವುಗಳ ಆಧಾರದಲ್ಲೇ ಜೀವಿಗಳು ತಿನ್ನುವ ಆಹಾರದ ವಿಧಗಳು ಕೂಡ ಭಿನ್ನವಾಗಿರುತ್ತವೆ. ಕೆಲವು ಸಸ್ಯಗಳನ್ನು, ಇನ್ನು ಕೆಲವು ಮಾಂಸವನ್ನು, ಮತ್ತೇ ಕೆಲವು ಎರಡನ್ನೂ ತಿಂದು ಬದುಕುವ ಜೀವಿಗಳಿರುವುದು ಕಂಡುಬರುತ್ತದೆ. ಈ ಎಲ್ಲ ಜೀವಿಗಳಿಗೆ ಮೂಲಭೂತವಾಗಿ ಶಕ್ತಿ ಒದಗುವುದು ಎಲ್ಲಿಂದ ಎಂದು ನೋಡುವುದಾದg.ೆ ಬಹುಶಃ ಸ್ವಪೋಷಕಗಳೆಂದು ಗುರುತಿಸಲಾಗುವ ಸಸ್ಯಗಳಿಂದಲೇ ಎನ್ನಬಹುದು. ಪರಿಸರದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿರುವ ಸ್ವಪೋಷಕ ಹಸಿರು ಸಸ್ಯಗಳು ಇಡೀ ಪರಿಸರ ವ್ಯವಸ್ಥೆಯನ್ನೇ ಆಳುವಂತಹವುಗಳಾಗಿವೆ. ಪರಿಸರವ್ಯವಸ್ಥೆ ಎಂದಾಕ್ಷಣ ನೆನಪಾಗುವುದು ಇಲ್ಲಿನ ಜೈವಿಕ ಹಾಗೂ ಅಜೈವಿಕ ಘಟಕಗಳ ನಡುವಿನ ಕೊಡುಕೊಳ್ಳುವಿಕೆಯ ಸಂಬಂಧ. ಈ ಸಂಬಂಧವೇ ವಿಸ್ತಾರಗೊಂಡು ನರ‍್ದಿಷ್ಟ ನೆಲೆಯಲ್ಲಿ ಪರಸ್ಪರ ಪ್ರತಿವರ್ತನೆಯ ಫಲವಾಗಿ ರೂಪುಗೊಳ್ಳುವುದೇ ಆಹಾರ ಸರಪಳಿ. ಈ ವ್ಯವಸ್ಥೆಯ ಪ್ರತಿ ಜೀವಿಯೂ ಒಂದಕ್ಕಿಂತ ಹೆಚ್ಚು ಆಹಾರ ಸರಪಳಿಯ ಭಾಗಿದಾರರಾಗಿರಲೂ ಸಾಕು. ಅದು ಮುಂದೆ ಆಹಾರಜಾಲವಾಗಿ ಮಾರ್ಪಟ್ಟು ಆಂತರಿಕವಾಗಿ ಒಂದು ಜೀವಿ ಹಲವು ಜೀವಿಗಳನ್ನು ವಿಭಿನ್ನ ರೀತಿಯಲ್ಲಿ ಭಕ್ಷಿಸಿ ಬದುಕುವ ದಾರಿಗಳನ್ನು ಕಂಡುಕೊಂಡಿರುತ್ತದೆ. ಅಂದರೆ ಜಾಲದ ರೂಪದಲ್ಲಿ ಹೆಣೆದುಕೊಂಡ ಅವುಗಳ ಆಹಾರ ಹಾಗೂ ಪೋಷಣೆಯ ಕರಾಮತ್ತು ಒಟ್ಟಾರೆ ಶಕ್ತಿ ಗಳಿಸುವ ಪ್ರಯತ್ನದ ಫಲವೇ ಆಗಿರುತ್ತದೆ.

ಈ ಶಕ್ತಿಯ ಹರಿವು ವಿವಿಧ ಜೀವಿಗಳಲ್ಲಿ ಹಲವು ಪೋಷಣಾ ಸ್ತರಗಳ ಮೂಲಕ ಹರಿದು ಬರುತ್ತದೆ. ಅಂದರೆ ಪ್ರತಿ ಹಂತವೂ ಒಂದು ಮಟ್ಟವನ್ನು ಪ್ರತಿನಿಧಿಸಿದರೆ ಆ ಮಟ್ಟದಲ್ಲಿ ಒಂದು ನಿರ್ಧಿಷ್ಟ ಜೀವಿ ಸ್ಥಾನ ಪಡೆದಿರುತ್ತದೆ. ಜೀವಿಯಿಂದ ಜೀವಿಗೆ ಶಕ್ತಿಯು ಹರಿಯುತ್ತಾ ಹೋದಂತೆ ಮುಂದೆ ಒದಗುವ ಶಕ್ತಿ ಪ್ರಮಾಣ ಕಡಿಮೆಯಾಗುತ್ತಾ ಸಾಗುತ್ತದೆ. ಏಕೆಂದರೆ ಇಲ್ಲಿ ಶಕ್ತಿಯ ಹರಿವು ಏಕಮುಖವಾಗಿರುವುದೇ ಹೀಗೆ ಕ್ಷೀಣಿಸಲು ಕಾರಣವಾಗಿದೆ. ಇದರರ್ಥ ಒಂದು ಸರಳ ಉದಾಹರಣೆಯಾಗಿ ನೋಡುವುದಾದರೆ ಹುಲ್ಲು ತಿನ್ನುವ ಮೊಲ, ಮೊಲವನ್ನು ತಿನ್ನುವ ನಾಯಿಯ ಸರಳ ಆಹಾರ ಸರಪಳಿಯಲ್ಲಿ ನಾಯಿಗೆ ಒದಗುವ ಶಕ್ತಿಯ ಪ್ರಮಾಣ ಕಡಿಮೆಯಾಗಿರುತ್ತದೆ. ಈ ಶಕ್ತಿ ಲಭ್ಯತೆಯ ಪ್ರಮಾಣವನ್ನು ಶೇಕಡಾ 10 ಎಂದು ಅಂದಾಜಿಸಲಾಗಿದೆ. ಅಂದರೆ ಹುಲ್ಲು 500 kJ ಶಕ್ತಿ ಹೊದಿದ್ದರೆ, ನಾಯಿಗೆ ದೊರೆಯುವ ಪ್ರಮಾಣ ಕೇವಲ 5 kJ ಶಕ್ತಿ ಮಾತ್ರ. ಇದನ್ನು ಗಮನಿಸಿದಾಗ ಪ್ರತಿ ಪೋಷಣಾ ಸ್ತರದಲ್ಲಿ ಶಕ್ತಿ ಕುಗ್ಗುತ್ತಾ ಹೋಗುತ್ತದೆ ಎಂಬುದು ಗೊತ್ತಾಗುತ್ತದೆ.

ಈ ಆಹಾರ ಸರಪಳಿಯ ಶಕ್ತಿ ಹರಿವಿನ ಪ್ರಕ್ರಿಯೆಯನ್ನು ನೋಡಿದಾದ ಮೇಲೆ ಇದಕ್ಕೆ ವಿರುದ್ಧವಾದ ಪ್ರಕ್ರಿಯೆಯೊಂದು ಪರಿಸರ ವ್ಯವಸ್ಥೆಯಲ್ಲಿ ಕಂಡುಬರುತ್ತದೆ. ಅದೇ ಜೈವಿಕ ಸಂವರ್ಧನೆ. ಏನಿದು ಅಂತೀರಾ ? ಖಂಡಿತಾ ತಿಳಿಯೋಣ. ಆಹಾರ ಶಕ್ತಿಯ ಚಲನೆಯ ದಿಕ್ಕು ಏಕಮುಖವಾಗಿರುವುದು ಮತ್ತು ಅದು ಮುಂದೆ ಹೋದಂತೆ ಶಕ್ತಿ ಲಭ್ಯತೆಯ ಪ್ರಮಾಣ ಕಡಿಮೆಯಾಗುತ್ತಾ ಸಾಗುವುದು ಒಂದು ಕಡೆಯಾದರೆ, ಅದೇ ಆಹಾರ ಸರಪಳಿಯಲ್ಲಿ ಸಾಗಿ ಹೋಗುವ ಕೆಲವು ವಿಧದ ರಾಸಾಯನಿಕ ಪದಾರ್ಥಗಳು ಮತ್ತು ಅಪಾಯಕಾರಿ ತ್ಯಾಜ್ಯಗಳು ಜೀವಿಗಳಲ್ಲಿ ಸಂಗ್ರಹವಾಗುತ್ತಾ ಸಾಂದ್ರ‍್ರತೆಯಲ್ಲಿ ಗರಿಷ್ಠಗೊಳ್ಳುತ್ತಾ ಸಾಗುತ್ತವೆ. ಈ ವ್ಯತಿರಿಕ್ತವಾದ ಹಾಗೂ ಜೀವಿಗಳಲ್ಲಿ ಮುಂದೆ ಸಾಗಿದಂತೆ ಹೆಚ್ಚುತ್ತಾ ಸಾಗುವ ವಿಷ ವಸ್ತುಗಳ ವರ್ಧನೆಯ ಪ್ರಕ್ರಿಯೆಯೇ ಜೈವಿಕ ಸಂವರ್ಧನೆಯಾಗಿದೆ.

ಪರಿಸರ ವ್ಯವಸ್ಥೆಯಲ್ಲಿ ಜೈವಿಕ ಸಂವರ್ಧನೆಗೊಳ್ಳುವ ವಿಷಕಾರಿ ರಾಸಾಯನಿಕ ಪದಾರ್ಥಗಳು ಹಲವು. ಅವುಗಳು ಸದ್ಯದ ಸ್ಥಿತಿಯಲ್ಲಿ ತಮ್ಮ ಪ್ರಮಾಣವನ್ನು ವೃದ್ಧಿಸಿಕೊಳ್ಳುತ್ತಾ ಸಾಗಿವೆ. ಈ ಪಟ್ಟಿಗೆ ದಿನೇ ದಿನೇ ಹೊಸ ಹೊಸ ಪದಾರ್ಥಗಳು ಬಂದು ಸೇರಿಕೊಳ್ಳುತ್ತಿವೆ. ಇದು ಅಪಾಯಕಾರಿಯಲ್ಲದೇ ಇಡೀ ಜೀವಿ ಪರಿಸರ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿ ಬಿಡುತ್ತದೆ. ನಮ್ಮ ನಿತ್ಯ ಜೀವನದ ಹಲವಾರು ವಸ್ತಗಳನ್ನು ಈ ಪಟ್ಟಿಗೆ ಸೇರಿಸಬಹುದು. ಅವುಗಳಲ್ಲಿ ನಾವು ಬಳಸುವ ಕ್ರೀಮಿನಾಶಕಗಳು ಅಥವಾ ಕೀಟನಾಶಕಗಳು, ರಾಸಾಯನಿಕ ಗೊಬ್ಬರಗಳು, ಗಣಿಗಾರಿಕೆಯ ತ್ಯಾಜ್ಯಗಳು, ಭಾರಲೋಹಗಳು, ಸಿಡಿಮದ್ದುಗಳು, ಕಾರ್ಖಾನೆ ವಿಷ ತ್ಯಾಜ್ಯಗಳು, ವಿಷಾನಿಲಗಳು, ಬಿಸಾಡಿದ ಅನುಪಯುಕ್ತ ಔಷಧಿಗಳು, ಸಿಂಥಟಿಕ್ ಬಣ್ಣಗಳು ಇತ್ಯಾದಿಗಳು. ಇವು ಉಂಟುಮಾಡುವ ಪರಿಣಾಮಗಳನ್ನು ನೋಡಿದಾಗ ಇವುಗಳ ಆಟಾಟೋಪ ಹೆಚ್ಚಾಗಿದೆ ಎಂದೆನಿಸದಿರಲಾರದು.

ಮನುಷ್ಯ ತನ್ನ ನಿತ್ಯ ಜೀವನದಲ್ಲಿ ಸ್ಪರ್ಧೆಗೆ ಬಿದ್ದಿದ್ದಾನೆ. ಅಷ್ಟೇ ಅಲ್ಲ ತನ್ನ ಐಷಾರಾಮಿ ಜೀವನದ ಶೈಲಿಯಿಂದ ಒಂದಲ್ಲ ಒಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾನೆ. ಈ ಸಂದರ್ಭದಲ್ಲಿ ನಮ್ಮ ಜೀವನದ ಒಂದು ಸರಳ ಮುನ್ನೋಟವನ್ನು ನೋಡುವುದಾದರೆ ನಾವಿಂದು ಅತ್ಯುತ್ತಮವಾದ, ಕೀಟಪೀಡೆಯಿಲ್ಲದ ಗುಣಮಟ್ಟದ ತರಕಾರಿಗಳನ್ನು ಸಂತೆಯಲ್ಲಿ ತರುತ್ತಿದ್ದೇವೆ. ಮನೆಗಳಿಗೆ ಬಣ್ಣದ ರಂಗುಗಳನ್ನು ಆಕರ್ಷಕವಾಗಿ ಬಳಿಯುತ್ತಿದ್ದೇವೆ. ಯಾವ ಕಾಯಿಲೆಗೂ ಹೆದರುವ ಅವಶ್ಯಕತೆ ಇಲ್ಲ ಎಂಬಂತೆ ಬಗೆ ಬಗೆಯ ಅನೇಕ ಔಷಧಿಗಳನ್ನು ಬಳಸುತ್ತಿದ್ದೇವೆ. ಅಗತ್ಯತೆ ಹೆಚ್ಚಾದಂತೆ ನಾನಾ ರೀತಿಯ ಸಾಮಗ್ರಿಗಳು ಅಂದರೆ ಪ್ಲಾಸ್ಟಿಕ್‌ಗಳು, ಕ್ಯಾರಿಬ್ಯಾಗ್‌ಗಳು, ಸಿಂಥಟಿಕ್ ಬಟ್ಟೆಗಳು, ಸುವಾಸಿಕಗಳು, ಸ್ವಚ್ಛಕಾರಿಗಳು ಒಂದೆ ಎರಡೇ, ನಮ್ಮ ಕೈಕೆಲಸ ಕಡಿಮೆ ಮಾಡಿ ನಾಜೂಕು ಮಾಡಿಬಿಟ್ಟಿವೆ. ಕಾಲದ ಪರಿಮಿತಿಯಿಲ್ಲದೇ ನಾನಾ ಬೆಳೆಗಳನ್ನಿಂದು ಬೆಳೆಯುತ್ತಿದ್ದೇವೆ. ಜನಸಂಖ್ಯೆ ಹೆಚ್ಚಾದಂತೆ ಉದ್ಯೋಗ ನೀಡಲು ಕೈಗಾರಿಕೆಗಳು ವಿಸ್ತಾರಗೊಂಡಿವೆ. ಹಗಲಿರುಳು ಗಣಿಗಾರಿಕೆಗಳು ನಡೆಯುತ್ತಿವೆ. ಇದೆಲ್ಲಾ ಅಭಿವೃದ್ಧಿ ಅಂತೀರಾ ಏನೋ ಗೊತ್ತಿಲ್ಲ. ಇದರ ಒಟ್ಟು ಫಲಿತ ಮಾತ್ರ ವಿನಾಶದ ವಿಷ ಬಿತ್ತನೆಯಾಗಿದೆ. ಇದು ತಂದೋಡ್ಡುವ ಅಡ್ಡ ಪರಿಣಾಮ ಊಹೆಗೂ ನಿಲುಕದು. ಯಾಕೆ ಇದನ್ನು ಪ್ರಸ್ತಾಪಿಸಿದೆನೆಂದರೆ, ನಾಗರೀಕತೆಯ ನಾಗಾಲೋಟದಲ್ಲಿ ನಮ್ಮ ಜೀವನದುದ್ದಕ್ಕೂ ವಿಷದ ವರ್ತುಲ ವಿಸ್ತಾರಗೊಳ್ಳುತ್ತಿದೆ. ಅಭಿವೃದ್ಧಿಯ ವಿಚಾರ ಒಂದು ಕಡೆಯಾದರೆ ಅದು ಮಾಡುವ ಎಡವಟ್ಟು ಮನುಕುಲಕ್ಕೆ ಮಾತ್ರವಲ್ಲದೇ ಇಡೀ ಜೀವಸಂಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿರುವುದು ಆತಂಕಕಾರಿಯಾಗಿದೆ.

ನಮಗೆ ಅತ್ಯಂತ ಪರಿಚಿತವಾಗಿರುವ ಕ್ರಿಮಿನಾಶಕ ಡಿಡಿಟಿಯ ಬಗ್ಗೆ ನೋಡುವುದಾದರೆ ಇದೊಂದು ಸೂಕ್ತ ಕ್ರಿಮಿನಾಶಕವಾಗಿ ಒಂದು ಕಾಲದಲ್ಲಿ ಹೆಸರು ಮಾಡಿತ್ತು. ಅಮೇರಿಕಾದ ವಾಣೀಜ್ಜಿಕ ಮಹತ್ವದ ಎಲ್ಮ್ ಮರಗಳು ಶೀಲಿಂಧ್ರ ಬಾಧೆಯಿಂದ ಸಾಯಲಾರಂಭಿಸಿದ್ದವು. ಅವುಗಳ ಉಳಿವಿಗಾಗಿ ಶಿಲೀಂಧ್ರನಾಶಕವಾಗಿ ನೂರಾರು ಎಕರೆ ಪ್ರದೇಶಗಳಿಗೆ ಬೇಕಾಬಿಟ್ಟಿಯಾಗಿ ಡಿಡಿಟಿಯನ್ನು ಸಿಂಪಡಿಸಲಾಯಿತು. ಮರಗಳು ಮತ್ತೆ ಚೇತರಿಸಿಕೊಂಡು ಸಮೃದ್ಧಗೊಂಡವು. ಆದರೆ ಕೆಲವೇ ದಿನಗಳಲ್ಲಿ ಅದು ರಾಬಿನ್ ನಂತಹ ಪಕ್ಷಿಸಂಕುಲದ ನಾಶಕ್ಕೆ ಕಾರಣವಾಗಿರುವುದು ಅಧ್ಯಯನಗಳಿಂದ ಸಾಬೀತಾಯಿತು. ಜೀವಜಾಲದಲ್ಲಿ ಅದು ಸೃಷ್ಠಿಸಿದ ಆವಾಂತರಗಳು ತಲ್ಲಣಗೊಳಿಸಿತು. ರಾಬಿನ್ ಹೊರತಾಗಿಯೂ 90 ರಷ್ಟು ಪಕ್ಷಿಜಾತಿಗಳ ಅಳಿವಿಗೆ ಅದು ಮುನ್ನುಡಿ ಬರೆದಿತ್ತು. 1960ರ ಹೊತ್ತಿಗೆ ಇದರ ಪ್ರಭಾವ ವಿಪರೀತವಾಗಿದ್ದನ್ನು ಗಮನಿಸಿ ನಿಷೇಧ ಹೇರಲಾಯಿತು. ಇದರ ಪ್ರಭಾವ ಎಷ್ಟಾಗಿತ್ತೆಂದರೆ ಆಹಾರಜಾಲದ ಪ್ರತಿ ಸ್ತರವೂ ವಿಷಮಯವಾಗಿತ್ತು. ಮಗುವಿಗೆ ಉಣಿಸುವ ತಾಯಿಯ ಎದೆಹಾಲು ಕೂಡ ಹಾಲಾಹಲವಾಗಿ ಪರಿಣಮಿಸಿತ್ತು. 1970-80ರ ಹೊತ್ತಿಗೆ ಅದನ್ನು ಬಹುತೇಕ ದೇಶಗಳು ನಿಷೇಧಿಸಿದರೂ ಕೂಡ ಈಗಲೂ ಕೆಲ ಜಲಚರ ಜೀವಿಗಳ ದೇಹಕೋಶಗಳಲ್ಲಿ ಅದರ ಅಂಶ ಪತ್ತೆಯಾಗುತ್ತಿದೆÉ.

ಪಾದರಸ, ಸೀಸ, ಅರ್ಸೇನಿಕ್, ಕ್ಯಾಡ್ಮಿಯಮ್, ಕ್ರೋಮಿಯಂ, ಪಾಲಿಕ್ಲೋರಿನೇಟೆಡ್ ಬೈಫಿನೈಲ್‌ಗಳು, ಸೆಲೆನಿಯಂ, ನಿಕ್ಕಲ್ ಇತ್ಯಾದಿ ವಿಷ ಕಾರುವ ವಸ್ತಗಳ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದ್ದು ಇದು ಒಂದು ರೀತಿಯಲ್ಲಿ ಜೈವಿಕ ಸಂವರ್ಧನೆಯ ಪ್ರಮಾಣವನ್ನು ಹೆಚ್ಚಿಸಿದೆ. ನಮ್ಮ ಪರಿಸರ ವ್ಯವಸ್ಥೆಯ ಪ್ರತಿ ಘಟಕಗಳೂ ಇದರಿಂದ ಹಾನಿಗೆ ಒಳಗಾಗಿವವೆ. ನಿರಂತರ ಹಾಗೂ ರ‍್ರಾಬರ‍್ರಿ ಇವುಗಳ ಬಳಕೆ ಮಾರಕವಾದ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತಿವವೆ. ಕ್ಯಾನ್ಸರ್, ನರಮಂಡಲದ ದೋಷ, ಮೆದುಳು ಮೇಲಿನ ಅಡ್ಡಪರಿಣಾಮ, ಮೂತ್ರಕೋಶದ ಸಮಸ್ಯೆಗಳು, ಪಿತ್ತಕೋಶದ ಅಸಮರ್ಪಕತೆ ಇತ್ಯಾದಿ ಸವಾಲುಗಳಿಗೆ ಮನುಷ್ಯ ಬಲಿಯಾಗುತ್ತಿರುವುದು ದುರಂತ. ಅಷ್ಟೇ ಏಕೆ ಸಮುದ್ರ ಜೀವಿಗಳು, ನಮ್ಮ ಮನೆ, ಊರುಕೇರಿಯ ಸುತ್ತಲಿನ ಸಣ್ಣಪುಟ್ಟ ಜಲಚರಗಳು ನಮ್ಮ ತಪ್ಪಿನಿಂದ ಪರಿತಪಿಸುತ್ತಿವೆ. ಮಾನವನ ಅತೀ ಆಸೆಯ ಹಾಗೂ ನವೀನ ಜೀವನಶೈಲಿಯ ಕಾರ್ಯಚಟುವಟಿಕೆಗಳು ಎಂದಿಗಿಂತ ಇಂದು ಹೆಚ್ಚು ಮಾರಕವಾಗುತ್ತಿವೆ. ಮಾನವನ ಹಸ್ತಕ್ಷೇಪದ ಪ್ರತಿ ಕೆಲಸವೂ ಅಪಾಯದ ಮುನ್ಸೂಚನೆ ನೀಡುವಂತಾಗಿರುವುದು ಮತ್ತು ಪರಿಸರ ಅಸಮತೋಲನ ಸೃಷ್ಠಿಸಿರುವುದು ಆಘಾತಕಾರಿಯಾಗಿದೆ. ಇವೆಲ್ಲವುಗಳಿಂದ ಜೈವಿಕ ಸಂವರ್ಧನೆಯ ಆಟಾಟೋಪ ಹೆಚ್ಚಾಗಿ ಸಕಲ ಜೀವಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿರುವುದು ಮಾತ್ರ ಸುಳ್ಳಲ್ಲ.

 


ಆಕರಗಳು : ಜೀವಜಾಲ- ಕೆ ಪುಟ್ಟಸ್ವಾಮಿ & ಕೃಪಾಕರ ಸೇನಾನಿ

ಕರ್ನಾಟಕ ಶಾಲಾ ವಿಜ್ಞಾನ ಪಠ್ಯ

ಜಾಲತಾಣ

No comments:

Post a Comment