Wednesday, June 4, 2025

ವಾವ್! ಜೇನು ನೊಣ! ಏನಿದು ನಿನ್ನ ವಿಸ್ಮಯಕಾರಿ ಜೀವನ!

 ವಾವ್!  ಜೇನು ನೊಣ! ಏನಿದು ನಿನ್ನ ವಿಸ್ಮಯಕಾರಿ ಜೀವನ!

 ಲೇಖಕರು: ಡಾ. ಶಶಿಕುಮಾರ್. ಎಲ್ 
ವೈಜ್ಞಾನಿಕ ಅಧಿಕಾರಿ, ಜೀವಶಾಸ್ತ್ರ ವಿಭಾಗ
ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ 
ಜಲಪುರಿ ಕೆಪಿಎ ಆವರಣ ಮೈಸೂರು.
7204932795

ಜೇನುನೊಣಗಳು ಭೂಮಿಯ ಮೇಲಿನ ಅತಿ ದೊಡ್ಡ ಬೆಳೆ ಪರಾಗಸ್ಪರ್ಶಕಗಳಾಗಿವೆ. ನಾವು ಬದುಕಿರಲು , ಇತರ ಪ್ರಾಣಿಗಳು ಬದುಕಿರಲು  ಮತ್ತು ನಮಗೆ ತಿಳಿದಿರುವಂತೆ ಭೂಮಿಯ ಮೇಲೆ ಜೀವವು ಉಳಿಯಲು ಅವು ಬಹುತೇಕ  ಕಾರಣ.  ಜೇನುನೊಣಗಳ ಸಂತತಿ ಎಂದು ನಾಶವಾಗುವುದೋ ಅಂದಿಗೇ ಮನುಕುಲಗೂ ನಾಶವಾಗುತ್ತದೆ ಎಂದಿದ್ದಾನೆ  ಜಗತ್ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್. ಈ ಮಾತು ಮಾತು ನೂರಕ್ಕೆ ನೂರರಷ್ಟು ಸತ್ಯ. 
    ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ  ಜೇನುನೊಣಗಳದ್ದು ಬಹುದೊಡ್ಡ ಪಾತ್ರವಿದೆ. ನಾವೆಲ್ಲ ಉಪಯೋಗಿಸುವ ಬಹುತೇಕ ಹಣ್ಣು, ಹಂಪಲು, ತರಕಾರಿ ಸೇರಿದಂತೆ ಎಲ್ಲಾ ಆಹಾರಗಳ ಹಿಂದಿರುವುದು ಇದೇ ಜೇನುನೊಣಗಳ ಪರಾಗ ಸ್ಪರ್ಶದ ಅವಿರತ ಪ್ರಯತ್ನ. ಮನುಷ್ಯ ಸೇವಿಸುವ ಶೇಕಡ 70% ರಷ್ಟು ಆಹಾರ ಜೇನುನೊಣಗಳನ್ನೇ ಅವಲಂಬಿಸಿದೆ ಎನ್ನುವುದರಿಂದಲೇ  ಇವುಗಳ ಮಹತ್ವ ಎಂತಹದ್ದು ಎಂಬುದು ನಮಗೆ ಗೊತ್ತಾಗುತ್ತದೆ. ಹೀಗಾಗಿ ಜೇನುನೊಣಗಳು ಇಲ್ಲದೆ ಇದ್ದರೆ ನಾವು ತಿನ್ನುವ ಯಾವ ಆಹಾರ ಪದಾರ್ಥವೂ ನಮ್ಮ ಉದರ ಸೇರದು! ಇತ್ತೀಚಿನ ದಿನಗಳಲ್ಲಿ ಜೇನುನೊಣಗಳ ಸಂಖ್ಯೆಯು ಕಡಿಮೆಯಾಗುತ್ತಿದೆ ಎನ್ನುವ ವಿಚಾರ ಪರಿಸರ ಪ್ರಿಯರು, ರೈತರೂ ಸೇರಿದಂತೆ ಎಲ್ಲರ ಮನಸ್ಸಿಗೆ ಆತಂಕವನ್ನುಂಟು ಮಾಡಿದೆ ಎಂಬುದರಲ್ಲಿ ಉತ್ಪ್ರೇಕ್ಷೆ  ಇಲ್ಲ.

     ಪ್ರಪಂಚದಲ್ಲಿ ಅಂದಾಜು 20,000 ಜಾತಿಯ ಜೇನುನೊಣಗಳಿವೆ. ತಮ್ಮ ಆಹಾರಕ್ಕಾಗಿ ಹೂಗಳ ಮಕರಂದವನ್ನು ಹೀರುವ ಜೇನು ಹುಳುವಿನ ಪ್ರಕ್ರಿಯೆಯು ಪರಾಗಸ್ಪರ್ಶಕ್ಕೆ ಕಾರಣವಾಗುತ್ತದೆ. ಜೇನುಗಳ ಪರಾಗಸ್ಪರ್ಶದಿಂದಾಗಿ ಬೆಳೆಯ ಇಳುವರಿಯು ಮಾಮೂಲಿಗಿಂತ ಶೇಕಡ 20ರಷ್ಟು ಹೆಚ್ಚಾಗುತ್ತದೆ. ಜೇನು ಹಾಗೂ ಜೇನುನೊಣಗಳು ಮಾನವ ಸಂಕುಲಕ್ಕೆ ಪ್ರಕೃತಿದತ್ತವಾಗಿ ಸಿಕ್ಕಿರುವ ವರ. ಆದರೆ ಮಾನವನ ಚಟುವಟಿಕೆಗಳಿಂದಾಗಿ ಹಲವು ಬಗೆಯ ಜೇನುನೊಣಗಳು ಅಳಿವಿನ ಅಂಚಿನಲ್ಲಿವೆ. ತಜ್ಞರ ಪ್ರಕಾರ, ನಮ್ಮ ಪರಿಸರ ವ್ಯವಸ್ಥೆಯ ಉಳಿವು ಹೆಚ್ಚಾಗಿ ಪರಾಗಸ್ಪರ್ಶದ ಮೂಲಭೂತ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ. ಹೂ ಬಿಡುವ ಹೆಚ್ಚಿನ ಸಸ್ಯ ಪ್ರಭೇದಗಳು ಸಂಪೂರ್ಣವಾಗಿ ಅಥವಾ ಭಾಗಶಃ ಜೇನುನೊಣಗಳ ಪರಾಗಸ್ಪರ್ಶವನ್ನು ಅವಲಂಬಿಸಿವೆ. ಅಷ್ಟೇ ಅಲ್ಲ, ಜೇನುನೊಣಗಳು ಆಹಾರ ಸುಸ್ಥಿರತೆ  ಮತ್ತು ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಸಹಕರಿಸುತ್ತವೆ ಎಂಬುದು ನಮಗೆ ತಿಳಿದಿರುವ ವಿಚಾರವಾಗಿದೆ. 

           ಜೇನುನೊಣಗಳ ಪ್ರಾಮುಖ್ಯತೆ, ಅವು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸುಸ್ಥಿರ ಅಭಿವೃದ್ಧಿಗೆ ಅವು ನೀಡಿದ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸಲು “ವಿಶ್ವ ಜೇನುನೊಣ ದಿನ” ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ವಿಶ್ವ ಜೇನುನೊಣ ದಿನಾಚರಣೆಯನ್ನು ಈ ಬಾರಿ ೨೦೨೫ರ ಮೇ 20ರಂದು ಆಚರಿಸಲಾಗಿದೆ. ಜೇನು ಸಾಕಣೆಯ ಕೌಶಲ್ಯವನ್ನು ಕರಗತ ಮಾಡಿಕೊಂಡ ಆಂಟನ್ ಜಾನ್ಸ ಅವರ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸಲು ಈ ದಿನದಂದು ವಿಶ್ವ ಜೇನುನೊಣ ದಿನವನ್ನಾಗಿ ಸಂಭ್ರಮಿಸಲಾಗುತ್ತದೆ. "ಪ್ರಕೃತಿಯಿಂದ  ಪ್ರೇರಿತವಾದ ಜೇನುನೊಣ ನಮ್ಮೆಲ್ಲರನ್ನು ಪೋಷಿಸುತ್ತದೆ" ಎಂಬ ಈ ವರ್ಷದ ಘೋಷವಾಕ್ಯವು ಕೃಷಿ ಆಹಾರ ವ್ಯವಸ್ಥೆಗಳು ಮತ್ತು ನಮ್ಮ ಗ್ರಹದ ಪರಿಸರ ವ್ಯವಸ್ಥೆಗಳ ಆರೋಗ್ಯವನ್ನು ಜೇನುನೊಣಗಳು ಮತ್ತು ಇತರ ಪರಾಗಸ್ಪರ್ಶಕಾರಕಗಳು ವಹಿಸುವ ನಿರ್ಣಾಯಕ ಪಾತ್ರಗಳನ್ನು ಎತ್ತಿ ತೋರಿಸುತ್ತದೆ ಮತ್ತು ಅವುಗಳ ಭವಿಷ್ಯವನ್ನು ರಕ್ಷಿಸಲು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುತ್ತದೆ ಎಂಬುದನ್ನು ಹೇಳಲಾಗಿದೆ. 


      ಜೇನಿನಲ್ಲಿ ಹಲವು ಬಗೆಗಳಿವೆ. ಹೆಜ್ಜೇನು, ಕೋಲು ಜೇನು, ತೊಡವೆ ಜೇನು, ಯುರೋಪಿಯನ್ ಜೇನು.. ಹೀಗೆ ಆಯಾ ಪ್ರದೇಶಕ್ಕೆ ಸೀಮಿತವಾಗುವ ಸಂತತಿಗಳು ಇರುತ್ತವೆ. ಜೇನುತುಪ್ಪವವನ್ನು ಆದಿಕಾಲದಿಂದಲೂ ದಿವ್ಯ ನೈಸರ್ಗಿಕ ಔಷಧಿಯಾಗಿ ಬಳಸಲಾಗುತ್ತಿದೆ. ಸುಟ್ಟಗಾಯ ಹಾಗೂ ಹುಣ್ಣು ವಾಸಿ ಮಾಡಲು ಜೇನನ್ನು ಲೇಪಿಸಬಹುದಾಗಿದೆ. ಕೆಂಪು ರಕ್ತ ಕಣಗಳನ್ನು ವೃದ್ಧಿಸಿ ರಕ್ತದಲ್ಲಿನ ಹೀಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ ರಕ್ತ ಹೀನತೆಯನ್ನು ನಿವಾರಿಸಲು ಜೇನುತುಪ್ಪ ಸಹಕಾರಿಯಾಗಿದೆ. ಬಿಸಿ ನೀರಿನ ಜೊತೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿದರೆ ದೇಹದ ತೂಕ ಕಡಿಮೆಯಾಗುತ್ತದೆ. ಇನ್ನು ಉಸಿರಾಟದ ಸೋಂಕು, ಕಫ ಮತ್ತು ಅಸ್ತಮಾದಂತಹ ಸಮಸ್ಯೆಗಳಿಗೆ ಜೇನುತುಪ್ಪ ರಾಮಬಾಣ ಎಂದರೆ ತಪ್ಪಾಗಲಾರದು. 


           ಜೇನುನೊಣಗಳು ಪರಿಸರ ಆರೋಗ್ಯದ ಸೂಚಕಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಅಲ್ಲದೇ ಪರಿಸರ ವ್ಯವಸ್ಥೆಗಳು ಮತ್ತು ಹವಾಮಾನದ ಬಗ್ಗೆ ಒಳನೋಟಗಳನ್ನು ಒದಗಿಸುತ್ತವೆ. ಪರಾಗಸ್ಪರ್ಶ ಮಾಡುವ  ಜೇನುನೊಣಗಳನ್ನು ರಕ್ಷಿಸುವುದರಿಂದ ಮಣ್ಣಿನ ಫಲವತ್ತತೆ, ಕೀಟ ನಿಯಂತ್ರಣ ಮತ್ತು ಗಾಳಿ ಹಾಗೂ ನೀರಿನ ನಿಯಂತ್ರಣದಂತಹ ನಿರ್ಣಾಯಕ ಪರಿಸರ ವ್ಯವಸ್ಥೆಯ ಸೇವೆಗಳು ಹೆಚ್ಚಾಗುತ್ತವೆ. ಜೊತೆಯಲ್ಲಿ ಆಹಾರ ಕೊರತೆ ಮತ್ತು ಪರಿಸರದಲ್ಲಿನ  ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತವೆ. 

            ಅನೇಕ ಸಸ್ಯ ಪ್ರಭೇದಗಳ ಉಳಿವಿಗೆ ಕಾರಣವಾಗುವ ಮೂಲಕ ಜೇನುನೊಣಗಳು ಪರಿಸರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಜೀವನೋಪಾಯವನ್ನು ಒದಗಿಸುವಲ್ಲಿ ಜೇನು ಸಾಕಣೆ ಅತ್ಯಂತ ಸಹಕಾರಿ ಕೂಡ. ದೂರದೃಷ್ಟವಶಾತ್,  ಆವಾಸಸ್ಥಾನ ನಷ್ಟ, ಸುಸ್ಥಿರವಲ್ಲದ ಕೃಷಿ ಪದ್ಧತಿಗಳು, ಹವಾಮಾನ ಬದಲಾವಣೆ, ಮಾಲಿನ್ಯ, ಅರಣ್ಯ ಬೆಂಕಿ, ಕೀಟನಾಶಕ ಬಳಕೆ ಮತ್ತು ಮಿತಿಮೀರಿದ ನಗರೀಕರಣದಂಥ ಸಮಸ್ಯೆಗಳಿಂದಾಗಿ ಜೇನುನೊಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ವಿಶ್ವ ಜೇನುನೊಣ ದಿನವು ಈ ಅಗತ್ಯ ಜೀವಿಗಳನ್ನು ರಕ್ಷಿಸುವ ಇಂಗಿತವನ್ನು ಎತ್ತಿ ತೋರಿಸಿದೆ. ವಿಶ್ವಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ, ವಿಶ್ವ ಜೇನುನೊಣ ದಿನಾಚರಣೆಯು ಜಾಗತಿಕ ಆಹಾರ ಪೂರೈಕೆ ಸರಪಳಿಗ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಹಸಿವನ್ನು ಹೋಗಲಾಡಿಸಲು ಗಮನಾರ್ಹವಾಗಿ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ. 

ಜೇನಿನ ಉತ್ಪತ್ತಿಗಾಗಿ ಲಕ್ಷಾಂತರ ಹೂಗಳನ್ನು ಸ್ಪರ್ಶಿಸಿ ಬರುವ ಏಕಮೇವ ಕೀಟ ಜೇನುನೊಣ. ಆದ್ದರಿಂದ ಹೆಚ್ಚು ವೈವಿದ್ಯಮಯ ಹೂಗಳನ್ನು ಹೊಂದಿರುವ ಗಿಡಮರಗಳನ್ನು ತುರ್ತಾಗಿ ರಕ್ಷಿಸಬೇಕಾಗಿದೆ. ರೈತರು ಆದಷ್ಟು ತಮ್ಮ  ಕೃಷಿಯಲ್ಲಿ ಜೇನುನೊಣಗಳಿಗೆ ಹಾನಿ ಮಾಡದ ಕೀಟನಾಶಗಳನ್ನು ಬಳಸಬೇಕಾಗಿದೆ. ಪ್ರಪಂಚಾದ್ಯಂತ 90ಕ್ಕೂ ಅಧಿಕ ಪ್ರಮುಖ ಆಹಾರ ಬೆಳೆಗಳು ಜೇನುನೊಣಗಳ ಪರಾಗಸ್ಪರ್ಶವನ್ನು ಅವಲಂಬಿಸಿವೆ. ಪ್ರಕೃತಿಯ ಆಹಾರ ಸರಪಳಿಯಲ್ಲಿ ಮೇಲುಸ್ತರದ ಜೀವಿಗಳಿಗೆ ಆಹಾರದ ಮೂಲವಾಗಿರುವ ಜೇನುನೊಣಗಳ ಸಂತತಿಯನ್ನು ಸಂರಕ್ಷಿಸುವುದು ಅನಿವಾರ್ಯ ಹಾಗೂ ಅವಶ್ಯಕವಾಗಿದೆ. “ಕರ್ನಾಟಕದ ರಾಜ್ಯ ಕೀಟ” ಎಂದೇ ಹೆಸರಾಗಿರುವ ಜೇನುನೋಣವನ್ನು ಉಳಿಸಿ ಕಾಪಾಡಿಕೊಳ್ಳಬೇಕಾದ ಅಗತ್ಯವನ್ನು ನಾವು ತುರ್ತಾಗಿ ಅರಿಯಬೇಕಾಗಿದೆ. ಜೇನುನೊಣಗಳು ನೋಡಲು ಚಿಕ್ಕದಿರಬಹುದು ಆದರೆ ಜೇನುನೊಣಗಳ ಮೇಲೆಯೇ ಮನುಷ್ಯನ ಬದುಕು ಅವಲಂಬಿತವಾಗಿದೆ ಎಂಬುದು ಸೂರ್ಯ ಚಂದ್ರರಷ್ಟೇ ಸತ್ಯ.

No comments:

Post a Comment