Wednesday, June 4, 2025

ದೇಶದ ನೀಲಿ ಕ್ರಾಂತಿಯ ಹರಿಕಾರ-ಡಾ.ಎಸ್. ಅಯ್ಯಪ್ಪನ್

 ದೇಶದ ನೀಲಿ ಕ್ರಾಂತಿಯ ಹರಿಕಾರ-ಡಾ.ಎಸ್. ಅಯ್ಯಪ್ಪನ್

         ಲೇಖಕರು : ಡಾ.ಟಿ.ಎ.ಬಾಲಕೃಷ್ಣ ಅಡಿಗ
                     ವಿಜ್ಞಾನ ಸಂವಹನಕಾರರು


 ಕಳೆದ ಮೇ ತಿಂಗಳ 10ರಂದು ನಮ್ಮನ್ನಗಲಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಸುಬ್ಬಣ್ಣ ಅಯ್ಯಪ್ಪನ್ ಕರ್ನಾಟಕದಲ್ಲಷ್ಟೇ ಅಲ್ಲ, ದೇಶದ ವಿಜ್ಞಾನ ಕ್ಷೇತ್ರದ ಧ್ರುವ ತಾರೆಗಳಲ್ಲಿ ಒಬ್ಬರು. ತಮ್ಮ ಸರಳತೆ ಹಾಗೂ ಸಜ್ಜನಿಕೆಗಳಿಂದಾಗಿ ದೇಶದುದ್ದಕ್ಕೂ ಅಪಾರ ಅಭಿಮಾನಿಗಳನ್ನು ಹೊಂದಿದ್ದವರು. ಪಿ.ಹೆಚ್‌ಡಿ ಸಂಶೋಧನೆಯ ಅವಧಿಯಲ್ಲಿ ಅವರ ಸಹಪಾಠಿಯಾಗಿದ್ದ ಹೆಮ್ಮೆ ನನ್ನದು.


ಡಿಸೆಂಬರ್‌ 10, 1955ರಲ್ಲಿ ಜನಿಸಿದ ಅಯ್ಯಪ್ಪನ್‌ ಅವರು ಬೆಂಗಳೂರಿನ  ನ್ಯಾಷನಲ್‌ ಕಾಲೇಜಿನಲ್ಲಿ ಪದವಿ ಅಧ್ಯಯನ ಮಾಡಿ, ಮುಂದೆ  ಮಂಗಳೂರಿನ  ಫಿಶರೀಸ್‌ ಕಾಲೇಜಿನಲ್ಲಿ ಮೀನುಗಾರಿಕೆ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದ  ಪ್ರಾಣಿಶಾಸ್ತ್ರ ವಿಭಾಗದಲ್ಲಿ  ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿ ಪಿ.ಹೆಚ್.ಡಿ ಪದವಿಗೆ ಪಾತ್ರರಾದರು. ನನ್ನ ಮತ್ತು ಅವರ ಒಡನಾಟ ಪ್ರಾರಂಭವಾಗಿದ್ದು ಇಲ್ಲಿಯೇ. ಅತ್ಯಂತ ಮಿತಭಾಷಿಯಾಗಿದ್ದರೂ, ಅಯ್ಯಪ್ಪನ್‌ ಅವರು ತಮ್ಮ ಕಾರ್ಯತತ್ಪರತೆಯಿಂದಾಗಿ ನಮ್ಮ ಸಂಶೋಧನಾ ಗುಂಪಿನಲ್ಲಿದ್ದ  ಎಲ್ಲ ಸಹೋದ್ಯೋಗಿಗಳ ಪ್ರೀತಿ, ವಿಶ್ವಾಸಗಳಿಗೆ ಪಾತ್ರರಾಗಿದ್ದರು.

1978ರಲ್ಲಿ  ದೇಶದ ಕೃಷಿ ಸಂಶೋಧನೆಯ  ಪ್ರಮುಖ ಸಂಸ್ಥೆಯಾದ ಐ.ಸಿ.ಎ.ಆರ್‌ ನಲ್ಲಿ ವಿಜ್ಞಾನಿಯಾಗಿ  ವೃತ್ತಿ ಜೀವನ ಪ್ರಾರಂಭಿಸಿದ ಅಯ್ಯಪ್ಪನ್‌, ಮುಂದೆ ಹಲವಾರು ಸಂಸ್ಥೆಗಳಲ್ಲಿ ತಮ್ಮ ನಿಸ್ಪೃಹ ಸೇವೆ ಸಲ್ಲಿಸಿದ್ದಾರೆ. 2006-2008ರ ಅವಧಿಯಲ್ಲಿ ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಸಿ.ಇ.ಒ. ಆಗಿ ಸೇವೆ ಸಲ್ಲಿಸಿದ್ದಾರೆ. 2010ರಲ್ಲಿ ಕೇಂದ್ರ ಸರ್ಕಾರದ ಕೃಷಿ ಸಂಶೋಧನಾ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡರು.

ಸಾಮಾನ್ಯವಾಗಿ ಬೆಳೆವಿಜ್ಞಾನಿಗಳೇ ಮಹಾನಿರ್ದೇಶಕರಾಗಿ ನೇಮಕಗೊಳ್ಳುತ್ತಿದ್ದ, ಐ.ಸಿ.ಎ.ಆರ್.‌  ಸಂಸ್ಥೆಗೆ ಮೊದಲ ಬಾರಿಗೆ ಮೀನುಗಾರಿಕೆ ಕ್ಷೇತ್ರದ ವಿಜ್ಞಾನಿ ಅಯ್ಯಪ್ಪನ್‌  ಮಹಾ ನಿರ್ದೇಶಕರಾಗಿ 2010ರಲ್ಲಿ ನೇಮಕಗೊಂಡು ಇತಿಹಾಸ ನಿರ್ಮಿಸಿದರು . ಅಲ್ಲಿ 2016ರ ವರೆಗೆ ದಕ್ಷತೆಯಿಂದ ಸೇವೆ ಸಲ್ಲಿಸಿದರು.

ಇಂಫಾಲ್‌ನಲ್ಲಿರುವ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿಯೂ ಸಹ  ನೇಮಕಗೊಂಡಿದ್ದರು. ಭುವನೇಶ್ವರದ ಸಿ.ಐ.ಎಫ್.ಎ. ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು. ನ್ಯಾಷನಲ್‌ ಅಕ್ರೆಡಿಷನ್‌ ಬೋರ್ಡ್‌ ಫಾರ್‌ ಟೆಸ್ಟಿಂಗ್‌ ಅಂಡ್‌ ಕ್ಯಾಲಿಬ್ರೇಷನ್‌
(ಎನ್‌ ಎ.ಬಿ.ಎಲ್)ನ ಅಧ್ಯಕ್ಷರಾಗಿಯೂ ನೇಮಕಗೊಂಡಿದ್ದರು.

 ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಸಂಶೋಧನೆಗಳಿಗೆ ಖ್ಯಾತಿ ಪಡೆದಿರುವ ಇಂಥ ಹಲವಾರು ಪ್ರತಿಷ್ಟಿತ ಸಂಸ್ಥೆಗಳಿಗೆ ಡಾ.ಅಯ್ಯಪ್ಪನ್‌ ಒದಗಿಸಿದ ನಾಯಕತ್ವ ಅತ್ಯಂತ ಅನುಕರಣೀಯ. ಅಲ್ಲಿ ಅವರು ಪ್ರಾರಂಭಿಸಿದ ಕೆಲವು ಯೋಜನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಸಂಬಂಧಿತ ಮಾಹಿತಿಗಳನ್ನು  ಪರಸ್ಪರ ಹಂಚಿಕೊಳ್ಳುವ ರಾಷ್ಟ್ರಗಳ ಒಕ್ಕೂಟದಲ್ಲಿ ಭಾರತವನ್ನು ಅಗ್ರ ಪಂಕ್ತಿಯಲ್ಲಿ ನಿಲ್ಲಿಸಲು ನೆರವಾದವು.

ತಾವು ತೊಡಗಿಸಿಕೊಂಡ ವಿವಿಧ  ಕಾರ್ಯಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾದ ಯಾವುದೇ ರೀತಿಯ ಸಲಹೆಗಳನ್ನು ಇತರರಿಂದ ಸ್ವೀಕರಿಸುವಲ್ಲಿ ಅಯಪ್ಪನ್ ಅವರದ್ದು ಸದಾ ಮುಕ್ತ ಮನಸ್ಸು. ಯುವ ವಿಜ್ಞಾನಿಗಳ ಹಾಗೂ ತಂತ್ರಜ್ಞಾನಿಗಳ ಜೊತೆ ಸುಲಭವಾಗಿ ಬೆರೆತು, ಅವರ ಅಭಿಪ್ರಾಯಗಳಿಗೆ ಕಿವಿಗೊಡುತ್ತಿದ್ದ ಅವರ ಸರಳತೆ ಅನನ್ಯವಾದುದು. ಕೃಷಿ ಕ್ಷೇತೆದಲ್ಲಿ ಐ.ಸಿ.ಟಿ.ಯ ಬಳಕೆ, ದತ್ತಾಂಶ ದೊರಕಿಸುವ ವ್ಯವಸ್ಥೆಯ ಉನ್ನತೀಕರಣ, ಬಹುಶಿಸ್ತೀಯ ಸಂಶೋಧನೆಗಳಿಗೆ ಉತ್ತೇಜನ, ಮುಂತಾದ ತಮ್ಮ ದೂರದರ್ಶಿತ್ವ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಂಶೋಧನಾ  ಕ್ಷೇತ್ರಕ್ಕೆ‌ ಗಣನೀಯ ಕೊಡುಗೆ ನೀಡಿದ ಹೆಗ್ಗಳಿಕೆ ಅವರದ್ದು.

ದೇಶದ ಮೀನುಗಾರಿಕೆ ಹಾಗೂ ಜಲಚರ ಕೃಷಿ ಕ್ಷೇತ್ರಗಳಿಗೆ ತಮ್ಮ ಸಂಶೋಧನೆಗಳ, ದಕ್ಷ ಆಡಳಿತದ ಹಾಗೂ ಮಾರ್ಗದರ್ಶನಗಳ ಮೂಲಕ ದೇಶದಲ್ಲಿ ಮೀನುಗಳ ಉತ್ಪಾದನೆಯನ್ನು ದಾಖಲೆ ಮಟ್ಟಕ್ಕೆ ಹೆಚ್ಚಿಸುವಲ್ಲಿ  ಮಹತ್ತರ ಕೊಡುಗೆಗಳನ್ನು ಅಯ್ಯಪ್ಪನ್‌ ಅವರು ನೀಡಿದ್ದಾರೆ. ಕರಾವಳಿ ಮತ್ತು ಒಳನಾಡಿನ ಪ್ರದೇಶಗಳಲ್ಲಿ  ಗ್ರಾಮೀಣ ಜೀವನೋಪಾಯವನ್ನು ಸುಧಾರಿಸುವಲ್ಲಿ ಹಾಗೂ ಆಹಾರ ಭಧ್ರತೆಯನ್ನು ಖಾತ್ರಿ ಪಡಿಸುವಲ್ಲಿ ಅವರ ಈ ಕೊಡುಗೆಗಳು ಪ್ರಮುಖ ಎನ್ನಿಸಿವೆ. ಈ ಕಾರಣಕ್ಕಾಗಿ ಅವರನ್ನು “ದೇಶದ ನೀಲಿ ಕ್ರಾಂತಿಯ ಹರಿಕಾರಎಂದು ಗೌರವಿಸಲಾಗುತ್ತದೆ.

ಅಯ್ಯಪ್ಪನ್‌ ಅವರಿಗೆ ಸಂದಿರುವ ಹಲವಾರು ಗೌರವಾದರಗಳು ಅವರ ಕಾರ್ಯಕ್ಷಮತೆಗೆ, ದಕ್ಷತೆಗೆ ಹಾಗೂ ನಿಸ್ಪೃಹ ಸೇವೆಗೆ ಜ್ವಲಂತ ಸಾಕ್ಷಿ. ಇದಕ್ಕೆ ಕಿರೀಟಪ್ರಾಯವಾಗಿ ಬಂದದ್ದು 2022 ರಲ್ಲಿ ಅವರಿಗೆ ಕೇಂದ್ರ ಸರ್ಕಾರ ನೀಡಿ ಗೌರವಿಸಿದ “ಪದ್ಮಶ್ರೀ” ಪ್ರಶಸ್ತಿ.

ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಮಂಡಳಿಗೆ (ಕೆ.ಎಸ್.ಟಿ.ಎ.) ಅಧ್ಯಕ್ಷರಾಗಿ ನೇಮಕಗೊಂಡ ಅಯ್ಯಪ್ಪನ್ ಅಲ್ಲಿಯೂ ತಮ್ಮ ವಿಶಿಷ್ಟ ಹಾಗೂ ವಿನೂತನ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಯಶಸ್ವಿಯಾದರು. ಈ ಅವಧಿಯಲ್ಲಿ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ನೆರವಾಗುವ ದೃಷ್ಟಿಯಿಂದ ಅವರ ವಿಜ್ಞಾನ ಪಠ್ಯದಲ್ಲಿದ್ದ ಅಧ್ಯಾಯಗಳಿಗೆ ಕನ್ನಡದಲ್ಲಿ ಕೆ.ಎಸ್‌.ಟಿ.ಎ. ವತಿಯಿಂದ ವಿಡಿಯೋಗಳನ್ನು ತಯಾರಿಸುವ ಯೋಜನೆಯೊಂದನ್ನು ಹಾಕಿಕೊಂಡಿದ್ದರು. ಅವರ ಆಹ್ವಾನದ ಮೇರೆಗೆ ಜೀವಶಾಸ್ತ್ರಕ್ಕೆ ಸಂಬಂಧಿಸಿದ ಹಲವು ವೀಡಿಯೋಗಳನ್ನು ಮಾಡಿಕೊಡುವ ಜವಾಬ್ದಾರಿಯನ್ನು ಅಯ್ಯಪ್ಪನ್‌ ಅವರು ನನಗೆ ವಹಿಸಿದ್ದರು. ಇದೇ ಅವಧಿಯಲ್ಲಿ, ಬ್ಲಾಗ್‌ ರೂಪದಲ್ಲಿ ಪ್ರಕಟವಾಗುತ್ತಿದ್ದ ನಮ್ಮ “ಸವಿಜ್ಞಾನ” ಇ-ಪತ್ರಿಕೆಯನ್ನು ಅವರಿಗೆ ಪರಿಚಯಿಸಿದ್ದೆ. ನಮ್ಮ ಶಿಕ್ಷಕರ ತಂಡದ ಈ ಪ್ರಯತ್ನವನ್ನು ಅವರು ಮನಸಾರೆ ಮೆಚ್ಚಿಕೊಂಡಿದ್ದರು. ʼಸವಿಜ್ಞಾನʼ ದ ಮೊದಲ ವಾರ್ಷಿಕ ಸಂಚಿಕೆಗೆ ತಮ್ಮ ಸಂದೇಶವನ್ನೂ ನೀಡಿದ್ದರು.

ಅವರ ಅಗಲಿಕೆಯಿಂದ ಭಾರತೀಯ ಕೃಷಿ ವಿಜ್ಞಾನ ಕ್ಷೇತ್ರದಲ್ಲಿ  ಮತ್ತು ಸಾರ್ವಜನಿಕ ಸೇವಾ ವಲಯಗಳಲ್ಲಿ ಉಂಟಾಗಿರುವ ಶೂನ್ಯ ಭರಿಸಲಾಗದ್ದು. ಅವರು ಹುಟ್ಟು ಹಾಕಿದ ಮುಕ್ತ ಜ್ಞಾನ ವೇದಿಕೆಗಳಲ್ಲಿ ಮತ್ತು ಅವರು ಬೆಳೆಸಿ, ಪೋಷಿಸಿದ ಸಂಶೋಧನಾ ಸಮುದಾಯಗಳಲ್ಲಿ ಅವರ ಮಹತ್ತರ ಕೊಡುಗೆಗಳು ಸದಾ ರಿಂಗಣಿಸುತ್ತಿರುತ್ತವೆ. “ ಸವಿಜ್ಞಾನ” ತಂಡದ ಎಲ್ಲ ಶಿಕ್ಷಕರ ಪರವಾಗಿ ಡಾ. ಅಯ್ಯಪ್ಪನ್‌ ಅವರಿಗೆ ನಮ್ಮ “ಆಶ್ರು ತರ್ಪಣ”

No comments:

Post a Comment