ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Tuesday, January 4, 2022

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ

ಇದು ‘ಸವಿಜ್ಞಾನ’ ಇ-ಪತ್ರಿಕೆಯ ಎರಡನೆಯ ವರ್ಷದ ಮೊದಲ ಸಂಚಿಕೆ. ಕಳೆದ ಒಂದು ವರ್ಷದ ಅವಧಿಯಲ್ಲಿ ನಮ್ಮ ಓದುಗರ ಸಂಖ್ಯೆ ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಾ ಬಂದಿರುವುದು ಮತ್ತು ನಮ್ಮ ಲೇಖಕರ ಬಳಗವೂ ವಿಸ್ತಾರವಾಗುತ್ತಿರುವುದು ಹರ್ಷತಂದಿದೆ. ಎರಡನೆಯ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಈ ಒಂದು ಬೆಳವಣಿಗೆಗೆ ಕಾರಣರಾದ ನಮ್ಮ ಎಲ್ಲ ಓದುಗ ವಿಜ್ಞಾನ ಶಿಕ್ಷಕರಿಗೆ ಮತ್ತು ವಿಜ್ಞಾನಾಸಕ್ತರಿಗೆ ಹಾಗೂ ಲೇಖಕ  ಬಂಧುಗಳಿಗೆ ನನ್ನ ಅನಂತ ವಂದನೆಗಳು. ಜೊತೆಗೆ, ಹೊಸ ಆಂಗ್ಲ ವರ್ಷದ ಶುಭಾಶಯಗಳು.

ಜನವರಿ, 2022ರ ಈ ತಿಂಗಳ ಸಂಚಿಕೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ಎಸ್. ಐಯ್ಯಪ್ಪನ್ ಅವರ ಶುಭ ಹಾರೈಕೆಯೊಂದಿಗೆ ಹೊರ ಬಂದಿದೆ. ಎಂದಿನಂತೆ, ಹಲವು ಉಪಯುಕ್ತ ಹಾಗೂ ಮಾಹಿತಿಪೂರ್ಣ ಲೇಖನಗಳನ್ನು ನಿಮಗಾಗಿ ಹೊತ್ತು ತಂದಿದೆ. ನಮ್ಮ ಮೊದಲ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದ ಜನಪ್ರಿಯ ವಿಜ್ಞಾನ ಲೇಖಕ ಸುಧೀಂದ್ರ ಹಾಲ್ದೊಡ್ಡೇರಿ ಅವರು ಬರೆದ ಒಂದು ಲೇಖನ, ಅವರ ನೆನಪಿನಲ್ಲಿ ಪ್ರಕಟವಾಗಿದೆ. ಸೆರೆಂಡಿಪಿಟಿಯ ಸರಣಿಯ ಮುಂದುವರೆದ ಭಾಗವಾಗಿ, ಜೋಸೆಫ್ ಲಿಸ್ಟರ್ ಅವರ ಸಂಶೋಧನೆಯ ಹಿಂದಿನ ರೋಮಾಂಚಕ ಕತೆಯನ್ನು ನಿರೂಪಿಸುವ ಡಾ, ಎಂ.ಜೆ ಸುಂದರರಾಮ್ ಅವರ ಲೇಖನವಿದೆ. ಹುಲಿಗಳ ಜೀವನ ಕ್ರಮದ ಬಗ್ಗೆ ಬೆಳಕು ಚೆಲ್ಲುವ ಲೇಖನವೊಂದನ್ನು ಪ್ರಸ್ತುತ ಪಡಿಸಿದ್ದಾರೆ, ಶಿಕ್ಷಕ ಹಾಗೂ ವನ್ಯಜೀವಿ ತಜ್ಞರಾದ ಕೃಷ್ಣ ಚೈತನ್ಯ. ನಮ್ಮ ಲೇಖಕ ಬಳಗಕ್ಕೆ ಹೊಸದಾಗಿ ಸೇರಿರುವ ರಾಮಕೃಷ್ಣ ಎಸ್.ಕೆ. ಅವರು ಕಾಲನಿರ್ಣಯದ ಬಗ್ಗೆ ಬರೆದ ಲೇಖನ ಹಾಗೂ ಶ್ರೀ ಸುರೇಶ್ ಅವರು ಕುಟ್ರ ಹಕ್ಕಿಯ ಬಗ್ಗೆ ಬರೆದ ಲೇಖನಗಳಿವೆ. ಶಿಕ್ಷಕ ಸಿದ್ದು ಬಿರಾದಾರ್ ಅವರು ಈ ಬಾರಿ ಕೈಗವಸು ಬೊಂಬೆಗಳನ್ನು ತಯಾರಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಿಮ್ಮ ಮೆಚ್ಚುಗೆಗೆ ಕಾರಣವಾಗಿರುವ ವಿಜ್ಞಾನದ ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳ ಜೊತೆಗೆ, ಈ ಬಾರಿ ವಿಜ್ಞಾನ ಪದಬಂಧವೊಂದನ್ನು ಪ್ರಾರಂಭಿಸಲಾಗಿದೆ. 

‘ಸವಿಜ್ಞಾನ’ವನ್ನು ಇನ್ನಷ್ಟು ಸವಿಯಾಗಿ ಉಣಬಡಿಸುವ ಸಂಕಲ್ಪ ನಮ್ಮದು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವೇ ಸ್ಫೂರ್ತಿ. ಸಂಚಿಕೆಯ ಬಗ್ಗೆ ನಿಮ್ಮ ವಿದ್ಯಾರ್ಥಿಗಳಿಗೂ, ಸಹೋದ್ಯೋಗಿಗಳಿಗೂ, ಬಂಧು, ಮಿತ್ರರಿಗೂ ತಿಳಿಸಿ. ಅವರೂ ಓದುವಂತೆ ಪ್ರೇರೇಪಿಸಿ. 

ಡಾ. ಟಿ. ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

No comments:

Post a Comment