ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, December 5, 2023

ಮಹಾ ಗುರು ಸರ್.ಜೆ.ಜೆ

                                                   

ಮಹಾ ಗುರು ಸರ್.ಜೆ.ಜೆ

ಲೇ :  ರಾಮಚಂದ್ರಭಟ್‌ ಬಿ.ಜಿ.

   

    ಅದೊಂದು ಹಳೆಯ ಪುಸ್ತಕದ ಅಂಗಡಿ. ಅದು ಕುಟುಂಬದ ಹಿರಿಯರಿಂದ ಬಳುವಳಿಯಾಗಿ ಬಂದಂತಹ ವಿಶಿಷ್ಟವಾದ ಅಪರೂಪದ ಹಳೆಯ ಮತ್ತು ಹೊಸ ಹೊತ್ತಿಗೆಗಳುಳ್ಳ ಅಪರೂಪದ ಪುಸ್ತಕದ ಅಂಗಡಿ. ಅದರ ಯಜಮಾನ ಅಂಗಡಿಗೆ ತನ್ನೊಂದಿಗೆ ತನ್ನ ಪುಟ್ಟ ಮಗನನ್ನು ಕರೆತರುತ್ತಿದ್ದ. ಈ ಪು‌ಟ್ಟ ಬಾಲಕನ ಓರಗೆಯ ಇತರ ಮಕ್ಕಳು ಆಟವಾಡುತ್ತಿದ್ದರೆ, ಈ ಬಾಲಕ ಪುಸ್ತಕಗಳ ಹುಚ್ಚು ಹಿಡಿಸಿಕೊಂಡಿದ್ದ. ಮೊದ ಮೊದಲು ಅಪರೂಪಕ್ಕೆ ಬರುತ್ತಿದ್ದ ಮಗ ಈಗ ನಿತ್ಯ ಗಿರಾಕಿ. ಅಲ್ಲಿದ್ದ ವಿವಿಧ ಪುಸ್ತಕಗಳನ್ನು ಓದುತ್ತಿದ್ದ. ಮುಂದೆ ಹೆಮ್ಮರವಾಗಿ ಬೆಳೆಯಲಿರುವ ಬೀಜದ ಸಿರಿ ಮೊಳಕೆಯಲ್ಲೇ ತನ್ನ ಸತ್ವವನ್ನು ಪ್ರದರ್ಶಿಸಲಾರಂಭಿಸಿತ್ತು. ಹುಡುಗನ ಜ್ಞಾನ ದಾಹವನ್ನು ಗಮನಿಸಿದ ಹಿರಿಯರು ಅವನನ್ನು ಒಬ್ಬ ಇಂಜಿನಿಯರ್ ಮಾಡಿಸಬೇಕೆಂಬ ಕನಸು ಕಂಡರು. ಕಲಿಕೆಯಲ್ಲಿ ಮುಂದಿದ್ದ ಹುಡುಗನ್ನು ಮ್ಯಾಂಚೆಸ್ಟರಿನ ವಿಕ್ಟೋರಿಯಾ ವಿಶ್ವವಿದ್ಯಾಲಯಕ್ಕೆ ಓದಲು ಕಳುಹಿಸಿದರು. ಮುಂದಿನದ್ದೆಲ್ಲ ಇತಿಹಾಸ. ಪುಸ್ತಕದ ಅಂಗಡಿಯ ಈ ಬಾಲಕ ಮುಂದೆ ಮಹಾ ಜ್ಞಾನವೃಕ್ಷವಾಗಿ ಬೆಳೆದು ತನ್ನ ನೆರಳಲ್ಲಿ ಅದೆಷ್ಟೋ ಅದ್ಭುತ ಪ್ರತಿಭೆಗಳನ್ನು ಬೆಳೆಸಿ ವಿಜ್ಞಾನ‌ ಕ್ಷೇತ್ರದ ಧ್ರುವ ನಕ್ಷತ್ರವಾಗಿ ಅಮರನಾದ.

ಅರ್ನೆಸ್ಟ್ ರುದರ್‌ಫೋರ್ಡ್, ನೀಲ್ಸ್‌ ಬೋರ್‌ , ಚಾರ್ಲ್ಸ್ ಗ್ಲೋವರ್ ಬಾರ್ಕ್ಲಾ, ಮ್ಯಾಕ್ಸ್ ಬಾರ್ನ್, ವಿಲಿಯಂ ಹೆನ್ರಿ ಬ್ರಾಗ್, ಓವನ್ ವಿಲನ್ಸ್ ರಿಚರ್ಡ್ಸನ್, ಚಾರ್ಲ್ಸ್ ಥಾಮ್ಸನ್ ರೀಸ್ ವಿಲ್ಸನ್, ಫ್ರಾನ್ಸಿಸ್ ವಿಲಿಯಂ ಆಸ್ಟನ್, ಜಾರ್ಜ್‌ ಪೇಗೆಟ್ ಥಾಮ್ಸನ್-‌ ಇವರ ಹೆಸರು ಕೇಳದ ವಿಜ್ಞಾನಾಸಕ್ತರಿದ್ದಾರೆಯೇ? ಇವರೆಲ್ಲ ವಿಜ್ಞಾನ ರಂಗದ ಸಾಟಿ ಇಲ್ಲದ ಅಸಾಮಾನ್ಯ ಮಹಾಮೇರು ಪ್ರತಿಭೆಗಳು. ಪ್ರತಿಯೊಬ್ಬರೂ ಸರ್ವೋನ್ನತ ನೋಬಲ್‌ ಪ್ರಶಸ್ತಿಗೇ ಹೊಸರಂಗು ತಂದವರು. ಈ ಎಲ್ಲರೂ ಒಂದೇ ಗುರುವಿನ ಗರಡಿಯಲ್ಲಿ ಪಳಗಿದವರು. ಇಂತಹವರನ್ನು ಸಾಣೆ ಹಿಡಿದ ಆ ಮಹಾಮಹಿಮನ ಪ್ರತಿಭೆ ಯಾವ ಮಟ್ಟದ್ದೋ? ಆತ ಯಾರಿರಬಹುದು? ಈ ಮಹಾಗುರು ಸ್ವತಃ ಅದೆಂತಹ ದೈತ್ಯ ಪ್ರತಿಭೆಯೋ? ಅವರ್ಯಾರು ಎಂಬ ಕುತೂಹಲವೇ? ಅವರೇ ವಿಜ್ಞಾನಿಗಳ ವಲಯದಲ್ಲಿ ಜೆ.ಜೆ ಎಂದೇ ಚಿರಪರಿಚಿತರಾದ, ಇಲೆಕ್ಟ್ರಾನ್‌ಗಳನ್ನು ಕಂಡುಹಿಡಿದ ಅನನ್ಯ ಅನರ್ಘ್ಯ ರತ್ನ ಜೆ.ಜೆ.ಥಾಮ್ಸನ್‌.


ಇಂತಹ ಜೋಸೆಫ್ ಜಾನ್ ಥಾಮ್ಸನ್ ಡಿಸೆಂಬರ್ 18, 1856 ರಂದು ಮ್ಯಾಂಚೆಸ್ಟರ್‌ನ ಉಪನಗರವಾದ ಚೀತಮ್ ಹಿಲ್‌ನಲ್ಲಿ ಜನಿಸಿದರು. ಜೆಜೆಯ ಬಾಲ್ಯ ಹೂವಿನ ಹಾಸಿಗೆಯಾಗಿರಲಿಲ್ಲ. ಮ್ಯಾಂಚೆಸ್ಟರ್‌ಗೆ ಓದಲು ಹೋದ ಬಾಲಕ ಜೆಜೆ ದುರದೃಷ್ಟವಶಾತ್ ತನ್ನ ತಂದೆಯನ್ನು ಕಳೆದುಕೊಂಡ. ಮಗನ ಕುರಿತು ಹತ್ತು ಹಲವು ಕನಸುಗಳನ್ನು ಕಟ್ಟಿಕೊಂಡಿದ್ದ ಜೋಸೆಫ್‌ ಜೇಮ್ಸ್ ಥಾಮ್ಸನ್‌ (Joseph James Thomson), ಮಗನ ಉತ್ಕರ್ಷವನ್ನು ಕಾಣುವ ಮೊದಲೇ ಗತಿಸಿ ಹೋದರು. ಜೆಜೆಗೆ ಆಗಿನ್ನೂ ಕೇವಲ 16ರ ಹರೆಯ. ತಂದೆಯ ಗೆಳೆಯರು ಮತ್ತು ಚಿಕ್ಕಪ್ಪ, ಹುಡುಗನ ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತ ಚಾಚಿದರು. ಅದೇ ವರ್ಷ ಡಾಲ್ಟನ್ ಶಿಷ್ಯ ವೇತನ ದೊರಕಿದುದು ಜೆಜೆ ಥಾಮ್ಸನ್‌ಗೆ ಇನ್ನಷ್ಟು ಅನುಕೂಲತೆಯನ್ನು ಒದಗಿಸಿತು. ಅಚ್ಚರಿ ಎಂದರೆ, ಶತಮಾನದಿಂದ ಒಪ್ಪಿಕೊಂಡು ಬಂದ ‘ಡಾಲ್ಟನ್ಪರಮಾಣು ಸಿ‌ದ್ಧಾಂತವನ್ನು, ಡಾಲ್ಟನ್ ಶಿಷ್ಯ ವೇತನ ಪಡೆದುಕೊಂಡ, ಜೆಜೆ ತನ್ನ ಸಂಶೋಧನೆ ಮೂಲಕ ಅಲ್ಲಗಳೆದು ಪರಮಾಣುವಿನ ರಚನೆಗೆ ಹೊಸ ಭಾಷ್ಯವನ್ನು ಬರೆದರು.

ತನ್ನ 19ರ ಹರೆಯದಲ್ಲಿ ಇಂಜಿನಿಯರ್ ಪದವೀರರಾದ ಥಾಮ್ಸನ್, ಗಣಿತದಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ, ಕೇಂಬ್ರಿಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನ ಪ್ರತಿಷ್ಠಿತ ಗಣಿತದ ಟ್ರೈಪೊಸ್ (Tripos) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಆಯ್ಕೆಯಾದರು. 1881 ರಲ್ಲಿ, ಅವರು ದ್ರವ್ಯರಾಶಿ ಮತ್ತು ಶಕ್ತಿಯ (Mass and Energy) ಸಂಬಂಧದ ಕುರಿತು ಬರೆದ ಒಂದು ವೈಜ್ಞಾನಿಕ ಪ್ರಬಂಧ  ಮುಂದೆ ಬರಲಿದ್ದ, ‘ಆಲ್ಬರ್ಟ್ ಐನ್ ಸ್ಟೈನ್ ರಾಶಿ-ಶಕ್ತಿ ಸಿದ್ಧಾಂತ’ಕ್ಕೆ ಪೂರ್ವಸಿದ್ಧತೆಯೇನೋ ಎಂಬಂತಿತ್ತು. ಟ್ರಿನಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸದ ಅನಂತರ ಥಾಮ್ಸನ್, ಕ್ಯಾವೆಂಡಿಶ್ ಪ್ರಯೋಗಾಲಯದಲ್ಲಿ ಸಂಶೋಧಕರಾಗಿ ಸೇರಿಕೊಂಡರು. ವಿಜ್ಞಾನಿಯಾಗಿದ್ದ ಹೆನ್ರಿ ಕ್ಯಾವೆಂಡಿಶ್ (1731 1810) ತನ್ನ ಹೆಸರಿನಲ್ಲಿ ಸ್ಥಾಪಿಸಿದ್ದ ಸಂಶೋಧನಾ ಸಂಸ್ಥೆಯಲ್ಲಿ ಲಾರ್ಡ್ ರೇಲೆಯವರು ಮುಖ್ಯಸ್ಥರಾಗಿದ್ದರು. ಅವರಿಗೆ ಜೆಜೆಯ ಸಾಮರ್ಥ್ಯದಲ್ಲಿ ಅದೇನೋ ನಂಬಿಕೆ. 1884 ರಲ್ಲಿ ತನ್ನ ಉತ್ತರಾಧಿಕಾರಿಯಾಗಿ 28 ಹರೆಯದ ಅವಿವಾಹಿತ ಯುವ ಗಣಿತಜ್ಞ ಜೆಜೆಯವರನ್ನು ನೇಮಕ ಮಾಡಿ, ರೆಲೆಯವರು ರಾಜಿನಾಮೆ ಕೊಟ್ಟರು!.  ತಮ್ಮಿಂದ ಎಷ್ಟೋ ವರ್ಷ ಚಿಕ್ಕವನಾದ ಜೆ ಜೆ ಥಾಮ್ಸನ್ ಈ ಹುದ್ದೆಗೇರಿದ್ದನ್ನು ಅನೇಕ ಹಿರಿಯರು ಹೇಗೆ ತಾನೇ ಸುಮ್ಮನಿದ್ದಾರು? ವೃತ್ತಿ ಮತ್ಸರ ಸಹಜವೇ ತಾನೇ? ಇದು ಉಳಿದ ವಿಜ್ಞಾನಿಗಳಲ್ಲಿ ಅಸಹನೆ, ಗೊಂದಲ, ಗಲಾಟೆ ಹಾಗೂ ವಿರೋಧಗಳಿಗೆ ಕಾರಣವಾಯಿತು. ಆದರೇನು? ರೇಲಿಯವರ ಆಯ್ಕೆ ಒಳ್ಳೆಯ ವಿವೇಚನೆಯದ್ದೇ ಆಗಿತ್ತು ಎನ್ನುವುದನ್ನು ಜೆಜೆ ಸಾಬೀತುಪಡಿಸಿದರು. ಮುಂದೆ 34 ವರ್ಷಗಳ ಸುಧೀರ್ಘಕಾಲ ಥಾಮ್ಸನ್ ಸಂಸ್ಥೆಯನ್ನು ಜಗತ್ತಿನ ಅತಿ ಉತ್ಕೃಷ್ಟ ಸಂಶೋಧನಾಲಯವನ್ನಾಗಿ ಬೆಳೆಸಿದರು.

ಥಾಮ್ಸನ್ ಹೊಸದಾಗಿ ವಿಜ್ಞಾನ ಪ್ರಪಂಚಕ್ಕೆ ಕಾಲಿಡುತ್ತಿದ್ದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಆಗಾಗ ವೈಜ್ಞಾನಿಕ ಉಪನ್ಯಾಸಗಳನ್ನು ನಡೆಸುತ್ತಿದ್ದರು. ಅವರ ಉಪನ್ಯಾಸಗಳಿಗಾಗಿ ಅನೇಕರು ಕಾತುರತೆಯಿಂದ ಕಾಯುತ್ತಿದ್ದರು. ಈ ಉಪನ್ಯಾಸಗಳಿಗೆ ಚಾಚೂ ತಪ್ಪದೆ ಬರುತ್ತಿದ್ದ ಅನೇಕ ವಿದ್ಯಾರ್ಥಿಗಳಲ್ಲಿ, ಸರ್ ಜೋರ್ಜ್ ಎಡ್ವರ್ಡ್ ಪೇಗೆಟ್ ಅವರ ಮಗಳು ರೋಸ್ ಪೇಗೆಟ್ ಕೂಡಾ ಒಬ್ಬರು!!. ಜೋರ್ಜ್ ಪೇಗೆಟ್ ಕೇಂಬ್ರಿಜ್ ನಲ್ಲಿ ಪ್ರತಿಷ್ಟಿತ ಪ್ರೊಫೆಸರ್ ಹಾಗೂ ಫಿಸಿಶಿಯನ್. ಈ ವೈದ್ಯರ ಪುತ್ರಿಯ ಮನಗೆದ್ದಿದ್ದರು ಜೆಜೆ. ಆ ಹುಡುಗಿ ಪಾಠಕ್ಕಿಂತ ಜೆಜೆಯನ್ನು ನೋಡಲು ಬರುತ್ತಿದ್ದಳೇನೋ. ಹೀಗೆ ಬಂದ ಆಕೆ ಜೆಜೆಯ ಮನದನ್ನೆಯಾಗಿ ಕೊನೆಗೂ ಜೆಜೆಯವರನ್ನು 1890 ರಲ್ಲಿ ಮದುವೆಯಾದಳು. 1892 ರಲ್ಲಿ ಜನಿಸಿದ ಮಗ, ಜಿ.ಪಿ. ಥಾಮ್ಸನ್, ತನ್ನ ತಂದೆಯ ಹಾದಿಯಲ್ಲೇ ಸಾಗಿ ತಂದೆಯ ಸಂಶೋಧನೆಯನ್ನೇ‌ ಮುಂದುವರೆಸಿ ತಂದೆಯಂತೆ ನೋಬಲ್‌ ಪ್ರಶಸ್ತಿಗೂ ಭಾಜನರಾದರು.

ಅಪ್ಪ ಜೆ.ಜೆ.ಥಾಮ್ಸನ್ ಇಲೆಕ್ಟ್ರಾನುಗಳು ಕಣಗಳು ಅಲೆಯಲ್ಲ ಎಂದರೆ ಮಗ ನಾಲ್ಕು ದಶಕಗಳ ಅನಂತರ (1937), ಪ್ರತಿಯೊಂದು ಇಲೆಕ್ಟ್ರಾನ್ ಕೂಡಾ, ಕಣವಾದರೂ, ಒಂದು ಶುದ್ಧ ಅಲೆಯಂತೆ ವರ್ತಿಸುತ್ತದೆ ಮತ್ತು ಅಲೆಗಳಿಗೆ ಅನ್ವಯಿಸುವ ಎಲ್ಲ ಸೂತ್ರಗಳು, ಗುಣವಿಶೇಷಗಳು, ಇಲೆಕ್ಟ್ರಾನಿಗೂ ಅನ್ವವಾಗುತ್ತದೆ ಎಂದು ಕಂಡು ಹಿಡಿಯುತ್ತಾರೆ. ‘ಇಲೆಕ್ಟ್ರಾನ್ ಗಳ ವಿವರ್ತನೆ (Diffraction)’ ಎಂಬ ಸಿದ್ಧಾಂತಕ್ಕಾಗಿ ನೊಬೆಲ್ ಪಾರಿತೋಷಕಕ್ಕೆ ಭಾಜನರಾಗುತ್ತಾರೆ.

ಜಿ.ಪಿ. ಥಾಮ್ಸನ್

ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಬ್ರಿಟನ್ನಿನ ವಿಲಿಯಂ ಕ್ರೂಕ್ಸ್ ಸಂಶೋಧಿಸಿದ ‘ಕ್ಯಾಥೋಡ್ ಕಿರಣ’ಗಳ ಸ್ವಭಾವದ ಬಗ್ಗೆ ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದರು. ಕ್ರೂಕ್ಸ್ ಅವರು ಕ್ಯಾಥೋಡ್ ಕಿರಣಗಳನ್ನು ನಿರ್ವಾತ ಗಾಜಿನ ನಳಿಕೆಗಳ ಒಳಗೆ ಉತ್ಪಾದಿಸಿದ್ದರು. ರೊಂಟೆಜನ್ ಕಂಡು ಹಿಡಿದ X-ಕಿರಣಗಳು ಇಂತಹ ನಳಿಕೆಯೊಳಗೇ ಹುಟ್ಟಿದ್ದವು. ಥಾಮ್ಸನ್ ಮತ್ತವರ ಶಿಷ್ಯರ ಪ್ರಕಾರ ಕ್ಯಾಥೋಡ್ ಕಿರಣಗಳು ಅಲೆಗಳೇ ಅಲ್ಲ. ಬದಲಾಗಿ, ಬರಿಗಣ್ಣಿಗೆ ಕಾಣದ, ಫೋಟೋಗ್ರಫಿ ಪೇಪರ್ ಗಳಲ್ಲಿ ಹಿಡಿಯಲಾಗದ ಅತಿ ಸೂಕ್ಷ್ಮ ಕಣಗಳ ಸಮೂಹ ಪ್ರವಾಹ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಆಗ ವಾದ-ಪ್ರತಿವಾದಗಳು ರಂಭವಾದವು. ಜೆ.ಜೆ.ಥಾಮ್ಸನ್ ಅವರು ಈ ಕಿರಣಗಳ ಮೇಲೆ ಇನ್ನಷ್ಟು ಪ್ರಯೋಗಗಳನ್ನು ಮಾಡಿದರು. ಕ್ಯಾಥೋಡ್ ಕಿರಣಗಳು ಕಾಂಕ್ಷೇತ್ರ ಮತ್ತು ವಿದ್ಯುತ್ ಕ್ಷೇತ್ರಗಳ ಪ್ರಭಾವಕ್ಕೆ ಒಳಗಾಗುತ್ತವೆ. ಅವು ನೇರ ಪಥದಲ್ಲಿ ಸಾಗುತ್ತವೆ. ಅವುಗಳ ಹಾದಿಯಲ್ಲಿ ಒಂದು ಪುಟ್ಟ ಗಿರಿಗಿಟ್ಲೆಯನ್ನಿಟ್ಟರೆ,  ಅದು ತಿರುಗಲಾರಂಭಿಸುತ್ತದೆ. ಪ್ರಯೋಗಗಳಿಂದ ಈ ಕಿರಣಗಳು ಕಣಗಳ ಪ್ರವಾಹ, ಬೆಳಕಿನಂತೆ ವಿದ್ಯುತ್ಕಾಂತೀಯ ಅಲೆಗಳಲ್ಲ ಎಂಬುದನ್ನು ಸಾಬೀತು ಮಾಡಿದರು. ಕಣಗಳು ಧನ ಫಲಕದತ್ತ ಬಾಗುವುದರಿಂದ ಇವು ಋಣ ವಿದ್ಯುದಾವೇಶವುಳ್ಳ ಕಣಗಳೆಂದು ಕಂಡುಕೊಂಡರು. ಇವುಗಳಿಗೆ ಅವರು ಕಾರ್ಪಸೆಲ್‌ಗಳೆಂದು ಕರೆದರು. ನಂತರ ಇಲೆಕ್ಟ್ರಾನ್‌ಗಳೆಂದು ಹೆಸರು ಪಡೆದರು. 
ಇವುಗಳ ತೂಕ ಅತ್ಯಂತ ಹಗುರವಾದ ಪರಮಾಣು ಹೈಡ್ರೋಜನ್‌ ಪರಮಾಣುವಿನ ತೂಕದ ಸುಮಾರು ೧/೧೮೪೦ ರಷ್ಟಿದೆ ಎಂದು ಕಂಡುಕೊಂಡರು.  ಅವುಗಳು ಹೆಚ್ಚು ಕಡಿಮೆ ಬೆಳಕಿನ ವೇಗದಲ್ಲೇ ಚಲಿಸುತ್ತವೆ ಎಂದು ಕಂಡುಕೊಳ್ಳಲಾಯಿತು. ಹೀಗೆ ಮೊತ್ತಮೊದಲ ಬಾರಿಗೆ ಒಂದು ಉಪಪರಮಾಣೀಯ (Subatomic) ಕಣದ ಆವಿಷ್ಕಾರವಾಯಿತು. ಇದರೊಂದಿಗೆ ‘ವಿಜ್ಞಾನ ಕ್ಷೇತ್ರದಲ್ಲಿ ಹೊಸ ಯುಗ’ವೊಂದು ಆರಂಭಗೊಂಡಿತು. ಈ ಸಂಶೋಧನೆಗಾಗಿ ಅವರಿಗೆ 1906 ರಲ್ಲಿ ಥಾಮ್ಸನ್ ನೊಬೆಲ್ ಪ್ರಶಸ್ತಿ ದೊರೆಯಿತು.


A beam of cathode rays in a vacuum tube is bent into a circle by a magnetic field generated by a Helmholtz coil. Cathode rays are normally invisible; in this Teltron tube demonstration, enough gas has been left in the tube for the gas atoms to luminesce when struck by the fast-moving electrons.

By Sfu - File:Cyclotron_motion_wider_view.jpg, CC BY-SA 3.0, https://commons.wikimedia.org/w/index.php?curid=20697866
    ಮೊದಲ ಜಾಗತಿಕ ಯುದ್ಧದ ಕಾರ್ಮೋಡ ಜಗತ್ತನ್ನು ಆವರಿಸಿತ್ತು . ಮಹಾಯುದ್ಧದ ನಂತರ, 1919ರಲ್ಲಿ ತಮ್ಮ ಸುಧೀರ್ಘ ಸೇವೆಯ ನಂತರ ಕ್ಯಾವೆಂಡಿಶ್ ಸಂಶೋಧನಾಲಯದ ಮುಖ್ಯಸ್ಥ ಹುದ್ದೆಯನ್ನು ತನ್ನ ನಲ್ಮೆಯ ಅತಿ ಸಮರ್ಥ ಶಿಷ್ಯ, ನೊಬೆಲ್ ಪ್ರಶಸ್ತಿ ವಿಜೇತ, ಲಾರ್ಡ್ ಅರ್ನೆಸ್ಟ್ ರುದರ್ಫೋರ್ಡ್ ಅವರಿಗೆ ಹಸ್ತಾಂತರಿಸಿ ಜೆಜೆ ನಿವೃತ್ತರಾದರು.

ಜೆಜೆ ಥಾಮ್ಸನ್‌ರ ಸಂಶೋಧನೆ ಆಧುನಿಕ ವಿಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಉಂಟು ಮಾಡಿತು. ಇಲೆಕ್ಟ್ರಾನಿಕ್ಸ್‌ ಸಾಧನಗಳ ಹಿಂದೆ ಇವೇ ಇಲೆಕ್ಟ್ರಾನ್‌ಗಳ ಪವಾಡವಿದೆ. ಇಲೆಕ್ಟ್ರಾನ್ ಆವಿಷ್ಕಾರದಿಂದ ವಿಜ್ಞಾನದ ಅನೇಕ ಹೊಸ ವಿಭಾಗಗಳಿಗೆ ರಹದಾರಿಯಾಯಿತು. ವಿಫುಲ ಸಂಶೋಧನಾ ಕ್ಷೇತ್ರಗಳು ಸೃಷ್ಟಿಯಾದವು.  ಐಸೊಟೋಪ್ ಗಳು (ಒಂದೇ ರಾಸಾಯನಿಕ ಗುಣವಿದ್ದು ತೂಕದಲ್ಲಿ ವಿಭಿನ್ನವಾಗಿರುವ ಪರಮಾಣುಗಳು) ಮತ್ತು ಮಾಸ್ ಸ್ಪೆಕ್ಟ್ರೋಮೀಟ್ರಿ ಕ್ಷೇತ್ರದಲ್ಲಿ ಅವರ ಸಂಶೋಧನಾ ಕೊಡುಗೆ ಅಪಾರ. ಕ್ಯಾಥೋಡ್ ಕಿರಣದ ನಳಿಕೆಗಳು, X-ಕಿರಣದ ನಳಿಕೆಗಳು, ಇಲೆಕ್ಟ್ರಾನ್-ಸೂಕ್ಷ್ಮ ದರ್ಶಕಗಳು, ಲೇಸರುಗಳು, TV ನಳಿಕೆಗಳು ಅಲ್ಲದೆ, ಅನೇಕ ಸಾಧನಗಳ ಹಿಂದೆ ಇಲೆಕ್ಟ್ರಾನ್ ಆವಿಷ್ಕಾರದ ಕೊಡುಗೆ ಇದೆ.

ಜೆ.ಜೆ. ಥಾಮ್ಸನ್ ಕೇವಲ ಅದ್ಭುತ ವಿಜ್ಞಾನಿಯಷ್ಟೇ ಆಗಿರಲಿಲ್ಲ. ಅವರು ಸದಾ ಎಲ್ಲರನ್ನೂ ಆಹ್ಲಾದಕರ ವಾತಾವರಣದಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು. ಜೊತೆಗೆ ನಾಯಕನಿಗೆ ಇರಲೇಬೇಕಾದ ಉತ್ತಮ ಹಾಸ್ಯಪ್ರಜ್ಞೆಯನ್ನೂ ಹೊಂದಿದ್ದರು. ಅಷ್ಟೇ ತರ್ಲೆ ಗುಣವನ್ನೂ ಹೊಂದಿದ್ದರು!!.

  ಒಮ್ಮೆ ಜೆಜೆ ಥಾಮ್ಸನ್ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿದ್ದಾಗ, ತಮಾಷೆಗೆಂದು ತಮ್ಮ ಸಹೋದ್ಯೋಗಿಯ ಮೇಜಿನ ಡ್ರಾಯರ್‌ನಲ್ಲಿ ಸಣ್ಣ, ದುರ್ನಾತ ಬೀರುವ ಸ್ಫೋಟಕವನ್ನು ಇರಿಸಿದರು. ಅದರ ಸ್ಫೋಟದಿಂದ ಪ್ರಯೋಗಾಲಯದ ತುಂಬಾ ದೀರ್ಘಕಾಲದವರೆಗೂ ದುರ್ವಾಸನೆ ತುಂಬಿತ್ತಂತೆ.

ಆಗ ಜೆಜೆ ಥಾಮ್ಸನ್ ಕ್ಯಾಥೋಡ್ ಕಿರಣಗಳ ಕುರಿತ ಪ್ರಯೋಗ ಮಾಡುತ್ತಿದ್ದರು. ತನ್ನ ಲ್ಯಾಬ್ ಕೋಟ್ಪಾಕೆಟ್‌ನಲ್ಲಿ ಕ್ಯಾಥೋಡ್‌ ರೇ ಟ್ಯೂಬನ್ನು ಇಟ್ಟು ಮರೆತು ಬಿಟ್ಟಿದ್ದರು. ಆಕಸ್ಮಿಕವಾಗಿ ಈ ಕ್ಯಾಥೋಡ್ ರೇ ಟ್ಯೂಬ್ ಕೋಟಿನ ಜೇಬಿನಿಂದ ಹೊರಬಿತ್ತು. ಎಲ್ಲರೂ ಗಾಬರಿಯಾದರೆ ಜೆಜೆಗೆ ಕೇಕೆ ಹಾಕಿ ಕುಣಿಯುವಷ್ಟು ಖುಷಿ!!!  ಟ್ಯೂಬಿನಿಂದ ವಿಚಿತ್ರವಾದ ಹಸಿರು ಬೆಳಕು ಹೊಮ್ಮುತ್ತಿರುವುದನ್ನು‌ ಎಲ್ಲರೂ ಗಮನಿಸಿದರು. ಈ ಆಕಸ್ಮಿಕ ಘಟನೆ ಮಾಸ್‌ ಸ್ಪೆಕ್ಟ್ರೋಮೆಟ್ರಿ ತಂತ್ರದಿಂದ ನಿಯಾನ್ ಧಾತುವಿನ ಐಸೋಟೋಪ್‌ಗಳ ಆವಿಷ್ಕಾರಕ್ಕೆ ಕಾರಣವಾಯಿತು. ಹೀಗೆ ಇಂತಹ ಅನೇಕ ಸರೆಂಡಿಪಿಟಿಯ ಘಟನೆಗಳನ್ನು ನಾವು ಇತಿಹಾಸದಲ್ಲಿ ನೋಡಬಹುದು. ಲ್ಯಾಬ್‌ ಕೋಟಿನಲ್ಲಿ ಅಡಗಿದ್ದ ಕ್ಯಾಥೋಡ್ ರೇ ಟ್ಯೂಬ್ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿತು. ಪ್ರಯೋಗಾಲಯದಲ್ಲಿದ್ದ ಎಲ್ಲರಿಗೂ ಒಮ್ಮೆ ಗಾಬರಿ ಉಂಟುಮಾಡಿದ ಈ ಘಟನೆ ಸಂತಸದ ಹೊನಲನ್ನೇ ಹರಿಸಿತ್ತು.

 ಥಾಮ್ಸನ್ರ ಸಾಧನೆಯನ್ನು ಅನೇಕ ದೇಶಗಳು ಗುರುತಿಸಿ ಗೌರವಿಸಿವೆ. 1908 ರಲ್ಲಿ ನೈಟ್ ಪದವಿ ಪಡೆದರು. 1884 ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದರು ಮತ್ತು 1916-1920 ರ ಅವಧಿಯಲ್ಲಿ ಅದರ ಅಧ್ಯಕ್ಷರಾಗಿದ್ದರು; ಅವರು 1894 ಮತ್ತು 1902 ರಲ್ಲಿ ರಾಯಲ್ ಮತ್ತು ಹ್ಯೂಸ್ ಪದಕ ಮತ್ತು 1914 ರಲ್ಲಿ ಕಾಪ್ಲೆ ಪದಕವನ್ನು ಪಡೆದರು.  1902 ರಲ್ಲಿ ಹಾಡ್ಗ್ಕಿನ್ಸ್ ಪದಕ, ಫ್ರಾಂಕ್ಲಿನ್ ಪದಕ ಮತ್ತು ಸ್ಕಾಟ್ ಪದಕ (ಫಿಲಡೆಲ್ಫಿಯಾ)- 1923; ಮಸ್ಕಾರ್ಟ್ ಪದಕ (ಪ್ಯಾರಿಸ್)- 1927; ಡಾಲ್ಟನ್ ಪದಕ (ಮ್ಯಾಂಚೆಸ್ಟರ್)- 1931; ಮತ್ತು 1938 ರಲ್ಲಿ ಫ್ಯಾರಡೆ ಪದಕ (ಇನ್‌ಸ್ಟಿಟ್ಯೂಟ್ ಆಫ್ ಸಿವಿಲ್ ಇಂಜಿನಿಯರ್ಸ್)ಗಳನ್ನು ಪಡೆದರು.  

ಅತ್ಯುತ್ತಮ ಬರಹಗಾರರಾಗಿದ್ದ ಜೆಜೆ ಅನೇಕ ವೈಜ್ಞಾನಿಕ ಕೃತಿಗಳನ್ನೂ ರಚಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ- ದಿ ಸ್ಟ್ರಕ್ಚರ್ ಆಫ್ ಲೈಟ್ (1907), ದಿ ಕಾರ್ಪಸ್ಕುಲರ್ ಥಿಯರಿ ಆಫ್ ಮ್ಯಾಟರ್ (1907), ರೇಸ್ ಆಫ್ ಪಾಸಿಟಿವ್ ಇಲೆಕ್ಟ್ರಿಸಿಟಿ (1913), ದಿ ಎಲೆಕ್ಟ್ರಾನ್ ಇನ್ ಕೆಮಿಸ್ಟ್ರಿ (1923) ಮತ್ತು ಅವರ ಆತ್ಮಚರಿತ್ರೆ, ರಿಕಲೆಕ್ಷನ್ಸ್ ಅಂಡ್ ರಿಫ್ಲೆಕ್ಷನ್ಸ್ (1936).

ಮ್ಮ 84 ರ(1940) ಹರೆಯದವರೆಗೂ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುತ್ತಾ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಾ ಬಾರದ ಲೋಕಕ್ಕೆ ತೆರಳಿದ  ಸರ್ ಜೆ.ಜೆ.ಯವರು ಈ ಜಗತ್ತಿಗೆ ಬಿಟ್ಟು ಹೋದ ಅಮೂಲ್ಯ ಭಂಢಾರವೆಂದರೆ  ವಿಜ್ಞಾನದ ಅಮೂಲ್ಯ ಗ್ರಂಥಗಳು ಮತ್ತು ಜಗತ್ತಿನ ಅತ್ಯುತ್ತಮ ಸಾಧಕ ಶಿಷ್ಯವೃಂದ! 

Monday, December 4, 2023

"ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶ ನೀಡಿ"

 "ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶ ನೀಡಿ"

ಲೇಖನ:  ಬಸವರಾಜ ಎಮ್ ಯರಗುಪ್ಪಿ ಬಿ ಆರ್ ಪಿ ಶಿರಹಟ್ಟಿ,

ಸಾ.ಪೊ ರಾಮಗೇರಿ, ತಾಲ್ಲೂಕು ಲಕ್ಷ್ಮೇಶ್ವರ, 

ಜಿಲ್ಲಾ ಗದಗ 582116,  

ಮಿಂಚಂಚೆ basu.ygp@gmail.com



ಅಂಗವೈಕಲ್ಯ ಶಾಪವಲ್ಲ;ಅವರು ಸಮಸ್ಯೆಗಳಿಗೆ ಸವಾಲೊಡ್ಡಿ ಜಯ ಸಾಧಿಸುವ ಛಲಗಾರರು.

 ಡಿಸೆಂಬರ್ 03-ವಿಶ್ವ ಅಂಗವಿಕಲರ ದಿನವನ್ನಾಗಿ ಆಚರಿಸಲಾಗುತ್ತಿದೆ; ತನ್ನಿಮಿತ್ತ ವಿಶೇಷ ಲೇಖನ

"ನನ್ನ ಕೈ ಹಿಡಿದು ನನ್ನ ಜೊತೆ ನಡೆ.ನಾವು ಸಾಮಾಜಿಕ ಅಸಮಾನತೆಯ ಪಿಡುಗುಗಳ ಬೆನ್ನು ಮುರಿಯಬೇಕು;ಎಲ್ಲರನ್ನೂ ಒಳಗೊಳ್ಳುವ ಸಮಾಜದಲ್ಲಿ ಘನತೆಯಿಂದ ಬದುಕಲು ಅಂಗವೈಕಲ್ಯ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ನಾವು ಸಬಲೀಕರಣಗೊಳಿಸಬೇಕು" ಎಂದು ವಿಲಿಯಂ ಲೈಟ್ಬೋರ್ನ್ ಹೇಳಿದ್ದು ಅಕ್ಷರಶಃ ಸತ್ಯವಾದ ಮಾತು.

ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶ ಕೊಟ್ಟು ಅವರನ್ನು ಸಾಮಾಜಿಕವಾಗಿ ಬದುಕಲು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅವರ ಭವಿಷ್ಯಕ್ಕೆ ಬೆಳಕಾಗಬೇಕು.ಹಾಗಾಗಿ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷ ಣಿಕ, ಮಾಹಿತಿ ತಂತ್ರಜ್ಞಾನ ಮತ್ತು ಮನೊರಂಜನೆ ಇನ್ನೂ ಮುಂತಾದ ಕ್ಷೇತ್ರದಲ್ಲಿ ಗುರುತಿಸಬಲ್ಲರು ಹಾಗು ವಿಶೇಷವಾದ ಸಾಧನೆಯನ್ನು ಮಾಡಬಲ್ಲರು. ಸಮಾಜದಲ್ಲಿ ಅವರ ಮಹತ್ವ ಜನರಿಗೆ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ಪ್ರತಿ ವರ್ಷ ಜಗತ್ತಿನೆಲ್ಲೆಡೆ ಡಿಸೆಂಬರ್ 03 ರಂದು "ವಿಶ್ವ ವಿಕಲಚೇತನರ" ದಿನವನ್ನಾಗಿ ಆಚರಿಸಲಾಗುತ್ತದೆ.

#ಉದ್ದೇಶ:

ಅಂಗವಿಕಲರಿಗೂ ಸಮಾಜದ ಇತರ ವ್ಯಕ್ತಿಗಳಂತೆ ಸಮಾನವಾದ ಅವಕಾಶಗಳು ಸಿಗಬೇಕು.ಅವರಿಗೆ ಯೋಗ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.

#ಹಿನ್ನಲೆ:

ಮೊದಲು ಈ ದಿನವನ್ನು 1992 ರಲ್ಲಿ ವಿಶ್ವಸಂಸ್ಥೆಯು ಆರಂಭಿಸಿತು. ಈಗೂ ಸಹ ಈ ದಿನಾಚರಣೆ  ನಡೆದುಕೊಂಡು ಬರುತ್ತಿದೆ. ಈ ದಿನದಂದು ಜಗತ್ತಿನಲ್ಲಿರುವ ಅನೇಕ ಅಂಗವಿಕಲ ಯಶೋಗಾಥೆಗಳನ್ನು  ಸ್ಮರಿಸಲಾಗುತ್ತದೆ. ಜೊತೆಗೆ ಅವರ ಸ್ವಾವಲಂಬನೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಕಾರ್ಯಕ್ರಮಗಳು ಈ ದಿನ ನಡೆಯುತ್ತವೆ. ಅವರನ್ನು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮುಖ್ಯವಾಹಿನಿಗಳಿಗೆ ಸೇರಿಸುವ ಕುರಿತಂತೆ ಜನಜಾಗೃತಿಯನ್ನು ಮೂಡಿಸಲಾಗುತ್ತದೆ.

#ಅಂಗವೈಕಲ್ಯ ಎಂದರೆ ಏನು..?

ದೀರ್ಘಾವಧಿಯ ದೈಹಿಕ, ಮಾನಸಿಕ, ಬೌದ್ಧಿಕ ಅಥವಾ ಸಂವೇದನಾದ ದುರ್ಬಲತೆಗಳು ವಿವಿಧ ಅಡೆತಡೆಗಳೊಂದಿಗಿನ ಪರಸ್ಪರ ಕ್ರಿಯೆಯಲ್ಲಿ ಇತರರೊಂದಿಗೆ ಸಮಾನ ಆಧಾರದ ಮೇಲೆ ಸಮಾಜದಲ್ಲಿ ಪೂರ್ಣ ಮತ್ತು ಪರಿಣಾಮಕಾರಿ ಭಾಗವಹಿಸುವಿಕೆಗೆ ಅಡ್ಡಿಯಾಗಬಹುದು. ಎಂದು  ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ವಿಶ್ವಸಂಸ್ಥೆಯ ಸಮಾವೇಶವು" ಅಂಗವೈಕಲ್ಯವನ್ನು ಹೀಗೆ ವ್ಯಾಖ್ಯಾನೆಸಿದೆ. 

#ವಿಕಲಾಂಗತೆ  ಮೆಟ್ಟಿನಿಂತ  ಪ್ರಸಿದ್ಧ ಭಾರತೀಯರು:

"ಅಂಗವೈಕಲ್ಯವು ಮನಸ್ಸಿನ ಸ್ಥಿತಿ" ಹೌದು. ಆದರೆ ಅನೇಕರು ತಮ್ಮ ವಿಕಲತೆಯನ್ನು ಮೆಟ್ಟಿ ನಿಂತು ಅನೇಕ ಸಾಧನೆಗಳನ್ನು ಮಾಡಿ  ಸಾಬೀತುಪಡಿಸಿದ್ದಾರೆ.ತನ್ನ ಸಂಪೂರ್ಣ ದೇಹವನ್ನು ನಿಜವಾಗಿ ಬಳಸಲಾಗದ ಅಥವಾ ಇತರರಿಗೆ ನಿಯಮಿತವಾದ ಕೆಲಸಗಳನ್ನು ಮಾಡಲು ಸಾಧ್ಯವಾಗದ ವ್ಯಕ್ತಿಯ ಸಂಕಟವನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಇತರರಿಗಿಂತ ಹೆಚ್ಚು ಹೋರಾಟದೊಂದಿಗೆ ಪ್ರತಿದಿನ ಬದುಕುವ ಈ ಜನರನ್ನು ನಿರಂತರವಾಗಿ ಕೀಳಾಗಿ ಕಾಣುವ ಜನರಿದ್ದಾರೆ. ಆದರೆ ದೇವರು ಎಲ್ಲರಿಗೂ ಒಂದು ವಿಶೇಷ ಸಾಮರ್ಥ್ಯವನ್ನು ಅನುಗ್ರಹಿಸಿರುತ್ತಾನೆ. ಅದರಂತೆ ಭಾರತೀಯರು ತಮ್ಮ ಸವಾಲುಗಳನ್ನು ಮೀರಿ, ಯಶಸ್ಸು ಕಂಡಿದ್ದಾರೆ. ಅವರು ಎಲ್ಲರಿಗೂ ನಿಜವಾಗಿಯೂ ಸ್ಪೂರ್ತಿದಾಯಕರಾಗಿದ್ದಾರೆ.

ಅವರಲ್ಲಿ ಶೇಖರ್ ನಾಯ್ಕ್, ಸುಧಾ ಚಂದ್ರನ್, ರವೀಂದ್ರ ಜೈನ್,ಗಿರೀಶ್ ಶರ್ಮಾ,ಎಚ್.ರಾಮಕೃಷ್ಣನ್,ಪ್ರೀತಿ ಶ್ರೀನಿವಾಸನ್,ಸಾಯಿ ಪ್ರಸಾದ್ ವಿಶ್ವನಾಥನ್,ಅರುಣಿಮಾ ಸಿನ್ಹಾ, ಸುರೇಶ್ ಅಡ್ವಾಣಿ,ಸಾಧನಾ ಧಂಡ್, ಮಾಲತಿ ಕೃಷ್ಣಮೂರ್ತಿ ಹೊಳ್ಳ,ಹ್ಯಾರಿ ಬೋನಿಫೇಸ್ ಪ್ರಭು, ಜಾವೇದ್ ಅಬಿದಿ, ಪವಿತ್ರ ವೈ. ಎಸ್. ಮತ್ತು ಅಚಲಾ ಪಾಣಿ.

ಹೀಗೆ ತಮ್ಮ ಕಠಿಣ ಪರಿಶ್ರಮ, ಪ್ರತಿಭೆಯಿಂದ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ ಅಂಗವಿಕಲರ ಅನೇಕ ಉದಾಹರಣೆಗಳಿವೆ.ಅದರಲ್ಲಿ ಈ ಕೆಳಗಿನ ಸಾಧಕರು, ಅವರ ಅಂಗವಿಕಲತೆ ಮೆಟ್ಟಿ ನಿಂತು ಬೇರೆಯವರಿಗೆ ಸ್ಪೂರ್ತಿದಾಯಕ ವ್ಯಕ್ತಿಗಳಾಗಿದ್ದಾರೆ. 

#ವಿಕಲಾಂಗತೆ  ಮೆಟ್ಟಿನಿಂತ  ಪ್ರಸಿದ್ದ ವಿದೇಶಿ ವ್ಯಕ್ತಿಗಳು:

ಸ್ಟೀಫನ್ ಹಾಕಿಂಗ್, ಹೆಲೆನ್ ಕೆಲ್ಲರ್, ಆಲ್ಬರ್ಟ್ ಐನ್‍ಸ್ಟೀನ್. 

ಹೀಗೆ ತಮ್ಮ ಕಠಿಣ ಪರಿಶ್ರಮ, ಪ್ರತಿಭೆಯಿಂದ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ ಅಂಗವಿಕಲರ ಅನೇಕ ಉದಾಹರಣೆಗಳಿವೆ.ಅದರಲ್ಲಿ ಈ ಮೇಲಿನ ಸಾಧಕರು, ಅವರ ಅಂಗವಿಕಲತೆ ಮೆಟ್ಟಿ ನಿಂತು ಬೇರೆಯವರಿಗೆ ಸ್ಪೂರ್ತಿದಾಯಕ ವ್ಯಕ್ತಿಗಳಾಗಿದ್ದಾರೆ.

ಒಟ್ಟಾರೆಯಾಗಿ ನಮ್ಮ ಸಮಾಜದಲ್ಲಿ ಇಂದಿಗೂ ಅಂಗವಿಕಲರ ವಿರುದ್ಧ ತಾರತಮ್ಯ, ಅನುಕಂಪ, ಅಪಹಾಸ್ಯ ಮಾಡುತ್ತಿರುವುದು ದುರಾದೃಷ್ಟಕರ. ಆದರೆ, ಅವರೂ ನಮ್ಮ ಸಮಾಜದ ಭಾಗವಾಗಿದ್ದಾರೆ.ಅವರನ್ನು ಸಮಾನವಾಗಿ ಪರಿಗಣಿಸಬೇಕು ಎಂಬುದನ್ನು ನಾವು ಸಾಮಾನ್ಯವಾಗಿ ಒಪ್ಪಿಕೊಳ್ಳಲು ವಿಫಲರಾಗುತ್ತೇವೆ. ವಿಶೇಷ ಸಾಮರ್ಥ್ಯವುಳ್ಳ ಜನರು ಇತರರ ಮೇಲೆ ಅವಲಂಬಿತರಾಗಿರುವುದಿಲ್ಲ. ಆರಂಭದಲ್ಲಿ ಅವರಿಗೆ ಸಹಾಯದ ಅಗತ್ಯವಿರುತ್ತದೆ, ಆದರೆ ಕ್ರಮೇಣ, ಅವರು ತಮ್ಮ ದೈನಂದಿನ ಚಟುವಟಿಕೆಗಳನ್ನು ತಾವಾಗಿಯೇ ನಿರ್ವಹಿಸಲು ಕಲಿಯುತ್ತಾರೆ.ಅಂಗವಿಕಲರು ಬದುಕಿದ್ದರೂ ಪ್ರಯೋಜನವಿಲ್ಲ ಎಂಬಂತೆ ಕೀಳಾಗಿ ನೋಡುವುದನ್ನು ನಿಲ್ಲಿಸಬೇಕು.ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಅಂಗವಿಕಲರು ಹೆಚ್ಚಿದ್ದು, ಅವರನ್ನು ಪತ್ತೆ ಮಾಡುವ ಮತ್ತು ಅವರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಗಳು ಸರ್ಕಾರದಿಂದ ನಡೆಯುವಂತಾಗಬೇಕು. ಅಂಗವಿಕಲರಿಗೆ ಉಪಯುಕ್ತವಾಗಬಲ್ಲ ಯಾವ್ಯಾವ ಸರ್ಕಾರಿ ಯೋಜನೆಗಳಿವೆ ಮತ್ತು ಅವುಗಳನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಮರ್ಪಕವಾಗಿ ಮಾಹಿತಿಯನ್ನು ಸಂಬಂಧಿಸಿದವರು ನೀಡಿದಾಗ ಮಾತ್ರ ಈ ದಿನಕ್ಕೆ ಮಹತ್ವ ಬರಲು ಸಾಧ್ಯ.

ಕೊನೆಯ ಮಾತು:

ನನ್ನ ಸಾಮರ್ಥ್ಯದಲ್ಲಿ "DIS" ಅನ್ನು ತೆಗೆದು  "ABILITY" ಯನ್ನು ಮಾತ್ರ ನಾನು ಆಯ್ಕೆ ಮಾಡುತ್ತೇನೆ ಎಂದು ರಾಬರ್ಟ್ ಎಂ. ಹೆನ್ಸೆಲ್ ಹೇಳಿದ ಮಾತುಗಳನ್ನು ಇಲ್ಲಿ ಸ್ಮರಿಸಬಹುದು.



ಅನ್ನ ಬ್ರಹ್ಮ …… ಅನ್ನವೇ ದೇವರು.

ಅನ್ನ ಬ್ರಹ್ಮ…… ಅನ್ನವೇ ದೇವರು.

                                    ರಚನೆ: ‌ವಿಜಯಕುಮಾರ್‌ ಹೆಚ್‌. ಜಿ                                        ಸ.ಶಿ. ಸ.ಪ್ರೌ.ಶಾಲೆ, ಕಾವಲ್‌ ಭೈರಸಂದ್ರ.                                                     ಮತ್ತು     
                                            ಚಂದ್ರಕಲಾ ಆರ್. ಸ.ಶಿ.                                                 ಕೆ.ಪಿ.ಎಸ್.‌ ಕೊಡಿಗೆಹಳ್ಳಿ.

ಈ ಬಾರಿ ಶ್ರೀಯುತ ವಿಜಯಕುಮಾರ್‌ ಹಾಗೂ ಶ್ರೀಮತಿ ಚಂದ್ರಕಲಾರವರು ರಚಿಸಿದ ಅನ್ನ ಬ್ರಹ್ಮ ..... ಈ ವಿಜ್ಞಾನ ನಾಟಕವು ಡಿವಿಷನ್‌ ಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿ ಸಮಾಧಾನಕರ ಬಹುಮಾನ ಪಡೆದುಕೊಂಡಿತ್ತು. ಅದನ್ನು ವಿಜ್ಞಾನ ಶಿಕ್ಷಕರ ಅನುಕೂಲಕ್ಕಾಗಿ ನೀಡಲಾಗಿದೆ.  ವಿಜ್ಞಾನ ನಾಟಕ ರಚನೆಯಲ್ಲಿ ಇದು ನಿಮಗೆ ಒಂದಷ್ಟು ಒಳ ನೋಟವನ್ನು ನೀಡಬಹುದು. ನಮ್ಮ ಸವಿಜ್ಞಾನದ ಲೇಖಕ ಮಿತ್ರರ ಈ ಸಾಧನೆಗಾಗಿ, ಅವರಿಗೆ ಈ ಸಂದರ್ಭದಲ್ಲಿ ಶುಭ ಹಾರೈಸುತ್ತಿದ್ದೇವೆ.‌     

-------------------------------------------------------------------------                                              
 

ನಾಂದಿ: (ಪಾತ್ರಧಾರಿಗಳು ಕೈಗಳಲ್ಲಿ ಹಣತೆಗಳನ್ನು ಹಿಡಿದು, ಉಪನಿಷತ್‌ ವಾಕ್ಯಗಳನ್ನು ಹೇಳುತ್ತಾ ರಂಗಸ್ಥಳದಲ್ಲಿ ಸುತ್ತಾಡಿ ಕೈಯಲ್ಲಿನ ಹಣತೆಗಳನ್ನು ರಂಗಸ್ಥಳದ ಮುಂಭಾಗದಲ್ಲಿ ಇಟ್ಟಿರುವ ಸಿರಿಧಾನ್ಯಗಳಿಂದ ತುಂಬಿದ ಸೇರುಗಳ ಮೇಲೆ ಇಟ್ಟು ಹೊರಗೆ ಹೋಗುವರು)

ಪಾತ್ರಧಾರಿಗಳು ಒಟ್ಟಾಗಿ: “ಅನ್ನಂ ಬ್ರಹ್ಮೇತಿವ್ಯಜಾನಾತ್‌,

                       ಅನ್ನಾದ್ಯೇವ ಖಲ್ವಿಮಾನಿ ಭೂತಾನಿ ಜಾಯಂತೆ,

                       ಅನ್ನೇನ ಜಾತಾನಿ ಜೀವಂತಿ…………||       

                       ಅನ್ನಂ ನ ನಿಂದ್ಯಾತ್‌, ತದ್ವ್ರತಂ,

                       ಪ್ರಾಣೋವಾ ಅನ್ನಂ, ಶರೀರ ಮನ್ನಾದಂ,

                       ಶರೀರೆ ಪಾಣಃ ಪ್ರತಿಷ್ಠಿತಃ……………||

                       ಅನ್ನಂ ಬಹುಕುರ್ವೀತ, ತದ್ವ್ರತಂ | …………… (ನಿಷ್ಕ್ರಮಣ)

                        ಪ್ರವೇಶ (ಎರಡೂ ಬದಿಗಳಿಂದ ಸೂತ್ರಧಾರರ ಪ್ರವೇಶ)

ಸೂತ್ರಧಾರ 1: ಗೆಳತಿ ಕೇಳಿದೆಯಾ ಅವರು ಹೇಳಿಕೊಂಡು ಹೋಗಿದ್ದನ್ನ?

ಸೂತ್ರಧಾರ 2: ಹ್ಞಾಂ ಕೇಳಿದೆ. ಏನದು?  ನನಗೆ ಪೂರ್ತಿ ಅರ್ಥ ಆಗಲಿಲ್ಲ.

ಸೂತ್ರಧಾರ 1: ಅವು ಉಪನಿಷತ್ತಿನ ವಾಕ್ಯಗಳು. ಅನ್ನದ ಮಹತ್ವ ತಿಳಿಸುವ ಮಾತುಗಳು.

ಸೂತ್ರಧಾರ 2: ಓ. ಅದೇ ಅಕ್ಕಿಯಲ್ಲಿ ಮಾಡ್ತಾರಲ್ಲ ಅನ್ನ, Rice ಅದೇ ತಾನೆ?

ಸೂತ್ರಧಾರ 1: (ನಗುತ್ತಾ) ಅನ್ನ ಅಂದರೆ ಬರೀ Rice ಅಲ್ಲ. ಒಟ್ಟಾರೆ ಆಹಾರ ಎಂದು ಅರ್ಥ.

ಸೂತ್ರಧಾರ 2: ಓಹೋ! ಹೌದಾ? ಮತ್ತೆ ಏನೇನು ಹೇಳಿದರು ಈಗ, ಉಪನಿಷತ್‌ ವಾಕ್ಯಗಳನ್ನು.

ಸೂತ್ರಧಾರ 1: ಅನ್ನಂ ಬ್ರಹ್ಮೇತಿವ್ಯಜಾನಾತ್- ಅನ್ನವೇ ಪರಮಶ್ರೇಷ್ಠವಾದ ಬ್ರಹ್ಮ ಎಂದು ಹೇಳಿದರು,

            ಅನ್ನದಿಂದಲೇ - ಅಂದರೆ ಆಹಾರದಿಂದಲೇ ನಾವೆಲ್ಲಾ ಜೀವಿಸಿರುವುದು

            ಆದ್ದರಿಂದ ಅನ್ನವನ್ನು ಅಂದರೆ ಆಹಾರವನ್ನು ವ್ಯರ್ಥ ಮಾಡಬಾರದು,

            ಅನ್ನದಿಂದಲೇ ಪ್ರಾಣ, ಶರೀರವೂ ಅನ್ನದಿಂದಲೇ ಆಗಿರುವುದು. ಶರೀರದಲ್ಲಿನ ಪ್ರಾಣವೂ ಅನ್ನದಿಂದಲೇ,  ಆದ್ದರಿಂದ ನಾವು ಬೇರೆ ಬೇರೆ ವಿಧಾನಗಳಿಂದ ಅನ್ನವನ್ನು ಅಂದರೆ ಆಹಾರವನ್ನು  “ಬಹುಕುರ್ವೀತ” ಅಂದರೆ ಹೆಚ್ಚು ಹೆಚ್ಚು ಬೆಳೆಯಬೇಕು, ವಿವಿಧ ಆಹಾರಗಳನ್ನು ಬೆಳೆಯಬೇಕು ಎಂದು ಅರ್ಥ ಬರುವ ಮಾತುಗಳನ್ನು ಬಹಳ ಹಿಂದೆಯೇ ಹೇಳಿದ್ದಾರೆ ನೋಡು.

ಸೂತ್ರಧಾರ 2: ಅಬ್ಬಾ! ಹಾಗಾದರೆ, ಇಂದಿನ ನಾವು ಆಹಾರದ ಬಗ್ಗೆ ತಿಳಿಯೋದು ಬಹಳ ಇದೆ ಅಲ್ವಾ?

ಸೂತ್ರಧಾರ 1: ಹೌದು ಖಂಡಿತ ಅದಕ್ಕೆಂದೇ ವಿಶ್ವಸಂಸ್ಥೆ (U.N.O) 2023 ನೇ ವರ್ಷವನ್ನು YEAR OF MILLETS ಅಂದರೆ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ.

ಸೂತ್ರಧಾರ 2: YEAR OF MILLETS ಏನು ಹಾಗಂದ್ರೆ?

ಸೂತ್ರಧಾರ 1: ಬಾ. ನಾಟಕ “ಅನ್ನಬ್ರಹ್ಮ” ನೋಡಿದರೆ ನಿನಗೇ ಎಲ್ಲಾ ತಿಳಿಯುತ್ತೆ.

ಸೂತ್ರಧಾರ 2: ಸರಿ. ಬಾ! ನೋಡೋಣ, ನಡಿ, ನಡಿ, ಬೇಗ ಹೋಗಿ ಮುಂದಿನ ಸಾಲಿನಲ್ಲಿ ನಿಶ್ಯಬ್ದವಾಗಿ ಕುಳಿತು. ಗಮನವಿಟ್ಟು ನಾಟಕ ನೋಡೋಣ. ನಾಟಕ ನೋಡೋದೆ ಮಜಾ ನಡಿ,ನಡಿ.

                                        ______________

ದೃಶ್ಯ 2

ಬೆಳಗಾಗಿ ನಾನೆದ್ದು ಯಾರ್‌ ಯಾರ ನೆನೆಯಲಿ,

ಎಳ್ಳು ಜೀರಿಗೆ ಬೆಳೆಯೋಳೆ,

ಭೂಮ್ತಾಯಿ ಎದ್ದೊಂದು ಘಳಿಗೆ ನೆನೆದೇನ.

(ತಾಯಿ ಹಾಡು ಹೇಳುತ್ತಾ ರಂಗೋಲಿ ಇಡುತ್ತಿರುತ್ತಾಳೆ ಚಂಡಿನಾಟ ಆಡುತ್ತಾ ಬಂದ ಮಗ ತಲೆ ತಿರುಗಿ ಬೀಳುತ್ತಾನೆ. ತಾಯಿ ಓಡಿ ಹೋಗಿ ಉಪಚರಿಸುತ್ತಾಳೆ)

 ತಾಯಿ: ಅಯ್ಯೋ! ಮಗು ಏನಾಯ್ತೋ? ಏಳೋ, ಎಚ್ಚರ ಮಾಡ್ಕೋ, (ಆಚೀಚೆ ಗಾಬರಿಯಿಂದ ಓಡಾಡುವಳು, ಸಹಾಯಕ್ಕಾಗಿ ಕೂಗುವಳು) ಯಾರಾದ್ರು ಬನ್ರಪ್ಪ, ಸಹಾಯಕ್ಕೆ, ನೀರುನೀರು ತನ್ನಿ ಯಾರಾದ್ರು.

ಜನ 1: (ನೀರಿನೊಂದಿಗೆ ಓಡಿಬರುವನು, ತಾಯಿ ನೀರನ್ನು ತೆಗೆದುಕೊಂಡು ಉಪಚರಿಸುವಳು) ಏನಾಯ್ತಮ್ಮ?

ತಾಯಿ: ಮನೆಯಿಂದ ಈಗ ಹೊರಗೆ ಬಂದ, ನಾನೂ ನೋಡ್ತಾ ಇದ್ದೆ ಹಾಗೆ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟ ಅಣ್ಣ. ಏಳೋ ಕಂದ.  ಏಳೋ..


ಜನ1: ಊಟ ಮಾಡಿದ್ನೋ ಇಲ್ವೋ? ಏನು ತಿಂದಿದ್ದ?

ತಾಯಿ: ಇನ್ನೇನು ತಿನ್ನೋದು ನಮ್ಮಂತೋರು. ಅದೇ ದಿನಾ ತಿನ್ನೋದು, ಅನ್ನ ರಸ. - ರಾಜ ಎಚ್ಚರ ಮಾಡ್ಕೋಳೋ.

ಜನ 2: ಯಾವಾಗ್ಲೂ ಹೀಗಾಗುತ್ತಾ?

ತಾಯಿ: (ಉಪಚಾರ ಮುಂದುವರಿಸುತ್ತ) ಹ್ಞೂಂನಣ್ಣ ಆಗಾಗ ಸ್ಕೂಲ್‌ ನಲ್ಲೂ ಹೀಗೆ ಜ್ಞಾನ ತಪ್ಪಿ ಬೀಳೋನಂತೆ. ಅದಕ್ಕೆ ಸ್ಕೂಲ್‌ಗೂ ಕಳಿಸಿಲ್ಲ.

ಜನ3: ಮತ್ತೆ ಆಸ್ಪತ್ರೆಗೆ ಕರ್ಕೊಂಡು ಹೋಗಲಿಲ್ವೇನಮ್ಮ? ಔಷಧಿ ಕೊಡಿಸಬೇಕಿತ್ತು.

ತಾಯಿ: ಅಬ್ಬಾ. ಎದ್ದ.ಹ್ಞಾಂ ಹಾಗೆ. ಏಳಪ್ಪ. (ಎಚ್ಚರಗೊಳ್ಳುತ್ತಿರುವ ಮಗನನ್ನು ಕೂರಿಸಿ) ಕರಕೊಂಡು ಹೋಗಿದ್ವಿ. ಡಾಕ್ಟರು, ಪೋಷಕಾಂಶದ ಕೊರತೆಯಿದೆ. ಒಳ್ಳೆ ಆಹಾರ ಕೊಡಿ ಅಂದ್ರು. ಏನು ಕೊಡೋದೋ ಏನೋ?

ಜನ3: ಸರಿ ಹಾಗಾದ್ರೆ. ಮಗನಿಗೆ ಎಚ್ಚರ ಆಯ್ತು. ನೀರು ಕುಡಿಸಿ. ಮನೆಗೆ ಕರಕೊಂಡು ಹೋಗಿ ಉಪಚಾರ ಮಾಡಿ ಎಲ್ಲಾ

      ಸರಿಯಾಗುತ್ತೆ. ನಡೀರಪ್ಪ ಎಲ್ಲಾ ನಡೀರಿ.

ಜನ2: ಏನಾದ್ರು ಸಹಾಯ ಬೇಕಾದ್ರೆ ಹೇಳಮ್ಮ.

ತಾಯಿ: ತುಂಬಾ ಉಪಕಾರ ಆಯ್ತು, (ಎಲ್ಲರಿಗೂ ನಮಿಸುವಳು. ಮಗನನ್ನು ಮೆಲ್ಲಗೆ ಕರೆದುಕೊಂಡು ಮನೆಗೆ ಹೋಗುವಳು).

             (ಗುಂಪಿನಲ್ಲೇ ಇದ್ದ ಮಂತ್ರವಾದಿ ಮತ್ತು ನಾಗರಿಕರಿಬ್ಬರು ಅತ್ತಿಂದಿತ್ತ ಠಳಾಯಿಸುವರು.)

ಮಂತ್ರವಾದಿ: ಹೇ! ನನಗೆ ಒಂದು ಕೋಳಿ ನಾಲ್ಕು ಕಾಸು ಕೊಟ್ಟಿದ್ದರೆ, ಯಂತ್ರ ಕಟ್ಟಿಸಿ, ಮಂತ್ರ ಹಾಕಿ ಮಾಯ ಮಾಡುತಿದ್ದೆ ಕಾಯಿಲೆನ. ಡಾಕ್ಟ್ರು ತಾವ ಹೋಯ್ತರಂತೆ, ಅವರು ಆ ಪರೀಕ್ಷೆ ಈ ಪರೀಕ್ಷೆ ಅಂತ ಮಾಡಿ ಹಣ ಕಿತ್ತಕೋತಾರೆ ಅಷ್ಟೆ.

ನಾಗರಿಕ: ಅಯ್ಯೋ! ಇವನು ಯಾವ ಕಾಲದವನು, ಚಂದ್ರನ ಮ್ಯಾಲೆ ನೌಕೆ ಇಳ್ಸಿ, ಸೂರ್ಯಂ ತಾಕೂ ನೌಕೆ ಕಳ್ಸೋ ಕಾಲ ಇದು. ಈ ಕಾಲದಲ್ಲೂ ಮಂತ್ರ ಹಾಕಿ ತಾಯಿತ ಕಟ್ಟಿ ಕಾಯಿಲೆ ವಾಸಿ ಮಾಡ್ತೀನಿ ಅಂತಾನಲ್ಲ. ಆದೀತಾ? ಅಯ್ಯೋ ಮೂಢ.

ಇಷ್ಟಕ್ಕೂ ಆ ಹುಡುಗನಿಗೆ ಅಂತ ಕಾಯಿಲೆ ಏನೂ ಆಗಿಲ್ಲ. “ಊಟ ಬಲ್ಲವನಿಗೆ ರೋಗವಿಲ್ಲ” ಅಂತಾರಲ್ಲ. ಹಾಗೆ ಸಮತೋಲನ ಆಹಾರ ಸೇವಿಸಿ, ಒಳ್ಳೆ ಅಭ್ಯಾಸಗಳನ್ನು ರೂಢಿಸಿಕೊಂಡರೆ ಆರೋಗ್ಯ ನಮ್ಮ ಅಂಗೈಯಲ್ಲೇ ಇರುತ್ತೆ. ನಡೆಯಪ್ಪ ನಡಿ. ಅಯ್ಯೋ.

 

ದೃಶ್ಯ 3

ಕೋsರುಕ್?‌ ಕೋsರುಕ್?‌ ಕೋsರುಕ್?‌ ಕೋsರುಕ್?‌

ಹಿತಭುಕ್‌, ಮಿತಭುಕ್‌, ಕ್ಷುತಭುಕ್‌, ಋತಭುಕ್‌

ಸೋ‌sರುಕ್‌, ಸೋsರುಕ್‌, ಸೋsರುಕ್, ಸೋsರುಕ್.

(ಮಗನ ಜೊತೆ ಪ್ರವೇಶ- ಅಜ್ಜಿ ಮೊರದಲ್ಲಿ ಯಾವುದೋ ಧಾನ್ಯವನ್ನು ಸ್ವಚ್ಛಗೊಳಿಸುತ್ತಾ ಕುಳಿತಿರುತ್ತಾಳೆ. ಮೊಮ್ಮಗನ್ನು ನೋಡಿ ಓಡಿ ಬರುತ್ತಾಳೆ)

ಅಜ್ಜಿ: ಏನಾಯ್ತು ಮಗ? ಯಾಕೆ? ಮತ್ತೆ ಏನಾದ್ರು ಜ್ಞಾನ ತಪ್ಪಿ ಬಿದ್ನಾ?

ತಾಯಿ: ಹ್ಞೂಂನಮ್ಮ ಇಲ್ಲೇ ಮನೆ ಹತ್ರ ಬಿದ್ದುಬಿಟ್ಟ.ನೋಡಿ ಓಡಿ ಹೋದೆ.

ಅಜ್ಜಿ: ಏನು ಹುಡುಗರೋ ಏನೋ. ಇನ್ನೂ ಬೆಳೆಯೋ ವಯಸ್ಸಿನಲ್ಲೇ ಹಿಂಗಾದ್ರೆ ಹೆಂಗೆ? ನಮ್ಮ ಕಾಲದಲ್ಲಿ ನಾವು ರಾಗಿಮುದ್ದೆ, ಜೋಳದ ರೊಟ್ಟಿ, ನವಣೆ ಅನ್ನ, ಸಜ್ಜೆ ರೊಟ್ಟಿ, ಊದಲ ಉಪ್ಪಿಟ್ಟು, ಹಾರಕದ ನುಚ್ಚಿನ ಅಂಬ್ಲಿ ಅಂತೆಲ್ಲಾ ತಿಂತಿದ್ವಿ, ಈಗಿನೋರಿಗೆ ಅದೆಲ್ಲಾ ಗೊತ್ತೇ ಇಲ್ಲ. ಪಾಲಿಶ್‌ ಮಾಡಿದ ಬಿಳಿ ಅಕ್ಕಿ ಅನ್ನ ತಿಂದೂ ತಿಂದೂ ತ್ರಾಣನೇ ಇಲ್ಲ. ಅದೂ ತಿನ್ನೋದು ಇಷ್ಟಿಷ್ಟೇ. ಪಾಕೆಟ್‌ ಫುಡ್‌, ಜಂಕ್‌ ಫುಡ್‌ ಬೇರೆ. ನೀರೂ ಸರಿಯಾಗಿ ಕುಡಿಯಲ್ಲ. ನಮ್ಮ ಅಪ್ಪ ಹೇಳೋರು.  

“ಅಕ್ಕಿಯನು ತಿಂಬುವನು ಹಕ್ಕಿಯಂತಾಗುವನು

ಜೋಳವನು ತಿಂಬುವನು ತೋಳದಂತಾಗುವನು

ರಾಗಿಯನು ತಿಂಬುವನು ನಿರೋಗಿಯಾಗುವನು” ಅಂತ.

(ಹಾಡು ಕೋರಸ್‌ನಲ್ಲಿ)

     ಮತ್ತೆ ನಾವು ರಾಗಿ ಮುದ್ದೆ ತಿಂದು “ಇಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ” (ಕೋರಸ್) ಎಂದು ‌ಹಾಡುತಿದ್ವಿ.

ಹುಡುಗ: ಹೌದಾ ಅಜ್ಜಿ ಹೇಳಜ್ಜಿ ಕೇಳಕ್ಕೆ ಚನ್ನಾಗಿದೆ. ನಾನು ಏನು ತಿನ್ನಬೇಕು. ಏನು ತಿಂದ್ರೆ ಆರೋಗ್ಯಕ್ಕೆ ಒಳ್ಳೇದು ಹೇಳಜ್ಜಿ.

       ನನಗೂ ಪ್ರಜ್ಞೆ ತಪ್ಪಿ ಬೀಳೋದು ಬೇಜಾರು. ಶಾಲೆಗೆ ಹೋಗಬೇಕು ನಾನು. ನೀನು ಎಷ್ಟೊಂದು ಕತೆ ಹೇಳ್ತೀಯ.   

       ಆಹಾರದ ಬಗ್ಗೆನೂ ಏನಾದ್ರು ಕತೆ ಇದ್ದರೆ ಹೇಳಜ್ಜಿ. ನನಗೆ ತುಂಬಾ ಇಷ್ಟ.

ತಾಯಿ: ಆಹಾರ-ಆರೋಗ್ಯದ ಬಗ್ಗೆ ಇದ್ದರೆ ತಿಳ್ಕೊಂಡಂಗೂ ಆಗುತ್ತೆ. ಹೇಳಿ ಅತ್ತೆ, ಕತೆ ಇದ್ಯಾ?

ಅಜ್ಜಿ: ಆಹಾರದ ಬಗ್ಗೆ ಕತೆ. ಯಾಕಿಲ್ಲ. ಇದೆ. ಕನಕದಾಸರು ಈ ಆಹಾರ ಧಾನ್ಯಗಳ ಬಗ್ಗೆನೇ ಒಂದು ಕತೆ ಬರೆದಿದ್ದಾರೆ. “ರಾಮಧಾನ್ಯ ಚರಿತೆ” (ಕೋರಸ್‌ ನಲ್ಲಿ 2-3ಬಾರಿ) ಅಂತ. ಈ ಕತೇಲಿ, ಅಕ್ಕಿಗೂ ರಾಗಿಗೂ ಜಗಳ ಹತ್ಕೋಳತ್ತೆ, ನಾನೇ ಮೇಲೂ ಅಂತ ಅಕ್ಕಿ, ಇಲ್ಲ ನಾನು ಮೇಲು ಅಂತ ರಾಗಿ, (ಅಕ್ಕಿ, ರಾಗಿ ಜಗಳ ಪ್ರದರ್ಶನ)

ಅಕ್ಕಿ: ನಾನು ನೋಡು ಎಷ್ಟು ಬಿಳಿ. ಬೆಣ್ಣೆ ತರ, ನೀನು ಕರಿ ಮುಸುಡಿ ಕೋತಿ

ರಾಗಿ: ಆಕಳು ಕಪ್ಪಾದರೆ ಹಾಲು ಕಪ್ಪೆ? ಗಟ್ಟಿ ಮುಟ್ಟಾಗಿರಬೇಕಂದ್ರೆ ನನ್ನನ್ನೇ ತಿನ್ನಬೇಕು.

ಅಕ್ಕಿ: ಎಲ್ಲಾ ಮಂಗಳ ಕಾರ್ಯಗಳಲ್ಲೂ ನಾನೇ ಬೇಕು ಅಕ್ಷತೆಗೆ.

ರಾಗಿ: ಆದರೆ ಏನು ನೀನು ದುಬಾರಿ, ಕೈಗೆ ಸಿಗದ ಸೊಕ್ಕು, ನಾನು ಬಡವರ ಬಂಧು

ಅಕ್ಕಿ: ನನಗಿರೋ ಆಹಾರವೈವಿಧ್ಯ ನಿನಗಿಲ್ಲ.

ರಾಗಿ: ನಿನ್ನ ತಿಂದರೆ ರೋಗ, ನಾನು ಆರೋಗ್ಯದ ಸಿರಿ ಧಾನ್ಯ. (ಹಾಡು ಕೋರಸ್)‌ “ಸಿರಿ ಧಾನ್ಯ” ಕೋರಸ್ನಲ್ಲಿ.

ಅಜ್ಜಿ: ಹೀಗೆ ಜಗಳ ಆಡ್ತಾ ಅವು ರಾಮನ ಬಳಿಗೆ ಹೋದವು ಅವನೇ ತೀರ್ಮಾನ ಕೊಟ್ಟ. ಇದೇ ರೀತಿ ಈಗ ಅಕ್ಕಿ,ಗೋಧಿ ಮತ್ತು ಸಿರಿಧಾನ್ಯಗಳ ನಡುವೆ ಸ್ಪರ್ಧೆ ಉಂಟಾಗಿದೆ. ಅವು ಹೀಗೆ………ಜಗಳ ಆಡತಿರಬಹುದು.

 

ದೃಶ್ಯ-04

(ಅಕ್ಕಿ, ಗೋಧಿ ಒಂದು ಬಣ, ಇನ್ನುಳಿದ ಸಿರಿಧಾನ್ಯಗಳು ಒಂದು ಬಣವಾಗಿ ವಾಗ್ವಾದ ಮಾಡುತ್ತಾ ಚೂರು ಚೂರು ಕೈ ಕೈ ಮಿಲಾಯಿಸೋ ಮಟ್ಟಕ್ಕೆ ಹೋಗುತ್ತವೆ.)

 (ಘೋಷಣೆ: ಆಹಾರ ಧಾನ್ಯಗಳ ರಾಜ, ಪ್ರಪಂಚದಾದ್ಯಂತ ಬೆಳೆವ ಕೃಷಿ ಬೆಳೆಗಳಲ್ಲಿ ಉನ್ನತ ಸ್ಥಾನದಲ್ಲಿರೋ

            ಭೂಪ ಅಕ್ಕಿಯವರು ತಮ್ಮ ಮಿತ್ರ ಗೋಧಿ ಜೊತೆ ಬರುತ್ತಿದ್ದಾರೆ)

ಅಕ್ಕಿ: ಮಿತ್ರ, ನೋಡಿದೆಯಾ ನಮ್ಮ ಮೇಲೆ ಜನ ಹೇಗೆ ಅವಲಂಬಿತರಾಗಿದ್ದಾರೆ, ನಮ್ಮನ್ನೇ ಹೆಚ್ಚು ಹೆಚ್ಚು ಬೆಳೆದು  

     ಉಪಯೋಗಿಸುತ್ತಿದ್ದಾರೆ. ನಾವಿಲ್ಲದೆ ಇವರ್ಯಾರೂ ಇಲ್ಲ.

ಗೋಧಿ: ಹೌದು ಹೌದು. ಜನರಿಗೆ ಶಕ್ತಿ ನೀಡೋ ಕಾರ್ಬೋಹೈಡ್ರೇಟ್‌ಗಳನ್ನು ಕೊಡೋರು ನಾವಲ್ಲದೆ ಮತ್ಯಾರು? ಹಹಹ್ಹಹ.

(ಸಿರಿಧಾನ್ಯಗಳು ಒಟ್ಟಾಗಿ ಪ್ರವೇಶ- ರಾಗಿ, ಸಜ್ಜೆ, ನವಣೆ, ಬಿಳಿಜೋಳ. ಸ್ವಲ್ಪ ದೂರದಲ್ಲೇ ನಿಂತು ಪರಸ್ಪರ ಸಂಭಾಷಣೆ)

ಹಾರಕ: ನೋಡಿದ್ರಾ ಗೆಳೆಯರೆ, ಅಕ್ಕಿ,ಗೋಧಿ ಗೆ ಎಂಥಾ ಬಹುಪರಾಕು, ನಮ್ಮನ್ನ ಕೇಳೋರೇ ಇಲ್ಲ.

ಸಾಮೆ: ನಮ್ಮ ಬೆಲೆ ಇವರಿಗೆ ಗೊತ್ತಿಲ್ಲ.

ನವಣೆ: ನಮ್ಮ ಪರಿಚಯ ಕೂಡ ಇದೆಯೋ ಇಲ್ವೋ ಅನುಮಾನ

ಸಾಮೆ: ನಮಗೂ ಒಂದು ಕಾಲ ಬರುತ್ತೆ. ಯೋಚನೆ ಮಾಡಬೇಡಿ.

ಅಕ್ಕಿ: ಓಹೋ ಬರಬೇಕು, ಬರಬೇಕು, ಒರಟು ಮೈಯ ಕಿರುಧಾನ್ಯಗಳು.(ಕೋರಸ್-ಅಣಕ)

ಹಾರಕ: ನಾವು ಒರಟು ಸರಿ, ನೀವು ಭಾರಿ ನೀರು ಕುಡಿದು ಬೆಳೆವ ದುಂದುಗಾರರು. ನಾವು ಕಡಿಮೆ ನೀರಿನಲ್ಲೂ ಬೆಳೆದು ಬಡವರ ಹೊಟ್ಟೆ ತುಂಬಿಸುವವರು.

ಗೋಧಿ: ಯಾರು ಮೂಸುತ್ತಾರೆ ನಿಮ್ಮನ್ನು, ರೋಟಿ, ಚಪಾತಿ, ಪರಾಟ, ಪಲಾವ್‌, ರೈಸ್ಬಾತ್ ಗಳು ನಮ್ಮಿಂದ.

ಸಾಮೆ: ಭಾರತ ಇಂದು ಮಧುಮೇಹದ ರಾಜಧಾನಿ ಯಾಗಿರುವಾಗ, ನಿಮ್ಮ ಸೇವನೆಯಿಂದ ಸುಖವಿಲ್ಲ. ನಾವು ಬೇಕು. ಆರೋಗ್ಯಕ್ಕೆ. ಮರೆತು ಹೋಗಿದ್ದ ನಮ್ಮನ್ನು ಜನ ಕೈಹಿಡಿದು ಕರೆದೊಯ್ದು ಬಳಸುತ್ತಿದ್ದಾರೆ.

ಅಕ್ಕಿ: ನಮ್ಮಿಂದ ತಯಾರಿಸಬಹುದಾದ ಖಾದ್ಯಗಳಿಗೆ ಲೆಕ್ಕವಿಲ್ಲ. ನೀವು ನಮಗೆ ಸಮ ಆಗಲಾರಿರಿ.

ನವಣೆ: ಇಲ್ಲ. ನಮ್ಮನ್ನು ಸಿರಿಧಾನ್ಯಗಳೆಂದು ಗೌರವಿಸುತ್ತಿದ್ದಾರೆ. ನಾವು ನಿಧಾನವಾಗಿ ಜೀರ್ಣವಾಗುವುದರಿಂದ ರಕ್ತಕ್ಕೆ ಸಕ್ಕರೆಯನ್ನು ನಿಮ್ಮಷ್ಟು ಬೇಗ ಸೇರಿಸುವುದಿಲ್ಲ

ಹಾರಕ: (Glycemic Index 71ನಿಮ್ಮದು, ನಮ್ಮದು ಬರೀ60). ಹಾಗಾಗಿ, ಮಧುಮೇಹಿಗಳಿಗೆ (ಡಯಾಬಿಟೀಸ್) ನಾವು‌ ಉತ್ತಮ ಆಯ್ಕೆ.

ಗೋಧಿ: ಅದೇ ರೋಗಿಗಳಷ್ಟೆ ತಿನ್ನಬೇಕು ನಿಮ್ಮನ್ನು.

ಹಾರಕ: ಹಾಗೇನಿಲ್ಲ.ನಮ್ಮಲ್ಲಿ ನಾರಿನಂಶ ಹೆಚ್ಚು(ಪ್ರತಿದಿನ ಬೇಕಾದ ನಾರಿನಂಶದ 36% ನಾವೇ ಕೊಡುತ್ತೇವೆ) ಹಾಗಾಗಿ ಕರುಳಿನ ಸ್ವಚ್ಛತೆಗೆ ಅದರ ಆರೋಗ್ಯಕ್ಕೂ ನಾವೇ ಸಹಾಯಕರು. ಎಲ್ಲರಿಗೂ ನಾವು ಬೇಕು.

ಸಾಮೆ: ನಮ್ಮಲ್ಲಿ ಸಾಕಷ್ಟು ಕೊಬ್ಬಿನಂಶವೂ ಇದೆ(4ಗ್ರಾಂ), ಪ್ರೊಟೀನ್(1ಗ್ರಾಂ ಪ್ರತಿ 100ಗ್ರಾಂಗೆ) ಖನಿಜಾಂಶಗಳು ಅಧಿಕ

ನವಣೆ: ಪೊಟ್ಯಾಷಿಯಂ, ಕ್ಯಾಲ್ಷಿಯಂ, ಐರನ್‌, ಜಿಂಕ್‌, ಮೆಗ್ನೀಷಿಯಂ ಮುಂತಾದ ಖನಿಜಾಂಶಗಳು ಅಗತ್ಯಕ್ಕಿಂತ ಹೆಚ್ಚೇ ಇದೆ.

ಹಾರಕ: ಶಕ್ತಿಯನ್ನು ಒದಗಿಸುವುದರಲ್ಲೂ ನಾವು ಹಿಂದೆ ಬಿದ್ದಿಲ್ಲ. ನಿಮಗಿಂತ 3 ಪಟ್ಟು ಅಧಿಕ ಶಕ್ತಿ ಒದಗಿಸುತ್ತೇವೆ.

ಸಾಮೆ: ಒಟ್ಟಾರೆ ಜೀರ್ಣಕ್ರಿಯೆಗೆ, ಕರುಳಿನಲ್ಲಿ ಆಹಾರ ಆರೋಗ್ಯಕರವಾಗಿ ಚಲಿಸುವಲ್ಲಿ. ತೂಕ ನಿಯಂತ್ರಣದಲ್ಲಿ, ಮಧುಮೇಹ ನಿಯಂತ್ರಣದಲ್ಲಿ ನಾವು ಭಾರಿ ಪ್ರಯೋಜನಕ್ಕೆ ಬರತೀವಿ.

ಅಕ್ಕಿ: ಎಷ್ಟೇ ಆದರೂ ನೀವು “ಬಡವರ ಆಹಾರ” ಎಂದು ಉಪೇಕ್ಷೆಗೆ ಒಳಗಾದವರೇ. ಹಹಹ್ಹಹಾ.

ಹಾರಕ: ಈಗ ಹಾಗೇನಿಲ್ಲ. ಸುಂದರವಾಗಿ ಆರೋಗ್ಯಪೂರ್ಣವಾಗಿ ಇರಬೇಕೆನ್ನುವ ಎಲ್ಲರಿಗೂ ನಾವು ಆಪ್ತರು,

ಗೋಧಿ: ಆಗಲಿ ನಮ್ಮ ನಮ್ಮಲ್ಲಿ ವಾದ-ವಿವಾದ ಜಗಳ ಬೇಡ. ನಮ್ಮ ಗುಣ-ಅವಗುಣಗಳನ್ನು ನಮಗಿಂತ ಚನ್ನಾಗಿ ಬಲ್ಲವರು ಆಹಾರ ತಜ್ಞರು (ಡಯಟೀಷಿಯನ್ ಗಳು) ಬನ್ನಿ ಅವರ ಬಳಿಗೆ ಹೋಗಿ ನಮ್ಮ ಮೌಲ್ಯ ನಿರ್ಣಯ ಮಾಡಿಕೊಳ್ಳೋಣ.

 

                                        ದೃಶ್ಯ 05

ಬರದಲ್ಲೂ ಬೆಳೆಯುವೆವು, ಬರಡಲ್ಲೂ ಮೊಳೆಯುವೆವು.

ಪರಿಸರಕೆ ಪೂರಕರು, ಆರೋಗ್ಯದ ರಕ್ಷಕರು.

(ಡಯಟಿಷಿಯನ್‌ ಬಳಿಗೆ ಎಲ್ಲರೂ ಬರುವರು. ಡಯಟೀಷಿಯನ್‌ ಕುಳಿತಿರುತ್ತಾರೆ. ಆಹಾರ ಧಾನ್ಯಗಳು ಅವರ ಎಡ ಬಲಗಳಲ್ಲಿ ಎರಡು ಗುಂಪುಗಳಲ್ಲಿ ನಿಂತು ತೀರ್ಮಾನ ಕೇಳುತ್ತವೆ)

ಅಕ್ಕಿ: ಮಾನ್ಯ ಆಹಾರ ತಜ್ಞರೇ ಅಕ್ಕಿ ಗೋಧಿಗಳಾದ ನಾವು ಸಕಲರೂ ಬಳಸುವ ಆಹಾರ ಧಾನ್ಯಗಳು ನಾವೇ ಮೇಲೆಂದು ನಮ್ಮ ವಿಶ್ವಾಸ,

ಗೋಧಿ: ನಿಮ್ಮ ತೀರ್ಮಾನ ಕೇಳಲು ಬಂದಿದ್ದೇವೆ. ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ ನಮ್ಮ ಜಗಳ ಬಗೆಹರಿಸಿ.

ರಾಗಿ: ಇಲ್ಲ, ತಮಗೆ ತಿಳಿದಂತೆ ನಮ್ಮ ಮೌಲ್ಯ ಈಗ ಎಲ್ಲರಿಗೂ ತಿಳಿದಿದೆ.

ಸಜ್ಜೆ: ನಮಗೆ ಸಿರಿಧಾನ್ಯವೆಂಬ ಗೌರವ ದಕ್ಕಿದೆ.

ನವಣೆ: ಸರ್ಕಾರ ನಮ್ಮ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಂಡಿದೆ, ನಾವು ಕೀಳಾಗಿದ್ದಿದ್ದರೆ, ಹೀಗೆಲ್ಲಾ ಮಾಡುತ್ತಿದ್ದರೆ. ನೀವು ಸರಿಯಾದ ನಿರ್ಣಯಕೊಡಿ. ದಯವಿಟ್ಟು.

ಆಹಾರತಜ್ಞೆ: ನಿಮ್ಮೆಲ್ಲರ ಮಾತುಗಳೂ ನಿಜ. ಪ್ರಧಾನಮಂತ್ರಿಯವರೇ ತಮ್ಮ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳನ್ನು ಹೊಗಳಿದ್ದಾರೆ. ರೈತರು ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚು ಬೆಳೆಯಬೇಕೆಂದು ಪ್ರೋತ್ಸಾಹಿಸಿದ್ದಾರೆ. ಅದಕ್ಕಾಗಿ ಪ್ರಚಾರ ನೀಡಲು ಈ ಬಾರಿಯ ಜಿ20 ಶೃಂಗಸಭೆಯ ವಿದೇಶೀ ಗಣ್ಯರಿಗೆ ಸಿರಿಧಾನ್ಯಗಳಿಂದ ಮಾಡಿದ ಖಾದ್ಯಗಳನ್ನು ಉಣಬಡಿಸಿದ್ದೇವೆ. Millet: Super food ಎಂದೇ ಪ್ರಸಿದ್ಧವಾಗಿದೆ. ಸಿರಿಧಾನ್ಯಗಳಿಂದ ವಿವಿಧ ಖಾದ್ಯಗಳನ್ನೂ ಮಾಡಬಹುದು. ಬಿಸ್ಕತ್‌, ಕೇಕ್‌, ಡೋಕ್ಲಾ, ಉಪಮಾ, ಇತ್ಯಾದಿ(ತಿಂಡಿ ಪೊಟ್ಟಣ ಪ್ರದರ್ಶಿಸುವುದು) ಹಾಗೆ ಅಕ್ಕಿ, ಗೋಧಿಗಳಿಗೂ ಅದರದೇ ಸ್ಥಾನವಿದೆ. ಸಿರಿಧಾನ್ಯಗಳು ಉತ್ತಮವೇ ಆದರೂ ಕೇವಲ ಅವುಗಳನ್ನೇ ಸೇವಿಸಲು ಆಗುವುದಿಲ್ಲ, ಕೆಲವೊಂದು ಸಮಸ್ಯೆಗಳಿವೆ.

ಸಿರಿಧಾನ್ಯಗಳು: ಏನು? ನಮ್ಮಲ್ಲಿ ಸಮಸ್ಯೆಯೇ? ಏನದು?

ಅಕ್ಕಿ ಗೋಧಿ: ಹ್ಞಾಂ. ಕೇಳಿ, ಕೇಳಿ.

ಆಹಾರತಜ್ಞೆ: ಸಿರಿಧಾನ್ಯಗಳಲ್ಲಿ ಥೈರಾಯ್ಡ್‌ ಗ್ರಂಥಿಯ ಕೆಲಸದಲ್ಲಿ ತಡೆಯುಂಟುಮಾಡುವ ರಾಸಾಯನಿಕಗಳಿರುತ್ತವೆ. ಅಂತಹವರಿಗೆ ಇವು ಸೂಕ್ತವಲ್ಲ.

ಹಾರಕ: ವಾರಕ್ಕೆ ಮೂರು ಬಾರಿ ಬಳಸಿದರೆ ತೊಂದರೆ ಇಲ್ಲ ತಾನೆ.

ಆಹಾರ ತಜ್ಞೆ: ಹೌದು. ಸರಿ. ನಾರು ಪದಾರ್ಥ ಹೆಚ್ಚು ಇರುವುದರಿಂದ ಜೀರ್ಣವಾಗುವುದು ನಿಧಾನವಾಗುವುದರಿಂದ 

ಅಕ್ಕಿ ಗೋಧಿ: ಕರುಳಿನ ಸಮಸ್ಯೆ ಇರುವವರೂ ಇವನ್ನು ಹೆಚ್ಚಾಗಿ ತಿನ್ನಬಾರದು. ಅಲ್ಲವೆ?

ಆಹಾರ ತಜ್ಞೆ: ಹೌದು,ಸಿರಿಧಾನ್ಯಗಳಲ್ಲಿ ಅಮೈನೋ ಆಮ್ಲಗಳು ಅಧಿಕವಾಗಿರುತ್ತವೆ. ಹೆಚ್ಚಿನ ಅಮೈನೋ ಆಮ್ಲಗಳು ನಮ್ಮ ದೇಹಕ್ಕೆ  ಒಳ್ಳೆಯದಲ್ಲ. ಅಧಿಕವಾದರೆ ಅಮೃತವೂ ವಿಷವಾಗುತ್ತದೆ ಅನ್ನೋ ಮಾತೇ ಇದೆಯಲ್ಲಾ.   

        “ಅಧಿಕಂ ಸರ್ವತ್ರ ವರ್ಜಯೇತ್”‌ ಯಾವುದನ್ನೂ ಅತೀ ಮಾಡದೆ ಮಿತವಾಗಿ ಅಕ್ಕಿ,ಗೋಧಿ, ಸಿರಿಧಾನ್ಯ ಎಲ್ಲವನ್ನು  ಸೇವಿಸಿ. ಸುಖವಾಗಿ ಆರೋಗ್ಯವಾಗಿರಿ ಎಲ್ಲರೂ. ಎಲ್ಲಿ ಕೈ ಕೈ ಹಿಡಿದು ಹಾಡಿ, ನಾವೆಲ್ಲಾ ಮಿತ್ರರೆಂದು.

(ವೃತ್ತಾಕಾರದಲ್ಲಿ ಸುತ್ತುತ್ತಾ ಹಾಡು) ನಾವು ಬೆಳೆಗಳು ನಾವು ಗೆಳೆಯರು, ಮೇಲು ಕೀಳು ಏನಿಲ್ಲ.

             ಎಲ್ಲ ಸೇರಿ ಒಳಿತು ಮಾಡುವ ಅಹಂಕಾರವು ಬೇಕಿಲ್ಲ.

                                        **************

                                  

 

 

ದೃಶ್ಯ-6

(Millet Man of India ಡಾ|| ಖಾದರ್‌ ವಲಿ ಅವರೊಂದಿಗೆ ದೂರದರ್ಶನದಲ್ಲಿ ಸಂದರ್ಶನ. ಅಜ್ಜಿಮನೆ.)

ಅಜ್ಜಿ: ನೋಡಿದೆಯಾ ಮುರುಗೇಶ, ಅಕ್ಕಿ ಗೋಧಿ ಮತ್ತು ಸಿರಿಧಾನ್ಯಗಳ ನಡುವಿನ ವಾದ-ವಿವಾದ. ಹಾಗೇ ಆಹಾರತಜ್ಞರ ತೀರ್ಮಾನಾನೂ ಕೇಳಿದೆಯಲ್ಲಾ?

ಮುರುಗೇಶ: ನೋಡಿದೆ ಅಜ್ಜಿ, ಎಷ್ಟೊಂದು ವಿಷಯ ಗೊತ್ತಾಯ್ತು, ಸಿರಿಧಾನ್ಯಗಳ ಬಗ್ಗೆ ತಿಳಿಯಿತು.

ಅಜ್ಜಿ: ಏನು ತಿಂದ್ರೆ ಒಳ್ಳೇದು ಆರೋಗ್ಯಕ್ಕೆ ಅಂತ ಕೇಳಿದ್ಯಲ್ಲಾ? ಸಿರಿಧಾನ್ಯಗಳನ್ನು ಕ್ರಮಬದ್ಧವಾಗಿ ತಿಂದರೆ ಆಯ್ತು. ಅಷ್ಟೇ.

ಅಮ್ಮ: ಹೌದು ಅತ್ತೆ. ಸಿರಿಧಾನ್ಯಗಳಿಂದ ಅಡುಗೆ ಮಾಡಿ ಕೊಡ್ತೀನಿ ಮುರುಗೇಶನಿಗೆ. ಅವನ ಆರೋಗ್ಯ ಸುಧಾರಿಸುತ್ತೆ.

ಅಜ್ಜಿ: ಸರಿ ಕಣಮ್ಮ. ಹಾಗೆ ಮಾಡು.. ನಾವು ಚಿಕ್ಕೋರಿದ್ದಾಗ ಭಯಂಕರ ಬರಗಾಲ ಬಂದಿತ್ತು. ಆಗ ಬಡವ, ಶ್ರೀಮಂತ ಎನ್ನದೆ  

     ಎಲ್ಲರ ಜೀವ ಉಳಿಸಿದ್ದು ಈ ಧಾನ್ಯಗಳೇ. ಅವು ಸಿರಿಧಾನ್ಯಗಳೇ ಸರಿ.

ಅಮ್ಮ: ಅತ್ತೆ. ಶುಕ್ರವಾರ 12ಗಂಟೆಗೆ ಸಿರಿಧಾನ್ಯಗಳ ಬಗ್ಗೆನೇ ಯಾರೋ ಮಾತಾಡ್ತರಂತೆ ಟಿವಿ ಲಿ . ಹಾಗಂತ ಒಂದು ವಾರದಿಂದ ತೋರಿಸ್ತಾನೆ ಇದ್ದಾರೆ.

ಅಜ್ಜಿ: ಇವತ್ತು ಶುಕ್ರವಾರ ತಾನೆ. ಟೈಮ್‌ ಎಷ್ಟಾಯ್ತು ನೋಡು ಮತ್ತೆ.

ಮುರುಗೇಶ: 11.50 ಅಜ್ಜಿ. ಟಿ.ವಿ. ಹಾಕಲಾ ಹಾಗಾದರೆ?

ಅಮ್ಮ: ಹಾಕು. ಹಾಗೆ ಪಕ್ಕದ ಮನೆ ಪದ್ದಮ್ಮನ್ನೂ ಕರಿ. ನೋಡಬೇಕು ಅಂತಿದ್ಲು.

ಪದ್ದಮ್ಮ: ಇಗೋ ನೆನೆದವರ ಮನದಲ್ಲಿ ಅಂತ ನಾನೇ ಬಂದೆ.

ಅಜ್ಜಿ: ಅಮ್ಮ: ಬಾ. ಬಾ. ಕೂತ್ಕೋ, ಟಿ.ವಿ. ನೋಡೋಣ.

(ಮುರುಗೇಶ ಟಿ.ವಿ. ಹಾಕುವನು) 

ಟಿ.ವಿ.ಯಲ್ಲಿ ಸಂದರ್ಶನ.

ಸಂದರ್ಶಕಿ: ವೀಕ್ಷಕರೆ, ನಮಸ್ಕಾರ, “ಸಿರಿಧಾನ್ಯ-ಅದ್ಭುತ ಆಹಾರ” ಕಾರ್ಯಕ್ರಮಕ್ಕೆ ಸ್ವಾಗತ.

         ಇಂದು ನಮ್ಮೊಂದಿಗೆ, ಕಾಡುಕೃಷಿ ಪ್ರವರ್ತಕರಾದ, ಮಿಲೆಟ್‌ ಮ್ಯಾನ್‌ ಆಫ್‌ ಇಂಡಿಯಾ ಎಂದೇ ಪ್ರಸಿದ್ಧರಾದ, 25 ಕ್ಕೂ ಹೆಚ್ಚಿಗೆ ವರ್ಷಗಳಿಂದ ಸಿರಿಧಾನ್ಯಗಳ ಬಗ್ಗೆ ಆಂದೋಲನವನ್ನೇ ಮಾಡುತ್ತಿರುವ. ದೇಶ ಸೇವೆಗಾಗಿ ಅಮೆರಿಕಾದ ಉದ್ಯೋಗ ಬಿಟ್ಟು ನಮ್ಮ ದೇಶಕ್ಕೇ ಮರಳಿ ಬಂದು ಸರ್ವೇ ಜನಾಃ ಸುಖಿನೋ ಭವಂತು ಎಂದು ಆರೋಗ್ಯಕರ ಸಮಾಜಕ್ಕಾಗಿ ದುಡಿಯುತ್ತಿರುವ. ತಮ್ಮ ಈ ಎಲ್ಲಾ ಕಾರಣಗಳಿಗಾಗಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ|| ಖಾದರ್‌ ವಲಿ ಯವರು ಇದ್ದಾರೆ. ಎಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಪ್ರೀತಿಯಿಂದ ಸ್ವಾಗತಿಸೋಣ.

        “ ನಮಸ್ತೆ ಸರ್‌, ಕಾರ್ಯಕ್ರಮಕ್ಕೆ ಸ್ವಾಗತ.

                                                              ಡಾ|| ಖಾದರ್‌ ವಲಿ: ತುಂಬಾ ಸಂತೋಷ, ನಮಸ್ತೆ.

ಸಂದರ್ಶಕಿ: ಸರ್‌, ಇತ್ತೀಚೆಗೆ ಜನ, ಸಿರಿಧಾನ್ಯಗಳ ಕಡೆ ಮುಖ ಮಾಡ್ತಿದ್ದಾರೆ, ಆದರೂ ಅವರಿಗೆ ತುಂಬಾ ಅನುಮಾನಗಳಿವೆ.

          ಹಾಗಾಗಿ, ಈ ಸಿರಿಧಾನ್ಯಗಳೆಂದರೆ ಯಾವುವು. ದಯವಿಟ್ಟು ತಿಳಿಸಿ ಕೊಡಿ ಸರ್.‌

ಡಾ|| ಖಾದರ್‌ ವಲಿ: ಒಳ್ಳೆ ಪ್ರಶ್ನೆ ಕೇಳಿದ್ದೀಯಮ್ಮ. ಜನ ಸಾಮಾನ್ಯವಾಗಿ ಅಕ್ಕಿ ಗೋಧಿ, ಜೋಳ ಬಿಟ್ಟು ಮಿಕ್ಕ ಎಲ್ಲ ಮಿಲೆಟ್ ಗಳನ್ನು ಸಿರಿಧಾನ್ಯಗಳು ಅಂದು ಬಿಡುತ್ತಾರೆ. ಆದರೆ ಮುಖ್ಯವಾಗಿ 5 ಮಿಲೆಟ್ ಗಳು ಮಾತ್ರ ಸಿರಿಧಾನ್ಯಗಳು ಇವು ಹುಲ್ಲಿನ ಜಾತಿಗೆ ಸೇರಿದ ಸಸ್ಯಗಳು ಅವು 1. ಹಾರಕ 2.ಸಾಮೆ 3. ಕೊರಲೆ 4. ಊದಲು ಮತ್ತು 5. ನವಣೆ. ಇವುಗಳನ್ನು ಪಂಚರತ್ನಗಳು ಅಂತೀನಿ ನಾನು. Infact ಸಿರಿಧಾನ್ಯಗಳು ಅಂತ ಹೆಸರಿಟ್ಟವನೂ ನಾನೇ.

ಸಂದರ್ಶಕಿ: ಓ! ಹೌದಾ? ತುಂಬಾ ಸಂತೋಷ ಸರ್.‌ ಇವುಗಳನ್ನು ಯಾರು? ಯಾವಾಗ? ಎಷ್ಟು ಸೇವಿಸಬೇಕು ತಿಳಿಸಿ ಸರ್.‌

ಡಾ|| ಖಾದರ್‌ ವಲಿ: ಇವುಗಳನ್ನು ಯಾರು ಬೇಕಾದರೂ ಅಂದರೆ ಮಕ್ಕಳು, ವಯಸ್ಕರು, ಹೆಂಗಸರು, ಮುದುಕರು ಯಾರುಬೇಕಾದರೂ ತಿನ್ನಬಹುದು. ಯಾವ ಕಾಲದಲ್ಲಿ ಬೇಕಾದರೂ ಅಂದರೆ, ಚಳಿಗಾಲ, ಮಳೆಗಾಲ,ಬೇಸಿಗೆ ಕಾಲ ಹೀಗೆ ಯಾವ ಕಾಲದಲ್ಲಿ ಬೇಕಾದರೂ ತಿನ್ನಬಹುದು. ಆದರೆ ಒಂದೇ ಧಾನ್ಯವನ್ನು ಸತತವಾಗಿ ತಿನ್ನಬಾರದು ಅಷ್ಟೇ.

ಸಂದರ್ಶಕಿ: ಹಾಗಾದರೆ ಎರಡುದಿನ ಹಾರಕ, ಎರಡುದಿನ ಸಾಮೆ, ಮತ್ತೆ ಎರಡು ದಿನ ಊದಲು, ಆಮೇಲೆ ಒಂದು ದಿನ ನವಣೆ ಈ ರೀತಿ ಆವರ್ತನೆ ಮಾಡಿಕೊಂಡು ತಿನ್ನಬೇಕು ಅಂತೀರ ಸರ್.‌

ಡಾ|| ಹೌದು, ಸರಿಯಾಗಿ ಹೇಳಿದೆಯಮ್ಮ.

ಸಂದರ್ಶಕಿ: ಸರ್‌, ಇತ್ತೀಚೆಗೆ ಒಂದು ವರದಿ ನೋಡಿದೆ. ಹಾರಕ ತಿಂದು ಆರೋಗ್ಯ ಕೆಟ್ಟಿತು ಅಂತ. ಮತ್ತೆ ಥೈರಾಯ್ಡ್‌ ಗ್ರಂಥಿ ಸಮಸ್ಯೆ ಇರೋರು ಇದನ್ನು ತಿನ್ನಬಾರದು, ಕರಳು ಸಮಸ್ಯೆ ಇರೋರಿಗೆ ಇದು ಒಳ್ಳೆದಲ್ಲಾ. ಇವು ಉಷ್ಣ, ದೇಹದ ನೀರನ್ನೆಲ್ಲಾ ಹೀರುತ್ತವೆ ಅಂತೆಲ್ಲಾ ಅನುಮಾನ ಗೊಂದಲಗಳಿವೆ. ಮಿಲೆಟ್‌  ಮ್ಯಾನ್‌ ಆಫ್‌ ಇಂಡಿಯಾ ಆದ ನೀವೆ ಇವಕ್ಕೆಲ್ಲಾ ಸರಿಯಾದ ಉತ್ತರ ಕೊಟ್ಟು ಜನರ ಗೊಂದಲ ಪರಿಹಾರ ಮಾಡಬೇಕು ಸರ್.‌

ಡಾ|| ಹಾಗೆ ಆಗಲಮ್ಮ. ಸಿರಿಧಾನ್ಯಗಳನ್ನು ಸೇವಿಸುವುದರಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದು ಸಾಧ್ಯವೇ ಇಲ್ಲ. ನಿಜ ಹೇಳಬೇಕೆಂದರೆ ಇವುಗಳ ನಿಯಮಿತ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತೆ. ಹಾರಕ-ರಕ್ತದ ಉತ್ಪತ್ತಿ ಮತ್ತ್ ಶುದ್ಧತೆಯನ್ನು ಹೆಚ್ಚಿಸುತ್ತೆ. ಸಾಮೆ- ಜನನಾಂಗಗಳ ಆರೋಗ್ಯಕ್ಕೆ ಸಹಕಾರಿ, ಕೊರಲೆ- ಪಚನಾಂಗ infact  ಇಡೀ ಅಗಾಂಗಗಳನ್ನು ಆರೋಗ್ಯವಾಗಿ ಇಡುತ್ತೆ. ನವಣೆ ನರನಾಡಿಗಳನ್ನು ಚುರುಕುಗೊಳಿಸುತ್ತೆ. ಆದರೆ ಅವುಗಳನ್ನು ಸರಿಯಾದ ಚೀಲಗಳಲ್ಲಿ, ಫಂಗಸ್‌ ಬೆಳೆಯದಂತೆ ಸಂಗ್ರಹಿಸಿಟ್ಟು ಬಳಸಬೇಕು. ಇಲ್ಲದಿದ್ದರೆ ಯಾವುದೇ ಧಾನ್ಯವೂ ಸಮಸ್ಯೆ ಕೊಡುತ್ತೆ.

ಸಂದರ್ಶಕಿ: ಹಾಗಾದರೆ ಇವನ್ನಲ್ಲಾ ಒಟ್ಟಿಗೆ ಸೇರಿಸಿ Multi millet food ಅಂತ ಬಳಸಿದರೆ ತುಂಬಾ ಒಳ್ಳೆಯದಲ್ವಾ?

ಡಾ|| ಇಲ್ಲ. ಇಲ್ಲ. ಇದು ತಪ್ಪು. ಪ್ರತಿಯೊಂದು ಸಿರಿಧಾನ್ಯದಲ್ಲೂ ಅದರದೇ ಆದ ವಿಶೇಷ ಔಷಧೀಯ ಗುಣಗಳಿರುತ್ತವೆ. ಮಿಕ್ಸ್‌ ಮಾಡಿ ಸೇವಿಸಿದಾಗ ಔಷಧೀಯ ಅಂಶ ಸರಿಯಾದ ಪ್ರಮಾಣದಲ್ಲಿ ದೊರಕುವುದಿಲ್ಲ. ( Multi millet food ಪ್ರಯೋಜನವಿಲ್ಲ) ಸಿರಿಧಾನ್ಯಗಳು ನಮ್ಮ ಪರಂಪರಾಗತ ದೇಸೀ ಧಾನ್ಯಗಳು. ಅವುಗಳನ್ನು ಪಥ್ಯ ರೂಪದಲ್ಲಿ ಸೇವಿಸಿ. ಬೊಜ್ಜು, ಹೃದಯಸಮಸ್ಯೆ, ಸಕ್ಕರೆ ಕಾಯಿಲೆ, ಇವನ್ನೆಲ್ಲಾ ಗುಣಪಡಿಸಬಹುದು. ರಕ್ತದ ಕ್ಯಾನ್ಸರ್‌ ಇದ್ದವರಿಗೂ ಇವನ್ನು ನೀಡಿ ಅವರ ಆರೋಗ್ಯ ಸುಧಾರಿಸಿದ್ದೇವೆ. ಸಿರಿಧಾನ್ಯಗಳಿಗೆ ರೋಗಬಾಧೆ ಇಲ್ಲ ಹಾಗಾಗಿ ಇವನ್ನು ಕೀಟನಾಶಕ ಬಳಸದೇ ಬೆಳೆಯಬಹುದು.

ಸಂದರ್ಶಕಿ: ನಿಮ್ಮ ಮಾತಲ್ಲೇ ಹೇಳೋದಾದರೆ “ ಸರಿಯಾದ ಆಹಾರ ಸೇವಿಸಿದರೆ  ಔಷಧಿ ಬೇಕಿಲ್ಲ. ಆಹಾರವೇ ಸರಿಯಿಲ್ಲದಿದ್ದರೆ, ಔಷಧಿ ಕೆಲಸವನ್ನೇ ಮಾಡೋದಿಲ್ಲ” ಅಲ್ವೇ ಸರ್.‌

ಡಾ|| ಹೌದಮ್ಮ. ಸಿರಿಧಾನ್ಯಗಳೇ ಭವಿಷ್ಯದ ಆಹಾರ . ಸಿರಿಧಾನ್ಯಗಳನ್ನು ಬಳಸಿ ಆರೋಗ್ಯವಾಗಿರಿ. ಇದೇ ನನ್ನ ಸಂದೇಶ

ಸಂದರ್ಶಕಿ: ಧನ್ಯವಾದಗಳು ಸರ್.‌

( ಎಲ್ಲರೂ ಒಟ್ಟಿಗೆ: ಸಿರಿಧಾನ್ಯಗಳಿಗೆ ಜೈ, Millet Super food, ಅನ್ನಂ ಬ್ರಹ್ಮೇತಿವ್ಯಜಾನಾತ್‌, ಅನ್ನಂ ನ ನಿಂದ್ಯಾತ್‌ ತದ್ವ್ರತಂ, ಅನ್ನಂ ಬಹುಕುರ್ವೀತ ತದ್ವ್ರತಂ. ಓಂ ಶಾಂತಿಃ ಶಾಂತಿಃ ಶಾಂತಿಃ|| )