ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, July 4, 2021

ಸವಿಜ್ಞಾನ ಇ-ಪತ್ರಿಕೆಯ ಜುಲೈ - 2021ರ ಲೇಖನಗಳು

ಸವಿಜ್ಞಾನ ಇ-ಪತ್ರಿಕೆಯ ಜುಲೈ - 2021ರ ಲೇಖನಗಳು

ಸಂಪಾದಕರ ಡೈರಿಯಿಂದ - ಡಾ. ಟಿ.ಎ. ಬಾಲಕೃಷ್ಣ ಅಡಿಗ

1. ವಿಜ್ಞಾನಿ, ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೊಂದು ನುಡಿನಮನ  - ಡಾ.ಬಾಲಕೃಷ್ಣ ಅಡಿಗ

2. ಸುಧೀಂದ್ರ ಹಾಲ್ದೊಡ್ಡೇರಿ ಅವರೊಂದಿಗೆ ಸಂದರ್ಶನ 

3. ತಳಿ ವಿಜ್ಞಾನಕ್ಕೆ ತಳಹದಿ ಒದಗಿಸಿದ ಗ್ರೆಗೊರ್ ಜೊಹಾನ್ ಮೆಂಡೆಲ್  - ಡಾ. ಸಂಧ್ಯಾ ಡಿ.ಎನ್.

4. ಪಕ್ಷಿ ವೀಕ್ಷಣೆ - ಡಿ.ಕೃಷ್ಣ ಚೈತನ್ಯ

5. ಜ್ಞಾನದ ಗರಡಿಯಲ್ಲಿ ಒಂದು ದಿನ – ವಿ.ಎಸ್.ಶಾಸ್ತ್ರೀ ಅವರೊಂದಿಗೆ ಒಂದು ಆತ್ಮೀಯ ಸಂದರ್ಶನ

6. ನೆಲದ ಬಿಲದ ಸಿಂಹ - ವಿಜಯಕುಮಾರ್‌ ಹುತ್ತನಹಳ್ಳಿ

7. ಶಿಕ್ಷಣವನ್ನು ಜೀವನದ ಉಸಿರಾಗಿಸಿಕೊಂಡಿರುವ ಅಪರೂಪದ ಸಿದ್ಧಾಂತಿ - ಮಕ್ಕಳು ಮೆಚ್ಚಿದ ಶಿಕ್ಷಕ ಸೈಯದ್ ಅಕ್ಬರ್ ಷಾ ಹುಸೇನ್ - ಲಕ್ಷ್ಮಿ ಪ್ರಸಾದ್ ನಾಯಕ

8. ಒಗಟುಗಳು 

9. ವ್ಯಂಗ್ಯ ಚಿತ್ರಗಳು 


ಸಂಪಾದಕರ ಡೈರಿಯಿಂದ

 ಇದು ‘ಸವಿಜ್ಞಾನ’ದ ಏಳನೆಯ ಸಂಚಿಕೆ. ಕಳೆದ ವರ್ಷಾಂತ್ಯದ ಎರಡು, ಮೂರು ತಿಂಗಳ ಕಾಲ ವಿಸ್ತೃತ ಚರ್ಚೆ ನಡೆಸಿ, ವಿಜ್ಞಾನ ಶಿಕ್ಷಕರಿಗೆ ಹಾಗೂ ವಿಜ್ಞಾನಾಸಕ್ತರಿಗೆ ಮೆಚ್ಚುಗೆಯಾಗುವಂಥ, ಉಪಯುಕ್ತವಾಗುವಂಥ ಇ-ಪತ್ರಿಕೆಯೊಂದನ್ನು ಬ್ಲಾಗ್‌ನ ರೂಪದಲ್ಲಿ ಪ್ರಕಟಿಸಬೇಕೆಂಬ ನಮ್ಮ ತಂಡದ ನಿರ್ಧಾರ ಮಡುಗಟ್ಟಿ, ಕೊನೆಗೆ ಕಳೆದ ಜನವರಿಯಲ್ಲಿ ಕಾರ್ಯರೂಪಕ್ಕೆ ಬಂದಿತು. ಇದೀಗ ಆರು ಸಂಚಿಕೆಗಳು ಪ್ರಕಟವಾಗಿವೆ. ಶಿಕ್ಷಕರು ಮತ್ತು ವಿಜ್ಞಾನ ಓದುಗರು ನಮ್ಮ ಈ ಪ್ರಯತ್ನಕ್ಕೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಜೊತೆಗೆ, ವಿಜ್ಞಾನ ಪರಿಚಾರಿಕೆಯ ನಮ್ಮ ಈ ಪ್ರಯತ್ನದಲ್ಲಿ ತಮ್ಮ ಲೇಖನಗಳ ಮೂಲಕ ಕೈ ಜೋಡಿಸುತ್ತಿದ್ದಾರೆ. ಸಂತೋಷದ ವಿಷಯವೆಂದರೆ, ವಿದೇಶಗಳಲ್ಲಿರುವ ವಿಜ್ಞಾನಾಸಕ್ತ ಕನ್ನಡಿಗರಿಂದಲೂ ಈ ನಮ್ಮ ಪತ್ರಿಕೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಜುಲೈ ತಿಂಗಳ ಈ ಸಂಚಿಕೆಯಲ್ಲಿಯೂ ವೈವಿಧ್ಯಮಯ ಮಾಹಿತಿಗಳನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಬಹುಕಾಲ ಚಲಾವಣೆಯಲ್ಲಿದ್ದ ಆನುವಂಶೀಯತೆಯ ಅಸಂಬದ್ಧ ಪರಿಕಲ್ಪನೆಗಳನ್ನು ದೂರಮಾಡಿ, ತಳಿಶಾಸ್ತ್ರಕ್ಕೆ ವೈಜ್ಞಾನಿಕ ಬುನಾದಿಯನ್ನು ಹಾಕಿಕೊಟ್ಟ ಗ್ರೆಗೊರ್ ಜೊಹಾನ್ ಮೆಂಡೆಲ್‌ನ 199ನೇ ಜನ್ಮ ದಿನ, ಜುಲೈ ತಿಂಗಳ 22ರಂದು. ಈ ಹಿನ್ನೆಲೆಯಲ್ಲಿ, ಮೆಂಡೆಲ್ ಬಗ್ಗೆ ಒಂದು ವಿಶೇಷ ಲೇಖನವಿದೆ. ಕಳೆದ ಸಂಚಿಕೆಗಳಲ್ಲಿ ನಿಮಗೆ ನಾವು ಪರಿಚಯಿಸಿದ ಗಣಿತಜ್ಞ ವಿ.ಎಸ್.ಶಾಸ್ತ್ರೀ ಅವರೊಡನೆ  ನಮ್ಮ ತಂಡ ನಡೆಸಿದ ಸಂವಾದದ ಬಗ್ಗೆ ಒಂದು ಲೇಖನವಿದೆ. ಒಂದು ಉತ್ತಮ ಹವ್ಯಾಸವಾದ ಪಕ್ಷಿ ವೀಕ್ಷಣೆಯ ಬಗ್ಗೆ ಉಪಯುಕ್ತ ಮಾಹಿತಿ ಕೊಡುವ ಲೇಖನವಿದೆ. ಇರುವೆ ಸಿಂಹ ಎಂದು ಕರೆಯಲಾಗುವ ಕುತೂಹಲಕಾರಿ ಕೀಟವೊಂದರ ಬಗ್ಗೆ ಒಂದು ಲೇಖನವಿದೆ. ಎಂದಿನಂತೆ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳೂ ನಿಮಗೆ ರಂಜನೆ ನೀಡಲಿವೆ.

ನಮ್ಮ ಮೊದಲ ಸಂಚಿಕೆಯನ್ನು ಲೋಕಾರ್ಪಣೆ ಮಾಡಿ, ನಮ್ಮನ್ನು ಹರಸಿದ್ದ ಜನಪ್ರಿಯ ವಿಜ್ಞಾನಿ ಹಾಗೂ ಕನ್ನಡ ವಿಜ್ಞಾನ ಲೇಖಕ ಸುಧೀಂದ್ರ ಹಾಲ್ದೊಡ್ಡೇರಿ ಅವರು ಹಠಾತ್ತನೆ ನಮ್ಮನ್ನಗಲಿದ್ದಾರೆ. ಈ ಸಂಚಿಕೆಯಲ್ಲಿ ಅವರಿಗೊಂದು ನುಡಿನಮನವನ್ನು ಸಲ್ಲಿಸಿ, ಆ ಮೂಲಕ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ. ಅವರೊಡನೆ ನಮ್ಮ ತಂಡ ನಡೆಸಿದ್ದ ಸಂವಾದವನ್ನು ಅವರ ಸ್ಮರಣೆಗಾಗಿ ಮತ್ತೊಮ್ಮೆ ಪ್ರಕಟಿಸುತ್ತಿದ್ದೇವೆ.

ಡಾ. ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

ವಿಜ್ಞಾನಿ, ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೊಂದು ನುಡಿನಮನ

 ವಿಜ್ಞಾನಿ, ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೊಂದು ನುಡಿನಮನ

ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿ

ಸವಿಜ್ಞಾನ’ದ ಜುಲೈ ತಿಂಗಳ ಸಂಚಿಕೆಯ ಸಂಪಾದಕೀಯವನ್ನು ಅಂತಿಮಗೊಳಿಸುತ್ತ ಕುಳಿತಿದ್ದಾಗ ಬರಸಿಡಿಲಿನಂತೆ ಬಂದೆರಗಿತ್ತು. ಕನ್ನಡ ವಿಜ್ಞಾನ ಲೇಖಕ, ಜನಪ್ರಿಯ ಅಂಕಣಕಾರ, ಸುಧೀಂದ್ರ ಹಾಲ್ದೊಡ್ಡೇರಿ ಅವರ ನಿಧನದ ವಾರ್ತೆ. ಎಂಬತ್ತರ ದಶಕದಲ್ಲಿ ವಿಜಯ ಕಾಲೇಜಿನಲ್ಲಿ ಪದವಿಪೂರ್ವ ತರಗತಿಯಲ್ಲಿ ನನ್ನ ವಿದ್ಯಾರ್ಥಿಯಾಗಿದ್ದ ಸುಧೀಂದ್ರ, ನಂತರ ಯು.ವಿ.ಸಿ.ಇ. ಯಲ್ಲಿ ಇಂಜಿನೀರಿಂಗ್ ವಿದ್ಯಾಭ್ಯಾಸ ಮುಗಿಸಿ, ಮದರಾಸಿನ ಐ.ಐ.ಟಿ.ಯಲ್ಲಿ ಎಂ.ಟೆಕ್. ಪದವಿ ಗಳಸಿದರು. ಬೆಂಗಳೂರಿನ ತಾತಾ ವಿಜ್ಞಾನ ಮಂದಿರದಲ್ಲಿ ಏರೋ ಸ್ಪೇಸ್ ಇಂಜಿನೀರಿಂಗ್ ವಿಭಾಗದಲ್ಲಿ ವೈಜ್ಞಾನಿಕ ಸಲಹೆಗಾರರರಾಗಿ ವೃತ್ತಿ ಜೀವನ ಆರಂಭಿಸಿದ ಸುಧೀಂದ್ರ, ನಂತರ ರಕ್ಷಣಾ ಇಳಾಖೇಯ ಡಿ.ಆರ್.ಡಿ.ಒ. ನಲ್ಲಿ ವಿಜ್ಞಾನಿಯಾಗಿ ಆಯ್ಕೆಯಾದರು. ಹೆಚ್.ಎ.ಎಲ್.ನಲ್ಲಿ ವಿಮಾನಗಳ ತಯಾರಿಕೆಗೆ ಸಂಬಂಧಿಸಿದ ಗುಣಮಟ್ಟ ನಿಯಂತ್ರಣ ವಿಭಾಗದಲ್ಲಿಯೂ ಕೆಲಸ ಮಾಡಿದರು. ಈ ಸಂದರ್ಭದಲ್ಲಿ, ವಾಯುಪಡೆಯ ಚೀತಾ ಹೆಲಿಕಾಪ್ಟರ್‌ಗಳು ಹಿಮಾವೃತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವಾಗ ಉಂಟಾಗುವ ತಾಂತ್ರಿಕ ಸಮಸ್ಯೆಗಳ ನಿವಾರಣೆಯಲ್ಲಿ ಅವರ ಕೊಡುಗೆ ಸ್ಮರಣೀಯ. ಸ್ವಯಂ ನಿವೃತ್ತಿಯ ನಂತರ ಜೈನ್ ಡೀಮ್ಡ್ ಯೂನಿವರ್ಸಿಟಿ ಹಾಗೂ ಅಲಿಯೆನ್ಸ್ ಯೂನಿವರ್ಸಿಟಿಯಲ್ಲಿ ಏರೋಸ್ಪೇಸ್ ಇಂಜಿನೀರಿಂಗ್ ವಿಷಯದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು.

ವಿಜ್ಞಾನಿಯಾಗಿ ಸೇವೆಯಲ್ಲಿದ್ದಾಗಲೇ ಕನ್ನಡ ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಬರಹಗಳ ಮೂಲಕ ಪ್ರವೇಶಿಸಿದ ಸುಧೀಂಧ್ರ, ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡದಲ್ಲಿ ಬರೆದು ವಿಜ್ಞಾನಾಸಕ್ತರ ಮೆಚ್ಚುಗೆ ಗಳಿಸಿದರು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅವರು ಬರೆಯುತ್ತಿದ್ದ ಸಾಪ್ತಾಹಿಕ ಅಂಕಣ ಲೇಖನಗಳನ್ನು ತಪ್ಪದೇ ಓದುತ್ತಿದ್ದ ಅಸಂಖ್ಯಾತ ಓದುಗರಲ್ಲಿ ನಾನೂ ಒಬ್ಬ. ಅಕ್ಟೋಬರ್ ೨೦೦೧ರಲ್ಲಿ ‘ದೃಷ್ಟಿಕೋನ’ ಎಂಬ ಶೀರ್ಷಿಕೆಯಲ್ಲಿ ಪ್ರಾರಂಭವಾದ ಈ ಅಂಕಣ ಲೇಖನ ಮುಂದೆ ‘ನೆಟ್ ನೋಟ’ ಎಂಬ ಶೀರ್ಷಿಕೆಯಲ್ಲಿ ಮುಂದುವರೆಯಿತು.ಇದರಲ್ಲಿ ಅವರ ಕೊನೆಯ ಲೇಖನ ಕಳೆದ ಜೂನ್ ತಿಂಗಳ ೨೨ರಂದು ಪ್ರಕಟವಾಗಿತ್ತು. ಸಂಯುಕ್ತ ಕರ್ನಾಟಕ ಪತ್ರಿಕೆಯಲಿ ‘ಸೈನ್ಸ್ ಕ್ಲಾಸ್’ ಎಂಬ ಅಂಕಣ ಹಾಗೂ ಕಸ್ತೂರಿ ಮಾಸ ಪತ್ರಿಕೆಯಲ್ಲಿ ‘ನವನವೋನ್ಮೇಷ’ ಎಂಬ ಅಂಕಣಗಳನ್ನೂ ಬರೆಯುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿರುವ ಓದುಗರನ್ನೂ ತಲುಪಬೇಕೆಂಬ ಆಶಯದಿಂದ ಸರಳವಾಗಿ, ಸುಂದರವಾದ ಶೈಲಿಯಲ್ಲಿ ಬರೆಯುವುದರಲ್ಲಿ ಸುಧೀಂದ್ರ ಸಿದ್ಧಹಸ್ತರು.

ಸುಧೀಂದ್ರ ಅವರ ಲೇಖನಗಳಲ್ಲಿ ಕಾಣಬಹುದಾದ ವೈಶಿಷ್ಟ್ಯವೆಂದರೆ, ವಿಜ್ಞಾನ ಹಾಗೂ ಸಾಹಿತ್ಯಗಳ ಸಂಗಮ. ಲೇಖನಗಳಿಗೆ ಅವರು ಕೊಡುತ್ತಿದ್ದ ಶೀರ್ಷಿಕೆಗಳು ಸ್ವಾರಸ್ಯಕರವಾಗಿರುತ್ತಿದ್ದು, ಪ್ರಾಸಬದ್ಧವಾಗಿರುತ್ತಿದ್ದುವು. ಲೇಖನಗಳು ಸರಸ ಸಂವಹನವಾಗಿರುತ್ತಿದ್ದುವು. ನ್ಯಾನೋ ತಂತ್ರಜ್ಞಾನದ ಬಗ್ಗೆ ಅವರ ಲೇಖನವೊಂದರ ಶೀರ್ಷಿಕೆ ‘ನನ್ನೊಳು ನೀನೋ, ನಿನ್ನೊಳು ನ್ಯಾನೋ’. ಅವರ ಕೊನೆಯ ಬರಹವಿರಬಹುದಾದ ಲೇಖನದ ಶೀರ್ಷಿಕೆ ‘ಮೀರಬಹುದೆ ಸದ್ದನೂ, ವೇಗದ ಸರಹದ್ದನೂ’.ಇದು ಈ ಜುಲೈ ೧ರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ತಮ್ಮ ಮೂರು ಸಾವಿರಕ್ಕೂ ಹೆಚ್ಚು ಇಂಥ ವೈವಿಧ್ಯಮಯ ಬರಹಗಳ ಮೂಲಕ ಕನ್ನಡ ವಿಜ್ಞಾನ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದರು.

ನನ್ನ ಮತ್ತು ಸುಧೀಂದ್ರ ಅವರ ಒಡನಾಟ, ಗುರು-ಶಿಷ್ಯ ಸಂಬಂಧಕ್ಕೂ ಮೀರಿದ್ದು. ವಿಜ್ಞಾನಿಯಾಗಿ ಸೇವೆಯಲ್ಲಿದ್ದಾಗಲೂ ಅವರನ್ನು ಹಲವು ಸಂದರ್ಭಗಳಲ್ಲಿ ಭೇಟಿಯಾಗಿದ್ದೆ, ನಂತರವೂ ನಿರಂತರ ಸಂಪರ್ಕದಲ್ಲಿದ್ದೆ. ನನ್ನದೊಂದು ಪುಸ್ತಕದ ಲೋಕಾರ್ಪಣೆಯ ಸಮಾರಂಭಕ್ಕೂ ಮುಖ್ಯ ಅತಿಥಿಯಾಗಿ ಬಂದಿದ್ದರು. ನಾವು ‘ಸವಿಜ್ಞಾನ’ ಇ-ಪತ್ರಿಕೆಯ ಮೊದಲ ಸಂಚಿಕೆಯನ್ನು ಕಳೆದ ಜನವರಿಯಲ್ಲಿ ಲೋಕಾರ್ಪಣೆ ಮಾಡಿಸಿದ್ದೂ ಅವರಿಂದಲೇ. ಅವರ ಮನೆಯಿಂದಲೇ. ನಮ್ಮ ಪ್ರಯತ್ನವನ್ನು ತುಂಬು ಮನಸ್ಸಿನಿಂದ ಶ್ಲಾಘಿಸಿ, ಮೊದಲ ಸಂಚಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಕೆಲವು ಸಲಹೆಗಳನ್ನೂ ನೀಡಿದ್ದರು. ತಾವೂ ಲೇಖನ ಬರೆದು ಕಳಿಸುವುದಾಗಿ ಹೇಳಿದ್ದರು. ಕಳೆದ ತಿಂಗಳು ಈ ಬಗ್ಗೆ ಅವರನ್ನೊಮ್ಮೆ ನೆನಪಿಸಿದಾಗ ‘ಮೇಷ್ಟ್ರೇ, ಕೊಂಚ ಸಮಯ ಕೊಡಿ, ಬರೆದು ಕಳಿಸುತ್ತೇನೆ’ ಎಂದಿದ್ದರು. ಆದರೆ ಆ ದಿನ ಬರಲೇ ಇಲ್ಲ.

ಸುಧೀಂದ್ರ ಅವರು ಹಲವಾರು ಪ್ರಶಸ್ತಿ, ಪ್ರಶಂಸೆಗಳಿಗೆ ಭಾಜನರಾಗಿದ್ದರು. ಇತ್ತೀಚೆಗೆ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಅವರ ವಿಜ್ಞಾನ ಸಾಹಿತ್ಯ ಕೃಷಿಗೆ ‘ ಡಾ. ಅನುಪಮಾ ನಿರಂಜನ ಪ್ರಶಸ್ತಿ ‘ ಘೋಷಣೆಯಾಗಿತ್ತು. ಈ ಸುದ್ದಿ ಪ್ರಕಟವಾದ ದಿನವೇ ಅವರು ನಿಧನರಾಗಿದ್ದು ದುರ್ದೈವ. ಕನ್ನಡ ವಿಜ್ಞಾನ ಬರಹ ಕ್ಷೇತ್ರದಲ್ಲಿ ಜನರ ಮನಸ್ಸನ್ನು ಗೆದ್ದಿದ್ದ ಕೆಲವೇ ಬರಹಗಾರರಲ್ಲಿ ಒಬ್ಬರಾಗಿದ್ದ ಸುಧೀಂದ್ರ ಅವರ ನಿಧನ ದೊಡ್ಡ ಶೂನ್ಯವನ್ನೇ ಸೃಷ್ಟಿಸಿದೆ ಅಂದರೆ ತಪ್ಪಾಗಲಾರದು. ‘ಸವಿಜ್ಞಾನ’ ತಂಡದ ಪರವಾಗಿ ಹಾಗೂ ವೈಯುಕ್ತಿಕವಾಗಿ, ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೆ ಇದು ನನ್ನ ನುಡಿನಮನ.





ತಳಿ ವಿಜ್ಞಾನಕ್ಕೆ ತಳಹದಿ ಒದಗಿಸಿದ ಗ್ರೆಗೊರ್ ಜೊಹಾನ್ ಮೆಂಡೆಲ್

ಜುಲೈ 22ರಂದು ಮೆಂಡೆಲ್‌ನ 199ನೇ ಜನ್ಮ ದಿನದ ಸ್ಮರಣೆಯ ಸಂದರ್ಭದಲ್ಲಿ ವಿಶೇಷ ಲೇಖನ

ತಳಿ ವಿಜ್ಞಾನಕ್ಕೆ ತಳಹದಿ ಒದಗಿಸಿದ ಗ್ರೆಗೊರ್ ಜೊಹಾನ್ ಮೆಂಡೆಲ್

ಡಾ. ಸಂಧ್ಯಾ ಡಿ.ಎನ್.

ಸಹ ಶಿಕ್ಷಕಿ, ಸರ್ಕಾರೀ ಪ್ರೌಢಶಾಲೆ,

ಟಿ.ದಾಸರಹಳ್ಳಿ, ಬೆಂಗಳೂರು.

ಆನುವಂಶೀಯ ಲಕ್ಷಣಗಳ ವರ್ಗಾವಣೆ ಹೇಗೆ ?

ಜೀವಿಗಳ ಪ್ರಮುಖ ಲಕ್ಷಣಗಳಲ್ಲಿ ಪ್ರಜನನವೂ ಒಂದು. ಈ ಪ್ರಕ್ರಿಯೆಯಿಂದ ಹುಟ್ಟುವ ಮರಿ ಜೀವಿಗಳು ತಮ್ಮ ಪೋಷಕ ಜೀವಿಗಳನ್ನು ಬಿಟ್ಟು, ಬೇರೆ ಜೀವಿಗಳನ್ನು ಹೋಲುವುದು ಸಾಧ್ಯವೇ? ಹುಣಿಸೇ ಬೀಜ ಬಿತ್ತಿ ಅದು ಬೆಳೆದು ಮಾವಿನ ಮರವಾಗಲು ಸಾಧ್ಯವೇ? ಯಾವುದೇ ಪ್ರಾಣಿಯ ಮರಿ ತನ್ನ ತಂದೆ-ತಾಯಂದಿರನ್ನು ಹೋಲದೆ, ಬೇರೊಂದು ಪ್ರಾಣಿಯನ್ನು ಹೋಲುತ್ತದೆಯೇ? ಇಲ್ಲ, ಎಂಬ ಉತ್ತರ ನಿರೀಕ್ಷಿತವೇ. ಆದರೆ, 19ನೇ ಶತಮಾನದ ಪ್ರಾರಂಭದವರೆಗೆ ಮರಿ ಜೀವಿಗಳ ಹುಟ್ಟು, ಹೋಲಿಕೆ ಹಾಗೂ ವ್ಯತ್ಯಾಸಗಳ ಬಗ್ಗೆ ಜನರಲ್ಲಿದ್ದ ಕಲ್ಪನೆಗಳೇ ಬೇರೆ. ಈ ಹೋಲಿಕೆ ಹಾಗೂ ವ್ಯತ್ಯಾಸಗಳ ನಡುವಿನ ಗುಟ್ಟೇ ‘ಆನುವಂಶೀಯತೆ’(Heredity)  ಅದರಲ್ಲಿಯೂ, ಮಾನವರಲ್ಲಿನ ಆನುವಂಶೀಯತೆಯ ಬಗ್ಗೆ ಚಿತ್ರ ವಿಚಿತ್ರ ಕಲ್ಪನೆಗಳು ಜನರಲ್ಲಿದ್ದುವು. ‘ಜೀವಶಾಸ್ತ್ರದ  ಪಿತಾಮಹ’ ಎಂದು ಪರಿಗಣಿಸಲಾಗುವ ಅರಿಸ್ಟಾಟಲ್(Aristotle, 384-322 B.C.) ಆನುವಂಶೀಯತೆಯ ಬಗ್ಗೆ ತನ್ನದೇ ಆದ ವಿವರಣೆಯನ್ನು ನೀಡಿದ್ದ. ಅವನ ಪ್ರಕಾರ, ಮಾನವರಲ್ಲಿ ಗಂಡು ಮತ್ತು ಹೆಣ್ಣಿನ ರಕ್ತದ ಅಂಶಗಳು ಮಿಶ್ರಿತವಾಗುವ ಮೂಲಕ, ಆನುವಂಶೀಯ ಲಕ್ಷಣಗಳು ಪ್ರಕಟವಾಗುತ್ತವೆ. ಅವನ ಈ ವಾದಕ್ಕೆ ‘ಮುಕ್ತ ಮಿಶ್ರಣ ಆನುವಂಶೀಯತಾ ಸಿದ್ಧಾಂತ’ (blending theory of inheritance) ಎಂದು ಹೆಸರು. ಇದು ಬರೀ ಊಹಾಪೋಹವಾದರೂ ಸುಮಾರು ಎರಡು ಸಾವಿರ ವರ್ಷಗಳವರೆಗೆ ವಿಶ್ವದ ಎಲ್ಲೆಡೆ ನಂಬಿಕೆಗೆ ಪಾತ್ರವಾಗಿತ್ತು !

ಪಕ್ಷಿ ವೀಕ್ಷಣೆ

ಪಕ್ಷಿ ವೀಕ್ಷಣೆ 

ಲೇಖಕರು: ಡಿ.ಕೃಷ್ಣ ಚೈತನ್ಯ. 

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.




1. ನಮ್ಮ ರಾಜ್ಯ ಪಕ್ಷಿ- ನೀಲಕಂಠ (Indian Roller)

2. ನೀರಿನ ಮದ್ಯ ಗೂಡು ನರ‍್ಮಾಣ: ನಾಮದ ಕೋಳಿ (Eurasian Coot)

3. ಗೊರವಂಕ (Common Myna)

4. ಕೆಮ್ಮೀಸೆ ಪಿಕಳಾರ (Red-whiskered Bulbul)

5. ಪಾರಿವಾಳ (Blue Rock Pigeon)

6. ಗುಬ್ಬಚ್ಚಿ (Sparrow)

7. ಗೀಜಗ (Baya Weaver)

ಬನ್ನಿ ಪಕ್ಷಿ ವೀಕ್ಷಣೆ ಮಾಡೋಣ !!!

ಜ್ಞಾನದ ಗರಡಿಯಲ್ಲಿ ಒಂದು ದಿನ – ವಿ.ಎಸ್.ಶಾಸ್ತ್ರೀ ಅವರೊಂದಿಗೆ ಒಂದು ಆತ್ಮೀಯ ಸಂದರ್ಶನ

ಜ್ಞಾನದ ಗರಡಿಯಲ್ಲಿ ಒಂದು ದಿನ – ವಿ.ಎಸ್.ಶಾಸ್ತ್ರೀ ಅವರೊಂದಿಗೆ ಒಂದು ಆತ್ಮೀಯ ಸಂದರ್ಶನ   

ಕೋಲಾರದ ಶಾಸ್ತ್ರೀಜಿಯವರ ಪರಿಚಯ ನಿಮ್ಮೆಲ್ಲರಿಗೂ ಈಗಾಗಲೇ ಆಗಿದೆ. ಅವರ ಜೀವನೋತ್ಸಾಹ, ಕಲಿಕೆಯಲ್ಲಿರುವ ಶ್ರದ್ಧೆ, ಬೇರೆಯವರಿಗೂ ತಮ್ಮ ಜ್ಞಾನವನ್ನು ಧಾರೆ ಎರೆಯುವ ಗುಣ, ಎಲ್ಲವೂ ಅನುಕರಣೀಯ, ಅನನ್ಯ. ಅಂಥ ಜ್ಞಾನದ ಗಣಿಯಲ್ಲಿ ಒಂದು ದಿನ ಕಳೆಯುವ ಅವಕಾಶ ನಮಗೆ ದೊರೆಯಿತು. ಶಾಸ್ತ್ರೀಜಿಯವರ ಮನೆಯೇ ಅಗಣಿತ ಕಲಿಕಾ ಮಂದಿರ. ಹೀಗಾಗಿ, ‘ಸವಿಜ್ಞಾನ’ದ ಓದುಗರಿಗೂ ಅದನ್ನು ತಲುಪಿಸುವ ಸಲುವಾಗಿ ಶ್ರೀನಿವಾಸ್, ವಿಜಯಕುಮಾರ್ ಹಾಗೂ ರಾಮಚಂದ್ರಭಟ್ ಅವರನ್ನೊಳಗೊಂಡ ನಮ್ಮ ಸವಿಜ್ಞಾನ ತಂಡ ಅವರ ಸಂದರ್ಶನ ಮಾಡಿತು. ಸುಮಾರು 2 ತಾಸುಗಳಿಗೂ ಹೆಚ್ಚಿನ ಕಾಲದವರೆಗೆ ನಮ್ಮ ಜೊತೆಗಿದ್ದು ಹಲವಾರು ವಿಚಾರಗಳ ಕುರಿತು ಮಾಹಿತಿ ನೀಡಿದರು. ಅವರ ಮನೆಯಲ್ಲಿ ಅವರನ್ನು ಸಂದರ್ಶಿಸಿದ್ದೂ ಅಲ್ಲದೇ, ಅವರೊಂದಿಗೆ ಕುಪ್ಪಂಗೂ ತೆರಳಿ ಅಲ್ಲಿನ ‘ಗಣಿತವನ’ವನ್ನೂ ವೀಕ್ಷಿಸಿದೆವು. ಮನೆಯಲ್ಲಿ ನಡೆಸಿದ ಸಂದರ್ಶನದ ಜೊತೆ, ದಾರಿಯುದ್ದಕ್ಕೂ ಶೈಕ್ಷಣಿಕ ದೃಷ್ಟಿಕೋನಕ್ಕೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸಿದೆವು. ಇಳಿ ವಯಸ್ಸಿನಲ್ಲೂ ತುಂಬಾ ಉತ್ಸಾಹದಿಂದಲೇ ಯಾವುದೇ ಆಯಾಸವಿಲ್ಲದೆ, ನಮಗೆ ಹಲವಾರು ವಿಷಯಗಳ ಬಗ್ಗೆ ಕುತೂಹಲಭರಿತ ಮಾಹಿತಿಗಳನ್ನು ತಿಳಿಸಿಕೊಟ್ಟರು.

ನೆಲದ ಬಿಲದ ಸಿಂಹ

ನೆಲದ ಬಿಲದ ಸಿಂಹ 

ಲೇಖಕರು: ವಿಜಯಕುಮಾರ್‌ ಹುತ್ತನಹಳ್ಳಿ

ಸಹ ಶಿಕ್ಷಕರು

.ಪ್ರೌ.ಶಾಲೆಕಾವಲ್‌ ಭೈರಸಂದ್ರ.

ಬೆಂಗಳೂರು ಉತ್ತರ ವಲಯ  3


ಸಿಂಹ ಎಲ್ಲಿ ವಾಸಿಸುತ್ತೆ ಅಂದರೆ ಎಳೆ ಮಗು ಕೂಡ ಹೇಳುತ್ತೆ ಕಾಡಿನಲ್ಲಿ ಅಥವಾ ಗುಹೆಯಲ್ಲಿ ಅಂತ. ಆದರೆ ಮಣ್ಣಿನಲ್ಲಿ ವಾಸಿಸುವ ಸಿಂಹದ ಬಗ್ಗೆ ಗೊತ್ತ? ಅಂದರೆ ಕ್ಷಣ ಗಲಿಬಿಲಿಗೊಳ್ಳೋದು ಸಹಜ. ನಾನು ಈ ಲೇಖನದಲ್ಲಿ ಹೇಳ ಹೊರಟಿರುವುದು ಹಾಗೆ ಮಣ್ಣಿನಲ್ಲಿ ವಾಸಿಸುವ ಸಿಂಹದ ಬಗ್ಗೆ. ಆದರೆ ಇದು ನಿಜವಾದ ಸಿಂಹವಲ್ಲ. ಇರುವೆಗಳಿಗೆ ಸಿಂಹ ಸ್ವರೂಪವಾದ “ಇರುವೆಸಿಂಹ” ಅಂದರೆ Antlion ಎಂಬ ಸಣ್ಣ ಕೀಟದ ಬಗ್ಗೆ.

ಮಕ್ಕಳು ಮೆಚ್ಚಿದ ಶಿಕ್ಷಕ ಸೈಯದ್ ಅಕ್ಬರ್ ಷಾ ಹುಸೇನ್

ತೆರೆ ಮರೆಯ ಸಾಧಕರು 

ಶಿಕ್ಷಣವನ್ನು ಜೀವನದ ಉಸಿರಾಗಿಸಿಕೊಂಡಿರುವ ಅಪರೂಪದ ಸಿದ್ಧಾಂತಿ

ಮಕ್ಕಳು ಮೆಚ್ಚಿದ ಶಿಕ್ಷಕ ಸೈಯದ್ ಅಕ್ಬರ್ ಷಾ ಹುಸೇನ್

ಪರಿಚಯ- ಲಕ್ಷ್ಮೀಪ್ರಸಾದ್ ನಾಯಕ್

ಮೊನ್ನೆ ತಾನೆ ನಮ್ಮ ಶಿಕ್ಷಕರ ಗುಂಪಿನಲ್ಲಿ ನಿವೃತ್ತಿಯ ಶುಭಾಷಯಗಳ ಸುರಿಮಳೆ !! ಮರುದಿನ ದಿನ ನೋಡಿದರೆ, ಹಿಂದಿನ ದಿನ ನಿವೃತ್ತರಾದ ಶಿಕ್ಷಕರಿಂದ ನಮ್ಮ ವಾಟ್ಸಾಪ್ ಗುಂಪಿನಲ್ಲಿ ಮತ್ತು ಗೂಗಲ್‌ ಗ್ರೂಪಿನಲ್ಲಿ ಯಥಾಪ್ರಕಾರ ವಿವಿಧ ಸಂಪನ್ಮೂಲಗಳ ಹಂಚಿಕೆ !!! ಒಂದು ದಿನವಲ್ಲ, ಸತತವಾಗಿ ಅವ್ಯಾಹತವಾಗಿ ಈ ಹಂಚಿಕೆ ನಡೆಯುತ್ತಲೇ ಇದೆ. ಅವರದ್ದು ಕೇವಲ ವಯೋ ನಿವೃತ್ತಿ ! ಕಾಯಕಕ್ಕಲ್ಲ!! ಸಾಮಾನ್ಯ ಶಿಕ್ಷಕರಾಗಿದ್ದರೆ ಇನ್ಯಾಕೆ ವೃಥಾ ಉಸಾಬರಿ ಎನ್ನುತ್ತಿದ್ದರೇನೋ!!!! ಆದರೆ, ಈ ಶಿಕ್ಷಕರು ಆ ಸಾಲಿಗೆ ಸೇರಿದವರಲ್ಲ ಎನ್ನುವುದನ್ನು ನಾನು ಹೇಳಬೇಕಿಲ್ಲವಲ್ಲ .

ವಿಜ್ಞಾನ ಒಗಟುಗಳು

 

ವಿಜ್ಞಾನ ಒಗಟುಗಳು

ವಿಜಯಕುಮಾರ್‌ ಹುತ್ತನಹಳ್ಳಿ.

ಸ.ಪ್ರೌ.ಶಾಲೆ.

ಕಾವಲ್‌ ಭೈರಸಂದ್ರ.

ಬೆಂಗಳೂರು ಉತ್ತರ ವಲಯ - 3

 

ಪ್ರೀತಿಯ ಓದುಗರೆ,

“ನೀನು ಬೋಧಿಸುವ ವಿಧಾನದಲ್ಲಿ ನನಗೆ ಅರ್ಥವಾಗುತ್ತಿಲ್ಲವೆಂದಾದರೆ, ನನಗೆ ಅರ್ಥವಾಗುವ ವಿಧಾನದಲ್ಲಿ ನೀ ಬೋಧಿಸಲಾರೆಯಾ”? ಎಂಬ ಕಲಿಕಾರ್ಥಿಯ ಒಳ ನುಡಿ ಬೋಧನಾ ವೃತ್ತಿಯಲ್ಲಿ ತೊಡಗಿರುವ ಯಾರಿಗೇ ಆದರೂ ಸವಾಲಿನಂತದ್ದು ಮತ್ತು ಸತತ ಮಾರ್ಗದರ್ಶಕವಾದದ್ದು. ಪ್ರಯೋಗ, ಚಟುವಟಿಕೆ ಆಧಾರದಲ್ಲಿ ನಮ್ಮ ಸುತ್ತಲಿನ ಪರಿಸರವನ್ನು ಅವಲೋಕಿಸುತ್ತಾ, ಬೋಧನೆಗೆ ಅಳವಡಿಸಿಕೊಳ್ಳುತ್ತಾ ಸಾಗಬೇಕಾದ ವಿಜ್ಞಾನ ಶಿಕ್ಷಕನಿಗೆ ಕಲಿಸಲು ಎಷ್ಟು ಮಾರ್ಗಗಳಿದ್ದರೂ ಕಡಿಮೆಯೆ. ಅಂತಹವುಗಳಲ್ಲಿ ವಿಜ್ಞಾನ ಒಗಟುಗಳು ಎಂಬ ಒಂದು ವಿಧಾನವೂ ಬೋಧನಾ-ಕಲಿಕಾ ಪ್ರಕ್ರಿಯೆಯಲ್ಲಿ ನೆರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಒಗಟುಗಳು ನಮ್ಮ ಸಂಸ್ಕೃತಿಗೆ ಹೊಸತೇನೂ ಅಲ್ಲ. ನಮ್ಮ ಪೂರ್ವಿಕರು ಬುದ್ಧಿ ವಿಕಾಸಕ್ಕೆ ಮತ್ತು ಸಮಯದ ಸದುಪಯೋಗಕ್ಕೆ ಕಂಡುಕೊಂಡ ಮಾರ್ಗವೇ ಇದು. ಇದನ್ನು ನಾವು ನಮ್ಮ ವಿಜ್ಞಾನ ಬೋಧನೆಗೆ ಅಳವಡಿಸಿಕೊಳ್ಳಬೇಕಷ್ಟೆ.

ಈಗಾಗಲೇ ಲಭ್ಯವಿರುವ ವಿಜ್ಞಾನದ ಒಗಟುಗಳನ್ನು ಬಳಸಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಚಟುವಟಿಕೆ ಮಾಡಬಹುದು. ಅಥವಾ ತೊಡಗಿಸಿಕೊಳ್ಳುವ ಚಟುವಟಿಕೆಯಲ್ಲೂ ಬುದ್ಧಿಗೆ ಕಸರತ್ತಾಗಿ ನೀಡಬಹುದು. ಸ್ವತಃ ಶಿಕ್ಷಕರೇ ಒಗಟುಗಳನ್ನು ರಚಿಸಿಕೊಳ್ಳಬಹುದು, ವಿದ್ಯಾರ್ಥಿಗಳಿಗೂ ರಚಿಸಲು ಪ್ರೇರೇಪಿಸಬಹುದು. ಇದರಿಂದ ಕಲಿಕೆ ಅರ್ಥಪೂರ್ಣವೂ ಶಾಶ್ವತವೂ ಆಗುತ್ತದೆ. ವಿಜ್ಞಾನದ ಒಗಟುಗಳನ್ನು ರಚಿಸುವುದು ಹೇಗೆಂದು ಈಗ ನೋಡೋಣ.

“ಒಗಟು” ಈ ಪದದ ಅರ್ಥ, ಸ್ವರೂಪ ಎಲ್ಲರಿಗೂ ಗೊತ್ತಿರುವುದೇ ಆಗಿದೆ. ನೇರವಾಗಿ ಅರ್ಥವಾಗದಂತೆ ಮಾತಾಡಿದರೆ ನಾವು ಸಹಜವಾಗಿ ಹೇಳುವ ಮಾತು “ನೀನು ಒಗಟು ಒಗಟಾಗಿ ಮಾತಾಡಿದರೆ ನನಗೆ ಅರ್ಥ ಆಗಲ್ಲ ನೇರವಾಗಿ ಹೇಳು ಅದೇನು ಅಂತ” ಎಂಬುದಾಗಿರುತ್ತದೆ. ಅಂದರೆ ಒಗಟು ನೇರವಲ್ಲದ ಸುಳಿವುಗಳನ್ನು ಕೊಡುತ್ತಾ ವಿಷಯವೊಂದನ್ನು ವ್ಯಕ್ತಪಡಿಸುವ ಬೌದ್ಧಿಕ ಕ್ರಿಯೆ.

ವಿಜ್ಞಾನದ ಒಗಟುಗಳಿಗೂ ಇದು ಅನ್ವಯಿಸುತ್ತದೆ. ಅವುಗಳನ್ನು ರಚಿಸಲು ನಾವು ಮೊದಲು

೧. ಒಂದು ಪರಿಕಲ್ಪನೆಯನ್ನು ನಿಗಧಿಪಡಿಸಿಕೊಳ್ಳಬೇಕು, (ತರಗತಿ ಅಗತ್ಯಕ್ಕೆ ತಕ್ಕಂತೆ)

೨. ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಸಂಗ್ರಹಿಸಬೇಕು.

೩. ನಂತರ ನೇರವಲ್ಲದ ಸುಳಿವುಗಳನ್ನು ನೀಡುತ್ತಾ ಒಗಟನ್ನು ಕಟ್ಟಬೇಕು.

೪. ಸ್ವಲ್ಪ ಕಾವ್ಯಾತ್ಮಕ ಭಾಷೆ ಇದ್ದರೆ ಒಗಟು ಸೊಗಸಾಗಿರುತ್ತದೆ.( ಸರಳವಾಗಿಯೂ ಇರಬಹುದು)

 

ಉದಾಹರಣೆ: ೧

ಪರಿಕಲ್ಪನೆ : ಅದಿಶ ಮತ್ತು ಸದಿಶ ಪರಿಮಾಣಗಳು ( Scalar and Vector Quantities )

ವಿಷಯ ಸಂಗ್ರಹ : ಅದಿಶ ಪರಿಮಾಣಗಳು ಕೇವಲ ಪರಿಮಾಣವನ್ನು ಹೊಂದಿರುತ್ತವೆ.

ಉದಾ:         ಜವ,ಒತ್ತಡ,ರಾಶಿ ಇತ್ಯಾದಿ.

              ಸದಿಶ ಪರಿಮಾಣಗಳು ಪರಿಮಾಣ ಮತ್ತು ದಿಕ್ಕು ಎರಡನ್ನೂ ಹೊಂದಿರುತ್ತವೆ.

              ಉದಾ: ವೇಗ, ಬಲ, ತೂಕ ಇತ್ಯಾದಿ.

ಒಗಟು : ಜವದಲ್ಲಿಲ್ಲ ವೇಗದಲ್ಲಿರುವೆ

        ರಾಶಿಯಲ್ಲಿಲ್ಲ ತೂಕದಲಿರುವೆ

        ಒತ್ತಡದಲ್ಲಿಲ್ಲ ಬಲದಲ್ಲಿರುವೆ

        ನಾ ಬಲ್ಲೆ ನೀ ನನ್ನ ಹೆಸರಿಸುವ ಆತುರದಲಿರುವೆ.    

ಉತ್ತರ: ದಿಕ್ಕು. ಪರಿಕಲ್ಪನೆ ಸ್ಪಷ್ಟವಾಗಿದ್ದಾಗ ವಿದ್ಯಾರ್ಥಿ ಇದರ ಉತ್ತರ ದಿಕ್ಕು ಎಂದು ಸುಲಭವಾಗಿ ಹೇಳಬಹುದು.

ಉದಾಹರಣೆ. ೨

ಪರಿಕಲ್ಪನೆ : ಪರಿಮಾಣ, ಪರಿಣಾಮ ಮತ್ತು ಪರಮಾಣು ( ಈ ಪದಗಳು ವಿಜ್ಞಾನದಲ್ಲಿ ಸಾಮಾನ್ಯ ಆದರೆ ಮಕ್ಕಳು ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಗೊಂದಲಕ್ಕೀಡಾಗುವುದನ್ನು ಗಮನಿಸಿರುತ್ತೇವೆ ಅದರ ನಿವಾರಣೆಗೆ ಒಗಟಿನ ಮೂಲಕ ಪ್ರಯತ್ನ. ಈ ಒಗಟಿಗೆ ಉತ್ತರಿಸಲು ಪ್ರಯತ್ನಿಸುವಾಗ ವ್ಯತ್ಯಾಸ ಸ್ಪಷ್ಟವಾಗುತ್ತದೆ. ಉತ್ತರ ಸಿಗದಿದ್ದರೂ ಶಿಕ್ಷಕರೇ ಹೇಳಬಹುದು ಆಗಂತೂ ಅರ್ಥ ಸ್ಪಷ್ಟತೆ ಖಂಡಿತ ಸಾಧ್ಯವಾದೀತು.)

ವಿಷಯ ಸಂಗ್ರಹ: ಪದಗಳ ವ್ಯಾಖ್ಯೆ ಅಥವಾ ಅರ್ಥ ಬರೆದಿಡೋಣ

ಒಗಟು: ನಾಲ್ಕು ಅಕ್ಷರಗಳ ಪದ ನಾನು.

       ಅವೇ ಅಕ್ಷರಗಳ ಅಷ್ಟಿಷ್ಟು ಬದಲಿಸಿದರೆ

       ಮೂರು ವೈಜ್ಞಾನಿಕ ಪದಗಳ ನೀಡುವೆನು

       ಒಂದು ಭೌತಿಕ ಅಳತೆಯ ಸೂಚಕವು

       ಇನ್ನೊಂದು ವಸ್ತುವಿನ ಚಿಕ್ಕ ಕಣವು

       ಮತ್ತೊಂದು ಕಾರಣವೊಂದರಿಂದ ಉದ್ಭವಿಸುವಂತಹದ್ದು.

ಉತ್ತರ: ಕ್ರಮವಾಗಿ, ಪರಿಮಾಣ, ಪರಮಾಣು ಮತ್ತು ಪರಿಣಾಮ.

ಈ ವಿಧಾನ  ಪ್ರಶ್ನೆಗೆ ಉತ್ತರ ಕಂಠಪಾಠ ಮಾಡಿಸುವುದಕ್ಕೆ ಒಂದು ಪರಿಣಾಮಕಾರಿ ಪರ್ಯಾಯ ವಿಧಾನ ಎನಿಸಬಹುದಲ್ಲವೆ ?

ವಿದ್ಯಾರ್ಥಿಯೇ ರಚಿಸುವಾಗಲೂ ಪೂರ್ಣ ಪರಿಕಲ್ಪನೆಗೆ ಗಮನ ಕೊಡಬೇಕಾಗುವುದರಿಂದ ಕಲಿಕೆ ಉತ್ತಮವಾಗುತ್ತದೆ. ಇದೇ ಬ್ಲಾಗ್‌ ನಲ್ಲಿರುವ ಒಗಟುಗಳ ವಿಭಾಗದಿಂದ ಇನ್ನಷ್ಟು ಉದಾಹರಣೆಗಳನ್ನು ಗಮನಿಸಿ ನೀವೂ ಒಗಟುಗಳನ್ನು ರಚಿಸಿ. ವಿದ್ಯಾರ್ಥಿಗಳಿಗೂ ರಚಿಸುವ ಸ್ಪರ್ಧೆ ಆಯೋಜಿಸಿ. ಇದು ಕನ್ನಡ ಮತ್ತು ವಿಜ್ಞಾನದ ಸಮನ್ವಯ ಕಲಿಕೆಗೆ ಉತ್ತಮ ಪ್ರಯತ್ನವಾದೀತು. ಶುಭವಾಗಲಿ.

 

ವ್ಯಂಗ್ಯಚಿತ್ರ - ಜುಲೈ 2021

 



ರಚನೆ : ವಿಜಯ್‌ಕುಮಾರ್ ಹುತ್ತನಹಳ್ಳಿ


ರಚನೆ : ಶ್ರೀಮತಿ ಜಯಶ್ರೀ ಶರ್ಮ