ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, February 4, 2023

ಸವಿಜ್ಞಾನ ಫೆಬ್ರವರಿ - 2023 ರ ಲೇಖನಗಳು

 

 ಸವಿಜ್ಞಾನ ಫೆಬ್ರವರಿ  - 2023 ರ ಲೇಖನಗಳು

ಸಂಪಾದಕೀಯ ಫೆಬ್ರವರಿ

 ಸಂಪಾದಕರ ಡೈರಿಯಿಂದ ,

ನಾಡಿನ ವಿಜ್ಞಾನ ಶಿಕ್ಷಕರ ಹಾಗೂ ವಿಜ್ಞಾನಾಸಕ್ತರ ಗಮನ ಸೆಳೆದಿರುವ ‘ಸವಿಜ್ಷಾನ’ ಇ – ಮಾಸ ಪತ್ರಿಕೆ ಎರಡು ವರ್ಷ ಪೂರೈಸಿದೆ. ಮೂರನೆಯ ವರ್ಷದ ಎರಡನೆಯ ಸಂಚಿಕೆ ಈಗ ನಿಮ್ಮನ್ನು ತಲುಪಿದೆ.
ಈ ಸಂಚಿಕೆಯ ಪ್ರಮುಖ ಆಕರ್ಷಣೆಯಾಗಿ ಐದು ಲೇಖನಗಳಿವೆ. ಇಂಗ್ಲೆಂಡಿನ ಕುಖ್ಯಾತ ದೊರೆ 3ನೇ ರಿಚರ್ಡ್‍ನ ದುರಂತ   ಮರಣದ ಐದು ಶತಮಾನಗಳ ನಂತರ ಆತನ ಗೋರಿಯನ್ನು ಅಗೆದು, ಅಸ್ಥಿ ಪಂಜರವನ್ನು ಹೊರತೆಗೆದು ಡಿ.ಎನ್.ಎ. ಪರೀಕ್ಷೆ ನಡೆಸಿದ ಕುತೂಹಲಕಾರಿ ಸಂದರ್ಭವನ್ನು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ, ಶಿಕ್ಷಕ ಸುರೇಶ್ ಸಂಕೃತಿ ಅವರು. ‘ಬಡವರ ಬಾದಾಮಿ’  ಎಂದು ಹೆಸರಾಗಿರುವ ಕಡಲೇಕಾಯಿಯ ಸಸ್ಯದ ಸಂತಾನೋತ್ಪತ್ತಿ ವಿಧಾನದ ಬಗ್ಗೆ ತಮ್ಮ ಲೇಖನದಲ್ಲಿ ಬೆಳಕು ಚೆಲ್ಲಿದ್ದಾರೆ, ಶಿಕ್ಷಕ ಬಿ.ಎಸ್. ಶಶಿಕುಮಾರ್ ಅವರು. ಜೀವ ಪ್ರಪಂಚದೊಳಗಿನ ರಹಸ್ಯವನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ, ಶಿಕ್ಷಕ ರಾಮಚಂದ್ರ ಭಟ್ ಅವರು. ಭಾರತೀಯ ಮೂಲದ ಖ್ಯಾತ ಗಣಿತಜ್ಞೆ ಭಾಮಾ ಶ್ರೀನಿವಾಸ್ ಅವರನ್ನು ಪರಿಚಯಿಸುವ ಮೂಲಕ ‘ಸವಿಜ್ಞಾನ ಲೇಖಕರ ಬಳಗವನ್ನು ಸೇರುತ್ತಿದ್ದಾರೆ ಶ್ರೀಮತಿ ಚಂದ್ರಕಲಾ ಅವರು. ಶಿಕ್ಷಕ ಗಜಾನನ ಭಟ್ ಅವರು‌ ತಮ್ಮ ಲೇಖನದಲ್ಲಿ, ಸಮುದ್ರದ ಕುದುರೆ ಹಿಪ್ಪೋಕ್ಯಾಂಪಸ್ ಮೀನಿನಲ್ಲಿ ಗಂಡು ಗರ್ಭಧರಿಸುವ ವಿಶಿಷ್ಠ ವಿದ್ಯಮಾನವನ್ನು ವಿವರಿಸಿದ್ದಾರೆ, ಈ ಸಂಚಿಕೆಯ ಸಾಧಕ ಶಿಕ್ಷಕ ಶ್ರೀ ಧರಮಯ್ಯ ಅವರನ್ನು ಪರಿಚಯಿಸಿದ್ದಾರೆ ಶಿಕ್ಷಕ ಲಕ್ಷ್ಮೀ ಪ್ರಸಾದ್ ನಾಯಕ್.

ಇವೆಲ್ಲದರ ಜೊತೆಗೆ, ಎಂದಿನಂತೆ ಫೆಬ್ರವರಿ ತಿಂಗಳಿನ ಪ್ರಮುಖ ದಿನಾಚರಣೆಗಳ ಬಗ್ಗೆ ಮಾಹಿತಿ, ವಿಜ್ಞಾನಕ್ಕೆ ಸಂಬಂಧಿಸಿದ ನಮ್ಮ ಸ್ಥಿರ ಅಂಕಣಗಳಾದ, ‘ವಿಜ್ಞಾನ ವಿಶೇಷ’, ವಿಜಾÐನಕ್ಕೆ ಸಂಬಂಧಿಸಿದ ಪದಬಂಧ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳು ನಿಮ್ಮನ್ನು ರಂಜಿಸಲಿವೆ. ಸಂಚಿಕೆಯ ಎಲ್ಲ ಲೇಖನಗಳನ್ನು ಹಾಗೂ ಅಂಕಣಗಳನ್ನು ಓದಿ, ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿ. ನಿಮ್ಮ ಸಹೋದ್ಯೋಗಿ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ‘ಸವಿಜ್ಞಾನ’ ಓದುವಂತೆ ಪ್ರೇರೇಪಿಸಿ
                                                                                                                                                                                   ಪ್ರಧಾನ ಸಂಪಾದಕರು 

                                                 ಡಾ. ಬಾಲಕೃಷ್ಣ ಅಡಿಗ




ಜೀವ ಪ್ರಪಂಚದೊಳಗಿನ ರಹಸ್ಯ !

ಜೀವ ಪ್ರಪಂಚದೊಳಗಿನ ರಹಸ್ಯ !

ಲೇಖಕರು : ಬಿ.ಜಿ.ರಾಮಚಂದ್ರ ಭಟ್ 
ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಬ್ಯಾಟರಾಯನಪುರ,
ಮೈಸೂರು ರಸ್ತೆ, ಬೆಂಗಳೂರು

ಜೀವ ಪ್ರಪಂಚ ಹಲವಾರು ಸೋಜಿಗಗಳ, ರಹಸ್ಯಗಳ ಆಗರ. ನಾವು ಅದರ ಬಗ್ಗೆ ತಿಳಿದಿರುವುದು ಬಹಳ ಕಡಿಮೆ. ತಿಳಿಯ ಬೇಕಾದ್ದು ಅಪಾರವಿದೆ. ಅಂಥ ಕೆಲವು ರಹಸ್ಯಗಳನ್ನು ನಿಮ್ಮ ಮುಂದೆ ತೆರೆದಿಟ್ಟು, ನಿಮ್ಮನ್ನು ಆಲೋಚನೆಗೆ ಹಚ್ಚುವ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡಿದ್ದಾರೆ,ʼಸವಿಜ್ಞಾನʼ ತಂಡದ ಶಿಕ್ಷಕ,    ಶ್ರೀ ರಾಮಚಂದ್ರ ಭಟ್‌ ಅವರು. 

ನೆಲದೊಳಗಣ ಬೀಜಾಂಕುರ - “ಮಣ್ಣರಳಿ ಕಾಯಾಗಿ”

 ನೆಲದೊಳಗಣ ಬೀಜಾಂಕುರ - “ಮಣ್ಣರಳಿ ಕಾಯಾಗಿ”  

ಬಡವರ ಬಾದಾಮಿ ಎಂದೇ ಹೆಸರಾದ ಕಡಲೆಕಾಯಿ ಅಬಾಲವೃದ್ಧರಾಗಿ ಎಲ್ಲರಿಗೂ ಅಚ್ಚುಮೆಚ್ಚು. ಇದರ ರುಚಿ ನೋಡದವರೇ ಇಲ್ಲ . ಇಂತಹ ಕಡಲೆಕಾಯಿಯ ಸಂತಾನೋತ್ಪತ್ತಿ ನಿಸರ್ಗದೊಡಲಿನ ಅಚ್ಚರಿಯೇ ಸರಿ. ಮಣ್ಣೇ ಅರಳಿ ಕಾಯಿಯಾಯ್ತೇನೋ ‌ ಎಂಬಂತೆ ನೆಲದೊಳಗೇ  ಬೀಜಾಂಕುರಿಸುವ ನಿಸರ್ಗದ  ಚೋದ್ಯವೊಂದನ್ನು ಸೋದಾಹರಣವಾಗಿ ವಿವರಿಸಿದ್ದಾರೆ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಶ್ರೀ ಶಶಿಕುಮಾರ್‌ ಅವರು.

(ಕಡಲೆ ಕಾಯಿಗಿಡದಲ್ಲಿನ ಸಂತಾನೋತ್ಪತ್ತಿಯ ಸೋಜಿಗದ ಸಂಗತಿ)

ಆಗ ನಾವಿನ್ನೂ ಚಿಕ್ಕವರು. ಅಮ್ಮಾ ಹಸಿವು ಎಂದಾಗ ಕೊಡುತ್ತಿದ್ದ ತಿನಿಸು ಎಂದರೆ ಅದು ಹುರಿದ ಕಡಲೆಕಾಯಿ. ಯಾರಾದರೂ ಅತಿಥಿಗಳು ದಿಢೀರನೆ ಮನೆಗೆ ಬಂದಾಗ ಕಾಫಿಯ ಜೊತೆ ಅವರಿಗೆ ಮೆಲ್ಲಲು ಕೊಡುತ್ತಿದ್ದ ಸುಲಭದ ತಿನಿಸು ಕೂಡ ಕಡಲೆಕಾಯಿಯೇ. ಆಗಿನ ದಿನಗಳಲ್ಲಿ ಕಡಲೆಕಾಯಿ ಎಂದರೆ ಉ‍ಳ್ಳವರಿಂದ ಹಿಡಿದು ಎಲ್ಲರೂ ಏನಾದರೂ ತಿನ್ನಬೇಕು ಅನಿಸಿದಾಗ ಸುಲಭವಾಗಿ ದೊರೆಯುತ್ತಿದ್ದ ತಿನಿಸು ಕಡಲೆಕಾಯಿಯೇ ಆಗಿತ್ತು. ನಿಜ ಕಡಲೇಕಾಯಿ ಎಂದರೆ ಅದು ಬಡವರ ಬಾದಾಮಿ ಎಂದೇ ಕರೆಸಿಕೊಳ್ಳುತ್ತದೆ. ನನಗೆ ತಿಳಿದ ಮಟ್ಟಿಗೆ ಒಣಗಿದ ಬೀಜಗಳ ಪೈಕಿ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡ, ಕಡಿಮೆ ಬೆಲೆಗೆ ದೊರೆಯುವ, ಎಲ್ಲರೂ ಬಳಸಬಹುದಾದ ಆಹಾರವೆಂದರೆ ಅದು ಕಡಲೆಕಾಯಿ.

ಕಡಲೆಬೀಜದಲ್ಲಿನ ಪೋಷಣಾ ಮೌಲ್ಯಗಳು: (ಪ್ರತಿ 100ಗ್ರಾಂ ಕಡಲೆ ಬೀಜಗಳಲ್ಲಿ)

ಪರ್ಯಾಪ್ತ ಕೊಬ್ಬುಗಳು 35%,  

ಅಪರ್ಯಾಪ್ತ ಕೊಬ್ಬುಗಳು 40%, 

ಕೊಲೆಸ್ಟ್ರಾಲ್‌ - 0%

ಸೋಡಿಯಂ-2% 

ಪೊಟ್ಯಾಸಿಯಂ-20%, 

ಮೆಗ್ನೀಸಿಯಂ-42%, 

ಶರ್ಕರ ಪಿಷ್ಟ-5%, 

ಪ್ರೋಟೀನ್‌-52%, 

ಕ್ಯಾಲ್ಸಿಯಂ-9%, 

ಕಬ್ಬಿಣ-25%, 

ವಿಟಮಿನ್‌ ಬಿ6-15%,

ಏನಿದು!! ಕಡಲೆಕಾಯಿ ಇದು ಯಾರಿಗೆ ಗೊತ್ತಿಲ್ಲ? ಅದರ ಬಗ್ಗೆ ಏನೋ ಹೇಳೋದಿಕ್ಕೆ ಹೊರಟಿದ್ದಾರಲ್ಲ ಅಂದ್ಕೊಂಡ್ರಾ?  ಖಂಡಿತ ನಿಜ. ಈಗ ನಾನು ಹೇಳ ಹೊರಟಿರುವುದು ಕಡಲೆಕಾಯಿ ಮತ್ತು ಅದರಲ್ಲಿರುವ ಪೋಷಕಾಂಶಗಳ ಬಗ್ಗೆ ಅಲ್ಲ. ಕಡಲೆಕಾಯಿ ಗಿಡದಲ್ಲಿ ನಡೆಯುವ ಅಚ್ಚರಿಯ ಸಂತಾನೋತ್ಪತ್ತಿ ಮತ್ತು ಅದರ ರಚನೆ ಬಗ್ಗೆ. ನಮಗೆ ಅನ್ನಿಸಬಹುದು ಅದರಲ್ಲೇನಿದೆ ವಿಶೇಷ. ಎಲ್ಲಾ ಗಿಡದಲ್ಲೂ ನಡೆಯುವ ಹಾಗೆ ಇದ್ರಲ್ಲೂ ನಡೆಯುತ್ತೆ ತಾನೇ? ಅಂದುಕೊಳ್ಳುವಿರಲ್ಲ‌ ? ಆದರೆ ಈ ಅಂಕಣ ಓದಿ ಕಡಲೆಕಾಯಿ ಗಿಡದಲ್ಲಿನ ಸಂತಾನೋತ್ಪತ್ತಿಯ ಸೋಜಿಗ ನಿಮಗೆ ತಿಳಿಯುತ್ತದೆ.

ಕಡಲೆಕಾಯಿ ಸಸ್ಯವು ಹೂಬಿಡುವ ಸಸ್ಯಗಳಲ್ಲಿ ಲೆಗ್ಯುಮಿನೋಸೆ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದು ಸಾಮಾನ್ಯವಾಗಿ ಉಷ್ಣವಲಯದ ಉತ್ತಮವಾದ ಬೆಳೆಯೂ ಹೌದು. ಮೂಲತಃ ಇದರ ಮೂಲ ದಕ್ಷಿಣ ಅಮೇರಿಕಾ ಎಂದು ಚರಿತ್ರೆ ಹೇಳುತ್ತದೆ. ಈಗ ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ  ಎಂಬ ಬಿ.ಜಿ.ಎಲ್‌ ಸ್ವಾಮಿಯವರ ಕೃತಿಯ ನೆನಪಾಯಿತೇ?  ಇರಲಿ, ಆದರೆ ಇದನ್ನು ಅತಿ ಹೆಚ್ಚು ಬೆಳೆಯುವ ರಾಷ್ಟ್ರ ಚೀನಾ ದೇಶವಾಗಿದೆ. ದಕ್ಷಿಣ ಅಮೇರಿಕಾಕ್ಕೆ ಯೂರೋಪ್‌ನಿಂದ ಗುಲಾಮರನ್ನು ಕರೆತರುವಾಗ ಅವರ ಜೊತೆಯಲ್ಲಿಯೇ ಇದು ಕೂಡ ಬಂತು ಎಂಬ ಕಥೆಯೂ ಇದೆ. ಇದನ್ನು ನೋಡಿದರೆ ಇದರ ಹುಟ್ಟು ಯೂರೋಪ್‌ನದ್ದಾಗಿರಬೇಕು. ಹುಟ್ಟು ಎಲ್ಲಾದರೂ ಆಗಲಿ, ಇಂದು ಇದು ನಮ್ಮ ದೇಶದಲ್ಲಿ, ಅದರಲ್ಅಲೂ ನಮ್ಮ ಕನ್ನಡ ನಾಡಿನ ಇದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಬರಡು ಪ್ರದೇಶದಲ್ಲಿ ಹಾಗೂ ನೀರಾವರಿ ಇದ್ದವರು ಬೇಸಿಗೆ ಕಾಲದಲ್ಲಿಯೂ ಬಂಪರ್‌ ಬೆಳೆ ತೆಗೆಯುತ್ತಾರೆ. ಈ ಕೆಳಗಿನ ಚಿತ್ರ ಗಮನಿಸಿ. ಇದರ ವ್ಯಾಪಕ ಹರಡಿಕೆ ಅಂದರೆ ಎಲ್ಲೆಲ್ಲಿ ಪ್ರಮುಖವಾಗಿ ಬೆಳೆಯುತ್ತಾರೆ ಎಂದು ತಿಳಿಯಬಹುದು.


ಪರಾಗಸ್ಪರ್ಶ ಮತ್ತು ಸಂತಾನೋತ್ಪತ್ತಿ:

ಇತರೆ ಸಸ್ಯಗಳಂತೆ ಕಡಲೆಕಾಯಿ ಸಸ್ಯಗಳು ಪರಾಗಸ್ಪರ್ಶಕ್ಕಾಗಿ ಕೀಟಗಳನ್ನು ಅವಲಂಬಿಸಿಲ್ಲ. ಅಂದರೆ ಪರಾಗವನ್ನು ಒಂದು ಸಸ್ಯದಿಂದ ಇನ್ನೊಂದಕ್ಕೆ ಸಾಗಿಸುವ ಜೇನುನೊಣಗಳು ಅಥವಾ ಇತರ ಕೀಟಗಳಂತಹ ಹೊರಗಿನ ಸಹಾಯದ ಅಗತ್ಯವನ್ನು ಅವಲಂಬಿಸಿಲ್ಲ.  ಇವು ಸ್ವಕೀಯ ಪರಾಗಸ್ಪರ್ಶ ನಡೆಸುವ ಸ್ವಾವಲಂಬಿ ಸಸ್ಯಗಳಾಗಿವೆ!!

ಬೀಜವನ್ನು ನೆಟ್ಟ ನಂತರ, ಮೊದಲ ಹೂವುಗಳು ನಾಲ್ಕರಿಂದ ಆರು ವಾರಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಮತ್ತು ಆರು ಅಥವಾ ಅದಕ್ಕಿಂತ ಹೆಚ್ಚು ವಾರಗಳವರೆಗೆ ಆ ಹೂಗಳು ಅರಳಿರುತ್ತವೆ.

ಸಾಮಾನ್ಯವಾಗಿ ಸಸ್ಯವನ್ನು ಗಮನಿಸಿದಾಗ ನಮಗೆ ಕಾಣುವುದು ಕೇವಲ ಐದರಿಂದ ಹತ್ತು ಹೂಗಳು ಮಾತ್ರ. ಆದರೆ ವಾಸ್ತವಾವಾಗಿ ಒಂದು ಗಿಡದಲ್ಲಿ ಐವತ್ತಕ್ಕೂ ಹೆಚ್ಚಿನ ಹೂಗಳು ಇರುತ್ತವೆ. ಈ ಎಲ್ಲಾ ಹೂಗಳು ಅರಳುವುದಿಲ್ಲ. ಮೊದಲ ಹಂತದಲ್ಲಿ ಕಾಣಿಸಿಕೊಂಡ ಹೂಗಳು ಸೂರ್ಯೋದಯದ ಸಮಯದಲ್ಲಿ ಅರಳುತ್ತವೆ. ನಂತರ ಉಗಮಿಸಿದ ಹೂಗಳು ಅರಳುವುದಿಲ್ಲ. ಕಾರಣ ಈಗಾಗಲೇ ಮೊದಲ ಹಂತದ ಹೂಗಳಲ್ಲಿ ಪರಾಗಸ್ಪರ್ಶಕ್ರಿಯೆ ನಡೆದು, ಫಲೀಕರಣ (ಫರ್ಟಿಲೈಸೇಶನ್‌) ನಡೆದಿರುತ್ತದೆ. ಸಸ್ಯದ ಜೀವಿತಾವಧಿ ಮುಗಿಯುತ್ತಾ ಬಂದಿರುತ್ತದೆ. ಆದ ಕಾರಣ ನಂತರದಲ್ಲಿ ಉಗಮಿಸಿದ ಹೂಗಳು ಅರಳದೇ ಸ್ವಕೀಯ ಪರಾಗಸ್ಪರ್ಶ ನಡೆದು, ಗರ್ಭಧಾರಣೆ ನಡೆಯುತ್ತದೆ. ಹಾಗಾಗಿಯೇ ನಾವು ಕಡಲೆಕಾಯಿ ಗಿಡವನ್ನು ಕಿತ್ತಾಗ ಒಂದು ಸುತ್ತಿನ ಕಾಯಿಗಳು ಬಲಿತವುಗಳಾಗಿರುತ್ತವೆ ಮತ್ತು ನಂತರದಲ್ಲಿ ಸಂತಾನೋತ್ಪತ್ತಿಯಾದ ಕಾಯಿಗಳು ಬಲಿಯಲು ಪ್ರಾರಂಭಿಸಿರುತ್ತವೆ. ಅದಕ್ಕೂ ತದನಂತರದವುಗಳು ಕೇವಲ ಬುಡ್ಡಾಗಿ (ಇಮ್ಮೇಚುರ್‌ ಪಾಡ್‌ಗಳು) ಉಳಿದುಬಿಡುತ್ತವೆ. 

ಈಗ ನಾವು ಕಡಲೆಕಾಯಿ ಸಸ್ಯದಲ್ಲಿ ಭೂಮಿಯ ಒಳಗೆ ಕಾಯಿ ಹೇಗೆ ಬರುತ್ತದೆ? ಎಂದು ತಿಳಿದುಕೊಳ್ಳೋಣ.  ನಿಜಕ್ಕೂ ಯಾವುದೇ ಸಸ್ಯದಲ್ಲಿ ಇಲ್ಲದ ಅಚ್ಚರಿ ಈ ಸಸ್ಯದಲ್ಲಿ ನಡೆಯುತ್ತದೆ.

ಪ್ರತಿ ಹೂವು ಬೆಳೆದು ಪಕ್ವವಾದಾಗ ಅರಳುತ್ತದೆ. ಅರಳಿದ ಹೂ, ಒಂದು ದಿನ ಅಥವಾ ಮೂರ್ನಾಲ್ಕು ದಿನ ಹಾಗೇಯೇ ಇರುತ್ತದೆ. ಈ ಸಂದರ್ಭದಲ್ಲಿ ಪರಾಗವನ್ನು ಬಿಡುಗಡೆ ಮಾಡಿ, ಪರಾಗರೇಣುಗಳು ಶಲಾಕಾಗ್ರದ ಮೇಲೆ ಬಿದ್ದು, ಎಂಟು ಅಥವಾ ಒಂಬತ್ತು ಗಂಟೆಗಳ ನಡುವೆ ಗರ್ಭಧಾರಣೆ ನಡೆಯುತ್ತದೆ. ಫಲೀಕರಣವು ಸಂಭವಿಸಿದ ಎಂಟರಿಂದ ಹದಿನಾಲ್ಕು ದಿನಗಳ ನಂತರ, ಅಂಡಾಶಯವು  ನೀಳವಾಗುತ್ತದೆ.  ಇದು  ಲಂಬವಾಗಿ ನೆಲಕ್ಕೆ ತಾಗಿ, ಅಡ್ಡಲಾಗಿ ತಿರುಗುತ್ತದೆ. ನೆಲದಡಿಯಲ್ಲಿ, ಸಮತಲವಾದ ಪೆಗ್, ಪಾಡ್ ಆಗಿ ಪಕ್ವಗೊಳ್ಳುತ್ತದೆ ಮತ್ತು ಏಳರಿಂದ ಒಂಬತ್ತು ವಾರಗಳ ನಂತರ ನಾವೆಲ್ಲರೂ ಗುರುತಿಸುವ ಕಡಲೆಕಾಯಿಯಾಗುತ್ತದೆ. 

ನಂತರದಲ್ಲಿ ಉಗಮಿಸಿದ ಹೂಗಳಲ್ಲಿ ಅರಳುವ ಮುನ್ನವೇ ಪರಾಗಸ್ಪರ್ಶ ನಡೆದು ಗರ್ಭಧಾರಣೆಗಾಗಿ  ನೆಲದಲ್ಲಿ ಹುದುಗಿರುವ ಅಂಡಾಶಯವನ್ನು ತಲುಪಲು ಇಂಟರ್‌ಕ್ಯಾಲರಿ ಮೆರಿಸ್ಟೆಮ್‌ನ ಸಹಾಯದಿಂದ ನೀಳವಾದ ಗೈನೋಪೋರ್‌ ಎಂಬ ರಚನೆಯನ್ನು ಹೊಂದುತ್ತವೆ. 

ಇವು ಗುರುತ್ವಾನುವರ್ತನೆಯ ಪ್ರಚೋದನೆಗೆ ಒಳಗಾಗಿ, ನೆಲಕ್ಕೆ ತಾಗಿ ಅಂಡಾಶಯವನ್ನು ತಲುಪಿ, ಬೀಜೋತ್ಪಾದನೆಗೆ ಸಹಾಯ ಮಾಡುತ್ತವೆ. ಹೂಗಳು ಎಲ್ಲೆಲ್ಲಿ ಕಂಡುಬರುತ್ತವೆಯೋ ಅಲ್ಲೆಲ್ಲಾ ಪೆಗ್‌ಗಳೆಂಬ ರಚನೆ ಉಂಟಾಗಿ ಮೇಲೆ ತಿಳಿಸಿದಂತಹ ಪ್ರಕ್ರಿಯೆ ನಡೆಯುತ್ತದೆ. ಹಾಗಾಗಿಯೇ ನಾವು ಕಡಲೆಕಾಯಿ ಗಿಡವನ್ನು ಕಿತ್ತಾಗ ಗಿಡದ ತುಂಬಾ ನೇತು ಬಿದ್ದಿರುವ ಪೆಗ್‌ಗಳು ಮತ್ತು ಕಾಯಿಗಳೆಂಬ ಪಾಡ್‌ಗಳನ್ನು ನಾವು ನೋಡಬಹುದು. ಇವೆಲ್ಲಾ ಪ್ರಕ್ರಿಯೆಗಳು ಸುಲಭವಾಗಿ ನಡೆಯುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಹಾರ್ಮೋನ್‌ಗಳ ಪಾತ್ರವೂ ಪ್ರಮುಖವಾಗಿದೆ. 

ನೋಡಿದಿರಾ, ಇಂತಹ ಸೋಜಿಗದ ಸಂತಾನೋತ್ಪತ್ತಿ ನಾವು ಬೇರೆ ಯಾವ ಸಸ್ಯದಲ್ಲೂ ಕಾಣಲು ಸಾಧ್ಯವಿಲ್ಲ. ಸಸ್ಯದ ಮೇಲ್ಭಾಗದಲ್ಲಿ ಹೂ ಬಿಟ್ಟು, ನೆಲದ ಕೆಳಗೆ ಬೀಜ ಉತ್ಪತ್ತಿ ಮಾಡಲು ಎಂತಹ ಸೋಜಿಗದ ಸಂಗತಿ ಈ ಸಸ್ಯದಲ್ಲಿದೆ. ಇಷ್ಟೊಂದು ಕಷ್ಟಪಟ್ಟು ಸಂತಾನೋತ್ಪತ್ತಿ ಮಾಡುವ ಈ ಸಸ್ಯದ ಬೀಜಗಳನ್ನು ಎಷ್ಟು ಗ್ಗವಾಗಿ ಸುಲಭವಾಗಿ ತಿಂದು ಬಿಡುತ್ತೇವೆ. ನಿಜಕ್ಕೂ ಇದು ಬಡವರ ಬಾದಾಮಿಯಲ್ಲ.. ಸಸ್ಯ ಸಾಮ್ರಾಜ್ಯದ ವಜ್ರವೆಂದರೂ ತಪ್ಪಾಗಲಾರದು..

ವರ್ಗೀಕರಣದ ಅಡಿಯಲ್ಲಿ ವಿವರಿಸಿದಂತೆ ಈ ಭೂಗತ ಪಕ್ವವಾಗುವಿಕೆಗಾಗಿ ಕಡಲೆಕಾಯಿಗೆ ಅದರ ವೈಜ್ಞಾನಿಕ ಹೆಸರನ್ನು (Arachis hypogea) ನೀಡಲಾಗಿದೆ.

(hypo ಎಂದರೆ ಕೆಳಗೆ, gea- ಎಂದರೆ ನೆಲ ಅಥವಾ ಭೂಮಿ)

(ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್‌ಗಳನ್ನು ಬಳಸಿ. . . .)

References:

https://www.ijcmas.com/7-9-2018/N.%20Vinothini,%20et%20al.pdf

https://www.iosrjournals.org/iosr-javs/papers/vol7-issue4/Version-/H07434449.pdf 

https://core.ac.uk/download/pdf/42989611.pdf

https://www.youtube.com/watch?v=jvxWO-WsM_Q

2.     


Narrated by: 

SHASHIKUMAR B.S. 9900276979.

GHS, YELEKYATHANAHALLI,

NELAMANGALA TQ.

BENGALURUR RURAL DIST-562111

ದೊರೆ ಮೂರನೆಯ ರಿಚರ್ಡನೂ ಮತ್ತು ಮೈಟೋಕಾಂಡ್ರಿಯಲ್ ಜೀನೂ!!!

ದೊರೆ ಮೂರನೆಯ ರಿಚರ್ಡನೂ  ಮತ್ತು   ಮೈಟೋಕಾಂಡ್ರಿಯಲ್  ಜೀನೂ!!!

ಬದುಕಿದ್ದಾಗ ವಿವಾದಿತ ವ್ಯಕ್ತಿಯಾಗಿದ್ದ ಇಂಗ್ಲೆಂಡಿನ ದೊರೆ 3ನೇ ರಿಚರ್ಡ್ ಸತ್ತ ಐದಕ್ಕೂ ಹೆಚ್ಚು ಶತಮಾನಗಳ ನಂತರ ಆಕಸ್ಮಿಕವಾಗಿ ಸಿಕ್ಕ ಆತನ ಅಸ್ಥಿ ಪಂಜರವನ್ನು ಹೊರತೆಗೆದು ಡಿಎನ್‌ಎ ಪರೀಕ್ಷೆಯ ಮೂಲಕ ಅದನ್ನು ನಿಖರವಾಗಿ ಗುರುತಿಸಿ, ಮತ್ತೆ ಸಮಾಧಿ ಮಾಡಿ ಗೌರವ ಸಲ್ಲಿಸಿದ ಕುತೂಹಲಕಾರಿ ಕಥೆಯನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ಮೂಲಕ ಡಿಎನ್‌ಎ ಪರೀಕ್ಷಯ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ ಈ ಲೇಖನದಲ್ಲಿ ಶಿಕ್ಷಕ ಸುರೇಶ್ ಸಂಕೃತಿ ಅವರು.

   

ಇಂಗ್ಲೆಂಡಿನ‌ ದೊರೆ 3ನೇ ರಿಚರ್ಡ್ (ಕ್ರಿ.ಶ.14521485) ಬದುಕಿದ್ದಾಗ ಮಾತ್ರವಲ್ಲ, ಮರಣದ ನಂತರವೂ, ಇಂದಿಗೂ ಅತ್ಯಂತ ಪ್ರಸಿದ್ಧ ಮತ್ತು ವಿವಾದಿತ ವ್ಯಕ್ತಿ. ಷೇಕ್ಸಪಿಯರ್ ರಚಿಸಿದ ಅದೇ ಹೆಸರಿನ ದುರಂತ ನಾಟಕದ ಕುಖ್ಯಾತ ಖಳ ಮತ್ತು ದುರಂತ ನಾಯಕ. ಈ ನಾಟಕದಲ್ಲಿ 3ನೇ ರಿಚರ್ಡ್ನದು ಗೂನು ಬೆನ್ನಿನ, ವಿಕೃತ ರೂಪದ ಕ್ರೌರ್ಯ ಮತ್ತು ಕುತಂತ್ರ ಬುದ್ಧಿಯ ವಿಲಕ್ಷಣ ಪಾತ್ರ.. ತನ್ನ ಒಡ ಹುಟ್ಟಿದ ಅಣ್ಣ, 4ನೇ ಎಡ್ವರ್ಡನ ನಂತರ ಸಿಂಹಾಸನಕ್ಕೆ ಅರ್ಹನೆನಿಸಿದ್ದ ಅವನ ಅಣ್ಣನ ಮಗ 5ನೇ ಎಡ್ವರ್ಡನನ್ನು ಅನರ್ಹನೆಂದು ಘೋಷಿಸಿ ತಾನೇ ಸಿಂಹಾಸನವೇರುತ್ತಾನೆ. ನಂತರದ ಕೆಲ ದಿನಗಳಲ್ಲಿಯೇ ಬಾಲಕ 5ನೇ ಎಡ್ವರ್ಡನನ್ನು ಮತ್ತು ಅವನ ತಮ್ಮನನ್ನು ಗುಟ್ಟಾಗಿ ಕೊಲ್ಲಿಸಿ ಬಿಡುತ್ತಾನೆ. ತನ್ನ ವಕ್ರಬುದ್ಧಿಯಿಂದ ಹಲವಾರು ಎಡವಟ್ಟುಗಳನ್ನು ಮಾಡುತ್ತಾ ಪಟ್ಟವೇರಿದ ಎರಡೇ ವರ್ಷಗಳಲ್ಲಿ ರೋಸಸ್ ಕೊನೆಯ ಯುದ್ದದಲಿ ಕೊಲೆಯಾಗುತ್ತಾನೆ. ಇದಕ್ಕೆ ಹಿಂದಿನ ರಾತ್ರಿ, ಯುದ್ದದ ಬಿಡಾರದಲ್ಲಿ ಅವನು ಕಾಣುವ ಕನಸುಗಳು, ಹಳವಂಡಗಳು ಅತ್ಯಂತ ಭೀಕರವಾಗಿರುತ್ತವೆ. ಯುದ್ದ ಮಾಡುತ್ತಾ ತಾನು ಸವಾರಿ ಮಾಡುತ್ತಿದ ್ದಕುದುರೆಯನ್ನು ಕಳೆದುಕೊಂಡು ಅಸಹಾಯಕನಾದ ಕೊನೆ ಘಳಿಗೆಯಲ್ಲಿ, "ಕುದುರೆಗಾಗಿ ಈ ನನ್ನ ರಾಜ್ಯ, ಒಂದು ಕುದುರೆಗಾಗಿ ಈ ನನ್ನ ರಾಜ್ಯ" ಎಂದು ಅವನಾಡುವ ಮಾತು ಷೇಕ್ಸಪಿಯರ್ ಬರೆದ ಸಂಭಾಷಣೆಗಳಲ್ಲಿ ಹೆಚ್ಚು ಪ್ರಸಿದ್ಧ ಹಾಗೂ ರಾಜಕೀಯಕ್ಕೆ ಯಾವಾಗಲೂ ಅನ್ವಯಿಸುವ ಒಂದು ಹೇಳಿಕೆ. ಈ ನಾಟಕ ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದವಾಗಿದೆ, ಅನೇಕಾನೇಕ ರಂಗ ಪ್ರದರ್ಶನಗಳನ್ನು ಈ ನಾಟಕ ಕಂಡಿದೆ. 3ನೇ ರಿಚರ್ಡನ ಪಾತ್ರವನ್ನು ಷೇಕ್ಸ್ಪಿಯರ್‌ಎಷ್ಟು ಪ್ರಭಾವಶಾಲಿಯಾಗಿ ಸೃಷ್ಟಿಸಿದ್ದಾನೆ ಎಂದರೆ, ತಮ್ಮ ಜೀವಿತಾವಧಿಯಲ್ಲಿ ರಂಗದ ಮೇಲೆ ಒಮ್ಮೆಯಾದರೂ ಈ ಪಾತ್ರವನ್ನುಅಭಿನಯಿಸಬೇಕೆಂಬ ಅಭಿಲಾಷೆಯು ರಂಗಕಲಾವಿದರನ್ನು, ದೇಶ-ಭಾಷೆಯನ್ನು ಮೀರಿ, ಕಾಡದೇ ಇರುವುದಿಲ್ಲ. ಷೇಕ್ಸಪಿಯರನ ಹಲವಾರು ನಾಟಕಗಳನ್ನು ಬೆಳ್ಳಿ ತೆರೆಗೆ ಅಳವಡಿಸಲಾಗಿದ್ದು, ಅವುಗಳಲ್ಲಿ ನಾಯಕನ ಪಾತ್ರದಲ್ಲಿ ಅಭಿನಯಿಸಿರುವ ಸುಪ್ರಸಿದ್ಧ ಬ್ರಿಟಿಷ್ ನಟ ಮತ್ತು ನಿರ್ದೇಶಕ ಲಾರೆನ್ಸ ಒಲಿವಿಯರ್, ಈ ನಾಟಕವನ್ನೂ ಚಲನಚಿತ್ರವಾಗಿ ನಿರ್ದೇಶಿಸಿದ. ಜೊತೆಗೆ, ತಾನೇ 3ನೇ ರಿಚರ್ಡನ ಪಾತ್ರವನ್ನು ಅತ್ಯಂತ ಅದ್ಭುತವಾಗಿ ನಿರ್ವಹಿಸಿದ್ದು ಚಲನಚಿತ್ರ ಜಗತ್ತಿನ ಒಂದು ಇತಿಹಾಸ..

 

ಚಿತ್ರ ಕೃಪೆ ಲೆಸ್ಟರ್ ವಿಶ್ವವಿದ್ಯಾಲಯ

https://www.youtube.com/watch?v=-5JF9Gq5tL4 

https://www.youtube.com/watch?v=hNJPpGnHp3w 

ಘೋರಅನ್ಯಾಯ 

ಬಿಳಿ ಗುಲಾಬಿಯನ್ನು ರಾಜಲಾಂಛನವಾಗಿ ಹೊಂದಿದ್ದ ಯಾರ್ಕ್ ಕುಟುಂಬ ಮತ್ತು ಕೆಂಪು ಗುಲಾಬಿಯನ್ನು ರಾಜಲಾಂಛನವಾಗಿ ಹೊಂದಿದ್ದ ಲೆಸ್ಟರ್ ಕುಟುಂಬಗಳ ನಡುವಿನ ದಾಯಾದಿ ಕಲಹದಲ್ಲಿ ಇಂಗ್ಲೆಂಡ್ ಮುಳುಗಿಹೋಗಿದ್ದ ಕಾಲವದು. ಈ ಕಲಹವು ಇಂಗ್ಲೆಂಡಿನಲ್ಲಿ ರಕ್ತಪಾತಕ್ಕೆ ಕಾರಣವಾಗಿತ್ತು. ರೋಸಸ್ ವಾರ್ ಎಂದು ಈಚೀಚೆಗೆ ಕರೆಯಲಾಗುತ್ತಿರುವ ಇಂತಹ ಯುದ್ದವೊಂದರಲ್ಲಿ ಯಾರ್ಕ್ ಪರ ಹೋರಾಡುತ್ತಲೇ ಶತೃಗಳ ಕೈಯಲ್ಲಿ ಅತ್ಯಂತ ಬರ್ಬರವಾಗಿ ಹತನಾಗಿ ಹೋದ 3ನೇ ರಿಚರ್ಡ್, ಯುದ್ದದಲ್ಲಿ ಮಡಿದ ಇಂಗ್ಲೆಂಡಿನ ಕೊನೆಯ ದೊರೆ ಎಂದೂ ಸಹ ದಾಖಲೆಗೆ ಸೇರುತ್ತಾನೆ. ಲೀಸ್ಟರ್ ನಗರದ ಪಶ್ಚಿಮಕ್ಕೆ ಇರುವ ಬೋಶ್ವರ್ತನಲ್ಲಿ ನಡೆದ ಯುದ್ದದಲ್ಲಿ ಆಗಸ್ಟ್‌ 22, 1485ರಲ್ಲಿ ಮಡಿದಾಗ ಅವನ ವಯಸ್ಸು ಕೇವಲ 32ವರ್ಷಗಳು. ಇದರೊಂದಿಗೆ 300 ವರ್ಷಗಳು ಇಂಗ್ಲೆಂಡನ್ನು ಆಳಿದ ಪ್ಲಾಂಟಿಜೆನಟ್ ವಂಶದ ಆಳ್ವಿಕೆ ಕೊನೆಗೊಂಡು, ದೊರೆ 7ನೇ ಹೆನ್ರಿ ಪಟ್ಟವೇರುವುದರೊಂದಿಗೆ ಟೂಡರ್ ವಂಶದ ಆಳ್ವಿಕೆ ಆರಂಭಗೊಳ್ಳುತ್ತದೆ. ಯುದ್ದದಲ್ಲಿ ಮಡಿದ 3ನೇ ರಿಚರ್ಡ್‌ನ ದೇಹವನ್ನು ಸೂಕ್ತ ಗೌರವ ಸಲ್ಲಿಸದಯೇ, ಯಾವುದೇ ಅರ್ಹ ಕರ್ಮಗಳನ್ನು ನೆರೆವೇರಿಸದೇ, ಲೀಸ್ಟರ್‌ನ ಒಂದು ಹಳೆಯ ಚರ್ಚಿನಲ್ಲಿ ಯಾವುದೇ ಗುರುತು ಸಿಗದಂತೆ ಹೂತು ಹಾಕಲಾಗುತ್ತದೆ. ನಂತರದ ವರ್ಷಗಳಲ್ಲಿ ದೊರೆ 7ನೇ ಹೆನ್ರಿಯ ಆದೇಶದ ಮೇರೆಗೆ ಈ ಕಟ್ಟಡ ಸಮುಚ್ಚಯವನ್ನು ಗುರುತು ಸಿಗದಂತೆ ನೆಲಸಮಗೊಳಿಸಲಾಗುತ್ತದೆ. ಇದಾದ ನಂತರ, ಐದೂ ಕಾಲು ಶತಮಾನಗಳಿಗೂ ಮೀರಿದ ಕಾಲಾವಧಿಯಲ್ಲಿ 3ನೇ ರಿಚರ್ಡ್‌ನ ಗೋರಿಯ ಕಾಲನ ಸುಳಿಗೆ ಸಿಕ್ಕು ಪ್ರಾಮುಖ್ಯತೆ ಕಳೆದು ಕೊಳ್ಳುತ್ತದೆ. ನಿಧಾನವಾಗಿ ಜನಮಾನಸದಿಂದ ಮರೆಯಾಗುತ್ತದೆ. ಈ ನಡುವೆ ಲೆಸ್ಟರ್ ನಗರವು ಸಾಕಷ್ಟು ಬದಲಾವಣೆಗಳನ್ನು ಕಾಣುತ್ತದೆ. ಸುಮಾರು ವರ್ಷಗಳಿಂದ ಮರೆಯಾಗಿ ಹೋಗಿದ್ದ 3ನೇ ರಿಚರ್ಡ್‌ನ ಕುರುಹುಗಳನ್ನು ಅವನ ಅಭಿಮಾನಿಗಳು ಪತ್ತೆ ಹಚ್ಚುವಲ್ಲಿ ನಿರಂತರವಾಗಿ ತೊಡಗಿರುತ್ತಾರೆ. 3ನೇ ರಿಚರ್ಡ್‌ನನ್ನು ಒಬ್ಬ ಖಳನಾಗಿ ಚಿತ್ರಿಸಿರುವುದು ಒಂದು ಕಟ್ಟುಕಥೆ. ಇಂತಹ ಕಥೆಗಳ ಮೂಲಕ ಜನಜನಿತವಾಗಿರುವ ಅಭಿಪ್ರಾಯಗಳಿಗೆ ಪುಷ್ಟಿ ನೀಡುವ ದಾಖಲಾತಿಗಳು ಇಲ್ಲ. ಇತಿಹಾಸದಲ್ಲಿ 3ನೇ ರಿಚರ್ಡ್‌ನ ವ್ಯಕ್ತಿತ್ವವನ್ನು ಚಿತ್ರಿಸಿರುವುದು ಸರಿಯಿಲ್ಲ. ಅವನ ಉತ್ತಮ ಗುಣಗಳನ್ನು ದುರುದ್ಧೇಶ ಪೂರ್ವಕವಾಗಿ ಮರೆಮಾಚಲಾಗಿದೆ. ವಿಲಿಯಂ ಷೇಕ್ಷಪಿಯರನು ಟೂಡರ್ ದೊರೆಗಳ ಪೋಷಣೆಯಲ್ಲಿ ಇದ್ದುದ್ದರಿಂದ ಅವರ ಒಲುಮೆ ಗಳಿಸಲೆಂದೇ 3ನೇ ರಿಚರ್ಡನನ್ನು ಅತ್ಯಂತ ಕೆಟ್ಟ ಖಳನನ್ನಾಗಿ ಚಿತ್ರಿಸಿದ್ದಾನೆ. ಇತಿಹಾಸಕಾರರೂ ಸಹ ಇದೇ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಇದು 3ನೇ ರಿಚರ್ಡನ ಅಭಿಮಾನಿಗಳ ಅಳಲು. ಇತಿಹಾಸದಲ್ಲಿ ಆತನಿಗೆ ಸಲ್ಲಬೇಕಾದ ಸೂಕ್ತವಾದ ಸ್ಥಾನಮಾನಗಳನ್ನು ದೊರಕಿಸಿಕೊಡಬೇಕಿದೆ. ಅವನಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಅದರ ವಸ್ತುನಿಷ್ಟ ಅಧ್ಯಯನವನ್ನು ಮಾಡಬೇಕಿದೆ. ಈ ಉದ್ಧೇಶಗಳನ್ನು ಇರಿಸಿಕೊಂಡು 3ನೇ ರಿಚರ್ಡ್ ಸೊಸೈಟಿಯನ್ನು 1924ರಷ್ಟು ಹಿಂದೆಯೇ ಸ್ಥಾಪಿಸಲಾಗಿದೆ.

ಲೀಸ್ಟರ್ ನಗರದ ವಿನ್ಯಾಸದಲ್ಲಿ ಆದ ಬದಲಾವಣೆಗಳ ಇತಿಹಾಸ ಮತ್ತು ಅದಕ್ಕೆ ಸಂಬಂಧಿಸಿ ನಕ್ಷೆಗಳು ಹಾಗೂ ಇತರೆ ದಾಖಲೆಗಳ ಅಧ್ಯಯನದಲ್ಲಿ ಈ ಸೊಸೈಟಿಯ ಸದಸ್ಯರು ನಿರಂತರ ತೊಡಗಿದ್ದರು. ಲೀಸ್ಟರ್ ವಿಶ್ವವಿದ್ಯಾಲಯದ ಪ್ರಾಚ್ಯಶಾಸ್ತ್ರ ವಿಭಾಗ, ಲೀಸ್ಟರ್ ನಗರ ಸಭೆ ಮತ್ತು 3ನೇ ರಿಚರ್ಡ್ ಸೊಸೈಟಿ, ಇವುಗಳ ಶ್ರಮ ಮತ್ತು ಸಹಯೋಗದ ಫಲಿತಾಂಶವಾಗಿ 2012ರ ಸೆಪ್ಟೆಂಬರ್ ತಿಂಗಳಿನಲ್ಲಿ ಲೀಸ್ಟರಿನ ಒಂದು ಕಾರು ಪರ‍್ಕಿಂಗ್ ತಾಣದ ಸಿಮೆಂಟ್ ಕಾಂಕ್ರಿಟ್ಟನ್ನು ಬಗೆದು ನೆಲವನ್ನು ಅಗೆದಾಗ ಅಲ್ಲಿ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ ಚರ್ಚಿನ ಕಟ್ಟಡದ ಗೋಡೆಯ ಮತ್ತು ನೆಲಹಾಸಿನ ಕುರುಹುಗಳು ದೊರೆತವು. ನೆಲಹಾಸಿನ ಒಂದು ಕಡೆ ಅಗೆದಾಗ ಕಂಡು ಬಂದ ಮೊದಲ ಗೋರಿ ಪ್ರಾಚ್ಯಶಾಸ್ತ್ರಜ್ಞರ ಗಮನ ಸೆಳೆಯಿತು. ಶವಪೆಟ್ಟಿಗೆಯಾಗಲಿ, ಶವವಸ್ತ್ರವಾಗಲಿ ಇಲ್ಲದೆಯೇ ಬೆತ್ತಲಾಗಿಯೇ ಮಣ್ಣು ಮಾಡಲಾಗಿದ್ದ ಶವದ ಅಸ್ಥಿಪಂಜರವೊಂದು ದೊರೆತಿತ್ತು. ದೊರೆತ ಅಸ್ಥಿಪಂಜರ, ಒಬ್ಬ ಸಾಮಾನ್ಯನ ಶವದಂತೆ ಮಣ್ಣು ಮಾಡಿಲಾಗಿದ್ದು, ಅದರ ಬೆನ್ನುಹುರಿ ಬಾಗಿದ್ದು ಕಂಡು ಬಂದಿತು. ಇತಿಹಾಸದ ದಾಖಲೆಗಳಲ್ಲಿ ವರ್ಣಿಸುವ ಗೂನು ಬೆನ್ನಿನ ರಿಚರ್ಡನದೇ ಅದು ಎಂದು ಮೇಲು ನೋಟಕ್ಕೆ ತೋರುತಿತ್ತು. ಅದು ನಿಜವಾಗಿಯೂ 3ನೇ ರಿಚರ್ಡನಿಗೆ ಸಂಬಂಧಿಸಿದ್ದು ಎಂದು ಸಿದ್ಧಮಾಡಿ ತೋರಿಸಲು ಸಂಶೋಧಕರು ಅದನ್ನು ಸಿ.ಟಿ. ಸ್ಕಾನ್, ಡಿಎನ್ಎ ವಿಶ್ಲೇಷಣೆ, ಅಸ್ಥಿಪಂಜರದ ವಿಶ್ಲೇಷಣೆ, ಮತ್ತಿತರ ಆಧುನಿಕ ಫೋರೆನ್ಸಿಕ್ ತಂತ್ರ ಬಳಸಿ ಫೇಸ್ ರಿಕನ್ಸಟ್ರಕ್ಷನ್, ಕಾರ್ಬನ್ ಡೇಟಿಂಗ್ ಮುಂತಾದ ವೈಜ್ಞಾನಿಕ ವಿಧಿವಿಧಾನಗಳನ್ನು ನಡೆಸಿ ತೀರ್ಮಾನ ಮಾಡಬೇಕಿದ್ದಿತು.

ಮಾತನಾಡಿದ ಅಸ್ತಿಪಂಜರ!!!

ಮೊದಲಿಗೆ ಅಸ್ಥಿಪಂಜರದ ಎಡ ಕೆಳ ದವಡೆಯ ಹಲ್ಲೊಂದನ್ನು ತೆಗೆದು ಡಿಎನ್ಎ ವಿಶ್ಲೇಷಣೆಗೆ ರವಾನಿಸಲಾಯಿತು. ನಂತರ ಸಿ.ಟಿ ಸ್ಕಾನ್ ಮಾಡಲಾಯಿತು. ಅದಾದ ನಂತರ ಅಸ್ಥಿಪಂಜರವನ್ನು ಸ್ವಚ್ಚಗೊಳಿಸಿ ತಜ್ಞವೈದ್ಯರ ಪರೀಕ್ಷೆಗೆ ನೀಡಲಾಯಿತು. ಪಾದಗಳ ಭಾಗ ನಾಪತ್ತೆಯಾಗಿದ್ದಿದ್ದು ಬಿಟ್ಟರೆ, ಅದು ಒಳ್ಳೆಯ ಸ್ಥಿತಿಯಲ್ಲಿತ್ತು. ಅದರ ಮೇಲೆ ಹತ್ತು ಕಡೆ ಗಂಭೀರ ಗಾಯಗಳ ಗುರುತುಗಳನ್ನು ತಜ್ಞರು ವಿಶ್ಲೇಷಣೆ ಮಾಡಿದರು. ಅತ್ಯಂತ ಚೂಪಾದ ಆಯುಧಗಳಿಂದಾದ ಒಟ್ಟು ಎಂಟು ಮಾರಣಾಂತಿಕ ಗಾಯಗಳ ಕುರುಹುಗಳನ್ನು ಅವರು ತಲೆಯ ಬುರುಡೆಯೊಂದರಲ್ಲೇ ಗುರ್ತಿಸಿದರು. ತಲೆ ಹಿಂಭಾಗಕ್ಕೆ ಚೂಪಾದ ಕತ್ತಿ ಅಥವಾ ಕೊಡಲಿಯಂಥ ಆಯುಧದಿಂದ ಬಿದ್ದ ಹೊಡೆತವು ಅಂಗೈ ಅಗಲದಷ್ಟು ತಲೆಚಿಪ್ಪನ್ನು ಹೋಳು ಮಾಡಿ ಹಾರಿಸಿಬಿಟ್ಟಿತ್ತು. ಈ ಹೊಡೆತದಿಂದ ಮೆದುಳಿಗೆ ಅದ ಘಾಸಿಯು ಮಾರಣಾಂತಿಕವಾಗಿ ಪರಿಣಮಿಸಿತ್ತು. ಅತ್ಯಂತ ಭೀಬತ್ಸ ವಿಚಾರವೆಂದರೆ, 3ನೇ ರಿಚರ್ಡನ ಪ್ರಾಣ ಹಾರಿಹೋದ ಮೇಲೆಯೂ ಯುದ್ಧೋನ್ಮತ್ತ ಶತೃಗಳ ಗುಂಪು ಅವನ ಶವದ ಮೇಲೆ ಮುಗಿಬಿದ್ದು, ತುಚ್ಛೀಕರಿಸಲೆಂದೇ ಮನ ಬಂದಂತೆ ಅದನ್ನು ಆಯುಧಗಳಿಂದ ಮನಸೋ ಇಚ್ಛೆ ಇರಿದು ರೋಷವನ್ನು ತೀರಿಸಿಕೊಂಡದ್ದು ಮತ್ತು ಅದನ್ನು ಕುದುರೆಯ ಮೇಲೆ ಏರಿಸಿ ಹಗ್ಗದಿಂದ ಬಿಗಿದು ಸಾಗಿಸಿ, ಅರೆಬರೆ ಅಗೆದಿದ್ದ ಹಳ್ಳದಲ್ಲಿ ಬೇಕಾಬಿಟ್ಟಿ ಎಂಬಂತೆ ಗಡಿಬಿಡಿಯಲ್ಲಿ ಮಣ್ಣು ಮಾಡಿದ್ದು, ಹೀಗೆ ತನ್ನ ಮೇಲಾದ ಈ ಎಲ್ಲ ದರ‍್ಜನ್ಯವನ್ನು ಆ ಅಸ್ಥಿಪಂಜರ ತಜ್ಞರಿಗೆ ವಿವರಿಸಿ ಹೇಳಿತೆಂದರೆ ಆಶ್ಚರ್ಯವೇ ಸರಿ.

ವಿವರವಾದ ಪರೀಕ್ಷೆಯಿಂದ ಆ ವ್ಯಕ್ತಿಯ ಎತ್ತರ ಸುಮಾರು ಐದು ಅಡಿ ಎಂಟು ಇಂಚು ವಯಸ್ಸು 30 ರಿಂದ 34 ಎಂದು ಅಂದಾಜಿಸಲಾಯಿತು. ಅಸ್ಥಿಪಂಜರದ ಭೌತಿಕ ರಚನೆಯ ಕಾರಣದಿಂದ ಅದು ಗಂಡಸಿನದೇ ಅಥವಾ ಹೆಂಗಸಿನದೇ ಎಂಬ ಗೊಂದಲ ಒಂದು ಹಂತದಲ್ಲಿ ಸಂಶೋಧಕರನ್ನು ಕಾಡಿದ್ದು ಉಂಟು. ಅದು ದೃಢಕಾಯ ಶರೀರದ ಮನುಷ್ಯನದಾಗಿರದೇ ಹೆಣ್ಣನ್ನು ಹೋಲುವ ಸಣಕಲು ದೇಹದ ಮನುಷ್ಯನ ಮೂಳೆಯ ರಚನೆ ಹೊಂದಿದ್ದು ಮೊದಲ ಕಾರಣ. ಅದರ ಪೆಲ್ವಿಸ್ ಮೂಳೆಯಲ್ಲಿನ ದ್ವಾರವು ಗಂಡಸಿನಲ್ಲಿ ಸಾಮಾನ್ಯವಾಗಿ ಇರಬೇಕಾದಕ್ಕಿಂತ ಹೆಚ್ಚು ವಿಸ್ತಾರವಾಗಿದ್ದು ಎರಡನೆಯಕಾರಣ. ಹೀಗಾಗಿ, ಅದು ಹೆಣ್ಣಿನದೋ, ಗಂಡಿನದೋ ಎಂದು ಖಚಿತ ಪಡಿಸಿಕೊಳ್ಳಲು ಙ ಕ್ರೋಮೋಸೋಮಿನ ಪರೀಕ್ಷೆಗೆ ಮೊರೆ ಹೋಗಬೇಕಾಯಿತು. ಕೋಶ ಕೇಂದ್ರದ ಡಿಎನ್ಎ ಪರೀಕ್ಷೆಯಲ್ಲಿ ಅದು Y- ಕ್ರೋಮೋಸೋಮ್ ಹೊಂದಿದ್ದರಿಂದ, ಅಸ್ಥಿ ಪಂಜರ ಗಂಡಿನದೇ ಎಂದು ಖಚಿತವಾಯಿತು.

ಅಗ್ನಿಪರೀಕ್ಷೆ!

ಕಾರ್ಬನ್ ಡೇಟಿಂಗ್ ವಿಶ್ಷೇಷಣೆಯನ್ನು ಪ್ರತ್ಯೇಕವಾಗಿ ಎರಡು ವಿಭಿನ್ನ ಪ್ರಯೋಗಾಲಯಗಳಲ್ಲಿ ನಡೆಸಲಾಯಿತು. ಎರಡೂ ಕಡೆಯಿಂದ ಬಂದ ಫಲಿತಾಂಶಗಳು ಒಂದೇ ರೀತಿಯಲ್ಲಿದ್ದವು. ಆ ವ್ಯಕ್ತಿಯು ಬದುಕಿದ್ದ ಕಾಲವನ್ನು ಶೇಕಡ 95.4 ರಷ್ಟು ನಿಖರವಾಗಿ 14561530 ಎ0ದು ಅವು ಗುರ್ತಿಸಿದ್ದವು. 3ನೇ ರಿಚರ್ಡ್ ಯುದ್ದದಲ್ಲಿ ಮಡಿದಿದ್ದು 1485ರಲ್ಲಿ ಎ0ಬುದು ಇಲ್ಲಿ ಗಮನಿಸಬೇಕಾದ ವಿಚಾರ.

ಬಹಳ ಮುಖ್ಯವಾದ ಸಂಶೋಧನೆಯ ಹಂತವೆಂದರೆ ಅಸ್ಥಿಪಂಜರವು ದೊರೆ 3ನೇ ರಿಚರ್ಡನದೇ ಎಂದು ನಿರೂಪಿಸುವುದು. ಇದಕ್ಕಾಗಿ, ಡಿಎನ್ಎ ಪರೀಕ್ಷೆ ಮಾಡುವುದು ಅಗತ್ಯವಾಗಿತ್ತು. ಪ್ರಸ್ತುತ ವಾರಸುದಾರಿಕೆ ಪರೀಕ್ಷಿಸಲು ಮುಖ್ಯವಾಗಿ ಮೂರುರೀತಿಯ ಡಿಎನ್ಎ ಪರೀಕ್ಷೆಗಳಿವೆ. 1. Y-ಕ್ರೋಮೋಸೋಮ್, 2. ಮೈಟೋಕಾಂಡ್ರಿಯ, 3. ಆಟೋಸೋಮಲ್. ಜನಾಂಗೀಯ ಮೂಲ, ಅದರ ಚಟುವಟಿಕೆ ಮುಂತಾದವುಗಳನ್ನು ಪತ್ತೆ ಮಾಡುವಲ್ಲಿ ಆಟೋಸೋಮಲ್ ಡಿಎನ್ಎ ಪರೀಕ್ಷೆ ಉಪಯೋಗಕ್ಕೆ ಬರುತ್ತದೆ. Y-ಕ್ರೋಮೋಸೋಮ್ ಪರೀಕ್ಷೆಯು ಪಿತೃ ಮೂಲವನ್ನು ಕಂಡು ಹಿಡಿಯಲು‌ ಉಪಯೋಗಕ್ಕೆ ಬರುತ್ತದೆ. ತಂದೆಯು ಮಗನಿಗೆ ವರ್ಗಾಯಿಸುವ Y-ಕ್ರೋಮೋಸೋಮ್ಗಳಲ್ಲಿ ಯಾವುದೇ ಬದಲಾವಣೆ‌ ಇರುವುದಿಲ್ಲ. ತಂದೆ ಮತ್ತು ಮಗನ ಡಿಎನ್ಎ ಪ್ರೊಫೈಲಿನ ಹೋಲಿಕೆಯು ಪಿತೃತ್ವವನ್ನು ಸಾಬೀತು ಪಡಿಸುತ್ತದೆ. ಹೀಗಾಗಿ, ಈ ರೀಕ್ಷೆಯಿಂದ ಒಂದು ವಂಶಾವಳಿಯಲ್ಲಿ ಬಂದ ಗಂಡು ಮೂಲವನ್ನು ಪತ್ತೆ ಮಾಡಬಹುದು, ಅಮ್ಮ ಸತ್ಯ ಅಪ್ಪ ನಂಬಿಕೆ ಎಂಬ ಅರ್ಥವತ್ತಾದ ಒಂದು ಮಾತಿದೆ. ಐದು ಶತಮಾನಗಳಿಗೂ ಮೀರಿದ ಒಂದು ನಮೂನೆಯನ್ನು ಪರೀಕ್ಷೆ ಮಾಡುವಾಗ ಯಾವುದಾದರೂ ಒಂದು ಹಂತದಲ್ಲಿ ವಿವಾಹೇತರ ಸಂತಾನ ಅಥವಾ ದತ್ತು ಸ್ವೀಕಾರ ವಂಶಾವಳಿಯಲ್ಲಿ ಸೇರಿಹೋಗಿದ್ದರೆ ಈ ಹೋಲಿಕೆ ಹೊಂದಾಣಿಕೆ ಆಗದೆ ಪಿತೃತ್ವದ ಪರೀಕ್ಷೆಯ ಫಲಿತಾಂಶ ನಕಾರಾತ್ಮಕ ಬರುವುದು ಶತಸಿದ್ಧ. ಟೂಡರ್ ವಂಶಾವಳಿಯ ಒಂದು ಹಂತದಲ್ಲಿ ಇಂಥ ಒಂದು ಪ್ರಸಂಗ ಕ್ರೋಮೋಸೋಮಲ್ ಡಿಎನ್ಎ ವಿಶ್ಲೇಷಣೆಯಿಂದ ಪತ್ತೆಯಾಗಿದೆ. ಆದ್ದರಿಂದ, 3ನೇ ರಿಚರ್ಡನದು ಎಂದು ಹೇಳಲಾದ ಈ ನಮೂನೆಗೆ Y -ಕ್ರೋಮೋಸೋಮ್ ಪರೀಕ್ಷೆ ಮತ್ತು ಮೈಟೋಕಾಂಡ್ರಿಯಲ್ ಪರೀಕ್ಷೆ‌ ಎರಡನ್ನೂ ಮಾಡಲಾಯಿತು. ಈ ಹಿಂದೆ ತಿಳಿಸಿದಂತೆ Y -ಕ್ರೋಮೋಸೋಮಲ್ ಪರೀಕ್ಷೆಯನ್ನು ಈ ನಮೂನೆಯಲ್ಲಿ ಲಿಂಗ ನಿರ್ಧಾರಕ್ಕೆ ಮಾತ್ರ ಪರಿಗಣಿಸಲಾಯಿತು. ಅದರೆ, ವಾರಸುದಾರಿಕೆ ನಿರ್ಧರಿಸುವಾಗ ಮೈಟೋಕಾಂಡ್ರಿಯಲ್ ಪರೀಕ್ಷೆಯನ್ನು ಮಾತ್ರ ಅವಲಂಬಿಸಲಾಯಿತು.


ಚಿತ್ರ ಕೃಪೆ :ಕ್ಲೀವ್ಲ್ಯಾಂಡ್‌ಕ್ಲಿನಿಕ್

ಮೈಟೋಕಾಂಡ್ರಿಯಲ್‌ ಡಿಎನ್‌ಎ ದ ರಂಗ ಪ್ರವೇಶ




ಚಿತ್ರ ಕೃಪೆ:: ವಿಕಿಪೀಡಿಯ

ಕೋಶಕೇಂದ್ರದ ಕ್ರೋಮೋಸೋಮಿನಲ್ಲಿ ಮಾತ್ರವಲ್ಲದೇ, ಅದರ ಹೊರಗಿರುವ ಮೈಟೋಕಾಂಡ್ರಿಯಾದಲ್ಲೂ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಡಿಎನ್ಎ ಇರುತ್ತದೆ. ಇದನ್ನು ಮೈಟೋಕಾಂಡ್ರಿಯಲ್ ಡಿಎನ್ಎ (mtDNA) ಎಂದು ಕರೆಯಲಾಗುತ್ತದೆ. mtDNA ತಾಯಿಯಿಂದ ಮಗುವಿಗೆ ಬರುತ್ತದೆ. ಹೀಗೆ, ಬಂದ ಇದನ್ನು ಗಂಡು ಮಕ್ಕಳು ತಮ್ಮಲ್ಲಿ ಹೊಂದಿರುತ್ತಾರೆ ಆದರೆ, ವರ್ಗಾಯಿಸಲಾಗುವುದಿಲ್ಲ. ಹೆಣ್ಣು ಮಕ್ಕಳು ಹೊಂದಿರುತ್ತಾರೆ ಮತ್ತು ಬಹಳ ಮುಖ್ಯವಾಗಿ ಮುಂದಿನ ಪೀಳಿಗೆಗೆ ವರ್ಗಾಯಿಸುತ್ತಾರೆ. ಯುಗ್ಮಜ ನಿರ್ಮಾಣವಾಗುವಾಗ ಸಂದರ್ಭದಲ್ಲಿ ವೀರ್ಯಾಣು mtDNA ಇರುವ ತನ್ನ ಬಾಲವನ್ನು ಕಳಚಿ ಹೊರಗೆ ಬಿಟ್ಟು ಅಂಡಾಣುವನ್ನು ಪ್ರವೇಶಿಸುತ್ತದೆ. ಹೀಗಾಗಿ ಮುಂದಿನ ಪೀಳಿಗೆಗೆ ತಂದೆಯ mtDNA ವರ್ಗಾವಣೆ (ಕೆಲವು ಅಪವಾದಗಳನ್ನು ಬಿಟ್ಟು) ವರ್ಗಾವಣೆ ಆಗುವುದೇ ಇಲ್ಲ. ಮಾತೃ ವಂಶಾವಳಿಯನ್ನು ತಿಳಿಯಲು mtDNA ವಿಶ್ಲೇಷಣೆಯು ಅತ್ಯಂತ ನಿಖರವಾದ ಮತ್ತು ವಿಶ್ವಾಸಾರ್ಹ ವಿಧಾನವಾಗಿರುತ್ತದೆ. ಸುಲಭವಾಗಿ ರೂಪಾಂತರವಾಗಬಲ್ಲ ಕೋಶಕೇಂದ್ರೀಯ ಡಿಎನ್ಎಗೆ ಹೋಲಿಸಿದರೆ mtDNA, ಕಾಲಾಂತರದ ಪರೀಕ್ಷೆಗಳಲ್ಲಿ ಹೆಚ್ಚು ಸ್ಥಿರ, ದೃಢ, ಬಹತೇಕ ರೂಪಾಂತರ ಮುಕ್ತ. ಹೀಗಾಗಿ, ವಂಶಾವಳಿ ನಿರ್ಧಾರಕ್ಕೆ ಸೂಕ್ತ ವಿಧಾನ. ತಾಯಿ ಬಳಗದವರ ಹಲವಾರು ತಲೆಮಾರುಗಳ ಹಿಂದಿನವರ mtDNA ಯೊಂದಿಗೆ ಹೋಲಿಕೆ ಮಾಡಬಹುದು.

ದೊರೆ 3ನೇ ರಿಚರ್ಡನ ವಂಶವೃಕ್ಷವನ್ನು ಗಮನಿಸಿದರೆ ಪ್ಲಾಂಟಿಜೆನೆಟ್ ಮತ್ತು ಟೂಡರ್ ಈ ಎರಡೂ ಬಣದವರು ದಾಯಾದಿಗಳು ಎಂಬುದು ತಿಳಿಯುತ್ತದೆ. ದೊರೆ 3ನೇ ರಿಚರ್ಡನ ಏಕೈಕ ಪುತ್ರ ಎಡ್ವರ್ಡ್ ಆಫ್ ಮಿಡಲ್ಹಾಮ್ ಹತ್ತು ವರ್ಷ ಪೂರೈಸುವ ಮೊದಲೇ ತೀರಿ ಹೋದನಾದ್ದರಿಂದ ಅವನಿಗೆ ಯಾರೂ ವಾರಸುದಾರರು ಇರಲಿಲ್ಲ. ಬ್ರಿಟನ್ನಿನ ಅರಸೊತ್ತಿಗೆಯ ವಂಶಜರ ವಂಶವೃಕ್ಷಗಳನ್ನು ಇರಿಸಿಕೊಂಡು ಆಧುನಿಕ ಜಗತ್ತಿನಲ್ಲಿ ಈಗ ಜೀವಿಸಿರುವ ಎಲ್ಲರನ್ನೂ ಹುಡುಕಲಾಯಿತು. ಮತ್ತು ಅವರಲ್ಲಿ ಸ್ವಪ್ರೇರಣೆಯಿಂದ ಡಿಎನ್ಎ ಪರೀಕ್ಷೆಗೆ ಒಳಗಾಗಲು ಬಂದವರ ಬಾಯಿಯ ಲಾಲಾರಸ ಮತ್ತು ಒಳ ದವಡೆಯ ಜೀವಕೋಶಗಳನ್ನು ಸಂಗ್ರಹಿಸಿ ಅದರಿಂದ ಅವರ ಮೈಟೋಕಾಂಡ್ರಿಯ ಮತ್ತು ಕ್ರೋಮೋಸೋಮ್‌ ಡಿಎನ್ಎ ಪ್ರತ್ಯೇಕಿಸಲಾಯಿತು. ನಂತರ, ಅವರ ಡಿಎನ್ಎ ಪ್ರೊಫೈಲನ್ನು 3ನೇ ರಿಚರ್ಡನ ಡಿಎನ್ಎ ಪ್ರೊಫೈಲಿನೊಂದಿಗೆ ಹೋಲಿಸಲಾಯಿತು. ಇದರಲ್ಲಿ, ಅವನ ಒಡ ಹುಟ್ಟಿದ ಅಕ್ಕನ ಪೀಳಿಗೆಯ ಹದಿನಾಲ್ಕು ತಲೆಮಾರುಗಳು ನಂತರದ ಸಂಬಂಧಿಗಳಾದ ಅಧುನಿಕ ಜಗತ್ತಿನಲ್ಲಿ ಜೀವಿಸಿರುವ ಕೆನಡಾ ನಿವಾಸಿ ಮೈಕೆಲ್ ಇಬ್ಸನ್ ಮತ್ತು ಆಸ್ಟ್ರೇಲಿಯಾದ ನಿವಾಸಿ ಶ್ರೀಮತಿ ವೆಂಡಿಡಲ್ಡಿಗೆ ಇವರ ಕೊಡುಗೆ ನಿರ್ಣಾಯಕವಾಗಿ ಪರಿಣಮಿಸಿತು. ಅವರ mtDNA ಪ್ರೊಫೈಲ್‌ ಮತ್ತು 3ನೇ ರಿಚರ್ಡನ mtDNA ಪ್ರೊಫೈಲ್ ನಿಖರವಾಗಿ ಹೋಲಿಕೆಯಾಗುವುದರೊಂದಿಗೆ ಬಲವಾದ ಸಾಕ್ಷ್ಯವನ್ನು ಒದಗಿಸಿತು. ಇದರ ಆಧಾರದ ಮೇಲೆಯೇ ಕಾರು ಪಾರ್ಕಿನ ಕೆಳಗೆ ದೊರೆತ ಅಸ್ಥಿಪಂಜರವು 3ನೇ ರಿಚರ್ಡನದೇ ಎನ್ನುವ ನಿರ್ಧಾರಕ್ಕೆ ಬರಲಾಯಿತು.


ತಲೆಬುರುಡೆಯ ಫೋಟೋ ಬಳಕೊಂಡು ಡಿಜಿಟಲ್ ತಂತ್ರದಿಂದ ಪುನರ್ ನಿರ್ಮಿಸಿದ ದೊರೆ 3ನೇ ರಿಚರ್ಡನ ಮೂರ್ತಿ.

ಚಿತ್ರಕೃಪೆ: 3ನೇ ರಿಚರ್ಡ ಸೊಸೈಟಿ

3ನೇ ರಿಚರ್ಡನ ತಲೆಬುರುಡೆಯ ಚಿತ್ರವನ್ನು ಆಧಾರವಾಗಿ ಇರಿಸಿಕೊಂಡು ಡಿಜಿಟಲ್ ತಂತ್ರದಿಂದ ರೂಪಿಸಿದ ಅವನ ಪ್ರತಿಮೆಯು ಅವನ ಕಾಲದಲ್ಲಿ ಕಲಾಕಾರರು ರಚಿಸಿದ್ದ ಅವನ ಭಾವಚಿತ್ರಗಳನ್ನು ಬಹುತೇಕ ಹೋಲುತ್ತಿದ್ದುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿತು. ಈ ಎಲ್ಲ ವಿವಿಧ ಅಗ್ನಿ ಪರೀಕ್ಷೆಗಳನ್ನು ಮುಗಿಸಿ ಕೊನೆಗೆ 3ನೇ ರಿಚರ್ಡನ ಗುರುತು ಸ್ವಷ್ಟವಾದ ಮೇಲೆ ಆತನಿಗೆ ಈಗಲಾದರೂ ಸೂಕ್ತ ರೀತಿಯ ಗೌರವ ಸ್ಥಾನಮಾನಗಳನ್ನು ನೀಡಬೇಕೆಂದು ನಿರ್ಧರಿಸಿದ ಆಡಳಿತ ಮತ್ತು ಸಾರ್ವಜನಿಕರು, ಅವನ ಅಸ್ಥಿಯನ್ನು ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಅದು ದೊರೆತಲ್ಲಿಂದ ಅನತಿ ದೂರದಲ್ಲಿಯೇ ಇರುವ ಕೆಥೆಡ್ರಲ್ಲಿನಲ್ಲಿ ಸಮಾಧಿ ಮಾಡಿದರು. ಅವನಿಗೆ ಆಗಿರಬಹುದಾದ ಅನ್ಯಾಯವನ್ನು ಸರಿಪಡಿಸುವ ಕಾರ್ಯವನ್ನು ಬಹಳ ವಿಜೃಂಭ್ರಣೆಯಿಂದ ನೆರೆವೇರಿಸಿ ಅವನ ಅಭಿಮಾನಿಗಳಿಗೂ ಸಮಾಧಾನವಾಗುವಂತೆ ಅವನ ಆತ್ಮಕ್ಕೆ ಶಾಂತಿ ಕೋರಿದರು. ಈಗ ಲೀಸ್ಟರಿನಲ್ಲಿ 3ನೇ ರಿಚರ್ಡನ ಅಸ್ಥಿಪಂಜರ ದೊರೆತ ಕಾರ್ ಪಾರ್ಕ್ ಮತ್ತು ಅವನ ಹೊಸ ಸಮಾದಿ ಸ್ಥಳಗಳು ಪ್ರವಾಸಿಗರನ್ನು ಸೆಳೆಯುವ ಕೇಂದ್ರಗಳಾಗಿ ಬೆಳೆದಿವೆ.


ಭಾರತೀಯ ಸಂಜಾತ ಗಣಿತಜ್ಞೆ ಭಾಮಾ ಶ್ರೀನಿವಾಸ್‌

ಭಾರತೀಯ ಸಂಜಾತ ಗಣಿತಜ್ಞೆ ಭಾಮಾ ಶ್ರೀನಿವಾಸ್‌ 

ಶ್ರೀಮತಿ ಚಂದ್ರಕಲಾ ಆರ್

ಗಣಿತ ಶಿಕ್ಷಕಿ, 

ಕೆ ಪಿ ಎಸ್ ಕೊಡಿಗೆಹಳ್ಳಿ , 

ಬೆಂಗಳೂರು ಉತ್ತರ                

ಗಣಿತ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ ಭಾರತೀಯ ಸ್ತ್ರೀಯರಲ್ಲಿ ಕೇಳಿಬರುವ ಒಂದು ಪ್ರಮುಖ ಹೆಸರು ಶ್ರೀಮತಿ ಭಾಮಾ ಶ್ರೀನಿವಾಸನ್ ಅವರದ್ದು. ಅವರ ಸಾಧನೆಗಳ ಪರಿಚಯವನ್ನು ಮಾಡಿಕೊಡುವ ಈ ಲೇಖನವನ್ನು ಬರೆದವರು ಗಣಿತ ಶಿಕ್ಷಕಿ ಶ್ರೀಮತಿ ಎಸ. ಚಂದ್ರಕಲಾ ಅವರು. ಈ ಲೇಖನದ ಮೂಲಕ ಅವರು ‘ಸವಿಜ್ಞಾನ’ದ ಲೇಖಕರ ಬಳಗವನ್ನು ಸೇರುತ್ತಿದ್ದಾರೆ.

ತರಗತಿಯಲ್ಲಿ ಪಾಠ ಮಾಡುವಾಗ, ಭಾಸ್ಕರಾಚಾರ್ಯ, ಆರ್ಯಭಟ, ಶ್ರೀನಿವಾಸ ರಾಮಾನುಜನ್, ಪೈಥಾಗರಸ್, ಯೂಕ್ಲಿಡ್ ಇತ್ಯಾದಿ ಗಣಿತಶಾಸ್ತ್ರಜ್ಞರ ಹೆಸರನ್ನು  ಹೇಳುತ್ತಿರುತ್ತೇವೆ.

ಹೀಗೆ ಒಂದು ತರಗತಿಯಲ್ಲಿ ನನ್ನ ವಿದ್ಯಾರ್ಥಿನಿಯೊಬ್ಬಳು " ಯಾವಾಗ್ಲೂ ಪುರುಷ ಗಣಿತಶಾಸ್ತ್ರಜ್ಞರ ಬಗ್ಗೆ ಹೇಳ್ತಿರಲ್ಲ, ಸ್ತ್ರೀಯರು ಇಲ್ವಾ? ಮಿಸ್ " ಎಂದಾಗ ಒಮ್ಮೆಲೆ ಎದೆ ಝಲ್ ಎಂದಿತ್ತು. ಹೌದಲ್ವಾ ನಾವ್ಯಾಕೆ ಸ್ತ್ರೀ ಗಣಿತಶಾಸ್ತ್ರಜ್ಞರ ಬಗ್ಗೆ ಏನೂ ಹೇಳುವುದೇ ಇಲ್ಲ ಅನ್ನಿಸ್ತು.

ಪ್ರಕೃತಿ ಸ್ತ್ರೀ ಪುರುಷರನ್ನ ಸಮಾನವಾಗಿ ಸೃಷ್ಟಿಸಿದೆಯಾದರೂ…… ಗಣಿತ ಕ್ಷೇತ್ರದಲ್ಲಿ ಸ್ತ್ರೀಯರ ಸಂಖ್ಯೆ ಕಡಿಮೆ ಅನ್ನಿಸುತ್ತಲ್ಲ! ಅಂತ ಯೋಚಿಸಿದ್ರೆ, ಬಹುಶಃ ಅಂದಿನ ಸಾಮಾಜಿಕ ಸ್ಥಿತಿ ಇದಕ್ಕೆ ಕಾರಣ ಇರಬಹುದು ಅನ್ನಿಸಿತು.

ಇದೇ ಆಲೋಚನೆ ಮುಂದುವರೆದು ಕೆಲ ಗಣಿತಶಾಸ್ತ್ರಜ್ಞರನ್ನು ಪರಿಚಯ ಮಾಡಿಸೋಣ ಅಂತ ಹೊರಟೆ. ಮೊದಲನೆಯದಾಗಿ ಭಾರತೀಯ ಮೂಲದವರಾದ ಭಾಮಾ ಶ್ರೀನಿವಾಸನ್ ಬಗ್ಗೆ ತಿಳಿದುಕೊಳ್ಳೋಣ 

ಭಾಮ ಶ್ರೀನಿವಾಸನ್ 

ಭಾರತಮಾತೆಯ ಮಡಿಲಲ್ಲಿ ಹುಟ್ಟಿ,ಬೆಳೆದು, ಅಮೆರಿಕಾದಲ್ಲಿ ಗಣಿತಜ್ಞಯ ಸ್ಥಾನವನ್ನು ಅಲಂಕರಿಸಿರುವ ಭಾಮ ಶ್ರೀನಿವಾಸನ್ ಜನಿಸಿದ್ದು ನಮ್ಮ ದೇಶ ಸ್ವತಂತ್ರ ವಾಗುವುದಕ್ಕೆ 12 ವರ್ಷ ಮೊದಲು ಕ್ರಿ. 1935 ನೇ ಇಸವಿಯಲ್ಲಿ. ಆಗಿನ ಮದ್ರಾಸ್ ನಲ್ಲಿ. ಅವರ ತಂದೆ V K ರಂಗಸ್ವಾಮಿ, ಕಾಲದಲ್ಲೇ ಪ್ರಸಿದ್ಧ ಆಕ್ಷ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ M.A. ಪದವಿ ಪಡೆದ ಮೇಧಾವಿ. ತಾಯಿ ಇಂದಿರಾ. ದಂಪತಿಗಳ ಮೊದಲ ಮಗಳೇ ಭಾಮಾ

ಭಾಮ ಶ್ರೀನಿವಾಸನ್ ಕುಟುಂಬ ಶಿಕ್ಷಣಕ್ಕೆ ಮಹತ್ವ ಕೊಟ್ಟಂತಹ ಕುಟುಂಬ. ಇವರ ಕುಟುಂಬದ ಅನೇಕರು ಕೇಂಬ್ರಿಡ್ಜ್, ಸ್ಟ್ಯಾನ್ ಫೋರ್ಡ್, ಸಿಡ್ನಿ ಮುಂತಾದಂತಹ ವಿಶ್ವವಿದ್ಯಾಲಯಗಳಲ್ಲಿ ಕೆಲಸದಲ್ಲಿ ತೊಡಗಿದ್ದಂತಹವರು. ಭಾಮರ ತಾತ ಸ್ವಂತ ಪರಿಶ್ರಮದಿಂದ ಗಣಿತ ಕಲಿಯುತ್ತಿದ್ದ ಹವ್ಯಾಸಿ ಗಣಿತಜ್ಞ. ಇಂತಹ ಹಿನ್ನೆಲೆಯಿಂದ ಬಂದ ಭಾಮ ತರಗತಿಗಳಲ್ಲಿ ಮುಂದೆ ಜೀವನದಲ್ಲಿ ಅಸಾಮಾನ್ಯ ಬುದ್ಧಿವಂತಿಕೆ ತೋರಿದ್ದು ಸಹಜವೇ. ಅವರ ಪ್ರಾರಂಭಿಕ ಶಿಕ್ಷಣ ಮದ್ರಾಸ್ನ ಆಲ್ ಗರ್ಲ್ಸ್ ಹೈ ಸ್ಕೂಲ್ ನಲ್ಲಿ ಆಯಿತು. ನಂತರ ಮದ್ರಾಸ್ ನಲ್ಲೇ ಗಣಿತದಲ್ಲಿ ಬಿಎ ಪದವಿ ಪಡೆದರು. ಅವಧಿ ಅವರಿಗೆ ಆಸಕ್ತಿದಾಯಕವಾಗಿರಲಿಲ್ಲ, ಕಾರಣ ಪಠ್ಯ ವಸ್ತು ಕನಿಷ್ಠ 30 ವರ್ಷ ಹಳೆಯದಾಗಿದ್ದು ಭಾಮಾರ ಗಣಿತ ತೃಷೆ ತಣಿಸುವಲ್ಲಿ ಸಫಲವಾಗಲಿಲ್ಲ. ನಂತರ ಅವರು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ M.Sc., ಪದವಿ ಪಡೆದರು. ಅವಧಿ ಅವರಿಗೆ ಉತ್ಸಾಹದಾಯಕವಾಗಿತ್ತು. ಆಧುನಿಕ ಬೀಜಗಣಿತದಲ್ಲಿ ಆಸಕ್ತಿ ಮೂಡಿದ್ದು ಆಗಲೇ.  ಇದೇ ವೇಳೆಗೆ ಮದ್ರಾಸ್ನಲೊಯೊಲಾ ಕಾಲೇಜಿನ ಫಾದರ್ ಸೀನ್ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಹಲವು ಕೋರ್ಸ್ ಗಳನ್ನು ಪ್ರಾರಂಭಿಸಿದರು. ಸದವಕಾಶ ಬಳಸಿಕೊಂಡ ಭಾಮಾರು ಟೋಪೋಲಜಿ ಮುಂತಾದ ವಿಷಯಗಳ ಕೋರ್ಸ್ಗೆ ಪ್ರವೇಶ ಪಡೆದರು. ಇದು ಅವರನ್ನು ಧುತ್ತನೆ 20ನೇ ಶತಮಾನಕ್ಕೆ ಕೊಂಡೊಯ್ದಂತೆ ಆಯ್ತಂತೆ.

M.Sc. ಪದವಿ ಪಡೆದ ನಂತರ ಭಾಮಾ ಮದುವೆಯಾಗಿ ಪತಿಯೊಡನೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಗೆ ತೆರಳಿದರು. ಸಮಯದಲ್ಲಿ ಅಲ್ಲಿ ಗಣಿತಕ್ಕೆ ಪ್ರೋತ್ಸಾಹದಾಯಕ ವಾತಾವರಣವಿತ್ತು. ಹಾಗಾಗಿ ಅವರು ಅಲ್ಲಿನ ವಿಶ್ವವಿದ್ಯಾಲಯಕ್ಕೆ Ph.D ವಿದ್ಯಾರ್ಥಿಯಾಗಿ ಸೇರಿದರು.

J A ಗ್ರೀನ್ (ಸ್ಯಾಂಡಿ ಗ್ರೀನ್) ಸಮರ್ಥ ಮಾರ್ಗದರ್ಶನದಲ್ಲಿ ಮಾಡ್ಯೂಲಾರ್ ರೆಪ್ರೆಸೆಂಟೇಶನ್ ಆಫ್ ಫೈನೆಟ್ ಗ್ರೂಪ್ (modular pepersentation of finite groups)  ಎಂಬ ವಿಷಯದ ಬಗ್ಗೆ ಪ್ರೌಢ ಪ್ರಬಂಧ ರಚಿಸಿ ಕ್ರಿ. ಶ. 1960 ರಲ್ಲಿ Ph.D ಪದವಿ ಪಡೆದರು.

 ಸಂಪ್ರದಾಯದಂತೆ ಉತ್ತಮ ಗೃಹಿಣಿಯಾದರೆ ಸಾಕು ಇನ್ನೇನು ಆಗುವುದೆಲ್ಲ ಬೇಡ ಎನ್ನುತ್ತಿದ್ದ ಮನೆ ಮಂದಿಯ ಜೊತೆ ವಾದಕ್ಕೆ ನಿಂತು ಭಾಮಾರನ್ನು ಪ್ರೋತ್ಸಾಹಿಸಿದ್ದು ಸ್ವತಃ ಅವರ ಪತಿಯೇ. ಇದನ್ನು ಆಕೆ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ.

ಡಾಕ್ಟರೇಟ್ ಪದವಿ ಪಡೆದ ನಂತರ ಭಾಮ ರವರು ಇಂಗ್ಲೆಂಡಿನ ಸ್ಟ್ಯಾಂಡ್ ಫೋರ್ಡ್ ಶೈರ್ ನಲ್ಲಿನ ಪೀಲೆ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ ಪ್ರಾರಂಭಿಸಿದರು. ಕ್ರಿ. 1964 ರಲ್ಲಿ ತಮ್ಮ ಎರಡನೇ ಪ್ರಬಂಧ ಸ್ಪೆಷಲ್ ಲೀನಿಯರ್ ಗ್ರೂಪ್ಗಳ ಗುಣಲಕ್ಷಣ ವನ್ನು ಪ್ರಕಟಿಸಿದರು.

ಭಾಮಾರಿಗೆ ಕೆನಡಾದ ನ್ಯಾಷನಲ್ ರಿಸರ್ಚ್ ಕೌನ್ಸಿಲ್, ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ನೀಡಿ ಗೌರವಿಸಿತು. ಅಲ್ಲದೆ 1965-66 ರಲ್ಲಿ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾ ನಿಲಯಕ್ಕೆ ಭೇಟಿ ನೀಡಲು ಧನ ಸಹಾಯ ಒದಗಿಸಿತು. ಹಾಗಾಗಿ ಕೆನಡಾದಲ್ಲಿ ಒಂದು ವರ್ಷ ಕಳೆದ ಭಾಮಾರವರು ನಂತರ ಭಾರತಕ್ಕೆ ಮರಳಿ ಬಂದು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ರಾಮಾನುಜನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕ್ಸ್ ನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದರು.

ಭಾರತದಲ್ಲಿ ಉದ್ಯೋಗದಲ್ಲಿದ್ದಾಗ ಹೆಣ್ಣು ಎಂಬ ಕಾರಣಕ್ಕೆ ಅಂತಹ ತಾರತಮ್ಯವನ್ನೇನು ಕಾಣದಿದ್ದರೂ "ನಿನ್ನ ಪತಿ ಒಳ್ಳೆಯ ಉದ್ಯೋಗದಲ್ಲಿದ್ದಾರೆ ನೀನೇಕೆ ದುಡಿಯಬೇಕು? " "ಅನವಶ್ಯಕವಾಗಿ ದುಡಿಯುತ್ತಿರುವ ನೀನು ಇನ್ನೊಬ್ಬರ ಅನ್ನ ಕಸಿಯುತ್ತಿರುವೆ. ಅಯ್ಯೋ ಪಾಪ! ನಿನಗೆ ಮಕ್ಕಳಿಲ್ಲ, ಹೋಗಲಿ ಬಿಡು ಅದನ್ನು ಮರೆಸುವಂತೆ ಉದ್ಯೋಗವಿದೆಯಲ್ಲ" ಎಂಬಂತಹ ಸಣ್ಣ ಮಾತುಗಳನ್ನು ಕೇಳಬೇಕಾಯಿತು.

ಮುಂದೆ ಕ್ರಿ. 1970 ರಲ್ಲಿ ಅಮೇರಿಕಾಗೆ ತೆರಳಿದ ಭಾಮ ಮೆಸೇಜು ಸೆಟ್ಸ್ ಪ್ರಾಂತ್ಯದ ವೋರ್ಸ್ ಸ್ಟರ್ ಕ್ಲಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆಗೆ ಸೇರಿದರು. ಕ್ರಿ 1976-77 ರಲ್ಲಿ ಆರ್ಮಂಡ್ ಬೋರೆಲ್ ಆಹ್ವಾನದ ಮೇರೆಗೆ ಪ್ರಿನ್ಸ್ಟನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ಉನ್ನತ ಅಧ್ಯಯನ ಸಂಸ್ಥೆ) ಗೆ ತೆರಳಿ ಅಲ್ಲಿ ಕಳೆದ ಒಂದು ವರ್ಷ ಅವರ ವೃತ್ತಿ ಜೀವನದ ಪ್ರಮುಖ ವರ್ಷ. ಕ್ರಿ. 1977 ರಲ್ಲಿ ಅವರಿಗೆ ಅಮೆರಿಕಾ ಪೌರತ್ವವೂ ಲಭಿಸಿತು.

ಇಂತಹ ಅಪ್ರತಿಮ ಗಣಿತಜ್ಞೆ 1980 ರಿಂದ ಚಿಕಾಗೋದ ಇಲ್ಲಿನಾಯ್ಸ್ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ಯಾರಿಸ್,ಜರ್ಮನಿ,ಆಸ್ಟ್ರೇಲಿಯಾ, ಜಪಾನ್ ದೇಶಗಳಲ್ಲಿ ಸಂದರ್ಶಕ ಉಪನ್ಯಾಸಕಿಯಾಗಿಯೂ ಸೇವೆ ಸಲ್ಲಿಸುತ್ತಿರುವುದು ಇವರ ಮೇಧಾ ಶಕ್ತಿಗೆ, ಕರ್ತೃತ್ವ ಶಕ್ತಿಗೆ ಸಾಕ್ಷಿ.

ಈಗ ಅವರ Ph.D. ಪ್ರಬಂಧ ಕುರಿತು ಅವರ ಮಾತುಗಳಲ್ಲೇ ಹೇಳುವುದಾದರೆ " ರೆಪ್ರಸೆಂಟೇಶನ್ ಥಿಯರಿ ಆಫ್ ಫೈ ನೈಟ್ ಗ್ರೂಪ್ಸ್ " ಎಂಬ ನನ್ನ ಸಂಶೋಧನಾ ವಿಷಯದಲ್ಲಿ ಬರುವ ಅಬ್ಪ್ತ್ರಾಕ್ಟ್ (ಅಮೂರ್ತ) ಫೈನೆಟ್ ಗ್ರೂಪ್ ಸಂರಚನೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಹಾಗಾಗಿ ಅದನ್ನೇ ಮ್ಯಾಟ್ರಿಕ್ಸ್ ಮುಖಾಂತರ ಪ್ರತಿನಿಧಿಸಲಾಗುತ್ತದೆ, ವಿಷಯಕ್ಕೆ ನೂರು ವರ್ಷಗಳ ಸಮೃದ್ಧ ಇತಿಹಾಸವಿದೆ.  "‌

 ಇವರ ಕೊಡುಗೆಗಳು

 ರೆಪ್ರಸೆಂಟೇಶನ್ ಥಿಯರಿ ಆಫ್ ಪೈ ನೆಟ್  ಗ್ರೂಪ್ಸ್ Ph.D ಪ್ರಬಂಧ.

 ರೆಪ್ರೆಸೆಂಟೇಶನ್ ಫ್ ಪೈ ನೆಟ್ ಚಾ ವ್ಯಲಿ ಗ್ರೂಪ್ಸ್ - ಪುಸ್ತಕ ಪ್ರಕಟಣೆ  1979

  ಕ್ರಿ 1981 ರಿಂದ 1983 ರವರೆಗೆ ಅಸೋಸಿಯೇಷನ್ ಆಫ್ ವುಮೆನ್ ಮ್ಯಾಥಮೆಟಿಷಿಯನ್ಸ್ ನಾ ಅಧ್ಯಕ್ಷ ಸ್ಥಾನ ಅಲಂಕರಿಸಿ ಸೇವೆಗೈದದ್ದು.

 1990 ರಾ ನೋಯ್ ದರ್ ಉಪನ್ಯಾಸ

 ಡೀಲೈನ್ - ಲೂಸ್ಟಿಂಗ್ ಸಿದ್ದಾಂತ

 ಲೂಸಿವೈಲ್ ಕೆಂಟುಕಿಯಲ್ಲಿ " ಇನ್ವೇಶನ್ ಜಾಮಿಟ್ರಿ ಇಂಟು ಫೈ ನೈಟ್ ಗ್ರೂಪ್ ಥಿಯರಿ " ಉಪನ್ಯಾಸ.

 ಅಲ್ಜೀಬ್ರಾ  ಪತ್ರಿಕೆ ಸಂಪಾದನೆ

 ಮೇರಿಕನ್ ಮ್ಯಾಥಮ್ಯಾಟಿಕಲ್ ಸೊಸೈಟಿ ಸಂಪಾದಕ ಮಂಡಲಿಗೆ ಸೇವೆ 1991-94

 ಮ್ಯಾಥಮೆಟಿಕಲ್ ಸರ್ವೆ ಅಂಡ್ ಮೋನೋಗ್ರಾಫ್ ಗಾಗಿ ಸೇವೆ1991-93

ತಮ್ಮ ಬದುಕಿನಲ್ಲಿ ಇಷ್ಟೊಂದು ಅರ್ಥಪೂರ್ಣವಾಗಿ, ಅವಿಶ್ರಾಂತವಾಗಿ ಕರ್ತವ್ಯ ನಿರತರಾಗಿರುವ ಭಾಮ ಶ್ರೀನಿವಾಸನ್ ತಮ್ಮ ಶಿಷ್ಯರಿಗೆ ಅಚ್ಚುಮೆಚ್ಚಿನ ಶಿಕ್ಷಕಿಯು ಹೌದು. ಅವರ ಶಿಷ್ಯರಲ್ಲಿ ಒಬ್ಬರು ಹೇಳುವಂತೆ  " ಅವರು ನನ್ನ ನೆಚ್ಚಿನ ಶಿಕ್ಷಕಿ, ಅವರ ಪ್ರತಿಭೆ ಉಜ್ವಲ ವಜ್ರದಂತಹಹುದು. ಅದನ್ನು ಗುರುತಿಸಲಾರದವರು ಕಣ್ಣೆದುರಿಗೆ ವಜ್ರದ ಹರಳಿದ್ದರೂ ಗುರುತಿಸಲಾಗದ ಅಸಮರ್ಥರೇ ಸರಿ "

ಭಾರತೀಯ ಸಂಸ್ಕೃತಿಯ ಹಿನ್ನೆಲೆ ಹೊಂದಿರುವ ಭಾಮರವರು ಗಣಿತದಲ್ಲೇ " ಸತ್ಯಂಶಿವಂ, ಸುಂದರಂ" ನುಡಿಯ ಸಾಕ್ಷಾತ್ಕಾರ ಮಾಡಿಕೊಂಡವರು. ಗಣಿತದ ಬಗ್ಗೆ ನ್ಯೂಯಾರ್ಕ್ ಟೈಮ್ಸ್ arent truth and beauty enough? ಎಂಬ ಮಾತನ್ನು ಸ್ಮರಿಸುತ್ತಾ " ಸತ್ಯ ಮತ್ತು ಸೌಂದರ್ಯವೇ ಸಾಕು" ಎಂದು ತತ್ವಜ್ಞಾನಿಯಂತೆ ನುಡಿಯುತ್ತಾರೆ. ಅವರ ಅಭಿಪ್ರಾಯದಲ್ಲಿ' ಗಣಿತ ಯಾವ ಪ್ರಯೋಜನಕ್ಕೆ? ' ಎಂಬ ಪ್ರಶ್ನೆ ಇಲ್ಲದಿದ್ದ ಸಂದರ್ಭದಲ್ಲಿ ಗಣಿತದಲ್ಲಿ ಉತ್ತಮ ಸಾಧನೆ ಸಾಧ್ಯ. ಹಾಗಿದ್ದೂ  ' ಮಾಡ್ಯುಲರ್  ರೆಪ್ರೆಸೆಂಟೇಶನ್ ಆಫ್ ಪೈನೆಟ್ ಗ್ರೂಪ್ಸ್  ' ಆವಿಷ್ಕಾರಗಳು ಭೌತಶಾಸ್ತ್ರದ ಕ್ವಾಂಟಮ್ ಗ್ರೂಪ್ಸ್ ಗೆ ಸಂಬಂಧಿಕರಿಸಿ ನಡೆಯುತ್ತಿರುವ ಕೆಲಸ ರೋಮಾಂಚನವನ್ನುಂಟು ಮಾಡುತ್ತದೆ ಎನ್ನುತ್ತಾರೆ.

ಇಂತಹ ಅದ್ಬುತ ಪ್ರತಿಭೆ ಭಾರತೀಯ ಮೂಲದವರೇ ಎನ್ನುವುದು ಹೆಮ್ಮೆಯ ಸಂಗತಿ.