ಭಾರತದ ಥೋರಿಯಂ ಮೌನ ಕ್ರಾಂತಿ
- ಲೇಖನ : ರಾಮಚಂದ್ರ ಭಟ್ ಬಿ.ಜಿ.
“ದೊಡ್ಡ ಕನಸು ಕಾಣಿರಿ. ಕನಸುಗಳು ಚಿಂತನೆಗಳಾಗಿ,ಚಿಂತನೆಗಳು ಕ್ರಿಯೆಗಳಾಗಿ ಯಶಸ್ಸನ್ನು ರೂಪಿಸುತ್ತವೆ.” — ಡಾ. ಎ.ಪಿ.ಜೆ. ಅಬ್ದುಲ್ ಕಲಾಂ
ಇತ್ತೀಚೆಗೆ ಪತ್ರಿಕೆ, ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ಸುದ್ದಿಯೊಂದು
ವಿಜ್ಞಾನ ಜಗತ್ತಿನಲ್ಲಿ ಭಾರೀ ಸಂಚಲನವನ್ನು ಉಂಟು ಮಾಡಿತು. ರೋಮಾಂಚನದೊಂದಿಗೆ ಮನದಲ್ಲಿ ಹೆಮ್ಮೆಯ
ಭಾವವನ್ನು ಮೂಡಿಸಿತು.
ಅದು ೧೯೫೦ರ ದಶಕ… ಹೊಸದಾಗಿ ಸ್ವಾತಂತ್ರ್ಯ
ಪಡೆದ ಭಾರತ ಬಡತನ, ವಿದ್ಯುತ್ ಕೊರತೆ ಮತ್ತು ತಾಂತ್ರಿಕ ಹಿನ್ನಡೆಯ ಕತ್ತಲೆಯಲ್ಲಿತ್ತು.
ಅಭಿವೃದ್ಧಿಯ ಕನಸನ್ನು ಊಹಿಸುವುದೇ ಅಸಾಧ್ಯ. ಇಂತಹ ಕಾಲದಲ್ಲಿ,
ವಿಜ್ಞಾನಿಯೊಬ್ಬರು ಶಕ್ತಿಯ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಯ ಕನಸು ಕಾಣುತ್ತಿದ್ದರು. ಅಷ್ಟೇ
ಅಲ್ಲದೆ ಅದಕ್ಕಾಗಿ ಸೂಕ್ತ ಯೋಜನೆಯನ್ನೂ ಹಾಕಿಕೊಂಡರು. ಅಸಾಧ್ಯೆಂದರೂ, ಜನ ನಕ್ಕರೂ ಭಾರತದ ನೂರಾರು ವರ್ಷಗಳ ಮುಂದಿನ ವೈಜ್ಞಾನಿಕ
ಕ್ಷೇತ್ರದ ಪ್ರಗತಿಯ ಭವಿಷ್ಯದ ಕನಸು ಕಂಡ, ದೂರದರ್ಶಿತ್ವ , ವಿಚಕ್ಷಣಾ ಶಕ್ತಿಯ ಆ ವಿಜ್ಞಾನಿಯೇ ಹೋಮಿ
ಜೆ ಭಾಭಾ. ಭಾರತದ ಬಳಿ ಯುರೇನಿಯಂ ಕಡಿಮೆ ಇದ್ದರೂ, ಅಪಾರ
ಥೋರಿಯಂ ಸಂಪತ್ತು ನಮ್ಮ ಮಣ್ಣಿನೊಳಗೇ ಅಡಗಿದೆ ಎಂಬುದನ್ನು ಅವರು ಬಹಳ ಬೇಗ ಗುರುತಿಸಿದ್ದರು.
“ಇಂದು ಸಂಪನ್ಮೂಲ ಕಡಿಮೆ ಇರಬಹುದು; ಆದರೆ ನಾಳೆಯ ಭಾರತ
ಶಕ್ತಿಶಾಲಿಯಾಗಬೇಕು” ಎಂಬ ಮಹಾಕನಸಿನೊಂದಿಗೆ 1954ರಲ್ಲಿ ಅವರು ಭಾರತದ
ಅಣುಶಕ್ತಿ ಭವಿಷ್ಯಕ್ಕೆ ಅಡಿಪಾಯ ಹಾಕಿದ ಮೂರು ಹಂತಗಳ ಯೋಜನೆಯನ್ನು ರೂಪಿಸಿದರು. ಭಾಭಾ ಅವರ
ಯೋಜನೆ ಕೇವಲ ವಿದ್ಯುತ್ ಉತ್ಪಾದನೆಗಾಗಿ ಅಲ್ಲ; ಅದು ಆತ್ಮನಿರ್ಭರ
ಮತ್ತು ವೈಜ್ಞಾನಿಕ ಭಾರತ ನಿರ್ಮಾಣದ ದಿಟ್ಟ ಕನಸಾಗಿತ್ತು.
ಮೊದಲ ಹಂತದಲ್ಲಿ ಯುರೇನಿಯಂ ಬಳಕೆ, ನಂತರ ಪ್ಲುಟೋನಿಯಂ ಉತ್ಪಾದನೆ, ಕೊನೆಯಲ್ಲಿ ಭಾರತದ ಅಪಾರ
ಥೋರಿಯಂ ಸಂಪತ್ತನ್ನು ಶಾಶ್ವತ ಶಕ್ತಿಯಾಗಿ ಪರಿವರ್ತಿಸುವ ಅವರ ದೂರದೃಷ್ಟಿತ್ವ ಆ ಕಾಲದಲ್ಲೇ ಜಗತ್ತಿಗೇ ಅಚ್ಚರಿ ಮೂಡಿಸಿತ್ತು. ಇಂದು ವಿಶ್ವವೇ ಶುದ್ಧಶಕ್ತಿ
ಹುಡುಕುತ್ತಿರುವಾಗ, ದಶಕಗಳ ಹಿಂದೆಯೇ ಥೋರಿಯಂ ಮಹತ್ವವನ್ನು ಕಂಡ ಭಾಭಾ
ಅವರ ದೂರದೃಷ್ಟಿ ಭಾರತದ ವಿಜ್ಞಾನ ಇತಿಹಾಸದಲ್ಲಿ ದೀಪಸ್ತಂಭದಂತೆ ಹೊಳೆಯುತ್ತಿದೆ. ಭಾರತವು ವಿಶ್ವದ
ಸುಮಾರು 25% ಥೋರಿಯಂ ಸಂಪತ್ತನ್ನು ಹೊಂದಿದೆ. ಕೇರಳ, ತಮಿಳುನಾಡು ಮತ್ತು ಒಡಿಶಾ ಕರಾವಳಿಯ ಮೊನಾಜೈಟ್ ಮರಳಿನಿಂದ ಥೋರಿಯಂ ಅನ್ನು ಪಡೆಯಲಾಗುತ್ತದೆ.
“ಭವಿಷ್ಯದ ಭಾರತವನ್ನು ಬೆಳಗಿಸುವ ಶಕ್ತಿ ಕಲ್ಲಿದ್ದಲು ಅಲ್ಲ, ಕಚ್ಚಾ ತೈಲವೂ ಅಲ್ಲ;
ನಮ್ಮ
ಮಣ್ಣಿನಲ್ಲೇ ಮಲಗಿರುವ ಥೋರಿಯಂ!” ಈ ಮಾತುಗಳು ಇಂದು ಕೇವಲ ಕನಸಾಗಿ ಉಳಿದಿಲ್ಲ. 2026ರ ಏಪ್ರಿಲ್ 6ರಂದು ತಮಿಳುನಾಡಿನ ಕಲ್ಪಕ್ಕಂನಲ್ಲಿ ಭಾರತದ ಸ್ವದೇಶಿ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್
ರಿಯಾಕ್ಟರ್ (PFBR) ಯಶಸ್ವಿಯಾಗಿ ಮೊದಲ ಕ್ರಾಂತಿಗಾತ್ರ ಅಥವಾ ಕ್ರಿಟಿಕಾಲಿಟಿ (first
criticality) ಹಂತವನ್ನು ತಲುಪಿದೆ. ಇದು ನಿಯಂತ್ರಿತ ಪರಮಾಣು ವಿದಳನಕ್ರಿಯೆಯು ನಿರಂತರವಾಗಿ ನಡೆಯುವ ಹಂತವಾಗಿದೆ. ಇದು ಭಾರತದ ಪರಮಾಣುಶಕ್ತಿ ಯೋಜನೆಯಲ್ಲಿನ ಐತಿಹಾಸಿಕ
ಮೈಲುಗಲ್ಲು.
ಈ ಸಾಧನೆ ಕೇವಲ ತಾಂತ್ರಿಕ ವಿಜಯವಲ್ಲ, ಇದು ಭಾರತದ ಶಕ್ತಿ ಸ್ವಾವಲಂಬನೆ, ವೈಜ್ಞಾನಿಕ ಸ್ವಾಭಿಮಾನ ಮತ್ತು ದೀರ್ಘಕಾಲೀನ ಇಂಧನ ಭದ್ರತೆಯಲ್ಲಿನ ಹೊಸ ಅಧ್ಯಾಯವಾಗಿದೆ. ಭಾರತದ ಪರಮಾಣುಶಕ್ತಿಯ ಪಿತಾಮಹರೆನಿಸಿದ ಹೋಮಿ ಜಹಾಂಗೀರ್ ಭಾಭಾ ಅವರು 1950ರ ದಶಕದಲ್ಲಿ ರೂಪಿಸಿದ ಮೂರು ಹಂತದ ಪರಮಾಣುಶಕ್ತಿ ಯೋಜನೆಯ ಎರಡನೇ ಹಂತವನ್ನು ಭಾರತವು ಈಗ ಅಧಿಕೃತವಾಗಿ ಪ್ರವೇಶಿಸಿದೆ.
ಹೋಮಿ ಭಾಭಾರವರ ಪರಮಾಣುಶಕ್ತಿ ಯೋಜನೆಯ ಮೂರು ಹಂತಗಳು:
1.
ಮೊದಲ
ಹಂತ: ನೈಸರ್ಗಿಕ ಯುರೇನಿಯಂ ಅನ್ನು ಇಂಧನವಾಗಿ ಬಳಸಿ ಸಂಪೀಡಿತ ಭಾರಜಲ
ಕ್ರಿಯಾಕಾರಿ (Pressurised Heavy Water
Reactors-PHWR) ಮೂಲಕ ವಿದ್ಯುತ್ ಉತ್ಪಾದನೆ. ಇಲ್ಲಿ ಪ್ಲುಟೋನಿಯಂ-239 ಉಪ ಉತ್ಪನ್ನವಾಗಿ ದೊರೆಯುತ್ತದೆ.
2.
ಎರಡನೇ
ಹಂತ (ಪ್ರಸ್ತುತ): ಫಾಸ್ಟ್ ಬ್ರೀಡರ್ ರಿಯಾಕ್ಟರ್ಗಳಲ್ಲಿ ಪ್ಲುಟೋನಿಯಂ ಬಳಸಿ ಹೆಚ್ಚು ಪರಮಾಣು
ಇಂಧನವನ್ನು ‘ಬ್ರೀಡ್’ ಮಾಡುವುದು (ಬಳಸುವುದಕ್ಕಿಂತ ಹೆಚ್ಚು ಉತ್ಪಾದಿಸುವುದು!!!). ಕಲ್ಪಕ್ಕಂನ PFBR ಈ ಹಂತವನ್ನು ಯಶಸ್ವಿಯಾಗಿ ತಲುಪಿದೆ.
3.
ಮೂರನೇ
ಹಂತ: ಥೋರಿಯಂ-232 ಅನ್ನು ಯುರೇನಿಯಂ-233 ಆಗಿ ಪರಿವರ್ತಿಸಿ ಭಾರೀ ಪ್ರಮಾಣದ ವಿದ್ಯುತ್ ಉತ್ಪಾದನೆ. ಇದು
ಸಾವಿರಾರು ವರ್ಷಗಳ ಕಾಲ ಶಕ್ತಿ ಭದ್ರತೆಯನ್ನು ಖಚಿತಪಡಿಸುತ್ತದೆ!!. ವಿಶ್ವಕ್ಕೇ
ನಾವು ಶಕ್ತಿಯನ್ನು ಒದಗಿಸಬಲ್ಲೆವು!!
ಈ ಯೋಜನೆಯು ವಿಶ್ವದಲ್ಲಿಯೇ ಅನನ್ಯವಾದುದು. ಬಹುತೇಕ ದೇಶಗಳು ಯುರೇನಿಯಂ ಆಧಾರಿತ ತಂತ್ರಜ್ಞಾನವನ್ನು ಅವಲಂಬಿಸಿದ್ದರೆ, ಭಾರತ ತನ್ನದೇ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವಾವಲಂಬನೆ ಸಾಧಿಸುವ ಮೇಕ್ ಇನ್ ಇಂಡಿಯಾ ದಾರಿಯನ್ನು ಆಯ್ಕೆ ಮಾಡಿತು.
“ಬ್ರೀಡರ್” ರಿಯಾಕ್ಟರ್: ಇಂಧನವನ್ನು ಸೃಷ್ಟಿಸುವ ಅದ್ಭುತ ತಂತ್ರಜ್ಞಾನ !!
ಸಾಮಾನ್ಯ ಪರಮಾಣು ರಿಯಾಕ್ಟರ್ಗಳು ಇಂಧನವನ್ನು ಬಳಸುತ್ತವೆ.
ಆದರೆ ಫಾಸ್ಟ್ ಬ್ರೀಡರ್ ರಿಯಾಕ್ಟರ್ಗಳು ಬಳಸುವುದಕ್ಕಿಂತ ಹೆಚ್ಚು ಇಂಧನವನ್ನು ಉತ್ಪಾದಿಸುತ್ತವೆ. ನಿಮಗೆ
ಇನ್ನೂ ಸರಳವಾಗಿ ಹೇಳಬೇಕೆಂದರೆ, ಒಂದು ಬೀಜವನ್ನು ಬಿತ್ತಿದರೆ ಒಂದು ಗಿಡ ಬೆಳೆಯುತ್ತದೆ. ಅದೇ ನೂರಾರು ಹೊಸ ಬೀಜಗಳನ್ನು ನೀಡುವ ಮರವಾಗಿ ಬೆಳೆಯುವಂತೆ!
ಕಲ್ಪಕ್ಕಂ PFBR
500 MWe ಸಾಮರ್ಥ್ಯದ್ದಾಗಿದೆ. ಇದು ಸೋಡಿಯಂ ಶೈತ್ಯನ ವ್ಯವಸ್ಥೆಯನ್ನು ಬಳಸುತ್ತದೆ ಮತ್ತು ಮಿಶ್ರ
ಆಕ್ಸೈಡ್ (MOX) ಇಂಧನವನ್ನು
ಬಳಸುತ್ತದೆ. ಇದು ಪ್ಲುಟೋನಿಯಂ ಬಳಸಿ ಕಾರ್ಯನಿರ್ವಹಿಸುತ್ತಾ, ಥೋರಿಯಂ ಹೊದಿಕೆಯ ಮೂಲಕ ಯುರೇನಿಯಂ-233 ಉತ್ಪಾದಿಸುತ್ತದೆ.
ಇದು ಮೂರನೇ ಹಂತದ ಬಾಗಿಲನ್ನು ತೆರೆಯುತ್ತದೆ.
ವಿಶ್ವದಲ್ಲಿ ವಾಣಿಜ್ಯ ಮಟ್ಟದ ಫಾಸ್ಟ್ ಬ್ರೀಡರ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ನಡೆಸುತ್ತಿರುವ ದೇಶಗಳು ಅತ್ಯಂತ ಕಡಿಮೆ. ರಷ್ಯಾದ ನಂತರ ಭಾರತ ಈ ಕ್ಷೇತ್ರದಲ್ಲಿ ಪ್ರಮುಖ ಸ್ಥಾನಕ್ಕೇರಿದೆ. ಇದು ಸಂಪೂರ್ಣ ಭಾರತೀಯ ತಂತ್ರಜ್ಞಾನ — ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ (IGCAR), ಭಾರತೀಯ ನಾಭಿಕಿಯ ವಿದ್ಯುತ್ ನಿಗಮ್ ಲಿಮಿಟೆಡ್ (Bharatiya Nabhikiya Vidyut Nigam Limited-BHAVINI) ಮತ್ತು ಡಿಪಾರ್ಟ್ಮೆಂಟ್ ಆಫ್ ಅಟಾಮಿಕ್ ಎನರ್ಜಿ (DAE) ಗಳ ಸಹಕಾರದ ಫಲ.
ಕಲ್ಪಕ್ಕಂ ಸಾಧನೆಯ ಮಹತ್ವ ಮತ್ತು ಸವಾಲುಗಳು
ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (Atomic Energy Regulatory Board-AERB) ಯ ಕಠಿಣ ಸುರಕ್ಷತಾ
ಪರೀಕ್ಷೆಗಳ ನಂತರವೇ 2026ರ ಏಪ್ರಿಲ್ 6ರಂದು ಸಂಜೆ 8:25ಕ್ಕೆ PFBR ಕ್ರಾಂತಿಗಾತ್ರ ಅಥವಾ ಕ್ರಿಟಿಕಾಲಿಟಿ ಹಂತವನ್ನು ತಲುಪಿದ್ದನ್ನು
ಘೋಷಿಸಲಾಯಿತು. 2004ರಲ್ಲಿ ಇದರ ನಿರ್ಮಾಣ ಆರಂಭವಾಗಿದ್ದು, ಹಲವು ವಿಳಂಬಗಳ ನಂತರ ಈಗ ಯಶಸ್ಸು ದೊರೆತಿದೆ. ಇದು ಭಾರತೀಯ ವಿಜ್ಞಾನಿಗಳ
ದಶಕಗಳ ಪರಿಶ್ರಮ, ತಾಳ್ಮೆ ಮತ್ತು
ನಿಖರತೆಗೆ ಸೋಲೊಪ್ಪದ
ಕೃತುಶಕ್ತಿಗೆ ಸಾಕ್ಷಿಯಾಗಿದೆ.
ಪ್ರಮುಖ ಲಾಭಗಳು:
·
ಅಪಾರ
ಥೋರಿಯಂ ಸಂಪತ್ತು: ಭಾರತ
ಜಗತ್ತಿನ ಪ್ರಮುಖ ಥೋರಿಯಂ ಭಂಡಾರಗಳಲ್ಲೊಂದು. ಇದು ದೀರ್ಘಕಾಲೀನ ಇಂಧನ ಭದ್ರತೆಗೆ ಬಲವಾದ ಆಧಾರ.
·
ಕಡಿಮೆ
ವಿಕಿರಣ ತ್ಯಾಜ್ಯ:
ಯುರೇನಿಯಂ ಆಧಾರಿತ ವ್ಯವಸ್ಥೆಗಳಿಗಿಂತ ದೀರ್ಘಕಾಲ ಅಪಾಯಕಾರಿ ವಿಕಿರಣ ತ್ಯಾಜ್ಯದ ಪ್ರಮಾಣ ಕಡಿಮೆಯಾಗುತ್ತದೆ.
·
ಕಡಿಮೆ
ಕಾರ್ಬನ್ ಉತ್ಸರ್ಜನೆ:
ಪರಿಸರ ಸ್ನೇಹಿ ಶಕ್ತಿಯಾಗಿ, ಭಾರತದ “ನೆಟ್ ಜೀರೋ–2070” ಗುರಿ ಸಾಧನೆಯಲ್ಲಿ ಮಹತ್ವದ
ಪಾತ್ರವಹಿಸಬಲ್ಲದು.
·
ನಿರಂತರ
ವಿದ್ಯುತ್ ಉತ್ಪಾದನೆ:
ಸೌರ ಮತ್ತು ಗಾಳಿ ಶಕ್ತಿಯಂತೆ ಹವಾಮಾನಕ್ಕೆ ಅವಲಂಬಿತವಾಗಿರದೆ, ದಿನದ 24
ಗಂಟೆಯೂ ಸ್ಥಿರ “ ಕನಿಷ್ಟ - ಬೇಸ್ಲೋಡ್” ವಿದ್ಯುತ್ ಒದಗಿಸುವ
ಸಾಮರ್ಥ್ಯ.
·
ಆಧುನಿಕ
ಸುರಕ್ಷತಾ ವ್ಯವಸ್ಥೆಗಳು:
ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬಹುಪದರ ರಕ್ಷಣಾ ಕ್ರಮಗಳಿಂದ ಹೆಚ್ಚಿನ ಭದ್ರತೆ ಸಾಧ್ಯ.
ಮುಂದಿನ ಹೆಜ್ಜೆಗಳು: AHWR ಮತ್ತು ಥೋರಿಯಂ ಆರ್ಥಿಕತೆ
ಈಗ ನಮ್ಮ ಗಮನ ಉನ್ನತೀಕರಿಸಿದ ಭಾರಜಲ ಕ್ರಿಯಾಕಾರಿ (Advanced Heavy
Water Reactor -AHWR) ಕಡೆಗೆ. ಇದು ಥೋರಿಯಂ ಆಧಾರಿತ ರಿಯಾಕ್ಟರ್ ಆಗಿದ್ದು, ಯಶಸ್ವಿಯಾದರೆ ಭಾರತವನ್ನು ಜಗತ್ತಿನ ಮೊದಲ ಪ್ರಮುಖ ಥೋರಿಯಂ ಆಧಾರಿತ
ಶಕ್ತಿ ಉತ್ಪಾದಕ ರಾಷ್ಟ್ರವಾಗಿಸುತ್ತದೆ. AHWRಯು ಥೋರಿಯಂ ನೇರವಾಗಿ ಬಳಸುವ ಸಾಮರ್ಥ್ಯ ಹೊಂದಿದೆ ಮತ್ತು
ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಗುರಿಗಳು ಸಾಕಾರವಾಗುತ್ತಿದ್ದಂತೆ- ವಿದ್ಯುತ್ ಕೊರತೆ ಇತಿಹಾಸವಾಗುತ್ತದೆ ಮತ್ತು ಭಾರತ “ಇಂಧನ ರಾಜ” ಎನಿಸಿಕೊಳ್ಳುತ್ತದೆ. 2031-32ರ ವೇಳೆಗೆ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 22.48
GWಗೆ
ಏರಿಸುವುದು (ಪ್ರಸ್ತುತ ಸುಮಾರು 8 GW) ಸಮೀಪದ
ಗುರಿಯಾಗಿದೆ. ಥೋರಿಯಂ ತಕ್ಷಣ ಇಂಧನವಲ್ಲ, ಆದರೆ ಅದನ್ನು
ಯುರೇನಿಯಂ-233ಗೆ ಪರಿವರ್ತಿಸಿದರೆ ಅದ್ಭುತ
ಶಕ್ತಿ ಮೂಲ. ಇದು ಹೆಚ್ಚು ದಕ್ಷತೆ, ಕಡಿಮೆ ತ್ಯಾಜ್ಯ, ಕಡಿಮೆ ವಿಕಿರಣ ಹೊಸೂಸುತ್ತದೆ.
ಈ
ಮಹತ್ವದ ಸಾಧನೆಯ ಹಿಂದೆ ಸಾವಿರಾರು ವಿಜ್ಞಾನಿಗಳು,
ಇಂಜಿನಿಯರ್ಗಳು ಮತ್ತು ತಂತ್ರಜ್ಞರ ನಿರಂತರ
ತಪಸ್ಸಿದೆ. ಪರಮಾಣುಶಕ್ತಿ ಕ್ಷೇತ್ರದಲ್ಲಿ ಅತಿಸಣ್ಣ ನಿರ್ಲಕ್ಷ್ಯವೂ
ದೊಡ್ಡ ಅಪಾಯಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಪ್ರತಿಯೊಂದು ಹಂತದಲ್ಲೂ ಸುರಕ್ಷತೆಗೆ ಅತಿಹೆಚ್ಚು
ಪ್ರಾಮುಖ್ಯತೆ ನೀಡಲಾಗಿದೆ. ವರ್ಷಗಳ ಕಾಲ ಪ್ರಯೋಗಾಲಯಗಳಲ್ಲಿ, ಸಂಶೋಧನಾ
ಕೇಂದ್ರಗಳಲ್ಲಿ ಮತ್ತು ಕ್ರಿಯಾಕಾರಿಗಳ ನೆರಳಿನಲ್ಲಿ ದುಡಿದ ಅವರ
ಪರಿಶ್ರಮವೇ ಇಂದು ಭಾರತದ ವೈಜ್ಞಾನಿಕ ಆತ್ಮವಿಶ್ವಾಸವಾಗಿದೆ.
“ದೂರದೃಷ್ಟಿ ಮತ್ತು ನಿರಂತರ ಪರಿಶ್ರಮವೇ ರಾಷ್ಟ್ರದ
ಭವಿಷ್ಯವನ್ನು ರೂಪಿಸುತ್ತದೆ.” ಇಂದು ಅನೇಕ ಯುವಕರು ತಂತ್ರಜ್ಞಾನ, ಐಟಿ ಕ್ಷೇತ್ರಗಳತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ ಮೂಲ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು
ಇಂಜಿನಿಯರಿಂಗ್ನಲ್ಲಿ ತೊಡಗಿಕೊಳ್ಳುವುದು ರಾಷ್ಟ್ರ ನಿರ್ಮಾಣಕ್ಕೆ ಅಗತ್ಯ.
ಭಾಭಾ,
ಸಾರಾಭಾಯಿ, ಕಲಾಂ ಅವರಂತಹ ವ್ಯಕ್ತಿಗಳು ಸೀಮಿತ ಸಂಪನ್ಮೂಲಗಳ ನಡುವೆಯೂ ದೊಡ್ಡ
ಕನಸುಗಳನ್ನು ನನಸು ಮಾಡಲು ದೃಢ ಸಂಕಲ್ಪ ಮಾಡಿದರು. ಇಂದಿನ ಯುವಕರು ಅವರನ್ನು ಹೆಜ್ಜೆಗಳ ಜಾಡನ್ನು
ಅನುಸರಿಸಿ, ಥೋರಿಯಂ ಯುಗವನ್ನು
ಪೂರ್ಣಗೊಳಿಸುವಲ್ಲಿ ಪಾತ್ರ ವಹಿಸಬೇಕಿದೆ. ಕಲ್ಪಕ್ಕಂನಲ್ಲಿ ಹೊತ್ತಿಸಿದ ಪರಮಾಣು ಜ್ವಾಲೆ ಕೇವಲ ಕ್ರಿಯಾಕಾರಿಗಷ್ಟೇ ಸೀಮಿತವಾಗಿಲ್ಲ. ಅದು
ಭಾರತದ ವೈಜ್ಞಾನಿಕ ಆತ್ಮವಿಶ್ವಾಸದ ದಿವ್ಯಜ್ಯೋತಿ. ಮುಂದಿನ ದಿನಗಳಲ್ಲಿ ಭಾರತದ ಮನೆಗಳನ್ನು ಬೆಳಗಿಸುವ ವಿದ್ಯುತ್ ಶಕ್ತಿಯನ್ನು ನಮ್ಮ
ಕರಾವಳಿಯ ಮಾನೋಜೈಟ್ ಮರಳಿನಲ್ಲಿರುವ ಥೋರಿಯಂನಿಂದ ಬರಬಹುದು — ಇದು ಈಗ ಕೇವಲ ಕನಸಲ್ಲ, ಸಾಕಾರವಾಗುತ್ತಿರುವ ವೈಜ್ಞಾನಿಕ ಸತ್ಯ. ಈ ಸಾಧನೆಯು ಭಾರತವನ್ನು
“ವಿಕಸಿತ ರಾಷ್ಟ್ರ”ದತ್ತ ಕೊಂಡೊಯ್ಯುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ನಮ್ಮ
ವಿಜ್ಞಾನಿಗಳಿಗೆ ಅಭಿನಂದನೆಗಳು. ಜೈ ಹಿಂದ್!!
