ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, September 4, 2021

ಸವಿಜ್ಞಾನ ಇ-ಪತ್ರಿಕೆಯ ಸೆಪ್ಟೆಂಬರ್ - 2021ರ ಲೇಖನಗಳು

 ಸವಿಜ್ಞಾನ ಇ-ಪತ್ರಿಕೆಯ ಸೆಪ್ಟೆಂಬರ್ - 2021ರ ಲೇಖನಗಳು

ಸಂಪಾದಕರ ಡೈರಿಯಿಂದ . . . . ರಾಮಚಂದ್ರ ಭಟ್ 
1.
 ಜೀವಶಾಸ್ತ್ರದ ಗುರು ತಿಲಕ, ಸಮಾಜ ಸೇವಾ ರತ್ನ - ಆಚಾರ್ಯ ಡಾಕ್ಟರ್‌  ಟಿ.ಎ. ಬಾಲಕೃಷ್ಣ ಅಡಿಗ - ರಾಮಚಂದ್ರ ಭಟ್ 
2.
 ಸಸ್ಯ ಸಗ್ಗದ ಸಹೃದಯನೊಂದಿಗೆ ಅವಿಸ್ಮರಣೀಯ ಅನುಭವ. - ವಿಜಯಕುಮಾರ್  
3.
 ಶಿಕ್ಷಣ ಕ್ಷೇತ್ರದ ಸೌಗಂಧಿಕಾ ಪುಷ್ಪ ಶಿಕ್ಷಣ ತಜ್ಞ ಡಾ. ಹೆಚ್.ಎಸ್‌.ಗಣೇಶಭಟ್ಟ - ಶ್ರೀನಿವಾಸ್ 
4.  ಸ್ಫೂರ್ತಿಯ ಚಿಲುಮೆ ರಾಷ್ಟ್ರಪ್ರಶಸ್ತಿ ವಿಜೇತ ನಾಗರಾಜ್ - ಲಕ್ಷ್ಮಿ ಪ್ರಸಾದ ನಾಯಕ್ 
5.
  ಸೂರ್ಯನ ಮೇಲೆ ಇರಲಿ ಭಕ್ತಿ, ಕೊಡುತ್ತಾನಂತೆ ಉಚಿತ ಸೌರಶಕ್ತಿ ! - ರೋಹಿತ್ ವಿ ಸಾಗರ್
6. ಓ ಓಝೋನ್‌ !! ಏನು ನಿನ್ನ ಮಹಿಮೆ?  - ಬಿ.ಎನ್. ರೂಪ
7.
  ಕಲ್ಲರಳಿ ಹೂವಾಗಿ, ಜೀವ ಸಂಕುಲಕೆ ತಾಯಾಗಿ...  - ತಾಂಡವಮೂರ್ತಿ.ಎ.ಎನ್,
8.
  ವಿಜ್ಞಾನ ಒಗಟುಗಳು- ಚಂದ್ರಿಕಾ ಆರ್. ಬಾಯರಿ
9. ವ್ಯಂಗ್ಯಚಿತ್ರಗಳು- ಶ್ರೀಮತಿ ಜಯಶ್ರೀ ಶರ್ಮ


ಸಂಪಾದಕರ ಡೈರಿಯಿಂದ . . . .

 ಸಂಪಾದಕರ ಡೈರಿಯಿಂದ . . . . 

 ಸವಿಜ್ಞಾನ’ ಇ-ಪತ್ರಿಕೆಯ ಸೆಪ್ಟಂಬರ್‌ ತಿಂಗಳ ಒಂಭತ್ತನೆಯ ವಿಶೇಷ ಸಂಚಿಕೆಗೆ ಎಲ್ಲಾ ವಿಜ್ಞಾನಾಸಕ್ತರಿಗೆ ಸ್ವಾಗತ. ಈ ಬಾರಿ ಶಿಕ್ಷಕರ ದಿನಾಚರಣೆಯ ಹಿನ್ನಲೆ ಸಂಚಿಕೆಗೆ ಹಲವು ವಿಶೇಷತೆಗಳೊಂದಿಗೆ ಹೊಸ ಮೆರುಗನ್ನು ತಂದು ಕೊಟ್ಟಿದೆ. ಮಹಾನ್‌ ಶಿಕ್ಷಕ, ಶ್ರೇಷ್ಠ ದಾರ್ಶನಿಕ,  ಪರಮ ತತ್ವಜ್ಞಾನಿ, ದಕ್ಷ ಆಡಳಿತಗಾರ, ಅಪರೂಪದ ಜ್ಞಾನದ ಗಣಿ ಎನಿಸಿದ ನಮ್ಮ ಹೆಮ್ಮೆಯ ದ್ವಿತೀಯ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್‌ ವಿಶ್ವವನ್ನೇ ಬೆಳಗಿದ ಮಹರ್ಷಿ. ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿರುವ ಶಿಕ್ಷಕರ ಸಂಖ್ಯೆ ಅಗಣಿತ.  ಇಂತಹ ಅವಿಚ್ಛಿನ್ನ ಋಷಿ ಪರಂಪರೆಯಲ್ಲಿ ಬಂದ ಮೂವರು ಆಚಾರ್ಯ ಶ್ರೇಷ್ಟರ ಜೊತೆಗೆ ನಾವು ಕಳೆದ ರಸನಿಮಿಷಗಳ ಅನುಭವವನ್ನು ಹಂಚಿಕೊಂಡಿದ್ದೇವೆ.  ಜನಪ್ರಿಯ ಲೇಖಕ ಹಾಗೂ ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿ, ಪ್ರೊ.ಕೆ.ಎನ್‌. ಗಣೇಶಯ್ಯನವರೊಂದಿಗೆ ನಡೆಸಿದ ಮಾತುಕತೆಯ ಸಾರ, ಸವಿಜ್ಞಾನದ ಪ್ರಧಾನ ಸಂಪಾದಕರಾದ ಡಾ.ಬಾಲಕೃಷ್ಣ ಅಡಿಗರೊಂದಿಗೆ ನಡೆಸಿದ ಸಂವಾದ, ಶ್ರೇಷ್ಠ ಶಿಕ್ಷಣ ತಜ್ಞರಾದ ಡಾ. ಹೆಚ್.‌ಎಸ್.‌ ಗಣೇಶಭಟ್ಟರೊಂದಿಗೆ ನಡೆಸಿದ ಸ್ಫೂರ್ತಿ ತುಂಬುವ ಸಂದರ್ಶನಗಳಿವೆ. ಇವುಗಳೊಂದಿಗೆ ಈ ಬಾರಿಯ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಸ್ನೇಹಿತ ಸಿ.ಎಂ. ನಾಗರಾಜ್‌ರವರ ಸಾಧನೆಯ ಪರಿಚಯಾತ್ಮಕ ಲೇಖನವಿದೆ.

ಇವುಗಳೊಂದಿಗೆ ವಿಶ್ವ ಓಝೋನ್‌ ದಿನಾಚರಣೆಯ ಕುರಿತ ಲೇಖನ, ಕಲ್ಲರಳಿ ಹೂವಾದ ಕಲ್ಲು ಹೂಗಳ ಕುರಿತ ಲೇಖನ, ಅಗಣಿತ ಸೌರಶಕ್ತಿಯ ಕುರಿತ ಲೇಖನಗಳಿವೆ. ಅಬಾಲ ವೃದ್ಧರನ್ನೂ ಮುದಗೊಳಿಸಬಲ್ಲ ಸ್ಥಿರ ಶೀರ್ಷಿಕೆಗಳಾದ ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳಿವೆ.    

ಈ ಬಾರಿ ಶಿಕ್ಷಕ ದಿನಾಚರಣೆಯಂದು ನಮ್ಮ ಸವಿಜ್ಞಾನ ಪತ್ರಿಕೆಯ ಸ್ನೇಹಿತರು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ವಿಜಯಕುಮಾರ್‌ ಹುತ್ತನಹಳ್ಳಿ ಹಾಗೂ ಅವರ ಪತ್ನಿ ಶೀಮತಿ ಚಂದ್ರಕಲಾರವರು ಜಿಲ್ಲಾಮಟ್ಟದ “ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಗೆ ಭಾಜನರಾದರೆ, ಲಕ್ಷ್ಮೀಪ್ರಸಾದ ನಾಯಕ್‌ರವರು “ಗುರುಶ್ರೇಷ್ಠ“ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಅನಿಲ್‌ ಕುಮಾರ್‌ ಸಿ. ಎನ್‌ ಹಾಗೂ ‌ಕೆ.ಟಿ. ಶಿವಕುಮಾರ್ರವರಿಗೆ ರೋಟರಿ ಸಂಸ್ಥೆ ನೀಡುವ “ನೇಷನ್‌ ಬಿಲ್ಡರ್‌” ಪ್ರಶಸ್ತಿ ಸಂದಿರುವುದು ಹೆಮ್ಮೆಯ ವಿಚಾರ. ಇವರೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಯ ಹಾರೈಕೆಗಳು.

ಲೇಖನಗಳನ್ನು ಓದಿ, ನಿಮ್ಮ ಅನಿಸಿಕೆಗಳನ್ನು ಬ್ಲಾಗ್‌ನಲ್ಲಿ ದಾಖಲಿಸಿ. ನಿಮಗೂ ಬರೆಯುವ ಇಚ್ಛೆಯಿದ್ದಲ್ಲಿ ನಮ್ಮನ್ನು  ಇ-ಮೇಲ್ ವಿಳಾಸದ (savijnana.tab@gmail.com) ಮೂಲಕ ಸಂಪರ್ಕಿಸಿ.

ರಾಮಚಂದ್ರಭಟ್‌ ಬಿ.ಜಿ.   

ಸಂಪಾದಕರು

ಜೀವಶಾಸ್ತ್ರದ ಗುರು ತಿಲಕ, ಸಮಾಜ ಸೇವಾ ರತ್ನ - ಆಚಾರ್ಯ ಡಾಕ್ಟರ್‌ ಟಿ.ಎ. ಬಾಲಕೃಷ್ಣ ಅಡಿಗ

ಜೀವಶಾಸ್ತ್ರದ ಗುರು ತಿಲಕ, ಸಮಾಜ ಸೇವಾ ರತ್ನ - ಆಚಾರ್ಯ ಡಾಕ್ಟರ್‌  ಟಿ.. ಬಾಲಕೃಷ್ಣ ಅಡಿಗ

ಸಂದರ್ಶಕರುರಾಮಚಂದ್ರ ಭಟ್ಬಿ.ಜಿ.

ಶ್ರೀನಿವಾಸ್‌ .

ಸವಿಜ್ಞಾನ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾಕ್ಟರ್ಟಿ.ಬಾಲಕೃಷ್ಣ ಅಡಿಗರು ಪ್ರಾಣಿಶಾಸ್ತ್ರದ ಪ್ರಾಧ್ಯಾಪಕರು, ಶಿಕ್ಷಣತಜ್ಞರು, ಸಂಘಟನಾ ಚತುರರು, ಲೇಖಕರು, ವಿಜ್ಞಾನ ಸಂವಹನಕಾರರು, ದಕ್ಷ ಆಡಳಿತಗಾರರು ಹಾಗೂ ನಮ್ಮ ನಡುವಿನ ಶ್ರೇಷ್ಠ ಆಚಾರ್ಯರು. ಜೀವಶಾಸ್ತ್ರದ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾದ, ಶಿಕ್ಷಕರ ಸ್ಫೂರ್ತಿಯ ಸೆಲೆಯಾದ ಡಾ.ಬಾಲಕೃಷ್ಣ ಅಡಿಗರು ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟು 50 ವರ್ಷಗಳು ತುಂಬಿದವು. ಈ ಸಾರ್ಥಕ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಸವಿಜ್ಞಾನ ಸಂಪಾದಕೀಯ ಮಂಡಲಿ ಅವರನ್ನು ಸಂದರ್ಶಿಸಿತು. ಅವರೊಂದಿಗೆ ಸಮಯ ಕಳೆಯುವುದೇ ಕಲಿಕೆಯ ಕಡಲಿಗೆ ಇಳಿದಂತೆ. ಅವರ ಬದುಕು ಇತರರಿಗೆ ಆದರ್ಶವಾಗಬಲ್ಲದು. 5 ದಶಕಗಳ ಶೈಕ್ಷಣಿಕ ಕೈಂಕರ್ಯ, ಅಪಾರ ಆಡಳಿತಾನುಭವ, ಹಲವಾರು ದಂತಕತೆಗಳ ಜೊತೆಗಿನ ಒಡನಾಟ, ಸಾಧನೆ ಹಾಗೂ ಸವಿಜ್ಞಾನ ಜೀವತಳೆದ ಮಾಹಿತಿಗಳನ್ನು ನಮ್ಮ ಓದುಗ ಬಂಧುಗಳಿಗೆ ಹಂಚುವ ಉದ್ದೇಶದಿಂದ ಈ ಸಂದರ್ಶನವನ್ನು ನಡೆಸಿದೆವು.

ಸಸ್ಯ ಸಗ್ಗದ ಸಹೃದಯನೊಂದಿಗೆ ಅವಿಸ್ಮರಣೀಯ ಅನುಭವ

ಸಸ್ಯ ಸಗ್ಗದ ಸಹೃದಯನೊಂದಿಗೆ ಅವಿಸ್ಮರಣೀಯ ಅನುಭವ.

ಹಲೋ ! ನಮಸ್ತೆ, ಯಾರು ಸರ್ಮಾತನಾಡೋದು ?

ನಮಸ್ತೆ, ನಾನು ಗಣೇಶಯ್ಯ ಮಾತನಾಡೋದು

ಓಓಓಓ!!!!!!!! ನನಗಾದ ಆನಂದಾಶ್ಚರ್ಯಗಳಿಗೆ ಮುಂದೆ ಒಂದು ಕ್ಷಣ ಮಾತುಗಳೇ ಹೊರಡಲಿಲ್ಲ. ನನ್ನ ಮಗಳು ಮತ್ತು ಮಡದಿಯ ಹರ್ಷೋದ್ಗಾರ ಸ್ವತಃ ಗಣೇಶಯ್ಯನವರಿಗೂ ಕೇಳಿಸಿತ್ತು. ಅಂದು ರಾತ್ರಿ ನಮ್ಮ ಸಂಭ್ರಮಕ್ಕೆ ಎಣೆಯಿರಲಿಲ್ಲ.

ವಿಜ್ಞಾನ ಶಿಕ್ಷಕರು ತಪ್ಪದೇ ಓದಬೇಕಾದ ಪುಸ್ತಕಸಸ್ಯಸಗ್ಗ”,  ಸ್ವತಃ ಗಣೇಶಯ್ಯನವರು ಕೈಗೊಂಡ, ಮಾರ್ಗದರ್ಶನ ನೀಡಿ ಶಿಷ್ಯರಿಂದ ಮಾಡಿಸಿದ ಸಸ್ಯ ಮತ್ತು ಪ್ರಾಣಿ ಲೋಕದ ಹಲವು ಮಹತ್ವದ ಸಂಶೋಧನೆಗಳ ಬಗೆಗಿನ ವಿಶಿಷ್ಟ ಪುಸ್ತಕಸಸ್ಯಸಗ್ಗ” ,  ʼಭ್ರಾತೃ ಹತ್ಯೆʼ,  ʼತಾಯಿ ಮಕ್ಕಳ ಕಲಹʼ, ʼಸ್ವಯಂವರʼ ಇಂತಹ ಮಾನವ ಲೋಕದ ವಿದ್ಯಮಾನಗಳು ಸಸ್ಯಗಳಲ್ಲೂ ಸಂಭವಿಸುತ್ತವೆ ಎಂದು ಸಂಶೋಧನೆಗಳ ಆಧಾರದಲ್ಲಿ ನಿರೂಪಿಸುವ ಜೊತೆಗೆ ಜೀವಜಗತ್ತಿನ ಹಲವು ಕೌತುಕಗಳ ಬಗೆಗೆ ಬೆಳಕು ಚೆಲ್ಲುವ, ನಮ್ಮ ಪರಿಸರದಲ್ಲಿ ನಾವೇ ಸಂಶೋಧಿಸಿಕೊಂಡ ಸಂಗತಿಗಳನ್ನು ಉದಾಹರಿಸುತ್ತಾ ನಮ್ಮ ಪರಿಸರದ ಬಗ್ಗೆ ನಾವು ಪಾಠ ಮಾಡಬೇಕಾದ ಅಗತ್ಯ ಮತ್ತು ಸಾಧ್ಯತೆಗಳನ್ನು ತೋರಿಸುವ ವಿಜ್ಞಾನ ಕ್ಷೇತ್ರದ ಹಲವು ಒಳಸುಳಿಗಳ ಪರಿಚಯ ಮಾಡುವ ಅದ್ಭುತ ಪುಸ್ತಕಸಸ್ಯಸಗ್ಗಆರನೇ ತರಗತಿಯ ನನ್ನ ಮಗಳಿಗೆ ಕೆಲವು ಕುತೂಹಲಕರ ವಿಷಯಗಳನ್ನು ಓದಿ ಹೇಳೋಣ ಎಂದುಕೊಂಡು ಪ್ರಾರಂಭಿಸಿದಾಗ ಅವಳು ಬಹಳ ಇಷ್ಟಪಟ್ಟು ಪಟ್ಟುಹಿಡಿದು ಪೂರ್ತಿ ಪುಸ್ತಕ ಓದಿಸಿಕೊಂಡು ಅರ್ಥಮಾಡಿಕೊಂಡು ಖುಷಿಪಟ್ಟದ್ದು ನನಗೂ ಆನಂದಾಶ್ಚರ್ಯಗಳಿಗೆ ಕಾರಣವಾಯ್ತು, ಇದೇ ಸಂಗತಿಯನ್ನು ಸನ್ಮಿತ್ರರಾದ ಶ್ರೀಯುತ ರಾಮಚಂದ್ರ ಭಟ್ಟರಲ್ಲೂ ಹಂಚಿಕೊಂಡಿದ್ದೆ ಅವರಿಗೂ ಖುಷಿಯಾಯ್ತು, ಅಲ್ಲದೇ ನಮ್ಮಸವಿಜ್ಞಾನಕ್ಕಾಗಿ ಶ್ರೀಯುತ‌          ಡಾ|| ಕೆ.ಎನ್ಗಣೇಶಯ್ಯನವರನ್ನು ಸಂದರ್ಶಿಸಿ, ಸಲಹೆ, ಸೂಚನೆ, ಮಾರ್ಗದರ್ಶನ ಪಡೆಯೋಣ ಎಂದರು. ನಾನು ಆಗಲಿ ಎಂದು ಭಯಮಿಶ್ರಿತ ಒಪ್ಪಿಗೆ ಸೂಚಿಸಿದ್ದೆ. ಏಕೆಂದರೆ, ಅಂಡಮಾನ್ನಲ್ಲಿ ದೊರೆತ ಎರಡು ಹೊಸ ಸಸ್ಯ ಪ್ರಬೇಧಗಳಿಗೆ ಗಣೇಶಯ್ಯನವರ ಹೆಸರಿನೊಂದಿಗೆ ವೈಜ್ಞಾನಿಕ ದ್ವಿನಾಮಕರಣ ಮಾಡಿದ್ದಾರೆಂದರೆ ಅವರ ಸಾಧನೆ ಎಷ್ಟೆಂದು ನಿಮಗೆ ನಾನು ಇನ್ನು ವಿಶೇಷವಾಗಿ ಹೇಳಬೇಕಿಲ್ಲ.

ಅಂತಹ ಅಪ್ರತಿಮ ವಿಜ್ಞಾನಿ, ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊಫೆಸರ್‌, ವೃತ್ತಿಯಲ್ಲಿ ತೊಡಗಿದ್ದಾಗ ಕನ್ನಡ ಬರೆಯುವ ಸಂಭವವಿಲ್ಲದಿದ್ದರಿಂದ ಸುಮಾರು 35 ವರ್ಷ ಕನ್ನಡವನ್ನೇ ಬರೆಯದಿದ್ದ ಆದರೆ ನಿವೃತ್ತಿಯ ನಂತರ ಬರೆಯತೊಡಗಿ ಸುಮಾರು 25 ಕ್ಕೂ ಹೆಚ್ಚು best seller ಗಳಾದ ಕಥಾಸಂಕಲನ, ರೋಚಕ, ಐತಿಹಾಸಿಕ, ವೈಜ್ಞಾನಿಕ ಕಾದಂಬರಿ, ವೈಚಾರಿಕ ಲೇಖನಗಳನ್ನು ಬರೆದು  ಕನ್ನಡ ಸಾಹಿತ್ಯಲೋಕದಲ್ಲಿ ಧಿಡೀರನೆ ಉದ್ಭವಿಸಿ ಶಾಶ್ವತವಾಗಿ ಉಳಿಯುವ ತಾರೆಯಾದ , ಜನಪ್ರಿಯತೆಯ ತುತ್ತ ತುದಿಯಲ್ಲಿರುವ, ಹೊಸದನ್ನು ಅರಸುತ್ತಾ ಸದಾ ಸುತ್ತಾಡುವ ಅವರು ನಮ್ಮ ನಿಲುಕಿಗೆ ಸಿಗುತ್ತಾರೆಯೇ ಎಂಬುದು ನನ್ನ ಅನಿಸಿಕೆಯಾಗಿತ್ತು. ಸವಿಜ್ಞಾನ ಬಳಗದಿಂದ ಮತ್ತೊಮ್ಮೆ ಕೋರಿಕೆ ಬಂದಾಗ ಆಗಲಿ ಪ್ರಯತ್ನಿಸೋಣ ಎಂದು ಧೈರ್ಯ ಮಾಡಿ ನನ್ನ ಪ್ರಾಮಾಣಿಕ ನುಡಿಗಳೊಂದಿಗೆ ಒಂದು e-mail ಮಾಡಿದೆ ರಾತ್ರಿ 10 ಗಂಟೆ ಸುಮಾರಿಗೆ, ಅದು ತಲುಪಿದ ಕೇವಲ 5 ನಿಮಿಷಗಳ ನಂತರ ಮೇಲೆ ಹೇಳಿದಂತೆ ಅವರಿಂದ ಕರೆ ಬಂದದ್ದು. ಗಣೇಶಯ್ಯನವರುತುಂಬಿದ ಕೊಡ ತುಳುಕುವುದಿಲ್ಲಎಂಬ ಗಾದೆ ಮಾತನ್ನು ನಿಜಮಾಡಿದ್ದು.

ನಮ್ಮ ಸವಿಜ್ಞಾನ  ಬಗ್ಗೆ ವಿಚಾರಿಸಿಕೊಂಡರು, ಶಿಕ್ಷಕರಾದ ನಾವುಗಳು ಭೇಟಿ ಬಯಸಿದ್ದರಿಂದ ಖಂಡಿತ ಬನ್ನಿ. ಆದರೆ ನಾನು ನಗರದಿಂದ ದೂರ ಇದ್ದೀನಿ. ಹೇಗೆ ಬರ್ತೀರಪ್ಪ ನೀವು ಎಂದು ನಮ್ಮ ಬಗ್ಗೆಯೇ ಕಾಳಜಿ ತೋರಿಸಿದರು, ದಿನಾಂಕ ಗೊತ್ತು ಮಾಡಿಕೊಳ್ಳಿ. ಸೂಕ್ತ ಸಮಯ ತಿಳಿಸುತ್ತೇನೆ ಎಂದರು, ನನಗೆ ಅವರ ನಿರಹಂಕಾರದ ದರ್ಶನ ಅಂದೇ ಆಗಲೇ ಆಯಿತು. ನಮ್ಮ ತಂಡದೊಂದಿಗೆ ಮಾತನಾಡಿ 17/08/2021 ಮಂಗಳವಾರ ಭೇಟಿ ನಿಗಧಿ ಮಾಡಿಕೊಂಡೆವು. ದಿನಾಂಕ ತಿಳಿಸಿದಾಗ ಬೆಳಿಗ್ಗೆ ಅಥವಾ ಮಧ್ಯಾಹ್ನ ಬನ್ನಿ ಸಂಜೆ ನಾನು ಸೈಕ್ಲಿಂಗ್ಮತ್ತು ಯೋಗ ಮಾಡಬೇಕು ಎಂದರು. ಮಧ್ಯಾಹ್ನ 2 ಗಂಟೆಗೆ ಭೇಟಿ ನಿಗದಿಯಾಯ್ತು, ನಾನು ನನ್ನ ಬಳಿ ಇರುವ ಅವರ ಎಲ್ಲಾ ಪುಸ್ತಕಗಳನ್ನು ತೆಗೆದುಕೊಂಡೆ. ವಿಶೇಷವಾಗಿಸಸ್ಯಸಗ್ಗವನ್ನು ಓದಿ ಕೆಲವು ಪ್ರಶ್ನೆಗಳನ್ನು ಗುರುತು ಮಾಡಿಕೊಂಡೆ.

YouTube ತೆರೆದು ಅವರ ಬಗ್ಗೆ ನೋಡಿದರೆ !  ಅವರ ಅನೇಕ ಸಂದರ್ಶನಗಳು ಅಚ್ಚುಕಟ್ಟಾಗಿ ತಯಾರಾಗಿ ಕೂತಿವೆ. ಸರಿ ಇಷ್ಟಾಗಿಯೂ ನಮಗೆ ನೀಡಿದ ಅವಕಾಶಕ್ಕೆ ಅವರಿಗೆ ಮನದಲ್ಲೇ ವಂದಿಸುತ್ತಾ ನಾನು, ನನ್ನ ಮಗಳು, ಮಡದಿ ಹೊರಟೆವು, ಶ್ರೀಯುತರುಗಳಾದ ರಾಮಚಂದ್ರ ಭಟ್‌, ಶ್ರೀನಿವಾಸ್ಮತ್ತು ಲಕ್ಷ್ಮೀಪ್ರಸಾದ್ನಾಯಕ್ಕೂಡ ಜೊತೆಯಾದರು. ನಿಗಧಿತ ಸಮಯಕ್ಕೆ ಮನೆ ತಲುಪಿದೆವು , ಸೆಕ್ಯುರಿಟಿ ಸಿಬ್ಬಂದಿ ಬಳಿ ಹೋಗಿ ಪ್ರವೇಶದ ಬಗ್ಗೆ ವಿಚಾರಿಸುತ್ತಿರುವಾಗಲೇ ಸ್ವತಃ ಗಣೇಶಯ್ಯನವರೇ ಸೆಕ್ಯೂರಿಟಿ ಸಿಬ್ಬಂದಿಗೆ ಕರೆ ಮಾಡಿ ನಮ್ಮನ್ನು ಒಳಗೆ ಬಿಡಲು ತಿಳಿಸಿದರು, ಅಲ್ಲದೆ ತಾವೇ ಮನೆ ಬಾಗಿಲಲ್ಲಿ ನಿಂತು ನಮ್ಮನ್ನು ನಗು ನಗುತ್ತಾ ಬರಮಾಡಿಕೊಂಡರು, ನಮ್ಮ ಅಳುಕನ್ನು ಹೋಗಲಾಡಿಸಿ ಆತ್ಮೀಯ ವಾತಾವರಣ ಮೂಡಿಸಿದರು, ಆದರ ಆತಿಥ್ಯ ನೀಡಿದರು. ಸುಂದರವಾದ ಇಡೀ ಮನೆ ತೋರಿಸಿದರು, ಸೂಕ್ತವಾದ ಸ್ಥಳದಲ್ಲಿ ಕುಳಿತು ಮಾತನಾಡಲು ಅನುವು ಮಾಡಿಕೊಟ್ಟರು. ಇಷ್ಟೆಲ್ಲಾ ಹೇಳುವ ಉದ್ದೇಶ ಏನೆಂದರೆ ನಮಗೆ ವಿಜ್ಞಾನಿಗಳ ಬಗ್ಗೆ, ಜನಪ್ರಿಯ ವ್ಯಕ್ತಿಗಳ ಬಗ್ಗೆ ಒಂದು ಅಭಿಪ್ರಾಯ ಏರ್ಪಟ್ಟಿರುತ್ತದೆ. ಅವರೆಲ್ಲಾ ನಮ್ಮ ನಿಲುಕಿಗೆ ಸಿಗದ ದಂತಗೋಪುರದಲ್ಲಿ ಕುಳಿತಿರುವ ವ್ಯಕ್ತಿಗಳು ಎಂದು, ಕೆಲವು ಸಂದರ್ಭಗಳಲ್ಲಿ ಅದು ನಿಜವೂ ಇರಬಹುದು. ಆದರೆ ಶ್ರೀಯುತ ಗಣೇಶಯ್ಯನವರು ನಮಗೆ ಎಲ್ಲಿಯೂ ಹಾಗೆ ಅನಿಸಲಿಲ್ಲ. ಹಿರಿಯಣ್ಣನಂತೆ ಕಂಡರು. ಮೇಲಿನ ವಿವರಗಳಲ್ಲಿ ಅವರ ವ್ಯಕ್ತಿತ್ವ ಕಟ್ಟಿಕೊಡುವುದು  ಮತ್ತು ನಮಗಾದ ಅನುಭವ ಹಂಚಿಕೊಳ್ಳುವುದು ನನ್ನ ಉದ್ದೇಶ. ಇನ್ನು ಅವರ ಬಗ್ಗೆ ವಿವರವಾದ ಮಾಹಿತಿ ನಿಮಗೆ ಸಿಕ್ಕೇ ಸಿಗುತ್ತದೆ, ನಮ್ಮ ಸಂದರ್ಶನದ ಇಡೀ ವಿಡಿಯೋವನ್ನು ಬ್ಲಾಗ್ನಲ್ಲಿ Upload ಮಾಡಲಾಗುತ್ತದೆ. ಆದರೆ ಅಂದಿನ ನಮ್ಮ ಸಾವಯವ ಅನುಭವ ದಾಟಿಸುವ ಪ್ರಯತ್ನ ಲೇಖನ.

ವಿಕಾಸವಾದ ಅವರ ನೆಚ್ಚಿನ ವಿಷಯ, ನನ್ನ ಮಗಳೂ ವಿಕಾಸವಾದದ ಬಗೆಗೆ ಕುತೂಹಲಿ, ನಿಮ್ಮ ಬರಹಗಳನ್ನು ಇಷ್ಟಪಡುತ್ತಾಳೆ ಎಂದಾಗ ಅವಳನ್ನು ಕರೆದು ಪ್ರೀತಿಯಿಂದ ಪಕ್ಕ ಕೂರಿಸಿಕೊಂಡರು “may be you are my youngest fan” ಅದೆಲ್ಲಾ ಅರ್ಥ ಆಗುತ್ತೇನಮ್ಮ ನಿನಗೆ ಎಂದು ಕೇಳಿ, ಅವಳು ಹೌದು ಎಂದಾಗ ಖುಷಿಪಟ್ಟರು. ಕರೋನ ಕಾಲದಲ್ಲಿ ಆತ್ಮೀಯರನ್ನು ಕಳೆದುಕೊಂಡ ಬಗ್ಗೆ ಮಾತನಾಡಿದರು, ಅರ್ಧಾಂಗಿ ಎಂಬ ಪದಕ್ಕೆ ಅನ್ವರ್ಥರಾಗಿದ್ದ ಸ್ವತಃ ವಿಜ್ಞಾನಿಯೂ ಆಗಿದ್ದು ಇವರ ಜೊತೆ ಹಲವು ಸಂಶೋಧನೆಗಳಲ್ಲಿ ಭಾಗಿಯಾಗಿದ್ದ, ತಮ್ಮ ಪತ್ನಿ ವೀಣಾರನ್ನು ಕಳೆದುಕೊಂಡದ್ದರ ಬಗ್ಗೆ ಮಾತನಾಡಿದರು, ಮಾತಿನಲ್ಲಿ ನೋವಿತ್ತು ಗೋಳಾಟವಿರಲಿಲ್ಲ. ಆಗ ನನಗೆ ಅವರೊಬ್ಬ ಝೆನ್ಗುರುವಿನಂತೆ ಕಂಡರು. ತಮ್ಮ ಆತ್ಮೀಯ ಮಿತ್ರ ಉಮಾಶಂಕರ್ಬಗ್ಗೆ ಮಾತನಾಡಿದರು, ಜಂಟಿಯಾಗಿ ನಮ್ಮಷ್ಟು ಸಂಶೋಧನೆಗಳನ್ನು ಬಹುಷಃ ಬೇರೆ ಯಾರೂ ಮಾಡಿರಲಿಕ್ಕಿಲ್ಲ ಎಂದು ಹೆಮ್ಮೆ ಪಟ್ಟರು. ಸಾಮಾನ್ಯವಾಗಿ ಸಂಶೋಧನೆಯ ಸ್ವಾಮ್ಯಕ್ಕಾಗಿ ತಿಕ್ಕಾಟ ಬಂದು ಇಂತಹ ಜಂಟಿ ಸಂಶೋಧನೆಗಳು ಹೆಚ್ಚು ಕಾಲ ಮುಂದುವರೆಯುವುದಿಲ್ಲ. ಆದರೆ ಅವರ ಮತ್ತು ಉಮಾಶಂಕರ್ಮಧ್ಯೆ ಅಂತಹ ಅಹಂ ಗೆ ಅವಕಾಶವೇ ಇರಲಿಲ್ಲ. “ನಿನ್ನ ಹೆಸರು ಮೊದಲು ಹಾಕು ಅಂತ ಅವನು, ಇಲ್ಲ ನಿನ್ನ ಹೆಸರು ಮೊದಲು ಹಾಕು ಅಂತ ನಾನುಹೀಗೆ ಜಗಳ ಡುತ್ತಿದ್ದೆವು ಎಂದರು. ಕೊನೆಗೆ ಅವರ ಪತ್ನಿಯ ಸಲಹೆಯಂತೆ toss ಹಾಕುವುದರ ಮೂಲಕ ಯಾರ ಹೆಸರು ಮೊದಲು ಎಂದು ನಿರ್ಧರಿಸುತ್ತಿದ್ದರಂತೆ, ಇಂತಹ ನಿಸ್ವಾರ್ಥಗುಣ, ಮನ್ನಣೆಗಾಗಿ ಹಪಹಪಿಸದ ಗುಣ ನಿಜಕ್ಕೂ ಅನುಕರಣೀಯ ಅನಿಸಿತು. ಯಾವುದೇ ಪಂಥಕ್ಕೆ ಒಳಗಾಗದೆ ಸತ್ಯಾನ್ವೇಷಣೆಯೇ ಪರಮೋದ್ದೇಶವಾಗಿ ಬರೆಯುತ್ತಿರುವ ಶ್ರೀಯುತರು ಇಂದಿಗೆ ತೀವ್ರ ಅಗತ್ಯವುಳ್ಳ ಚಿಂತಕರಾಗಿ ಕಂಡರು. ವಿಜ್ಞಾನಿ ಎಂದ ಕೂಡಲೇ ಹಳೆಯದನ್ನು ಮೌಢ್ಯವೆಂದು ಸಾರಾಸಗಟಾಗಿ ತಿರಸ್ಕರಿಸದೆ ಅದರಲ್ಲಿ ಇರಬಹುದಾದ ವೈಜ್ಞಾನಿಕ ಅಂಶಗಳನ್ನು ಗುರುತಿಸಿ ಗೌರವಿಸುವ ಅವರ ವಿಶಾಲ ಮನೋಭಾವ ನಾವು ರೂಢಿಸಿಕೊಳ್ಳತಕ್ಕದ್ದೆಸಿತು. ಅವರ ಸಂಶೋಧನೆಗಳು ಸರಳವಾಗಿ ಕಂಡರೂ ಕೈಗೊಳ್ಳುವಾಗ ಇದಿರಾಗುವ ಸಂಕಷ್ಟಗಳನ್ನು ಹಂಚಿಕೊಂಡರು, ಆದರೆ ವಿದ್ಯಾರ್ಥಿಗಳಿಗೆ ಸರಳವಾಗಿ ಅದೇ ಪ್ರಯೋಗಗಳನ್ನು ತೋರಿಸಬಹುದು ಎಂಬ ಸಾಧ್ಯತೆಯನ್ನು ತಿಳಿಸಿಕೊಟ್ಟರು. ಇದು ವಿಜ್ಞಾನ ಶಿಕ್ಷಕರಿಗೆ ತುಂಬಾ ಅವಶ್ಯವೆನಿಸಿತು.

(ಉದಾ: ಸಸ್ಯಗಳಲ್ಲಿ ಸ್ವಯಂವರ ಸಂಶೋಧನೆಯಲ್ಲಿ ಪರಾಗರೇಣುಗಳು ಅಂಡಪಾತ್ರೆಯ ಆಮ್ಲತೆಯನ್ನು ಕಡಿಮೆ ಮಾಡುತ್ತವೆ ಎನ್ನುವ ಅಂಶವನ್ನು ಸಂಶೋಧನಾ ಮಟ್ಟದಲ್ಲಿ ಸೂಕ್ಷ್ಮ ಉಪಕರಣಗಳನ್ನು ಬಳಸಿ ನಿಖರವಾಗಿ ಅಳೆಯಬೇಕಾಗುತ್ತದೆ. ಆದರೆ ಶಾಲೆಯಲ್ಲಿ ಲಿಟ್ಮಸ್ಪರೀಕ್ಷೆಯಿಂದ ಅದನ್ನು ತೋರಿಸಬಹುದು) ಹೀಗೆ ಅವರೊಂದಿಗೆ ಮಾತನಾಡುತ್ತಾ ಹೋದಂತೆ ಶಿಕ್ಷಕರಾಗಿ ತರಗತಿ ಮಟ್ಟದಲ್ಲಿ ಮಾಡಬಹುದಾದ ವೈಜ್ಞಾನಿಕ ಚಟುವಟಿಕೆಗಳ ಬಗ್ಗೆ ವಿಫುಲವಾದ ಮಾಹಿತಿ ದೊರೆಯುತ್ತಾ ಹೋಯಿತು. ಶಿಕ್ಷಕರಾಗಿ ವಿದ್ಯಾರ್ಥಿಗಳೊಂದಿಗೆ ನಡೆದುಕೊಳ್ಳಬೇಕಾದ ರೀತಿ, ಸಹೋದ್ಯೋಗಿಗಳ ಬಗ್ಗೆ ನಮ್ಮ ವರ್ತನೆ, ಇಡೀ ವ್ಯವಸ್ಥೆಯನ್ನು ನೋಡುವ ರೀತಿ, ಸರ್ವಾಂರ್ಯಾಮಿಯಾದ ವಿಕಾಸವಾದವೇ ದೇವರು ಎಂಬ ನಿಲುವು ಹೀಗೆ ಹಲವು ಉನ್ನತಮಟ್ಟದ ಆಲೋಚನೆಗಳು ನಮ್ಮನ್ನು ಪ್ರೇರೇಪಿಸಿದವು. ಹೆಚ್ಚಿನ ವಿವರಗಳಿಗೆ ಸಂದರ್ಶನದ ವಿಡಿಯೋ ನೋಡಿ.

ವಿಜ್ಞಾನಿಯಾದವನು ಹೇಗೆ ತನ್ನ ಸುತ್ತಮುತ್ತಲ ಪರಿಸರದಿಂದ ಸಂಶೋಧನೆಗೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ವಿಷಯ ತಿಳಿಸಿದರು. ಬೇರೆ ಬೇರೆ ಓದು ಹೇಗೆ ಇದಕ್ಕೆ ನೆರವಾಗುತ್ತದೆ ಎಂಬುದನ್ನೂ ತಿಳಿಸಿದರು.

( ಉದಾ : ಖಗೋಳಶಾಸ್ತ್ರದ ಪುಸ್ತಕ Perfect Symmetry ಓದುತ್ತಿದ್ದಾಗ ಒಂದು ದಿನ ಹೊಂಗೆ ಮರದ ಕೆಳಗೆ ನಿಂತು ನೋಡಿದಾಗ ಇರುವೆಗಳಿಗೆ ಹೊಂಗೆ ಮರವೇ ಒಂದು ವಿಶ್ವದಂತೆ ಅಂತಹ ಮರದಲ್ಲಿ ಅದು ಸುತ್ತಾಡಿ ಹೇಗೆ ತನ್ನ ಗೂಡಿಗೆ ಮರಳುತ್ತದೆ ಎಂಬ ಪ್ರಶ್ನೆ ಮೂಡಿ ಬಗೆಗೇ ಸಂಶೋಧನೆ ಕೈಗೊಂಡದ್ದು )

ವಿಜ್ಞಾನಿ ಅಥವಾ ಯಾವುದೇ ವ್ಯಕ್ತಿ ಹೇಗೆ ಉತ್ತಮ ಆಡಳಿತಗಾರನೂ, ತನ್ನ ನಿಲುವುಗಳನ್ನು ಸಮರ್ಥಿಸಿಕೊಳ್ಳಲು ಹೇಗೆ ಉತ್ತಮ ಸಂವಹನಕಾರನೂ ಆಗಿರಬೇಕು ಎಂದು ತಿಳಿಸಿದರು.

( ಉದಾ: ಪಶ್ಚಿಮ ಘಟ್ಟಗಳ ಸಸ್ಯಸಂಪತ್ತಿನ ಮೌಲ್ಯಮಾಪನ , ನಕ್ಷೆ ತಯಾರಿ ಕಾರ್ಯ ಅಸಾಧ್ಯ, ಅಪ್ರಾಯೋಗಿಕ ಎಂದು ಪ್ಪಿಗೆ ನೀಡದಿದ್ದಾಗ ಈಜಿಪ್ಟನ ಗೀಜಾ ಪಿರಮಿಡ್ತೋರಿಸಿ, ಅಂದು ಅದು ಸಾಧ್ಯವಾದರೆ ಇಂದು ಇದು ಅಸಾಧ್ಯವಲ್ಲ ಎಂದು ತಾರ್ಕಿಕವಾಗಿ ವಾದ ಮಾಡಿ ಒಪ್ಪಿಗೆ ಪಡೆದು ಸರ್ವೆಯಲ್ಲಿ ಯಶಸ್ವಿಯಾದದ್ದು ) ಜೀವ ಸಂಪದ ಮತ್ತು ಸಸ್ಯ ಸಂಪದ ಎಂಬ CD ಗಳು ಲಭ್ಯವಿದ್ದು ಆಸಕ್ತ ಶಿಕ್ಷಕರು ಅವನ್ನು ಪಡೆದು ತರಗತಿಗಳಲ್ಲಿ ಬಳಸಬಹುದು.

ಸಜ್ಜನರ ಸಂಗವದು ಹೆಜ್ಜೇನು ಸವಿದಂತೆಮಾತು ಅನುಭವಕ್ಕೆ ನಿಲುಕಿದ ಸಂದರ್ಶನ ಇದಾಗಿತ್ತು. ಅವರ ವಿಶಾಲ ಮನೋಭಾವ, ವೈಜ್ಞಾನಿಕ ಚಿಂತನೆ, ಸತ್ಯಾನ್ವೇಷಣೆ, ಸಕಾರಾತ್ಮಕತೆ, ನಮಗೆ ದೊರೆತ ದೊಡ್ಡ ಕೊಡುಗೆಯಾಯಿತು. ಅವಕಾಶ ಸಿಕ್ಕಾಗ ಶಿಕ್ಷಕರೊಂದಿಗೆ ಮಾತನಾಡಲು ಪ್ರೀತಿಯಿಂದ ಒಪ್ಪಿಕೊಂಡರು, “ಏರಿದವನು ಸಣ್ಣವನಿರಲೇಬೇಕೆಲೆ ಎಂಬ ಮಾತನು ಸಾರುವನುಎಂಬ ಮಾತಿನ ಸಾಕಾರ ಮೂರ್ತಿಯಂತೆ ಕಂಡರು. ಕೊನೆಗೆ ತಾವೆ ಕಾಫಿ ಮಾಡಿ ನಮಗೆಲ್ಲಾ ನೀಡಿದರುಪ್ರೀತಿಯ ಸಹಜಗೆ, ಸಸ್ಯಸಗ್ಗಕ್ಕೆ ನೀನೂ ಪ್ರವೇಶ ಪಡೆಯುವೆ ಎಂದು ಹಾರೈಸುತ್ತಾಎಂದು ಹರಸಿ Autograph ನೀಡಿ ಬೀಳ್ಕೊಟ್ಟರು.ಅವರ ಮಾತುಗಳಲ್ಲೇ ಹೇಳಬೇಕೆಂದರೆ ಇರುವೆಗೆ ಹೊಂಗೆ ಮರವೊಂದು ವಿಶಾಲ ವಿಶ್ವದಂತೆ, ನಾನೊಂದು ಇರುವೆ ಅವರೊಂದು ವಿಶಾಲ ವೃಕ್ಷ, ಸಂಪೂರ್ಣ ಪರಿಚಯ ನೀಡಿದ್ದೇನೆಂಬ ವಿಶ್ವಾಸವಿಲ್ಲ. ಎಲ್ಲಾ ಓದುಗರಲ್ಲಿ ಕಳಕಳಿಯ ಮನವಿ ಅವರ ಸಸ್ಯಸಗ್ಗ ತಪ್ಪದೆ ಓದಿ. ಇತರ ಪುಸ್ತಕಗಳನ್ನೂ ಓದಿ. NCF ಆಶಯ Integrated Learning ಗೆ ತುಂಬಾ ಅನುಕೂಲವಾಗುತ್ತದೆ.  ನಾವು ಅವರ ಮನೆಯಿಂದ ಹೊರಟೆವು. ಅವರು ನಮ್ಮ ಮನದಲ್ಲಿ ಮನೆ ಮಾಡಿದರು


Interview with Sri K N Ganeshaiah by Savijnana team 


ವಿಜಯಕುಮಾರ್.‌ ಹೆಚ್‌.ಜಿ

ಸಹಶಿಕ್ಷಕರು

.ಪ್ರೌ.ಶಾಲೆ, ಕಾವಲ್ಭೈರಸಂದ್ರ,

ಬೆಂಗಳೂರು ಉತ್ತರ ವಲಯ - 03