ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Saturday, July 4, 2026

ಗೋಪುರದಿಂದೆಗರಿ ಗೋತಾ ಹೊಡೆದರು!

 ಗೋಪುರದಿಂದೆಗರಿ ಗೋತಾ ಹೊಡೆದರು!

(ಡಾ|| ಎಂ.ಜೆ. ಸುಂದರ್ ರಾಮ್)


ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ವಿಮಾನಗಳು ಬಳಕೆಗೆ ಬಂದು, ಉಡಾವಣೆಯ ಯುಗ ಆಗತಾನೇ ಪ್ರಾರಂಭವಾಗಿತ್ತು. ಆಗಾಗ ಅಪಘಾತಗಳು ಸಂಭವಿಸುತ್ತಿದ್ದವು. ಅಪಘಾತಗಳಿಂದ ಪಾರಾಗಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಿದ್ದವು. ಇಂತಹ ಒಂದು ಪ್ರಯತ್ನವೇ ಪ್ಯಾರಾಶೂಟ್ (parachute) ನ ಪ್ರವೇಶ. ಪ್ಯಾರಾಶೂಟ್‌ಗಳನ್ನು ಅಂದು ಬಿಚ್ಚಿದ ಛತ್ರಿಯ ರೂಪದಲ್ಲಿ ಬಳಸಲಾಗುತ್ತಿತ್ತು. ಆದರೆ ಕಡಿಮೆ ಎತ್ತರದಲ್ಲಿ ಹಾರುತ್ತಿದ್ದ ವಿಮಾನದಿಂದ ಧುಮುಕಲು ಉಪಯೋಗಿಸಬಹುದಾದಂತಹ ಪ್ಯಾರಾಶೂಟ್‌ಗಳು ಇರಲಿಲ್ಲ.

ಆಸ್ಟ್ರಿಯ ಮೂಲದ ಫ್ರಾಂಜ್ ರೀಚೆಲ್ಟ್ (Franz Reichelt) ಎಂಬ ದರ್ಜಿ ವೈಮಾನಿಕ ಅಪಘಾತಗಳ ಕಥೆಗಳನ್ನು ಕೇಳಿದ್ದರು. ಇಂತಹ ಅಪಘಾತಗಳಿಂದ ಪಾರಾಗಲು ಹೊಸ ವಿನ್ಯಾಸದ ಪ್ಯಾರಾಶೂಟ್ ಸೂಟನ್ನು ರೂಪಿಸಲು ತೀರ್ಮಾನಿಸಿದರು. ಈ ಸೂಟು ಸಾಮಾನ್ಯ ಉಡುಗೆಯಂತೆಯೇ ಇತ್ತು. ಆದರೆ ಇದಕ್ಕೆ ಕೆಲವು ಕಂಬಿಗಳನ್ನು ಅಳವಡಿಸಲಾಗಿತ್ತು. ತಲೆಯ ಮೇಲೆ ಹರಡಲು ರೇಷ್ಮೆ ಬಟ್ಟೆಯಿಂದ ಛತ್ರಿಯಂತೆ ರಚಿಸಲಾಗಿತ್ತು. ಕೆಲವೆಡೆ ರಬ್ಬರನ್ನು ಅಳವಡಿಸಲಾಗಿದ್ದು, ಇದರಿಂದ ಬಟ್ಟೆ ಹರಡಿಕೊಳ್ಳಲು ಅಥವಾ ಸಂಕುಚಿತಗೊಳ್ಳಲು ಅನುಕೂಲವಾಗಿತ್ತು.

ಅವರ ಸೂಟನ್ನು ವೀಕ್ಷಿಸಿದ ಜನ ರೀಚೆಲ್ಟ್ರನ್ನು ಹಾರುವ ದರ್ಜಿ (flying tailor) ಎಂದೇ ಕರೆಯಲಾರಂಭಿಸಿದರು. ವಿಮಾನ ಅಪಘಾತಕ್ಕೊಳಗಾದಾಗ ತಾವು ವಿನ್ಯಾಸಗೊಳಿಸಿದ ಸೂಟನ್ನು ಧರಿಸಿ ಹೊರಗೆ ಹಾರಿದರೆ ಅದು ಪ್ಯಾರಾಶೂಟ್‌ನಂತೆ ಹರಡಿ, ಗಾಳಿಯಲ್ಲಿ ತೇಲಿ, ನಿಧಾನವಾಗಿ ನೆಲಕ್ಕಿಳಿಯುತ್ತದೆ ಎಂದು ಅವರು ವಿವರಿಸಿದರು. ತಮ್ಮ ಈ ಸೂಟನ್ನು ಕೃತಕ ದೇಹ (dummy body) ಒಂದಕ್ಕೆ ಲಗತ್ತಿಸಿ ಅದನ್ನು ತಮ್ಮ ಮನೆಯ ಐದನೇ ಮಹಡಿಯಿಂದ ಕೆಳಗೆ ಎಸೆದಾಗ ಅದರ ರೇಷ್ಮೆ ಉಡುಗೆ ಹಕ್ಕಿಯ ರೆಕ್ಕೆಯಂತೆ ವಿಶಾಲವಾಗಿ ಹರಡಿಕೊಂಡು, ಆ ಕೃತಕ ದೇಹ ಹಗುರವಾಗಿ ಗಾಳಿಯಲ್ಲಿ ತೇಲುತ್ತ ನೆಲದ ಮೇಲೆ ಹಾಯಾಗಿ ಬಂದಿಳಿಯಿತು. ಅವರು ಯೋಜಿಸಿದ್ದ ಪ್ಯಾರಾಶೂಟ್ 70 ಕಿಲೋಗ್ರಾಂ ತೂಕವಿದ್ದು, 6 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿತ್ತು.

ತಾವು ನಿರ್ಮಿಸಿದ್ದ ಪ್ಯಾರಾಶೂಟ್ ನಮೂನೆಯನ್ನು ಅಲ್ಲಿಯ ಉಡಾವಣಾ ಕ್ಲಬ್‌ಗೆ ಕೊಟ್ಟು, ಅದನ್ನು ಪರೀಕ್ಷಿಸಿ ನೋಡಬೇಕೆಂದು ಕೇಳಿಕೊಂಡರು. ಆದರೆ ಅದರ ರೇಷ್ಮೆಯ ಛತ್ರಿ ಸಾಕಷ್ಟು ಬಲವಾಗಿಲ್ಲದಿದ್ದರಿಂದ ಅದನ್ನು ಬಳಸಲು ಯೋಗ್ಯವಾಗಿಲ್ಲವೆಂದೂ, ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕೆಂದೂ ಕ್ಲಬ್‌ನ ಅಧಿಕಾರಿಗಳು ರೀಚೆಲ್ಟ್‌ಗೆ ಬುದ್ಧಿವಾದ ಹೇಳಿದರು.

1911ರಲ್ಲಿ ಕರ್ನಲ್ ಲಾಲೆನ್ಸ್ (Col. Lalance) ಎಂಬ ಸೇನಾಧಿಕಾರಿಯೊಬ್ಬರು, ಮೂರು ವರ್ಷಗಳೊಳಗೆ ಸುರಕ್ಷಿತ ಪ್ಯಾರಾಶೂಟನ್ನು ತಯಾರಿಸುವವರಿಗೆ 10,000 Francs ಬಹುಮಾನ ನೀಡುವುದಾಗಿ ಘೋಷಿಸಿದರು. ತಯಾರಿಸುವ ಪ್ಯಾರಾಶೂಟ್‌ನ ತೂಕ 25 ಕಿಲೋಗ್ರಾಂಗಳನ್ನು ಮೀರಬಾರದೆಂಬ ಷರತ್ತನ್ನೂ ವಿಧಿಸಿದರು. ಇದರಿಂದ ಆಕರ್ಷಿತರಾದ ರೀಚೆಲ್ಟ್ ತಮ್ಮ ಪ್ಯಾರಾಶೂಟ್ ಸೂಟ್‌ನ ತೂಕವನ್ನು ಕಷ್ಟಪಟ್ಟು 25 ಕಿಲೋಗ್ರಾಂಗಳಿಗೆ ಇಳಿಸಿದರು. ಆದರೆ ಅದರ ವಿಸ್ತೀರ್ಣವನ್ನು 12 ಚದರ ಮೀಟರ್‌ಗಳಿಗೆ ಹೆಚ್ಚಿಸಿದರು. ಪರೀಕ್ಷೆ ನಡೆಸಿದಾಗ ಅದು ಸರಿಯಾಗಿ ಹರಡಿಕೊಳ್ಳದೆ ಕುಸಿದುಬಿತ್ತು. ಕೃತಕ ದೇಹಗಳಿಗೆ ಕಟ್ಟಿ ಮೇಲಿಂದ ಇಳಿಬಿಟ್ಟಾಗ ಅವು ಹಗುರವಾಗಿ ಇಳಿಯದೆ ಕರ್ಕಶವಾಗಿ ನೆಲಕ್ಕೆ ಬಿದ್ದು ಒಡೆದವು.

ಇದರಿಂದ ಬೇಸರಗೊಂಡ ರೀಚೆಲ್ಟ್ ತಾವು ಪರಿವರ್ತಿಸಿದ ಪ್ಯಾರಾಶೂಟನ್ನು ತಾವೇ ಸ್ವತಃ ಪರೀಕ್ಷಿಸಲು ಮುಂದಾದರು. ತಾವು ತಯಾರಿಸಿದ ಪ್ಯಾರಾಶೂಟ್ ಸೂಟನ್ನು ಧರಿಸಿಕೊಂಡು 8–10 ಮೀಟರ್ ಎತ್ತರದಿಂದ ಹುಲ್ಲಿನ ಮೆದೆಯ ಮೇಲೆ ಧುಮುಕಿದರು. ಆಗಲೂ ಛತ್ರಿಯಂತೆ ಹರಡಿಕೊಳ್ಳಬೇಕಾಗಿದ್ದ ಪ್ಯಾರಾಶೂಟ್‌ನ ರೇಷ್ಮೆ ಬಟ್ಟೆ ಹರಡಿಕೊಳ್ಳದೆ ನಿಷ್ಕ್ರಿಯವಾಗಿಯೇ ಉಳಿಯಿತು. ರೀಚೆಲ್ಟ್ ದೊಪ್ಪನೆ ಕೆಳಗೆ ಬಿದ್ದರು. ಹುಲ್ಲಿನ ಆಸರೆಯಿದ್ದುದರಿಂದ ಅವರಿಗೆ ಗಂಭೀರ ಗಾಯಗಳಾಗದೆ ಪಾರಾದರು. ಇದೇ ರೀತಿ ಮತ್ತೊಮ್ಮೆ ಸುಮಾರು 8 ಮೀಟರ್ ಎತ್ತರದಿಂದ ತಮ್ಮ ಪ್ಯಾರಾಶೂಟ್ ಕಟ್ಟಿಕೊಂಡು ಧುಮುಕಲು ಹೋಗಿ ನೆಲದ ಮೇಲೆ ಬಿದ್ದು ಕಾಲು ಮುರಿದುಕೊಂಡರು.

ಇಷ್ಟೆಲ್ಲ ಅನಾಹುತಗಳಾದರೂ ತಮ್ಮ ಪ್ಯಾರಾಶೂಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಗೊತ್ತಿದ್ದರೂ ರೀಚೆಲ್ಟ್ ಸ್ವಲ್ಪವೂ ಎದೆಗುಂದಲಿಲ್ಲ. ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರು. ಪ್ಯಾರಿಸ್‌ನ ಈಫೆಲ್ ಗೋಪುರದಿಂದ ತಮ್ಮ ಪ್ಯಾರಾಶೂಟನ್ನು ಪರೀಕ್ಷಿಸುವುದಾಗಿ ತಿಳಿಸಿ ಅಲ್ಲಿಯ ಅಧಿಕಾರಿಗಳಿಗೆ ಪತ್ರ ಬರೆದರು. ಅವರಿಗೆ ಅನುಮತಿ ನೀಡಲಾಯಿತು. 1912ರ ಫೆಬ್ರುವರಿ 4ರಂದು, ಭಾನುವಾರ ಬೆಳಿಗ್ಗೆ 7 ಗಂಟೆಗೆ ತಮ್ಮ ಇಬ್ಬರು ಸ್ನೇಹಿತರೊಂದಿಗೆ ರೀಚೆಲ್ಟ್ ಈಫೆಲ್ ಗೋಪುರಕ್ಕೆ ಕಾರಿನಲ್ಲಿ ಬಂದಿಳಿದರು. ಬರುವಾಗಲೇ ತಾವು ತಯಾರಿಸಿದ್ದ ಪ್ಯಾರಾಶೂಟ್ ಸೂಟ್ ಧರಿಸಿಕೊಂಡಿದ್ದರು. ತಮ್ಮ ಎರಡು ಕೈಗಳನ್ನು ಮೇಲೆತ್ತಿ ಬೀಸಿದಾಗ ಪ್ಯಾರಾಶೂಟ್ ಸುಮಾರು 30 ಚದರ ಮೀಟರ್‌ಗಳಷ್ಟು ಹರಡಿಕೊಂಡು, ಛತ್ರಿಯಂತಿದ್ದ ಮೇಲ್ಭಾಗ ಸುಮಾರು 5 ಮೀಟರ್ ಎತ್ತರಕ್ಕೆ ಎದ್ದುನಿಂತಿತು. ಆಗ ಅಲ್ಲಿಯ ಹವಾಮಾನ 0°C (32°F) ಆಗಿದ್ದು, ತಣ್ಣನೆಯ ಗಾಳಿ ಬೀಸುತ್ತಿತ್ತು.

ರೀಚೆಲ್ಟ್ ತಮ್ಮ ಪ್ಯಾರಾಶೂಟನ್ನು dummy bodyಗೆ ಕಟ್ಟಿ ಪರೀಕ್ಷೆ ನಡೆಸುವರೆಂದೇ ಈಫೆಲ್ ಗೋಪುರದ ಅಧಿಕಾರಿಗಳು ಅವರಿಗೆ ಅನುಮತಿ ನೀಡಿದ್ದರು. ಆದರೆ ಅವರು ಪ್ಯಾರಾಶೂಟ್ ಸೂಟನ್ನು ತಾವೇ ಧರಿಸಿ ಬಂದಿರುವುದನ್ನು ಕಂಡ ಅವರ ಸ್ನೇಹಿತರು ಬೆಚ್ಚಿಬಿದ್ದರು. ತಾವೇ ಗೋಪುರದಿಂದ ಧುಮುಕುವ ಉದ್ದೇಶವನ್ನು ರೀಚೆಲ್ಟ್ ಯಾರಿಗೂ ತಿಳಿಸದೆ ಅಷ್ಟರವರೆಗೆ ಗೌಪ್ಯವಾಗಿಟ್ಟಿದ್ದರು.

ಅವರ ಮನಸ್ಸಿನ ಇಂಗಿತವನ್ನು ಅರಿತ ಸ್ನೇಹಿತರು ಈ ದುಸ್ಸಾಹಸಕ್ಕೆ ಕೈಹಾಕಬಾರದೆಂದು ಎಷ್ಟೋ ಬಾರಿ ಮನವಿ ಮಾಡಿದರು. ಅವರನ್ನು ತಡೆಯಲು ಸಾಕಷ್ಟು ಪ್ರಯತ್ನಿಸಿದರು. ಆದರೆ ರೀಚೆಲ್ಟ್ ಸ್ವಲ್ಪವೂ ಜಗ್ಗಲಿಲ್ಲ. ತಮ್ಮ ಪ್ಯಾರಾಶೂಟ್ ಯಶಸ್ವಿಯಾಗಿ ಕಾರ್ಯನಿರ್ವಹಿಸುವುದೆಂಬ ಅಚಲ ವಿಶ್ವಾಸವನ್ನು ವ್ಯಕ್ತಪಡಿಸಿದರು.

72 ಕೆಜಿ ತೂಕದ ನನ್ನ ದೇಹ ಮತ್ತು ನನ್ನ ನೆಚ್ಚಿನ ಪ್ಯಾರಾಶೂಟ್—ಇವೆರಡೂ ನಿಮ್ಮೆಲ್ಲರ ಸಂಶಯಗಳಿಗೆ ಉತ್ತರ ನೀಡಲಿವೆ. ಕಾದು ನೋಡಿ.” ಎಂದು ಆತ್ಮವಿಶ್ವಾಸದಿಂದ ಘೋಷಿಸಿದರು.

ಈ ಸುದ್ದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ಷಣಾರ್ಧದಲ್ಲೇ ಹರಡಿತು. ನೂರಾರು ಜನ ಈಫೆಲ್ ಗೋಪುರದ ಸುತ್ತ ಜಮಾಯಿಸಿದರು. ಸುಮಾರು 57 ಮೀಟರ್ ಎತ್ತರದಲ್ಲಿದ್ದ ಮೊದಲ ಮಹಡಿಯ ವೇದಿಕೆಯಿಂದ ಧುಮುಕಲು ರೀಚೆಲ್ಟ್ ನಿರ್ಧರಿಸಿದರು. ಗೋಪುರವನ್ನು ಹತ್ತುವ ಮೊದಲು ಅಲ್ಲಿದ್ದ ಜನರ ಕಡೆಗೆ ಕೈಬೀಸಿ ಮುನ್ನಡೆದರು. ಜನರು ಚಪ್ಪಾಳೆ ತಟ್ಟಿ ಅವರನ್ನು ಪ್ರೋತ್ಸಾಹಿಸಿದರು.


ಗೋಪುರದ ಮೊದಲ ಮಹಡಿಗೆ ತಲುಪಿದ ನಂತರ ಒಂದು ಸ್ಟೂಲ್ ಮೇಲೆ ನಿಂತು, ಅದರ ಸಹಾಯದಿಂದ ಅಂಚಿನ ಗೋಡೆಯ ಮೇಲೆ ಏರಿದರು. ತಮ್ಮ ಪ್ಯಾರಾಶೂಟ್ ಅನ್ನು ಮತ್ತೊಮ್ಮೆ ಸರಿಪಡಿಸಿಕೊಂಡರು. ಗಾಳಿ ಯಾವ ದಿಕ್ಕಿಗೆ ಬೀಸುತ್ತಿದೆ ಎಂಬುದನ್ನು ತಿಳಿಯಲು ಒಂದು ಸಣ್ಣ ಕಾಗದದ ತುಂಡನ್ನು ಕೆಳಗೆ ಬಿಟ್ಟರು. ಸುಮಾರು ಇಪ್ಪತ್ತು ಸೆಕೆಂಡುಗಳ ಕಾಲ ಅಂಚಿನ ಮೇಲೆ ಸ್ಥಿರವಾಗಿ ನಿಂತಿದ್ದರು. ಅವರ ಮುಖದಲ್ಲಿ ಯಾವುದೇ ಆತಂಕ ಕಾಣಿಸಲಿಲ್ಲ. ಮುಗುಳ್ನಗೆ ಇನ್ನೂ ಹಾಗೆಯೇ ಇತ್ತು.

ಅಲ್ಲಿದ್ದ ಜನರು ಉಸಿರು ಬಿಗಿಹಿಡಿದು ನೋಡುತ್ತಿರುವಾಗ, ಇದ್ದಕ್ಕಿದ್ದಂತೆ ಅವರು ತಮ್ಮ ಎರಡೂ ಕೈಗಳನ್ನು ಚಾಚಿಕೊಂಡು, Spider-Manನಂತೆ ಮುಂದೆ ಜಿಗಿದರು.

ಮೊದಲ ಕ್ಷಣದಲ್ಲಿ ಎಲ್ಲರೂ ಸಂಭ್ರಮದಿಂದ ಚಪ್ಪಾಳೆ ತಟ್ಟಿದರು. ಆದರೆ ಆ ಸಂತೋಷ ಕೆಲವೇ ಕ್ಷಣಗಳಲ್ಲಿ ಆತಂಕವಾಗಿ ಮಾರ್ಪಟ್ಟಿತು. ಏಕೆಂದರೆ ರೀಚೆಲ್ಟ್‌ನ ಪ್ಯಾರಾಶೂಟ್ ಸಂಪೂರ್ಣವಾಗಿ ತೆರೆದುಕೊಳ್ಳಲೇ ಇಲ್ಲ. ಅದು ಅರ್ಧದಷ್ಟು ಮಾತ್ರ ತೆರೆದು ಕೂಡಲೇ ಅವರ ದೇಹದ ಸುತ್ತ ಸುತ್ತಿಕೊಂಡಿತು.

ಕೆಲವೇ ಸೆಕೆಂಡುಗಳಲ್ಲಿ ಅವರು ಭಾರೀ ವೇಗದಲ್ಲಿ ಕೆಳಗೆ ಬಿದ್ದುಹೋದರು. ಬಿದ್ದ ರಭಸಕ್ಕೆ ಅವರ ದೇಹಕ್ಕೆ ತೀವ್ರ ಪೆಟ್ಟು ಬಿತ್ತು. ತಲೆಬುರುಡೆ ಹಾಗೂ ಬೆನ್ನೆಲುಬು ಮುರಿದವು. ಮೂಗು, ಕಿವಿ ಮತ್ತು ಬಾಯಿಯಿಂದ ರಕ್ತಸ್ರಾವವಾಯಿತು. ಅಲ್ಲಿದ್ದ ಜನರು ಕ್ಷಣಕಾಲ ದಿಗ್ಭ್ರಮೆಯಿಂದ ನಿಶ್ಚಲರಾದರು.

ತಕ್ಷಣ ವೈದ್ಯರು ಪರಿಶೀಲಿಸಿದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಅವರು ತೀವ್ರ ಆಂತರಿಕ ಗಾಯಗಳಿಂದ ಮೃತಪಟ್ಟಿರುವುದು ದೃಢಪಟ್ಟಿತು.

ರೀಚೆಲ್ಟ್ ಅವರ ಪ್ರಯತ್ನ ವಿಫಲವಾಯಿತು. ಆದರೆ ಅವರ ಸಾಹಸ ವ್ಯರ್ಥವಾಗಲಿಲ್ಲ. ಈ ಘಟನೆ ನಂತರ ವಿಮಾನ ಸುರಕ್ಷತೆ, ಪ್ಯಾರಾಶೂಟ್ ವಿನ್ಯಾಸ ಮತ್ತು ಪರೀಕ್ಷಾ ವಿಧಾನಗಳ ಬಗ್ಗೆ ವಿಜ್ಞಾನಿಗಳು ಹಾಗೂ ಇಂಜಿನಿಯರ್‌ಗಳು ಹೆಚ್ಚು ಎಚ್ಚರಿಕೆಯಿಂದ ಅಧ್ಯಯನ ನಡೆಸಲು ಪ್ರೇರಣೆ ದೊರೆಯಿತು. ಸುರಕ್ಷಿತ ಪ್ಯಾರಾಶೂಟ್‌ಗಳ ಅಭಿವೃದ್ಧಿಗೆ ಈ ಘಟನೆ ಒಂದು ಪ್ರಮುಖ ಪಾಠವಾಗಿ ಪರಿಣಮಿಸಿತು.

ವಿಜ್ಞಾನದ ಇತಿಹಾಸದಲ್ಲಿ ರೀಚೆಲ್ಟ್ ಅವರನ್ನು ಯಶಸ್ಸಿಗಾಗಿ ಅಲ್ಲ, ಪ್ರಯತ್ನಿಸಲು ಹೆದರದ ವ್ಯಕ್ತಿಯಾಗಿ ನೆನಪಿಸಿಕೊಳ್ಳಲಾಗುತ್ತದೆ. ವಿಜ್ಞಾನದಲ್ಲಿ ಪ್ರತಿಯೊಂದು ಹೊಸ ಆವಿಷ್ಕಾರದ ಹಿಂದೆ ಅನೇಕ ವಿಫಲ ಪ್ರಯತ್ನಗಳು ಅಡಗಿರುತ್ತವೆ. ಆದರೆ ಪ್ರತಿಯೊಂದು ವೈಫಲ್ಯವೂ ಮುಂದಿನ ಯಶಸ್ಸಿಗೆ ದಾರಿದೀಪವಾಗುತ್ತದೆ ಎಂಬುದಕ್ಕೆ ಅವರ ಬದುಕು ಒಂದು ಸ್ಮರಣೀಯ ಉದಾಹರಣೆಯಾಗಿದೆ. 


ಬಹುಮುಖ ಪ್ರತಿಭೆಯ ಡಾ. ನವೀನ್ ಕುಮಾರ್

ಬಹುಮುಖ ಪ್ರತಿಭೆಯ ಡಾ. ನವೀನ್ ಕುಮಾರ್

                                                                                                              ಲೇಖನ : ಶಶಿಕುಮಾರ್ ಬಿ.ಎಸ್.

(2025ನೇ ಸಾಲಿನ ಸಿ.ಎನ್.ಆರ್. ರಾವ್ ಔಟ್‌ಸ್ಟ್ಯಾಂಡಿಂಗ್ ಸೈನ್ಸ್ ಟೀಚರ್ ಅವಾರ್ಡ್ ಪುರಸ್ಕೃತ ವಿಜ್ಞಾನ ಶಿಕ್ಷಕ ಡಾ. ನವೀನ್ ಕುಮಾರ್ ಆರ್.ಯು. ಅವರ ಕಿರು ಪರಿಚಯ )

"ಪೊಲೀಸ್ ವೃತ್ತಿಗಿಂತ ಶಿಕ್ಷಕ ವೃತ್ತಿಯೇ ಶ್ರೇಷ್ಠ" ಎಂಬ ದೃಢ ನಂಬಿಕೆಯಿಂದ ಪೊಲೀಸ್ ವೃತ್ತಿಯನ್ನು ತ್ಯಜಿಸಿ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಡಾ. ನವೀನ್ ಕುಮಾರ್ ಆರ್.ಯು. ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 18 ವರ್ಷಗಳ ಕಾಲ ಸೇವೆ ಸಲ್ಲಿಸಿ, ಕಳೆದ ಸಾಲಿನಿಂದ ತುಮಕೂರು ಜಿಲ್ಲೆಯ ತಿಪಟೂರಿನ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ದಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸಾಧನಾ ಪಥವನ್ನು ಪರಿಚಯಿಸುವುದು ಸಂತಸದ ಸಂಗತಿಯಾಗಿದೆ.

ಡಾ. ನವೀನ್ ಕುಮಾರ್ ಅವರು ತಮ್ಮ ಸ್ವರಚಿತ ವಿಜ್ಞಾನ ಗೀತೆಗಳ ಮೂಲಕ ರಾಜ್ಯದಾದ್ಯಂತ ಚಿರಪರಿಚಿತರಾಗಿದ್ದಾರೆ. ವಿಜ್ಞಾನದ ಯಾವುದೇ ಕ್ಲಿಷ್ಟಕರ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಹಾಗೂ ದೀರ್ಘಕಾಲ ನೆನಪಿನಲ್ಲಿ ಉಳಿಯುವಂತೆ ಅದನ್ನು ಲಾವಣಿ, ಜಾನಪದ ಮತ್ತು ಹರಿಕಥೆ ಶೈಲಿಯ ಗೀತೆಗಳಾಗಿ ರೂಪಿಸಿ, ಲಯಬದ್ಧವಾಗಿ ಹಾಡುತ್ತಾ ಬೋಧಿಸುತ್ತಾರೆ. ಈ ವಿನೂತನ ಬೋಧನಾ ವಿಧಾನ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮತ್ತು ಕುತೂಹಲವನ್ನು ಬೆಳೆಸುತ್ತಿದೆ. ಈ ಗಾಯನ ಕಲೆ ಅವರಿಗೆ ತಂದೆಯಿಂದ ಬಂದ ಅಮೂಲ್ಯ ಪರಂಪರೆಯಾಗಿದೆ.

ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಅವರು ಹಾಡುಗಾರ, ಕವಿ, ಲೇಖಕ, ನಾಟಕಕಾರ, ನಟ, ನಿರ್ದೇಶಕ ಹಾಗೂ ಸಮಾಜಮುಖಿ ಚಿಂತಕರಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ.

ಶಿಕ್ಷಕ ವೃತ್ತಿಗೆ ಸೇರಿದ ದಿನದಿಂದಲೂ ವಿಜ್ಞಾನ ಪಠ್ಯಕ್ಕೆ ಅನುಗುಣವಾದ ಗೀತೆಗಳ ರಚನೆ, ಕಿರುಚಿತ್ರಗಳ ನಿರ್ಮಾಣ, ನಾಟಕಗಳ ಸೃಜನ, ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ತಂಬಾಕು ನಿರ್ಮೂಲನೆ, ಪ್ಲಾಸ್ಟಿಕ್ ಮುಕ್ತ ಪರಿಸರ, ರೈತರಲ್ಲಿ ವೈಜ್ಞಾನಿಕ ಕೃಷಿ ಅರಿವು, ಶಾಲಾ ಸ್ವಚ್ಛತೆ, ಶೌಚಾಲಯ ಬಳಕೆ, ಹಾಗೂ ಪಠ್ಯಕ್ಕೆ ಪೂರಕವಾದ ಬೋಧನಾ ಸಾಮಗ್ರಿಗಳ ತಯಾರಿಕೆ ಸೇರಿದಂತೆ ಅನೇಕ ಸೃಜನಾತ್ಮಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ನಾಲ್ಕು ಗೋಡೆಗಳ ನಡುವೆ ಪಾಠ ಮಾಡುವುದಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸದೆ, ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಪರಿಸರ ಕಾಳಜಿ, ವೈಜ್ಞಾನಿಕ ಮನೋಭಾವ, ವೈಯಕ್ತಿಕ ಆರೋಗ್ಯ, ತಂಬಾಕು ನಿಯಂತ್ರಣ, ಮಾಲಿನ್ಯ ನಿಯಂತ್ರಣ, ಗಾಳಿ, ನೀರು, ಮಣ್ಣು ಮತ್ತು ಅರಣ್ಯ ಸಂರಕ್ಷಣೆ, ನಾಡು-ನುಡಿ ಪ್ರೀತಿ, ದೇಶಭಕ್ತಿ, ಶಿಕ್ಷಣದ ಮಹತ್ವ, ಶಿಶುಹತ್ಯೆ, ಭ್ರೂಣಹತ್ಯೆ, ಬಾಲ್ಯವಿವಾಹ, ಮಹಿಳಾ ಸಬಲೀಕರಣ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಸ್ವಚ್ಛತೆ ಹಾಗೂ ಕೊರೊನಾ ಜಾಗೃತಿ ಮುಂತಾದ ವಿಷಯಗಳ ಕುರಿತು ಜಾನಪದ ಹಾಗೂ ಲಾವಣಿ ಶೈಲಿಯ ಗೀತೆಗಳನ್ನು ರಚಿಸಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಇದುವರೆಗೆ ಅವರು ಪ್ರಕಟಿಸಿರುವ "ಗೀತಾ ವಿಜ್ಞಾನ" ಕೃತಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ವಿಜ್ಞಾನವನ್ನು ಹಾಡಿನ ಮೂಲಕ ಸುಲಭವಾಗಿ ಕಲಿಯಲು ನೆರವಾಗುವುದರ ಜೊತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.

ಇದಲ್ಲದೆ "ಬಾ ಮರಳಿ ಗೂಡಿಗೆ", "ನನಗಿಹುದೊಂದಾಸೆ" ಹಾಗೂ "ಔತಣ ಈ ಹೃದಯಕೆ" ಕವನ ಸಂಕಲನಗಳ ಮೂಲಕ ಪರಿಸರ ಪ್ರೀತಿ, ಸಾಮಾಜಿಕ ಕಳಕಳಿ, ನಾಡು-ನುಡಿ-ಜಲ ಸಂರಕ್ಷಣೆ, ಮಾನವೀಯ ಮೌಲ್ಯಗಳು, ಮಹಿಳಾ ಸಬಲೀಕರಣ, ಬಾಲ್ಯವಿವಾಹ ತಡೆ, ಭ್ರೂಣಹತ್ಯೆ ವಿರೋಧ, ಪರಿಸರ ಸ್ನೇಹಿ ಹಬ್ಬಗಳ ಆಚರಣೆ, ಆರೋಗ್ಯ ಕಾಳಜಿ ಹಾಗೂ ಶಿಶು ಗೀತೆಗಳಂತಹ ಅನೇಕ ಮೌಲ್ಯಯುತ ಸಂದೇಶಗಳನ್ನು ಸಮಾಜಕ್ಕೆ ನೀಡಿದ್ದಾರೆ.

ಶಾಲಾ ವಿದ್ಯಾರ್ಥಿಗಳಿಗಾಗಿ ಶಿಕ್ಷಣದ ಮಹತ್ವ, ಪರಿಸರ ಸಂರಕ್ಷಣೆ, ಜೀವವೈವಿಧ್ಯ, ಕೃಷಿಯ ಮಹತ್ವ, ಆಹಾರದ ಮೌಲ್ಯ, ವರದಕ್ಷಿಣೆ ನಿರ್ಮೂಲನೆ, ಮಹಿಳಾ ಶೋಷಣೆ, ಭ್ರೂಣಹತ್ಯೆ, ಬಾಲ್ಯವಿವಾಹ, ಸ್ವಚ್ಛತೆ ಹಾಗೂ ಆರೋಗ್ಯದ ಕುರಿತು ಕಿರುನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಜೊತೆಗೆ ಪ್ಲಾಸ್ಟಿಕ್ ಮರುಬಳಕೆ, ತ್ಯಾಜ್ಯ ನಿರ್ವಹಣೆ, ನೀರಿನ ಸಂರಕ್ಷಣೆ ಮತ್ತು ಶೌಚಾಲಯ ಬಳಕೆಯ ಕುರಿತು ಕಿರುಚಿತ್ರಗಳನ್ನು ನಿರ್ಮಿಸಿ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಶಿಕ್ಷಕರಾಗಿ ಗಾಯನ, ಪ್ರಬಂಧ, ಭಾಷಣ, ನಾಟಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದಿರುವ ಅವರು, ಇದೇ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಲು ನೆರವಾಗಿದ್ದಾರೆ. ಕೃಷಿ ಹಾಗೂ ಪರಿಸರ ಸಂಪನ್ಮೂಲಗಳ ಕುರಿತು ವಿವಿಧ ಯೋಜನೆಗಳನ್ನು ಸಿದ್ಧಪಡಿಸಿ ರಾಜ್ಯಮಟ್ಟದಲ್ಲಿ ಮಂಡಿಸಲು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಮಾರ್ಗದರ್ಶನ ನೀಡಿದ್ದಾರೆ.

"ಪವಾಡ ರಹಸ್ಯ ಬಯಲು" ಕಾರ್ಯಕ್ರಮದ ಮೂಲಕ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯವನ್ನು ಡಾ. ನವೀನ್ ಕುಮಾರ್ ಅವರು ನಿರಂತರವಾಗಿ ನಡೆಸುತ್ತಿದ್ದಾರೆ. ಬೇವಿನ ಮರದಿಂದ ಹಾಲಿನಂತಹ ದ್ರವ ಹೊರಬರುವುದರ ಹಿಂದಿರುವ ವೈಜ್ಞಾನಿಕ ಕಾರಣ, ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಕ್ಕೆ ಸಂಬಂಧಿಸಿದ ಮೂಢನಂಬಿಕೆಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ವಿಡಿಯೋಗಳು, ಉಪನ್ಯಾಸಗಳು ಹಾಗೂ ಜಾಗೃತಿ ಜಾಥಾಗಳ ಮೂಲಕ ಜನರಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸುತ್ತಿದ್ದಾರೆ.

ಹೆಣ್ಣುಮಕ್ಕಳ ವೈಯಕ್ತಿಕ ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಋತುಚಕ್ರದ ಬಗ್ಗೆ ಇರುವ ಮೂಢನಂಬಿಕೆಗಳನ್ನು ನಿವಾರಿಸಲು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಉಚಿತ ಮೆನ್ಸ್ಟ್ರುವಲ್ ಹೈಜಿನ್ ಕಿಟ್‌ಗಳನ್ನು ವಿತರಿಸುವುದರ ಜೊತೆಗೆ ಬಾಲ್ಯವಿವಾಹ ತಡೆಗಟ್ಟುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಶಾಲೆ ಬಿಟ್ಟ ಹೆಣ್ಣುಮಕ್ಕಳನ್ನು ಪುನಃ ಶಾಲೆಗೆ ಕರೆತಂದು, ಉಚಿತ ಕಲಿಕೋಪಕರಣಗಳನ್ನು ನೀಡಿ ಅವರ ಶಿಕ್ಷಣ ಮುಂದುವರಿಯುವಂತೆ ಪ್ರೋತ್ಸಾಹಿಸುತ್ತಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕಾಗಿ ಕೇವಲ 15 ದಿನಗಳಲ್ಲಿ ಐದು ಟನ್ ಪ್ಲಾಸ್ಟಿಕ್ ಸಂಗ್ರಹಿಸಿ ಮರುಚಕ್ರೀಕರಣಕ್ಕೆ ಕಳುಹಿಸಿರುವುದು ಅವರ ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ. ಪ್ಲಾಸ್ಟಿಕ್ ಮುಕ್ತ ಗ್ರಾಮ ಮತ್ತು ಶಾಲೆಗಳಿಗಾಗಿ ಜಾಗೃತಿ ಜಾಥಾಗಳನ್ನು ನಡೆಸುವುದರ ಜೊತೆಗೆ, ತ್ಯಾಜ್ಯ ಪ್ಲಾಸ್ಟಿಕ್ ಬಳಸಿ ಹೂವಿನ ಕುಂಡಗಳು, ಗಿಡಗಳಿಗೆ ನೀರುಣಿಸುವ ಸಾಧನಗಳು, ಪಕ್ಷಿಗಳಿಗೆ ಆಹಾರ ಪಾತ್ರೆಗಳು, ಅಲಂಕಾರಿಕ ವಸ್ತುಗಳು, ಆಟಿಕೆಗಳು, ಪೆನ್ ಸ್ಟ್ಯಾಂಡ್‌ಗಳು ಹಾಗೂ ಸರಳ ಪಾಠೋಪಕರಣಗಳನ್ನು ತಯಾರಿಸಿ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆಯಲ್ಲಿ 5R ತತ್ವಗಳಾದ Reduce (ಮಿತ ಬಳಕೆ), Reuse (ಮರುಬಳಕೆ), Recycle (ಮರುಚಕ್ರೀಕರಣ), Repurpose (ಮರುಉದ್ದೇಶ) ಮತ್ತು Refuse (ನಿರಾಕರಣೆ) ಕುರಿತು ವಿಶೇಷ ಒತ್ತು ನೀಡುತ್ತಿದ್ದಾರೆ.

ಪರಿಸರ ಸಂರಕ್ಷಣೆಯ ಉದ್ದೇಶದಿಂದ ಬೀಜದ ಉಂಡೆಗಳನ್ನು ತಯಾರಿಸಿ ಬೆಟ್ಟ, ಗುಡ್ಡ ಹಾಗೂ ಬಯಲು ಪ್ರದೇಶಗಳಲ್ಲಿ ಬಿತ್ತುವ ಮೂಲಕ ಅರಣ್ಯ ವೃದ್ಧಿಗೆ ಕೊಡುಗೆ ನೀಡಿದ್ದಾರೆ. ಶಾಲಾ ಆವರಣದಲ್ಲಿ ನೂರಾರು ಹಣ್ಣಿನ ಗಿಡಗಳು ಹಾಗೂ ಇತರೆ ಉಪಯುಕ್ತ ಮರಗಳನ್ನು ಬೆಳೆಸಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೂ ಎರಡು ಗಿಡಗಳನ್ನು ವಿತರಿಸಿ ತಮ್ಮ ಮನೆಯಲ್ಲೋ ಅಥವಾ ಕೃಷಿ ಜಮೀನಿನಲ್ಲೋ ನೆಟ್ಟು ಪೋಷಿಸಲು ಮಾರ್ಗದರ್ಶನ ನೀಡುತ್ತಿದ್ದಾರೆ.

ವಾಯು ಮತ್ತು ಜಲ ಮಾಲಿನ್ಯ ನಿಯಂತ್ರಣಕ್ಕಾಗಿ "ದೀಪಕ್ಕೆ ಎಣ್ಣೆ ಹಾಕೋಣ – ಪಟಾಕಿಗೆ ನೀರು ಹಾಕೋಣ" ಎಂಬ ಘೋಷವಾಕ್ಯದಡಿ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸುವ ಅಭಿಯಾನ ನಡೆಸುತ್ತಿದ್ದಾರೆ. ಅದೇ ರೀತಿ ರಾಸಾಯನಿಕ ಗಣೇಶ ಮೂರ್ತಿಗಳ ಬದಲಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆಯನ್ನು ಪ್ರೋತ್ಸಾಹಿಸುವ ಮೂಲಕ ಜಲಮಾಲಿನ್ಯ ತಡೆಗಟ್ಟುವಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಶಾಲೆಯ ಬಿಸಿಯೂಟ ಯೋಜನೆಗೆ ಪೂರಕವಾಗಿ "ಕಿಚನ್ ಪಾರ್ಕ್" ನಿರ್ಮಿಸಿ ತರಕಾರಿ, ಸೊಪ್ಪು ಹಾಗೂ ಕಾಳುಗಳನ್ನು ಬೆಳೆಯಲಾಗುತ್ತಿದ್ದು, ಅವುಗಳನ್ನು ವಿದ್ಯಾರ್ಥಿಗಳ ಬಿಸಿಯೂಟ ತಯಾರಿಕೆಯಲ್ಲಿ ಬಳಸಲಾಗುತ್ತಿದೆ.

ತಮ್ಮ 18 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಜೀವನ್ ಮಾರ್ಗ ಶೈಕ್ಷಣಿಕ ಫೌಂಡೇಶನ್‌ನ ಸಹಕಾರದೊಂದಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ ವಿದ್ಯಾರ್ಥಿಗಳ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಹೆಣ್ಣುಮಕ್ಕಳಿಗಾಗಿ ನಾಲ್ಕು ಆಧುನಿಕ ಗುಣಮಟ್ಟದ ಶೌಚಾಲಯಗಳನ್ನು ನಿರ್ಮಿಸಿದ್ದು, ಪ್ರಾಯೋಗಿಕ ಕಲಿಕೆಗೆ ಅನುಕೂಲವಾಗುವಂತೆ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯವನ್ನೂ ಸ್ಥಾಪಿಸಿದ್ದಾರೆ.

ರೈತರಿಗಾಗಿ ಸಾವಯವ ಕೃಷಿ, ಮಿಶ್ರ ಬೆಳೆ ಪದ್ಧತಿ, ನೀರಿನ ಮಿತ ಹಾಗೂ ಮರುಬಳಕೆ, ಮಣ್ಣಿನ ಫಲವತ್ತತೆ ಸಂರಕ್ಷಣೆ, ಪೌಷ್ಟಿಕ ಆಹಾರ ಮತ್ತು ಆರೋಗ್ಯದ ಕುರಿತು ಜಾಗೃತಿ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ರೂಪಿಸಿ ವೈಜ್ಞಾನಿಕ ಕೃಷಿಯ ಅರಿವು ಮೂಡಿಸುತ್ತಿದ್ದಾರೆ.

ಮರಗಳ ಉಳಿವಿಗಾಗಿ ಕಾಗದದ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ "ಸ್ಲೇಟು-ಬಳಪ ಬಳಸಿ, ಕಾಡು ಉಳಿಸಿ" ಎಂಬ ವಿನೂತನ ಕಾರ್ಯಕ್ರಮವನ್ನು ಶಾಲೆಯಲ್ಲಿ ಯಶಸ್ವಿಯಾಗಿ ಅಳವಡಿಸಿದ್ದಾರೆ.

ವಿದ್ಯಾರ್ಥಿಗಳ ಕಲಿಕಾ ಆಸಕ್ತಿಯನ್ನು ಹೆಚ್ಚಿಸಲು ಹಾಗೂ ಪೋಷಕರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಲು ವಿದ್ಯಾವಂತ ಹಳೆಯ ವಿದ್ಯಾರ್ಥಿಗಳನ್ನು ಸ್ವಯಂಸೇವಕರನ್ನಾಗಿ ನೇಮಿಸಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸಾಮಾಜಿಕ ಹಾಗೂ ಪರಿಸರ ಕಾಳಜಿಯೊಂದಿಗೆ ಶಾಲೆಯ ಶೈಕ್ಷಣಿಕ ಪ್ರಗತಿಗಾಗಿ ವಿವಿಧ ದಾನಿಗಳ ಸಹಕಾರದಿಂದ ಸುಮಾರು 90 ಲಕ್ಷ ರೂಪಾಯಿಗೂ ಅಧಿಕ ಅನುದಾನವನ್ನು ಸಂಗ್ರಹಿಸಿ ವಿಜ್ಞಾನ ಪ್ರಯೋಗಾಲಯ, STEM ಲ್ಯಾಬ್, ಡಿಜಿಟಲ್ ಲ್ಯಾಬ್, ಕಂಪ್ಯೂಟರ್ ವ್ಯವಸ್ಥೆ, ಮಳೆನೀರು ಕೊಯ್ಲು, ಕುಡಿಯುವ ನೀರಿನ ವ್ಯವಸ್ಥೆ, ಕಾಂಪೌಂಡ್ ನವೀಕರಣ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಕಲಿಕೋಪಕರಣಗಳ ವಿತರಣೆಯಂತಹ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ. ಅಲ್ಲದೆ, OSAAT educational trust ಸಂಸ್ಥೆಯ ಸಹಕಾರದೊಂದಿಗೆ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ನಾಲ್ಕು ಆಧುನಿಕ ಸುಸಜ್ಜಿತ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ವಿಜ್ಞಾನವನ್ನು ಉಪನ್ಯಾಸಕ್ಕೆ ಮಾತ್ರ ಸೀಮಿತಗೊಳಿಸದೆ, ಪ್ರಾಯೋಗಿಕ ಚಟುವಟಿಕೆಗಳು, ಗೀತೆಗಳು, ಪರಿಸರ ಅಧ್ಯಯನ ಹಾಗೂ ತಂತ್ರಜ್ಞಾನದ ನೆರವಿನಿಂದ ಪರಿಣಾಮಕಾರಿಯಾಗಿ ಬೋಧಿಸುತ್ತಿದ್ದಾರೆ.

ಕೊರೊನಾ ಅವಧಿಯಲ್ಲಿ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಚಂದನ ವಾಹಿನಿಯ "ಸಂವೇದ" ಕಾರ್ಯಕ್ರಮದ ಮೂಲಕ ಪಾಠ ಬೋಧನೆ ನಡೆಸಿದ್ದಾರೆ. ಚಿಂಟು ವಾಹಿನಿ ಮೂಲಕ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮಗಳನ್ನು ನೀಡಿದ್ದು, ಕೊರೊನಾ ಜಾಗೃತಿ ಗೀತೆಗಳನ್ನು ಸ್ವತಃ ರಚಿಸಿ ಹಾಡುವ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಿದ್ದಾರೆ. ಅವರ ಗೀತೆಗಳನ್ನು ವಿವಿಧ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿಯೂ ಜಾಗೃತಿ ಕಾರ್ಯಕ್ರಮಗಳಲ್ಲಿ ಬಳಸಲಾಗಿದೆ.

ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ. 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪಾಸಿಂಗ್ ಪ್ಯಾಕೇಜ್ ಹಾಗೂ ಪುನರಾವರ್ತನಾ ಪುಸ್ತಕಗಳ ರಚನೆಯಲ್ಲಿ ಭಾಗವಹಿಸಿದ್ದು, "ಪರೀಕ್ಷೆಗೆ ತಯಾರಿ ಹೇಗೆ?" ಎಂಬ ವಿನೂತನ ಕಾರ್ಯಕ್ರಮದ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಪ್ರತಿಭಾ ಕಾರಂಜಿ, ಕಲೋತ್ಸವ, ರಂಗೋತ್ಸವ, ವಿಜ್ಞಾನೋತ್ಸವ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ತಾಲ್ಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸುವಂತೆ ಮಾರ್ಗದರ್ಶನ ನೀಡಿದ್ದಾರೆ. ಜೊತೆಗೆ INSPIRE Award, NMMSS, State Level Science Quiz, State Level Model Making ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದ್ದಾರೆ.

ಎಸ್.ಎಸ್.ಎಲ್.ಸಿ. ನಂತರದ ಶಿಕ್ಷಣ, ವೃತ್ತಿ ಆಯ್ಕೆ ಹಾಗೂ ಉನ್ನತ ಶಿಕ್ಷಣದ ಕುರಿತು ವಿದ್ಯಾರ್ಥಿಗಳಿಗೆ ಸಮರ್ಪಕ ಮಾರ್ಗದರ್ಶನ ನೀಡುತ್ತಿದ್ದಾರೆ. ಹಿರಿಯ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣದ ಅವಕಾಶಗಳ ಬಗ್ಗೆ ಸಲಹೆ ನೀಡುವ ಮೂಲಕ ಅವರ ಭವಿಷ್ಯ ರೂಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕಲೆ, ಸಾಹಿತ್ಯ, ಸಂಗೀತ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸಮಾನ ಆಸಕ್ತಿ ಹೊಂದಿರುವ ಡಾ. ನವೀನ್ ಕುಮಾರ್ ಅವರು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಾ ಕನ್ನಡ ನಾಡು-ನುಡಿ ಸೇವೆಯನ್ನೂ ಸಲ್ಲಿಸುತ್ತಿದ್ದಾರೆ.

ಇಂತಹ ಬಹುಮುಖ ಪ್ರತಿಭೆ ಹಾಗೂ ಸಮಾಜಮುಖಿ ಸೇವೆಯನ್ನು ಗುರುತಿಸಿ, ಡಾ. ನವೀನ್ ಕುಮಾರ್ ಅವರಿಗೆ 2025ನೇ ಸಾಲಿನ "ಸಿ.ಎನ್.ಆರ್. ರಾವ್ ಔಟ್‌ಸ್ಟ್ಯಾಂಡಿಂಗ್ ಸೈನ್ಸ್ ಟೀಚರ್ ಅವಾರ್ಡ್" ಪ್ರದಾನ ಮಾಡಲಾಗಿದೆ.

ಇವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ದೊರೆಯಲಿ. ಅವರ ಜ್ಞಾನ, ಅನುಭವ ಮತ್ತು ವಿನೂತನ ಬೋಧನಾ ವಿಧಾನಗಳು ರಾಜ್ಯದ ಎಲ್ಲ ವಿಜ್ಞಾನ ಶಿಕ್ಷಕರಿಗೂ ಪ್ರೇರಣೆಯಾಗಲಿ ಹಾಗೂ ಅವರ ಮಾರ್ಗದರ್ಶನದಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂಬುದು ಸವಿಜ್ಞಾನ ತಂಡದ ಹಾರೈಕೆಗಳು. 



Thursday, June 4, 2026

ಜೂನ್‌ 2026 ತಿಂಗಳ ಲೇಖನಗಳು



🧠🔬 ಸವಿಜ್ಞಾನ – ವಿಜ್ಞಾನ • ಸಮಾಜ • ಸಂವೇದನೆ

ಜೂನ್‌ 2026ರ ಸಂಚಿಕೆ

ಈ ಸಂಚಿಕೆಯಲ್ಲಿ —

1. 🔹 ಉಸಿರುಗಟ್ಟುತ್ತಿರುವ ನಗರಗಳಿಗೆ “ಆಲ್ಗೆ ಟ್ರೀ” ಎಂಬ ಜೈವಿಕ ಇಂಜಿನಿಯರಿಂಗ್‌ ತಂತ್ರಜ್ಞಾನ

ನಗರೀಕರಣದ ಹೊಗೆಯ ನಡುವೆ ಉಸಿರಾಡಲು ತಡಕಾಡುತ್ತಿರುವ ಮಹಾನಗರಗಳಿಗೆ ಹಸಿರು ಆಮ್ಲಜನಕ ನೀಡುವ ಆಧುನಿಕ ಜೈವಿಕ ತಂತ್ರಜ್ಞಾನದ ಅದ್ಭುತ ಆವಿಷ್ಕಾರ "ಆಲ್ಗೆ ಟ್ರೀ" ಕುರಿತಾದ ವಿಶೇಷ ಲೇಖನ.

✍️ ರಾಮಚಂದ್ರ ಭಟ್ ಬಿ.ಜಿ.

2. 🌍 ವಿಶ್ವ ಪರಿಸರ ದಿನಾಚರಣೆ – 2026

ಪರಿಸರ ಸಂರಕ್ಷಣೆಯ ಮಹತ್ವ, ಇಂದಿನ ಪರಿಸರ ಸವಾಲುಗಳು ಹಾಗೂ ಸುಸ್ಥಿರ ಭವಿಷ್ಯಕ್ಕಾಗಿ ಪ್ರತಿಯೊಬ್ಬರ ಜವಾಬ್ದಾರಿಯನ್ನು ನೆನಪಿಸುವ ವಿಶೇಷ ಲೇಖನ.

✍️ ಬಿ. ಎನ್. ರೂಪ

3. 🔹 ಬೆಂಕಿ ಕಡ್ಡಿ ಹೂ

ತನ್ನ ವಿಶಿಷ್ಟ ಆಕಾರ ಮತ್ತು ಆಕರ್ಷಕ ಬಣ್ಣಗಳಿಂದ ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುವ, ನೋಡುಗರ ಕಣ್ಮನ ಸೆಳೆಯುವ "ಬೆಂಕಿಕಡ್ಡಿ ಹೂವಿನ" (Matchstick Bromeliad) ಸಸ್ಯಶಾಸ್ತ್ರೀಯ ಹಿನ್ನೆಲೆಯ ರೋಚಕ ಪರಿಚಯ.

✍️ ಶ್ರೀ ಕೃಷ್ಣ ಚೈತನ್ಯ

4. 🔹 Chip ನ ಓಟಕೆ ದೇಶೀಯ ಲಗಾಮು

ಜಾಗತಿಕ ಸೆಮಿಕಂಡಕ್ಟರ್ ಮತ್ತು ಮೈಕ್ರೋಚಿಪ್ ಮಾರುಕಟ್ಟೆಯಲ್ಲಿ ಸ್ವಾವಲಂಬನೆ ಸಾಧಿಸಲು ಭಾರತ ಇಡುತ್ತಿರುವ ಹೆಜ್ಜೆಗಳು ಹಾಗೂ ದೇಶೀಯ ಚಿಪ್ ತಂತ್ರಜ್ಞಾನದ ಭವಿಷ್ಯದ ದಿಕ್ಸೂಚಿ.

✍️ ಕೃಷ್ಣ ಸುರೇಶ್

5. 🔹 ಕರ್ನಾಟಕದ ಶುಷ್ಕ ಮತ್ತು ಅರೆಶುಷ್ಕ ವಲಯದ ಕಾಡುಗಳು ಮತ್ತು ಜೀವವೈವಿಧ್ಯತೆ

ಕಡಿಮೆ ಮಳೆಯಾಗುವ ಕರ್ನಾಟಕದ ಒಣ ಭೂಭಾಗಗಳಲ್ಲಿನ ಸಸ್ಯಸಂಕುಲ, ಅಲ್ಲಿನ ವಿಶಿಷ್ಟ ವನ್ಯಜೀವಿಗಳ ಬದುಕು ಮತ್ತು ಈ ಸೂಕ್ಷ್ಮ ಪರಿಸರ ವ್ಯವಸ್ಥೆಯ ರಕ್ಷಣೆಯ ಅನಿವಾರ್ಯತೆ.

✍️ ತಾಂಡವಮೂರ್ತಿ ಎ. ಎನ್.

6. 🔹 ಜೀವದ್ರವ್ಯವಾದ ರಕ್ತದಾನ ಮಾಡಿ, ಜೀವ ಉಳಿಸಿ

ಮನುಷ್ಯನ ಜೀವ ಉಳಿಸುವಲ್ಲಿ ರಕ್ತದ ಮಹತ್ವ, ರಕ್ತದಾನದ ಹಿಂದಿರುವ ವೈಜ್ಞಾನಿಕ ಸತ್ಯಗಳು ಹಾಗೂ ಸಮಾಜದಲ್ಲಿ ರಕ್ತದಾನದ ಜಾಗೃತಿ ಮೂಡಿಸುವ ಕಳಕಳಿಯ ಲೇಖನ.

✍️ ಬಸವರಾಜ ಎಂ. ಯರಗುಪ್ಪಿ

7. 🎨 ಜೂನ್ 2026ರ ಸೈಂಟೂನ್‌ಗಳು

ವಿಜ್ಞಾನದ ಜಟಿಲ ನಿಯಮಗಳನ್ನು ಹಾಸ್ಯ ಮತ್ತು ವ್ಯಂಗ್ಯಚಿತ್ರಗಳ ಮೂಲಕ ಸರಳವಾಗಿ, ಮನರಂಜನಾತ್ಮಕವಾಗಿ ಉಣಬಡಿಸುವ ಸೃಜನಶೀಲ ಚಿತ್ತಾರಗಳು.

✍️ ಶ್ರೀಮತಿ ಜಯಶ್ರೀ ಶರ್ಮ


🌿 ವಿಜ್ಞಾನ • ಪರಿಸರ • ತಂತ್ರಜ್ಞಾನ • ಅಂತರಿಕ್ಷ • ಆರೋಗ್ಯ

📘 ವಿಜ್ಞಾನವನ್ನು ಎಲ್ಲರಿಗೂ ಸುಲಭವಾಗಿ, ಕುತೂಹಲಕರವಾಗಿ ತಲುಪಿಸುವ ನಮ್ಮ ಸಣ್ಣ ಪ್ರಯತ್ನ — ಸವಿಜ್ಞಾನ

ಓದಿ • ಹಂಚಿಕೊಳ್ಳಿ • ವಿಜ್ಞಾನ ಮನೋಭಾವ ಬೆಳೆಸಿ

ಉಸಿರುಗಟ್ಟುತ್ತಿರುವ ನಗರಗಳಿಗೆ “ಆಲ್ಗೆ ಟ್ರೀ” ಎಂಬ ಜೈವಿಕ ಇಂಜಿನಿಯರಿಂಗ್‌ ತಂತ್ರಜ್ಞಾನ

 ಉಸಿರುಗಟ್ಟುತ್ತಿರುವ ನಗರಗಳಿಗೆ  “ಆಲ್ಗೆ ಟ್ರೀ” ಎಂಬ  ಜೈವಿಕ ಇಂಜಿನಿಯರಿಂಗ್‌ ತಂತ್ರಜ್ಞಾನ

 
✍️ಲೇಖನ : 
ರಾಮಚಂದ್ರ ಭಟ್ ಬಿ.ಜಿ. 
ಹವ್ಯಾಸಿ ವಿಜ್ಞಾನ ಲೇಖಕರು 

 


ಕೆಲವು ವರ್ಷಗಳ ಹಿಂದೆ ಸುದ್ದಿಯಾದ ಸರ್ಬಿಯಾದ ಬೆಲ್‌ಗ್ರೇಡ್ ನಗರದಲ್ಲಿ ಸ್ಥಾಪಿಸಲಾದ ದ್ರವರೂಪಿ ವೃಕ್ಷದ ಕುರಿತು ನೀವು ಓದಿರಬಹುದು. ಆಗ ಅದು ಅನೇಕರಿಗೆ ವಿಜ್ಞಾನದ ನವಿರು ಕಲ್ಪನಾ ವಿಲಾಸದಂತೆ ಅನಿಸಿದ್ದಿರಬಹುದು. “ಅಯ್ಯೋ! ನೀರೊಳಗಿನ ಶೈವಲಗಳು ಮರಗಳ ಕೆಲಸ ಮಾಡುತ್ತವೆಯೇ?” ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿರಬಹುದು. ಆದರೆ ವಿಜ್ಞಾನ ಅಲ್ಲಿಗೆ ನಿಂತಿಲ್ಲ. ಈಗ ಆ ಪರಿಕಲ್ಪನೆ ಇನ್ನಷ್ಟು ಪ್ರೌಢಗೊಂಡು “ಆಲ್ಗೆ ಟ್ರೀ” ಎಂಬ ಹೊಸ ನಗರ ಪರಿಸರ ತಂತ್ರಜ್ಞಾನವಾಗಿ ರೂಪಾಂತರಗೊಂಡಿದೆ.

ಭೋಪಾಲ್‌ನಲ್ಲಿ ಸ್ಥಾಪಿಸಲಾದ ಭಾರತದ ಮೊದಲ “ಆಲ್ಗೆ ಟ್ರೀ” ಕೇವಲ ಒಂದು ಯಂತ್ರವಲ್ಲ; ಅದು ಪ್ರಕೃತಿಯ ಅತಿ ಪ್ರಾಚೀನ ಇಂಜಿನಿಯರಿಂಗ್ ಮತ್ತು ಮನುಷ್ಯನ ಆಧುನಿಕ ತಂತ್ರಜ್ಞಾನದ ಅಪೂರ್ವ ಸಂಗಮ.

ಸೂಕ್ಷ್ಮಶೈವಲಗಳ ‘ಬಯೋ-ಕೆಮಿಕಲ್’ ಶಕ್ತಿ

ಸೂಕ್ಷ್ಮಶೈವಲಗಳು (Micro-algae) ಪ್ರಕೃತಿಯ ಅತ್ಯಂತ ಪರಿಣಾಮಕಾರಿ ಆಕ್ಸಿಜನ್ ಉತ್ಪಾದಕರು. ಸಾಂಪ್ರದಾಯಿಕ ಮರಗಳಿಗೆ ಹೋಲಿಸಿದರೆ ಇವುಗಳ ದ್ಯುತಿಸಂಶ್ಲೇಷಣಾ ಸಾಮರ್ಥ್ಯ (Photosynthetic efficiency) ಅತ್ಯಂತ ಹೆಚ್ಚು. ಮರಗಳು ಭೂಮಿಯ ಮೇಲ್ಮೈ ವಿಸ್ತೀರ್ಣದ ಮೇಲೆ ಅವಲಂಬಿತವಾಗಿದ್ದರೆ, ಶೈವಲಗಳು ನೀರಿನ ಲಭ್ಯತೆಯನ್ನು ಅವಲಂಬಿಸಿ ಬೆಳೆಯುತ್ತವೆ. ವಿಕಾಸದ ಹಾದಿಯಲ್ಲಿ ಶೈವಲಗಳು ಕೋಶೀಯ ಮಟ್ಟದ ವ್ಯವಸ್ಥೆಯನ್ನು ಹೊಂದಿದ್ದು,  ಮರಗಳಂತೆ ಕಾಂಡ, ಬೇರು ಅಥವಾ ರೆಂಬೆಗಳನ್ನು ನಿರ್ಮಿಸಲು ಶಕ್ತಿಯನ್ನು ವ್ಯಯಿಸುವುದಿಲ್ಲ. ಅವು ಸೂರ್ಯನ ಬೆಳಕನ್ನು ನೇರವಾಗಿ ಜೀವಕೋಶದ ವಿಭಜನೆಗೆ ಮತ್ತು ಆಕ್ಸಿಜನ್ ಉತ್ಪಾದನೆಗೆ ಬಳಸುತ್ತವೆ. ಇದೇ ನಮ್ಮ ವಿಜ್ಞಾನಿಗಳ ಗಮನ ಸೆಳೆದು ಹೊಸ ಆವಿಷ್ಕಾರಕ್ಕೆ ಕಾರಣವಾಯಿತು. ದ್ಯುತಿಸಂಶ್ಲೇಣಾ ಪ್ರಕ್ರಿಯೆಯನ್ನು ನಾವು ಕೆಳಗಿನ ಸಮೀಕರಣದ ಮೂಲಕ ಅರ್ಥೈಸಿಕೊಳ್ಳಬಹುದು:

6CO2 + 6H2O + ಬೆಳಕು ­à C6H12O6 + 6O2

ಇಲ್ಲಿ 'ಫೋಟಾನ್ಸ್‌' ಅಥವಾ ಬೆಳಕಿನ ಕಣಗಳನ್ನು ಕೃತಕ ಎಲ್‌ಇಡಿ ಲೈಟ್‌ಗಳ ಮೂಲಕ ನಿಯಂತ್ರಿಸುವುದರಿಂದ, ರಾತ್ರಿಯ ವೇಳೆಯಲ್ಲೂ ಈ 'ಮರ' ಆಕ್ಸಿಜನ್ ನೀಡುತ್ತಾ ಸಕ್ರಿಯವಾಗಿರುತ್ತದೆ!

ಒಂದು ಯಂತ್ರವೇ 25 ಮರಗಳ ಸಮ!

ಭೋಪಾಲ್‌ನ ಆಲ್ಗಲ್‌ಟ್ರೀಯ ಕಾರ್ಯಕ್ಷಮತೆ ಅಚ್ಚರಿ ಹುಟ್ಟಿಸುವಂತಿದೆ. ಒಂದು ಘಟಕವು ವರ್ಷಕ್ಕೆ 1.5 ಟನ್ ಕಾರ್ಬನ್ ಡೈಆಕ್ಸೈಡ್ ಹೀರಿಕೊಳ್ಳುತ್ತದೆ. ಇದೇ Carbon Sequestration (ಕಾರ್ಬನ್ ಸಿಕ್ವೆಸ್ಟ್ರೇಷನ್) , ಎಂದರೆ ವಾತಾವರಣದಲ್ಲಿರುವ ಹೆಚ್ಚುವರಿ ಕಾರ್ಬನ್ ಡೈಆಕ್ಸೈಡ್ ಅನಿಲವನ್ನು ಹೀರಿ, ಅದನ್ನು ದೀರ್ಘಕಾಲದವರೆಗೆ ಒಂದೆಡೆ ಸುರಕ್ಷಿತವಾಗಿ ಸಂಗ್ರಹಿಸಿಡುವ (ಸೆರೆಹಿಡಿಯುವ) ಪ್ರಕ್ರಿಯೆ. ಸರಳವಾಗಿ ಹೇಳುವುದಾದರೆ, ಇದು ಪರಿಸರದಲ್ಲಿ ಹಸಿರುಮನೆ ಅನಿಲಗಳ ಪ್ರಮಾಣವನ್ನು ತಗ್ಗಿಸಿ, ಜಾಗತಿಕ ತಾಪಮಾನ ಏರಿಕೆಯನ್ನು (Global Warming) ನಿಯಂತ್ರಿಸಲು ಪ್ರಕೃತಿ ಮತ್ತು ತಂತ್ರಜ್ಞಾನ ಬಳಸುವ ಒಂದು 'ಕಾರ್ಬನ್ ಬ್ಯಾಂಕ್' ವ್ಯವಸ್ಥೆ ಎನ್ನಬಹುದು. ಮರಗಳು ಬೆಳೆಯಲು ದಶಕಗಳ ಕಾಲ ಬೇಕಾದರೆ, ಆಲ್ಗಲ್‌ ಯಂತ್ರ ಸ್ಥಾಪಿಸಿದ ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದ ಕೆಲಸ ಆರಂಭಿಸುತ್ತದೆ. 

ಕಣ ರೂಪದ ಮಾಲಿನ್ಯಕಾರಕಗಳ ‘ಸ್ಕ್ರಬ್ಬಿಂಗ್’ (Scrubbing): ಕೇವಲ ವಿಷಾನಿಲಗಳಷ್ಟೇ ಅಲ್ಲದೆ, ಗಾಳಿಯಲ್ಲಿರುವ ಮಾಲಿನ್ಯಕಾರಕ ಕಣಗಳಾದ - PM 2.5 ಮತ್ತು PM 10 ಕಣಗಳನ್ನು ಇದು ನೀರಿನ ಮಾಧ್ಯಮದ ಮೂಲಕ ಹಾದುಹೋಗುವಂತೆ ಮಾಡುವ ಮೂಲಕ ‘ವೆಟ್ ಸ್ಕ್ರಬ್ಬಿಂಗ್’ (Wet Scrubbing) ತಂತ್ರಜ್ಞಾನದಂತೆ ಕಾರ್ಯನಿರ್ವಹಿಸಿ ಗಾಳಿಯನ್ನು ತೊಳೆದು ಶುದ್ಧೀಕರಿಸುತ್ತದೆ. PM 10 ಕಣಗಳು 10 ಮೈಕ್ರೋಮೀಟರ್‌ಗಿಂತ ಕಡಿಮೆ ವ್ಯಾಸವನ್ನು ಹೊಂದಿರುವ ಕಣಗಳು (ಮಾನವನ ಕೂದಲಿನ ಅಗಲದ ಏಳನೇ ಒಂದು ಭಾಗ). ಇವು ಧೂಳು, ಪರಾಗ ಮತ್ತು ಕೈಗಾರಿಕೆಗಳಿಂದ ಬರುವ ವಸ್ತುಗಳು. ಇವು ಮೂಗು ಮತ್ತು ಗಂಟಲಿನಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತವೆ. PM 2.5 (ಸೂಕ್ಷ್ಮ ಕಣಗಳು) 2.5 ಮೈಕ್ರೋಮೀಟರ್‌ಗಿಂತ ಕಡಿಮೆ ವ್ಯಾಸವಿರುವ ಅತಿ ಸೂಕ್ಷ್ಮ ಕಣಗಳು. ಇವು ವಾಹನಗಳ ಹೊಗೆ ಮತ್ತು ಕಾರ್ಖಾನೆಗಳಿಂದ ಬಿಡುಗಡೆಯಾಗುತ್ತವೆ. ಇವು ಗಾಳಿಯಲ್ಲಿ ದೀರ್ಘಕಾಲ ತೇಲುತ್ತಿರುತ್ತವೆ ಮತ್ತು ಉಸಿರಾಡಿದಾಗ ಶ್ವಾಸಕೋಶದ ಆಳಕ್ಕೆ ಹಾಗೂ ರಕ್ತಪ್ರವಾಹಕ್ಕೆ ಸೇರಿಕೊಳ್ಳುವುದರಿಂದ ಹೆಚ್ಚು ಅಪಾಯಕಾರಿ.

AI ಮತ್ತು ಸ್ಮಾರ್ಟ್ ಸೆನ್ಸರ್‌ಗಳ ಪಾತ್ರ - LIQUID3 ಯುಗಕ್ಕೂ ಇಂದಿನ ಆಲ್ಗೆ ಟ್ರೀಗೂ ಇರುವ ದೊಡ್ಡ ವ್ಯತ್ಯಾಸವೆಂದರೆ ಕೃತಕ ಬುದ್ಧಿಮತ್ತೆ (AI)ಯ ಬಳಕೆ. ವಾತಾವರಣದಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾದಾಗ, ಎಐ ಸೆನ್ಸರ್‌ಗಳು ಗಾಳಿಯ ಹರಿವಿನ ದರವನ್ನು (Air flow rate) ಹೆಚ್ಚಿಸುತ್ತವೆ. ಇದನ್ನು ಅಡಾಪ್ಟಿವ್ ಕಂಟ್ರೋಲ್ ಎನ್ನುವರು.

ಪೋಷಕಾಂಶಗಳ ಸೂಕ್ತ ನಿರ್ವಹಣೆ: ಶೈವಲಗಳಿಗೆ ಬೇಕಾದ ಪೋಷಕಾಂಶಗಳ ಮಟ್ಟ ಕಡಿಮೆಯಾದಾಗ ಸಿಸ್ಟಮ್ ತಾನಾಗಿಯೇ ಅಲರ್ಟ್ ನೀಡುತ್ತದೆ ಅಥವಾ ಸ್ವಯಂಚಾಲಿತವಾಗಿ ಪೂರೈಸುತ್ತದೆ.

ಭವಿಷ್ಯದ ಉಸಿರಾಡುವ ಮನೆಗಳು ಅಥವಾ ಕಟ್ಟಡಗಳು ( breathing homes or buildings ) : ನಾವು ಕೇವಲ ಪಾರ್ಕ್‌ಗಳಲ್ಲಿಯೋ ಜನನಿಬಿಡ ಸ್ಥಳಗಳಲ್ಲಿಯೋ ಈ ಮರಗಳನ್ನು ನೋಡುವುದಷ್ಟಕ್ಕೇ ಸೀಮಿತವಾಗದೇ, ಭವಿಷ್ಯದಲ್ಲಿ ನಮ್ಮ ಮನೆಗಳೇ ಶ್ವಾಸಕೋಶಗಳಂತೆ ಕಾರ್ಯನಿರ್ವಹಿಸಲಿವೆ. ಜರ್ಮನಿಯ ಹ್ಯಾಂಬರ್ಗ್‌ನ BIQ House ಈಗಾಗಲೇ ಇದಕ್ಕೆ ಮಾದರಿಯಾಗಿದೆ.

  • ಆಲ್ಗೆ ಫೆಸೇಡ್ (Algae Facade): ಕಟ್ಟಡದ ಹೊರಗೋಡೆಗಳು ಹಸಿರು ಶೈವಲದ ಪ್ಯಾನೆಲ್‌ಗಳಿಂದ ಮಾಡಲ್ಪಟ್ಟಿರುತ್ತವೆ. ಇವು ಬೇಸಿಗೆಯಲ್ಲಿ ಸೂರ್ಯನ ಶಾಖವನ್ನು ಹೀರಿ ಒಳಾಂಗಣವನ್ನು ತಂಪಾಗಿಸುತ್ತವೆ (Thermoregulation) ಮತ್ತು ಅದೇ ಶಾಖವನ್ನು ಬಳಸಿಕೊಂಡು ಬಿಸಿನೀರನ್ನು ಒದಗಿಸುತ್ತವೆ!
  • ಜೈವಿಕ ಇಂಧನದ ಮೂಲ: ಈ ಗೋಡೆಗಳಿಂದ ಪಡೆದ ಶೈವಲವನ್ನು ಸಂಸ್ಕರಿಸಿ ಅದೇ ಕಟ್ಟಡಕ್ಕೆ ಬೇಕಾದ ವಿದ್ಯುತ್ ಉತ್ಪಾದಿಸಲು ‘ಬಯೋ-ಗ್ಯಾಸ್’ ಆಗಿ ಬಳಸಬಹುದು.

ತ್ಯಾಜ್ಯವೇ ಸಂಪನ್ಮೂಲ: ಚಕ್ರೀಯ ಆರ್ಥಿಕತೆ (ಸರ್ಕ್ಯುಲರ್ ಎಕಾನಮಿ)

ಶೈವಲಗಳ ಬಯೋಮಾಸ್ ಕೇವಲ ತ್ಯಾಜ್ಯವಲ್ಲ. ಅದರಲ್ಲಿರುವ ಹೆಚ್ಚಿನ ನೈಟ್ರೋಜನ್‌ ಮತ್ತು ರಂಜಕದ ಅಂಶವು ಅದನ್ನು ಜಗತ್ತಿನ ಅತ್ಯುತ್ತಮ 'ಜೈವಿಕ ಫಲವತ್ಕಾರಕ'ವಾಗಿಸುತ್ತದೆ. ಜಗದೋದ್ಧಾರಕ್ಕಾಗಿ ವಿಷಕುಡಿದ ನಂಜುಂಡೇಶ್ವರನಂತೆ ನಗರದ ಮಾಲಿನ್ಯವನ್ನು ಉಂಡು, ಹಳ್ಳಿಗಳ ಹೊಲಕ್ಕೆ ಬೇಕಾದ ಸಾವಯವ ಗೊಬ್ಬರವನ್ನು ನೀಡುತ್ತದೆ!

ಮರಗಳಿಗೆ ಪರ್ಯಾಯವಲ್ಲ, ಬದಲಿಗೆ ಪೂರಕ

ಆಲ್ಗೆ ಟ್ರೀಗಳು ಎಷ್ಟೇ ಹೈ-ಟೆಕ್ ಆಗಿದ್ದರೂ ಅವು ನೈಸರ್ಗಿಕ ಮರಗಳಿಗೆ ಪರ್ಯಾಯವಾಗಲಾರವು. ಮರಗಳು ನೀಡುವ ನೆರಳು, ಪಕ್ಷಿಗಳ ಕಲರವ, ಮತ್ತು ಮಣ್ಣಿನ ಸಂರಕ್ಷಣೆಯನ್ನು ಈ ಯಂತ್ರಗಳು ನೀಡಬಲ್ಲವೇ? ನಮ್ಮ ಮಕ್ಕಳು ಇದರಲ್ಲಿ ಮರಕೋತಿ ಆಟ ಆಡಿಯಾರೇ? ಆದರೆ ಮರ ಬೆಳೆಸಲು ಸಾಧ್ಯವೇ ಇಲ್ಲದ ಮಾಲಿನ್ಯ ತುಂಬಿದದ ಕಾಂಕ್ರೀಟ್ ಕಾಡಿನ ಬದುಕಿಗೆ ಇವು ವರದಾನ.

ನಮ್ಮ ಬೆಂಗಳೂರಿನ ಕನಸು

ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ಅಥವಾ ಎಂ.ಜಿ. ರಸ್ತೆಯ ಮೆಟ್ರೋ ಪಿಲ್ಲರ್‌ಗಳ ಮೇಲೆ ಇಂತಹ ಆಲ್ಗೆ ಪ್ಯಾನೆಲ್‌ಗಳನ್ನು ಅಳವಡಿಸಿದರೆ ಹೇಗಿರಬಹುದು? ಸೌರಶಕ್ತಿ ಮತ್ತು ಸೂಕ್ಷ್ಮಶೈವಲಗಳಿಂದ ಕಾರ್ಯನಿರ್ವಹಿಸುವ “ಉಸಿರಾಡುವ ನಗರ” ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಆರೋಗ್ಯಪೂರ್ಣ ವಾತಾವರಣ ಒದಗಿಸಬಲ್ಲವು.


ಮಾನವನು ಪ್ರಕೃತಿಯಿಂದ ದೂರ ಸರಿದಂತೆ ಸಮಸ್ಯೆಗಳ ಸರಮಾಲೆ ಹೆಚ್ಚಿದೆ. ಈಗ ಮತ್ತೆ ಪ್ರಕೃತಿಯತ್ತ ಮರಳಲು ವಿಜ್ಞಾನವೇ ಸೇತುವೆಯಾಗುತ್ತಿದೆ. ಬಹುಶಃ ಮುಂದಿನ ಪೀಳಿಗೆ ಆಶ್ಚರ್ಯದಿಂದ ಕೇಳಬಹುದು: “ಒಮ್ಮೆ ಕಟ್ಟಡಗಳು ಕೇವಲ ವಿದ್ಯುತ್ ಬಳಸುತ್ತಿದ್ದವಂತೆ... ಇವು ಗಾಳಿಯನ್ನು ಶುದ್ಧಪಡಿಸುತ್ತಿರಲಿಲ್ಲವಾ?” ಎಂದು! ಎಂಥ ಮುಗ್ದ ಪ್ರಶ್ನೆ ಅಲ್ಲವೇ?

ಪರಿಸರ ದಿನಾಚರಣೆಯ ಈ ಸಂದರ್ಭದಲ್ಲಿ, ಪ್ರಕೃತಿ ಮತ್ತು ತಂತ್ರಜ್ಞಾನದ ಹೊಸ ಅನ್ವಯವನ್ನು ಸ್ವಾಗತಿಸೋಣ. ಹಸಿರು ಸಂಸ್ಕೃತಿ ನಮ್ಮ ಹಾಸುಹೊಕ್ಕಾಗಲಿ.

 

ಬೆಂಕಿ ಕಡ್ಡಿ ಹೂ

 ಬೆಂಕಿ ಕಡ್ಡಿ ಹೂ

   


                          ಲೇಖಕರು : ಶ್ರೀ ಕೃಷ್ಣ ಚೈತನ್ಯ  

                        ವಿಜ್ಞಾನ ಶಿಕ್ಷಕರು ಹಾಗೂ ವನ್ಯ ಜೀವಿ ತಜ್ಞರು


 


    ಹೂವೂ... ಚೆಲುವೆಲ್ಲಾ ನಂದೆದಿತು, ಹೂವೆ ಹೂವೇ. ಹೂವೆ ಹೂವೇ. ಹೂವಿನ ಲೋಕ ನನ್ನದು.. ಹೀಗೆ ಹೂವಿನ ಬಗ್ಗೆ ಹಲವಾರು ಹಾಡುಗಳನ್ನು ವಿವಿಧ ಸಿನಿಮಾಗಳಲ್ಲಿ ಕೇಳಿದ್ದೇವೆ. ಹೂವು ನೋಡಿ ಮನಸೋಲದವರು ಯಾರಾದರೂ ಇದ್ದಾರೆಯೆ? ಬಹುಶಃ ಯಾರು ಸಿಗುವುದಿಲ್ಲವೇನೋ. ಮಹಿಳೆಯರು ಹೂವನ್ನು ಮುಡಿಯಲು ಇಚ್ಛಿಸುತ್ತಾರೆ. ಪ್ರತಿದಿನ ಮುಡಿಯದಿದ್ದರೂ ಸಮಾರಂಭಗಳಿಗೆ ಹೋಗುವಾಗ ಮರೆಯದೆ ಹೂ ಮುಡಿದು ಲಕ್ಷಣವಾಗಿ ಅಂದ ಹೆಚ್ಚಿಸಿಕೊಂಡು ಹೋಗುತ್ತಾರೆ. ಈಗಿನ ಕಾಲದಲ್ಲಿ ಹೂವು ಮುಡಿಯುವವರೆ ಕಡಿಮೆಯಾಗಿದ್ದಾರೆ ಅಲ್ಲವೇ? ಇರಲಿ ಹೂವಿನ ಸೊಗಸು ಮತ್ತು ಕಂಪು ಬಲ್ಲವರೇ ಬಲ್ಲರು. ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ ಎಂಬತೆ ಇಂದಿನವರು ಹೂವು ಮುಡಿಯಲು ನಿರಾಸಕ್ತಿ ತೋರಿಸುವುದರಿಂದಲೋ ಏನೋ ಮನೆಯ ಬಳಿ ಹೂವಿನ ಗಿಡ ಬೆಳೆಸುವವರೇ ಕಡಿಮೆಯಾಗಿ ಬಿಟ್ಟಿದ್ದಾರೆ.

  ಹೂಗಳಲ್ಲಿ ಅಷ್ಟು ವೈವಿಧ್ಯದ ಬಣ್ಣ, ಆಕಾರ, ಗಾತ್ರ, ಉದ್ದದಲ್ಲಿ ಪ್ರಕೃತಿಯಲ್ಲಿ ಕಾಣಸಿಗುತ್ತವೆ. ಕನ್ನಡ ನಾಡಿನ ಹೂಗಳಲ್ಲತು ಕಂಪು ತುಂಬಿರುತ್ತದೆ.. ಮಲ್ಲಿಗೆ, ಜಾಜಿ, ಕೇದಗೆ, ಸಂಪಿಗೆ, ಪಾರಿಜಾತ, ಚಂಡುಮಲ್ಲಿಗೆ ಸುಗಂಧರಾಜ, ಇತ್ಯಾದಿ ಹೂವುಗಳು ತಮ್ಮ ಕಂಪಿನಿದ ಹೆಸರುವಾಸಿಯಾಗಿವೆ. ಕಂಪು ಹೊಂದಿಲ್ಲದ ಹಲವಾರು ಹೂವುಗಳಲ್ಲಿ ಕನಕಾಂ, ಪೇಪರ್ ಹೂ(ಬೋಗನ್‌ವಿಲ್ಲಾ) ಪ್ರಮುಖವಾದವು.  

 ಅವುಗಳ ಸಾಲಿಗೆ ಸೇರುವ ಹೂವು ಬೆಂಕಿಕಡ್ಡಿಹೂವು. ಇದರ ವೈಜ್ಞಾನಿಕ ಹೆಸರು (Aechmea gamosepala). ಇದು ಮೂಲತಃ ದಕ್ಷಿಣ ಅಮೇರಿಕ ದೇಶದ್ದು. ಹೇಗೊ ಅಂತು ಇಂತು ಈಗ ಭಾರತದಲ್ಲಿ ಅಲಂಕಾರಿಕ ಸಸ್ಯವಾಗಿ ಬಹಳಷ್ಟು ಮನೆಗಳಲ್ಲಿ ವಿಶಿಷ್ಟ ಜಾಗವನ್ನು ಪಡೆದಿದೆ. ಎಲ್ಲಾ ಕಾಲದಲ್ಲಿಯೂ ಹಸಿರಾಗಿರುವ ಸಸ್ಯವಾಗಿದ್ದು ಕೇವಲ ಒಂದು ಅಡಿ ಎತ್ತರವಷ್ಟೆ ಬೆಳೆಯುತ್ತದೆ. ಅತ್ಯಂತ ಸುಲಭವಾಗಿ ಬೆಳೆಯಬಹುದಾದ ಸಸ್ಯವಾಗಿದ್ದು, ಕುಂಡದಲ್ಲಿ ಸ್ವಲ್ಪ ಗೊಬ್ಬರ ಮಿಶ್ರಿತ ಮಣ್ಣಿನಲ್ಲಿ ನೆಟ್ಟು ನೀರು ಉಣಿಸಿದರಾಯಿತು.

 

 ಈ ಗಿಡದ ಬಗ್ಗೆ ಲೇಖನ ಬರೆಯಲು ಅದು ಹೇಗೆ ಪ್ರೇರೇಪಿಸಿತು ಎಂದರೆ ಎರಡು ಪ್ರಮುಖ ಕಾರಣಗಳಿಂದಾಗಿ. ಒಂದು ಹೂವಿನ ಆಕರ್ಷಕ ಗಾತ್ರ, ಬಣ್ಣ ಮತ್ತು ರಚನೆ. ಎರಡನೆಯದು ನೀರು ಹೀರಿಕೊಳ್ಳುವ ವಿಶಿಷ್ಟ ರೀತಿ. ಎಲೆಗಳು ಮಂದವಾಗಿ ತಿಳಿ ಹಸಿರಾಗಿದ್ದು  ಕ್ರಮೇಣ ಗಾಢ ಹಸಿರು ಬಣ್ಣವಾಗಿ ಪರಿವರ್ತನೆಯಾಗುತ್ತವೆ. ಕಡಿಮೆ ಬೇರುಗಳನ್ನು ಹೊಂದಿದ್ದು ಕೈನಿಂದ ಸುಲಭವಾಗಿ ಎತ್ತಿಕೊಳ್ಳಬಹುದು. ಕೂದಲಿನಂತೆ ಸಣ್ಣ ಸಣ್ಣ ಕಪ್ಪಾದ ಬೇರುಗಳು ಮಣ್ಣಿನಲ್ಲಿ ಕಡಿಮೆ ಆಳಕ್ಕೆ ಇಳಿಯುತ್ತವೆ. ಈ ಗಿಡವನ್ನು ಮನೆಯ ಹೊರಾಂಗಣ ಮತ್ತು ಒಳಾವರಣ ಎರಡೂ ಕಡೆ ಬೆಳೆಯಬಹುದು. 

 ಹೂವುಗಳು ತುಂಬಾ ಆಕರ್ಷಕವಾಗಿದ್ದು, ಗಿಡದ ಮಧ್ಯ ಕೊಳವೆಯಂತಹ ಭಾಗದಿಂದ ನಸುಗೆಂಪು ಬಣ್ಣದ ಕಡ್ಡಿಯಂತಹ ರಚನೆ ಬಂದು ನಂತರ ಅದರ ಸುತ್ತಲೂ ಹೂವಿನ ಮೊಗ್ಗುಗಳು ಬೆಳೆಯುತ್ತವೆ. ಆದರೆ ಆರಳಲು ಹೂವಿನ ಪಕಳೆಗಳು ಅತ್ಯಂತ ಚಿಕ್ಕವು. ಆದುದರಿಂದ ಹೂವು ಅರಳಿದರೂ ಮೊಗ್ಗಿನಂತೆಯೇ ಗೋಚರಿಸುತ್ತವೆ. ಕ್ರಿಸ್ ಮಸ್ ಗಿಡದಂತೆ ಹೂತೊಟ್ಟಿನ ಬುಡದಲ್ಲಿ ಉದ್ದವಾದ ಹೂವುಗಳಿದ್ದರೆ ಮೇಲಕ್ಕೇರಿದಂತೆ ಸ್ವಲ್ಪ ಚಿಕ್ಕದಾಗುತ್ತಾ ಹೋಗುತ್ತವೆ. ಹೂವು ಪಿಂಕ್ ಬಣ್ಣದಲ್ಲಿದ್ದು ಅವುಗಳ ತುದಿ ಮಾತ್ರ ಆಕಾಶದ ನೀಲಿಯ ಬಣ್ಣ ಹೊಂದಿವೆ. ಇವು ಬೆಂಕಿ ಕಡ್ಡಿಯಂತೆಯೇ ಕಾಣುವುದರಿಂದ ಆ ಅನ್ವರ್ಥಕ ನಾಮ ಬಂದಿರಬಹುದು. ಹೂವುಗಳು ಸುಮಾರು 10 ರಿಂದ 15 ದಿನಗಳವರೆಗೂ ಇರುತ್ತವೆ. 

 ಇನ್ನೊಂದು ವಿಶಿಷ್ಟ ಲಕ್ಷಣ ಎಂದರೆ ಈ ಗಿಡ ನೀರನ್ನು ಹೀರಿಕೊಳ್ಳುವುದು. ಸಾಮಾನ್ಯವಾಗಿ ಎಲ್ಲಾ ಗಿಡಗಳು ಭೂಮಿಯಿಂದ ಬೇರಿನ ಮೂಲಕ ನೀರನ್ನು ಹೀರಿ ಎಲೆಗಳಿಗೆ ಸಾಗಿಸುವುದು. ಆರ್ಕಿಡ್ ಸಸ್ಯಗಳಲ್ಲಿ ಗಾಳಿಯಲ್ಲಿ ತೂಗಾಡುವ ಬೇರು, ಅಂದರೆ ವಾಯುವಿಕ ಬೇರುಗಳಿಂದ. ಕೆಲವು ಸಸ್ಯಗಳು ಅಂದರೆ ಬಂದಳಿಕೆ, ಸ್ಕ್ಯೂಟಗಳಂತಹ ಸಸ್ಯಗಳಲ್ಲಿ ವಿಶೇಷವಾದ, ಬೇರಿನಂತಹ ರಚನೆಗಳು ಆತಿಥೇಯ ಜೀವಿಗಳ ಅಂಗಾಂಶಗಳನ್ನು ಭೇದಿಸಿ ನೀರು ಮತ್ತು ಪೋಷಕಾಂಶಗಳನ್ನು ಹೊರತೆಗೆಯಲು ಬಳಸುತ್ತವೆ. ಆದರೆ ಈ ಗಿಡ ನೀರನ್ನು ಹೀರಿಕೊಳ್ಳುವುದು ಕಾಂಡದ ತುದಿಯಲ್ಲಿರುವ ಲೋಟದಾಕಾರದ ಭಾಗದಿಂದ! ಅಂದರೆ ಈ ಗಿಡಕ್ಕೆ ನೀರು ಹಾಕಬೇಕಾದರೆ ಗಿಡದಲ್ಲಿರುವ ಲೋಟದ ಆಕಾರದಲ್ಲಿರುವ ಭಾಗಗಳಿಗೆ ತುಂಬಿಸಬೇಕು! ಹೇಗಿದೆ ಸೋಜಿಗ ಅಲ್ಲವೇ? 

Chip ನ ಓಟಕೆ ದೇಶೀಯ ಲಗಾಮು

 Chip ನ ಓಟಕೆ ದೇಶೀಯ ಲಗಾಮು

                     

                         ಲೇಖಕರು: ಕೃಷ್ಣ ಸುರೇಶ
                
                    ನಿವೃತ್ತ ಮುಖ್ಯಶಿಕ್ಷಕರು 


ಮೆನ್ಲೋ ಪಾರ್ಕಿನ ಮಾಂತ್ರಿಕನೆಂದು ಹೆಸರುವಾಸಿಯಾದ ಥಾಮಸ್‌ ಆಳ್ವಾ ಎಡಿಸನ್‌ ತಾನು ೧೮೭೫ರಲ್ಲಿ ಅನ್ವೇಷಣೆ ಮಾಡಿದ್ದ ತಾಪದೀಪ್ತಿ ಪರಿಣಾಮವನ್ನು ಉತ್ತಮಪಡಿಸಲು ೧೮೮೩ರಲ್ಲಿ ನಡೆಸಿದ ಒಂದು ಪ್ರಯೋಗದಲ್ಲಿ  ವಿದ್ಯುತ್‌ ಪ್ರವಾಹದ ಕಾರಣದಿಂದ ಬಿಸಿಯಾದ ವಾಹಕದ ತಂತಿಯಿಂದ  ಎಲೆಕ್ಟ್ರಾನುಗಳು ಉತ್ಸರ್ಜೆನೆಯಾಗಿ ತಂಪಾದ ಲೋಹದ ಫಲಕಕ್ಕೆ ತಾಡಿಸಿದ್ದನ್ನು ಗಮನಿಸಿದನು. ಅವನ ಗುರಿಯು ವಿದ್ಯುತ್‌ ದೀಪವನ್ನು ನಿರ್ಮಿಸುವುದಾಗಿದ್ದರಿಂದ ಈ ವಿದ್ಯಮಾನವನ್ನು ನಿರ್ಲಕ್ಷಿಸಿದನು. ಆದರೂ ಇರಲಿ ಎಂದು ಅದರ ಮೇಲೆ ಒಂದು ಪೇಟೆಂಟನ್ನು ರಿಜಿಸ್ಟರ್‌ ಮಾಡಿಸಿದ್ದನು. ಬ್ರಿಟಿಷ್ ವೈರ್ಲೆಸ್‌ ಟೆಲಿಗ್ರಫಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಾನ್‌ ಫೆಮಿಂಗೋಗೆ ಕ್ಷೀಣ ಪರ್ಯಾಯ ವಿದ್ಯುತ್‌ ಪ್ರವಾಹವನ್ನು ನೇರ ವಿದ್ಯುತ್‌ ಪ್ರವಾಹವಾಗಿ ಪರಿವರ್ತಿಸುವುದರಲ್ಲಿ ಒಂದು ಸಮಸ್ಯೆ ಎದುರಾಗಿದ್ದಿತ್ತು. ಇದರ ಪರಿಹಾರಕ್ಕಾಗಿ ಎಡಿಸನ್‌ ಮಾಡಿದ ಇದೇ ಪ್ರಯೋಗವನ್ನು ಮುಂದುವರೆಸಿದ್ದ ಅವನಿಗೆ ಒಂದು ಸೋಜಿಗ ಕಾದಿತ್ತು. ನಿರ್ವಾತ ಕೊಳವೆಯಲ್ಲಿರುವ ತಂತಿಯೊಂದನ್ನು ವಿದ್ಯುತ್‌ ಪ್ರವಾಹದಿಂದ ಕಾಯಿಸಿದಾಗ ಬಿಡುಗಡೆಯಾಗುವ ಎಲೆಕ್ಟ್ರಾನುಗಳು ಅದೇ ಕೊಳವೆಯಲ್ಲಿ ಇರಿಸಿದ್ದ ಧನ ವಿದ್ಯುತ್‌ ಧ್ರುವಕ್ಕೆ ಜೋಡಿಸಿದ ಲೋಹದ ಪಟ್ಟಿಯ ಕಡೆಗೆ ಸೆಳೆಯಲ್ಪಡುವುದು ಪತ್ತೆಯಾಯಿತು. ಆ ಲೋಹದ ಪಟ್ಟಿಯನ್ನು ಋಣ ಧ್ರುವಕ್ಕೆ ಜೋಡಿಸಿದರೆ ವಿದ್ಯುತ್‌ ಪ್ರವಾಹ ಸ್ತಗಿತವಾಗುವುದನ್ನು ಸಹ ಅವನು ಗಮನಿಸಿದನು. ಇಂತಹ ನಿರ್ವಾತ ಕೊಳವೆಯು ವಿದ್ಯತ್ತನ್ನು ಒಂದು ದಿಕ್ಕಿನಲ್ಲಿ ಮಾತ್ರ ಹರಿಯಲು ಬಿಡುತ್ತವೆ ಎಂಬುದನ್ನು ಸಹ ಅವನು ಕಂಡುಕೊಂಡನು. ಈ ಸಾಧನವನ್ನು ಅಭಿವೃದ್ಧಿ ಪಡಿಸಿದ ಫ್ಲೆಮಿಂಗೋ ಅದಕ್ಕೆ ಋಣ ಮತ್ತು ಧನ ಎಂದು ಎರಡು ವಿದ್ಯುತ್‌ ಧ್ರುವಗಳು ಇದ್ದುದ್ದರಿಂದ ಅದನ್ನು ಡೈಯೋಡ್‌ ಎಂದು  ಕರೆದನು. ಡೈಯೋಡ್‌ ಪರ್ಯಾಯ ವಿದ್ಯುತ್‌ ಪ್ರವಾಹವನ್ನು ಏಕಮುಖವಾಗಿ ಹರಿಯುವಂತೆ ಮಾಡಿ ನೇರ ವಿದ್ಯುತ್ತಾಗಿಸುತ್ತದೆಯಾದ್ದರಿಂದ ಅದನ್ನು ವಾಲ್ವ್ ಎಂತಲೂ ಕರೆಯಲಾಗುತ್ತದೆ. ಇದೇ ಡಯೋಡ್‌ ತಂತ್ರಜ್ಞಾನದ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದ ಅಮೆರಿಕಾದ ಲಿ ಡೇ ಪಾರೆಸ್ಟರ್‌ ನಿರ್ವಾತ ಕೊಳವೆಯೊಳಗಿನ ಧನ ಮತ್ತು ಋಣ ಧ್ರುವಗಳ ನಡುವೆ ಗ್ರಿಡ್‌ ಎಂಬ ಮೂರನೆಯ ಧ್ರುವವನ್ನು ಸೇರಿಸಿದನು. ಗ್ರಿಡ್‌ ಅನ್ನು ಪ್ರತ್ಯೇಕವಾಗಿ ಧನ ಧ್ರುವಕ್ಕೆ ಜೋಡಿಸಿ ವಿದ್ಯುತ್‌ ಪ್ರವಾಹವನ್ನು ಹೆಚ್ಚು ಕಡಿಮೆ ಮಾಡುವುದರ ಮೂಲಕ ನಿರ್ವಾತ ಕೊಳವೆಯಲ್ಲಿ ಋಣ ಧ್ರುವದಿಂದ ಧನಧ್ರುವಕ್ಕೆ ಹರಿಯುವ ವಿದ್ಯುತ್‌ ಪ್ರವಾಹವದ ಹರಿವನ್ನು ನಿಯಂತ್ರಿಸಬಹುದೆಂಬುದನ್ನು ಕಂಡುಕೊಂಡನು. ಗ್ರಿಡ್‌ ಗೆ ಒದಗಿಸುವ ಅತ್ಯಲ್ಪ ವಿದ್ಯುತ್‌ ಪ್ರವಾಹವು ಕೊಳವೆಯಲ್ಲಿ ಹಲವಾರು ಪಟ್ಟು ವಿದ್ಯುತ್ ಪ್ರವಾಹವನ್ನು ಉಂಟುಮಾಡುವುದನ್ನು ಮತ್ತು ಗ್ರಿಡ್‌ನ ವಿದ್ಯುತ್ ಪ್ರವಾಹದಲ್ಲಿ ಆಗುವ ಅಲ್ಪ ಸ್ವಲ್ಪ ವ್ಯತ್ಯಾಸವು ಕೊಳವೆಯಲ್ಲಿ  ಹರಿಯುವ ಪ್ರವಾಹದಲ್ಲಿ ಹಲವಾರು ಪಟ್ಟು ಏರಿಳಿತಗಳನ್ನು ಮಾಡುವುದನ್ನು ಕಂಡುಕೊಂಡನು. ಈ ಕೊಳವೆಗೆ ಮೂರು ಧ್ರುವಗಳಿರುವುದರಿಂದ ಇದನ್ನು ಟ್ರಯೋಡ್‌ ಎಂದು ನಾಮಕರಣವನ್ನು ಮಾಡಿದನು.  ಟ್ರಯೋಡಿನ ಗ್ರಿಡ್ಡಿಗೆ ಋಣ ವಿದ್ಯುತ್ತನ್ನು ಪೂರಣ ಮಾಡಿ ಕೊಳವೆಯಲ್ಲಿ ಹರಿಯುವ ವದ್ಯುತ್ ಪ್ರವಾಹವನ್ನು ಸ್ತಗಿತಗೊಳಿಸಬಹುದೆಂಬುದನ್ನು ಅವನು ತೋರಿಸಿಕೊಟ್ಟನು.  ಟ್ರಯೋಡಿನ ಅನ್ವೇಷಣೆಯು ರೇಡಿಯೋ ಪ್ರಸಾರಕ್ಕೆ ಅಗತ್ಯವಾಗಿದ್ದ ಅತಿ ಮುಖ್ಯವಾದ ತಂತ್ರಜ್ಞಾನದ  ಕೊಡುಗೆಯಾಯಿತು. ಇದೇ ತಂತ್ರಜ್ಞಾನವನ್ನು ಬಳಸಿ ೧೯೨೧ರಲ್ಲಿ ಧ್ವನಿವರ್ಧಕದ ನಿರ್ಮಾಣ ಮಾಡಲಾಯಿತು. ಮುಂದೆ ಬರುಬರುತ್ತಾ ನಾಲ್ಕು, ಐದು, ಆರು ಇತ್ಯಾದಿ ಸಂಖ್ಯೆಯ ಧ್ರುವಗಳು ಒಂದೇ ಕೊಳವೆಯಲ್ಲಿರುವಂತಹ ನಿರ್ವಾತ ಕೊಳವೆಗಳನ್ನು ನಿರ್ಮಿಸಲಾಯಿತು. ೧೯೨೭ರಲ್ಲಿ ನಿರ್ಮಿಸಲಾದ ಟೆಲಿವಿಷನ್‌ ಇಂತಹುದೇ ನಿರ್ವಾತ ಕೊಳವೆಯನ್ನು ಪರದೆಯಾಗಿ ಹೊಂದಿತು. ಇದೇ ರೀತಿಯ ಕೊಳವೆಗಳನ್ನು ಬಳಸಿ ಸೇನೆಗಾಗಿ ರಾಡಾರಿನ ನಿರ್ಮಾಣವೂ ಅಯಿತು. ಬರು ಬರುತ್ತಾ ಈ ಕೊಳವೆಗಳ ಗಾತ್ರವು ಕಿರಿದಾಗುವುದರ ಜೊತೆಗೆ ಸಾಮರ್ಥ್ಯವೂ ಹೆಚ್ಚುತ್ತಾ ಹೋಯಿತು. ಅದರ ಅನ್ವಯಗಳೂ ಸಹ ವಿಸ್ತಾರವಾಗುತ್ತಾ ಹೋಯಿತು. ೧೯೪೭ರಲ್ಲಿ ಇಂತಹವುದೇ ಕೊಳವೆಗಳನ್ನು ಬಳಸಿಕೊಂಡು ENIAC ಎಂಬ ಕಂಪ್ಯೂಟರನ್ನು ಸಹ ನಿರ್ಮಿಸಲಾಯಿತು. ಹದಿನೇಳುವರೆ ಸಾವಿರ ನಿರ್ವಾತ ಕೊಳವೆಗಳನ್ನು ಹೊಂದಿದ್ದ ಇದನ್ನು ಚಾಲನೆ ಮಾಡಲು ೧೫೦ ಕಿಲೋವಾಟ್‌ನಷ್ಟು ಅಗಾಧ ವಿದ್ಯುತ್ ಬೇಕಾಗಿತ್ತು. ೧೮೦೦ ಚದುರ ಅಡಿ ಸ್ಥಳವನ್ನು ಇದು ಆಕ್ರಮಿಸಿದ್ದು, ಸುಮಾರು ೩೦ ಟನ್‌ ತೂಗುತ್ತಿತ್ತು. ಇದಕ್ಕೆ ಹೋಲಿಸಿದರೆ ಇಂದಿನ ಸಾಮಾನ್ಯ ಡೆಸ್ಕ್‌ ಟಾಪ್‌ಗಳು ಸಾವಿರ ಸಾವಿರ ಪಟ್ಟು ಸಾಮರ್ಥ್ಯದಲ್ಲಿ ಶ್ರೇಷ್ಠವೆಂದು ಹೇಳಬೇಕು. ಇದೇ ಕೊಳವೆಗಳನ್ನು ಬಳಸಿದ್ದ ರೇಡಿಯೋಗಳು ಗ್ರಾಹಕರಿಗೆ ತಲುಪುತ್ತಿದ್ದವಾದರೂ ಅವು ಹೆಚ್ಚು ವಿದ್ಯುತ್‌ ಬಳಸುತ್ತಿದ್ದವು, ಕೊಳವೆಗಳು ಬೇಗ ಸುಟ್ಟು ಹೋಗುತ್ತಿದ್ದವು ಮತ್ತು ಬೆಲೆಯಲ್ಲಿ ದುಬಾರಿಯಾಗಿದ್ದವು. ೧೯೫೦ರಲ್ಲಿ ಬೆಲ್‌ ಲ್ಯಾಬೋರೇಟರಿಯಲ್ಲಿ ನಮ್ಮ ಒಂದು ಬೆರಳಿನ ಮೇಲೆ ಕೂರಬಹುದಾದಷ್ಟು ಚಿಕ್ಕದಾದ ಟ್ರಯೋಡನ್ನು ನಿರ್ಮಿಸಿ ಒಂದು ದಾಖಲೆ ಬರೆಯಲಾಯಿತು.

      ಈ ನಡುವೆ ಅದೇ ಬೆಲ್‌ ಲ್ಯಾಬೋರೇಟರಿಯಲ್ಲಿ ಮತ್ತೊಂದು ಕ್ರಾಂತಿಕಾರಕವಾದ ಬೆಳವಣಿಗೆಯಾಯಿತು. .  ೧೯೪೦ರಲ್ಲಿ ರಸೆಲ್‌ ಓಲ್‌ ಅವರು  ಬೆಲ್‌ ಲ್ಯಾಬೋರೇಟರಿಯಲ್ಲಿ ನಿರ್ಮಿಸಿದ P-N  ಜಂಕ್ಷನ್ ಸಾಲಿಡ್‌ ಸ್ಟೇಟ್‌ ಸೆಮಿಕಂಡಕ್ಟರ್‌ ನಿರ್ಮಾಣಕ್ಕೆ ನಾಂದಿ ಹಾಡಿತು.  ಸೆಮಿಕಂಡಕ್ಟರ್‌ ಇದರ ಇತಿಹಾಸವನ್ನು ಸ್ವಲ್ಪ ಕೆದಕಿ ನೋಡುವುದಾದಲರೆ ೧೮೭೪ರಲ್ಲಿ ಕಾರ್ಲ್‌ ಫರ್ಡಿನೆಂಡ್‌ ಬ್ರಾನ್‌ ಎಂಬ ವಿಜ್ಞಾನಿ ಕೆಲವು ಹರಳುಗಳಲ್ಲಿ ವಿದ್ಯುತ್‌ ಪ್ರವಾಹವು ಏಕಮುಖವಾಗಿ ಹರಿಯುವುದನ್ನು ಪತ್ತೆ ಮಾಡಿದ್ದನು. ಭಾರತೀಯ ಭೌತವಿಜ್ಞಾನಿ  ಜಗದೀಶ್‌ ಚಂದ್ರ ಬೋಸ್‌ ರವರು ಬೆಕ್ಕಿನ ಮೀಸೆ (Cat's Whisker) ಎಂಬ ಹೆಸರಿನ ರೇಡಿಯೋ ಸಂಕೇತಗಳನ್ನು ಗ್ರಹಿಸುವ ಅರೆವಾಹಕವನ್ನು ನಿರ್ಮಿಸಿ ಅದಕ್ಕೆ ಪೇಟೆಂಟನ್ನು ಸಹ ೧೯೦೧ರಲ್ಲಿ ಪಡೆದಿದ್ದರು.  ೧೯೪೦ರಲ್ಲಿ ರಸೆಲ್‌ ಓಲ್‌ ಅವರು  ನಿರ್ಮಿಸಿದ P-N  ಜಂಕ್ಷನ್  ನಿರ್ವಾತ ಕೊಳವೆಯ ಡೈಯೋಡಿನಂತೆಯೇ ಕೆಲಸ ಮಾಡುವುದರ ಜೊತೆಗೆ ಅತ್ಯಂತ ಅಲ್ಪ ವಿದ್ಯುತ್‌ ಬಳಕೆ ಮಾಡುತ್ತಿತ್ತು. ಇಂತಹ ಸಾಲಿಡ್‌ ಸ್ಟೇಟ್‌ ಡೈಯೋಡುಗಳ ಆಯುಷ್ಯವೂ ಅಧಿಕವಾಗಿರುವುದು ಕಂಡು ಬಂದಿತು. ೧೯೪೭ ರಲ್ಲಿ ಬೆಲ್‌ ಲ್ಯಾಬೋರೇಟರಿಯಲ್ಲಿ  ಜಾನ್‌ ಬಾರ್ಡಿನ್‌, ವಾಲ್ಟರ್‌ ಬ್ರಾಟನ್‌ ಮತ್ತು ವಿಲಿಯಂ ಶಾಕ್ಲೇ ಈ ಮೂವರ ತಂಡವು ಪಾಯಿಂಟ್‌ ಕಾಂಟಾಕ್ಟ್ ಟ್ರಾನ್ಸಿಸ್ಟರ್‌ ಎಂಬ  ಸೆಮಿಕಂಡಕ್ಟರ್‌ ಟ್ರಯೋಡನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು.  ಇದು ಹೆಚ್ಚು ವಿದ್ಯುತ್‌ ಬಳಸುವ, ಬೇಗನೆ ಬಿಸಿಯಾಗುವ,  ಬೇಗನೆ ಹಾಳಾಗುವ ನಿರ್ವಾತ ಕೊಳವೆಯ ಟ್ರಯೋಡಿನಂತೆಯ ಅದಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸಿತ್ತು. ಅತ್ಯಂತ ಪುಟ್ಟದಾದ, ಕಡಿಮೆ ಬೆಲೆಯ, ಕಡಿಮೆ ವಿದ್ಯತ್ತು ಬಳಸುವ, ದೀರ್ಘಕಾಲ ಬಾಳಿಕೆ ಬರುವ ಸಾಧನವು ರೇಡಿಯೋ ಪ್ರಸಾರ ಮತ್ತು ಗ್ರಾಹಕ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನೇ ತಂದಿತೆಂದರೆ ಅತಿಶಯೋಕ್ತಿಯಲ್ಲ. ಈ ಸಂಶೋಧನೆಗೆ ಸಂಶೋಧನಾ ತಂಡದ ಮೂವರಿಗೂ ೧೯೫೬ರಲ್ಲಿ ನೋಬೆಲ್‌ ಬಹುಮಾನ ನೀಡಿ ಗೌರಿವಿಸಲಾಯಿತು. ೧೯೫೦ರ ಹೊತ್ತಿಗೆ ಟ್ರಾನ್ಸಿಸ್ಟರುಗಳಲ್ಲಿ ಬಳಸಲಾಗುತ್ತಿದ್ದ ಜರ್ಮೇನಿಯಂಗೆ ಬದಲಾಗಿ ಸಿಲಿಕಾನಿನ ಬಳಕೆಯನ್ನು ತಂದಿದ್ದರಿಂದ ಅವುಗಳ ಸಾಮರ್ಥ್ಯ ಮತ್ತಷ್ಟು ಹೆಚ್ಚಿತು. 

 ನಿರ್ವಾತ ಕೊಳವೆಯ ಡಬಲ್‌ ಡೈಯೋಡ್ (L) ಟ್ರಾನ್ಸಿಸ್ಟರ್ (R)         

   









೧೯೫೯ಕ್ಕೆ ಮತ್ತಷ್ಟು ಉತ್ತಮವಾದ MOSFE ಟ್ರನ್ಸಿಸ್ಟರುಗಳನ್ನು ಬೆಲ್‌ ಲ್ಯಾಬೋರೇಟರಿ ಬಿಡುಗಡೆ ಮಾಡಿತು. ಇವು ಅತಿ ಸೂಕ್ಷ ಗಾತ್ರದವಾಗಿದ್ದು. ಚಿಕ್ಕ ಜಾಗದಲ್ಲಿ ಹಲವಾರು ಟ್ರಾನ್ಸಿಸ್ಟರುಗಳಿರುವ ಅನುಕಲಿತ ಸರ್ಕ್ಯೂಟುಗಳನ್ನು ನಿರ್ಮಿಸಲು ಅನುವು ಮಾಡಿಕೊಟ್ಟಿತು. ಮೊದ ಮೊದಲಿಗೆ ಟ್ರಾನ್ಸಿಸ್ಟರ್‌, ಡೈಯೋಡ್‌, ಧಾರಕ, ರೋಧಕ ಮುಂತಾದ ಸಾಧನಗಳನ್ನು ತಂತಿಗಳ ಮೂಲಕ ಜೋಡಿಸಿ ವಿದ್ಯುನ್ಮಂಡಲದ ಜಾಲವನ್ನು ರಚಿಸಿ ರೇಡಿಯೋ ಮುಂತಾದ ಎಲೆಕ್ಟ್ರಾನಿಕ್‌ ಸಾಧನಗಳನ್ನು ರೂಪಿಸುತ್ತಿದ್ದರು. ನಂತರ ಬರುಬರುತ್ತಾ ಟ್ರಾನ್ಸಿಸ್ಟರ್‌, ಡಯೋಡ್‌, ಧಾರಕ, ರೋಧಕ ಮುಂತಾದ ಸಾಧನಗಳನ್ನು ಜೋಡಣೆಗೆ ಬಳಸುವ ತಂತಿಗಳ ಬದಲಿಗೆ ಒಂದು ಫಲಕದ ಮೇಲೆ ಸಂಪರ್ಕ ಜಾಲವನ್ನು ಮುದ್ರಿಸಲು ಆರಂಭಿಸಿದರು. ಎಲೆಕ್ಟ್ರಾನಿಕ್‌ ಸಾಧನಗಳು ಗಾತ್ರದಲ್ಲಿ ಕಿರಿದಾಗುತ್ತಾ ಹೋದಂತೆ ಈ ಜಾಲದ ಗಾತ್ರವೂ ಕಿರಿದಾಗುತ್ತಾ ಹೋಯಿತು. ಮುಂದೆ ಸಂಪರ್ಕ ಜಾಲದ ಜೊತೆಗೆ ಅದರಲ್ಲಿ ಬಳಸುವ ಎಲೆಕ್ಟ್ರಾನಿಕ್‌ ಸಾಧನಗಳನ್ನು ಸಹ ಫಲಕದ ಮೇಲೆ ಮುದ್ರಿಸಲು ತೊಡಗಿದಾಗ ಒಟ್ಟಾರೆ ವಿದ್ಯುನ್ಮಂಡಲದ ಗಾತ್ರ ಮತ್ತಷ್ಟು ಕಿರಿದಾಗುತ್ತಾ ಹೋಯಿತು. ಹೀಗಾಗಿ ಒಂದು ಸಣ್ಣ ಪ್ರದೇಶದಲ್ಲಿ ಹಲವಾರು ಎಲೆಕ್ಟ್ರಾನಿಕ್‌ ಮಂಡಲಗಳನ್ನು ಒಗ್ಗೂಡಿಸಿ ಮುದ್ರಿಸುವ ವ್ಯವಸ್ಥೆಯೂ ಬಂದಿತು. ಇಂತಹವನ್ನು ಅನುಕಲಿತ ಚಿಪ್ ಗಳೆಂದು ಕರೆಯಲು ತೊಡಗಿದರು. 
  ನಿರ್ವಾತ ಕೊಳವೆಗಳ ರೇಡಿಯೋ ಮಂಡಲ                  ಒಂದು ಹಳೆಯ ಮುದ್ರಿತ ಎಲೆಕ್ಟ್ರಾನಿಕ್‌ ವಿದ್ಯುನ್ಮಂಡಲ(PCB)

   

ಟ್ರಾನ್ಸಿಸ್ಟರ್‌ ಮತ್ತು ಡೈಯೋಡುಗಳ ರೇಡಿಯೋ ಮಂಡಲ

ಇಂದಿನ ದಿನಗಳಲ್ಲಿ  ಅನುಕಲಿತ ಚಿಪ್‌ ಗಳನ್ನು  ತಯಾರಿಸಲು ಬೇಕಾದ ತಳಪಾಯವನ್ನು ವೇಫರ್‌ ಎಂದು ಕರೆಯುತ್ತಾರೆ. ವೇಫರ್‌ ಎಂಬುದು ೨೫ ರಿಂದ ೩೦೦ ಮಿಮೀ ವ್ಶಾಸದ ಮತ್ತು ಕೆಲವೇ ನ್ಯಾನೋ ಮೀಟರ್‌ ನಷ್ಟು ದಪ್ಪ ವಿರುವ ವೃತ್ತಾಕಾರದ ಫಲಕ. ಇದನ್ನು ಸಿಲಿಕಾನ್‌ ಹರಳಿನಿಂದ ತಯಾರಿಸಲಾಗುತ್ತದೆ. ಒಂದು ವಿಶೇಷವಾದ ಮೂಸೆಯಲ್ಲಿ ಸಿಲಿಕಾನ್‌ ಅನ್ನು ಕರಗಿಸಿ ಬಂದ ದ್ರವ ಸಿಲಿಕಾನಿನಿಂದ ನಿಧಾನವಾಗಿ ಹರಳು ಗಟ್ಟಿಸುವ  ಮೂಲಕ  ಸಿಲಿಕಾನಿನ ಕಂಬದ ಆಕೃತಿಯ ಗಟ್ಟಿಯನ್ನು ತಯಾರಿಸಲಾಗುತ್ತದೆ. ಇಂತಹ ಕಂಬಾಕೃತಿಯನ್ನು ಅಡ್ಡಲಾಗಿ ಸೀಳಿದಾಗ ವೃತ್ತಾಕಾರದ ಫಲಕಗಳು ದೊರೆಯುತ್ತವೆ. ಅವುಗಳನ್ನು ಯಾಂತ್ರಕವಾಗಿ ಮತ್ತು ರಾಸಾಯನಿಕಗಳ ಸಹಾಯದಿಂದ ಉಪಚಾರ ಮಾಡಿ ಮೇಲ್ಮೈ ನಯಗೊಳಿಸಲಾಗುತ್ತದೆ. ಹೀಗೆ ಪಡೆದ ವೇಫರಿನ ಮೇಲೆ ಫೋಟೋಲಿಥೋಗ್ರಫಿ ಎನ್ನುವ ವಿಧಾನದಿಂದ ಬೇರೆ ಬೇರೆ ಲೋಹ ಅಲೋಹಗಳನ್ನು ಬಳಿಸಿಕೊಂಡು ಒಂದು ವಿದ್ಯುನ್ಮಾನ ಮಂಡಲಕ್ಕೆ ಅಗತ್ಯವಾದ ಡೈಯೋಡು, ಟ್ರಾನ್ಸಿಸ್ಟರ್‌, ಧಾರಕ, ರೋಧಕಗಳನ್ನು ಮತ್ತು ಅವುಗಳನ್ನು ಸಂಪರ್ಕಿಸುವ ಜಾಲವನ್ನು ನ್ಯಾನೋಮೀಟರ್‌  ಅಳತೆಯಲ್ಲಿ ಮುದ್ರಿಸಲಾಗುತ್ತದೆ. ಒಂದು ಸಿಲಿಕಾನ್ ವೇಫರ್ ಮೇಲೆ ಡೈ ಎಂದು ಕರೆಯಲಾಗುವ ನೂರಾರು ಅಥವಾ ಸಾವಿರಾರು ಒಂದೇ ರೀತಿಯ ಸರ್ಕ್ಯೂಟ್‌ಗಳೊಂದಿಗೆ ಹಲವಾರು ಪದರಗಳಲ್ಲಿ ಮುದ್ರಿಸಲಾಗುತ್ತದೆ. ಅವುಗಳ ಗಾತ್ರವನ್ನು ಅವಲಂಬಿಸಿ, ಪ್ರಮಾಣಿತ 300 ಮಿಮೀ (12-ಇಂಚಿನ) ವೇಫರ್ 100 ರಿಂದ 1,000 ಕ್ಕೂ ಹೆಚ್ಚು ವೈಯಕ್ತಿಕ ಡೈಗಳನ್ನು ನೀಡುತ್ತದೆ, ಪ್ರತಿಯೊಂದೂ ಸಾವಿರದಿಂದ ಶತಕೋಟಿ ಟ್ರಾನ್ಸಿಸ್ಟರ್‌ಗಳನ್ನು ಹೊಂದಿರುತ್ತದೆ. ಆಧುನಿಕ ಗ್ರಾಫಿಕ್ಸ್ ಕಾರ್ಡ್‌ಗಳು ಮತ್ತು ಡೆಸ್ಕ್‌ ಟಾಪ್ ಪ್ರೊಸೆಸರ್‌ಗಳು ಒಂದೇ ದೊಡ್ಡ ಡೈನಲ್ಲಿ 100 ರಿಂದ 336 ಕ್ಕೂ ಹೆಚ್ಚು ಬಿಲಿಯನ್ ಟ್ರಾನ್ಸಿಸ್ಟರ್‌ಗಳನ್ನು ಸುಲಭವಾಗಿ ಒಳಗೊಂಡಿರಬಹುದು.  
ದಿನಕಳೆದಂತೆ ಅತ್ಯಂತ ಕಡಿಮೆ ಜಾಗದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯ ಎಲೆಕ್ಟ್ರಾನಿಕ್‌ ಮಂಡಲವನ್ನು ಸಿಲಿಕಾನ ವೇಫರಿನ ಮೇಲೆ ರೂಪಿಸುವ ತಂತ್ರಜ್ಞಾನ ಸೂಕ್ಷ್ಮವಾಗುತ್ತಾ  ಹೋಗಿದೆ.  ಮೈಕ್ರೋಚಿಪ್ ತಯಾರಿಕೆಯಲ್ಲಿ, ನ್ಯಾನೋಮೀಟರ್‌ಗಳು (nm) ಎನ್ನುವ ಪಾರಿಭಾಷಿಕ ಪದ ಚಿಪ್‌ನಲ್ಲಿರುವ ಟ್ರಾನ್ಸಿಸ್ಟರ್‌ಗಳ ಗಾತ್ರವನ್ನು ಉಲ್ಲೇಖಿಸುತ್ತವೆ. ಇಂದು ಸಣ್ಣ nm  ಗಾತ್ರದ ಟ್ರಾನ್ಸಿಸ್ಟರುಗ̧ಳು, ಧಾರಕಗಳು, ರೋಧಗಳು ಸಾಮಾನ್ಯವಾಗಿ ಹೆಚ್ಚಿನ ಕಾರ್ಯಕ್ಷಮತೆ, ಸುಧಾರಿತ ಶಕ್ತಿ ದಕ್ಷತೆಯನ್ನು ಹೊಂದಿರುತ್ತವೆ. ಮತ್ತು ಒಂದೇ ಜಾಗದಲ್ಲಿ ಪ್ಯಾಕ್ ಮಾಡಲಾದ ಹೆಚ್ಚಿನ ಸಂಖ್ಯೆಯ  ಧಾರಕಗಳು, ರೋಧಗಳು ಟ್ರಾನ್ಸಿಸ್ಟರ್‌ಗಳನ್ನು ಅರ್ಥೈಸುತ್ತದೆ.  ಈ ಸಾಧನಗಳನ್ನು ಜೋಡಿಸುವ ಬೆಸುಗೆ ಅಥವಾ ಜೋಡಣೆಗಳನ್ನು ನೋಡ್‌ ಎಂದು ಕರೆಯಲಾಗುತ್ತದೆ. ಈ  ನೋಡ್‌ ಗಳು ಸಹ ಅತಿ ಸೂಕ್ಷ್ಮವಾಗಿರಬೇಕಾಗುತ್ತದೆ. 2nm  ರಿಂದ 3nm: ಗಾತ್ರದ ನೋಡ್‌(ಜೋಡಣೆ)ಗಳು ಇರುವ ಉನ್ನತ-ಮಟ್ಟದ ಪ್ರೊಸೆಸರ್‌ಗಳನ್ನು ಸ್ಮಾರ್ಟ್‌ಫೋನ್‌ಗಳು ಮತ್ತು ಉನ್ನತ-ಶ್ರೇಣಿಯ ಕಂಪ್ಯೂಟಿಂಗ್ ಹಾರ್ಡ್‌ವೇರ್‌ಗಳಲ್ಲಿ ಬಳಸಲಾಗುವುದು. ೫nm ರಿಂದ ೭nm ಗಾತ್ರದ ನೋಡ್‌(ಜೋಡಣೆ)ಗಳು ಇರುವ ಪ್ರೀಮಿಯಂ ಪ್ರೋಸೆಸರುಗಳನ್ನು ಮಧ್ಯಮದಿಂದ ಉನ್ನತ-ಮಟ್ಟದ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಮಧ್ಯಮ-ಶ್ರೇಣಿಯ ಕಂಪ್ಯೂಟರ್ ಪ್ರೊಸೆಸರ್‌ಗಳಲ್ಲಿ ಬಳಸಲಾಗುವುದು. 10nm  ನಿಂದ 28 nm   ಗಾತ್ರದ ನೋಡ್‌(ಜೋಡಣೆ)ಗಳು ಇರುವ ಹಳೆಯ ಪ್ರೊಸೆಸರ್‌ಗಳು, ಆಟೋಮೋಟಿವ್ ಮೈಕ್ರೋಕಂಟ್ರೋಲರ್‌ಗಳು ಮತ್ತು ದೈನಂದಿನ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. (ಮಾನವನ ತಲೆಗೂದಲು ೫೦,೦೦೦ ದಿಂದ ೧,೦೦,೦೦೦ ನ್ಯಾನೋಮೀಟರುಗಳು!).  

ಒಂದು ವೇಫರಿನಲ್ಲಿ ಡಜನ್‌ಗಳಿಂದ ಇಡಿದು ಸಾವಿರಾರು ಡೈಗಳನ್ನು ಒಂದು ಸಮತಲದಲ್ಲಿ ಹಾಗೂ ಹಲವಾರು ಪದರಗಳಲ್ಲಿ ಇರಿಸಬಹುದು.  ವೇಫರ್ ಗಾತ್ರದ ಇಂದಿನ ಅತಿದೊಡ್ಡ ಮಾನದಂಡ 450mm. ಡೈ ಗಾತ್ರವು ಸಣ್ಣ ಮಿಲಿಮೀಟರ್ ಚದರ ಚಿಪ್‌ಗಳಿಂದ 25mm ಗಿಂತ ಹೆಚ್ಚಿನ ಫ್ಲಿಪ್ ಚಿಪ್ ಸ್ಕೇಲ್ ಪ್ಯಾಕೇಜ್‌ಗಳವರೆಗೆ ಇರುತ್ತದೆ. ಚಿಪ್‌ ನ ಸಾಂದ್ರತೆಯನ್ನು ಸರ್ಕ್ಯೂಟ್ ಜ್ಯಾಮಿತಿಗಳು ಎಷ್ಟು ಚಿಕ್ಕದಾಗಿದೆ ಮತ್ತು ಪ್ಯಾಕ್ ಮಾಡಲ್ಪಟ್ಟಿವೆ ಎಂಬುದನ್ನು ಅವಲಂಬಿಸಿರುತ್ತದೆ.  ಜಗತ್ತಿನಲ್ಲಿ ಸಾಮರ್ಥ್ಯದಲ್ಲಿ ಮುಂಚೂಣಿಯಲ್ಲಿರುವ ಫ್ಯಾಬುಗಳು ಸುಧಾರಿತ ಪ್ರಕ್ರಿಯೆಗಳನ್ನು ಬಳಸಿ ಒಂದೇ 300mm ವೇಫರ್‌ನಲ್ಲಿ ಸಾವಿರಕ್ಕೂ ಹೆಚ್ಚು ಡೈಗಳನ್ನು ಕೂಡಿಸಿಡಲು ಅವಕಾಶ ಕಲ್ಪಿಸುತ್ತವೆ!

ಸಿಲಿಕಾನ್‌ ಸಿಲಿಂಡರಾಕೃತಿಯ ಗಟ್ಟಿ ಮತ್ತು ಅದರಿಂದ ಕತ್ತರಿಸಿದ  ತೆಗೆದ ವೇಫರ್‌ ಫಲಕ


ಒಂದೇ ವೇಫರಿನ ಮೇಲೆ ಅಸಂಖ್ಯಾತ ಮೈಕ್ರೋ ಚಿಪ್‌ ಗಳನ್ನು ಮುದ್ರಿಸಿರುವುದು.    

ಎಲ್ಲಾ ಆಧುನಿಕ ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಕಚ್ಚಾ ಸಿಲಿಕಾನ್‌ನಲ್ಲಿ ಅಚ್ಚೊತ್ತಿದ ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳು ಬೇಕಾಗುತ್ತವೆ. ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು, ಉಪಕರಣಗಳು, ವಾಹನಗಳು - ಸೆಮಿಕಂಡಕ್ಟರ್ ವೇಫರ್‌ಗಳು ಅವೆಲ್ಲಕ್ಕೂ ಶಕ್ತಿ ನೀಡುತ್ತವೆ. ಪ್ರಜ್ವಲಿಸುವ ವೇಗದ 5G ನೆಟ್‌ವರ್ಕ್‌ಗಳು ಸಿಲಿಕಾನ್‌ನಿಂದ ನಿರ್ಮಿಸಲಾದ RF ಚಿಪ್‌ಗಳನ್ನು ಅವಲಂಬಿಸಿವೆ. ಗೇಮಿಂಗ್‌ಗಾಗಿ GPU ಗಳು, ಸ್ಟ್ರೀಮಿಂಗ್ ಶೋಗಳಿಗಾಗಿ ವೀಡಿಯೊ ಸಂಸ್ಕರಣಾ ಚಿಪ್‌ಗಳು, ಸಂಗೀತಕ್ಕಾಗಿ ಆಡಿಯೊ ಕೋಡೆಕ್ ಚಿಪ್‌ಗಳು - ಎಲ್ಲವೂ ಸುಧಾರಿತ ಸೆಮಿಕಂಡಕ್ಟರ್ ಚಿಪ್‌ಗಳನ್ನು ಬಯಸುತ್ತವೆ. ಬಾಹ್ಯಾಕಾಶ ಸಂಸ್ಥೆಗಳು ಅವುಗಳ ಬಾಳಿಕೆ ಮತ್ತು ವಿಕಿರಣ ಪ್ರತಿರೋಧದಿಂದಾಗಿ ದೃಢವಾದ ಸೆಮಿಕಂಡಕ್ಟರ್ ವೇಫರ್‌ಗಳನ್ನು ಬಳಸುತ್ತವೆ. ಸೌರ ಫಲಕಗಳು, ವಿಂಡ್ ಟರ್ಬೈನ್‌ಗಳು, ವಿದ್ಯುತ್ ವಾಹನಗಳು, ಸ್ಮಾರ್ಟ್ ಪವರ್ ಗ್ರಿಡ್‌ಗಳು  ಈ ಕ್ಷೇತ್ರದಲ್ಲಿಯೂ ಸೆಮಿಕಂಡಕ್ಟರ್ ವೇಫರ್‌ಗಳು ಹಸಿರು ತಂತ್ರಜ್ಞಾನಕ್ಕೆ ಚಾಲನೆ ನೀಡುತ್ತವೆ. ಐಸಿಯು ಘಟಕದ ಸಾಧನಗಳು, ಪೇಸ್‌ ಮೇಕರಿನಂತಹ ನಾವು ಧರಿಸಬಹುದಾದ ವೈದ್ಯಕೀಯ ಸಾಧನಗಳು, ನಿಖರವಾದ ಔಷಧ ವಿತರಣಾ ವ್ಯವಸ್ಥೆಗಳು, ರೋಗ ನೈದಾನಿಕ ವಿಧಾನಗಳಾದ MRI ಯಂತ್ರಗಳು ಮತ್ತು ಇತರ ಜೀವ ಉಳಿಸುವ ತಂತ್ರಜ್ಞಾನಗಳು ಅತ್ಯಾಧುನಿಕ ಸಿಲಿಕಾನ್ ಮೈಕ್ರೋಚಿಪ್‌ಗಳನ್ನು ಅವಲಂಬಿಸಿವೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಟೆಲಿಮೆಡಿಸಿನ್‌, ಟೆಲಿ ಸರ್ಜರಿಗಳಂತಹ ಅತ್ಯಂತ ಆಧುನಿಕ ವೈದ್ಯಕೀಯ ಸೇವೆಗಳನ್ನು ಸಿಲಿಕಾನ್‌ ಮೈಕ್ರೋ ಚಿಪ್‌ಗಳಿಲ್ಲದೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

ಇಪ್ಪತ್ತೊಂದನೇ ಶತಮಾನದ ಇಂದಿನ ಜಗತ್ತಿನಲ್ಲಿ ಯಾರಾದರೂ ಸರಿ ಮೇಲುಗೈ ಸಾಧಿಸಲು ಇನ್ನು ಮುಂದೆ ಯುದ್ಧಭೂಮಿಗಳಲ್ಲಿ ಅಥವಾ ತೈಲ ಮಾರುಕಟ್ಟೆಗಳಲ್ಲಿ ಹೋರಾಟ ನಡೆಯುವುದಿಲ್ಲ. ಈಗ ಅದು ಅರೆವಾಹಕಗಳ ಸೂಕ್ಷ್ಮ ಸರ್ಕ್ಯೂಟ್‌ಗಳಲ್ಲಿ ನಡೆಯುತ್ತದೆ. ಸುಂಕಗಳು ಮತ್ತು ಆರೋಪಗಳ ಸುರಿಮಳೆಯ ವ್ಯಾಪಾರ ಯುದ್ಧವಾಗಿ ಪ್ರಾರಂಭವಾದದ್ದು ಈಗ ಹೆಚ್ಚು ಅಪಾಯಕಾರಿಯಾಗಿ ವಿಕಸನಗೊಂಡಿದೆ. ಪೂರ್ಣ ಪ್ರಮಾಣದ ತಂತ್ರಜ್ಞಾನ ಯುದ್ಧ, ಇದು ಸಾಮಾನ್ಯ ಜನರ ಗಮನಕ್ಕೆ ಬರದಷ್ಟು ಚಿಕ್ಕದಾದರೂ ಆಳವಾದ ಕಾರ್ಯತಂತ್ರದ ಬುನಾದಿಯ ಮೇಲೆ ನಿರ್ಮಿಸಲ್ಪಟ್ಟಿದೆ. ಇಂದಿನ ಪರಿಸ್ಥಿತಿಯು ಹೇಗಿದೆ ಎಂದರೆ "ಚಿಪ್‌ಗಳನ್ನು ನಿಯಂತ್ರಿಸುವವನು ಜಗತ್ತನ್ನು ನಿಯಂತ್ರಿಸುತ್ತಾನೆ." AI, ಕ್ವಾಂಟಮ್ ಕಂಪ್ಯೂಟಿಂಗ್, ಜಾಗತಿಕ ಪೂರೈಕೆ ಸರಪಳಿ ಮತ್ತು ಮುಂದುವರಿದ ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ಪೂರೈಕೆಯ ಭವಿಷ್ಯದ ಮೇಲೆ ಹಿಡಿತ ಹೊಂದುವ ಗುರಿಗೆ ಚಿಪ್‌ ಈಗ ಕತ್ತಿ ಮತ್ತು ಗುರಾಣಿ ಎರಡೂ ಆಗಿದೆ. ಏಕೆಂದರೆ ನಮ್ಮ ಟಿವಿಯ ರಿಮೋಟ್‌ನಿಂದ ಹಿಡಿದು ಉಪಗ್ರಹಗಳವರೆಗೆ, ಈ ಸಿಲಿಕಾನ್ ಚಿಪ್‌ಗಳು ಎಲ್ಲೆಡೆ ಪಸರಿಸಿವೆ. ಇದೊಂದು ಸಂಕೀರ್ಣವಾದ ಒಂದು ಹೋರಾಟವಾಗಿದ್ದು ಅಮೆರಿಕಾ ಮತ್ತು ಚೈನಾ ಪರಸ್ಪರ ಕತ್ತಿ ಮಸೆಯುತ್ತಿವೆ. ಅಮೆರಿಕಾ ತನ್ನ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿದೆ. ಇತ್ತಲಾಗಿ ಚೈನಾ ರಿವರ್ಸ್‌  ಎಂಜಿನೀರಿಂಗ್‌ ಎನ್ನುವ ನಕಲು ಮಾಡುವುದರ ಮೂಲಕ ಮೇಲುಗೈ ಸಾಧಿಸಲು ಯತ್ನಿಸುತ್ತಿದೆ. ಅತ್ತ ಅಮೆರಿಕಾ ಚಿಪ್‌ ತಯಾರಿಕೆಗೆ ಬೇಕಾದ ಲಿಥೋಗ್ರಫಿ ಯಂತ್ರದಿಂದ ಆರಂಭಿಸಿ ಕಚ್ಚಾಪದಾರ್ಥಗಳು ಚೈನಾಗೆ ದೊರೆಯದಂತೆ ದಿಗ್ಬಂಧನ ವಿಧಿಸಿದೆ.  ಇಂತಹ ಅತಿ ಮುಂದುವರೆದ ತಂತ್ರಜ್ಞಾನದ ಹೋರಾಟದಲ್ಲಿ ಭಾರತವೂ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಸಕ್ರಿಯವಾಗಿ ತೊಡಗಿಸಿಕೊಂಡಿದೆ.  ಬಹಳ ಮುಖ್ಯವಾಗಿ  ತೈವಾನ್‌ ದೇಶದ ಎರಡು ಚಿಪ್‌ ತಯಾರಿಕಾ ಸಂಸ್ಥೆಗಳಾದ TSMC ಮತ್ತು PSMC ಜಗತ್ತಿನ ಬಹುತೇಕ ಚಿಪ್‌ಗಳ ಬೇಡಿಕೆಯನ್ನು ಪೂರೈಸುತ್ತಿವೆ. Intel, NVIDIA, AMD ದಂತಹ ಬ್ರಾಂಡ್‌ ದಿಗ್ಗಜ ಚಿಪ್‌ ತಯಾರಕರೂ ಸಹ ಈ ಕಂಪನಿಗಳಿಗೆ ಚಿಪ್‌ ತಯಾರಿಕೆಯ ಹೊರಗುತ್ತಿಗೆ ನೀಡುತ್ತವೆ. ಇವುಗಳಲ್ಲದೆಯೆ ದಕ್ಷಿಣ ಕೊರಿಯಾದ SAMSUNG , ಚೈನಾದ  Huawei ಮತ್ತು SMIC ಸಹ ಚಿಪ್‌ ತಯಾರಿಕೆಯ ಮುಂಚೂಣಿಯಲ್ಲಿವೆ. ಕರೋನ ಸಮಯದಲ್ಲಿ ಚಿಪ್‌ ತಯಾರಿಕೆ ಮತ್ತು ಪೂರೈಕೆಯಲ್ಲಿ ಆದ ಬಿಕ್ಕಟ್ಟು ಭಾರತವನ್ನು ಒಳಗೊಂಡು ವಿಶ್ವದ ಅನೇಕ ರಾಷ್ಟ್ರಗಳು ಚಿಪ್‌ ತಯಾರಿಕೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ದಿಟ್ಟಿನಲ್ಲಿ ಗಂಭೀರವಾಗಿ ಯೋಚಿಸುವಂತೆ ಮಾಡಿತು. ಜೊತೆಗೆ ಚಿಪ್‌ ತಯಾರಿಕೆ ಮತ್ತು ಅದಕ್ಕೆ ಅದಕ್ಕೆ ಅಗತ್ಯವಾದ ವಿಶೇಷ ಲೋಹಗಳು ಮತ್ತು ಸಾಮಗ್ರಗಳ ಪೂರೈಸುವಲ್ಲಿ ಚೈನಾ ಅನುಸರಿಸಿದ ಬ್ಲಾಕ್ಮೇಲ್‌ ತಂತ್ರವು ಎಲೆಕ್ಟ್ರಾನಿಕ್‌ ಸಾಧನಗಳು, ಗೃಹ ಉಪಯೋಗಿ ಸಾಧನಗಳು, ವಾಹನಗಳು ಮುಂತಾದ ಉದ್ಯಮಗಳು ನಿಧಾನಗೊಳ್ಳಲು ಕಾರಣವಾಗಿ ಅಭಿವೃದ್ಧಿಯು ಕುಂಟಿತವಾಗುವ ಸೂಚನೆಗಳು ಬರತೊಡಗಿದವು. ಇಂತಹ ಪರಿಸ್ಥಿತಿಯಲ್ಲಿ ಭಾರತವು ಚಿಪ್‌ ತಯಾರಿಕೆಯಲ್ಲಿ ಗಂಭೀರವಾಗಿ  ಯೋಚಿಸುವುದರ ಜೊತೆಗೆ ಕಾರ್ಯರೂಪಕ್ಕೆ ಇಳಿಸಲು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮುಂದೆ ಬಂದು ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ದಿಕ್ಕಿನಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿವೆ.  ತೈವಾನಿನ ಚಿಪ್‌ ತಯಾರಿಕಾ ಸಂಸ್ಥೆಗಳು ಭಾರತದಲ್ಲಿ ಖಾಸಗಿ ವಲಯದೊಂದಿಗೆ ಜಂಟಿಯಾಗಿ ಚಿಪ್‌ ತಯಾರಿಕಾ ಘಟಕಗಳನ್ನು ಆರಂಭಿಸಲು ಆಸಕ್ತಿ ತೋರಿ ಮುಂದೆ ಬಂದಿವೆ.

ಸಿಲಿಕಾನ್‌ ವೇಫರಿನ ಮೇಲೆ  ನೇರಳಾತೀತ ಕಿರಣಗಳನ್ನು ಹಾಯಿಸಿ ಸರ್ಕೀಟುಗಳನ್ನು ಲಿಥೋಗ್ರಫಿಯ ಮೂಲಕ ಮುದ್ರಿಸುವ ASML ಯಂತ್ರ



       ಚಿಪ್‌ ತಯಾರಿಕೆಗೆ ಬೇಕಾದ ಯಂತ್ರೋಪಕರಣಗಳನ್ನು ತಯಾರಿಸುವ ASML ಕಂಪನಿಯು ನೆದರ್ಲ್ಯಾಂಡಿನದು.  ಈ ಹಿಂದೆ ಭಾರತದಲ್ಲಿ ರೇಡಿಯೋ ಟ್ರಾನ್ಸಿಸ್ಟರುಗಳಿಗೆ ಹೆಸರುವಾಸಿಯಾಗಿದ್ದ ಫಿಲಿಪ್ಸ್‌ನ ಸಹಯೋಗದ ಈ ಕಂಪನಿಯು ಸಿಲಿಕಾನ್‌ ವೇಫರಿನ ಮೇಲೆ  ನೇರಳಾತೀತ ಕಿರಣಗಳನ್ನು ಹಾಯಿಸಿ ಸರ್ಕೀಟುಗಳನ್ನು ಲಿಥೋಗ್ರಫಿಯ ಮೂಲಕ ಮುದ್ರಿಸುವ ಯಂತ್ರಗಳನ್ನು ತಯಾರಿಸುವ ವಿಶ್ವದ ಏಕೈಕ ಕಂಪನಿಯಾಗಿದೆ. ಇದಕ್ಕೆ ಬಿಡಿಭಾಗಗಳನ್ನು ಜರ್ಮನಿಯ Carl Zeiss ನಿಂದ ಆರಂಭಿಸಿ ಅಮೆರಿಕಾವನ್ನೂ ಒಳಗೊಂಡು ವಿಶ್ವದ ಅನೇಕ ಸಂಸ್ಥೆಗಳು ಪೂರೈಸುತ್ತವೆ. ಇತ್ತೀಚೆಗಷ್ಟೆ ಭಾರತದ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ ಮತ್ತು  ASML ಒಪ್ಪಂದ  ಮಾಡಿಕೊಂಡಿವೆ. ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಗುಜರಾತಿನ ದೊಲೇರಾ ಎಂಬಲ್ಲಿ ನಿರ್ಮಿಸಲಾಗುತ್ತಿರುವ ಸ್ಮಾರ್ಟ್‌ ಸಿಟಿಯಲ್ಲಿ ಸುಮಾರು ೧೭೦ ಎಕರೆ ಪ್ರದೇಶದಲ್ಲಿ ಬೃಹತ್ತಾದ ಚಿಪ್‌ ಕಾರ್ಖಾನೆಯನ್ನು ಸ್ಥಾಪಿಸಲಿದೆ. ಇಲ್ಲಿ ಚಿಪ್‌ ಗಳನ್ನು ತಯಾರಿಸಲು ಬೇಕಾದ ಯಂತ್ರಗಳನ್ನು ಪೂರೈಸಲು ASML ಬದ್ಧವಾಗಿದೆ. ಚಿಪ್‌ ತಯಾರಿಕೆಯ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಒದಗಿಸಲು ತೈವಾನಿನ PSMC ಯೊಂದಿಗೆ ಈಗಾಗಲೆ ಒಪ್ಪಂದವಾಗಿದೆ. ವಾಹನಗಳ ಬಿಡಿಭಾಗಗಳನ್ನು ತಯಾರಿಸುವ ಕೊವಾಲಮ್‌ ವಾಹನಗಳಲ್ಲಿ ಬಳಸುವ  ಚಿಪ್‌ ಆಧಾರಿತ ಸಾಧನಗಳ ತಯಾರಿಕೆ ವಿತರಣೆಯಲ್ಲಿ ಸಹಭಾಗಿಯಾಗಲಿದೆ. ROHM ಎಂಬ ಸಂಸ್ಥೆಯು ಚಿಪ್‌ ತಯಾರಿಕೆಗೆ ಅಗತ್ಯವಾದ ಸೆಮಿಕಂಡಕ್ಟರುಗಳನ್ನು ಪೂರೈಸಲಿದೆ. ಜಗತ್ತಿನ ಮುಂಚೂಣಿಯ ಮೈಕ್ರೋಪ್ರೋಸೆಸರ್‌ ಸಂಸ್ಥೆಯಾದ ಇಂಟೆಲ್‌ ಸಂಸ್ಥೆಯು ಟಾಟಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಇಂಟೆಲ್‌ ಬ್ರಾಂಡಿನ ಮೈಕ್ರೋ ಪ್ರೋಸೆಸರ್‌ಗಳನ್ನು ಭಾರತದಲ್ಲಿಯೇ ತಯಾರಿಸಲು ಸಿದ್ಧತೆ ನಡೆದಿದೆ.  ಅಸ್ಸಾಮಿನ ಜಾಗಿರೋಡ್‌ ಎಂಬಲ್ಲಿ ಟಾಟಾ ಸಂಸ್ಥೆಯು  ಸೆಮಿಕಂಡಕ್ಟರ್‌ ಜೋಡಣೆ ಮತ್ತು ಪರೀಕ್ಷೆಗೆಂದು ಒಂದು ಹೊರಗುತ್ತಿಗೆಯ ಸ್ಥಾವರವನ್ನು ನಿರ್ಮಿಸುತ್ತಿದೆ. ಇಲ್ಲಿ ಚಿಪ್‌ಗಳ ಜೋಡಣೆ, ಪರೀಕ್ಷೆ ಮತ್ತು ಪ್ಯಾಕೇಜಿಂಗೆ ನಡೆಯುತ್ತದೆ. ಕೊಹಿಮಾದಲ್ಲಿರುವ ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ಎಲೆಕ್ಟ್ರಾನಿಕ್ಸ್‌ ಅಂಡ್‌ ಇನ್ಫಾರ್ಮೇಷನ್‌ ಸಂಸ್ಥೆಯು ಭಾರತದಲ್ಲಿ ಸ್ಥಾಪನೆಯಾಗುವ ಚಿಪ್‌ ತಯಾರಿಕಾ ಸಂಸ್ಥೆಗಳಿಗೆ ಬೇಕಾದ ಪರಿಣಿತ ತಂತ್ರಜ್ಞರನ್ನು ತರಬೇತಿಗೊಳಿಸಿ ಕೊಡುತ್ತದೆ. ಭಾರತ್‌ ಎಲೆಕ್ಟ್ರಾನಿಕ್ಸ್‌ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಲಹೆ ಸೂಚನೆಗಳನ್ನು ನೀಡಲು ಒಪ್ಪಂದ ಮಾಡಿಕೊಂಡಿದೆ. ಟಾಟಾರವರಲ್ಲದೆ ಹಲವಾರು ಇತರೆ ಕಂಪನಿಗಳು ಭಾರತದಲ್ಲಿಯೆ ಚಿಪ್‌ ತಯಾರಿಸುವ ಸೆಮಿಕಂಡಕ್ಟರ್‌ ಉದ್ಯಮದಲ್ಲಿ ತೊಡಗಿವೆ. ಅವುಗಳ ಹೆಸರಿಸಬಹುದಾದವೆಂದರೆ Micron, Kaynes Semicon,CG Semi, Saankhya Labs, Tessolve, MosChip Technologies. ಇವುಗಳಿಗೆ ಹೆಗಲು ನೀಡುವ ಹಲವಾರು MSMEಗಳು ತಲೆಯೆತ್ತುತ್ತಲಿವೆ. ಬೆಳೆಯುತ್ತಿರುವ  ಎಐ ತಂತ್ರಜ್ಞಾನವು ಅತ್ಯಧಿಕ ಮೆಮೊರಿಯನ್ನು ಬೇಡುವುದರಿಂದ ಚಿಪ್‌ ಗಳ ಬೇಡಿಕೆಯು ದಿಡೀರನೆ ಹೆಚ್ಚಿದೆ. ಜೊತೆಗೆ ವಿಶ್ವದ ರಾಜಕೀಯದ ಪ್ರಭಾವದಿಂದ ಚಿಪ್‌ ಗಳ ಪೂರೈಕೆಯಲ್ಲಿ ಬಿಕ್ಕಟ್ಟನ್ನು ಸೃಷ್ಠಿಸಿರುವುದರಿಂದ ಚಿಪ್‌ ಗಳ  ಮತ್ತು ಕಂಪ್ಯೂಟರ್‌ ಮುಂತಾದ ಸಾಧನಗಳ ಬೆಲೆಗಳು ವಿಪರೀತವಾಗಿ ಏರುತ್ತಿವೆ. ಇಂತಹ ಸಮಯದಲ್ಲಿ ಭಾರತವು ಚಿಪ್‌ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ದಿಟ್ಟ ಹೆಜ್ಜೆ ಇಟ್ಟಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ.