ಮಿತಿಯಿಲ್ಲದ ಏಣಿ ಏರಿದ ವಿಜ್ಞಾನಯೋಗಿ
( ಭಾರತ ರತ್ನ ಪ್ರೊ. ಸಿ. ಎನ್. ಆರ್. ರಾವ್ ಅವರ ಬದುಕು ಮತ್ತು ವಿಜ್ಞಾನಯಾತ್ರೆ)
ಲೇಖನ : ರಾಮಚಂದ್ರ ಭಟ್ ಬಿ.ಜಿ.
ಜೂನ್ 30 ನನ್ನ ಪಾಲಿಗೆ ವಿಶೇಷ ದಿನ. ಅದು ನಮ್ಮ ಪ್ರೀತಿಯ , ಇಂದಿಗೂ ಸಂಶೋಧನಾ ಪ್ರವೃತ್ತಿಯಲ್ಲಿ ಮುಂದುವರೆದ ಕಾಯಕಯೋಗಿ ಭಾರತ ರತ್ನ ಪ್ರೊ. ಸಿ. ಎನ್. ಆರ್. ರಾವ್ ರವರ ಜನ್ಮ ದಿನ. ಹಲವು ವರ್ಷಗಳಿಂದ ಆ ದಿನದಂದು JNCASR ಗೆ ಭೇಟಿ ನೀಡಿ ವೈಜ್ಞಾನಿಕ ಸಂಶೋಧನೆಯ ಹೊಸ ಮಜಲನ್ನು ತಿಳಿದುಕೊಳ್ಳವ ಅವಕಾಶ. ಸಂಶೋಧಕ ಸ್ನೇಹಿತರಾದ ಡಾ. ವಿನಾಯಕ ಪತ್ತಾರರ ಪ್ರೀತಿಯ ಆಹ್ವಾನದ ಮೇರೆಗೆ ಪ್ರತಿ ವರ್ಷದಂತೆ ಈ ಬಾರಿಯೂ ಪ್ರೊ. ರಾವ್ರವರನ್ನು ಭೇಟಿ ಮಾಡುವ ಅವಕಾಶ ಸವಿಜ್ಞಾನದ ಕೆಲವು ಸದಸ್ಯರಿಗೆ ದೊರೆಯಿತು. ಈ ಬಾರಿ ಸ್ನೇಹಿತ ನವೀನ್ ರವರಿಗೆ ನಾಗಾಲ್ಯಾಂಡ್ ನ ಜಾಂಬೆನಿ ಲೋಥಾ ಮತ್ತು ಉತ್ತರಾಖಂಡದ ಡಾ. ನರೇಂದ್ರ ಸಿಂಗ್ ರಿಗೆ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿತ್ತು. ೯೨ರ ಹರೆಯದ ಇಳಿವಯಸ್ಸಿನಲ್ಲೂ , ಅನಾರೋಗ್ಯದ ನಡುವೆಯೂ ಇನ್ನೂ ಸಂಶೋಧನೆಗೆ ತೊಡಗಿಕೊಳ್ಳುವ ಅಮಿತೋತ್ಸಾಹ ಅನುಕರಣೀಯ. ಎದ್ದು ನಿಲ್ಲಲೂ ಆಗದ ಆ ಸ್ಥಿತಿಯಲ್ಲೂ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಸಹಾಯಕರ ಸಹಾಯದೊಂದಿಗೆ ಗಾಲಿಕುರ್ಚಿಯಿಂದ ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ್ದು ಮರೆಯಲಾಗದ ಅನಿರ್ವಚನೀಯ ಭಾವದೊಂದಿಗೆ ಅವರೆಡೆಗೆ ಕುಂದಿಲ್ಲದ ಅಪಾರ ಗೌರವವನ್ನು ತಂದಿತು.
ಪ್ರೊ .ರಾವ್ ರವರ ಅವರ ಹುಟ್ಟು ಹಬ್ಬದ ಹಿಂದಿನ ದಿನ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಅವರ ಸಾಧನೆಯ ಉಲ್ಲೇಖ ಮಾಡಿದ್ದೆ. ಅಚ್ಚರಿ ಎನ್ನುವಂತೆ ಮೂವರು ಬಾಲಕಿಯರು ಮಾಹಿತಿ ಸಂಗ್ರಹಿಸಿ ಮರುದಿನವೇ ಪ್ರಬಂಧ ಲೇಖನ ಬರೆದುಕೊಂಡು ಬಂದು ನನ್ನನ್ನು ಹುಡುಕಿ ನಿರಾಶರಾದರು. ಮರುದಿನ ಬರುತ್ತಿದ್ದಂತೆ ನನ್ನಲ್ಲಿ ತಮ್ಮ ಲೇಖನದ ಬಗ್ಗೆ ತಿಳಿಸಿದರು. ತರಗತಿಯಲ್ಲಿ ಈ ಪ್ರಬಂಧ-ಲೇಖನ ಓದಿಸಬೇಕಾದರೆ ಆಕಸ್ಮಿಕವಾಗಿ ಶಾಲೆಗೆ ಭೇಟಿ ನೀಡಿದ ಉಪನಿರ್ದೇಶಕರಾದ ಶ್ರೀಯುತ ಜಯಪ್ರಕಾಶ್ ಸರ್ ಮೆಚ್ಚುಗೆಯೊಂದಿಗೆ ಈ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಪ್ರೊ. ಸಿ. ಎನ್. ಆರ್. ರಾವ್ ಅವರ ಆತ್ಮಕಥೆ- "Climbing the Limitless Ladder: A Life in Chemistry" ಮಿತಿಯಿಲ್ಲದ ವಿಜ್ಞಾನದ ಏಣಿ ಏರಿ, ನಿಜಕ್ಕೂ ಜ್ಞಾನಕ್ಕೆ ಕೊನೆಯ ಮೆಟ್ಟಿಲೇ ಇಲ್ಲ ಎಂಬುದನ್ನು ಅವರ ಜೀವನವೇ ಸಾಬೀತುಪಡಿಸಿದೆ. ಇಂತಹ ವಿಜ್ಞಾನಿಯ ಜೊತೆ ನಮಗೆ ಒಡನಾಟ ದೊರೆತದ್ದು ದೊಡ್ಡ ಸುಕೃತವೇ ಸರಿ.
ಕುತೂಹಲದಿಂದ ಆರಂಭವಾದ ವಿಜ್ಞಾನಯಾತ್ರೆ
1934ರ ಜೂನ್ 30ರಂದು ಬೆಂಗಳೂರಿನಲ್ಲಿ ಜನಿಸಿದ ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ಅವರ ಮೊದಲ ಗುರು ಅವರ ತಾಯಿ ನಾಗಮ್ಮ. ಶಾಲೆಗೆ ಹೋಗುವ ಮೊದಲು ಕಥೆಗಳ ಮೂಲಕ ವಿಜ್ಞಾನದ ಕುತೂಹಲವನ್ನು ಬೆಳೆಸಿದವರು ಅವರು. ಬಾಲ್ಯದಲ್ಲಿ ಆಟಿಕೆಗಳಿಗಿಂತ ರಾಸಾಯನಿಕ ಬಾಟಲಿಗಳೇ ಅವರಿಗೆ ಹೆಚ್ಚು ಆಕರ್ಷಣೆ. ಮನೆಯಲ್ಲಿಯೇ ಪುಟ್ಟ ರಸಾಯನಶಾಸ್ತ್ರ ಪ್ರಯೋಗಾಲಯ ನಿರ್ಮಿಸಿಕೊಂಡು ಸಣ್ಣಪುಟ್ಟ ಪ್ರಯೋಗಗಳನ್ನು ಮಾಡುತ್ತಿದ್ದರು. ಸಿಗದ ರಾಸಾಯನಿಕಗಳನ್ನು ತಾವೇ ತಯಾರಿಸಲು ಯತ್ನಿಸುತ್ತಿದ್ದರು. ಅವರ ಕುತೂಹಲವನ್ನು ನೋಡಿ ಮನೆಯವರು ಗಾಬರಿಯಾಗುತ್ತಿದ್ದರಂತೆ. ಆದರೆ ಆ ಪುಟ್ಟ ಪ್ರಯೋಗಗಳೇ ಮುಂದೆ ಜಗತ್ತಿನ ಶ್ರೇಷ್ಠ ಪ್ರಯೋಗಾಲಯಗಳಿಗೆ ಅವರನ್ನು ಕೊಂಡೊಯ್ದವು.
ವೇಗದ ವಿದ್ಯಾಭ್ಯಾಸ, ಇನ್ನೂ ವೇಗದ ಸಾಧನೆ
ಕೇವಲ 17ನೇ ವಯಸ್ಸಿನಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್ಸಿ. ಪದವಿ. 19ನೇ ವಯಸ್ಸಿನಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ. 24ನೇ ವಯಸ್ಸಿನಲ್ಲಿ ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಿಂದ ಪಿಎಚ್ಡಿ. ನಂತರ ಭಾರತೀಯ ವಿಜ್ಞಾನ ಸಂಸ್ಥೆ (IISc)ಯಲ್ಲಿ ಅತ್ಯಂತ ಕಿರಿಯ ಉಪನ್ಯಾಸಕರಾಗಿ ಸೇರಿದರು. ವಯಸ್ಸಿನಲ್ಲಿ ಯುವಕರಾಗಿದ್ದರೂ ಜ್ಞಾನದಲ್ಲಿ ಹಿರಿಯರಿಗೆ ಸವಾಲಾಗಿದ್ದರು.
ರಸಾಯನಶಾಸ್ತ್ರಕ್ಕೆ ಹೊಸ ದಿಕ್ಕು ತೋರಿದ ವಿಜ್ಞಾನಿ
ಪ್ರೊ. ರಾವ್ ಅವರನ್ನು ವಿಶ್ವದ ಶ್ರೇಷ್ಠ Solid State Chemistry ಮತ್ತು Materials Chemistry ವಿಜ್ಞಾನಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಅವರು ಮುಖ್ಯವಾಗಿ ಟ್ರಾನ್ಸಿಷನ್ ಮೆಟಲ್ ಆಕ್ಸೈಡ್ಗಳು ಎಂಬ ವಸ್ತುಗಳ ರಚನೆ, ಗುಣಲಕ್ಷಣ ಮತ್ತು ವರ್ತನೆಯನ್ನು ಅಧ್ಯಯನ ಮಾಡಿದರು. ಒಂದು ವಸ್ತು ಯಾವಾಗ ವಿದ್ಯುತ್ ವಾಹಕವಾಗುತ್ತದೆ?ಯಾವಾಗ ವಿದ್ಯುತ್ ಹರಿಯುವುದನ್ನು ನಿಲ್ಲಿಸುತ್ತದೆ?ಉಷ್ಣತೆ ಬದಲಾದಾಗ ಅದರ ಗುಣಗಳು ಏಕೆ ಬದಲಾಗುತ್ತವೆ?
ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕಿದ ಅವರ ಸಂಶೋಧನೆ ಇಂದಿನ ಎಲೆಕ್ಟ್ರಾನಿಕ್ಸ್, ಸಂವೇದಕಗಳು ಮತ್ತು ಹೊಸ ತಲೆಮಾರಿನ ವಸ್ತುಗಳ ಅಭಿವೃದ್ಧಿಗೆ ಬುನಾದಿಯಾಯಿತು. Metal–Insulator Transition, Phase Transition ಹಾಗೂ Defect Chemistry ಕ್ಷೇತ್ರಗಳಲ್ಲಿ ಅವರ ಸಂಶೋಧನೆ ಜಗತ್ತಿನ ವಿಜ್ಞಾನಿಗಳಿಗೆ ಹೊಸ ದಾರಿಯನ್ನು ತೋರಿಸಿತು.
ನ್ಯಾನೋ ಜಗತ್ತಿನ ದಾರಿದೀಪ
ಒಂದು ಕೂದಲಿನ ದಪ್ಪವನ್ನು ಸುಮಾರು ಒಂದು ಲಕ್ಷ ಭಾಗಗಳಾಗಿ ಕತ್ತರಿಸಿದರೆ ಸಿಗುವ ಗಾತ್ರವೇ ನ್ಯಾನೋಮೀಟರ್! ಅಂತಹ ಸೂಕ್ಷ್ಮ ಜಗತ್ತಿನಲ್ಲಿ ಹೊಸ ವಸ್ತುಗಳನ್ನು ನಿರ್ಮಿಸುವ ಕ್ಷೇತ್ರವೇ ನ್ಯಾನೋಟೆಕ್ನಾಲಜಿ. ಭಾರತದಲ್ಲಿ ಈ ಕ್ಷೇತ್ರದ ಬೆಳವಣಿಗೆಗೆ ಅಡಿಪಾಯ ಹಾಕಿದ ಪ್ರಮುಖ ವಿಜ್ಞಾನಿಗಳಲ್ಲಿ ಪ್ರೊ. ರಾವ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಆದ್ದರಿಂದಲೇ ಅವರನ್ನು ಭಾರತೀಯ ನ್ಯಾನೋಟೆಕ್ನಾಲಜಿಯ ಪಿತಾಮಹ ಎಂದು ಕರೆಯುತ್ತಾರೆ. ಕಾರ್ಬನ್ ನ್ಯಾನೋಟ್ಯೂಬ್ಗಳು, ನ್ಯಾನೋಪಾರ್ಟಿಕಲ್ಗಳು, ಗ್ರಾಫೀನ್, MoS₂, WS₂ ಮೊದಲಾದ ಎರಡು ಆಯಾಮದ ವಸ್ತುಗಳ ಕುರಿತು ಅವರ ಸಂಶೋಧನೆ ವಿಶ್ವದ ಗಮನ ಸೆಳೆಯಿತು. ಇವು ಇಂದು - ವೇಗವಾದ ಕಂಪ್ಯೂಟರ್ಗಳು, ಉತ್ತಮ ಬ್ಯಾಟರಿಗಳು, ಸೌರಶಕ್ತಿ ಸಾಧನಗಳು, ಹೈಡ್ರೋಜನ್ ಉತ್ಪಾದನೆ, ಶಕ್ತಿಸಂಗ್ರಹ ವ್ಯವಸ್ಥೆಗಳು, ಪರಿಸರ ಸ್ನೇಹಿ ತಂತ್ರಜ್ಞಾನ - ಇವುಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿವೆ. ಪ್ರಯೋಗಾಲಯದಲ್ಲಿ ಆರಂಭವಾದ ಸಂಶೋಧನೆ ಮಾನವ ಜೀವನವನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ.
ವಿಫಲತೆ ಅವರ ಪಾಲಿಗೆ ಶತ್ರುವಲ್ಲ
ಒಮ್ಮೆ ವಿದ್ಯಾರ್ಥಿಯೊಬ್ಬನ ಪ್ರಯೋಗ ವಿಫಲವಾಯಿತು. ಅವನು ನಿರಾಶೆಯಿಂದ, "ಸರ್... ನಮ್ಮ ಪ್ರಯೋಗ ಹಾಳಾಯಿತು." ಎಂದ. ರಾವ್ ಅವರು ನಗುತ್ತಾ, "ಹಾಗಂದುಕೊಳ್ಳಬೇಡ. ಇಂದು ನಾವು ಹೊಸ ವಿಷಯ ಕಲಿತಿವು. ಈ ವಿಧಾನದಲ್ಲಿ ಕೆಲಸ ಆಗುವುದಿಲ್ಲ ಎಂದು ಕಂಡುಹಿಡಿದಿದ್ದೇವೆ!" ಎಂದರು. ಇದೇ ವಿಜ್ಞಾನಿಯ ಮನಸ್ಥಿತಿ. ವಿಫಲತೆ ಎಂದರೆ ಅಂತ್ಯವಲ್ಲ. ಅದು ಹೊಸ ಪ್ರಯೋಗದ ಆರಂಭ. ಇದು ಎಡಿಸನ್ನ ಮನಃಸ್ಥಿತಿ . ಸಂಶೋಧಕರೆಲ್ಲರೂ ಪಾಲಿಸಲೇ ಬೇಕಾದ ಗುಣ.
ಸಂಶೋಧನೆಯಲ್ಲೇ ವಿಶ್ವದಾಖಲೆ
ಅವರ ಸಾಧನೆಗಳನ್ನು ಅಂಕೆಗಳಲ್ಲಿ ಹೇಳುವುದಾದರೆ ಅವುಗಳೇ ಆಶ್ಚರ್ಯ ಮೂಡಿಸುತ್ತವೆ.
1700ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು, 50ಕ್ಕೂ ಹೆಚ್ಚು ಪುಸ್ತಕಗಳು , 140ಕ್ಕೂ ಹೆಚ್ಚು ಪಿಎಚ್ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ , ಏಳು ದಶಕಗಳಿಗೂ ಹೆಚ್ಚು ಕಾಲ ಇಂದೂ ಮುಂದುವರೆದಿರುವ ನಿರಂತರ ಸಂಶೋಧನೆ!!!!. ಇಷ್ಟೊಂದು ಲೇಖನಗಳನ್ನು ಬರೆಯಲು ಕೆಲವರಿಗೆ ಮೂರು ಜನ್ಮವಾದರೂ ಎತ್ತಬೇಕು ಎಂದು ಅವರ ಸಹೋದ್ಯೋಗಿಗಳು ತಮಾಷೆಯಾಗಿ ಹೇಳುತ್ತಾರೆ!
ವಿದೇಶಕ್ಕಲ್ಲ, ಭಾರತಕ್ಕೇ ಆದ್ಯತೆ
ವಿಶ್ವದ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಅವರನ್ನು ಆಹ್ವಾನಿಸಿದ್ದವು. ಆದರೆ ಅವರು ಭಾರತವನ್ನೇ ಆರಿಸಿದರು. ಅವರ ನಂಬಿಕೆ ಸರಳವಾಗಿತ್ತು. "ಒಬ್ಬ ವಿಜ್ಞಾನಿಯನ್ನು ರೂಪಿಸುವುದಕ್ಕಿಂತ ನೂರು ವಿಜ್ಞಾನಿಗಳನ್ನು ರೂಪಿಸುವುದು ದೇಶಸೇವೆ." ಅದಕ್ಕಾಗಿಯೇ ಅವರು ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (JNCASR) ಸಂಸ್ಥೆಗಳನ್ನು ಬಲಪಡಿಸಿ ಸಾವಿರಾರು ಯುವ ವಿಜ್ಞಾನಿಗಳಿಗೆ ಪ್ರೇರಣೆಯಾದರು.
ಸರಳತೆಯಲ್ಲೇ ಮಹತ್ವ
ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದರೂ ಬದುಕು ಮಾತ್ರ ಅತ್ಯಂತ ಸರಳ. ಇಂದಿಗೂ ಮೊಬೈಲ್ಗಿಂತ ಪುಸ್ತಕಗಳೇ ಅವರಿಗೆ ಹೆಚ್ಚು ಇಷ್ಟ. ಇಮೇಲ್ಗಳನ್ನು ಸಹ ಬಹಳಷ್ಟು ಸಂದರ್ಭಗಳಲ್ಲಿ ಸ್ವತಃ ನೋಡಿಕೊಳ್ಳುವುದಿಲ್ಲ. ಪತ್ನಿ ಇಂದುಮತಿ ಅವರೊಂದಿಗೆ ಸೇರಿ ಗ್ರಾಮೀಣ ಮಕ್ಕಳಲ್ಲಿ ವಿಜ್ಞಾನಾಸಕ್ತಿಯನ್ನು ಬೆಳೆಸಲು ವಿಜ್ಞಾನ ಶಿಬಿರಗಳನ್ನು ನಡೆಸುತ್ತಲೇ ಇದ್ದಾರೆ. ಜ್ಞಾನ ಹೆಚ್ಚಾದಂತೆ ಅಹಂಕಾರ ಹೆಚ್ಚಬಾರದು ಎಂಬುದನ್ನು ಅವರ ಜೀವನವೇ ಕಲಿಸುತ್ತದೆ.
ಗೌರವಗಳ ಮಹಾಪರ್ವ
ಪ್ರೊ. ರಾವ್ ಅವರಿಗೆ ಲಭಿಸಿರುವ ಗೌರವಗಳು ಅವರ ಪ್ರತಿಭೆಗೆ ಸಾಕ್ಷಿ. ನಮ್ಮ ದೇಶದ ಅತ್ಯುನ್ನತ ಮೇರು ಗೌರವಗಳಾದ ಭಾರತ ರತ್ನ, ಪದ್ಮ ವಿಭೂಷಣ, ಪದ್ಮಶ್ರೀ ಗಳಲ್ಲದೇ ರಾಯಲ್ ಸೊಸೈಟಿಯ Royal Medal , Hughes Medal, Von Hippel Award , Dan David Prize, ENI Award . ಇವುಗಳಲ್ಲಿ ಎನಿ ಪ್ರಶಸ್ತಿಯು ಶಕ್ತಿಯ ಕ್ಷೇತ್ರದ ನೋಬಲ್ ಎಂದೇ ಪರಿಗಣಿತವಾಗಿದೆ. ಇವುಗಳಲ್ಲಿ ಪ್ರತಿಯೊಂದೂ ವಿಶ್ವ ವಿಜ್ಞಾನ ಲೋಕದ ಅತ್ಯುನ್ನತ ಗೌರವಗಳು .
ಇಂದು ನಾವು ಉತ್ತರಗಳನ್ನು ಗೂಗಲ್ನಲ್ಲಿ ಹುಡುಕುತ್ತೇವೆ. ಆದರೆ ವಿಜ್ಞಾನಿಗಳು ಉತ್ತರಗಳನ್ನು ಮಾತ್ರ ಹುಡುಕುವುದಿಲ್ಲ. ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತಾರೆ. ಅಂಕಗಳು ಪರೀಕ್ಷೆಯಲ್ಲಿ ಸಹಾಯ ಮಾಡಬಹುದು. ಆದರೆ ಕುತೂಹಲ ಜೀವನಪೂರ್ತಿ ನಿಮ್ಮನ್ನು ಮುಂದೆ ಕರೆದೊಯ್ಯುತ್ತದೆ. ಪ್ರತಿದಿನ ಒಂದು ಹೊಸ ಪ್ರಶ್ನೆ ಕೇಳಿ. ಒಂದು ಹೊಸ ವಿಷಯ ಓದಿ. ಒಂದು ಸಣ್ಣ ಪ್ರಯೋಗ ಮಾಡಿ. ವಿಫಲವಾದರೆ ಮತ್ತೆ ಪ್ರಯತ್ನಿಸಿ. ಇದು ಯುವ ಜನತೆಗೆ ರಾವ್ರವರ ಕಿವಿಮಾತು.
"ಮಿತಿಯಿಲ್ಲದ ಏಣಿ" ಕೇವಲ ಪ್ರೊ. ಸಿ. ಎನ್. ಆರ್. ರಾವ್ ಅವರ ಆತ್ಮಕಥೆಯ ಹೆಸರಲ್ಲ. ಅದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಗುರಿಯಾಗಬೇಕು. ಆ ಏಣಿಯ ಮೊದಲ ಮೆಟ್ಟು ಕುತೂಹಲ. ಎರಡನೆಯದು ಪರಿಶ್ರಮ. ಮೂರನೆಯದು ಶಿಸ್ತು. ನಾಲ್ಕನೆಯದು ವಿನಯ. ಐದನೆಯದು ನಿರಂತರ ಕಲಿಕೆ. ಈ ಐದು ಮೆಟ್ಟಿಲುಗಳನ್ನು ಏರಲು ಆರಂಭಿಸಿದರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.
ಜ್ಞಾನವನ್ನು ಪ್ರೀತಿಸಿ. ಪ್ರಶ್ನೆಗಳನ್ನು ಸ್ವಾಗತಿಸಿ. ಪ್ರಯೋಗಗಳಿಗೆ ಹಿಂದೇಟು ಹಾಕದಿರಿ , ವಿಫಲತೆಗೆ ಹೆದರಬೇಡಿ. ನಿಮ್ಮ ಬದುಕೂ ಒಂದು ದಿನ ಮತ್ತೊಬ್ಬರಿಗೆ ಸ್ಫೂರ್ತಿಯಾಗುವಂತೆ ನಿಮ್ಮ ವಿಜ್ಞಾನ ಯಾತ್ರೆ ಸಾಗಲಿ.
ಇಂತಹ ಶತಮಾನದ ಮೇರು ವಿಜ್ಞಾನಿಗೆ ೯೨ನೇ ಹುಟ್ಟುಹಬ್ಬದ ಶುಭಾಶಯಗಳೊಂದಿಗೆ, ಸವಿಜ್ಞಾನ ಬಳಗದ ಅಭಿಮಾನಪೂರ್ವಕ ವಂದನೆಗಳು.
