ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Tuesday, August 4, 2026

ಕೆನಡಾದಲ್ಲಿದ್ದ ಅಚ್ಚ ಕನ್ನಡಿಗ ವಿಜ್ಞಾನಿ ಸಾಹಿತ್ಯಸಾಧಕ - ಡಾ. ರಾಮಭಟ್‌ ಬಾಳಿಕೆ

ಕೆನಡಾದಲ್ಲಿದ್ದ ಅಚ್ಚ ಕನ್ನಡಿಗ ವಿಜ್ಞಾನಿ  ಸಾಹಿತ್ಯಸಾಧಕ - ಡಾ. ರಾಮಭಟ್‌ ಬಾಳಿಕೆ

ಲೇಖನ : ರಾಮಚಂದ್ರ ಭಟ್ ಬಿ.ಜಿ.

ವಿಜ್ಞಾನ ಲೇಖಕರು 




(ವಿಜ್ಞಾನ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯ ಸಂಗಮವಾದ ಅಪರೂಪದ ವ್ಯಕ್ತಿತ್ವ )
                                               

“ಒಬ್ಬ ವ್ಯಕ್ತಿ ವಿಜ್ಞಾನದಲ್ಲಿ ಜಾಗತಿಕ ಮಟ್ಟದ ಶಿಖರ ಏರಿಯೂ, ತನ್ನ ಎದೆಯ ಆಳದಲ್ಲಿ ಕನ್ನಡದ ಮಣ್ಣಿನ ವಾಸನೆಯನ್ನು ಅಳಿಸದೆ ಉಳಿಸಿಕೊಂಡಿದ್ದರೆ ಅದು ನಿಜವಾದ ಸಾಧನೆ.” 

ಈ ಮಾತಿಗೊಂದು ಜೀವಂತ ರೂಪದಂತಿದ್ದವರು ಡಾ. ರಾಮಭಟ್ ಬಾಳಿಕೆ. ವಿಜ್ಞಾನದ ಪ್ರಯೋಗಶಾಲೆಗಳಲ್ಲಿ ಜಾಗತಿಕ ಮಟ್ಟದ ಸಂಶೋಧಕ, ವಿಶ್ವವಿದ್ಯಾಲಯದ ಆಡಳಿತದ ಚುಕ್ಕಾಣಿ ಹಿಡಿದ ಮಾರ್ಗದರ್ಶಕ, ನಾಸಾದ ಗೌರವಕ್ಕೆ ಪಾತ್ರರಾದ ತಂತ್ರಜ್ಞ, ಅದೇ ಹೊತ್ತಿಗೆ ಕನ್ನಡದ ಕವಿ, ಕಾದಂಬರಿಕಾರ, ಹರಿಕಥೆಗಾರ ಹಾಗೂ ಮೃದಂಗ ವಾದಕ—ಹೀಗೆ ಹತ್ತಾರು ಲೋಕಗಳನ್ನು ಏಕಕಾಲಕ್ಕೆ ಆವಾಹಿಸಿಕೊಂಡಿದ್ದ, ತನ್ನ ಊರ ಹೆಸರಿಗೆ ತಕ್ಕಂತೆ ವಿವಿಧ ಕ್ಷೇತ್ರಗಳಿಗೆ ಹಲವು ಪೀಳಿಗೆಯವರೆಗೂ ಬಾಳಿಕೆಯಾಗುವಂತೆ ಬದುಕಿದ್ದ ಈ ಅಪರೂಪದ ವ್ಯಕ್ತಿತ್ವ ಇದೀಗ ಇತಿಹಾಸದ ಪುಟಗಳನ್ನು ಸೇರಿದೆ.

2026ರ ಮೇ 24ರಂದು ಕೆನಡಾದ ಟೊರೆಂಟೋದಲ್ಲಿ ಅವರು ವಿಧಿವಶರಾದ ಸುದ್ದಿ, ಅತ್ತ ಜಾಗತಿಕ ವಿಜ್ಞಾನ ಲೋಕವನ್ನು ಹಾಗೂ ಇತ್ತ ಕನ್ನಡ ಸಾಹಿತ್ಯ ವಲಯವನ್ನು ಒಟ್ಟಿಗೇ ಮೌನವಾಗಿಸಿದೆ. ಧರ್ಮತ್ತಡ್ಕದ ಹಸಿರು ಮಡಿಲಿನಿಂದ ಕೆನಡಾದ ಹಿಮದ ನಾಡಿನವರೆಗೆ ವಿಸ್ತರಿಸಿದ ಅವರ ಬದುಕಿನ ಪಥ, ಮುಂಬರುವ ತಲೆಮಾರುಗಳಿಗೆ ದಾರಿದೀಪವಾಗಬಲ್ಲಂತಹುದು. ಧರ್ಮತ್ತಡ್ಕದ ಸುತ್ತಮುತ್ತಲಿನ ಪ್ರದೇಶವಾದ ಮಂಜೇಶ್ವರ, ಕಾಸರಗೋಡಿನವನಾದ ನನಗೆ ನಮ್ಮ ಕಡೆಯ ಇಂತಹ ಧೀಮಂತ ವ್ಯಕ್ತಿತ್ವವನ್ನು ಕಟ್ಟಿ ಕೊಡುವ ಮೂಲಕ ನುಡಿನಮನ ಸಲ್ಲಿಸುವುದು ಹೆಮ್ಮೆಯ ವಿಚಾರವೇ ಸರಿ.

ಧರ್ಮತ್ತಡ್ಕದ ಪುಟ್ಟ ಹಳ್ಳಿಯಿಂದ ಜಾಗತಿಕ ವಿಜ್ಞಾನ ಲೋಕದವರೆಗೆ...

1943ರ ಅಕ್ಟೋಬರ್ 2ರಂದು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಸಮೀಪದ ಬಾಳಿಕೆ ಎಂಬ ಹಳ್ಳಿಯ ಮನೆಯಲ್ಲಿ ರಾಮಭಟ್ಟರ ಜನನವಾಯಿತು. ಅಡಿಕೆ ತೋಟಗಳು, ಭತ್ತದ ಗದ್ದೆಗಳು, ಕರಾವಳಿಯ ಪ್ರಕೃತಿಯ ಸೌಂದರ್ಯದ ನಡುವೆ ಕಳೆದ ಬಾಲ್ಯವದು. ಅಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಸೌಲಭ್ಯಗಳು ತೀರಾ ವಿರಳ.

ಆದರೆ, ಈ ಬಾಲಕನ ಕಣ್ಣುಗಳಲ್ಲಿ ಬೇರೆಯದೇ ಆದ ಜ್ಞಾನದ ಹಸಿವಿತ್ತು. ಸುತ್ತಲಿನ ಪ್ರಕೃತಿಯ ಚಲನೆಯ ಹಿಂದೆ ಅಡಗಿರುವ ವಿಜ್ಞಾನವನ್ನು ಅರಿಯುವ ಹಂಬಲ, ಪುಸ್ತಕಗಳ ಮೇಲಿನ ಅವ್ಯಾಹತ ಪ್ರೀತಿ, ಸಂಗೀತದ ನಾದದ ಮೇಲಿನ ಆಕರ್ಷಣೆ ಬಾಲ್ಯದಲ್ಲೇ ಮೊಳಕೆಯೊಡೆದಿದ್ದವು. ಮಧ್ಯಮ ವರ್ಗದ ಕುಟುಂಬದ ಆರ್ಥಿಕ ಮಿತಿಗಳು ಹಾಗೂ “ಓದಿದ್ದು ಸಾಕಷ್ಟಾಯಿತು” ಎಂಬ ಕೌಟುಂಬಿಕ ಒತ್ತಡಗಳ ನಡುವೆಯೂ ರಾಮಭಟ್ಟರು ತಮ್ಮ ದೃಢಸಂಕಲ್ಪದಿಂದ ಮುನ್ನಡೆದರು.

ಮಂಜೇಶ್ವರದಲ್ಲಿ ಪ್ರೌಢಶಾಲೆ ಮುಗಿಸಿ, ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಪೂರೈಸಿದರು. ನಂತರ, ಅಂದಿನ ದಿನಗಳಲ್ಲಿ ಅತ್ಯಂತ ಪ್ರತಿಷ್ಠಿತವಾಗಿದ್ದ ತಾಂತ್ರಿಕ ಶಿಕ್ಷಣಕ್ಕಾಗಿ ಸುರತ್ಕಲ್ಲಿನ ಕೆ.ಆರ್.ಇ.ಸಿ. (ಇಂದಿನ NITK) ಸಂಸ್ಥೆಯನ್ನು ಸೇರಿದರು. ಅಲ್ಲಿ ಅವರ ಪ್ರತಿಭೆಯನ್ನು ಗುರುತಿಸಿದ ಪ್ರಾಧ್ಯಾಪಕರು ಮೇಲ್ಮಟ್ಟದ ಸಂಶೋಧನೆಗೆ ಪ್ರೇರೇಪಿಸಿದರು. ಮುಂದೆ ಮದ್ರಾಸ್ ಐಐಟಿ (IIT Madras) ಸಂಸ್ಥೆಯಿಂದ ಎಂ.ಟೆಕ್ ಪದವಿ ಪಡೆದ ಅವರು, “Sound and Vibration” (ಧ್ವನಿ ಮತ್ತು ಕಂಪನ) ವಿಷಯದಲ್ಲಿ ಪಿಎಚ್.ಡಿ. ಪೂರ್ಣಗೊಳಿಸಿದರು.

“ನಾದ ಮತ್ತು ಕಂಪನ” – ಸಂಶೋಧನೆಯ ಹೃದಯ ಭಾಗ

ಡಾ. ರಾಮಭಟ್ ಅವರ ಸಂಶೋಧನೆಯ ಮುಖ್ಯ ಕ್ಷೇತ್ರ 'ಸೌಂಡ್ ಅಂಡ್ ವೈಬ್ರೇಷನ್ ಇಂಜಿನಿಯರಿಂಗ್'. ಯಂತ್ರಗಳು, ವಿಮಾನಗಳು, ರಾಕೆಟ್‌ಗಳು, ಬೃಹತ್ ಕೈಗಾರಿಕಾ ಸ್ಥಾವರಗಳು ಹಾಗೂ ಕಟ್ಟಡಗಳಲ್ಲಿ ಉಂಟಾಗುವ ಕಂಪನ ಮತ್ತು ಧ್ವನಿಯ ತೀವ್ರತೆಯನ್ನು ನಿಯಂತ್ರಿಸುವ ಜಟಿಲ ತಂತ್ರಜ್ಞಾನವಿದು.


ಅವರು ಕೃಷಿ ಮಾಡಿದ ಪ್ರಮುಖ ಸಂಶೋಧನಾ ಕ್ಷೇತ್ರಗಳು: 

  • Structural Dynamics

  • Aeroelasticity

  • Noise Control Engineering 

  • Mechanical Vibrations

  • Finite Element Analysis

  • Acoustics Engineering

  • Composite Structures

ಈ ಕ್ಷೇತ್ರಗಳಲ್ಲಿ ಅವರು ನಡೆಸಿದ ಮೂಲಭೂತ ಸಂಶೋಧನೆಗಳು ಮುಂದೆ ಜಾಗತಿಕ ಮಟ್ಟದ ವಿಮಾನೋದ್ಯಮ ಮತ್ತು ರಾಕೆಟ್ ತಂತ್ರಜ್ಞಾನದ ವಿನ್ಯಾಸಗಳಲ್ಲಿ ಪ್ರಮುಖ ಪಾತ್ರ ವಹಿಸಿದವು. ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾದ ಅವರ 300ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಉತ್ತರ ಅಮೆರಿಕಾದ ವೈಜ್ಞಾನಿಕ ವಲಯದಲ್ಲಿ ಅವರಿಗೆ ಮನ್ನಣೆ ತಂದುಕೊಟ್ಟವು.

ಇಸ್ರೋದಿಂದ ನಾಸಾದವರೆಗೆ...

ಡಾ. ರಾಮಭಟ್ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ನಮ್ಮ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಆರಂಭಿಕ ರಾಕೆಟ್‌ ಉಡಾವಣಾ ತಾಣವಾದ ಥುಂಬಾ (Thumba) ರಾಕೆಟ್ ಕೇಂದ್ರದಲ್ಲಿ. ಅದು ಡಾ. ವಿಕ್ರಂ ಸಾರಾಭಾಯಿ ಅವರ ನೇತೃತ್ವದಲ್ಲಿ. ಭಾರತೀಯ ಅಂತರಿಕ್ಷ ಕನಸುಗಳು ಮೊಳಕೆಯೊಡೆಯುತ್ತಿದ್ದ ಕಾಲ. ಮೂಲಸೌಕರ್ಯಗಳ ಕೊರತೆಯಿದ್ದರೂ ಅಪಾರ ದೇಶಪ್ರೇಮ ಮತ್ತು ಜ್ಞಾನದ ಬಲದಿಂದ ಕೆಲಸ ಮಾಡುತ್ತಿದ್ದ ಯುವ ವಿಜ್ಞಾನಿಗಳ ತಂಡದಲ್ಲಿ ರಾಮಭಟ್ಟರು ಗುರುತಿಸಿಕೊಂಡರು.

ನಂತರದ ದಿನಗಳಲ್ಲಿ ಇಂಗ್ಲೆಂಡ್‌ನಲ್ಲಿ ಸಂಶೋಧನೆ ಮುಂದುವರಿಸಿದ ಇವರನ್ನು ಅಮೆರಿಕಾದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ NASA ತನ್ನ 'ಲಾಂಗ್ಲೆ ರಿಸರ್ಚ್ ಸೆಂಟರ್'ಗೆ ಆಹ್ವಾನಿಸಿತು. 1983ರಲ್ಲಿ ಇವರ ವೈಜ್ಞಾನಿಕ ಕೊಡುಗೆಯನ್ನು ಪರಿಗಣಿಸಿ ನಾಸಾ ವಿಶೇಷ ಗೌರವ ನೀಡಿ ಸನ್ಮಾನಿಸಿತು.

ಕಾನ್ಕಾರ್ಡಿಯಾ ವಿಶ್ವವಿದ್ಯಾಲಯದ ಪ್ರೋ ವೈಸ್ ಚಾನ್ಸಲರ್!!

ಬಳಿಕ ಕೆನಡಾದ ಮಾಂಟ್ರಿಯಲ್‌ನಲ್ಲಿರುವ ಪ್ರಸಿದ್ಧ Concordia University ಸೇರಿದ ರಾಮಭಟ್ಟರು, ಅಲ್ಲಿ ಕೇವಲ ತರಗತಿ ಕೋಣೆಯ ಪ್ರಾಧ್ಯಾಪಕರಾಗಿ ಉಳಿಯಲಿಲ್ಲ. ತಮ್ಮ ಕೃತು ಶಕ್ತಿಯಿಂದ ಅದನ್ನು ಒಂದು ಶ್ರೇಷ್ಠ ಸಂಶೋಧನಾ ಕೇಂದ್ರವಾಗಿಸಿದರು. ಅಲ್ಲಿ ಸ್ವಸಾಮರ್ಥ್ಯದಿಂದ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಡೀನ್ ಆಗಿ ಕೊನೆಗೆ ವಿಶ್ವವಿದ್ಯಾಲಯದ ಪ್ರೋ ವೈಸ್ ಚಾನ್ಸಲರ್ (Pro-Vice-Chancellor) ಹುದ್ದೆಯ ಜವಾಬ್ದಾರಿಯನ್ನೂ ನಿಭಾಯಿಸಿದರು. ಅಷ್ಟೇ ಅಲ್ಲದೇ ಭಾರತ ಮತ್ತು ಕೆನಡಾ ದೇಶಗಳ ನಡುವಣ ಶೈಕ್ಷಣಿಕ ಹಾಗೂ ತಾಂತ್ರಿಕ ಸಂಪರ್ಕದ ಸೇತುವೆಯಾಗಿ ಕೆಲಸ ಮಾಡಿದರು.

ವಿಜ್ಞಾನಿಯೊಳಗಿನ ಸಾಹಿತ್ಯಕಾರ

ಡಾ. ರಾಮಭಟ್ ಅವರ ವ್ಯಕ್ತಿತ್ವದ ಅತ್ಯಂತ ಆಕರ್ಷಕ ಭಾಗವೆಂದರೆ ಅವರಲ್ಲಿದ್ದ ಸಾಹಿತ್ಯ ಮನಸ್ಸು. ವಿಜ್ಞಾನ ಅವರ ಮಿದುಳಿನ ಭಾಷೆಯಾಗಿದ್ದರೆ, ಕನ್ನಡ ಅವರ ಹೃದಯದ ಭಾಷೆಯಾಗಿತ್ತು.

  • “ನಗೆಗೆ ಇರಲಿ ಬಾಳಿಕೆ”: ಇವರ ಮೊದಲ ಕವನ ಸಂಕಲನ. ಇದರಲ್ಲಿ ಕರಾವಳಿಯ ಬಾಲ್ಯದ ನೆನಪುಗಳು ಮತ್ತು ವಿದೇಶಿ ಬದುಕಿನ ಅನುಭವಗಳು ಕಾವ್ಯಾತ್ಮಕವಾಗಿ ಮೂಡಿಬಂದಿವೆ.

  • “ನಾದ”: ಇದು ಕನ್ನಡ ವಿಜ್ಞಾನ ಸಾಹಿತ್ಯ ಲೋಕದಲ್ಲೇ ಒಂದು ಅಪರೂಪದ ಕೃತಿ. ಸಂಗೀತೋಪಕರಣಗಳಲ್ಲಿ ನಾದ ಹೇಗೆ ಹುಟ್ಟುತ್ತದೆ? ವಿವಿಧ ವಾದ್ಯಗಳ ವೈಜ್ಞಾನಿಕ ಸ್ವರೂಪವೇನು? ಎಂಬುದನ್ನು ಅಚ್ಚಗನ್ನಡದಲ್ಲಿ ವಿವರಿಸಿದ ಪ್ರಯತ್ನವಿದು.

  • 'ಬಾಳಿಕೆಯಿಂದ ಕೆನಡಾಕ್ಕೆ' ಎಂಬ ಪುಟ್ಟ ಆತ್ಮಕಥನ ಅವರ ಅನುಭವ, ನೆನಪುಗಳನ್ನು ವಿವರಿಸುತ್ತದೆ.

ಧ್ವನಿ ತರಂಗಗಳ ವೇಗ, ಆವೃತ್ತಿ ಮತ್ತು ತರಂಗದೂರದ ನಡುವಿನ ಸಂಬಂಧವನ್ನು ತಿಳಿಸುವ ಭೌತವಿಜ್ಞಾನದ ಮೂಲ ಸೂತ್ರ:         v = f × λ, ಹಾಗೆಯೇ, ಕಂಪನಗಳ ಅಧ್ಯಯನದಲ್ಲಿ ಅತ್ಯಂತ ಪ್ರಮುಖವಾದ ಸರಳ ಹಾರ್ಮೋನಿಕ್ ಚಲನೆಯನ್ನು (Simple Harmonic Motion) ಗುರುತಿಸುವ ಸಮೀಕರಣ: y = A sin(ωt). ಇಂತಹ ಸಂಕೀರ್ಣ ವೈಜ್ಞಾನಿಕ ಸಮೀಕರಣಗಳ ಹಿಂದಿನ ತತ್ವಗಳನ್ನು ಸಾಮಾನ್ಯ ಕನ್ನಡಿಗನಿಗೂ ಅರ್ಥವಾಗುವಂತೆ ಲಲಿತವಾದ ಶೈಲಿಯಲ್ಲಿ ಮುಂದಿನ ಪೀಳಿಗೆಗೆ ದಾಟಿಸಿದ ಕೀರ್ತಿ ಅವರದ್ದು.

ಆಂಜನೇಯನನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿದ ಕಾದಂಬರಿಕಾರ!!

 

ಡಾ. ರಾಮಭಟ್ ಬರೆದ “The Divine Anjaneya” ಕೃತಿಯು ಭಾರತೀಯ ಪುರಾಣದ ಆಂಜನೇಯನ ಪಾತ್ರವನ್ನು ಕೇವಲ ಭಕ್ತಿಯ ನೆಲೆಯಲ್ಲಲ್ಲದೆ, ಸಾಂಸ್ಕೃತಿಕ ಮತ್ತು ಸಾತ್ವಿಕ ದೃಷ್ಟಿಕೋನದಿಂದ ಜಾಗತಿಕ ಓದುಗರಿಗೆ ಪರಿಚಯಿಸಿತು.

ಅವರ ಮತ್ತೊಂದು - 783 ಪುಟಗಳ ಬೃಹತ್ ಸಂಶೋಧನಾತ್ಮಕ ಕಾದಂಬರಿ “Xuang Zhang's Mission to the West with Monkey King”. ಚೀನಾದ ಪೌರಾಣಿಕ ಪಾತ್ರವಾದ 'ಸುನ್ ವುಕೊಂಗ್' (Sun Wukong) ಮತ್ತು ಭಾರತದ 'ಆಂಜನೇಯ' ಪಾತ್ರಗಳ ನಡುವಿರುವ ಸಾಂಸ್ಕೃತಿಕ ಸಾಮ್ಯತೆಗಳನ್ನು ವಿಜ್ಞಾನಿಯೊಬ್ಬನ ವಿಶ್ಲೇಷಣಾತ್ಮಕ ಮನಸ್ಸಿನಿಂದ ಹಾಗೂ ಸಾಹಿತಿಯೊಬ್ಬನ ಕಲ್ಪನಾಶಕ್ತಿಯಿಂದ ಅವರು ಕಟ್ಟಿಕೊಟ್ಟ ರೀತಿ ಅದ್ಭುತ. ಒಬ್ಬ ವಿಜ್ಞಾನ ಶಿಕ್ಷಕನಾಗಿ ಇವು ನಮ್ಮಂತಹ ಶಿಕ್ಷಕರನ್ನು ಆಳವಾಗಿ ಪ್ರಚೋದಿಸುತ್ತವೆ. ಕಲ್ಪನೆ ವಿಜ್ಞಾನ ಸಂಶೋಧನೆಗಳಿಗೆ ಅತ್ಯಗತ್ಯ.

ಈ ಪುಸ್ತಕವು ಚೀನಾದ ಪ್ರಸಿದ್ಧ ಕಾವ್ಯವಾದ 'ಜರ್ನಿ ಟು ದಿ ವೆಸ್ಟ್' ನ ಆಂಗ್ಲ ರೂಪಾಂತರವಾಗಿದೆ. ಇದು 7ನೇ ಶತಮಾನದಲ್ಲಿ ಬೌದ್ಧ ಧರ್ಮದ ಪವಿತ್ರ ಗ್ರಂಥಗಳನ್ನು ತರಲು ಭಾರತಕ್ಕೆ ಬಂದ ಚೀನೀ ಸನ್ಯಾಸಿ 'ಶುವಾನ್ ಜಾಂಗ್' (Xuanzang) ಅವರ ಐತಿಹಾಸಿಕ ಮತ್ತು ಪೌರಾಣಿಕ ಯಾತ್ರೆಯನ್ನು ವಿವರಿಸುತ್ತದೆ. ಭಾರತದ ರಾಮಾಯಣ ಮತ್ತು ಮಹಾಭಾರತಗಳೊಂದಿಗೆ ಮುಖ್ಯವಾಗಿ ಹನುಮಂತನನ್ನು ಹೋಲುವ ಮಂಕಿ ಕಿಂಗ್ ಪಾತ್ರದೊಂದಿಗೆ ಹೋಲಿಕೆಗಳನ್ನು ಹೊಂದಿರುವುದು ಈ ಪುಸ್ತಕದ ವಿಶೇಷತೆಯಾಗಿದೆ.

ಕೆನಡಾದಲ್ಲಿ ಕನ್ನಡದ ದೂತ

ವಿದೇಶಕ್ಕೆ ಹೋದ ತಕ್ಷಣ ಮಾತೃಭಾಷೆಯನ್ನು ಮರೆಯುವವರ ನಡುವೆ ರಾಮಭಟ್ಟರ ಕುಟುಂಬ ಭಿನ್ನವಾಗಿ ನಿಲ್ಲುತ್ತದೆ. ಇವರ ಧರ್ಮಪತ್ನಿ ಪಾರ್ವತಿ ಅವರು ಸ್ವತಃ ಸಂಗೀತ ವಿದುಷಿ. ಈ ದಂಪತಿಗಳು ಕೆನಡಾದ ಕನ್ನಡ ಕೂಟಗಳಲ್ಲಿ ಮಕ್ಕಳಿಗಾಗಿ ಕನ್ನಡ ತರಗತಿಗಳು, ಹರಿಕಥೆ, ಯಕ್ಷಗಾನ ರೂಪಕಗಳು ಹಾಗೂ ದಾಸಸಾಹಿತ್ಯದ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸುವ ಮೂಲಕ ಕೆನಡಾದಲ್ಲಿ ಒಂದು ಮಿನಿ ಕನ್ನಡ ನಾಡನ್ನೇ ಸೃಷ್ಟಿಸಿದ್ದರು.

ಇಂದಿನ ಜಗತ್ತು ಮಾತನಾಡುತ್ತಿರುವ STEM Education (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ) ಮತ್ತು Science Communication (ವಿಜ್ಞಾನ ಸಂವಹನ) ಎಂಬ ಪರಿಕಲ್ಪನೆಗಳನ್ನು ಡಾ. ರಾಮಭಟ್ ಅವರು ದಶಕಗಳ ಹಿಂದೆಯೇ ತಮ್ಮ ಬರವಣಿಗೆ ಹಾಗೂ ಬದುಕಿನ ಮೂಲಕ ಸಾಕಾರಗೊಳಿಸಿದ್ದರು. 

ಗ್ರಾಮೀಣ ಹಿನ್ನೆಲೆಯ ಹುಡುಗನೊಬ್ಬ ಜಾಗತಿಕ ಮಟ್ಟದ ವಿಜ್ಞಾನ ಸಂಸ್ಥೆಗಳಲ್ಲಿ ಮಿಂಚಿ, ನಾಸಾದ ಗೌರವ ಪಡೆದು, ವಿಶ್ವವಿದ್ಯಾಲಯದ ಸರ್ವೋಚ್ಚ ಹುದ್ದೆಯಲ್ಲಿದ್ದೂ ತನ್ನ ಭಾಷೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದಕ್ಕೆ ಡಾ. ರಾಮಭಟ್ ಅವರೇ ಪರಮ ಮಾದರಿ.

ವಿಜ್ಞಾನ ಮತ್ತು ಸಾಹಿತ್ಯ ಪರಸ್ಪರ ವಿರೋಧಿಗಳಲ್ಲ; ಅವು ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಬದುಕಿ ತೋರಿಸಿದ ಈ ಪ್ರಾತಃಸ್ಮರಣೀಯ ಬೌದ್ಧಿಕ ಚೇತನಕ್ಕೆ ಭಾವಪೂರ್ಣ ನಮನಗಳು. ಅವರ ಸಾಹಿತ್ಯ ಮತ್ತು ಚಿಂತನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ.

ರಕ್ತದಾನಕ್ಕಿನ್ನು ಯಾವ ಗುಂಪಾದರೇನು?

ರಕ್ತದಾನಕ್ಕಿನ್ನು ಯಾವ ಗುಂಪಾದರೇನು? 

ಡಾ|| ಎಂ.ಜೆ. ಸುಂದರ್‌ರಾಮ್






ರಕ್ತಗುಂಪುಗಳನ್ನು ಕಾರ್ಲ್ ಲ್ಯಾಂಡ್‌ಸ್ಟೀನರ್ 1900 ಇಸವಿಯಲ್ಲಿ ಕಂಡುಹಿಡಿದರು. 80 ವರ್ಷಗಳ ನಂತರ 1981ರಲ್ಲಿ, ನ್ಯೂಯಾರ್ಕ್ ರಕ್ತಕೇಂದ್ರದ ಕಿಂಬಲ್ ಸಂಶೋಧನಾ ಪ್ರಯೋಗಾಲಯದ (Kimball Research Institute, New York Blood Centre) ಜೀವರಸಾಯನಶಾಸ್ತ್ರಜ್ಞ ಡಾ|| ಜ್ಯಾಕ್ ಗೋಲ್ಡ್‌ಸ್ಟೀನ್ (Dr. Jack Goldstein) ಎಂಬ ವೈದ್ಯರು ರಕ್ತಗುಂಪುಗಳ ಬಗ್ಗೆ ಸಂಶೋಧನೆಗಳನ್ನು ಮುಂದುವರಿಸಿದರು. ರಕ್ತಪೂರೈಕೆಯ ವ್ಯಾಪ್ತಿಯನ್ನು ವಿಸ್ತರಿಸಿ, O ರಕ್ತಗುಂಪಿನ ರಕ್ತದಾನಿಗಳ ಸಂಖ್ಯೆಯನ್ನು ವೃದ್ಧಿಸುವ ಸಂಶೋಧನೆಯಲ್ಲಿ ತೊಡಗಿದರು. ಇದು ಹೇಗೆ ಸಾಧ್ಯ ಎನ್ನುತ್ತೀರಾ? 

ರಕ್ತಗುಂಪುಗಳಲ್ಲಿ ನಾಲ್ಕು ವಿಧಗಳಿವೆ – A, B, AB ಮತ್ತು O. O ಗುಂಪಿನ ಕೆಂಪು ರಕ್ತಕಣಗಳ ಮೇಲೆ ಪ್ರತಿಜನಕ (antigens) ಗಳಿರುವುದಿಲ್ಲ; ಆದರೆ, ಅದರ ರಕ್ತರಸದಲ್ಲಿ A ಮತ್ತು B ವಿರುದ್ಧದ ಪ್ರತಿಕಾಯ (antibodies) ಗಳಿರುತ್ತವೆ. ಇಂತಹವರಿಗೆ A, B, ಮತ್ತು AB ಗುಂಪಿನ ದಾನಿಗಳು ರಕ್ತದಾನ ಮಾಡಲಾರರು. ಏಕೆಂದರೆ, ಈ ರಕ್ತಗುಂಪುಗಳ ಕೆಂಪು ರಕ್ತಕಣಗಳ ಮೇಲೆ A ಮತ್ತು /ಅಥವಾ B ಪ್ರತಿಜನಕಗಳಿರುವುದರಿಂದ ಅವನ್ನು O ರಕ್ತರಸದಲ್ಲಿರುವ A ಮತ್ತು B ವಿರುದ್ಧದ ಪ್ರತಿಕಾಯಗಳು ಇವುಗಳ ವಿರುದ್ಧ ಕಾದಾಡಿ ಅವನ್ನು ಧ್ವಂಸ ಮಾಡಿಬಿಡುತ್ತವೆ. ಆದ್ದರಿಂದ O ಗುಂಪಿನವರಿಗೆ ರಕ್ತದಾನ ಮಾಡಲು O ಗುಂಪಿನವರೇ ದಾನಿಗಳಾಗಬೇಕು. ಹೀಗಾಗಿ, O ಗುಂಪಿನ ರೋಗಿಗಳಿಗೆ ರಕ್ತದಾನ ಮಾಡಬಲ್ಲ ದಾನಿಗಳ ಸಂಖ್ಯೆ ವಿರಳ.

ಡಾ|| ಡ್ರೂ ಅವರ ಸಂಶೋಧನೆಗಳು ರಕ್ತಭಂಡಾರಗಳನ್ನು ಸ್ಥಾಪಿಸಿ, ರಕ್ತವನ್ನು ಅನೇಕ ದಿನಗಳವರೆಗೆ ಶೇಖರಿಸಿ, ಬೇಕಾದಾಗ ಬಳಸಿಕೊಳ್ಳುವ ವ್ಯವಸ್ಥೆ ಮಾಡಿದ್ದೇನೋ ಸರಿ. ಆದರೆ, O ಗುಂಪಿನ ರೋಗಿಗಳಿಗೆ ಸೂಕ್ತ ರಕ್ತದ ಕೊರತೆಯ ಭೀತಿ ಅವರನ್ನು ಕಾಡುತ್ತಲೇ ಇತ್ತು. ರಕ್ತವನ್ನು ಸದಾಕಾಲ ಶೇಖರಿಸಿಟ್ಟುಕೊಳ್ಳುವುದು ಸಾಧ್ಯವಿಲ್ಲವೆಂಬುದನ್ನು ಗೋಲ್ಡ್‌ಸ್ಟೀನ್ ಅರಿತಿದ್ದರು. ಸುಮಾರು 35 ದಿನಗಳ ವರೆಗೆ ಅದನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದಾಗಿತ್ತು. ನಂತರ ಕೆಂಪು ರಕ್ತಕಣಗಳು ತಮ್ಮ ಕ್ಷಮತೆಯನ್ನು ಕಳೆದುಕೊಂಡು ನಾಶವಾಗುವುವೆಂದು ಗೋಲ್ಡ್‌ಸ್ಟೀನ್ ಅರಿತಿದ್ದರು. ಪೆಟ್ಟು (trauma) ಬಿದ್ದ ರೋಗಿಗೆ ಆಮ್ಲಜನಕವನ್ನು ಸರಬರಾಜು ಮಾಡಬಲ್ಲ ತಾಜಾ ಕೆಂಪು ರಕ್ತಕಣಗಳನ್ನು ಒದಗಿಸಬೇಕಾಗಿತ್ತು. O ಗುಂಪಿನ ರಕ್ತ ಅತಿ ವಿರಳವಾದ್ದರಿಂದಲೂ ಮತ್ತು O ಗುಂಪಿನ ರೋಗಿಗಳಿಗೆ ಮತ್ಯಾವ ಗುಂಪಿನವರೂ ರಕ್ತದಾನ ಮಾಡಲು ಅನರ್ಹರಾದ್ದರಿಂದಲೂ ಈ ಸಮಸ್ಯೆಯನ್ನು ಹೇಗಾದರೂ ಪರಿಹರಿಸಿದಲ್ಲಿ O ಗುಂಪಿನ ರೋಗಿಗಳಿಗೆ ಅದೊಂದು ವರವಾಗಿ ಪರಿಣಮಿಸುವುದೆಂದು ಗೋಲ್ಡ್ಸ್ಟೀನ್ ತರ್ಕಿಸಿದರು.

ಕೆಲವು ರಕ್ತಗುಂಪುಗಳು ಹೇರಳವಾಗಿದ್ದು, ರಕ್ತಭಂಡಾರಗಳಲ್ಲಿ ಈ ಗುಂಪಿನ ರಕ್ತಗಳು ತುಂಬಿತುಳುಕುತ್ತಿದ್ದವು. ಆದರೆ ಇವುಗಳಿಗೆ ಬೇಡಿಕೆ ಕಡಿಮೆಯಾಗಿತ್ತು. ಈ ರೀತಿ, ಬಳಸದೆ ಅತಿಯಾಗಿ ಉಳಿಸಿಕೊಂಡ ರಕ್ತಗುಂಪುಗಳು ತಮ್ಮ ಕ್ಷಮತೆಯನ್ನು ಕ್ರಮೇಣ ಕಳೆದುಕೊಳ್ಳುತ್ತಿದ್ದುದರಿಂದ ಹೊಸ ರಕ್ತ ಬಂದೊಡನೆ ಹಳೆಯ ರಕ್ತವನ್ನು ಮೋರಿಗೆ ಚೆಲ್ಲುತ್ತಿದ್ದ ವಿಷಯವೂ ಗೋಲ್ಡ್‌ಸ್ಟೀನ್‌ಗೆ   ತಿಳಿದಿತ್ತು. ಒಂದುಕಡೆ ಬೇಡಿಕೆ ಹೆಚ್ಚಾಗಿ, ಅದನ್ನು ಪೂರೈಸಲು ಸಾಕಷ್ಟು ರಕ್ತ ಸಿಗದಿದ್ದ ಪರಿಸ್ಥಿತಿಯಿದ್ದರೆ ಇನ್ನೊಂದೆಡೆ ರಕ್ತಸಂಗ್ರಹ ಹೇರಳವಾಗಿದ್ದು, ಬೇಡಿಕೆ ವಿರಳವಾಗಿದ್ದ ಅಸಮತೋಲನ ಪರಿಸ್ಥಿತಿ ಗೋಲ್ಡ್‌ಸ್ಟೀನ್ ರನ್ನು ಕೆರಳಿಸಿತು.

ಉಪಯೋಗಕ್ಕೆ ಬಾರದ ರಕ್ತಗುಂಪುಗಳನ್ನು ಚೆಲ್ಲಿ ವ್ಯರ್ಥ ಮಾಡುವ ಬದಲಿಗೆ ಅವನ್ನು O ಗುಂಪಿಗೆ ಪರಿವರ್ತಿಸಿದರೆ ರೋಗಿಗಳಿಗೆ ರಕ್ತಕ್ಷಾಮದ ಸಮಸ್ಯೆಯೇ ಇರುವುದಿಲ್ಲವಲ್ಲ! ಈ ನಿಟ್ಟಿನಲ್ಲಿ ಗೋಲ್ಡ್‌ಸ್ಟೀನ್ ಯೋಚಿಸತೊಡಗಿದರು. ಯೋಚನೆ ಹೊಳೆದಿದ್ದೇ ತಡ, ಸಂಶೋಧನೆಯಲ್ಲಿ ತೊಡಗಿದರು. A ಮತ್ತು B ರಕ್ತಗುಂಪಿನ ಕೆಂಪು ರಕ್ತಕಣಗಳ ಮೇಲಿನ ಪ್ರತಿಜನಕಗಳನ್ನು ಕಿತ್ತೆಸೆದುಬಿಟ್ಟರೆ, ಅಂತಹ ರಕ್ತಕಣಗಳನ್ನು ಯಾವ ಪ್ರತಿಕಾಯಗಳೂ ಕಾಡಲಾರವು. ಆಗ ಇಂತಹ ರಕ್ತವನ್ನು ಯಾವ ರಕ್ತಗುಂಪಿನ ರೋಗಿಗಾದರೂ ಪೂರೈಸಬಹುದೆಂದು ಗೋಲ್ಡ್‌ಸ್ಟೀನ್ ಕನಸು ಕಂಡರು.

ಗೋಲ್ಡ್‌ಸ್ಟೀನ್ ಮತ್ತು ಅವರ ಸಹೋದ್ಯೋಗಿಗಳು ಈ ಗುರಿಯನ್ನಿಟ್ಟುಕೊಂಡು ಸಂಶೋಧನೆಯನ್ನು ಮುಂದುವರಿಸಿದರು. ಕೆಂಪು ರಕ್ತಕಣಗಳ ಮೇಲಿನ ಪ್ರತಿಜನಕಗಳನ್ನು ಕಳಚಿಹಾಕಲು ಕಿಣ್ವಗಳು ಅತಿ ಮುಖ್ಯ ಪಾತ್ರವನ್ನು ವಹಿಸುವುವು ಎಂಬ ವಿಷಯ ಅವರ ಗಮನಕ್ಕೆ ಬಂದಿತು. ಹುರಿಯದ, ಹಸಿರು ಕಾಫಿಬೀಜದಲ್ಲಿ ಆಲ್ಫ ಗ್ಯಾಲಕ್ಟೋಸಿಡೇಸ್ (alpha galactosidase) ಎಂಬ ಕಿಣ್ವವನ್ನು ಕಂಡುಹಿಡಿದರು. ಈ ಕಿಣ್ವವನ್ನು B ಗುಂಪಿನ ರಕ್ತದೊಡನೆ ಸುಮಾರು ಎರಡು ಘಂಟೆಗಳ ಕಾಲ ಬೆರೆಸಿಟ್ಟಾಗ, B ಗುಂಪಿನ ಕೆಂಪು ರಕ್ತಕಣಗಳ ಮೇಲಿನ ಪ್ರತಿಜನಕಗಳು ಕಳಚಿಕೊಂಡವು. B ರಕ್ತಕಣಗಳು ಈಗ O ರಕ್ತಕಣಗಳಾಗಿ ವರ್ತಿಸಲಾರಂಭಿಸಿದವು! ಇಂತಹ ಪರಿವರ್ತಿತ ರಕ್ತವನ್ನು ಯಾವ ಗುಂಪಿನವರಿಗಾದರೂ ಯಶಸ್ವಿಯಾಗಿ ಪೂರೈಸಬಹುದೆಂದು ಗೋಲ್ಡ್‌ಸ್ಟೀನ್ ಅಭಿಪ್ರಾಯಪಟ್ಟರು.

ಮೊದಲಿಗೆ ಈ ಪರಿವರ್ತಿತ ರಕ್ತವನ್ನು ವಾನರ (gibbons) ಗಳ ಮೇಲೆ ಪ್ರಯೋಗಿಸಿ ಪರೀಕ್ಷಿಸಲಾಯಿತು. ಅವುಗಳ ದೇಹದಲ್ಲಿ ಯಾವ ಪ್ರತಿಕ್ರಿಯೆಯೂ ಕಂಡುಬರಲಿಲ್ಲ. ಈ ರೀತಿಯ ರಕ್ತಪೂರೈಕೆ ಸುರಕ್ಷಿತವಾದುದೆಂದು ಖಚಿತಪಡಿಸಿಕೊಂಡ ಮೇಲೆ ಇವನ್ನು ವಿವಿಧ ರಕ್ತ ಗುಂಪುಗಳುಳ್ಳ ಮಾನವ ಸ್ವಯಂಸೇವಕರ ಮೇಲೆ ಪ್ರಯೋಗಿಸಲಾಯಿತು. ಅವರಲ್ಲಿಯೂ ಯಾವ ಪ್ರತಿಕೂಲ ಪ್ರತಿಕ್ರಿಯೆಗಳು/ಪರಿಣಾಮಗಳು ಕಂಡುಬರಲಿಲ್ಲ.

ಈ ಸಂಶೋಧನೆಗಳಿಂದ ಉತ್ತೇಜಿತರಾದ ಗೋಲ್ಡ್‌ಸ್ಟೀನ್ ರ ತಂಡವು A ರಕ್ತಗುಂಪಿನ ರಕ್ತಕಣಗಳನ್ನೂ ಇದೇ ರೀತಿ ಪರಿವರ್ತಿಸುವ ಸಾಹಸದಲ್ಲಿ ತೊಡಗಿದರು. ಈ ಪರಿವರ್ತನೆಗೆ ಬೇಕಾದ ಕಿಣ್ವವನ್ನು ಹುಡುಕುತ್ತಿದ್ದಾರೆ. ಸೂಕ್ಷ್ಮಜೀವಿಗಳಿಂದ ಸ್ತನಿಗಳವರೆಗೆ, ಅನೇಕ ರೀತಿಯ ಜೀವಿಗಳನ್ನು ಪರೀಕ್ಷಿಸುತ್ತಿದ್ದಾರೆ. ಆದರೆ, ಅವರಿಗೆ ಸರಿಯಾದ ಸಂಪನ್ಮೂಲ ಸಿಕ್ಕಿಲ್ಲ. ಹಸಿರು ಕಾಫಿಬೀಜದಲ್ಲಿರುವ ಕಿಣ್ವ ಕಾರ್ಯರೂಪದಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲವೆಂದು ಈಗ ತಿಳಿದುಬಂದಿದೆ.

ಡೆನ್ಮಾರ್ಕ್ನ ಕೊಪನ್‌ಹೆಗನ್ ವಿಶ್ವವಿದ್ಯಾಲಯದ ಹೆನ್ರಿಕ್ ಕ್ಲಾಸೆನ್ (Henrik Clausen) ಮತ್ತು ತಂಡದವರು ಬ್ಯಾಕ್ಟೀರಿಯ ಹಾಗೂ ಅಣಬೆಗಳಲ್ಲಿ ಹೆಚ್ಚು ಸಾಮರ್ಥ್ಯಶಾಲಿ ಕಿಣ್ವಗಳನ್ನು ಗುರುತಿಸಿದ್ದಾರೆ. ಇವರು ಎರಡು ಕಿಣ್ವಗಳನ್ನು ಬ್ಯಾಕ್ಟೀರಿಯಗಳಿಂದ ಬೇರ್ಪಡಿಸಿದ್ದಾರೆ:

(1) ಬ್ಯಾಕ್ಟೀರಾಯ್ಡಿಸ್ ಫ್ರಜಿಲಿಸ್ (Bacteroides fragilis) ಎಂಬ ಕರುಳಿನ ಬ್ಯಾಕ್ಟೀರಿಯದಿಂದ ಒಂದು ಕಿಣ್ವವನ್ನು ಬೇರ್ಪಡಿಸಿದ್ದಾರೆ. ಇದು B ಪ್ರತಿಜನಕಗಳನ್ನು ಕೆಂಪು ರಕ್ತಕಣಗಳಿಂದ ಉದುರಿಸುತ್ತದೆ. ಇದು ಹಸಿರು ಕಾಫಿಬೀಜದ ಕಿಣ್ವಕ್ಕಿಂತ 1000 ಪಟ್ಟು ವೇಗವಾಗಿ ಕಾರ್ಯ ಮಾಡುತ್ತದೆಂದು ತಿಳಿದುಬಂದಿದೆ.

(2) ಎಲಿಜಬೆತ್‌ಕಿಂಗಿಯಾ ಮೆನಿಂಗೊಸೆಪ್ಟಿಕಮ್ (Elizabethkingia meningosepticum) ಎಂಬ ಬ್ಯಾಕ್ಟೀರಿಯದಿಂದ ಬೇರ್ಪಡಿಸಿದ ಕಿಣ್ವ ಕೆಂಪು ರಕ್ತಕಣಗಳ ಮೇಲಿರುವ A ಪ್ರತಿಜನಕಗಳನ್ನು ಉದುರಿಸುತ್ತದೆ. ಹೀಗೆಯೇ, A ಹಾಗೂ B ಪ್ರತಿಜನಕಗಳನ್ನು ಪರಿವರ್ತಿಸುವಂತಾದರೆ ರಕ್ತಪೂರೈಕೆ ಕಾರ್ಯಕ್ರಮದಲ್ಲಿ ಅಡ್ಡವಾಗಿ ನಿಂತಿರುವ ಎಲ್ಲ ತೊಡಕುಗಳೂ ಪೂರ್ಣವಾಗಿ ನಿವಾರಣೆಯಾಗಿ, ವೈದ್ಯಕೀಯ ಇತಿಹಾಸದಲ್ಲೇ ಕ್ರಾಂತಿಯಾಗುತ್ತದೆ. ಈ ಸಂಶೋಧನೆ ಯಶಸ್ವಿಯಾದರೆ ರಕ್ತದ ಅಭಾವದ ಸಮಸ್ಯೆಯೇ ಇರದು.!

ರಾಷ್ಟ್ರೀಯ ಪ್ರಾಣಿಯನ್ನು ಸಂರಕ್ಷಿಸುವತ್ತ ಒಂದು ನೋಟ

 ರಾಷ್ಟ್ರೀಯ ಪ್ರಾಣಿಯನ್ನು ಸಂರಕ್ಷಿಸುವತ್ತ ಒಂದು ನೋಟ.

ಡಾ. ಶಶಿಕುಮಾರ್. ಎಲ್

ವೈಜ್ಞಾನಿಕ ಅಧಿಕಾರಿ, ಜೀವಶಾಸ್ತ್ರ ವಿಭಾಗ

ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ 

ಜಲಪುರಿ, ಮೈಸೂರು 

  

 "ಹುಲಿ ಇದ್ದರೆ ಕಾಡು, ಕಾಡಿದ್ದರೆ ನಾಡು" ಎಂಬ ಮಾತಿದೆ. ರಾಷ್ಟ್ರಪ್ರಾಣಿಗಿರುವ ಹುಲಿ ಪರಭಕ್ಷಕ ಎಂಬುದಷ್ಟೇ ಅಲ್ಲ. ನಮ್ಮ ಪರಿಸರ ವ್ಯವಸ್ಥೆಯ ಪಾಲಕನೂ ಹೌದು. ಹುಲಿ (ಪ್ಯಾಂಥರ ಟೈಗ್ರಿಸ್ಕಾಡು ಬೆಕ್ಕು ಪ್ರಾಣಿಯಾಗಿದ್ದು , ಆರೋಗ್ಯಕರ ಅರಣ್ಯ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ಮೂಲಕ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಅದು ಗಂಭೀರವಾದ ಹಾಗೂ ಭವ್ಯವಾದ ಪ್ರಾಣಿಯಾಗಿದ್ದು ಆಹಾರ ಸರಪಳಿಯ ಮೇಲ್ಭಾಗದಲ್ಲಿದೆ. ಉತ್ತಮ ಹುಲಿಗಳ ಸಂಖ್ಯೆಯು ಜವಾಬ್ದಾರಿತ ವನ್ಯಜೀವಿ ಪ್ರವಾಸೋದ್ಯಮವನ್ನು ಬೆಂಬಲಿಸುತ್ತದೆ. ಸಂರಕ್ಷಣೆಯನ್ನು ಉತ್ತೇಜಿಸುವುದರ ಜೊತೆಗೆ ಸ್ಥಳೀಯ ಸಮುದಾಯಗಳಿಗೆ ಆದಾಯ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

       ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಕಾಡು ಹುಲಿಗಳ ಜನಸಂಖ್ಯೆಗೆ ನೆಲೆಯಾಗಿದೆ. ರಾಯಲ್ ಬೆಂಗಾಲ್ ಹುಲಿಯು ನಮ್ಮ ದೇಶದ ರಾಷ್ಟ್ರೀಯ ಪ್ರಾಣಿಯಾಗಿದೆ. ಹುಲಿಗಳು ಉಷ್ಣವಲಯದ ಕಾಡುಗಳು, ಹುಲ್ಲುಗಾವಲುಗಳು, ಮ್ಯಾಂಗ್ರೋವ್ಗಳು ಮತ್ತು ಗದ್ದೆಗಳಲ್ಲಿ ವಾಸಿಸುತ್ತವೆ. ಅವು ಮಾಂಸಾಹಾರಿ ಪ್ರಾಣಿಗಳಾಗಿದ್ದು ಜಿಂಕೆ, ಕಾಡು ಹಂದಿ, ಗೌರ್ ಮತ್ತು ಇತರ ಸಸ್ತನಿಗಳನ್ನು ಬೇಟೆಯಾಡುತ್ತವೆ. ಪ್ರತಿಯೊಂದು ಹುಲಿಯೂ  ವಿಶಿಷ್ಟವಾದ ಬಟ್ಟೆ ಮಾದರಿಯನ್ನು ಹೊಂದಿದ್ದು, ಅದು ಪ್ರತಿಯೊಂದು ವ್ಯಕ್ತಿಯನ್ನು ಪ್ರತ್ಯೇಕಿಸುತ್ತದೆ. ಹುಲಿಗಳನ್ನು ಐಯುಸಿಎನ್ ಕೆಂಪು ಪಟ್ಟಿಯಲ್ಲಿ ಅಳಿವಿನಂಚಿನಲ್ಲಿರುವಂತೆ ವರ್ಗೀಕರಿಸಿರುವುದು ಬೇಸರದ ಸಂಗತಿಯಾಗಿದೆ. 

   ಇತ್ತೀಚಿನ ವರದಿಗಳ ಪ್ರಕಾರ ಪ್ರಪಂಚಾದ್ಯಂತ ಅರಣ್ಯಗಳಲ್ಲಿ ಅಂದಾಜು 5574 ಕಾಡು ಹುಲಿಗಳಿವೆ. ಅದರಲ್ಲಿ ಶೇಕಡ 75ರಷ್ಟು ಭಾರತದಲ್ಲಿ ಇವೆ ಎಂಬುದು ವಿಶೇಷ. 'ಹುಲಿ ಯೋಜನೆ' ಬಳಿಕ ಕೈಗೊಂಡ ಫಲವಾಗಿ ಭಾರತದಲ್ಲಿ ಈಗ ಹುಲಿಗಳ ಸಂಖ್ಯೆ (2022ರ ಗಣಿತ ಪ್ರಕಾರ)  3682 ಕ್ಕೇರಿದೆ. ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು (785) ಇದ್ದು ಕರ್ನಾಟಕ (563) ಎರಡನೇ ಸ್ಥಾನದಲ್ಲಿದೆ. ಬಂಡಿಪುರ, ನಾಗರಹೊಳೆ, ಬಿ ಆರ್ ಟಿ,  ಭದ್ರಾ, ಹಾಗೂ ಕಾಳಿ ಪ್ರದೇಶಗಳು ಕರ್ನಾಟಕದ ಹುಲಿ ಸಂರಕ್ಷಿತ ತಾಣಗಳಾಗಿವೆ. 

         ಭಾರತದಲ್ಲಿ ಹುಲಿ ಸಂರಕ್ಷಣೆ ದೇಶದ ಅತ್ಯಂತ ಯಶಸ್ವಿ ವನ್ಯಜೀವಿ ಸಂರಕ್ಷಣಾ ಪ್ರಯತ್ನದಲ್ಲಿ ಒಂದಾಗಿದೆ. 1973 ರಲ್ಲಿ ಪ್ರಾರಂಭವಾದ ಪ್ರಾಜೆಕ್ಟ್ ಟೈಗರ್ ಯೋಜನೆಯು ಹುಲಿಗಳು ಮತ್ತು ಅವುಗಳ ನೈಸರ್ಗಿಕ ಆವಾಸ ಸ್ಥಾನಗಳನ್ನು ಸಂರಕ್ಷಿಸುವ ಕಾರ್ಯಕ್ರಮವಾಗಿದೆ. ಇನ್ನು 2005ರಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ವು ಆವಾಸಸ್ಥಾನ ಸಂರಕ್ಷಣೆ, ಬೇಟೆಯಾಡುವಿಕೆ ವಿರೋಧಿ ಕ್ರಮಗಳು, ವೈಜ್ಞಾನಿಕ ಮೇಲ್ವಿಚಾರಣೆ ಮತ್ತು ಸಮುದಾಯದ ಭಾಗವಹಿಸುವಿಕೆ ಮೂಲಕ ಹುಲಿಗಳನ್ನು ರಕ್ಷಿಸುವುದರ ಮೇಲೆ ಕೇಂದ್ರೀಕರಿಸುತ್ತಿದೆ. ಹುಲಿಗಳ ಸಂಖ್ಯೆ, ಬೇಟೆಯಾಡುವಿಕೆ, ಅಕ್ರಮ ವನ್ಯಜೀವಿ ವ್ಯಾಪಾರ ತಡೆಗಟ್ಟುವಿಕೆ ಮತ್ತು ಆವಾಸ ಸ್ಥಾನದ ಸ್ಥಿತಿಗಳನ್ನು ಮೇಲ್ವಿಚಾರಣೆ ಮಾಡಲು ಕ್ಯಾಮೆರಾ ಬಲೆಗಳು, ಜಿಪಿಎಸ್ ಮ್ಯಾಪಿಂಗ್ ಹಾಗೂ ವೈಜ್ಞಾನಿಕ ಸಮೀಕ್ಷೆಗಳು ಸಹಾಯ ಹಸ್ತ ಚಾಚಿವೆ. ಇಷ್ಟೆಲ್ಲಾ ಇದ್ದರೂ ಸಹ ರಾಷ್ಟ್ರೀಯ ಪ್ರಾಣಿ ಹುಲಿಯು ಹಲವಾರು ಸಂಕಷ್ಟಗಳಿಗೆ ಒಳಗಾಗುತ್ತಿದೆ ಎಂದರೆ ಆಶ್ಚರ್ಯವಿಲ್ಲ. 


        ಹುಲಿಗಳಿಗೆ ಇರುವ ಪ್ರಮುಖ ಬೆದರಿಕೆಗಳಲ್ಲಿ ಬೇಟೆಯಾಡುವುದು, ಆವಾಸಸ್ಥಾನ ನಷ್ಟ, ಆವಾಸ ಸ್ಥಾನ ವಿಘಟನೆ, ಅಕ್ರಮ ವನ್ಯಜೀವಿ ವ್ಯಾಪಾರ ಮತ್ತು ಮಾನವ ವನ್ಯಜೀವಿ ಸಂಘರ್ಷ ಸೇರಿವೆ. ಇತ್ತೀಚೆಗೆ ಎಂಎಂ ಹಿಲ್ಸ್ ನಲ್ಲಿ ನಡೆದ ಘಟನೆ ಆತಂಕವನ್ನು ಹುಟ್ಟಿಸಿದೆ. ವಿಷಪ್ರಾಸನದಿಂದ ತಾಯಿ ಮತ್ತು  ನಾಲ್ಕು ಹುಲಿ ಮರಿಗಳ ಸಾವು ಕರ್ನಾಟಕ ಪಾಲಿಗೆ ಬಹು ದೊಡ್ಡ ನಷ್ಟವಾಗಿದೆ. ಮತ್ತಷ್ಟು ಆತಂಕದ ಸಂಗತಿ ಏನೆಂದರೆ ಏಷ್ಯಾ ಖಂಡದಲ್ಲಿ ಹರ ಡಿಕೊಂಡಿದ್ದ ಹುಲಿಗಳ ಅವಾಸ ಸ್ಥಾನದ ವಿಸ್ತೀರ್ಣ ಇದೀಗ ಶೇ.5ಕ್ಕಿಂತಲೂ ಕಡಿಮೆ ಆಗುತ್ತಿದೆ. ತಮ್ಮ ಉಳಿವಿಗಾಗಿ ಹುಲಿಗಳು ಸಾಕು ಜಾನುವಾರುಗಳನ್ನು ಬೇಟೆಯಾಡುವ ಅನಿವಾರ್ಯತೆ ಎದುರಾಗುತ್ತಿದೆ. 

       ಉಲ್ಲಾಸ್ ಕಾರಂತ್ ಅವರ ಪ್ರಕಾರ ಹುಲಿಗಳ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಅರಣ್ಯಗಳಲ್ಲಿ ಹುಲಿಗಳು ಹಾಗೂ ಅವುಗಳ ಬಲಿ ಪ್ರಾಣಿಗಳ ಮತ್ತು ನೆಲೆಗಳನ್ನು ಪರಿಣಾಮಕಾರಿಯಾಗಿ ಸಂರಕ್ಷಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅಭಯಾರಣ್ಯಗಳಲ್ಲಿ ಅಕ್ರಮಗಳನ್ನು ತೊಡಗುವವ ರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹುಲಿಯ ನೆಲೆಗಳಾದ ಅರಣ್ಯಗಳಲ್ಲಿ ಮರಿ ಮುಟ್ಟುಗಳು ಹಾಗೂ ಮತ್ತಿತರ ಉತ್ಪನ್ನಗಳ ಸಂಗ್ರಹಣೆಯನ್ನು ತಡೆಗಟ್ಟಬೇಕು ಎಂಬುದು ಅವರ ಸಲಹೆಯಾಗಿದೆ. 

        ಹುಲಿಗಳನ್ನು ಸಂರಕ್ಷಿಸುವುದರಿಂದ ಒಂದೇ ರೀತಿಯ ಪರಿಸರ ವ್ಯವಸ್ಥೆಗಳನ್ನು ಹಂಚಿಕೊಳ್ಳುವ ಸಾವಿರಾರು ಇತರ ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ರಕ್ಷಿಸಲು ಸಹಾಯಕವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹುಲಿ ಆವಾಸ ಸ್ಥಾನಗಳನ್ನು ರಕ್ಷಿಸುವುದರಿಂದ ಅರಣ್ಯಗಳು ಉಳಿಯುತ್ತವೆ. ಇದು ಇಂಗಾಲದ ಸಂಗ್ರಹಣೆ, ನೀರಿನ ಸಂರಕ್ಷಣೆ ಮತ್ತು ಹವಾಮಾನ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

 

        ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಸಂರಕ್ಷಿಸಬೇಕಾದ ಅಂಶಗಳಲ್ಲಿ ಪ್ರಮುಖವಾಗಿ ನಾಶವಾದ ಕಾಡುಗಳನ್ನು ಪುನಃ ಸ್ಥಾಪಿಸುವುದು, ಅಕ್ರಮ ಬೇಟೆ ತಡೆಗಟ್ಟುವುದು, ವನ್ಯಜೀವಿ ಕಾರಿಡಾರ್ ಗಳನ್ನು ರಕ್ಷಿಸುವುದು ಮತ್ತು ಹುಲಿಗಳಿಗೆ ಸಾಕಷ್ಟು ಬೇಟೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಸೇರಿವೆ. ಮುಖ್ಯವಾಗಿ ಪರಿಸರದ ಮೇಲುಸ್ತರದಲ್ಲಿರುವ ಹುಲಿಗಳಿಗೆ ಬದುಕಲು ಸುರಕ್ಷಿತ ಕಾಡುಗಳು, ಬಲವಾದ ರಕ್ಷಣೆ ಮತ್ತು ಸಾರ್ವಜನಿಕ ಬೆಂಬಲ ಬೇಕೆ ಬೇಕು. 

ಅಂದ ಹಾಗೆ, ಜುಲೈ 29 ಅಂತರಾಷ್ಟ್ರೀಯ ಹುಲಿ ದಿನ. ಈ ಸುಸಂದರ್ಭದಲ್ಲಿ ಹುಲಿರಾಯನ ಅಳಿವು ಉಳಿವಿನ ಬಗ್ಗೆ ನಾವೆಲ್ಲರೂ ಚಿಂತಿಸಬೇಕಾದದ್ದು ನಮ್ಮ ಪ್ರಮುಖ ಕರ್ತವ್ಯವಾಗಿದೆ. 



ರಾಷ್ಟ್ರೀಯ ಬಾಹ್ಯಾಕಾಶ ದಿನ

                 ರಾಷ್ಟ್ರೀಯ ಬಾಹ್ಯಾಕಾಶ ದಿನ 

             (NATIONAL SPACE DAY)


ಲೇಖಕರು :  
ಬಿ .ಎನ್. ರೂಪ,  

ಸಹಶಿಕ್ಷಕರು,

ಕೆ.ಪಿ.ಎಸ್‌  ಜೀವನ್‌ ಭೀಮನಗರ

ಬೆಂಗಳೂರು ದಕ್ಷಿಣ ವಲಯ -4



ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಪ್ರತಿವರ್ಷ ಆಗಸ್ಟ್23ರಂದು ಆಚರಿಸಲಾಗುತ್ತಿದೆ. ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಪ್ರಥಮ ಬಾರಿಗೆ ಆಗಸ್ಟ್ 23, 2024 ರಂದು ಆಚರಿಸಲಾಯಿತು. ಇದು ಭಾರತ ಆಗಸ್ಟ್ 23 ರಂದು ಚಂದ್ರಯಾನ-3 ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ದಿನದ ಸ್ಮರಣಾರ್ಥವಾಗಿ ದೇಶದಲ್ಲಿ ವಾರ್ಷಿಕ ಆಚರಣೆಯಾಗಿದೆ. ಈ ಸಾಧನೆಯಿಂದಾಗಿ ಭಾರತವನ್ನು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲನೇ ದೇಶವನ್ನಾಗಿ ಗುರುತಿಸಾಲಾಗುತ್ತಿದೆ. ಅಲ್ಲದೆ, ಚಂದ್ರನ ಮೇಲೆ  ಮೃದುವಾದ ಇಳಿಯುವಿಕೆ ಸಾಧಿಸಿದ ನಾಲ್ಕನೇ ದೇಶವನ್ನಾಗಿ ಮಾಡಿದೆ.

ಭಾರತ ಇಲ್ಲಿವರೆಗೂ ಉಡಾಯಿಸಿದ 424 ವಿದೇಶಿ ಉಪಗ್ರಹಗಳಲ್ಲಿ 389 ಉಪಗ್ರಹಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಳೆದ 9 ವರ್ಷಗಳಲ್ಲಿ ಉಡಾವಣೆ ಮಾಡಿದೆ. ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ಸರ್ಕಾರವು ಬಾಹ್ಯಾಕಾಶ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆಯನ್ನು ಪ್ರಾರಂಭಿಸಿದೆ. ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿಯನ್ನುಉತ್ತೇಜಿಸುವ ಮತ್ತು ಮುನ್ನಡೆಸುವ ಮಹತ್ವಾಕಾಂಕ್ಷೆಯ ಗುರಿಯನ್ನುಹೊಂದಿದೆ.ಆಗಸ್ಟ್ 26ರಂದು ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿಯವರುವಿಕ್ರಂ ಲ್ಯಾಂಡರ ಯಶಸ್ಸಿನ ನಂತರ ಆಗಸ್ಟ್ 23 ರನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿದರು

ಇಸ್ರೋದ ಚಂದ್ರಯಾನ ಮೂರರ ಲ್ಯಾಂಡರ ಮತ್ತು ರೋವರ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಭಾರತ ಸಾಧಿಸಿದೆ. ಇದರೊಂದಿಗೆ ಭಾರತ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಎನಿಸಿಕೊಂಡಿತು. ಒಂದು ಕಾಲದಲ್ಲಿ ಅಸಾಧ್ಯವೆಂದು ಭಾವಿಸಿದ್ದನ್ನು ನಮ್ಮ ISR೦ ಸಾಧಿಸಿತು. ಜುಲೈ 14 2018ರಲ್ಲಿ ಶ್ರೀಹರಿ ಕೋಟದಿಂದ ಶಕ್ತಿಶಾಲಿ LVM3-M4 ರಾಕೆಟ್ನಲ್ಲಿ ಉಡಾವಣೆಯು ಅದರ ನಿಖರತೆ ಮತ್ತು ತಾಂತ್ರಿಕ ಪ್ರತಿಭೆಯಿಂದ ಪ್ರಪಂಚದ ಗಮನ ಸೆಳೆಯಿತು. ಈ ಐತಿಹಾಸಿಕ ಸಾಧನೆಯು ರಾಷ್ಟ್ರದ ಸಾಮೂಹಿಕ ಸ್ಮರಣೆಯಲ್ಲಿ ಶಾಶ್ವತವಾಗಿ ಕೆತ್ತಲ್ಪಟ್ಟಿದೆ. ಇದರಿಂದಾಗಿ ವಿಜ್ಞಾನ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಯನ್ನುಉತ್ತೇಜಿಸಲು ಸಾಧ್ಯವಾಗಿದೆ.

 ದಕ್ಷಿಣ ಧ್ರುವ ಪ್ರದೇಶದಲ್ಲಿ ಮೇಲ್ಮೈ ತುಂಬಾ ಅಸಮ ಮತ್ತು ಕುಳಿ ಹಾಗೂ ಬಂಡೆಗಳಿಂದ ತುಂಬಿರುವ ಪ್ರದೇಶದಲ್ಲಿ ಲ್ಯಾಂಡರ್  ಅನ್ನು ಇಳಿಸುವುದು ತುಂಬಾ ಕಷ್ಟ. 2019ರಲ್ಲಿ ಮೃದುವಾಗಿ ಇಳಿಯಲು ಪ್ರಯತ್ನಿಸಿದ ಭಾರತದ ಎರಡನೇ ಚಂದ್ರನ ಕಾರ್ಯಾಚರಣೆ ವಿಫಲವಾಗಿತ್ತು. ಅದರ ಲ್ಯಾಂಡರ್‌ ಮತ್ತು ರೋವರ್‌ ನಾಶವಾದವು. ಆದರೂ ಅದರ ಅರ್ಬಿಟರ್‌ ಬದುಕುಳಿಯಿತು.

ವಿಕ್ರಂ ಲ್ಯಾಂಡರ್‌ ಪ್ರಜ್ಞಾನ್ ಎಂಬ 26 ಕೆಜಿ ತೂಕದ ರೋವರನ್ನು ಹೊಟ್ಟೆಯೊಳಗೆ ಹೊತ್ತುಕೊಂಡು ಅನಿಶ್ಚಿತ ಇಳಿಯುವಿಕೆಯನ್ನು ಪ್ರಾರಂಭಿಸಿತು. ಲ್ಯಾಂಡರ್‌ ನ ವೇಗವನ್ನು ಕ್ರಮೇಣ ಸೆಕೆಂಡಿಗೆ 1.68 km ನಿಂದ ಬಹುತೇಕ ಶೂನ್ಯಕ್ಕೆ ಇಳಿಸಲಾಯಿತು. ಇದರಿಂದಾಗಿ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಇಳಿಯುವಿಕೆ ಸಾಧ್ಯವಾಯಿತು. ಕೆಲವು ಗಂಟೆಗಳು ದೂಳು ಇಳಿದ ನಂತರ ಆರು ಚಕ್ರಗಳ ರೋವರ್‌ ಲ್ಯಾಂರ್ಡರ್ನ‌ ಹೊಟ್ಟೆಯಿಂದ ತೆವಳುತ್ತ ಚಂದ್ರನ ಮೇಲ್ಮೈ ಇರುವ ಬಂಡೆಗಳು ಮತ್ತು ಕುಳಿಗಳ ಸುತ್ತಲೂ ಸಂಚರಿಸುತ್ತಿದೆ. ಭೂಮಿಗೆ ಕಳಿಸಬೇಕಾದ ನಿರ್ಣಾಯಕ ದತ್ತಾಂಶ ಮತ್ತು ಚಿತ್ರಗಳನ್ನು ಸಂಗ್ರಹಿಸುತ್ತದೆ.

ಈ ಕಾರ್ಯಾಚರಣೆಯ ಪ್ರಮುಖ ಗುರಿಗಳಲ್ಲಿ ಒಂದು ನೀರು ಆಧಾರಿತ ಮಂಜು ಗಡ್ಡೆಯನ್ನು ಬೇಟೆಯಾಡುವುದು. ಇದು ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವ ವಾಸಕ್ಕೆ ಸಹಾಯ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಮಂಗಳ ಮತ್ತು ಇತರ ದೂರದ ಸ್ಥಳಗಳಿಗೆ  ಹೋಗುವ  ಬಾಹ್ಯಾಕಾಶ ನೌಕೆಗಳಿಗೆ ಸಹ ಇದನ್ನು ಬಳಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಇದು ಚಂದ್ರನ ಮೇಲ್ಮೈಯ ಬೌತಿಕ ಗುಣಲಕ್ಷಣಗಳು ಮೇಲ್ಮೈಗೆ ಹತ್ತಿರವಿರುವ ವಾತಾವರಣ ಮತ್ತು ಮೇಲ್ಮೈ ಕೆಳಗೆ ಏನು ನಡೆಯುತ್ತದೆ ಎಂಬುದನ್ನು ಅಧ್ಯಯನ ಮಾಡಲು ಟೆಕ್ಟೋನಿಕ್ ಚಟುವಟಿಕೆಯನ್ನು ಕಂಡು ಹಿಡಿಯಲು ಸಹಾಯ ಮಾಡುತ್ತದೆ. ಈರೋವರ್‌ ಭಾರತೀಯ ಧ್ವಜವನ್ನು ಹೊತ್ತಿದ್ದು ಅದರ ಚಕ್ರಗಳ ಮೇಲೆ ಇಸ್ರೋದ ಲೋಗೋ ಮತ್ತು ಲಾಂಛನವನ್ನು ಉಬ್ಬು ರೂಪದಲ್ಲಿ ಮುದ್ರಿಸಲಾಗಿದೆ.

2008ರಲ್ಲಿ ದೇಶದ ಮೊದಲ ಚಂದ್ರಯಾನ ಒಂದು ಯೋಜನೆಯು ಚಂದ್ರನ ಮೇಲ್ಮೈಯಲ್ಲಿ ನೀರಿನ ಅಣುಗಳ ಉಪಸ್ಥಿತಿಯನ್ನು ಕಂಡುಹಿಡಿದು ಚಂದ್ರನಿಗೆ ಹಗಲಿನ ವೇಳೆಯಲ್ಲಿ ವಾತಾವರಣವಿದೆ ಎಂದು ಸ್ಥಾಪಿಸಿದೆ.  15 ವರ್ಷಗಳ ನಂತರ ಈ ಯಾನ ಆಗಿದೆ. ಚಂದ್ರಯಾನ 2 ಸಂಪೂರ್ಣ ದತ್ತಾಂಶವನ್ನು ಕಳಿಸಲು ಸಹಾಯ ಮಾಡುತ್ತಿದೆ.


ಚಂದ್ರಯಾನ ಈ ಸಾಧನೆ ಮಾಡಿರುವುದು ನಮ್ಮ ಭಾರತ ಏಕೈಕ ದೇಶವೆಲ್ಲ. ಜಾಗತಿಕವಾಗಿ ಇದರ ಬಗ್ಗೆ ಆಸಕ್ತಿ ಇನ್ನೂ ಹೆಚ್ಚುತ್ತಲಿದೆ. ಮುಂದಿನ ದಿನಗಳಲ್ಲಿ ಚಂದ್ರನ ಮೇಲ್ಮೈಗೆ ಇನ್ನೂ ಅನೇಕ ಕಾರ್ಯಚರಣೆಗಳು ನಡೆಯಲಿವೆ. ವಿಜ್ಞಾನಿಗಳು ಹೇಳುವ ಪ್ರಕಾರ ಚಂದ್ರನ ಬಗ್ಗೆ ಇನ್ನೂ ಬಹಳಷ್ಟು ಅರ್ಥ ಮಾಡಿಕೊಳ್ಳಬೇಕಾಗಿದೆ. ಆಳವಾದ ಬಾಹ್ಯಾಕಾಶಕ್ಕೆ ದ್ವಾರ ಎಂದುಇದನ್ನು ವಿವರಿಸಲಾಗುತ್ತಿದೆ.

ಈ ದಿನದ ಮೂಲಭೂತ ಧ್ಯೇಯವಾಕ್ಯವು “ಜೀವಗಳನ್ನು ಸ್ಪರ್ಶಿಸುತ್ತ ಚಂದ್ರನನ್ನು ಸ್ಪರ್ಶಸುತ್ತಲೇ-ಭಾರತದ ಬಾಹ್ಯಾಕಾಶ ಸಾಹಸಗಾಥೆ ದೇಶದ ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನಕ್ಕಾಗಿ ಸ್ಥಾಪಿಸಲಾದ ಥೀಮ್.


    ಬಾಹ್ಯಾಕಾಶ ಇಲಾಖೆಯಿಂದ ಆಯೋಜಿಸಲಾದ ಆಚರಣೆಗಳು, ರಾಷ್ಟ್ರೀಯ ಶೈಕ್ಷಣಿಕ ಸಂಪರ್ಕ ಕಾರ್ಯಕ್ರಮಗಳು, ಬಾಹ್ಯಾಕಾಶ ಪರೀಕ್ಷೆಗಳು. ವಿಜ್ಞಾನದ ಜಾಗೃತಿಗಾಗಿ ಮುಂಬರುವ ಮೈಲಿಗಲ್ಲುಗಳ ಏಕೀಕರಣದ ಮೇಲೆ ಕೇಂದ್ರೀಕರಿಸುತ್ತವೆ.

ಚಂದ್ರಯಾನ-3ರ ಯಶಸ್ಸಿನ ನಂತರ ನಮ್ಮ ಭಾರತದ ಯಶಸ್ಸಿನ ಸಾಹಸಗಾಥೆ ಹೀಗೆ ಮುಂದುವರೆಯಲಿದೆ. ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶದ ಬಗ್ಗೆ ಆಸಕ್ತಿ ವಿಜ್ಞಾನ ಸ್ಟೆಮ್ಶಿ ಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ಸಹಕಾರಿಯಾಗಿದೆ.

ಚಂದ್ರಯಾನ-3 ರ ಯಶಸ್ಸಿನ ನಂತರ ಚಂದ್ರನ ಪರಿಸರದ ಬಗ್ಗೆ ಹೆಚ್ಚಿನ ಅಧ್ಯಯನವನ್ನು ಮಾಡಲು,ಉನ್ನತ ಹಾಗೂ ಅಭಿವೃದ್ಧಿ ಹೊಂದಿರುವ ತಾಂತ್ರಿಕತೆ ಹಾಗೂ ತಂತ್ರಜ್ಞಾನವನ್ನು ಬಳಸುವುದು, .ಆಳವಾದ ಬಾಹ್ಯಾಕಾಶದ ಸಂಶೋಧನೆಯನ್ನು ನಡೆಸುವುದು ಹಾಗೂ ಭವಿಷ್ಯದಲ್ಲಿ ಜನರನ್ನು ಹೊತ್ತೊಯ್ಯುವ ಬಾಹ್ಯಾಕಾಶ ನೌಕೆಗಳನ್ನು ಸಿದ್ಧಪಡಿಸುವುದು.

ಹೀಗೆ, ನವಭಾರತದ ಯಶೋಗಾಥೆ ಮುಂದುವರೆಯಲಿ. ಇನ್ನೆಷ್ಟು ಹೊಸ ತಂತ್ರಜ್ಞಾನ ಅಭಿವೃದ್ಧಿ ಹೊಂದಿರುವ ತಾಂತ್ರಿಕತೆಯನ್ನು ಬಳಸಿಕೊಂಡು ಉನ್ನತ ಮಟ್ಟದ ಸಾಧನೆಯನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸಲಿ ಎಂದು ಆಶಿಸೋಣ.