ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Tuesday, August 4, 2026

ರಾಷ್ಟ್ರೀಯ ಪ್ರಾಣಿಯನ್ನು ಸಂರಕ್ಷಿಸುವತ್ತ ಒಂದು ನೋಟ

 ರಾಷ್ಟ್ರೀಯ ಪ್ರಾಣಿಯನ್ನು ಸಂರಕ್ಷಿಸುವತ್ತ ಒಂದು ನೋಟ.

ಡಾ. ಶಶಿಕುಮಾರ್. ಎಲ್

ವೈಜ್ಞಾನಿಕ ಅಧಿಕಾರಿ, ಜೀವಶಾಸ್ತ್ರ ವಿಭಾಗ

ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ 

ಜಲಪುರಿ, ಮೈಸೂರು 

  

 "ಹುಲಿ ಇದ್ದರೆ ಕಾಡು, ಕಾಡಿದ್ದರೆ ನಾಡು" ಎಂಬ ಮಾತಿದೆ. ರಾಷ್ಟ್ರಪ್ರಾಣಿಗಿರುವ ಹುಲಿ ಪರಭಕ್ಷಕ ಎಂಬುದಷ್ಟೇ ಅಲ್ಲ. ನಮ್ಮ ಪರಿಸರ ವ್ಯವಸ್ಥೆಯ ಪಾಲಕನೂ ಹೌದು. ಹುಲಿ (ಪ್ಯಾಂಥರ ಟೈಗ್ರಿಸ್ಕಾಡು ಬೆಕ್ಕು ಪ್ರಾಣಿಯಾಗಿದ್ದು , ಆರೋಗ್ಯಕರ ಅರಣ್ಯ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ಮೂಲಕ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಅದು ಗಂಭೀರವಾದ ಹಾಗೂ ಭವ್ಯವಾದ ಪ್ರಾಣಿಯಾಗಿದ್ದು ಆಹಾರ ಸರಪಳಿಯ ಮೇಲ್ಭಾಗದಲ್ಲಿದೆ. ಉತ್ತಮ ಹುಲಿಗಳ ಸಂಖ್ಯೆಯು ಜವಾಬ್ದಾರಿತ ವನ್ಯಜೀವಿ ಪ್ರವಾಸೋದ್ಯಮವನ್ನು ಬೆಂಬಲಿಸುತ್ತದೆ. ಸಂರಕ್ಷಣೆಯನ್ನು ಉತ್ತೇಜಿಸುವುದರ ಜೊತೆಗೆ ಸ್ಥಳೀಯ ಸಮುದಾಯಗಳಿಗೆ ಆದಾಯ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

       ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಕಾಡು ಹುಲಿಗಳ ಜನಸಂಖ್ಯೆಗೆ ನೆಲೆಯಾಗಿದೆ. ರಾಯಲ್ ಬೆಂಗಾಲ್ ಹುಲಿಯು ನಮ್ಮ ದೇಶದ ರಾಷ್ಟ್ರೀಯ ಪ್ರಾಣಿಯಾಗಿದೆ. ಹುಲಿಗಳು ಉಷ್ಣವಲಯದ ಕಾಡುಗಳು, ಹುಲ್ಲುಗಾವಲುಗಳು, ಮ್ಯಾಂಗ್ರೋವ್ಗಳು ಮತ್ತು ಗದ್ದೆಗಳಲ್ಲಿ ವಾಸಿಸುತ್ತವೆ. ಅವು ಮಾಂಸಾಹಾರಿ ಪ್ರಾಣಿಗಳಾಗಿದ್ದು ಜಿಂಕೆ, ಕಾಡು ಹಂದಿ, ಗೌರ್ ಮತ್ತು ಇತರ ಸಸ್ತನಿಗಳನ್ನು ಬೇಟೆಯಾಡುತ್ತವೆ. ಪ್ರತಿಯೊಂದು ಹುಲಿಯೂ  ವಿಶಿಷ್ಟವಾದ ಬಟ್ಟೆ ಮಾದರಿಯನ್ನು ಹೊಂದಿದ್ದು, ಅದು ಪ್ರತಿಯೊಂದು ವ್ಯಕ್ತಿಯನ್ನು ಪ್ರತ್ಯೇಕಿಸುತ್ತದೆ. ಹುಲಿಗಳನ್ನು ಐಯುಸಿಎನ್ ಕೆಂಪು ಪಟ್ಟಿಯಲ್ಲಿ ಅಳಿವಿನಂಚಿನಲ್ಲಿರುವಂತೆ ವರ್ಗೀಕರಿಸಿರುವುದು ಬೇಸರದ ಸಂಗತಿಯಾಗಿದೆ. 

   ಇತ್ತೀಚಿನ ವರದಿಗಳ ಪ್ರಕಾರ ಪ್ರಪಂಚಾದ್ಯಂತ ಅರಣ್ಯಗಳಲ್ಲಿ ಅಂದಾಜು 5574 ಕಾಡು ಹುಲಿಗಳಿವೆ. ಅದರಲ್ಲಿ ಶೇಕಡ 75ರಷ್ಟು ಭಾರತದಲ್ಲಿ ಇವೆ ಎಂಬುದು ವಿಶೇಷ. 'ಹುಲಿ ಯೋಜನೆ' ಬಳಿಕ ಕೈಗೊಂಡ ಫಲವಾಗಿ ಭಾರತದಲ್ಲಿ ಈಗ ಹುಲಿಗಳ ಸಂಖ್ಯೆ (2022ರ ಗಣಿತ ಪ್ರಕಾರ)  3682 ಕ್ಕೇರಿದೆ. ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು (785) ಇದ್ದು ಕರ್ನಾಟಕ (563) ಎರಡನೇ ಸ್ಥಾನದಲ್ಲಿದೆ. ಬಂಡಿಪುರ, ನಾಗರಹೊಳೆ, ಬಿ ಆರ್ ಟಿ,  ಭದ್ರಾ, ಹಾಗೂ ಕಾಳಿ ಪ್ರದೇಶಗಳು ಕರ್ನಾಟಕದ ಹುಲಿ ಸಂರಕ್ಷಿತ ತಾಣಗಳಾಗಿವೆ. 

         ಭಾರತದಲ್ಲಿ ಹುಲಿ ಸಂರಕ್ಷಣೆ ದೇಶದ ಅತ್ಯಂತ ಯಶಸ್ವಿ ವನ್ಯಜೀವಿ ಸಂರಕ್ಷಣಾ ಪ್ರಯತ್ನದಲ್ಲಿ ಒಂದಾಗಿದೆ. 1973 ರಲ್ಲಿ ಪ್ರಾರಂಭವಾದ ಪ್ರಾಜೆಕ್ಟ್ ಟೈಗರ್ ಯೋಜನೆಯು ಹುಲಿಗಳು ಮತ್ತು ಅವುಗಳ ನೈಸರ್ಗಿಕ ಆವಾಸ ಸ್ಥಾನಗಳನ್ನು ಸಂರಕ್ಷಿಸುವ ಕಾರ್ಯಕ್ರಮವಾಗಿದೆ. ಇನ್ನು 2005ರಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ವು ಆವಾಸಸ್ಥಾನ ಸಂರಕ್ಷಣೆ, ಬೇಟೆಯಾಡುವಿಕೆ ವಿರೋಧಿ ಕ್ರಮಗಳು, ವೈಜ್ಞಾನಿಕ ಮೇಲ್ವಿಚಾರಣೆ ಮತ್ತು ಸಮುದಾಯದ ಭಾಗವಹಿಸುವಿಕೆ ಮೂಲಕ ಹುಲಿಗಳನ್ನು ರಕ್ಷಿಸುವುದರ ಮೇಲೆ ಕೇಂದ್ರೀಕರಿಸುತ್ತಿದೆ. ಹುಲಿಗಳ ಸಂಖ್ಯೆ, ಬೇಟೆಯಾಡುವಿಕೆ, ಅಕ್ರಮ ವನ್ಯಜೀವಿ ವ್ಯಾಪಾರ ತಡೆಗಟ್ಟುವಿಕೆ ಮತ್ತು ಆವಾಸ ಸ್ಥಾನದ ಸ್ಥಿತಿಗಳನ್ನು ಮೇಲ್ವಿಚಾರಣೆ ಮಾಡಲು ಕ್ಯಾಮೆರಾ ಬಲೆಗಳು, ಜಿಪಿಎಸ್ ಮ್ಯಾಪಿಂಗ್ ಹಾಗೂ ವೈಜ್ಞಾನಿಕ ಸಮೀಕ್ಷೆಗಳು ಸಹಾಯ ಹಸ್ತ ಚಾಚಿವೆ. ಇಷ್ಟೆಲ್ಲಾ ಇದ್ದರೂ ಸಹ ರಾಷ್ಟ್ರೀಯ ಪ್ರಾಣಿ ಹುಲಿಯು ಹಲವಾರು ಸಂಕಷ್ಟಗಳಿಗೆ ಒಳಗಾಗುತ್ತಿದೆ ಎಂದರೆ ಆಶ್ಚರ್ಯವಿಲ್ಲ. 


        ಹುಲಿಗಳಿಗೆ ಇರುವ ಪ್ರಮುಖ ಬೆದರಿಕೆಗಳಲ್ಲಿ ಬೇಟೆಯಾಡುವುದು, ಆವಾಸಸ್ಥಾನ ನಷ್ಟ, ಆವಾಸ ಸ್ಥಾನ ವಿಘಟನೆ, ಅಕ್ರಮ ವನ್ಯಜೀವಿ ವ್ಯಾಪಾರ ಮತ್ತು ಮಾನವ ವನ್ಯಜೀವಿ ಸಂಘರ್ಷ ಸೇರಿವೆ. ಇತ್ತೀಚೆಗೆ ಎಂಎಂ ಹಿಲ್ಸ್ ನಲ್ಲಿ ನಡೆದ ಘಟನೆ ಆತಂಕವನ್ನು ಹುಟ್ಟಿಸಿದೆ. ವಿಷಪ್ರಾಸನದಿಂದ ತಾಯಿ ಮತ್ತು  ನಾಲ್ಕು ಹುಲಿ ಮರಿಗಳ ಸಾವು ಕರ್ನಾಟಕ ಪಾಲಿಗೆ ಬಹು ದೊಡ್ಡ ನಷ್ಟವಾಗಿದೆ. ಮತ್ತಷ್ಟು ಆತಂಕದ ಸಂಗತಿ ಏನೆಂದರೆ ಏಷ್ಯಾ ಖಂಡದಲ್ಲಿ ಹರ ಡಿಕೊಂಡಿದ್ದ ಹುಲಿಗಳ ಅವಾಸ ಸ್ಥಾನದ ವಿಸ್ತೀರ್ಣ ಇದೀಗ ಶೇ.5ಕ್ಕಿಂತಲೂ ಕಡಿಮೆ ಆಗುತ್ತಿದೆ. ತಮ್ಮ ಉಳಿವಿಗಾಗಿ ಹುಲಿಗಳು ಸಾಕು ಜಾನುವಾರುಗಳನ್ನು ಬೇಟೆಯಾಡುವ ಅನಿವಾರ್ಯತೆ ಎದುರಾಗುತ್ತಿದೆ. 

       ಉಲ್ಲಾಸ್ ಕಾರಂತ್ ಅವರ ಪ್ರಕಾರ ಹುಲಿಗಳ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಅರಣ್ಯಗಳಲ್ಲಿ ಹುಲಿಗಳು ಹಾಗೂ ಅವುಗಳ ಬಲಿ ಪ್ರಾಣಿಗಳ ಮತ್ತು ನೆಲೆಗಳನ್ನು ಪರಿಣಾಮಕಾರಿಯಾಗಿ ಸಂರಕ್ಷಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅಭಯಾರಣ್ಯಗಳಲ್ಲಿ ಅಕ್ರಮಗಳನ್ನು ತೊಡಗುವವ ರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹುಲಿಯ ನೆಲೆಗಳಾದ ಅರಣ್ಯಗಳಲ್ಲಿ ಮರಿ ಮುಟ್ಟುಗಳು ಹಾಗೂ ಮತ್ತಿತರ ಉತ್ಪನ್ನಗಳ ಸಂಗ್ರಹಣೆಯನ್ನು ತಡೆಗಟ್ಟಬೇಕು ಎಂಬುದು ಅವರ ಸಲಹೆಯಾಗಿದೆ. 

        ಹುಲಿಗಳನ್ನು ಸಂರಕ್ಷಿಸುವುದರಿಂದ ಒಂದೇ ರೀತಿಯ ಪರಿಸರ ವ್ಯವಸ್ಥೆಗಳನ್ನು ಹಂಚಿಕೊಳ್ಳುವ ಸಾವಿರಾರು ಇತರ ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ರಕ್ಷಿಸಲು ಸಹಾಯಕವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹುಲಿ ಆವಾಸ ಸ್ಥಾನಗಳನ್ನು ರಕ್ಷಿಸುವುದರಿಂದ ಅರಣ್ಯಗಳು ಉಳಿಯುತ್ತವೆ. ಇದು ಇಂಗಾಲದ ಸಂಗ್ರಹಣೆ, ನೀರಿನ ಸಂರಕ್ಷಣೆ ಮತ್ತು ಹವಾಮಾನ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

 

        ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಸಂರಕ್ಷಿಸಬೇಕಾದ ಅಂಶಗಳಲ್ಲಿ ಪ್ರಮುಖವಾಗಿ ನಾಶವಾದ ಕಾಡುಗಳನ್ನು ಪುನಃ ಸ್ಥಾಪಿಸುವುದು, ಅಕ್ರಮ ಬೇಟೆ ತಡೆಗಟ್ಟುವುದು, ವನ್ಯಜೀವಿ ಕಾರಿಡಾರ್ ಗಳನ್ನು ರಕ್ಷಿಸುವುದು ಮತ್ತು ಹುಲಿಗಳಿಗೆ ಸಾಕಷ್ಟು ಬೇಟೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಸೇರಿವೆ. ಮುಖ್ಯವಾಗಿ ಪರಿಸರದ ಮೇಲುಸ್ತರದಲ್ಲಿರುವ ಹುಲಿಗಳಿಗೆ ಬದುಕಲು ಸುರಕ್ಷಿತ ಕಾಡುಗಳು, ಬಲವಾದ ರಕ್ಷಣೆ ಮತ್ತು ಸಾರ್ವಜನಿಕ ಬೆಂಬಲ ಬೇಕೆ ಬೇಕು. 

ಅಂದ ಹಾಗೆ, ಜುಲೈ 29 ಅಂತರಾಷ್ಟ್ರೀಯ ಹುಲಿ ದಿನ. ಈ ಸುಸಂದರ್ಭದಲ್ಲಿ ಹುಲಿರಾಯನ ಅಳಿವು ಉಳಿವಿನ ಬಗ್ಗೆ ನಾವೆಲ್ಲರೂ ಚಿಂತಿಸಬೇಕಾದದ್ದು ನಮ್ಮ ಪ್ರಮುಖ ಕರ್ತವ್ಯವಾಗಿದೆ. 



No comments:

Post a Comment