ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, October 4, 2022

ಭೌತವಿಜ್ಞಾನದ ಹೊಳೆವ ‘ಚಂದ್ರ’

ಭೌತವಿಜ್ಞಾನದ ಹೊಳೆವ ‘ಚಂದ್ರ’

ಲೇಖಕರು : ರಮೇಶ. ವಿ. ಬಳ್ಳಾ

ಭೌತವಿಜ್ಞಾನದಲ್ಲಿ ʼಚಂದ್ರಶೇಖರ್‌ ಮಿತಿʼ ಎಂದೇ ಖ್ಯಾತಿ ಪಡೆದಿರುವ ಸಿದ್ಧಾಂತವನ್ನು ಪ್ರತಿಪಾದಿಸಿದ ಭಾರತೀಯ ಸಂಜಾತ ಅಮೆರಿಕನ್‌ ವಿಜ್ಞಾನಿ ಸುಬ್ರಮಣ್ಯನ್‌ ಚಂದ್ರಶೇಖರ್‌ ಅವರ ಜನ್ಮ ದಿನ ಅಕ್ಟೋಬರ್‌ ೧೯ರಂದು. ಸರ್‌ ಸಿ.ವಿ.ರಾಮನ್‌ ಅವರ ಸಮೀಪ ಸಂಬಂಧಿಯಾಗಿದ್ದ ಅವರ ಸವಿನೆನಪಿನಲ್ಲಿ ಈ ಲೇಖನವನ್ನು ಬರೆದಿದ್ದಾರೆ ಶಿಕ್ಷಕ ರಮೇಶ್.ವಿ.ಬಳ್ಳಾ ಅವರು.

ಅದೊಂದು ದಿನ ಆ ವಿದ್ಯಾರ್ಥಿ ಪ್ರಸಿದ್ಧ ಖಗೋಳವಿಜ್ಞಾನದ ಪತ್ರಿಕೆಯಾದ ’ಅಸ್ಟ್ರೋಫಿಸಿಕಲ್’ ಜರ್ನಲ್’ಗೆ ಒಂದು ಲೇಖನ ಕಳುಹಿಸುತ್ತಾನೆ. ಆ ಲೇಖನ ಪತ್ರಿಕೆಯಲ್ಲಿ ಅಚ್ಚಾಗಬೇಕಿರುವಾಗಲೇ ಹಿರಿಯ ವಿಜ್ಞಾನಿಯೊಬ್ಬರ ವಿಮರ್ಶೆಗೆ ಒಳಪಟ್ಟು ಲೇಖನ ಮುದ್ರಣಕ್ಕೆ ಯೋಗ್ಯವಲ್ಲ ಎಂಬ ಆಕ್ಷೇಪ ಬರುತ್ತದೆ. ಆ ಆಕ್ಷೇಪವನ್ನು ವಿನಮ್ರವಾಗಿ ಅಷ್ಟೇ ಗೌರವದಿಂದ ಸ್ವೀಕರಿಸಿ ಲೇಖನ ಕುರಿತಂತೆ ತನ್ನ್ಮದೇ ಆದ ಸ್ಪಷ್ಟನೆ ಹಾಗೂ ಸಕಾರಣಗಳಿಂದ ಆತ ಸಂಪಾದಕರಿಗೆ ಪತ್ರ ಬರೆಯುತ್ತಾನೆ. ಆಗ ಪುನರ್ ವಿಮರ್ಶೆಗೆ ಒಳಪಟ್ಟು ಆ ಲೇಖನ ಪ್ರಕಟಣೆಯಾಗುತ್ತದೆ. ಅಷ್ಟೇ ಅಲ್ಲ, ಆ ಪ್ರಸಿದ್ಧ ಪತ್ರಿಕೆಗೆ ಅವನು ಮುಂದೆ ಸಂಪಾದಕನಾಗುವ ಭಾಗ್ಯ ದೊರೆಯುತ್ತದೆ. ಆ ಮೂಲಕ ವಿದ್ಯಾರ್ಥಿ ದೆಸೆಯಿಂದಲೇ ಖಗೋಳದಲ್ಲಿ ಆಸಕ್ತಿ ಅಭಿರುಚಿ ಬೆಳೆಸಿಕೊಂಡು ಮೇರುಶಿಖರಕ್ಕೇರಿದ ಕೀರ್ತಿ ಸಾಧಕನಾಗುತ್ತಾನೆ. ಆ ವಿದ್ಯಾರ್ಥಿ ಬೇರಾರೂ ಅಲ್ಲ, ಆತ ಖಭೌತವಿಜ್ಞಾನದಲ್ಲಿ ಅಪ್ರತಿಮ ಪ್ರೌಢಿಮೆ ಮೆರೆದ ಭಾರತೀಯ ಸಂಜಾತ ಸುಬ್ರಹ್ಮಣ್ಯನ್ ಚಂದ್ರಶೇಖರ್.




ಅಕ್ಟೋಬರ್ 19, ಸುಬ್ರಹ್ಮಣ್ಯನ್ ಚಂದ್ರಶೇಖರ್‌ಅವರ ಜನ್ಮದಿನ. ಜಗತ್ತಿನ ವಿಜ್ಞಾನ ಕ್ಷೇತ್ರದಲ್ಲಿ ಅಚ್ಚಳಿಯದ ಹೆಸರು ಇವರದು. ಬಾಲ್ಯದಲ್ಲೇ ಆಕಾಶಕಾಯಗಳ ಬಗ್ಗೆ ಆಸಕ್ತಿ, ಕುತೂಹಲ ಹೆಚ್ಚಿಸಿಕೊಳ್ಳುವ ಮೂಲಕ ಪ್ರತಿಯೊಂದನ್ನು ಬೆರಗುಗಣ್ಣಿನಿಂದ ನೋಡುವ ಅವರ ತೀಕ್ಷ÷್ಣಮತಿಯ ಬಗ್ಗೆ ಹೇಳಬೇಕಾಗಿಲ್ಲ. ವಿಶ್ವದ ಶ್ರೇಷ್ಠ ವಿಜ್ಞಾನ ಬರಹಗಾರ ಅರ್ಥರ್ ಮಿಲ್ಲರ್ ಹೇಳುವ ಹಾಗೆ ಸುಬ್ರಮಣ್ಯನ್ ಒಬ್ಬ ʼನಕ್ಷತ್ರಲೋಕದ ಅನಭಿಷಕ್ತ ದೊರೆʼ, ಖಭೌತವಿಜ್ಞಾನದ ಮೇರು ಪರ್ವತ. ಇಂತಹ ವಿಜ್ಞಾನ ಸಾಧಕ ಭಾರತೀಯನ ಬಾಲ್ಯದ ಬದುಕು ಹಾಗೂ ಸಾಧನೆಯ ಹಾದಿ ನಮ್ಮ ವಿದ್ಯಾರ್ಥಿಗಳಿಗೆ, ಯುವಕರಿಗೆ ಸದಾ ದಾರಿದೀಪವಾಗಬೇಕಿದೆ.

 


ಸುಬ್ರಹ್ಮಣ್ಯನ್‌ರವರು ಹುಟ್ಟಿದ್ದು 1910ರ ಅಕ್ಟೋಬರ್ 19ರಂದು, ಅದು ಸ್ವಾತಂತ್ರ್ಯ ಪೂರ್ವದ ಭಾರತ ಹಾಗೂ ಇಂದಿನ ಪಾಕಿಸ್ತಾನದ ಲಾಹೋರ್‌ನಲ್ಲಿ. ತಂದೆ ಸುಬ್ರಮಣ್ಯಂ ಅಯ್ಯರ್ ರೈಲ್ವೆ ಉದ್ಯೋಗಿ. ತಾಯಿ ಸೀತಾಲಕ್ಷ್ಮಿ . ತಂದೆ, ತಾಯಿಗಳೇ ಅವರಿಗೆ ಮೊದಲ ಗುರುಗಳಾಗಿದ್ದರು. ನಾಲ್ಕು ಗಂಡು, ಆರು ಹೆಣ್ಣು ಮಕ್ಕಳಿದ್ದ ತುಂಬು ಕುಟುಂಬ ಇವರದು. ಚೆನೈನಲ್ಲಿ ಹೈಸ್ಕೂಲ್ ಶಿಕ್ಷಣ ಪಡೆಯುತ್ತಾರೆ. ಗಣಿತ-ವಿಜ್ಞಾನದ ಬಗ್ಗೆ ಅಪಾರವಾದ ತುಡಿತ, ಆಸಕ್ತಿ ಹೊಂದಿದ ಇವರು ಶಾಲೆಯಲ್ಲಿ ಯಾವಾಗಲೂ ಮೇಲುಗೈ ಸಾಧಿಸುತ್ತಿದ್ದರು. ಇವರು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿಎಸ್ಸಿ ಆನರ್ಸ ಪದವಿಯನ್ನು 1930ರಲ್ಲಿ ಅತೀ ಹೆಚ್ಚು ಅಂಕ ಗಳಿಕೆ ಮೂಲಕ ದಾಖಲೆ ನಿರ್ಮಿಸುತ್ತಾರೆ. ಇನ್ನೊಂದು ಮಹತ್ವದ ವಿಷಯವೆಂದರೆ ಇವರ ಮೊದಲ ಸಂಶೋಧನಾ ಪ್ರಬಂಧ ಪ್ರೊಸೀಡಿಂಗ್ಸ್ ಆಫ್ ದಿ ರಾಯಲ್ ಸೊಸೈಟಿಯಲ್ಲಿ ಪ್ರಕಟವಾದಾಗ ಅವರಿಗೆ ಕೇವಲ 18 ವರ್ಷಗಳು. ಸರ್ಕಾರದ ಶಿಷ್ಯ ವೇತನದೊಂದಿಗೆ ಉನ್ನತ ವ್ಯಾಸಂಗಕ್ಕೆ ಭಾರತವನ್ನು ತೊರೆದು ಇಂಗ್ಲೆಂಡ್‌ನ ಕೆಂಬ್ರಿಜ್ ಟ್ರಿನಿಟಿ ಕಾಲೇಜಿಗೆ ಸೇರುತ್ತಾರೆ. ತಮ್ಮ 20ನೇ ವಯಸ್ಸಿನಲ್ಲಿ ಜಗತ್ಪಸಿದ್ಧ ವಿಜ್ಞಾನಿಗಳಾದ ಆರ್ ಹೆಚ್ ಫೌಲರ್ ಹಾಗೂ ಪಿ ಎ ಎಂ ಡಿರಾಕರ್ ಅವರೊಡಗೂಡಿ ಸಂಶೋಧನೆಯಲ್ಲಿ ತೊಡಗುತ್ತಾರೆ. 1933ರಲ್ಲಿ ಸೈದ್ಧಾಂತಿಕ ಭೌತವಿಜ್ಞಾನದಲ್ಲಿ ಪಿ.ಹೆಚ್‌ಡಿ ಪದವಿ ಪಡೆದು ಮುಂದೆ ಅದೇ ಕಾಲೇಜಿನ ಫೆಲೋ ಆಗಿ ಮುಂದುವರೆಯುತ್ತಾರೆ. ವ್ಯಾಸಂಗ, ಸಂಶೋಧನೆಯ ಹಾದಿಯಲ್ಲಿ ಹಲವು ಏಳುಬೀಳುಗಳನ್ನು ಕಂಡು ಜಗತ್ತಿನ ವಿವಿಧ ಭಾಗಗಳಿಗೆ ಅಲೆಯುತ್ತಾರೆ. ಮುಂದೆ, 1953ರಲ್ಲಿ ಅಮೇರಿಕಾದ ಪೌರತ್ವ ಪಡೆದು ಪತ್ನಿ ಲಲಿತಾ ಚಂದ್ರಶೇಖರ್‌ರೊಡನೆ ಅಲ್ಲೇ ನೆಲೆ ನಿಲ್ಲುತ್ತಾರೆ.

ಸುಬ್ರಮಣ್ಯನ್ ಚಂದ್ರಶೇಖರ್‌ವರು ಗಣಿತ, ಅಂಕಿಸಂಖ್ಯೆಗಳು, ಖಭೌತದ ಕೌತುಕಗಳ ಬಗ್ಗೆ ಸದಾ ಉತ್ಸಾಹಿಗಳು. ಅಷ್ಟೇ ಅಲ್ಲದೇ ಆ ಪೀಳಿಗೆಯ ಮಟ್ಟಿನ ಇಂಗ್ಲೀಷ್ ಭಾಷೆಯ ಅಪಾರ ಜ್ಞಾನದ ವ್ಯಕ್ತಿಯಾಗಿ, ಇಂಗ್ಲೀಷ್ ಭಾಷೆಯ ಸಾಹಿತ್ಯದ ಓದಿನ ಗೀಳು ಹಚ್ಚಿಕೊಂಡು ಚೆನ್ನಾಗಿ ಅರಗಿಸಿಕೊಂಡ ಮಹಾ ಮೇಧಾವಿಯಾಗಿದ್ದಾರೆ. ಆ ಮೂಲಕ ತಮ್ಮ ವಿಜ್ಞಾನ ಬರವಣಿಗೆಯಲ್ಲಿ ಸಾಹಿತ್ಯದ ರಸಸ್ವಾದವನ್ನು ಉಣಬಡಿಸಿದ ಪ್ರಕಾಂಡತೆ ಅವರಲ್ಲಿ ಎದ್ದು ಕಾಣುತ್ತದೆ. ನೊಬೆಲ್ ವಿಜೇತ ಹ್ಯಾನ್ಸ್ ಬೇಥ್ ಹೇಳುವಂತೆ ‘ಚಂದ್ರಶೇಖರ್‌ರವರ ಬರಹವೆಂದರೆ ವಿಕ್ಟೋರಿಯನ್ ಯುಗದ ಸೌಂದರ್ಯವೆಲ್ಲವೂ ಮೇಳೈಸಿದ ಸಾಹಿತ್ಯ. ಇದರೊಟ್ಟಿಗೆ, ಪತ್ನಿಯೊಂದಿಗೆ ಆಗಾಗ ಸಂಗೀತ ಕಛೇರಿಗೆ ಹೋಗುವ ಹವ್ಯಾಸವೂ ಇವರಲ್ಲಿತ್ತು. ಆ ಮೂಲಕ ಮನರಂಜನೆಯನ್ನು ಪಡೆಯುತ್ತಾ ಲಲಿತಕಲೆ, ಸಂಗೀತದ ಅಭಿರುಚಿಯೊಂದಿಗೆ ಕರ್ನಾಟಕದ ಸಂಗೀತವನ್ನು ಮೆಚ್ಚಿಕೊಳ್ಳುತ್ತಿದ್ದರು. ಅಂಕಿಸಂಖ್ಯೆಗಳು, ಗಣಿತ, ನಕ್ಷತ್ರಗಳು, ಆಕಾಶಕಾಯಗಳು, ಇಲೆಕ್ಟಾçನುಗಳು ಹೀಗೆ ಅನೇಕ ವಿಷಯ ಜ್ಞಾನಗಳ ಸಂಪನ್ನರಾಗಿದ್ದರು. ಇವರ ನಿರ್ಧಿಷ್ಟ ಕ್ಷೇತ್ರ ಯಾವುದೆಂದು ಕೆಲ ಸಾರಿ ಗೊಂದಲವೆನಿಸಿದರೂ ಅವರೇ ಹೇಳಿಕೊಂಡAತೆ ಒಬ್ಬ ಖಭೌತವಿಜ್ಞಾನಿಯಾಗಿ ಜಗತ್ತಿನಲ್ಲಿ ಗುರುತಿಸಿಕೊಂಡವರು. ಇಂತಹ ಅಪಾರ ಜ್ಞಾನದ ಕಣಜವಾದ ಸುಬ್ರಮಣ್ಯನ್ ಗೆಳೆಯರೆಲ್ಲರಿಗೂ ಪ್ರೀತಿಯ ‘ಚಂದ್ರರಾಗಿ ಆಕಾಶದಲ್ಲಿ ಹೊಳೆದವರು.

ಖಭೌತವಿಜ್ಞಾನಕ್ಕೆ ಇವರ ಕೊಡುಗೆಗಳು ಅಪಾರ. ಇವರ ‘ಚಂದ್ರಶೇಖರ್ ಮಿತಿ ಎಲ್ಲರಿಗೂ ಚಿರಪರಿಚಿತ. ಇಂಗ್ಲೆಂಡ್‌ನ ಸುದೀರ್ಘ ಪಯಣದಲ್ಲಿದ್ದಾಗ ಇವರ ನಕ್ಷತ್ರಗಳ ಕುರಿತ ಆಲೋಚನೆ ʼಚಂದ್ರಶೇಖರ್ ಮಿತಿʼ ರೂಪುಗೊಳ್ಳಲು ಕಾರಣವಾಯಿತು. ನಕ್ಷತ್ರಗಳ ದ್ರವ್ಯರಾಶಿಗಳಿಗೂ ಒಂದು ಮಿತಿಯಿದೆ ಎಂಬ ಅವರ ತಿಳಿವಳಿಕೆ, ಊಹೆಯಾಗದೆ ಸಾಕಾರಗೊಂಡು ನಕ್ಷತ್ರಗಳಲ್ಲಿನ ನ್ಯೂಕ್ಲಿಯರ್ ಕ್ರಿಯೆಯಿಂದ ಅದರಲ್ಲಿನ ಹೈಡ್ರೋಜನ್ ಹಾಗೂ ಹೀಲಿಯಂ ಕ್ರಮೇಣ ಖಾಲಿಯಾಗುತ್ತ ದ್ರವ್ಯರಾಶಿ ಕಳೆದುಕೊಂಡು ಕುಗ್ಗುತ್ತ, ಶ್ವೇತಕುಬ್ಜಗಳಾಗಿ ಮಾರ್ಪಡುತ್ತವೆ ಎಂಬುದನ್ನು ಖಾತರಿಪಡಿಸಿದರು. ನಕ್ಷತ್ರವಿಕಾಸದ ಅಂತಿಮ ಹಂತವೇ ಈ ಶ್ವೇತಕುಬ್ಜ. ಯಾವುದೇ ನಕ್ಷತ್ರದ ಸೂರ್ಯ ದ್ರವ್ಯರಾಶಿಯ 1.4 ಮಿತಿಗಿಂತ ಹೆಚ್ಚಾಗಿದ್ದರೆ ಅದು ಸ್ಪೊಟಗೊಳ್ಳುತ್ತದೆ, ಆ ಮೂಲಕ ಅದು ಅವಸಾನವಾಗುತ್ತದೆ. ಈ ಶ್ವೇತಕುಬ್ಜದ ಸೂರ್ಯ ದ್ರವ್ಯರಾಶಿ 1.4 ಮಿತಿಯಲ್ಲಿರುತ್ತದೆ ಎಂಬುದನ್ನು ಜಗಜ್ಜಾಹೀರು ಮಾಡಿದರು. ಇದೇ ‘ಚಂದ್ರಶೇಖರ್ ಮಿತಿ ಎಂದು ಪ್ರಸಿದ್ಧವಾಗಿದೆ. ಆದರೆ, ಆ ಸಮಯಕ್ಕೆ ಇದು ನಂಬಲಸಾಧ್ಯದ ಸಂಗತಿಯಾಗಿ ಸಮಕಾಲೀನ ವಿಜ್ಞಾನಿಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಮುಂದೆ ಒಪ್ಪಿತವಾಗಿ ಮುನ್ನಲೆಗೆ ಬಂದಿತು. ಅಲ್ಲದೆ, ಇವರ ʼಆ್ಯನ್ ಇನ್‌ಟ್ರಡಕ್ಷನ್ ಟು ದಿ ಥಿಯರಿ ಆಫ್ ಸ್ಟೆಲ್ಲಾರ್ ಸ್ಟçಕ್ಚರ್ʼ, ʼಪ್ರಿನ್ಸಿಪಲ್ಸ್ ಆಫ್ ಸ್ಟೆಲ್ಲಾರ್ ಡೈನಾಮಿಕ್ʼ. ʼರೇಡಿಯೇಟಿವ್ ಟ್ರಾನ್ಸಫರ್ʼ, ʼಹೈಡ್ರೋಡೈನೆಮಿಕ್ ಆಂಡ್ ಹೈಡ್ರೋಮೆಗ್ನೆಟಿಕ್ ಸ್ಟೆಬಿಲಿಟಿʼ,ʼಬ್ಲಾಕ್ ಹೋಲ್ʼ ಮುಂತಾದ ಕೃತಿಗಳು ಇವರ ಖಭೌತವಿಜ್ಞಾನದ ಮೇಲಿನ ಹಿಡಿತಕ್ಕೆ ಹಿಡಿದ ಕೈಗನ್ನಡಿಯಾಗಿವೆ.

ಸುಬ್ರಹ್ಮಣ್ಯನ್ ಚಂದ್ರಶೇಖರ್‌ರವರ ಖಗೋಳವಿಜ್ಞಾನದ ಅದರಲ್ಲೂ ನಕ್ಷತ್ರಗಳ ರಚನೆ, ವಿಕಾಸ, ಅವುಗಳಲ್ಲಿನ ಭೌತಿಕ ಪ್ರಕ್ರಿಯೆಗಳ ಕುರಿತ ಅನನ್ಯವಾದ ಸಂಶೋಧನೆಗೆ 1983ರಲ್ಲಿ ಪ್ರತಿಷ್ಠಿತ ನೊಬೆಲ್ ಪುರಸ್ಕಾರ ದೊರೆಯಿತು. ಖಗೋಳವಿಜ್ಞಾನ ಕ್ಷೇತ್ರದಲ್ಲಿನ ಅವರ ಅವಿರತ ಸಂಶೋಧನೆಗಳಿಗೆ ಲೆಕ್ಕವಿಲ್ಲ. ಸದಾ ಹೊಸತನ್ನು ಹುಡುಕುವ ಅವರ ಪ್ರವೃತ್ತಿ ಇಂತಹ ಸಾಧನೆಗೆ ಪ್ರೇರಕ ಶಕ್ತಿಯಾಗಿತ್ತು. ಜೀವನದುದ್ದಕ್ಕೂ ಅಲೆದಾಟ ಕಂಡ ಅವರ ಬದುಕು ವಿದೇ±ದಲ್ಲಿಯೇ ನೆಲೆ ನಿಂತರೂ, ಭಾರತದತ್ತ ಅವರ ಮನಸ್ಸು ಹಾತೊರೆಯುತ್ತಿತ್ತು. 20ನೇ ಶತಮಾನದ ವಿಶ್ವ ಕಂಡ ಅಗ್ರಮಾನ್ಯ ಖಭೌತವಿಜ್ಞಾನಿಯಾಗಿ ಚಂದ್ರಶೇಖರ್ ಭಾರತಕ್ಕೆ ಹೆಸರು ತಂದರು. ಅವರ ಕುಟುಂಬದಲ್ಲಿ ಆಗಲೇ ಒಂದು ಹೆಸರು ವಿಜ್ಞಾನ ಶೋಧನೆ ಮೂಲಕ ಜಗತ್ತನ್ನು ಬೆಳಗಿತ್ತು. ಆ ಇನ್ನೊಂದು ಪ್ರತಿಭೆ ನೊಬೆಲ್ ವಿಜೇತ ಶ್ರೇಷ್ಠ ವಿಜ್ಞಾನಿ ಸಿ ವಿ ರಾಮನ್ ಇವರ ಚಿಕ್ಕಪ್ಪನವರು. ವಿಜ್ಞಾನಕ್ಕಾಗಿ ದುಡಿದ ಇಂತಹ ಮನೆತನದ ಸುಬ್ರಹ್ಮಣ್ಯನ್ ಚಂದ್ರಶೇಖರ್‌ರವರು ಸಮಕಾಲೀನ ಎಲ್ಲರ ಪ್ರೀತಿಯ ‘ಚಂದ್ರರಾಗಿ 1995 ಆಗಷ್ಟ್ 21ರಂದು ಮರೆಯಾದರು. ಆದರೆ, ಅವರ ವೈಜ್ಞಾನಿಕ ಸಂಶೋಧನೆಗಳ ಖ್ಯಾತಿಯ ಮೂಲಕ ಈಗಲೂ ಖಭೌತವಿಜ್ಞಾನದ ಹೊಳೆವ ಚಂದ್ರರಾಗಿದ್ದಾರೆ.

ಆಕರಗಳು :   ಮೈಸೂರು ವಿ ವಿ ವಿಶ್ವಕೋಶ

                    The legacy of S Chandrashekhar – Kameshwar C Wali

ಜಾಲತಾಣ

ಲೇಖಕರು : ರಮೇಶ. ವಿ. ಬಳ್ಳಾ

 ಅಧ್ಯಾಪಕರು

 ಬಾಲಕಿಯರ ಸರ್ಕಾರಿ ಪ. ಪೂ. ಕಾಲೇಜು  (ಪ್ರೌಢ)

ಗುಳೇದಗುಡ್ಡ ಜಿ: ಬಾಗಲಕೋಟ 

ಮೊ. 9739022186 



2 comments:

  1. ಮಹಾನ್ ಖಭೌತ ವಿಜ್ಞಾನಿ ಡಾ. ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಬಗ್ಗೆ ಸವಿವರವಾದ ಲೇಖನಕ್ಕೆ ಅನೇಕ ಧನ್ಯವಾದಗಳು ಸರ್. ಅವರು ಸರ್ ಸಿ ವಿ ರಾಮನ್ ಅವರ ಸಮೀಪದ ಸಂಬಂಧಿ ಎನ್ನುವುದು ಇನ್ನೂ ಹೆಮ್ಮೆಯ ವಿಷಯ

    ReplyDelete
  2. ಉತ್ತಮ ಲೇಖನ, ಧನ್ಯವಾದಗಳು ಸರ್.

    ReplyDelete