ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, February 4, 2024

ಪರಮಾಣು ರಚನಾ ಸಿದ್ಧಾಂತದ ಪಿತಾಮಹ – ನಿಕೊಲಸ್‌ ಬೇಕರ್‌ !!!!

ಪರಮಾಣು ರಚನಾ ಸಿದ್ಧಾಂತದ ಪಿತಾಮಹನಿಕೊಲಸ್‌ ಬೇಕರ್‌ !!!!

ಲೇ : ರಾಮಚಂದ್ರ ಭಟ್‌ ಬಿ.ಜಿ


ಕಣ್ಣಿಗೆ ಕಾಣದ ಪರಮಾಣುವಿನ ಒಳಗೆ ಬೃಹತ್ ಬ್ರಹ್ಮಾಂಡವೇ ಅಡಗಿದೆ. ವಿಜ್ಞಾನಿಗಳು ಸತತ ಪ್ರಯೋಗಗಳ ಮೂಲಕ ಪರಮಾಣುವಿನ ಒಳಹೊಕ್ಕು ಅಲ್ಲಿನ ಹೂರಣವನ್ನು ಹೊರಗೆಡಹಿದ್ದಾರೆ. ಈ ಹಾದಿಯಲ್ಲಿನ ವಿಜ್ಞಾನಿಗಳ ಏಳು ಬೀಳುಗಳು ರಣರೋಚಕ. ನಾಜಿ ಸೈನಿಕರ ಕೈಯಿಂದ ತಪ್ಪಿಸಿಕೊಂಡ ವಿಜ್ಞಾನಿಗಳ ರೋಚಕ ಕಥೆಯನ್ನು ನಿಮ್ಮ ಮುಂದಿಟ್ಟಿದ್ದಾರೆ ರಾಮಚಂದ್ರ ಭಟ್ ಅವರು.


ಎರಡನೇ ಮಹಾಯುದ್ಧದ ಸಂದರ್ಭ. ಹಿಟ್ಲರ್‌ ಜಗತ್ತನ್ನೇ ನಡುಗಿಸುತ್ತಿದ್ದ ಕಾಲ. ಜರ್ಮನ್ನರು ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ಅಥವಾ ತಮ್ಮೊಂದಿಗೆ ಇಟ್ಟುಕೊಳ್ಳುವುದನ್ನು ಜರ್ಮನಿ ಸರ್ಕಾರವು ನಿಷೇಧಿಸಿತ್ತು. ಈ ಕಾನೂನನ್ನು ಪಾಲಿಸದವರ ಮೇಲೆ ಕ್ರಮ ಕೈಗೊಳ್ಳಲಾರಂಭಿಸಿತು. ಜರ್ಮನಿಯ ನಿರ್ದಯಿ ನಾಜಿ ಸೈನ್ಯ ಮ್ಯಾಕ್ಸ್ ವೋನ್ ಲೋವ್ ಮತ್ತು ಜೇಮ್ಸ್ ಫ್ರ್ಯಾಂಕ್ ಎಂಬ ಇಬ್ಬರು ನೊಬೆಲ್ ಪ್ರಶಸ್ತಿ ವಿಜೇತ ಯಹೂದಿ ವಿಜ್ಞಾನಿಗಳ ಹಿಂದೆ ಬಿತ್ತು. ಈ ಇಬ್ಬರು ವಿಜ್ಞಾನಿಗಳು ತಮ್ಮ ನೋಬೆಲ್ ಪ್ರಶಸ್ತಿಯ ಚಿನ್ನದ ಪದಕಗಳನ್ನು ದೇಶದ ಹೊರಗೆ ವಾಸವಿದ್ದ ಮತ್ತೊಬ್ಬ ನೊಬೆಲ್ ಪ್ರಶಸ್ತಿ ವಿಜೇತ ಸ್ನೇಹಿತನ ಬಳಿ ಜೋಪಾನವಾಗಿ ಸಂರಕ್ಷಿಸಿ ಇಡಲು ಕೋಪನ್ ಹೇಗನ್‌ಖ್ಯಾತ ಪ್ರಯೋಗಾಲಯಕ್ಕೆ ನೀಡಿದ ವಿಷಯ ಗುಪ್ತಚರರಿಂದ ತಿಳಿದು ಬಂತು. ಯುದ್ಧ ಮುಂದುವರೆದಂತೆ, ಜರ್ಮನ್ ಸೈನ್ಯ ಒಂದೊಂದೇ ಪ್ರದೇಶವನ್ನು ಗೆಲ್ಲುತ್ತಾ ಕೋಪನ್ ಹೇಗನ್ ತಲುಪಿತು. ಅಲ್ಲಿನ ಬೀದಿಗಳಲ್ಲಿ ಜರ್ಮನ್ ಸೈನ್ಯ ಓಡಾಡುತ್ತಿರುವುದು ಈ ಖ್ಯಾತ ವಿಜ್ಞಾನಿಯ ಗಮನಕ್ಕೆ ಬಂತು. ನೋಬಲ್‌ ಪ್ರಶಸ್ತಿಯ ಚಿನ್ನದ ಪದಕಗಳಲ್ಲಿ ಆ ವಿಜ್ಞಾನಿಗಳ ಹೆಸರನ್ನು ಕೆತ್ತಲಾಗಿತ್ತು. ಸಾಕ್ಷಿ ಸಮೇತ ನಾಜಿಸೈನ್ಯಕ್ಕೆ ಸಿಕ್ಕಿದರೆ ಆ ವಿಜ್ಞಾನಿಗಳಷ್ಟೇ ಅಲ್ಲದೆ ಅಲ್ಲಿದ್ದ ಎಲ್ಲರ ತಲೆದಂಡವೂ ಆಗುತ್ತಿತ್ತು. ಅಪಾಯದಲ್ಲಿದ್ದ ಅಷ್ಟೂ ಜನರ ಜೀವ ಉಳಿಸಲು ಪದಕಗಳನ್ನು ಎಲ್ಲಾದರೂ ಅಡಗಿಸಿ ಇಡಲೇ ಬೇಕಿತ್ತು. ಎಲ್ಲಿ ಇಡುವುದು? ಆಲೋಚಿಸಲು ಸಮಯವಿಲ್ಲ. ಜರ್ಮನಿಯ ಸೈನಿಕರು ಪ್ರಯೋಗ ಶಾಲೆಯೊಳಗೆ ನುಗ್ಗಿಯೇ ಬಿಟ್ಟರು. ಇಂಚಿಂಚೂ ಹುಡುಕಲಾರಂಭಿಸಿದರು. ಅಲ್ಲಿದ್ದ ಎಲ್ಲರಿಗೂ ತಮ್ಮ ಅಂತ್ಯ ಸಮೀಪವಾದಂತೆ ಅನಿಸಿತು. ಅವರ ಎದೆಯಲ್ಲಿ ನಡುಕ. ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚುತ್ತಲೇ ಹೋಗುತ್ತಿತ್ತು. ಕಣ್ಣುಗಳಲ್ಲಿ ಸಾವಿನ ಭೀತಿ!!!. ಅದೇನು ಅದೃಷ್ಟವೋ ? ಹುಡುಕಿ ಹುಡುಕಿ ಸುಸ್ತಾದ ಸೈನಿಕರು ಇಲ್ಲಿ ಚಿನ್ನದ ಪದಕಗಳು ಇಲ್ಲವೆಂದು ಹೊರಟರು!!! ಬೀಸುವ ದೊಣ್ಣೆಯಿಂದ  ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವುದು ಇದಕ್ಕೆ ಅಲ್ಲವೇ? ಹಾಗಾದರೆ ಅದುವರೆಗೂ ಪ್ರಯೋಗಾಲಯದಲ್ಲಿದ್ದ ಚಿನ್ನದ ಪದಕಗಳು ಹೇಗೆ ನಾಪತ್ತೆಯಾದವು?

ಸಾವಿನ ದವಡೆಯಲ್ಲಿದ್ದಾಗಲೂ ಧೃತಿಗೆಡಬಾರದೆನ್ನುವುದು ಇದಕ್ಕೇ ಅಲ್ವೇ? ಪ್ರಸಂಗಾವಧಾನತೆ ಮತ್ತು ವಿಚಕ್ಷಣತೆಗೆ ಈ ಐತಿಹಾಸಿಕ ಪ್ರಸಂಗವೊಂದು ಅದ್ವಿತೀಯ ಉದಾಹರಣೆಯಾಗಿದೆ. ಬೋರ್ ಇನ್ಸ್ಟಿಟ್ಯೂಟ್‌ನಲ್ಲಿ ಯುವ ರಸಾಯನಶಾಸ್ತ್ರಜ್ಞ ಜಾರ್ಜ್ ಡಿ  ಹೆವೆಸಿ, ಈ ನೊಬೆಲ್ ಪ್ರಶಸ್ತಿ ವಿಜೇತರ ಜೊತೆ ಸಂಶೋಧನೆ ನಡೆಸುತ್ತಿದ್ದ. ಈತನ ಸಮಯಪ್ರಜ್ಞೆ ಅಮೂಲ್ಯ ಜೀವಗಳನ್ನು ಉಳಿಸಿತು. ನಾಜಿ ಸೈನಿಕರು ಇನ್ನೇನು ಕೋಪನ್ ಹೇಗನ್ನ ಬೋರ್ ಇನ್ಸ್ಟಿಟ್ಯೂಟ್ ಒಳಗೆ ಕಾಲಿಟ್ಟೇ ಬಿಟ್ಟರು ಎನ್ನುವಷ್ಟರೊಳಗೆ, ಹೆವೆಸಿ ತನಗೆ ಹೊಳೆದ ಆಲೋಚನೆ ಬಗ್ಗೆ ಹೇಳಿದ. ತಕ್ಷಣವೆ ಆ ಮೆಡಲ್‌ಗಳನ್ನು ಗಾಜಿನ ಬಾಟಲಿ ಒಳಗೆ ಇಟ್ಟು ಅದಕ್ಕೊಂದು ದ್ರಾವಣವನ್ನು ಸೇರಿಸಿ ಮುಚ್ಚಳ ಹಾಕಿದ. ಕೆಲವೇ ಕ್ಷಣಗಳಲ್ಲಿ ಸೈನಿಕರು ಪ್ರಯೋಗಶಾಲೆಯ ಒಳಗೆ ನುಗ್ಗಿ ಆ ಪದಕಗಳನ್ನು ಹುಡುಕಲಾರಂಭಿಸಿದರು. ಯಮದೂತರ ಕಣ್ಣಿಗೆ, ಎದುರಿದ್ದ ಗಾಜಿನ ಪಾತ್ರೆಯಲ್ಲಿ ಕರಗುತ್ತಿದ್ದ ಮೆಡಲ್‌ಗಳು ಗೋಚರಿಸಲೇ ಇಲ್ಲ.!!! ಪದಕಗಳು ಅಕ್ವರಿಜಿಯ ಎಂಬ ದ್ರಾವಕದಲ್ಲಿ ಕರಗಿ ಚಿನ್ನದ ನೀರಾಗಿದ್ದವು!!! ಯುದ್ಧದ ನಂತರ ಈ ದ್ರಾವಣದಿಂದ ಚಿನ್ನವನ್ನು ಪಡೆದು ಸ್ಟಾಕ್‌ಹೋಂನ ನೋಬಲ್‌ ಫೌಂಡೇಶನ್‌ಗೆ ನೀಡಲಾಯಿತು. ಮತ್ತೆ ಮೆಡಲ್‌ಗಳನ್ನು ಎರಕ ಹೊಯ್ದು ವಿಜ್ಞಾನಿಗಳಿಗೆ ಮತ್ತೊಮ್ಮೆ ನೀಡಲಾಯಿತು!! ಅಂತೂ ಅಕ್ವಾರಿಜಿಯಾ ಎಂಬ ರಾಜದ್ರವ ಹಲವಾರು ಅಮೂಲ್ಯ ಜೀವಗಳ ರಕ್ಷಣೆ ಮಾಡಿತ್ತು. ಇಂತಹ ಅಕ್ವಾರಿಜಿಯವನ್ನು ಮೊದಲ ಬಾರಿಗೆ ತಯಾರಿಸಿದ್ದು 8ನೇ ಶತಮಾನದಲ್ಲಿ, ಜಬೀರ್ ಇಬ್ನ್ ಅಲ್-ಹಯಾನ್ ಎಂಬ ಅರಬ್ಬಿ ರಸವಿದ್ಯಾ ತಂತ್ರಜ್ಞ. ಈತ 1:3 ಅನುಪಾತದಲ್ಲಿ ಸಾರಯುಕ್ತ ನೈಟ್ರಿಕ್ ಮತ್ತು ಹೈಡ್ರೋಕ್ಲೋರಿಕ್ ಆಮ್ಲಗಳನ್ನು ಮಿಶ್ರ ಮಾಡಿ ಅಕ್ವರಿಜಿಯ ಎಂಬ ಅದ್ಭುತ ಮಾಯಾದ್ರವವನ್ನು ಸಿದ್ಧಪಡಿಸಿದ.


ಹೀಗೆ ತಿಳಿದು ತಿಳಿದೂ ಅಪಾಯವನ್ನು ತನ್ನ ಮೈ ಮೇಲೆ ಎಳೆದುಕೊಂಡ ಆ ವಿಜ್ಞಾನಿ ಯಾರೆಂದು ಊಹಿಸುತ್ತಿದ್ದೀರಾ? ನಿಕೊಲಸ್‌ ಬೇಕರ್‌ ಅಂದುಕೊಂಡ್ರಾ? ಇದ್ಯಾವ ಬೇಕರ್?‌ ಪರಮಾಣುವಿನ ಬಗ್ಗೆ ಸಂಶೋಧನೆ ನಡೆಸಿದ ಇಂತಹ ಹೆಸರನ್ನು ಕೇಳಿಯೇ ಇಲ್ವಲ್ಲ? ಇದ್ಯಾವ ಹೆಸರು? ಅವರೇ ಅಮೇರಿಕದ ಮ್ಯಾನ್‌ಹಟನ್‌ ಎಂಬ ನ್ಯೂಕ್ಲಿಯರ್‌ ಶಕ್ತಿಗೆ ಸಂಬಂಧಿತ ಯೋಜನೆಯಲ್ಲಿದ್ದ ವಿಶ್ವವಿಖ್ಯಾತ ವಿಜ್ಞಾನಿ ನೀಲ್ಸ್ ಬೋರ್!!! ಮ್ಯಾನ್‌ಹಟನ್‌ ರಹಸ್ಯ ಪ್ರಾಜೆಕ್ಟ್‌ನಲ್ಲಿ ಪಾಲ್ಗೊಂಡವರು ತಮ್ಮ ಗುರುತನ್ನು ಮರೆ ಮಾಚಬೇಕಿತ್ತು. ಆಗ ನೀಲ್ಸ್‌ ಬೋರ್‌ರವರಿಗಿದ್ದ ಹೆಸರೇ ನಿಕೊಲಾಸ್‌ ಬೇಕರ್!!!‌ 


ನೀಲ್ಸ್‌ ಬೋರ್‌ರವರ ಬದುಕು ಸರ್ವಕಾಲಕ್ಕೂ ಕನಸುಗಂಗಳ ಸಾಧಕರಿಗೆ ಬತ್ತದ ಸ್ಫೂರ್ತಿಯ ಸೆಲೆ. ಪರಮಾಣುವಿನ ಅತ್ಯಂತ ಯಶಸ್ವಿ ಮಾದರಿಯನ್ನು ಪ್ರಸ್ತುತಪಡಿಸಿದ ಜ್ಞಾನದ ಚಿಲುಮೆ, ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್ ಅಲಿಯಾಸ್‌ ನಿಕೊಲಸ್‌ ಬೇಕರ್‌ ಅವರು ಅಕ್ಟೋಬರ್ 7, 1885 ರಂದು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಜನಿಸಿದರು. ಅವರ ತಂದೆ ಕ್ರಿಶ್ಚಿಯನ್ ಬೋರ್, ಕೋಪನ್ ಹೇಗನ್ ವಿಶ್ವವಿದ್ಯಾಲಯದಲ್ಲಿ ಶರೀರಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಅವರ ತಾಯಿ ಎಲ್ಲೆನ್ ಅಡ್ಡರ್ ಬೋರ್ ಸಿರಿವಂತ ಯಹೂದಿ ಮನೆತನಕ್ಕೆ ಸೇರಿದವರು. ತಾಯಿಯ ಕುಟುಂಬದ ಕೋಪನ್ ಹೇನ್ನ ಭವ್ಯ ಬಂಗಲೆ 'ಕಿಂಗ್ ಜಾರ್ಜ್ ಅರಮನೆ'‌ ಯಲ್ಲಿ ನೀಲ್ಸ್ ಜನಿಸಿದರು.

 ನೀಲ್ಸ್ ಬೋರ್‌, ಕೋಪನ್ ಹೇನ್‌ನಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ವಿಶ್ವವಿದ್ಯಾನಿಲಯ ಶಿಕ್ಷಣವನ್ನು ಪಡೆದರು. ಸಿರಿವಂತ ಮನೆತನಕ್ಕೆ ಸೇರಿದ್ದರೂ ಬಾಲಕ ಬೋರ್‌ ಚುರುಕಿನ ವಿದ್ಯಾರ್ಥಿಯಾಗಿದ್ದ. ಕುತೂಹಲ ಪ್ರವೃತ್ತಿಯೊಂದಿಗೆ ಹುಟ್ಟಿದ ಈತ ಸಿಕ್ಕಿದ್ದನ್ನೆಲ್ಲ ಬಿಚ್ಚಿ ರಿಪೇರಿ ಮಾಡಿ ಮನೆಯವರಿಗೆ ತಲೆನೋವನ್ನೂ ತರುತ್ತಿದ್ದ!!! ತನ್ನ ಮಗನಿಗೆ ಪ್ರಯೋಗಗಳಲ್ಲಿ ಬೆಳೆಯುತ್ತಿರುವ ಗೀಳು ಪ್ರೊಫೆಸರ್‌ರಿಗೆ ತಲೆನೋವು ತರುತ್ತಿತ್ತು. ಸಂಶೋಧನೆಯನ್ನು ಮುಂದುವರೆಸಲು ನೀಲ್ಸ್ ತನ್ನ ಶ್ರೀಮಂತ ತಾಯಿಯ ತವರು ಮನೆಗೆ ಕಳುಹಿಸಿದರು. ಓದಿನಲ್ಲಷ್ಟೇ ಅಲ್ಲದೆ ಬೋರ್‌ ಮತ್ತು ಆತನ ತಮ್ಮ ಹೆರಾಲ್ಡ್ ಉತ್ತಮ ಪುಟ್ಬಾಲ್ ಆಟಗಾರರಾಗಿದ್ದರು. ಅವರು ಡ್ಯಾನಿಶ್ ಫುಟ್ಬಾಲ್ ತಂಡದ ಹೆಮ್ಮೆಯ ಸದಸ್ಯರಾಗಿದ್ದರು. ಸ್ಕ್ಯಾಂಡಿನೇವಿಯನ್ ರಾಜ್ಯದಲ್ಲೂ ಪ್ರಮುಖ ಸಾಕರ್ ಆಟಗಾರರೆಂದು ಪರಿಗಣಿಸಲ್ಪಟ್ಟಿದ್ದರು. 

ಅಕ್ಟೋಬರ್ 1906 ರಲ್ಲಿ ವಿದ್ಯಾರ್ಥಿಯಾಗಿದ್ದ ಬೋರ್‌ ಅವರು ಸಲ್ಲಿಸಿದ ಸಂಶೋಧನಾ ಪ್ರಬಂಧಕ್ಕೆ ಚಿನ್ನದ ಪದಕ ದೊರೆಯಿತು. ಬೋರ್‌ರವರೊಂದಿಗೆ ಸ್ಪರ್ಧೆಯಲ್ಲಿದ್ದವರು ಅವರಿಗಿಂತ 11 ವರ್ಷ ಹಿರಿಯರಾದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪ್ರಾಧ್ಯಾಪಕರಾಪೆಡರ್ ಪೆಡರ್ಸನ್!! ಅವರೊಂದಿಗೆ ಬೋರ್‌ ಬಹುಮಾನವನ್ನು ಹಂಚಿಕೊಂಡರು!!!. ಇದು ಭವಿಷ್ಯದ ಮಹಾ ಪ್ರತಿಭೆಯೊಂದರ ಆಗಮನವನ್ನು ಉದ್ಘೋಷಿಸಿತು.  

ನೀಲ್ಸ್ ಬೋರ್ ೧೪ ವರ್ಷದವನಿದ್ದಾಗ ಪ್ರೊಫೆಸರ್ ಜೆ.ಜೆ ಯವರು ಎಲೆಕ್ಟ್ರಾನ್ ಅನ್ನು ಕಂಡುಹಿಡಿದರು. ಆಗಲೇ ಅವರಿಗೆ ತಾನು ಮುಂದೊಂದು ದಿನ  ಜೆ.ಜೆ ಥಾಮ್ಸನ್ ರವರ ಜೊತೆಗೆ ಕೆಲಸ ಮಾಡಬೇಕೆಂಬ ಆಸೆ ಹುಟ್ಟಿತ್ತು. 1911 ರಲ್ಲಿ, ಬೋರ್ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಅನ್ನು ಪಡೆದುಕೊಂಡರು.

 1911ರ ಸೆಪ್ಟೆಂಬರ್ ನಲ್ಲಿ 25 ವರ್ಷದ ನೀಲ್ಸ್ ಬೋರ್ ಕೇಂಬ್ರಿಡ್ಜ್ ಗೆ ಕಾಲಿಟ್ಟರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಫಲಕವನ್ನು ನೋಡುತ್ತಿದ್ದಂತೆ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಯಾರನ್ನು ಆರಾಧಿಸುತ್ತಿದ್ದನೋ ಅವರೊಂದಿಗೇ ಸಂಶೋಧನೆ ಮಾಡುವಂತಹ ಅವಕಾಶ ದೊರೆತಿದ್ದು ಆತನನ್ನು ಹರ್ಷಾತಿರೇಕಕ್ಕೆ ಒಯ್ದಿತ್ತು. ಆದರೆ ದಮ್ಯ ಆಸೆಯನ್ನು ಇಟ್ಟುಕೊಂಡ ನೀಲ್ಸ್ ಬೋರ್‌ಗೆ ದೊರೆತದ್ದು ಭಾರೀ ನಿರಾಸೆ!!!

ಜೆ.ಜೆ.ಯವರೊಂದಿಗೆ ಮೊದಲ ಭೇಟಿಯು ನಿರಾಶದಾಯಕವಾಗಿತ್ತು!!!. ಮೊದಲ ಭೇಟಿಗೆ ಹೋದಾಗ ಡಾ ಜೆ.ಜೆಯರವರ ಕೆಲವು ಪುಸ್ತಕಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದರು. ಒಂದು ಪುಸ್ತಕವನ್ನು ತೆಗೆದುಕೊಂಡ ಜೆ.ಜೆ.ಯವರು ನೋಬೆಲ್ ಪ್ರಶಸ್ತಿ ವಿಜೇತರು. ಎನ್ನುವ ಪದಪುಂಜಗಳನ್ನು ಗಮನಿಸಿ, ಇದು ತಪ್ಪಾದ ಭಾಷಾ ಪ್ರಯೋಗ ಎಂದರು!!! ಕೆಲವು ತಿಂಗಳುಗಳ ನಂತರ ಅದು ಯಶಸ್ವಿ ಭೇಟಿ ಎನ್ನುವುದು ತಿಳಿಯುತ್ತದೆ. ಈ ಕುರಿತು ನೀಲ್ಸ್ ಬೋರ್ ತನ್ನ ತಮ್ಮ  ಗಣಿತಜ್ಞರಾದ ಹೆರಾಲ್ಡ್ ರವರಿಗೆ ಬರೆದ ಪತ್ರದಲ್ಲಿ ಪ್ರೊ ಜೆ.ಜೆ ಭಾರಿ ಘಾಟಿ ಮನುಷ್ಯ. ಈತನೊಂದಿಗೆ ಏಗುವುದು ಮೊದಲ ಭೇಟಿಯ ದಿನ ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಪ್ರೊಫೆಸರ್ ಜೆ.ಜೆ.ಗೆ ನ್ನ ಸಂಶೋಧನಾ ವರದಿ ಓದುವಷ್ಟು ಸಮಯವೂ ಇರಲಿಲ್ಲವೇನೊ?. ಇನ್ನು ಆತ ನನ್ನ ವಿಮರ್ಶೆಯನ್ನು ಒಪ್ಪಬಹುದೇ? ಎಂದು ಬರೆದರು. ಅದಾದ ಮೂರು ತಿಂಗಳವರೆಗೂ ಬೋರ್ ಏಕಾಂತ, ನಿರಾಸೆಗಳು ಅವರ ಸಂಗಾತಿಗಳಾಗಿದ್ದವು. ಅದನ್ನು ತನ್ನ ಭಾವೀ ಪತ್ನಿಗೆ ಬರೆದ ಪತ್ರಗಳಲ್ಲಿ ವ್ಯಕ್ತಪಡಿಸಿದ್ದೂ ಉಂಟು.



ಕೆಂಬ್ರಿಡ್ಜ್ ನಲ್ಲಿದ್ದಾಗ ನೀಲ್ಸ್ ಬೋರ್ ಆಗಾಗ ಮಾನಸಿಕ ಕ್ಷೋಭೆಗೆ ಒಳಗಾಗುತ್ತಿದ್ದುದೂ ಉಂಟು. ಆಗ ಅವರು ತಮ್ಮ ಭಾವೀ ಪತ್ನಿ ಮಾರ್ಗರೆಥೆ ನೋಲ್ಯಾಂಡ್ ಗೆ ಪತ್ರ ಬರೆದು ತಮ್ಮ ಮನೋ ವ್ಯಾಕುಲತೆಯನ್ನು ಹೊರ ಹಾಕುತ್ತಿದ್ದರು. ಒಮ್ಮೆ  ಮಾರ್ಗರೆಥೆ ನೋಲ್ಯಾಂಡ್ ಗೆ “ನಿನಗೆ ನನ್ನ ಯಾವುದೇ ಕೆಲಸದ ಬಗ್ಗೆ ಆಸಕ್ತಿಯೇ ಇಲ್ಲ...” ಎಂದು ಭಾವುಕತೆಯಿಂದ ಪತ್ರ ಬರೆದು ತನ್ನ ಒಳಬೇಗುದಿಯನ್ನು ತೆರೆದಿಟ್ಟರು. ಆ ಪತ್ರಕ್ಕೆ ಉತ್ತರಿಸಿದ ಮಾರ್ಗರೆಥೆ, “ ಓಹ್ ನೀಲ್ಸ್, ನಾನು ನಿನ್ನನ್ನು ಎಷ್ಟು ಪ್ರೀತಿಸ್ತೀನಿ ಅಂತ ಪದಗಳಲ್ಲಿ ವರ್ಣಿಸಲಾರೆ. ಅದೇ ರೀತಿ ನಿನ್ನ ಕೆಲಸವನ್ನೂ ಪ್ರೀತಿಸ್ತೀನಿ. ನಿನ್ನನ್ನು ನಿನ್ನ ಕೆಲಸದಿಂದ ಪ್ರತ್ಯೇಕಿಸಿ ನೋಡಲಾರೆ ನಿನ್ನ ಸುಧೀರ್ಘ ಯಶಸ್ವಿ ಬದುಕಿಗೆ ನಾನೆಷ್ಟು ಕಾದಿದ್ದೆನೋ ಅದು ನನಗೆ ಮಾತ್ರ ಗೊತ್ತು. ನಿನಗಾಗಿ ನಾನು ಸಾಧ್ಯವಾದ ಸಹಾಯ ಹಸ್ತ ನೀಡಬಲ್ಲೆ ” ಈ ಪತ್ರ ಆತನಲ್ಲಿ ಅಮಿತೋತ್ಸಾಹ ತುಂಬಿದ್ದಲ್ಲದೆ ಭವಿಷ್ಯದ ಎಲ್ಲ ಯಶಸ್ಸಿಗೂ ಮುನ್ನುಡಿಯಾಯಿತು.

ಈತ ಮಹಾನ್‌ ವಿಜ್ಞಾನಿಯಾಗಿ ರೂಪುಗೊಳ್ಳುವಲ್ಲಿ ಎದುರಿಸಿದ ಎಡರು ತೊಡರುಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.

 

2 comments:

  1. ಈ ರೀತಿ ಅಕ್ಷರೇಜಿಯಾ ಬಳಸಿದ್ದು ... ವಿಶೇಷ ಸರ್

    ReplyDelete