ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, August 4, 2022

ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಸವಿಬೆಲ್ಲ ಉಣಿಸುತ್ತಿರುವ ಭೀಮಪ್ಪ ಬೆಲ್ಲದ

ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಸವಿಬೆಲ್ಲ ಉಣಿಸುತ್ತಿರುವ ಭೀಮಪ್ಪ ಬೆಲ್ಲದ

ಲೇಖನ : ರಾಮಚಂದ್ರಭಟ್‌ ಬಿ.ಜಿ.

 

ತಂತ್ರಜ್ಞಾನ ಇಂದಿನ ಮೂಲಭೂತ ಶೈಕ್ಷಣಿಕ ಅವಶ್ಯಕತೆ ಎಂದರೆ ತಪ್ಪಾಗಲಾರದು. ಗುಣಮಟ್ಟದ ಶಿಕ್ಷಣದಲ್ಲಿ ತಂತ್ರಜ್ಞಾನದ್ದು ಸಿಂಹಪಾಲು. ವಿಜ್ಞಾನದ ಹಲವಾರು ಅಮೂರ್ತ ಕಲ್ಪನೆಗಳನ್ನು ಅರ್ಥೈಸುವ ದೊಡ್ಡ ಸವಾಲು ಶಿಕ್ಷಕರನ್ನು ಕಾಡುತ್ತಿದೆ.  ಇಂತಹ ಸನ್ನಿವೇಶದಲ್ಲಿ ವಿಜ್ಞಾನದಲ್ಲಿ ತಂತ್ರಜ್ಞಾನವನ್ನು ಕಲಿಕೆಯನ್ನು ಬೆಲ್ಲದಂತೆ ಸವಿಯಾಗಿಸಿ ಮಕ್ಕಳಲ್ಲಿ ವಿಜ್ಞಾನದಲ್ಲಿ ಆಸಕ್ತಿ ಮೂಡುವ ಕೈಂಕ್ರರ್ಯದಲ್ಲಿ ತೊಡಗಿ ಯಶಸ್ಸನ್ನು ಕಂಡ ಈ ಬಾರಿಯ Jawaharlal Nehru Centre for Advanced Scientific Research (JNCASR), Bengaluru  ಹಾಗೂ ಪ್ರೊ|| ಸಿ.ಎನ್‌ ಆರ್‌ ರಾವ್‌ ಎಜುಕೇಷನ್‌  ಫೌಂಡೇಷನ್‌ ನೀಡುವ ರಾಷ್ಟ್ರ ಮಟ್ಟದ  Outstanding Science Teacher Prize ಪುರಸ್ಕಾರಕ್ಕೆ ಭಾಜನರಾದ ಸಾಧಕ ಶಿಕ್ಷಕರೇ ಶೀ ಭೀಮಪ್ಪ ಬೆಲ್ಲದ. ಆತ್ಮೀಯ ಸ್ನೇಹಿತರಾದ ಭೀಮಪ್ಪರವರನ್ನು  ಸವಿಜ್ಞಾನದ ತಿಂಗಳ ಶಿಕ್ಷಕರೆಂದು ಪರಿಚಯಿಸಲು ಹೆಮ್ಮೆ ಎನಿಸುತ್ತದೆ .

ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಇಂತಹ ಆಧುನಿಕ ತಂತ್ರಜ್ಞಾನದಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದ ಬಡ ವಿದ್ಯಾರ್ಥಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಇಲ್ಲೊಬ್ಬ ಶಿಕ್ಷಕರು ವಿನೂತನ ರೀತಿಯಲ್ಲಿ ಪ್ರಯತ್ನಿಸಿ ರಾಜ್ಯದ ವಿದ್ಯಾರ್ಥಿ ಹಾಗೂ ಶಿಕ್ಷಕರ ಮನೆ ಮಾತಾಗಿದ್ದಾರೆ. ಕೋಳಬಾಳ ಪ್ರೌಢ ಶಾಲೆಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಭೀಮಪ್ಪನವರು ಪ್ರಸ್ತುತ  ರಾಯಚೂರು ಜಿಲ್ಲೆಯ ಮಸ್ಕಿ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ವಿಜ್ಞಾನವು ಗ್ರಾಮೀಣ ಭಾಗದ ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿರುವ ಈ ಕಾಲದಲ್ಲಿ ವಿಜ್ಞಾನ ಬೋಧನೆಯಲ್ಲಿ ಭೀಮಪ್ಪನವರು  ಶಾಲೆಯಲ್ಲಿ ಲಭ್ಯವಿರುವ ಸಲಕರಣೆಗಳನ್ನು ಬಳಸಿ ಹೆಚ್ಚು ಹೆಚ್ಚು ಪ್ರಾಯೋಗಿಕ ಚಟುವಟಿಕೆಗಳ ಮೂಲಕ ವಿಜ್ಞಾದ ಪರಿಕಲ್ಪನೆಗಳನ್ನು ಸುಲಭವಾಗಿ ಅನುಕೂಲಿಸುತ್ತಾ ಜ್ಞಾನಕಟ್ಟಿಕೊಳ್ಳುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶಿಕ್ಷಕರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.


ಬಾಲ್ಯದಿಂದಲೇ ಕಂಪ್ಯೂಟರ್‌ ಕುರಿತ ಅದೇನೋ ಆಸಕ್ತಿ. ಶಿಕ್ಷಕನಾದ ನಂತರ ಕಂಡ ಹೊಸ ಹೊಳಹು ಹಲವಾರು ಡಿಜಿಟಲ್‌ ಸಂಪನ್ಮೂಲಗಳನ್ನು ತಯಾರಿಸಲು ಕಾರಣವಾಯಿತು. ಶಾಲೆಯಲ್ಲಿ ವಿಜ್ಞಾನದ ಕಠಿಣ ಪರಿಕಲ್ಪನೆಗಳನ್ನು ಮಕ್ಕಳಿಗೆ ಅರ್ಥೈಸಲು ತಂತ್ರಜ್ಞಾನಾಧಾರಿತ ಶಿಕ್ಷಣದ ಜೊತೆ ಪ್ರಾಯೋಗಿಕ ತರಗತಿಗಳನ್ನು ಮಿಳಿತಗೊಳಿಸಿದ ಪರಿಣಾಮವಾಗಿ ಪ್ರತಿವರ್ಷವೂ SSLC ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ವಿಜ್ಞಾನ ವಿಷಯದಲ್ಲಿ ಅನೇಕ ಬಾರಿ 100% ಫಲಿತಾಂಶವನ್ನು ಪಡೆಯುತ್ತಿದ್ದಾರೆ.


ಫೆಟ್ ಸಿಮ್ಯುಲೇಷನ್‌, ವರ್ಚುವಲ್‌ ಲ್ಯಾಬ್‌, ಅನಿಮೇಷನ್‌ಗಳು, ಅವೋಗಾಡ್ರೊ ಮುಂತಾದವುಗಳನ್ನು ಬಳಸಿಕೊಂಡು ವಿಜ್ಞಾನದ ಕಠಿಣ ಅಂಶಗಳನ್ನು ಸುಲಭವಾಗಿ ಬೋಧಿಸುತ್ತಿದ್ದಾರೆ. ಇದರೊಂದಿಗೆ ತಮ್ಮ ಬ್ಲಾಗ್‌ ಹಾಗೂ ಆಂಡ್ರಾಯಿಡ್‌ ಆಪ್‌ ಮೂಲಕ ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಸಂಪನ್ಮೂಲಗಳನ್ನು ತಯಾರಿಸಿ, ಅವುಗಳನ್ನು ಉಚಿತವಾಗಿ ನೀಡಿದ್ದಾರೆ. ಇವರು 2016 ರಲ್ಲಿ https://bnbellad.blogspot.com/ ಹೆಸರಿನ ವಿಜ್ಙಾನ ಬ್ಲಾಗ್‌ ಅನ್ನು ರಚಿಸಿ, ಇದರ ಮೂಲಕ ಇವರೇ ಸ್ವತ: ತಯಾರಿದ ನೋಟ್ಸ್‌, ಅಧ್ಯಾಯವಾರು PPT ಗಳು, ಅಧ್ಯಾಯವಾರು ಕ್ವಿಜ್‌ಗಳು, ವೀಡಿಯೋಗಳು, ಅನಿಮೇಷನ್‌ಗಳು ಇನ್ನೂ ಹಲವಾರು ಡಿಜಿಟಲ್‌ ಸಂಪನ್ಮೂಲಗಳನ್ನು ಉಚಿತವಾಗಿ ಬ್ಲಾಗ್‌ನಲ್ಲಿ ನೀಡಿ ರಾಜ್ಯದ ಗ್ರಾಮೀಣ ಬಡ ಪ್ರತಿಭೆಗಳ ಆಶಾಕಿರಣವಾಗಿದ್ದಾರೆ. ರಾಜ್ಯದ ಯಾವುದೇ ವಿದ್ಯಾರ್ಥಿ/ ಶಿಕ್ಷಕರು ಯಾವುದಾದರೂ ವಿಜ್ಞಾನ ಸಂಪನ್ಮೂಲ ಬೇಕಾದರೆ ಮೊದಲು ನೆನಪಾಗುವುದೇ ಇವರ ಬ್ಲಾಗ್‌ ಎಂದರೆ ನಿಜಕ್ಕೂ ಹೆಮ್ಮೆಯ ವಿಚಾರ. ಅವರ ಬಾಗ್‌ ವೀಕ್ಷಣೆಯು ೩೦ ಲಕ್ಷ ಸಂಖ್ಯೆಯನ್ನು ದಾಟಿರುವುದು ಅವರ ಬ್ಲಾಗ್‌ನ ಜನಪ್ರಿಯತೆಗೆ ಸಾಕ್ಷಿಯಾಗಿದೆ.




·       ಬ್ಲಾಗ್‌ಗೆ ಭೇಟಿ ನೀಡಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಿ:

https://bnbellad.blogspot.com/

ಆಂಡ್ರಾಯಿಡ್‌ ಆಪ್‌ ರಚನೆ:

ಇವರು Bheemappa_Bellad.apk ಹೆಸರಿನ ಆಂಡ್ರಾಯಿಡ್‌ ಆಪ್‌ ಅನ್ನು 2020 ರಲ್ಲಿ ಸಹ ರಚಿಸಿದ್ದಾರೆ. ಇದು ಆಫ್‌ಲೈನ್‌ ಹಾಗೂ ಆನ್ಲೈನ್‌ ಎರಡೂ ವಿಧದಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಗ್ರಾಮೀಣ ಭಾಗದ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ವರವಾಗಿ ಪರಿಣಮಿಸಿದೆ ಇವರು ತಮ್ಮ ಎಲ್ಲಾ ಡಿಜಿಟಲ್‌ ಸಂಪನ್ಮೂಲಗಳನ್ನು ಈ ಆಪ್‌ ಮೂಲಕ ರಾಜ್ಯದ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಉಚಿತವಾಗಿ ನೀಡಿದಾರೆ. ರಾಜ್ಯಾದ್ಯಾಂತ ಇಲ್ಲಿಯವರೆಗೆ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಆಪ್‌ ಅನ್ನು ಬಳಸುತ್ತಿದ್ದಾರೆ.

ಆಪ್‌ನ ಕುರಿತು ಮಾಹಿತಿ:

·       ಆಪ್‌ನ ಹೆಸರು: Bheemappa_Bellad.apk

·       ಆಪ್‌ನ ಗಾತ್ರ: 16 MB

·       OS: ಆಂಡ್ರಾಯಿಡ್‌

·       ಆಪ್‌ ಡೌನ್ಲೋಡ್‌ ಲಿಂಕ್‌: https://drive.google.com/file/d/1syoOBr27yvUus1LGI79vKL__uiaQ6kPl/view?usp=sharing


ಪುಸ್ತಕಗಳು

  • SSLC ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಸಹಾಯಕವಾಗಲು ಸ್ಕೋರಿಂಗ್‌ ಪ್ಯಾಕೇಜ್‌ ಎಂಬ 110 ಪುಟಗಳ ಪುಸ್ತಕ
  • SSLC ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಷಯದ ಅಧ್ಯಾಯವಾರು ಕಿರುಪರೀಕ್ಷೆಗಳು ಹಾಗೂ ಕೀ-ಉತ್ತರಗಳನ್ನು ಒಳಗೊಂಡಿರುವ ಕಿರು ಪರೀಕ್ಷಾ ಕೈಪಿಡಿʼ ಎಂಬ 94 ಪುಟಗಳ ಪುಸ್ತಕ
  • SSLC ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಷಯದ ಅಧ್ಯಾಯವಾರು ವ್ಯತ್ಯಾಸಗಳ ಪಟ್ಟಿಗಳನ್ನು ಒಳಗೊಂಡಿರುವ ವ್ಯತ್ಯಾಸ ಕೈಪಿಡಿ ಎಂಬ ಪುಸ್ತಕ
  • SSLC ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಷಯದ ಅಧ್ಯಾಯವಾರು ಸಂಖ್ಯಾ ರೂಪದ ಸಮಸ್ಯೆಗಳಿಗೆ ಸರಳ ಪರಿಹಾರಗಳನ್ನು ಒಳಗೊಂಡಿರುವ ಸಮಸ್ಯೆ ಸರಾಗ ಎಂಬ 26 ಪುಟಗಳ ಪುಸ್ತಕ
  • SSLC ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಷಯದ ಅಧ್ಯಾಯವಾರು ಬಹು ಆಯ್ಕೆ ಪ್ರಶ್ನೆಗಳು ಹಾಗೂ ಕೀ-ಉತ್ತರಗಳನ್ನು ಒಳಗೊಂಡಿರುವ MCQ ಕೈಪಿಡಿ ಎಂಬ 85 ಪುಟಗಳ ಪುಸ್ತಕ
  • SSLC ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಷಯದ ವಾರ್ಷಿಕ ಪರೀಕ್ಞಾ ದೃಷ್ಟಿಯಿಂದ ತಯಾರಿಸಲಾದ ಅಧ್ಯಾಯವಾರು ಬಹು ಆಯ್ಕೆ ಪ್ರಶ್ನೆಗಳು ಹಾಗೂ ಕೀ-ಉತ್ತರಗಳನ್ನು ಒಳಗೊಂಡಿರುವ ಪರೀಕ್ಷಾ ಪಯಣ ಎಂಬ ಪುಸ್ತಕ

ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ತರಬೇತಿ:

2019-20ನೇ ಸಾಲಿನಲ್ಲಿ TALP ಯೋಜನೆಯಡಿಯಲ್ಲಿ ಪೂರೈಕೆಯಾದ ಕಂಪ್ಯೂಟರ್‌ ಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಕಂಪ್ಯೂಟರ್‌ ತರಬೇತಿಯನ್ನು ನೀಡುತ್ತಿದ್ದಾರೆ. ವಿಜ್ಞಾನದ ಡಿಜಿಟಲ್ ಪಾಠಗಳು, ವೀಡಿಯೋಗಳು,‌ ಆನ್ಲೈನ್ ಆವರ್ತಕೋಷ್ಠಕ, ಅನಿಮೇಷನ್‌ಗಳು, ಚಿತ್ರಗಳು, ಸಿಮ್ಯುಲೇಷನ್‌ಗಳು ಹೀಗೆ ಅತ್ಯಾಧುನಿಕ ತಂತ್ರಜ್ಞಾನದ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಿ ಅವರ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿದ್ದಾರೆ.


ವಿದ್ಯಾರ್ಥಿಗಳ ಸಾಧನೆ:

ಸದರಿ ಶಿಕ್ಷಕರ ಮಾರ್ಗದರ್ಶನದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಇನ್ಸ್ಪೈರ್‌ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಗ್ರಾಮೀಣ ಐ.ಟಿ. ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿದ್ದಾರೆ.‌ ರಾಯಲ್‌ ಸೊಸೈಟಿ ಆಫ್‌ ಕೆಮಿಸ್ಟ್ರಿ ವತಿಯಿಂದ ರಾಜ್ಯದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾದ ಶಿಬಿರಕ್ಕೆ ನಮ್ಮ ವಿದ್ಯಾರ್ಥಿಗಳು ರಾಯಚೂರು ಜಿಲ್ಲೆಯಿಂದ ಆಯ್ಕೆಯಾಗಿ ಭಾರತ ರತ್ನ ಪ್ರೊ. ಸಿ.ಎನ್.‌ಆರ್.‌ ರಾವ್‌ ಅವರನ್ನು ಭೇಟಿ ಮಾಡಿ ಅವರ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ದೊರೆತಿರುವುದು ಅವಿಸ್ಮರಣೀಯ.



ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಣೆ:

ಪ್ರೌಢ ಶಾಲಾ ಶಿಕ್ಷಕರಿಗೆ ನೀಡಲ್ಪಡುವ TALP ತರಬೇತಿಗಳಲ್ಲಿ ಹಾಗೂ ವಿಜ್ಞಾನ ವಿಷಯದಲ್ಲೂ ಸಂಪನ್ಮೂಲ ವ್ಯಕ್ತಿಯಾಗಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಕರೋನಾದಂತಹ ವಿಷಮ ಪರಿಸ್ಥಿತಿಯಲ್ಲಿ ರಾಜ್ಯದ ಹಲವು ಜಿಲ್ಲೆಯ ವಿಜ್ಞಾನ ಶಿಕ್ಷಕರ ವೆಬಿನಾರ್‌ಗಳಲ್ಲಿ ಭಾಗಿಯಾಗಿ ವಿಜ್ಞಾನ ಹಾಗೂ ತಂತ್ರಜ್ಞಾನದ ಕುರಿತು ತರಬೇತಿ ನೀಡಿರುತ್ತಾರೆ.

2022 ರಲ್ಲಿ NTSE NMMS ಪರೀಕ್ಷೆಗಳಿಗೆ ಆನ್ಲೈನ್‌, ಆಫ್ಲೈನ್‌ ಸಂಪನ್ಮೂಲಗಳನ್ನು ಸಿದ್ಧಪಡಿಸುವ (ಪ್ರಶ್ನೆಕೋಠಿ) ಕಾರ್ಯದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿನ ಅವರ ಕೊಡುಗೆ, ಆಧುನಿಕ ಬೋಧನಾ ಶೈಲಿ ಹಾಗೂ ತಂತ್ರಜ್ಞಾನದ ಬಳಕೆಯಿಂದಾಗಿ ಶ್ರೀ ಭೀಮಪ್ಪ ಅವರಿಗೆ 2007 ರಲ್ಲಿ ರಾಜ್ಯ ಮಟ್ಟದ ಜ್ಞಾನ ಮಾಸ ಪತ್ರಿಕೆ ಚಿಕ್ಕಮಗಳೂರು ವತಿಯಿಂದ ನೀಡಲ್ಪಡುವ “ಜ್ಞಾನ ಸಿಂಧು” ಪ್ರಶಸ್ತಿಯನ್ನು ನೀಡಲಾಗಿದೆ. 2021 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ರಾಯಚೂರು ವತಿಯಿಂದ ಇವರಿಗೆ ರಾಯಚೂರು “ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸದರಿಯವರ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿದ JNCASR ಸಂಸ್ಥೆಯು ಈ ವರ್ಷದ  ಜೂನ್‌ ತಿಂಗಳ ೩೦ನೇ ತಾರೀಖಿನಂದು ಭಾರತರತ್ನ ಪ್ರೊ|| ಸಿ.ಎನ್‌. ಆರ್‌ ರಾವ್‌ ರವರ ಜನ್ಮ ದಿನಾಚರಣೆಯಂದು ರಾಷ್ಟ್ರಮಟ್ಟದ “Outstanding Science Teacher” ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಸೇವೆ ಇದೆ ರೀತಿ ನಿರಂತರವಾಗಿ ಮುಂದುವರೆದು ಶಿಕ್ಷಕ ಸಮುದಾಯಕ್ಕೆ ಪ್ರೇರಣೆ ನೀಡಲಿ ಎಂದು ಸವಿಜ್ಞಾನ ತಂಡ ಶುಭಹಾರೈಸುತ್ತದೆ.








4 comments: