ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, June 4, 2023

ವಿಶ್ವ ಪರಿಸರ ದಿನಾಚರಣೆ

  ವಿಶ್ವ ಪರಿಸರ ದಿನಾಚರಣೆ


ಲೇಖಕರು    :    ಬಿ. ಎನ್. ರೂಪ ,                     

 ಸಹ ಶಿಕ್ಷಕರು ,

ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢಶಾಲೆ ಗೋರಿಪಾಳ್ಯ,

ಬೆಂಗಳೂರು ದಕ್ಷಿಣ ವಲಯ 2.

 ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿ  ಶಿಕ್ಷಕಿ ಬಿ.ಎನ್.‌ ರೂಪ ಬರೆದಿರುವ ಈ ಸಾಂದರ್ಭಿಕ ಲೇಖನ,ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ಧ್ಯೇಯವಾಕ್ಯವಾದ  ಪ್ಲಾಸ್ಟಿಕ್‌ ಮಾಲಿನ್ಯಕ್ಕೆ ಪರಿಹಾರ ಹುಡುಕುವುದಕ್ಕೆ ಸಂಬಂಧಿಸಿದ್ದು, ಆ ನಿಟ್ಟಿನಲ್ಲಿ ನಾವು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿದೆ. 

 



ಮತ್ತೊಂದು ವಿಶ್ವಪರಿಸರದಿನಾಚರಣೆಬಂದೇ ಬಿಟ್ಟಿದೆ,

ಪರಿಸರವನ್ನುನಾವು ಮಾತೆ, ದೇವಿ ,ಪ್ರಕೃತಿಮಾತೆ, ಅವ್ವ, ಹಡೆದವ್ವ ಎಂದೆಲ್ಲ ಸಂಬೋಧನೆ ಮಾಡುತ್ತೇವೆ.ಏಕೆಗೊತ್ತೆ? ಈಕೆ ಕೂಡ ನಮ್ಮನ್ನು ಹಡೆದ ತಾಯಿಯ ತರಹ ನಮ್ಮ ಎಲ್ಲಾ ತಪ್ಪುಗಳನ್ನು ತನ್ನ ಹೊಟ್ಟೆಗೆ ಹಾಕಿಕೊಂಡು, ನಮ್ಮನ್ನು ಪಾಲಿಸುವ ಕ್ಷಮಯಾಧರಿತ್ರಿಯಾಗಿದ್ದಾಳೆ. ನಾವು ಈ ಪರಿಸರ ಹಾಗೂ ಪರಿಸರವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದೇವೆ. ನಾವು ಜನಿಸಿ ಬಂದಿರುವುದು ಪರಿಸರದಿಂದ ಹಾಗೂ ಮರಣಿಸಿ ನಂತರವೂ ಪಯಣಿಸುವುದು ಪರಿಸರಕ್ಕೆ. ಹಾಗಾಗಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಪ್ರಥಮ ಕರ್ತವ್ಯವಾಗಬೇಕು. ಪರಿಸರದ ಸಂರಕ್ಷಣೆ,ಪರಿಸರದ ಬಗ್ಗೆ ಗೌರವ, ಆದರ ಜಾಗರೂಕ ಬಳಕೆ,  ಮಮತೆ, ಅಕ್ಕರೆ, ರಕ್ಷಣೆ, ಪೋಷಣೆ, ಇವೆಲ್ಲ ನಮ್ಮ ಜೀವನದ ಅನಿವಾರ್ಯ ಕರ್ತವ್ಯವಾಗಬೇಕು.

“ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಭೂಮಿಯು ಸಾಕಷ್ಟು ಸಂಪನ್ಮೂಲಗಳನ್ನು ಒದಗಿಸುತ್ತದೆ,  ಆದರೆ ಪ್ರತಿಯೊಬ್ಬ ಮನುಷ್ಯನ ದುರಾಸೆಗಳಿಗಲ್ಲ”.

ಮಹಾತ್ಮ ಗಾಂಧಿಯವರ ಈ ಮೇಲಿನ ಹೇಳಿಕೆ ಎಷ್ಟು ನ್ಯಾಯಯುತ ಹಾಗೂ ಸಮಂಜಸ ಹೇಳಿಕೆಯಾಗಿದೆ ಅಲ್ಲವೇ ?


ಜೀವ ಸಂಜೀವಿನಿ ವಾಯು,

ಆಹಾರವನ್ನುಬೆಳೆಯಬಲ್ಲ ಅಗರ ಮಣ್ಣಿನ ಸಂಪತ್ತು,

ಬಾಯಾರಿಕೆಯನ್ನು ನೀಗಿಸುವ ಅಮೃತಧಾರೆ, ನೀರು,

ಹಸಿರುತೋರಣ ಧರಿಸಿರುವ ಮರಗಳಸಾಲು,

ನಮ್ಮ ಏಕೈಕ ಮನೆ ಭೂಮಾತೆ.

 

ಪುಷ್ಪ,ಫಲ, ತರಕಾರಿ ನೀಡುವ ಅನ್ನಧಾತೆ,

ಉಸಿರಾಡಲು ಆಮ್ಲಜನಕ ನೀಡುವ ಜೀವಧಾತೆ,

ಅಮೃತವನ್ನು ನೀಡಿ ಬಾಯಾರಿಕೆಯನ್ನು ನೀಗಿಸುವ ಜಲಧಾತೆ,

ನಮ್ಮ ಕಣ್ಮನ ಸೆಳೆಯುವ ಹಸಿರುಧಾತೆ,

ನಮ್ಮ ಏಕೈಕ ಮನೆ ಭೂಮಾತೆ .

 

ಈ ಪರಿಸರ ಮಾತೆಯನ್ನು ಮಲಿನ ಮಾಡುತ್ತಿರುವ ಮಾನವರು,

ಅಭಿವೃದ್ಧಿಯ ಹೆಸರಿನಲ್ಲಿ ಪರಿಸರಮಾತೆಗೆ 

ಹಾನಿ ಮಾಡುತ್ತಿರುವ ಆಧುನಿಕ ಮಾನವರು,

ಮುಂದಿನ ಪೀಳಿಗೆಗೆ ಸಿಗುವುದುಂಟೆ ಪರಿಸರಮಾತೆಯ 

ಅಕ್ಕರೆಯ ಸೈನಿಕ ಬಳಗದವರು,

ನಮ್ಮ ಏಕೈಕ ಮನೆ ಭೂಮಾತೆ .



ವಿಶ್ವ ಪರಿಸರ ದಿನವನ್ನು ಜಾಗತಿಕವಾಗಿ ಪ್ರತಿ ವರ್ಷ ಜೂನ್ 5 ರಂದು ಆಚರಿಸಲಾಗುತ್ತದೆ. ಪರಿಸರ ಸಂರಕ್ಷಣೆ  ಪ್ರಮುಖವಾಗಿ ಇದರ ಧ್ಯೇಯವಾಗಿದೆ. ಈ ದಿನಾಚರಣೆಯು ಒಂದು ಜಾಗತಿಕ ಜಾಗೃತಿ ವೇದಿಕೆಯಾಗಿದೆ.ಪರಿಸರಮಾಲಿನ್ಯ, ಜಾಗತಿಕ ತಾಪಮಾನ ಹೆಚ್ಚಳ, ವನ್ಯಜೀವಿಗಳ ಸಂರಕ್ಷಣೆ, ಇತರೆ ಪ್ರಮುಖ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಬಗ್ಗೆ ಕಳಕಳಿ, ಕಾಳಜಿ, ಜಾಗೃತಿ ಮೂಡಿಸುವ ಪ್ರಮುಖ ಅಭಿಯಾನವಾಗಿದೆ. ಪರಿಸರದ ಸಂರಕ್ಷಣೆ ಹಾಗೂ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಗಮನದಲ್ಲಿರಿಸಿಕೊಂಡು, ವಿಶ್ವಸಂಸ್ಥೆಯು 1972 ರಲ್ಲಿ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಘೋಷಿಸಿತು. ಎರಡು ವರ್ಷಗಳ ನಂತರ, ಅಂದರೆ 1974 ರಲ್ಲಿ ಪ್ರಥಮ ವಿಶ್ವ ಪರಿಸರ ದಿನವನ್ನುಆಚರಿಸಲಾಯಿತು.ಈ ಆಚರಣೆಯ ಪ್ರಮುಖ ಉದ್ದೇಶಗಳು ಈ ಕೆಳಕಂಡಂತಿವೆ,

·       ಪ್ರಮುಖ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ

·       ಜಾಗತಿಕ ಮಟ್ಟದಲ್ಲಿ ತಾಪಮಾನದ ಏರಿಕೆಯನ್ನು ಕಡಿಮೆಗೊಳಿಸುವುದು

·       ವನ್ಯಜೀವಿಗಳ ರಕ್ಷಣೆ ಹಾಗೂ ಪುನರ್ವಸತಿಯನ್ನುಕಲ್ಪಿಸುವುದು

·       ಅಭಯಾರಣ್ಯಗಳ ಪೋಷಣೆ ಹಾಗೂ ರಕ್ಷಣೆ

·       ಜೀವವೈವಿಧ್ಯತೆಯನ್ನುಕಾಪಾಡುವುದು

·  ಜಾಗತಿಕ ಮಟ್ಟದಲ್ಲಿ ಪರಿಸರ ಮಾಲಿನ್ಯವನ್ನು ಕಡಿಮೆಮಾಡಲು ವಿವಿಧ ಚಟುವಟಿಕೆಗಳ ಪರಿಕಲ್ಪನೆ ಹಾಗೂ ಅನುಷ್ಠಾನ

·       ಸಮುದ್ರ ಮಾಲಿನ್ಯವನ್ನುತಗ್ಗಿಸುವುದು

·     ಪ್ಲಾಸ್ಟಿಕ್‌ ಬದಲಿಗೆಪರ್ಯಾಯ ಜೈವಿಕ ವಿಘಟನೆಯಾಗುವ ವಸ್ತುವಿನ ಬಳಕೆ

·       ಏಕಬಳಕೆ ವಸ್ತುಗಳಿಂದ ಮುಕ್ತರಾಗುವ ಪ್ರಯತ್ನಗಳು

· ಉಸಿರಾಡಲು ಶುದ್ಧಗಾಳಿ, ಕುಡಿಯಲು ಶುದ್ಧ ನೀರು  ದೊರಕಿಸುವ ಪ್ರಯತ್ನಗಳು

·       ಕಲಬೆರಕೆ ರಹಿತ ಆಹಾರ ಒದಗಿಸುವುದು …………………ಇತ್ಯಾದಿ

ಪ್ರತಿ ವರ್ಷ ಒಂದು ಧ್ಯೇಯ ವಾಕ್ಯದೊಂದಿಗೆ ವಿಶ್ವದಾದ್ಯಂತ  ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ  ವರ್ಷದ ಧ್ಯೇಯವಾಕ್ಯ  “ ಪ್ಲಾಸ್ಟಿಕ್‌ ಮಾಲಿನ್ಯವನ್ನು ಹೊಡೆದೋಡಿಸುವುದು”.


ಈ  ವರ್ಷದ ಅಭಿಯಾನ ಪ್ಲಾಸ್ಟಿಕ್‌ ಮಾಲಿನ್ಯಕ್ಕೆ ಪರಿಹಾರವನ್ನು ಕಂಡು ಕೊಳ್ಳುವುದರತ್ತ  ಕೇಂದ್ರೀಕೃತವಾಗಿದೆ. ಪ್ಲಾಸ್ಟಿಕ್  ಮಾನವನ ಜನಾಂಗಕ್ಕೆ ಒಂದು ಅವಶ್ಯಕ ಶಾಪವಾಗಿದೆ. ನಮ್ಮ ಭೂಮಿಯು ಪ್ಲಾಸ್ಟಿಕ್‌ನಿಂದ ಮುಳುಗಿಹೋಗಿದೆ. ಪ್ರತಿವರ್ಷ ಸುಮಾರು 400 ಮಿಲಿಯನ್‌ ಗಿಂತ ಹೆಚ್ಚು ಪ್ಲಾಸ್ಟಿಕ್ಕನ್ನು ಉತ್ಪಾದಿಸಲಾಗುತ್ತಿದೆ. ಇದರಲ್ಲಿ ಅರ್ಧದಷ್ಟು ಪ್ಲಾಸ್ಟಿಕ್ ಏಕಬಳಕೆಯ ಪ್ಲಾಸ್ಟಿಕ್‌ ಆಗಿದೆ. ಶೇಕಡ ಹತ್ತಕ್ಕಿಂತ ಕಡಿಮೆ ಪ್ಲಾಸ್ಟಿಕ್‌ ಮರುಬಳಿಕೆಯಾಗುತ್ತಿದೆ. ಅಂದಾಜು 19ರಿಂದ 23 ಮಿಲಿಯನ್‌ ನಮ್ಮ ನದಿ ಸರೋವರ ಸಮುದ್ರ ಸಾಗರಗಳನ್ನು ಸೇರಿ ಪರಿಸರವ್ಯವಸ್ಥೆಯಲ್ಲಿ ನಾವು ಊಹಿಸಲೂ ಸಾಧ್ಯವಾಗದಂತಹ ಅಲ್ಲೋಲ ಕಲ್ಲೋಲವನ್ನು ಉಂಟುಮಾಡುತ್ತಿದೆ.

ಜಲಚರ ಜೀವಿಗಳ ದೇಹವನ್ನು ಸೇರಿ ಗಂಭೀರ ಕಾಯಿಲೆಗಳಿಗೆ ಕಾರಣವಾಗಿ ಅವುಗಳ ಅಂತ್ಯಕ್ಕೂ ನಾಂದಿ ಹಾಡಿದೆ. ಪ್ಲಾಸ್ಟಿಕ್‌ ದಹನದಿಂದ ವಿಷಕಾರಿ ಹೊಗೆ ಪ್ರಕೃತಿಯನ್ನು ಕಲುಷಿತಮಾಡಿ ನಾವು ಉಸಿರಾಡುವ ಆಮ್ಲಜನಕದ ಗುಣಮಟ್ಟ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇಷ್ಟಲ್ಲದೆ ಮೈಕ್ರೋಪ್ಲಾಸ್ಟಿಕ್‌ ನಾವು ಸೇವಿಸುವ ನೀರು ಆಹಾರ ಗಾಳಿಯಿಂದ ನಮ್ಮ ದೇಹವನ್ನು ಹಾಗೂ ಇತರ ಜೀವಿಯ ದೇಹವನ್ನು ಸೇರಿ ಅಪಾಯಕಾರಿ ಗಂಭೀರ ರೋಗಗಳನ್ನು ಉಂಟು ಮಾಡುತ್ತಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ.

 


೨೦೨೩ರ ವಿಶ್ವ ಪರಿಸರ ದಿನದ ಅಧಿಕೃತ ಸಮಾರಂಭವನ್ನು ಕೋಟ್ಡಿ ಐವೊ ನೆದರ್ಲ್ಯಾಂಡ್‌ ಸಹಭಾಗಿತ್ವದಲ್ಲಿ ಆಯೋಜಿಸಿದೆ. ಈ ಸಾಲಿನ ಅತಿಥೇಯ ದೇಶವಾಗಿದೆ.

ಪ್ಲಾಸ್ಟಿಕ್‌ ಮಾಲಿನ್ಯ ಸಮಸ್ಯೆ ಉಲ್ಬಣಗೊಳ್ಳದಿರಲು ಹಾಗೂ ಈಬಿಕ್ಕಟ್ಟಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಕಾರ್ಯದಲ್ಲಿ ವಿಜ್ಞಾನಿಗಳು, ಪರಿಸರಪ್ರೇಮಿಗಳು, ಪರಿಸರತಜ್ಞರು ನಿರತರಾಗಿದ್ದಾರೆ.  ಕೇವಲ ಸರ್ಕಾರ, ಸರ್ಕಾರೇತರಸಂಸ್ಥೆ, ಸಾರ್ವಜನಿಕರು, ಪರಿಸರತಜ್ಞರು ಅಥವಾ ನಿಯಮ ದಂಡ ವಸೂಲಿಯಿಂದ ಪರಿಹಾರ ಸಿಗಲಿ ಎಂದು ಸುಮ್ಮನಿರುವುದು ಸರಿಯಲ್ಲ.


ನಾವು ನೀವು ಹಾಗೂ ನಮ್ಮ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕೆಳಕಂಡಂತ ಕೆಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬಹುದು.

ಏಕ ಬಳಕೆಯ ಪ್ಲಾಸ್ಟಿಕ್‌  ನಿರ್ಬಂಧ ಹಾಗೂ ನಿಷೇಧ.

ಏಕ ಬಳಕೆಯ ಲೇಖನಿಗಳನ್ನು ನಿಷೇಧಿಸುವುದು.

ಪ್ಲಾಸ್ಟಿಕ್‌  ಪರ್ಯಾಯ ವಸ್ತುಗಳಾದ ಮರ, ಗಾಜು, ಸೆರಾಮಿಕ್ಸ್ ನಂತಹ  ಪರಿಸರ ಸ್ನೇಹಿ ವಸ್ತುಗಳ ಬಳಕೆ.

ದಿನಸಿ ಹಣ್ಣು-ತರಕಾರಿ ಅಂಗಡಿಗೆ ಹೋಗುವಾಗ ಬಟ್ಟೆಯ ಚೀಲಗಳನ್ನುಕೊಂಡೊಯ್ಯುವುದು.

ಪ್ಲಾಸ್ಟಿಕ್‌ ನಲ್ಲಿ ಬಿಸಿ ಆಹಾರ ಆಹಾರಗಳ ಖರೀದಿಯನ್ನು ನಿಷೇಧಿಸುವುದು.

ಪ್ಲಾಸ್ಟಿಕ್‌  ಮರುಬಳಕೆ ಮಾಡಲು ಉತ್ತೇಜಿಸುವುದು.

ಶಾಲಾ ಕಾಲೇಜುಗಳಲ್ಲಿ ಎರಡು ಪ್ರತ್ಯೇಕ ಕಸದ ಬಿನ್‌ಗಳನ್ನು ಇಡುವುದು ಒಂದರಲ್ಲಿ ಜೈವಿಕ ವಿಘಟನೆಯಾಗುವ ವಸ್ತುಗಳು, ಇನ್ನೊಂದರಲ್ಲಿ ಜೈವಿಕ ವಿಘಟನೆ ಆಗದಂತಹ ವಸ್ತುಗಳನ್ನು ಪ್ರತ್ಯೇಕಿಸಿ ಸಂಗ್ರಹಿಸುವುದು. ಇದರೊಂದಿಗೆ ಇನ್ನೂ ಹಲವಾರು ಪರ್ಯಾಯ ಕ್ರಮಗಳನ್ನು ಕೈಗೊಂಡಲ್ಲಿ ಪ್ಲಾಸ್ಟಿಕ್‌ ಮಾಲಿನ್ಯದ ಸಮಸ್ಯೆಯನ್ನು ಬಹಳಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬಹುದಾಗಿದೆ.




 

3 comments:

  1. ನಿಮ್ಮ ಲೇಖನದಲ್ಲಿ, ವಿಶ್ವ ಪರಿಸರ ದಿನಾಚರಣೆ ಉದ್ದೇಶ ಮತ್ತು ಹಿನ್ನೆಲೆಯನ್ನು ಬಹಳ ಅದ್ಭುತವಾಗಿ ತಿಳಿಸಿದ್ದೀರಿ. ವಿದ್ಯಾರ್ಥಿಗಳಿಗೆ ಸಲಹೆಗಳ ರೂಪದಲ್ಲಿ ನೀಡಿರುವ ಸೂಚನೆಗಳು, ಪರಿಸರದೆಡೆಗಿನ ನಿಮ್ಮ ಕಳಕಳಿಯನ್ನು ತಿಳಿಸುತ್ತದೆ. ಧನ್ಯವಾದಗಳು ಮೇಡಂ

    ReplyDelete
  2. ಉತ್ತಮ ಲೇಖನ.ಧನ್ಯವಾದಗಳು

    ReplyDelete
    Replies
    1. ಧನ್ಯವಾದಗಳು ಸರ್ 🙏

      Delete