ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, July 4, 2023

ರಕ್ತ ಪರಿಚಲನೆಯನ್ನು ಕಂಡುಹಿಡಿದ ವಿಲಿಯಮ್ ಹಾರ್ವೆ

  ರಕ್ತ ಪರಿಚಲನೆಯನ್ನು ಕಂಡುಹಿಡಿದ ವಿಲಿಯಮ್ ಹಾರ್ವೆ

ಲೇ : ರಾಮಚಂದ್ರ ಭಟ್‌ ಬಿ.ಜಿ.





 ಲಂಡನ್ನಲ್ಲಿರುವ ತನ್ನ  ಮನೆಯೊಳಗೆ ಒಬ್ಬಂಟಿಯಾಗಿಯೇ ಲೆಕ್ಕವಿಲ್ಲದಷ್ಟು ಶಸ್ತ್ರ ಚಿಕಿತ್ಸಾ ಪ್ರಯೋಗಗಳನ್ನು ಕೈಗೊಳ್ಳುತ್ತಲೇ ಇದ್ದ. ನಾಯಿಗಳು, ಈಲ್‌ಗಳು, ಕಾಗೆಗಳು ಮತ್ತು ಕಣಜಗಳು ಸೇರಿದಂತೆ ಅನೇಕ ಪ್ರಾಣಿಗಳ ಅಂಗಚ್ಛೇದ ಮಾಡಿ ಅವುಗಳ ಹೃದಯ ಬಡಿತವನ್ನು ಗಮನಿಸಿದ. ಗಲ್ಲಿಗೇರಿಸಲ್ಪಟ್ಟ ವ್ಯಕ್ತಿಗಳ ಶವಗಳನ್ನು ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ನ ಪ್ರಯೋಗಾಲಯಕ್ಕೆ ತಂದು, ಆ ದೇಹಗಳನ್ನು ಕೊಯ್ದು ನಿರಂತರ ಅಧ್ಯಯನ ನಡೆಸುತ್ತಿದ್ದ!!! ಅಂತೂ ಹೊಸ ಹೊಳಹೊಂದು ಪ್ರತ್ಯಕ್ಷವಾಗಿಯೇ ಬಿಟ್ಟಿತ್ತು. ಅದುವರೆಗೂ ಅರಿಸ್ಟಾಟಲ್‌ ಮತ್ತು ಗೇಲೆನ್‌ರವರ ಸಿದ್ಧಾಂತಗಳೇ ಅಂತಿಮ ಸತ್ಯವೆಂದು ನಂಬಿದ್ದ ವೈದ್ಯ ಲೋಕಕ್ಕೆ ಆತ ಮರ್ಮಾಘಾತವನ್ನುನೀಡಿದ್ದ. ಅದಕ್ಕೆ ಕಾರಣವಾದದ್ದು ಅವರು ಕಂಡುಹಿಡಿದ ರಕ್ತ ಪರಿಚಲನೆ !!! ಈ ವ್ಯಕ್ತಿಯೇ ವಿಲಿಯಂ ಹಾರ್ವೆ .

ಹಾರ್ವೆ ಮೊದಲ ಬಾರಿಗೆ ಅಪಧಮನಿಗಳು ಮತ್ತು ಅಭಿದಮನಿ ರಕ್ತನಾಳಗಳು ಇಡೀ ದೇಹದ ಮೂಲಕ ರಕ್ತವನ್ನು ಪರಿಚಲನೆ ಮಾಡುತ್ತವೆ ಎಂದು ತೋರಿಸಿಕೊಟ್ಟ. ಹೃದಯದ ಬಡಿತವು ಇಡೀ ದೇಹದ ಮೂಲಕ ನಿರಂತರ ರಕ್ತ ಪರಿಚಲನೆಯನ್ನುಉಂಟುಮಾಡುತ್ತದೆ ಎಂದು  ತೋರಿಸಿಕೊಟ್ಟ. ಹೃದಯ ಮತ್ತು ರಕ್ತ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆಎನ್ನುವುದನ್ನು ಪ್ರಾತ್ಯಕ್ಷಿಕೆಯೊಂದಿಗೆ ಸಾಧಿಸಿಯೇ ಬಿಟ್ಟಿದ್ದ ವಿಲಿಯಂ ಹಾರ್ವೆ. ಅಪಧಮನಿಗಳು ಮತ್ತು ಅಭಿಧಮನಿಗಳಲ್ಲಿ ಹರಿಯುವ ರಕ್ತವು ಒಂದೇ.ಹೃದಯದ ಬಡಿತದಿಂದಲೇ ಏರ್ಪಡುತ್ತದೆ. ಎನ್ನುವುದನ್ನು ಹಾರ್ವೆಯವರು ತಮ್ಮ  ನಿರಂತರ ಸಂಶೋಧನೆಗಳಿಂದ ಕಂಡುಕೊಂಡಿದ್ದ. ಈ ಕಾರಣಕ್ಕಾಗಿ, ಮಹಾನ್‌ ಶಸ್ತ್ರಚಿಕಿತ್ಸಾ ತಜ್ಞನಾಗಿದ್ದ ವಿಲಿಯಮ್‌ ಹಾರ್ವೆಯನ್ನು ಆಧುನಿಕ  ಪ್ರಾಯೋಗಿಕ ಶರೀರ ಕ್ರಿಯಾ ವಿಜ್ಞಾನದ ( modern experimental physiology ) ಜನಕ ಎಂದು ಗುರುತಿಸಲಾಗುತ್ತದೆ.

ವಿಲಿಯಮ್‌ ಹಾರ್ವೆ ಆಗ್ನೇಯ ಇಂಗ್ಲೆಂಡಿನ ಕೆಂಟ್‍ನಲ್ಲಿ ಯಫೋಕ್ಸ್‍ಸ್ಟನ್ನಿನಲ್ಲಿ  1578 ಏಪ್ರಿಲ್ 1 ರಂದು ಜನಿಸಿದ. ಕೇಂಬ್ರಿಜ್‍ನ ಕಾಲೇಜಿನಲ್ಲಿ, ವೈದ್ಯಕೀಯ ವ್ಯಾಸಂಗಕ್ಕೆ ಅಗತ್ಯವಾಗಿದ್ದ ಗ್ರೀಕ್ ಮತ್ತು ಲ್ಯಾಟಿನ್ಭಾಷೆಗಳನ್ನೂ ಇತರ ವಿಷಯಗಳನ್ನೂ ನಾಲ್ಕು ವರ್ಷಗಳ ಕಾಲ ವ್ಯಾಸಂಗಮಾಡಿ ಹಾರ್ವೆ 1597ರಲ್ಲಿ ಬಿ.ಎ.ಪದವಿ ಗಳಿಸಿದ.  ಇಟಲಿಯ ಪ್ರಸಿದ್ಧವಾದ ಪಡುವ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಅಂಗರಚನಾ ಶಾಸ್ತ್ರದ ವ್ಯಾಸಂಗಮಾಡಿದ. ಎಂ.ಡಿ. ಪದವಿಯ ಸಹಿತ ಇಂಗ್ಲೆಂಡಿಗೆ ಮರಳಿ ಲಂಡನ್ನಿನಲ್ಲಿ ವೈದ್ಯಕೀಯ ವೃತ್ತಿ ಪ್ರಾರಂಭಿಸಿದ.  1607ರಲ್ಲಿ ಲಂಡನ್ನಿನ ಸೇಂಟ್ ಬಾರ್ಥೋಲೋಮ್ಯು ಆಸ್ಪತ್ರೆಯಲ್ಲಿ ವೈದ್ಯನಾಗಿ ನೇಮಕಗೊಂಡ. ಈ ಹುದ್ದೆಯಲ್ಲಿ 36 ವರ್ಷ ಸೇವೆ ಸಲ್ಲಿಸಿದ. ಪ್ರಸವ ಶಾಸ್ತ್ರದಲ್ಲೂ ಅವದ್ದು ಎತ್ತಿದ ಕೈ. ರೋಗಶಾಸ್ತ್ರವನ್ನೂ ಅಧ್ಯಯನ ಮಾಡಿದ್ದ. ವೈದ್ಯಶಾಸ್ತ್ರದಲ್ಲಿದ್ದ ಈತನ ಪರಿಣಿತಿ ಇವನ್ನು ರಾಜಮನೆತನದ ವೈದ್ಯನಾಗಿ ನೇಮಕಗೊಳ್ಳುವಂತೆ ಮಾಡಿತ್ತು.

 ಯಾವುದೇ ಅಧ್ಯಯನದಲ್ಲೂ ಗೇ ಪೂರ್ಣವಾಗಿ ನಂಬಿಕೆ ಬರುವವರೆಗೆ ಆತುರಾತುರವಾಗಿ ಏನನ್ನೂ ಆತ ಬಹಿರಂಗಗೊಳಿಸುತ್ತಿರಲಿಲ್ಲ. ಮೇಲಿಂದ ಮೇಲೆ ವಿವಿಧ ರೀತಿಯ ಪ್ರಯೋಗಗಳನ್ನು ಮಾಡಿ ಪರೀಕ್ಷಿಸಿ ಅಂತಿಮವಾಗಿ ತಮ್ಮ ಪ್ರತಿಪಾದನೆಯನ್ನುಪೂರಕ ಸಾಕ್ಷ್ಯಗಳೊಂದಿಗೆ ವೈದ್ಯಲೋಕದೆ ಎದುರು ಅನಾವರಣಗೊಳಿಸುತ್ತಿದ್ದ. ಅದಕ್ಕೆ ಅವನು ರಚಿಸಿದ ಗ್ರಂಥವೇ ಸಾಕ್ಷಿಯಾಗಿದೆ.ಹಾರ್ವೆ  ತನ್ನ ಡಿ ಮೋಟು ಕಾರ್ಡಿಸ್ ಎಂಬ 72ಪುಟಗಳಗ್ರಂಥದಲ್ಲಿ ಹೇಳಿರುವ ವಿಷಯವನ್ನು 12 ವರ್ಷಗಳಷ್ಟು ಮುಂಚೆಯೇ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸಿನಲ್ಲಿ ಉಪನ್ಯಾಸವಾಗಿ ತಿಳಿಯಪಡಿಸಿದ್ದರೂ  ಪುಸ್ತಕ ರೂಪದಲ್ಲಿ ಬರೆದು ಪ್ರಚುರಪಡಿಸಿದ್ದು 1628ರಲ್ಲಿ. ಈ ಗ್ರಂಥದ ಮೊದಲ 19 ಪುಟಗಳಲ್ಲಿ ಹೃದಯ ಮತ್ತು ರಕ್ತ ಪರಿಚಲನೆ ವಿಷಯದಲ್ಲಿ ಅರಿಸ್ಟಾಟಲ್, ಗೇಲನ್‍ ಮುಂತಾದವರು ತಿಳಿಸಿದ್ದ ವಿಚಾರಗಳನ್ನೂ,   1550ರಿಂದ ಈಚೆಗೆ ವೆಸೇಲಿಯಸ್, ಫ್ಯಾಬ್ರೀಷಿಯಸ್‌ ಮೊದಲಾದವರ ಸಂಶೋಧನೆಗಳನ್ನುಚರ್ಚಿಸಿದ್ದಾನೆ.ನಂತರ,  ತಾನು ಸಂಶೋಧನೆಯಲ್ಲಿ  ಕಂಡುಕೊಂಡ ವಿಷಯಗಳನ್ನು ಹಂತ ಹಂತವಾಗಿ ವಿವರಿಸುತ್ತ, ರಕ್ತ ಪರಿಚಲಿಸುತ್ತಿದೆ ಎಂಬ ನಿರ್ಧಾರಕ್ಕೆ ಏಕೆ ಬರಬೇಕು?  ಎನ್ನುವುದನ್ನು  ಶಂಕೆಗೆ ಆಸ್ಪದವಿಲ್ಲದ ರೀತಿಯಲ್ಲಿ  ಪ್ರತಿಪಾದಿಸುತ್ತಾನೆ. ಡಿ ಮೋಟು ಕಾರ್ಡಿಸ್  ಮತ್ತು ರಿಯೋಲಾನ್ ಎಂಬವರಿಗೆ ಹಾರ್ವೆ ಬರೆದ ಪತ್ರಗಳಿಂದ ಪ್ರಯೋಗಾತ್ಮಕ ವ್ಯಾಸಂಗವಿಧಾನ ಬಳಕೆಗೆ ಬಂದಿರುವುದು ತಿಳಿದು ಬರುತ್ತದೆ.


William Harvey dissecting the body of Thomas Parr

    16ನೆಯ ಶತಮಾನದವರೆಗೂ ಅಂಗಶಾಸ್ತ್ರಜ್ಞರು ಹಾಗೂ ವೈದ್ಯರಿಗೆ ರಕ್ತವು ರಕ್ತನಾಳಗಳಲ್ಲಿ ಚಲಿಸುತ್ತದೆ ಎಂಬುದಷ್ಟೇ ತಿಳಿದಿತ್ತು. ಹೃದಯಕ್ಕೆ ಸಂಕೋಚನ-ವ್ಯಾಕೋಚನಸಾಮರ್ಥ್ಯವಿದ್ದು, ಅದು ಸಂಕೋಚಿಸುವುದರಿಂದಲೇ ರಕ್ತಚಲನೆಗೆ ಬೇಕಾಗುವ ಒತ್ತಡ ಒದಗುತ್ತದೆ ಎಂಬುದು ಆಗ ಆಅವರಿಗೆ ತಿಳಿದಿರಲಿಲ್ಲ.ಅಪಧಮನಿಗಳ ಮೂಲಕ ದೇಹದಲ್ಲೆಲ್ಲ ಪ್ರವಹಿಸುವ ರಕ್ತ,  ವಿವಿಧೆಡೆಗಳಲ್ಲಿ ಉಪಯೋಗಗೊಂಡು ಉಳಿದದ್ದು ಅಭಿಧಮನಿಗಳ ಮೂಲಕ ಹೃದಯಕ್ಕೆ ಹಿಂತಿರುಗಿಬರುತ್ತದೆ.  ಕವಾಟಗಳಿರುವುದರಿಂದ ಹಿಮ್ಮುಖವಾಗಿ  ಹರಿಯಲು ಸಾಧ್ಯವಿಲ್ಲ. ಆದ್ದರಿಂದ,  ಇವುಗಳಲ್ಲಿ ರಕ್ತ ಒಂದು ಸಲ ಹಿಂದಕ್ಕೆ ಇನ್ನೊಂದು ಮುಂದಕ್ಕೆ ಹರಿಯುತ್ತದೆ ಎನ್ನುವ ತಪ್ಪು ಅಭಿಪ್ರಾಯ ಅಂದಿನ ವೈದ್ಯರಲ್ಲಿತ್ತು.

ಈ ವಿಷಯಗಳನ್ನೆಲ್ಲ ವಿವಿಧ ಗ್ರಂಥಗಳ ಅಧ್ಯಯನದಿಂದಲೂ, ನಿರಂತರ ಚಿಂತನೆಯಿಂದಲೂ  ಹಾರ್ವೆ ತರ್ಕಿಸಿದ. ನಾಯಿ, ಹಂದಿ, ಹಾವು, ಕಪ್ಪೆ, ಮೀನು, ಏಡಿ, ಮೃದ್ವಂಗಿಗಳು, ಕೀಟ ಮೊದಲಾದ ಜೀವಿಗಳ ಅಧ್ಯಯನದಿಂದ ತಮ್ಮ ಆಲೋಚನೆಗಳು ಸರಿಯಾಗಿವೆ ಎಂಬುದನ್ನು ಕಂಡುಕೊಂಡ.ಮೊಟ್ಟೆಯೊಳಗೆ ಇರುವ ಕೋಳಿಯ ಭ್ರೂಣದ ಹೃದಯ ಮಿಡಿಯುತ್ತಿರುವುದನ್ನು ದೊರೆ ಚಾರ್ಲ್ಸ್‌ ಗೆ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದ.


William Harvey demonstrating his theory of circulation of the blood before Charles I

ಹಾರ್ವೆಗೆ ರಕ್ತನಾಳಗಳ ಪರಿಚಯವಿದ್ದರೂ, ಸೂಕ್ಷ್ಮದರ್ಶಕದ ಆವಿಷ್ಕಾರವಾಗಿರದ ಕಾರಣದಿಂದ ಲೋಮನಾಳಗಳ ರಚನೆಯ ಮಾಹಿತಿ ಇರಲಿಲ್ಲ. ಹಾರ್ವೆಯ ನಿಧನದ ನಂತರ ಪ್ರಖ್ಯಾತ  ಅಂಗರಚನಾ ಶಾಸ್ತ್ರಜ್ಞ,  ಮಾಲ್ಪೀಜಿ (1628-94)  ಸೂಕ್ಷ್ಮದರ್ಶಕ ಬಳಸಿ ರಕ್ತನಾಳಗಳನ್ನು  ಅಧ್ಯಯನ ಮಾಡಿ, ಅಪಧಮನಿ ಮತ್ತು ಅಭಿಧಮನಿಗಳನ್ನು ಸಂಪರ್ಕಿಸುವ ಲೋಮನಾಳಗಳನ್ನು ಕಂಡುಹಿಡಿದರು.


ಈ ಮಧ್ಯೆ ಅರಿಸ್ಟಾಟಲ್, ಗೇಲೆನ್‍ ಅವರ ಬೋಧನೆಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತ ಮಾಡಿದ್ದರಿಂದ  ಸಾಕಷ್ಟು ರೋಗಿಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೂ ಒಳಗಾಗಬೇಕಾಯಿತು. ಸ್ನೇಹಿತನಂತೆ ಇದ್ದ ಚಾರ್ಲ್ಸ್ ದೊರೆಯ ಕೊಲೆಯೂ ಹಾರ್ವೆಗೆ ಆಘಾತವನ್ನು ಉಂಟು ಮಾಡಿತ್ತು. .ಕೀಟಗಳ ಪ್ರಜನನ ಕ್ರಿಯೆ ಕುರಿತು ಹಾರ್ವೆ  ಸಂಶೋಧನೆ ನಡೆಸಿ, ಗ್ರಂಥವೊಂದನ್ನು ರಚಿಸಿದ್ದರು. ಇಂಗ್ಲೆಂಡಿನ ಪ್ರಕ್ಷುಬ್ದ ರಾಜಕೀಯ ಪರಿಸ್ಥಿತಿಯ ಸಂದರ್ಭದಲ್ಲಿ  ಹಾರ್ವೆ ದೊರೆಯ ಒಡನಾಡಿ ಎಂದು ತಿಳಿದು ಕ್ರುದ್ಧರಾದ ಜನ 1642ರಲ್ಲಿ ಲಂಡನ್ನಿನ ಇವ ಮನೆಯನ್ನು ಲೂಟಿ ಮಾಡಿದರು. ಆ ದಾಳಿಯಲ್ಲಿ ಸಂಶೋಧನೆಯ ಹಸ್ತಪ್ರತಿಗಳು  ಪೂರ್ಣವಾಗಿ ನಾಶವಾದುವು. ಇದು ಕೇವಲ ಹಾರ್ವೆಗೆ ಅಷ್ಟೇ ಅಲ್ಲ,  ಇಡೀ ಸಂಶೋಧನಾ ಕ್ಷೇತ್ರಕ್ಕೆ ಆದ ತುಂಬಲಾರದ ನಷ್ಟವೇ ಸರಿ. ಆದರೂ, ಹಾರ್ವೆ ನ್ನ ಸಂಶೋಧನಾ ಪ್ರವೃತ್ತಿಯಿಂದ ವಿಮುಖನಾಗಲಿಲ್ಲ. ಹಾಗೆಯೇ ನ್ನು ಹಿಂಬಾಲಿಸುತ್ತಿದ್ದ ದುರಾದೃಷ್ಟವೂ  ಅಷ್ಟಕ್ಕೆ ಸುಮ್ಮನಾಗಲಿಲ್ಲ. ಶ್ವಾಸಕ್ರಿಯೆ,ರೋಗಶಾಸ್ತ್ರ ಮೊದಲಾದ ಹಲವು ವಿಷಯಗಳ ೇಲೆ ಸುಧೀರ್ಘ ಸಂಶೋಧನೆ ನಡೆಸಿ ಆತ ಗ್ರಂಥಗಳನ್ನುರಚಿಸಿದ್ದ. ಇವೆಲ್ಲವೂ ಲಂಡನ್ನಿನ ಭೀಕರ ಅಗ್ನಿ ದುರಂತದಲ್ಲಿ ನಾಶವಾಗಿ ಹೋದವು. ಹೀಗೆ, ಸಾಲು ಸಾಲು ದುರಂತಗಳು, ಅವನ್ನು ತೀವ್ರವಾಗಿ ಘಾಸಿಗೊಳಪಡಿಸಿರಬೇಕು. ಇವೆಲ್ಲದರ ಫಲವೋ ಎಂಬಂತೆ ಸಮಾಜಕ್ಕೆ ತನ್ನ ಬದುಕನ್ನು ಸಮರ್ಪಿಸಿದ ವಿಲಿಯಂ ಹಾರ್ವೆ 1657 ಜೂನ್ 3ರಂದು ಲಂಡನ್ನಿನಲ್ಲಿ ನಿಧನನಾದ.

 

3 comments:

  1. ಉತ್ತಮವಾದ ಲೇಖನ ಸರ್. 👏🏽👏🏽👏🏽💐 ಗ್ರೂಪ್ನಲ್ಲಿ ಹಂಚಿಕೊಂಡದ್ದಕ್ಕೆ ಧನ್ಯವಾದಗಳು

    ReplyDelete