ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, February 4, 2024

ರಾಷ್ಟ್ರೀಯ ವಿಜ್ಞಾನ ದಿನ – ಸಿ.ವಿ. ರಾಮನ್ ಅವರ ಕೊಡುಗೆಯ ಸ್ಮರಣಾರ್ಥ ದಿನ.

 ರಾಷ್ಟ್ರೀಯ ವಿಜ್ಞಾನ ದಿನ –  ಸಿ.ವಿ. ರಾಮನ್ ಅವರ ಕೊಡುಗೆಯ ಸ್ಮರಣಾರ್ಥ ದಿನ.

 ಲೇಖಕರು :  ಬಿ.ಎನ್ ರೂಪ,  ಸಹ  ಶಿಕ್ಷಕರು,

                                                   ಕೆಪಿಎಸ್

ಜೀವನ್ ಭೀಮ ನಗರ ,

                                 ಬೆಂಗಳೂರು ದಕ್ಷಿಣ  ವಲಯ -4 

ಬರುವ ಫೆಬ್ರವರಿ ೨೮ ರಂದು   ದೇಶದಾದ್ಯಂತ ಆಚರಿಸಲಿರುವ “ರಾಷ್ಟ್ರೀಯ ವಿಜ್ಞಾನ ದಿನ”ದ ಹಿನ್ನೆಲೆಯಲ್ಲಿ ಸರ್‌ ಸಿ.ವಿ.ರಾಮನ್‌ ಅವರ ಕೊಡುಗೆಯನ್ನು ಸ್ಮರಿಸುವ ಸಾಂದರ್ಭಿಕ ಲೇಖನವನ್ನು ಶಿಕ್ಷಕಿ ಬಿ.ಎನ್.ರೂಪಾ ಅವರು ಬರೆದಿದ್ದಾರೆ.

 

 ವಿಜ್ಞಾನ ಎಂಬ ಪದದಲ್ಲೇ ಅಡಗಿದೆ ವಿಶೇಷ ಜ್ಞಾನ .ನಿಸರ್ಗದಲ್ಲಿ ನಡೆಯುವ ವಿದ್ಯಮಾನ ನಮ್ಮ ಸುತ್ತಮುತ್ತಲು ನಡೆಯುವಂತಹ ಪ್ರಕ್ರಿಯೆಗಳು ಇದನ್ನು ಸಾದರ ಪಡಿಸುತ್ತವೆ. ವಿಜ್ಞಾನವು ತಾರ್ಕಿಕ ಚಿಂತನೆ, ವಿಮರ್ಶಾತ್ಮಕ ಆಲೋಚನೆಗಳನ್ನು, ವೈಜ್ಞಾನಿಕ ಮನೋಭಾವ ,ವೈಜ್ಞಾನಿಕ ಚಿಂತನೆ ,ವಿಸರ್ಗದಲ್ಲಿ ನಡೆಯುವ ವಿದ್ಯಮಾನಗಳಲ್ಲಿ ಏಕೆ ಏನು? ಯಾಕಿಗಾಯಿತು? ಏನಾಯಿತು? ಕಾರಣ ಏನು? ವಿಮರ್ಶಿಸಿ ,ವಿಶ್ಲೇಷಿಸುವ ಆಲೋಚನೆಗಳಿಗೆ ಎಡೆ ಮಾಡಿಕೊಡುತ್ತದೆ. ಜ್ಞಾನಾತ್ಮಕ ವಲಯದೊಂದಿಗೆ ಅರ್ಥೈಸಿಕೊಳ್ಳುವ ಮನೋಭಾವವನ್ನು,ದೈನಂದಿನ ಜೀವನದಲ್ಲಿ ಅನ್ವಯಿಸಿಕೊಳ್ಳುವ ಮೂಲಕ, ಕೌಶಲ್ಯಗಳ ಬೆಳವಣಿಗೆಗೆ ಎಡೆ ಮಾಡಿಕೊಡುತ್ತದೆ.


ಭಾರತದಲ್ಲಿ ವೈಜ್ಞಾನಿಕ ಚಿಂತನೆ, ವೈಜ್ಞಾನಿಕ ಮನೋಭಾವ ,ವಿಜ್ಞಾನದಲ್ಲಿ ಆಸಕ್ತಿ ವೈಜ್ಞಾನಿಕ  ವೈಚಾರಿಕತೆ, ಇವುಗಳೆಲ್ಲವೂ ಆದಿ ಕಾಲದಿಂದಲೂ ಬೆಳೆದು ಬಂದಿರುವುದನ್ನು ನಾವು ತಿಳಿದುಕೊಂಡಿದ್ದೇವೆ ಹಾಗೂ ನೋಡಿದ್ದೇವೆ. , ಧೀಮಂತ ವ್ಯಕ್ತಿತ್ವ ಉಳ್ಳ ಅನೇಕ ಮಹನೀಯರನ್ನು, ವಿಜ್ಞಾನಿಗಳನ್ನು ಅವರು    ಮಾಡಿದಂತಹ ಕೊಡುಗೆಗಳನ್ನು ಸಹ ನಾವು ಸ್ಮರಿಸುತ್ತಾ ಬಂದಿದ್ದೇವೆ.

 ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಪ್ರತಿ ವರ್ಷ ಫೆಬ್ರವರಿ 28 ರಂದು ರಾಮನ್ ಅವರ ಕೊಡುಗೆಗಳನ್ನು ಸ್ಮರಿಸಲು  ಆಚರಿಸಲಾಗುತ್ತದೆ.

ಚಂದ್ರಶೇಖರ್ ವೆಂಕಟರಾಮನ್ ಅವರು 7 ನವಂಬರ್ 1888 ರಲ್ಲಿ  ತಿರುಚಿರಾಪಳ್ಳಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಚಂದ್ರಶೇಖರ್ ರಾಮನಾಥನ್ ಮತ್ತು ಪಾರ್ವತಿ ಅಮ್ಮಾಳ್ ಅವರ ಪುತ್ರನಾಗಿ  ಜನಿಸಿದರು  8 ಮಂದಿ ಒಡಹುಟ್ಟಿದವರಲ್ಲಿ ಇವರು ಎರಡನೆಯವರು. ಇವರ ತಂದೆ ಸ್ಥಳೀಯ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದರು ಮತ್ತು ಸಾಧಾರಣ ಆದಾಯವನ್ನು ಗಳಿಸುತ್ತಿದ್ದರು.

ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ಸಿವಿ ರಾಮನ್ ಅವರು ಬಾಲ್ಯದಿಂದಲೇ ಜಾಣರು   ಸಾಧಕರು ಹಾಗೂ ಪ್ರತಿಭಾವಂತರು. ರಾಮನ್ ಅವರು ಸೆಂಟ್   ಅಲೋಸಿಯಸ್ ಆಂಗ್ಲೋ ಇಂಡಿಯನ್ ಹೈಸ್ಕೂಲಿನಲ್ಲಿ ಶಿಕ್ಷಣ ಪಡೆದರು. ಅವರು 11ನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಷನ್  ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆಂಧ್ರಪ್ರದೇಶಕ್ಕೆ ಮೊದಲ ಸ್ಥಾನವನ್ನು ಪಡೆದರು. 1902 ರಲ್ಲಿ ರಾಮನ್ ಮದ್ರಾಸ್ನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದ ನಂತರ  ಗಣಿತ ಹಾಗೂ ಭೌತಶಾಸ್ತ್ರವನ್ನು ಕಲಿಯಲು ಸಹಾಯವಾಯಿತು .1904 ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಬಿಎ ಪದವಿಯನ್ನು ಪಡೆದರು ಹಾಗೂ ಪ್ರಥಮ ಸ್ಥಾನವನ್ನು ಪಡೆದರು. ಭೌತಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಚಿನ್ನದ ಪದಕಗಳನ್ನು ಗೆದ್ದರು.

ಪದವಿ ವಿದ್ಯಾರ್ಥಿಯಾಗಿದ್ದಾಗಲೇ ಅವರು 1906ರಲ್ಲಿ ಬ್ರಿಟಿಷ್ ಜರ್ನಲ್ ಫಿಲಾಸಫಿಕಲ್ ಮ್ಯಾಗ್ಜಿನ್ ನಲ್ಲಿ ‘ಆಯತಾಕಾರದ ದ್ಯುತಿ ರಂದ್ರದಿಂದ ಅಸಮ ಪಾರ್ಶ್ವದ ವಿವರ್ತನೆ ಬ್ಯಾರಡ್ ಗಳು’ ಕುರಿತು ತಮ್ಮ ಮೊದಲ ವೈಜ್ಞಾನಿಕ ಪ್ರಬಂಧವನ್ನು ಪ್ರಕಟಿಸಿದರು. ಅದೇ ಸಮಯದಲ್ಲಿ ಅವರು M.A ಪದವಿಯನ್ನು ಸಹ ಪಡೆದರು. ಅದೇ ವರ್ಷ ಪ್ರಕಟವಾದ ಅವರ ಎರಡನೇ ಪ್ರಬಂಧವು’ ದ್ರವಗಳ ಮೇಲ್ಮೈ ಒತ್ತಡದ’ ಬಗ್ಗೆ ಪ್ರಕಟವಾದ ನಂತರ ಲಾರ್ಡ್ ರೇಲಿ ರಾಮನ್ ಎಂಬುವರು ಅವರೊಂದಿಗೆ ಸಂವಹನ ನಡೆಸಲು ಪ್ರಾರಂಭಿಸಿದರು ಸೌಜನ್ಯದಿಂದ ಅವರನ್ನು’ ಪ್ರೊಫೆಸರ್’ ಎಂದು ಸಂಭೋಧಿಸಿದರು.

ರಾಮನ್‌ ಅವರ ವಿದ್ಯಾಭ್ಯಾಸದ ನಂತರ ಪ್ರವೇಶ ಪರೀಕ್ಷೆಯನ್ನು ಬರೆದು ಮೊದಲ ಸ್ಥಾನ ಸ್ಥಾನವನ್ನು ಸಾಧಿಸಿ ಭಾರತೀಯ ಹಣಕಾಸು ಸೇವೆಗೆ ಅರ್ಹತೆ ಪಡೆದರು. ಸಹಾಯಕ ಅಕೌಂಟೆಂಟ್ ಜನರಲ್ ಆಗಿ ಅವರನ್ನು ನಿಯೋಜಿಸಲಾಯಿತು. ಭಾರತದಲ್ಲಿ ಸ್ಥಾಪಿಸಲಾದ ಮೊದಲ ಸಂಶೋಧನಾ ಸಂಸ್ಥೆಯಾದ” ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಶನ್ ಆಫ್ ಸೈನ್ಸ್” ನಿಂದ ಅವರು ಪ್ರಭಾವಿತರಾದರು. ಸಂಶೋಧನೆ ನಡೆಸಲು ಅನುಮತಿ ಪಡೆದರು. 1909ರಲ್ಲಿ ಕರೆನ್ಸಿ ಅಧಿಕಾರಿಯ ಸ್ಥಾನವನ್ನು ತೆಗೆದುಕೊಳ್ಳಲು ರಾಮನ್ ಅವರನ್ನು ಬ್ರಿಟಿಷ್ ಬರ್ಮಾದ ರಂಗೂನ್ ಗೆ  ವರ್ಗಾಯಿಸಲಾಯಿತು. ತಂದೆಯವರ ನಿಧನರಾದ ಕಾರಣದಿಂದ ಅವರು ಮದ್ರಾಸಿಗೆ ಮರಳ ಬೇಕಾಯಿತು.1910 ರಲ್ಲಿ ಮಹಾರಾಷ್ಟ್ರದ ನಾಗಪುರಕ್ಕೆ ಅವರನ್ನು ವರ್ಗಾಯಿಸಲಾಯಿತು. ಒಂದು ವರ್ಷ ಸೇವೆ ಸಲ್ಲಿಸಿದ ನಂತರ 1911ರಲ್ಲಿ ಅಕೌಂಟೆಂಟ್ ಜನರಲ್ ಆಗಿ ಬಡ್ತಿ ನೀಡಲಾಯಿತು. 1915ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯವು IACS ನಲ್ಲಿ ರಾಮನವರ  ಅಡಿಯಲ್ಲಿ ಸಂಶೋಧನಾ ವಿದ್ವಾಂಸರನ್ನು ನಿಯೋಜಿಸಲು ಪ್ರಾರಂಭಿಸಿತು. 1919ರ ಹೊತ್ತಿಗೆ ರಾಮನ್ 12ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದರು.

19 21ರಲ್ಲಿ ರಾಮನವರನ್ನು ಕಲ್ಕತ್ತಾ ವಿಶ್ವವಿದ್ಯಾಲಯದ ಗೌರವಾನ್ವಿತ ಡಿಎಸ್‌ಸಿ ಪದವಿ ನೀಡಿ ಗೌರವಿಸಲಾಯಿತು. 1924ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದರು .1926ರಲ್ಲಿ ಇಂಡಿಯನ್ ಜರ್ನಲ್ ಆಫ್ ಫಿಸಿಕ್ಸ್ ಅನ್ನು ಪ್ರಾರಂಭಿಸಿದರು ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕರಾಗಿ ನೇಮಕಗೊಂಡ ನಂತರ 1933ರಲ್ಲಿ ಕಲ್ಕತ್ತಾವನ್ನು ತೊರೆದರು.

 ರಾಮನ್ ರವರ ವೈಜ್ಞಾನಿಕ ಪರಿಶೋಧನೆ-

ರಾಮನ್ ಅವರ ಆಸಕ್ತಿಗಳಲ್ಲಿ ಸಂಗೀತದ ಶಬ್ದಗಳು ಪ್ರಮುಖ ವೈಜ್ಞಾನಿಕ ತಳಹದಿಯಾಗಿತ್ತು. ಭಾರತೀಯ ಡ್ರಮ್ಸ್, ತಬಲಾ, ಮೃದಂಗದ ಧ್ವನಿಗಳ ಹಾರ್ಮೋನಿಕ್ಸ್ ಸ್ವರೂಪದ ವಿಶ್ಲೇಷಣೆಯನ್ನು ಮಾಡಿದರು.  ಪಿಯಾನೋ ಫೋರ್ಟ್    ಸ್ಟ್ರಿಂಗ್ನನ   ಕಂಪನದ ಬಗ್ಗೆ ವಿಮರ್ಶಾತ್ಮಕ ಸಂಶೋಧನೆಯನ್ನು ಬರೆದರು. ಇದನ್ನು  ಕೌಫ್ಮನ್ನನ   ಸಿದ್ದಾಂತ ಎನ್ನಲಾಗುತ್ತದೆ. ಇಂಗ್ಲೆಂಡ್ ನ ಸಂಕ್ಷಿಪ್ತ ಭೇಟಿಯ ಸಮಯದಲ್ಲಿ ಲಂಡನ್ನ ಸೇಂಟ್ ಪೌಲ್ ಕ್ಯಾಥೆಡ್ರಲ್ ಗುಮ್ಮಟ ದ ವಿಸ್ಪರ್ರಿಂಗ್ ಗ್ಯಾಲರಿಯಲ್ಲಿ ಶಬ್ದವು ಹೇಗೆ ಚಲಿಸುತ್ತದೆ ಎಂಬುದನ್ನು ಅವರು ಅಧ್ಯಯನ ಮಾಡಿ ಯಶಸ್ವಿಯಾದರು. ಧ್ವನಿ ವಿಜ್ಞಾನದ ಮೇಲಿನ ಅವರ ಕೆಲಸವು ಒಂದು ಪ್ರಮುಖ ಸಂಶೋಧನೆಯಾಗಿದೆ. 

ಭೌತವಿಜ್ಞಾನದ ಇತಿಹಾಸವನ್ನು ಗಮನಿಸಿದಾಗ ಬೆಳಕಿನ ಬಗ್ಗೆ ಸಾಕಷ್ಟು ಚಿಂತನೆಗಳು ಹಲವಾರು ವರ್ಷಗಳಿಂದ  ನಡೆದು ಬಂದಿರುವ ಅಂಶವು ನಮಗೆ ತಿಳಿದು ಬರುತ್ತದೆ . ನ್ಯೂಟನ್ ಪ್ರತಿಪಾದಿಸಿದಂತೆ ಬೆಳಕೆನ್ನುವುದು ಶಕ್ತಿಶಾಲಿ ಕಣಗಳ ನಿರಂತರ ಧಾರೆ ಎಂದು ಪ್ರತಿಪಾದಿಸಿದ್ದಾರೆ. ಹೈಗನ್ ಹಾಗೂ ಮತ್ತಿತರ ಸಮಕಾಲೀನ ವಿಜ್ಞಾನಿಗಳು ಬೆಳಕೆನ್ನುವುದು ಅಲೆಗಳ ರೂಪದಲ್ಲಿದೆ ಎಂದು ಧ್ವನಿ ಎತ್ತಿದರು.ಬೆಳಕಿನ ಬಗ್ಗೆ ಹೀಗೆ ಸಾಕಷ್ಟು ಚಿಂತನೆಗಳು ಪ್ರಯೋಗಗಳು ಹಾಗೂ ನಿಯಮಗಳನ್ನ ಪ್ರತಿಪಾದಿಸಲಾಯಿತು.

1919ರಲ್ಲಿ ಬೆಳಕಿನ ಚದುರುವಿಕೆಯನ್ನು ಪತ್ತೆಮಾಡಲು ರಾಮನ್‌ ಅವರು ಪ್ರಾರಂಭಿಸಿದರು. ಸೆಪ್ಟೆಂಬರ್ 1921 ರಲ್ಲಿ ಎಸ್. ಎಸ್. ನರಕುಂದ ಹಡಗಿನಲ್ಲಿ ಇಂಗ್ಲೆಂಡಿನಿಂದ ಮನೆಗೆ ಪ್ರಯಾಣಿಸುವಾಗ ಮೆಡಿಟೇರಿಯನ್ ಸಮುದ್ರದ ನೀಲಿ ಬಣ್ಣದ ಬಗ್ಗೆ ಆಲೋಚಿಸಲು ಶುರು ಮಾಡಿದರು. ಲಾರ್ಡ್ ರೇಲಿಯವರು ಉತ್ತಮವಾದ ವಿವರಣೆ ಇದರ ಬಗ್ಗೆ ನೀಡಿದರು. ಗಾಡ ನೀಲಿ ಸಮುದ್ರದ ನೀರಿನ ಬಣ್ಣದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ,ಆದರೆ ಆಕಾಶದ ನೀಲಿ ಬಣ್ಣದ ಪ್ರತಿಬಿಂಬವಾಗಿದೆ ಎಂದರು. ರೇಲಿ ನೀಲಿ ಬಣ್ಣ ಚದುರುವಿಕೆ  ಎಂದು ಇದನ್ನು ಕರೆಯಲಾಯಿತು.

ರಾಮನ್ ಪರಿಣಾಮ –

1921 ರಲ್ಲಿ ಸೆಪ್ಟೆಂಬರ್ ನಲ್ಲಿ ಕಲ್ಕತ್ತಾ ಕ್ಕೆ ಹಿಂದಿರುಗಿ ದ್ರವಗಳಲ್ಲಿ ಬೆಳಕಿನ ಚದುರುವಿಕೆ ಸಂಬಂಧಿಸಿದಂತೆ ರಾಮನ್ ಅವರು ಪ್ರಯೋಗಗಳನ್ನು ನಡೆಸಿದರು. ಕೊಲ್ಕತ್ತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಶನ್ ಆಫ್ ಸೈನ್ಸ್ ನಲ್ಲಿ ರಾಮನವರು ತಮ್ಮ ಸಹೋದ್ಯೋಗಿ ಯಾದ  ಕೆ ಎಸ್ ಕೃಷ್ಣನ್ ಅವರೊಂದಿಗೆ  ನಡೆಸಿದ ಅಧ್ಯಯನಗಳ ಪರಿಣಾಮವೇ ರಾಮನ್ ಪರಿಣಾಮದ ಶೋಧವಾಗಿದೆ.

ಸಣ್ಣ ಕಣದ ಮೂಲಕ ಮೂಲಕ ಬೆಳಕನ್ನು ಹಾಯಿಸಿದಾಗ ಅದರಲ್ಲಿ ಉಂಟಾಗುವ ಚದುರುವಿಕೆಯನ್ನು ರಾಮನ್ ಕಂಡುಹಿಡಿದರು. ಈ ಸಂಶೋಧನೆಗಾಗಿ 1930 ರಲ್ಲಿ ಅವರು ಭೌತವಿಜ್ಞಾನದಲ್ಲಿ ನೀಡಲಾದ ನೋಬಲ್ ಪ್ರಶಸ್ತಿಯನ್ನು ಪಡೆದಿದ್ದರು. ನೋಬೆಲ್ ಪಾರಿತೋಷಕ ಪ್ರಶಸ್ತಿಗೆ ಭಾಜನರಾದ ಪ್ರಪ್ರಥಮ ಭಾರತೀಯ ಭೌತವಿಜ್ಞಾನಿ ಎನಿಸಿಕೊಂಡರು. ಈ ಪರಿಣಾಮದ ಸಂಶೋಧನೆಗಾಗಿ ರಾಮನ್ ಖ್ಯಾತಿ ಪಡೆದಿದ್ದಾರೆ .

 

ಒಂದು ಏಕವರ್ಣೀಯ ಬೆಳಕು ಪಾರದರ್ಶಕ ಮಾಧ್ಯಮದ ಮೂಲಕ ಹಾದು ಹೋಗುವಾಗ ಆ ಮಾಧ್ಯಮದ ಅಣುಗಳೊಂದಿಗೆ ಅಂತರ್ವರ್ತಿಸಿ ಶಕ್ತಿಯನ್ನು ಕಳೆದುಕೊಳ್ಳುವುದರಿಂದ, ಇಲ್ಲವೇ ಪಡೆಯುವುದರಿಂದ ಬೆಳಕಿನ ಆವರ್ತಂಕದಲ್ಲಿ ಬದಲಾವಣೆಯಾಗಿ ಹೆಚ್ಚುವರಿ ರೋಹಿತ ರೇಖಗಳು ಕಾಣಿಸಿಕೊಳ್ಳುವ ವಿದ್ಯಮಾನವೇ ರಾಮನ್ ಪರಿಣಾಮವಾಗಿದೆ.

1982ರಲ್ಲಿ ರಾಮನ್ ಅವರ ಶತಮಾನೋತ್ಸವದ ಸಂದರ್ಭದಲ್ಲಿ ರಾಮನ್ ಅವರ ಕೊಡುಗೆಯ ಸ್ಮರಣಾರ್ಥವಾಗಿ ಕೃತಜ್ಞತೆಯಿಂದ ಭಾರತದಲ್ಲಿ ಫೆಬ್ರವರಿ 28 ರನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಘೋಷಿಸಿ,  ಆಚರಣೆ ಮಾಡಲಾಗುತ್ತಿದೆ.   ರಾಮನ್ ಪರಿಣಾಮವನ್ನು ಪ್ರಪಂಚಕ್ಕೆ  ಪರಿಚಯಿಸಲಾದ ಫೆಬ್ರವರಿ 28ನ್ನು ದೇಶಾದ್ಯಂತ ವಿಜ್ಞಾನ ದಿನವನ್ನಾಗಿ 1987ರಿಂದ ಆಚರಿಸಲಾಗುತ್ತಿದೆ.

ವಿಜ್ಞಾನ ಪ್ರಪಂಚದಲ್ಲಿ ವೈಜ್ಞಾನಿಕ ಅನ್ವೇಷಣೆ ,ಆವಿಷ್ಕಾರ ಹೊಸದೇನಲ್ಲ. ಆದರೆ ಈ ಸಾಧನೆ ಸಾಧಕರ ಸ್ವತ್ತು ಹಗಲು- ರಾತ್ರಿ ಎನ್ನದೆ, ಸತತ ಕಠಿಣ ಪರಿಶ್ರಮ ಮಾಡಿ ,ಸೋಲನ್ನು ಎದುರಿಸಿ  ನಿರಂತರ ಪ್ರಯೋಗ, ಹೊಸ ಹೊಸತನವನ್ನು ಕಂಡುಹಿಡಿಯುವ ಕೆಚ್ಚು   ಸಂಶೋಧನಾ ಪ್ರವೃತ್ತಿ, ಹಿಡಿದಿರುವ ಕೆಲಸವನ್ನು ಕೈಬಿಡದೆ ಸಾಧಿಸುವುದು, ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ,ಧೈರ್ಯಗುಂದದೆ  ಮುನ್ನುಗುವುದು, ವಿಜ್ಞಾನಿಗಳ ಹಾಗೂ ಸಾಧಕರ ಪ್ರವೃತ್ತಿಯಾಗಿದೆ .ರಾಮನ್ರ  ರಾಮನ್ ಪರಿಣಾಮವು ಇದಕ್ಕೆ ಒಂದು ಸೂಕ್ತ ಉದಾಹರಣೆಯಾಗಿದೆ.




ಭಾರತದಲ್ಲಿ ರಾಮನ್ನರ ಸ್ಮರಣಾರ್ಥಕವಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಅತ್ಯಂತ ವಿಜೃಂಭಣೆಯಿಂದ ಹೆಮ್ಮೆಯಿಂದ ಶಾಲಾ ಕಾಲೇಜು ವಿಶ್ವವಿದ್ಯಾನಿಲಯಗಳಲ್ಲಿ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದ ಬಗ್ಗೆ ಆಸಕ್ತಿ,ವಿಜ್ಞಾನದ ಪರಿಕಲ್ಪನೆಗಳ ಬಗ್ಗೆಆಧರ , ವಿಜ್ಞಾನದ ತಾರ್ಕಿಕ ಚಿಂತನೆಯನ್ನು ಅವರಲ್ಲಿ ಬಡಿದೇಳುಸುವ ಒಂದು ದಿನವೂ ಆಗಿದೆ. ವಿಜ್ಞಾನಿಗಳ ಕೊಡುಗೆ ಹಾಗೂ ವೈಜ್ಞಾನಿಕ ಆವಿಷ್ಕಾರಗಳು ಅಜರಾಮರ ಅವುಗಳಿಗೆ ಎಂದೂ ಸಾವಿಲ್ಲಎಂಬುದಕ್ಕೆ ಈ ಆಚರಣೆಗಳು ಸ್ಪಷ್ಟ ನಿದರ್ಶನವಾಗಿದೆ.


 

 

 

 

 

 

 

No comments:

Post a Comment