ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, February 4, 2024

"ಕ್ಯಾನ್ಸರ್ ರೋಗಕ್ಕೆ ಅಂಜದೆ,ಧೈರ್ಯದಿಂದ ಜೀವನ ಸಾಗಿಸಿ" ~ಅದಕ್ಕು ಉಂಟು ಮದ್ದು

"ಕ್ಯಾನ್ಸರ್ ರೋಗಕ್ಕೆ ಅಂಜದೆ, ಧೈರ್ಯದಿಂದ ಜೀವನ ಸಾಗಿಸಿ" ಅದಕ್ಕು ಉಂಟು ಮದ್ದು 

ಲೇಖನ: ಬಸವರಾಜ ಎಮ್ ಯರಗುಪ್ಪಿ,        ಬಿ ಆರ್ ಪಿ ಶಿರಹಟ್ಟಿ, ಸಾ.ಪೊ ರಾಮಗೇರಿ, ತಾಲ್ಲೂಕು ಲಕ್ಷ್ಮೇಶ್ವರ, ಜಿಲ್ಲಾ ಗದಗ, 

ಕ್ಯಾನ್ಸರ್‌ ಮಾಹಾ ಮಾರಿ ವಿಶ್ವದಾದ್ಯಂತ ಲಕ್ಷಾಂತರ ಜೀವಗಳನ್ನೇ ಬಲಿ ತೆಗೆದುಕೊಂಡಿದೆ.  ಸಹಸ್ರಾರು ಕುಟುಂಬಗಳನ್ನು ಬೀದಿಪಾಲು ಮಾಡಿದೆ. ಜಾಗೃತಿಯೇ ಇದಕ್ಕೆ ಮಹಾಮದ್ದು.  ಫೆಬ್ರುವರಿ 04: ವಿಶ್ವ ಕ್ಯಾನ್ಸರ್ ದಿನದ ನಿಮಿತ್ತ ವಿಶೇಷ ಲೇಖನ ಬರೆದಿದ್ದಾರೆ ಬಸವರಾಜ ಎಮ್ ಯರಗುಪ್ಪಿಯವರು.

ಮೊನ್ನೆ ತಾನೇ ಸುದ್ದಿ ಮಾಧ್ಯಮಗಳಲ್ಲಿ ಬಾಲಿವುಡ್ ನ ಪೂನಮ್ ಪಾಂಡೆ ಎಂಬ ರೂಪದರ್ಶಿ,‌ ನಟಿ   ಕ್ಯಾನ್ಸರ್ ಗೆ  ಬಲಿಯಾಗಿದ್ದಾಳೆ ಎಂಬ ಸುಳ್ಸುದ್ದಿ ದೊಡ್ಡ ಸದ್ದು ಮಾಡಿತ್ತು. ಅದೇನೆ ಇರಲಿ ಈ ರೋಗವಂತೂ ಅಪಾಯಕಾರಿ.

"ಕ್ಯಾನ್ಸರ್ ನಮ್ಮ ಜೀವನದ ಒಂದು ಭಾಗವಾಗಿದೆಯೇ ಹೊರತೂ ಅದು ನಮ್ಮ ಇಡೀ ಜೀವನವಲ್ಲ"ಎಂದು ನಿಕ್ ಪ್ರೊಚಾಕ್ ಹೇಳಿರುವಂತೆ ಕ್ಯಾನ್ಸರ್ ರೋಗಕ್ಕೆ ಅಂಜದೆ ಧೈರ್ಯದಿಂದ ಜೀವನ ಸಾಗಿಸಬೇಕು ಹಾಗು ಕ್ಯಾನ್ಸರ್ ಒಂದು ಪದ, ಒಂದು ವಾಕ್ಯವಲ್ಲ ಎಂದು ಹೇಳಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ಯಾವ ವ್ಯಕ್ತಿಗೆ ಯಾವ ಕಾಯಿಲೆ ಇದೆ ಅಥವಾ ಯಾವ ವ್ಯಕ್ತಿ ಕಾಯಿಲೆಗೆ ತುತ್ತಾಗುತ್ತಾನೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಬದಲಾಗುತ್ತಿರುವ ಕಾಲದಲ್ಲಿ,ರೋಗಗಳು ಒಂದರ ನಂತರ ಒಂದರಂತೆ ಬರುತ್ತಿವೆ. ಅವು ಜನರನ್ನು ಹೆದರಿಸುತ್ತಿವೆ. 2020 ರಲ್ಲಿ ಕರೋನಾವೈರಸ್ (ಕೋವಿಡ್ 19) ಎಂಬ ಸಾಂಕ್ರಾಮಿಕ ರೋಗವು ಇಡೀಜಗತ್ತನ್ನು ಬೆಚ್ಚಿಬೀಳಿಸಿದೆ.ಈಗಲೂ ಅದೇ ಅಂಜಿಕೆಯಲ್ಲಿ ಜನರು ಜೀವನವನ್ನು ನಡೆಸುತ್ತಿದ್ದಾರೆ. ಇಂತಹ ಭಯಾನಕ ಕಾಯಿಲೆಗಳಲ್ಲಿ ಕ್ಯಾನ್ಸರ್ (ಅರ್ಬುದ) ಕೂಡ ಒಂದು.

ವಿಶ್ವದ ಎಲ್ಲಾ ಕಾಯಿಲೆಗಳಲ್ಲಿ ಕ್ಯಾನ್ಸರ್ ಅತ್ಯಂತ ಅಪಾಯಕಾರಿಯಾಗಿದೆ. ಈ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವದಾದ್ಯಂತ "ವಿಶ್ವ ಕ್ಯಾನ್ಸರ್" ದಿನವನ್ನು ಆಚರಿಸಲಾಗುತ್ತದೆ. 

ಕನ್ನಡದಲ್ಲಿ ಕ್ಯಾನ್ಸರ್ ಅನ್ನು ಅರ್ಬುದ ರೋಗ ಎಂದು ಕರೆಯಲಾಗುತ್ತದೆ.ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಗೆ ಬಂದಾಗ, ಅದರ ತಡೆಗಟ್ಟುವಿಕೆಯ ಮೊದಲ ಹೆಜ್ಜೆಯೇ ಜಾಗೃತಿಯಾಗಿದೆ.ನಾವು ಎಲ್ಲದಕ್ಕೂ ಪರಿಹಾರವನ್ನು ಕಂಡುಕೊಂಡಿದ್ದೇವೆ ಆದರೆ ಇನ್ನೂ ಕ್ಯಾನ್ಸರ್ ರೋಗಿಗಳ ಮಾರಣಾಂತಿಕ ಸಮಸ್ಯೆ ಹಾಗೇ ಉಳಿದಿದೆ.ಇದು ನಮ್ಮೆಲ್ಲರಲ್ಲಿ ಅದರ ಬಗ್ಗೆ ಹುಟ್ಟುಹಾಕುವ ಅರಿವಿನ ಗುರಿಯನ್ನು ಹೊಂದಬೇಕಾಗಿದೆ.ಮೊದಲು ಕ್ಯಾನ್ಸರ್ ರೋಗದ ತೀವ್ರತೆಯ ಬಗ್ಗೆ ತಿಳುವಳಿಕೆಯನ್ನು ನೀಡಬೇಕಾಗಿದೆ ಮತ್ತು ನಂತರ ಅದರ ತಡೆಗಟ್ಟುವಿಕೆ, ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯನ್ನು ಉತ್ತೇಜಿಸಲು ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗಿದೆ. ಆದ್ದರಿಂದ ನಾವೆಲ್ಲರೂ ಅದರಲ್ಲಿ ನಮ್ಮ ಕೊಡುಗೆಯನ್ನು ನೀಡುತ್ತೇವೆ ಮತ್ತು ಉತ್ತಮವಾದ ಜಾಗತಿಕ ಆರೋಗ್ಯ ಪರಿಸರಕ್ಕೆ ದಾರಿ ಮಾಡಿಕೊಡುತ್ತೇವೆ ಎಂದು ಶಪಥಗೈಯುವಂತರಾಗೋಣ. 

#ವಿಶ್ವ ಕ್ಯಾನ್ಸರ್ ದಿನ ಆಚರಿಸುವುದರ ಹಿನ್ನಲೆ ಮತ್ತು ಉದ್ದೇಶಗಳು:

ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ ಪ್ರತಿ ವರ್ಷ ಕ್ಯಾನ್ಸರ್ ದಿನವನ್ನು ಆಚರಿಸುತ್ತದೆ.ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶ.ಈ ದಿನವನ್ನು ಫೆಬ್ರವರಿ 04, 1933 ರಂದು ಆಚರಿಸಲು ಮೊದಲ ಬಾರಿಗೆ ಪ್ರಾರಂಭಿಸಲಾಯಿತು. ಇದರ ಹಿಂದಿನ ಉದ್ದೇಶವೆಂದರೆ ಈ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಅದನ್ನು ತಪ್ಪಿಸುವ ಮಾರ್ಗೋಪಾಯಗಳ ಬಗ್ಗೆ ಜಾಗೃತಿಗೊಳಿಸುವುದು.  ದೇಹದಲ್ಲಿ ಯಾವುದೇ ರೀತಿಯ ಅಸಾಮಾನ್ಯ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ದೇಹದಲ್ಲಿ ಕ್ಯಾನ್ಸರ್ ಗಡ್ಡೆಗಳು ಬೆಳೆಯಲು ಆರಂಭಿಸಿದರೆ, ಆಗ ಅದು ದೇಹವಿಡಿ ವ್ಯಾಪಿಸಿ ಹಾನಿ ಉಂಟು ಮಾಡುತ್ತದೆ. ಇದು ಹೊಸ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ.ಕ್ಯಾನ್ಸರ್ ಗಡ್ಡೆಗಳನ್ನು ಚಿಕಿತ್ಸೆ ಮೂಲಕ ನಾಶ ಮಾಡಿ ಅದು ಮತ್ತೆ ಬೆಳೆಯದಂತೆ ಮಾಡಲಾಗುತ್ತದೆ.

#ಅರ್ಬುದ ರೋಗಕ್ಕೆ ಕಾರಣಗಳೇನು ...? 

ಕ್ಯಾನ್ಸರ್ ರೋಗಕ್ಕೆ ನಿರ್ದಿಷ್ಟ ಕಾರಣಗಳನ್ನು ಗುರುತಿಸಲು ಸಾಧ್ಯವಾಗದಿದ್ದರೂ ಹಲವು ಕಾರಣಗಳು ಸೇರಿ ಕ್ಯಾನ್ಸರ್ ಸಂಭವಿಸುತ್ತವೆ.ಜೊತೆಗೆ ಪರಿಸರದಲ್ಲಿನ ಪರಿಸ್ಥಿತಿಗಳು ಮುಖ್ಯ ಕಾರಣ.ವಿಕಿರಣ, ಕೆಲವು ವೈರಸ್ಸೋಂಕುಗಳು, ಜೀವಕೋಶಗಳ ಕಾರ್ಯಪ್ರವೃತ್ತಿಯನ್ನು ಬದಲಿಸಿ ಕ್ಯಾನ್ಸರ್ ಕಾರಕಗಳನ್ನಾಗಿ ಮಾಡುತ್ತದೆ. ಇದರೊಂದಿಗೆ ವಯಸ್ಸು, ಲಿಂಗ, ಪರಿಸರ, ವಂಶಾವಳಿ ಮುಂತಾದವು ಕೂಡ ಕ್ಯಾನ್ಸರ್ಕಾರಕವಾಗಿ ಪರಿಣಮಿಸಬಹುದು.

ತಂಬಾಕಿನ ಸೇವನೆಯಿಂದ ಹಿಡಿದು ಧೂಮಪಾನ, ಮದ್ಯಪಾನ, ತಪ್ಪು ಆಹಾರಪದ್ಧತಿಗಳು, ಎ ಹಾಗೂ ಸಿ ವಿಟಮಿನ್ ಕೊರತೆ, ಆಹಾರದಲ್ಲಿ ಕೃತಕ ರಾಸಾಯನಿಕಗಳ ಹೆಚ್ಚುಹೆಚ್ಚು ಬಳಕೆ, ಬದಲಾದ ಜೀವನಶೈಲಿಯಿಂದ ಹೆಚ್ಚುತ್ತಿರುವ ಬೊಜ್ಜು ಹಾಗೂ ಹೆಚ್ಚಾಗುತ್ತಿರುವ ಹಾರ್ಮೋನು ಅಸಮತೋಲನ, ಹೆಚ್ಚುತ್ತಿರುವ ರಾಸಾಯನಿಕ ಸೌಂದರ್ಯ ವರ್ಧಕಗಳ ಬಳಕೆ ಹಾಗೂ ಸೂರ್ಯನ ಅತಿಯಾದ ಅಲ್ಟ್ರಾವೈಲೆಟ್ ಕಿರಣಗಳಿಗೆ ಹಾಗೂ ಇತರ ವಿಕಿರಣ ವಸ್ತುಗಳಿಗೆ ತೆರೆದುಕೊಳ್ಳುವುದು ಹೀಗೆ ಕ್ಯಾನ್ಸರ್ಗೆ ಹತ್ತುಹಲವು ಕಾರಣಗಳಾಗಿವೆ ಎಂದು ವೈದ್ಯರು ಹೇಳುತ್ತಾರೆ.

#ಕ್ಯಾನ್ಸರ್ ತಡೆಗಟ್ಟುವುದು ಹೇಗೆ..?

 

*ತಂಬಾಕುಗೆ ಸರ್ಕಾರದ ನಿಯಂತ್ರಣಾ ವಿಧಾನಗಳು:

ಸರ್ಕಾರ ಈ ಕೆಳಗಿನಂತೆ ಕೆಲವು ನಿಯಂತ್ರಣಾ ವಿಧಾನಗಳನ್ನು ಹಾಕಿಕೊಂಡರೆ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು. 

-ಎಲ್ಲಾ ತಂಬಾಕು ಉತ್ಪನ್ನಗಳಲ್ಲಿ ನಿಯಮಿತವಾಗಿ ತೆರಿಗೆಗಳನ್ನು ಹೆಚ್ಚಿಸುವುದು.

-ಹೊಸ ತಂಬಾಕು ಉತ್ಪನ್ನಗಳ ಪರಿಚಯವನ್ನು ನಿಷೇಧಿಸುವುದು. 

-ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕಿನ ಬಳಕೆಯನ್ನು ನಿಷೇಧಿಸಬೇಕು.                           

-ಆಲ್ಕೊಹಾಲ್ ಸೇವನೆಯನ್ನು ತಪ್ಪಿಸುವುದು. 

-ಆಹಾರದಲ್ಲಿ ತರಕಾರಿ, ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಸಂಭಾವ್ಯ ಕ್ಯಾನ್ಸರ್​ ಲಕ್ಷಣಗಳನ್ನು ತಡೆಗಟ್ಟುತ್ತವೆ. 

-ಕಡಿಮೆ ಕೊಬ್ಬಿನ ಆಹಾರ ಸೇವನೆ. 

-ನಿಯಮಿತ ವ್ಯಾಯಾಮ. 

-ಜೀವನದುದ್ದಕ್ಕೂ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು. 

ಒಟ್ಟಾರೆಯಾಗಿ ನಾವೆಲ್ಲರೂ ಒಂದಾಗಿ ಸಮಾಜದಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಬದಲಾವಣೆ ತರಲು ಪ್ರಯತ್ನಿಸೋಣ.ಕ್ಯಾನ್ಸರ್ ವಿರುದ್ಧ ಸಮರ ಸಾರಿರುವ ನಮ್ಮ ವೈದ್ಯಲೋಕದ ಸ್ಥೈರ್ಯವನ್ನು ಹೆಚ್ಚಿಸೋಣ,ಕ್ಯಾನ್ಸರ್ ಗುಣಪಡಿಸಲು ಪ್ರಯತ್ನಿಸುತ್ತಿರುವ ವೈದ್ಯಲೋಕಕ್ಕೆ ನಮ್ಮ ಬೆಂಬಲ ನೀಡೋಣ, ಕ್ಯಾನ್ಸರ್ ನಿಂದ ಬಳಲುತ್ತಿರುವವರಲ್ಲಿ ಆತ್ಮವಿಶ್ವಾಸ ಮೂಡಿಸೋಣ. ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತರಾಗೋಣ. 

No comments:

Post a Comment