ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, June 4, 2024

ಜೂನ್ 2024 ರ ಲೇಖನಗಳು

ಜೂನ್ 2024 ರ ಲೇಖನಗಳು

1. ಡಯಾಟಮ್ ಗಳು ಮರೆಯದ ವಿಜ್ಞಾನಿ ಹೆಚ್.ಪಿ. ಗಾಂಧಿ  : ಡಾ.ಟಿ.ಎ.ಬಾಲಕೃಷ್ಣ ಅಡಿಗ 

2. ಒರಂಗುಟಾನ್‌ ಎಂಬ ಗುರುವೂ ವಿಜ್ಞಾನಿಗಳೆಂಬ ಶಿಷ್ಯರೂ!!! : ರಾಮಚಂದ್ರ ಭಟ್. ಬಿ. ಜಿ 

3. ಅಲ್ಗೋಲ್:ಅತಿಲೋಕ ಸುಂದರಿಯೋ? ಮತಿಗೇಡಿ ರಕ್ಕಸಿಯೋ? : ಸುರೇಶ ಸಂಕೃತಿ,

4. "ಹಸಿರು ಪರಿಸರ; ನಮ್ಮೆಲ್ಲರ ಉಸಿರು" : ಬಸವರಾಜ ಎಮ್ ಯರಗುಪ್ಪಿ 

5. ಕಮರದ ಕಥೆ. : ತಾಂಡವ ಮೂರ್ತಿ 

6. ಸಸ್ಯಗಳಲ್ಲಿನ ಸಂವಹನ- ಕೋಶ ಸಂಕೇತದ ಸಂಕೀರ್ಣ ಜಾಲ. : ರೂಪ. ಬಿ. ಎನ್ 

7. ಕಪೋಕ : ರಮೇಶ್ ಬಳ್ಳಾ

8. ಸೈಂಟೂನ್ ಗಳು :  ಜಯಶ್ರೀ ಶರ್ಮ 





ಡಯಾಟಮ್ ಗಳು ಮರೆಯದ ವಿಜ್ಞಾನಿ ಹೆಚ್.ಪಿ. ಗಾಂಧಿ

 ಡಯಾಟಮ್ ಗಳು ಮರೆಯದ ವಿಜ್ಞಾನಿ ಹೆಚ್.ಪಿ. ಗಾಂಧಿ

ಡಾ.ಟಿ.ಎ.ಬಾಲಕೃಷ್ಣ ಅಡಿಗ  

ವಿಜ್ಞಾನ ಸಂವಹನಕಾರರು



  ಒಂದು ಸಣ್ಣ ಕೊಳದಿಂದ ಪ್ರಾರಂಭಿಸಿ ಸಾಗರಗಳವರೆಗೆ ಹಮ್ಮಿಕೊಂಡಿರುವ ಜಲಪರಿಸರ ವ್ಯವಸ್ಥೆಗಳಲ್ಲಿ ನೀರಿನ ಮೇಲ್ಭಾಗದಲ್ಲಿ ತೇಲಾಡುತ್ತಿರುವ ಸೂಕ್ಷ್ಮಜೀವಿಗಳಾದ ಪ್ಲವಕಗಳ (planktons) ಬಗ್ಗೆ ನೀವು ಕೇಳಿದ್ದೀರಿ. ಇವುಗಳಲ್ಲಿ ಸಸ್ಯಪ್ಲವಕಗಳು (phytoplanktons) ಹಾಗೂ ಪ್ರಾಣಿಪ್ಲವಕಗಳು (zooplanktons)ಎಂಬ ಎರಡು ಗುಂಪುಗಳಿವೆ. ಸಸ್ಯಪ್ಲವಕಗಳು ದ್ಯುತಿಸಂಶ್ಲೇಷಣೆ ಪ್ರಕ್ರಿಯೆಯ ಮೂಲಕ ಸ್ವಯಂ ಆಹಾರ ತಯಾರಿಸಿಕೊಳ್ಳುತ್ತವೆ. ಈ ಪ್ರಕ್ರಿಯೆಯ ಭಾಗವಾಗಿ ವಾತಾವರಣಕ್ಕೆ ಆಕ್ಸಿಜನ್ ಬಿಡುಗಡೆ ಮಾಡುತ್ತವೆ. ಈ ಗುಂಪಿನ ಪ್ರಮುಖ ಉದಾಹರಣೆಗಳೆಂದರೆ,ಏಕಕೋಶ ಜೀವಿಗಳಾದ ಡಯಾಟಮ್ ಗಳು(diatoms). ಪ್ರಮುಖವಾಗಿ ತ್ರಿಜ್ಯಸಮ್ಮಿತಿ(radialsymmetry) ಹಾಗೂ ದ್ವಿಪಾರ್ಶ್ವಸಮ್ಮಿತಿ(bilateral symmetry)ಯನ್ನು ಹೊಂದಿರುವ ಎರಡು ಬಗೆಯ ಡಯಾಟಮ್ ಗಳನ್ನು ಗುರುತಿಸಬಹುದು.


ಚಿತ್ರ 1.ಡಯಾಟಮ್ ನ ಕೆಲವು ವಿಧಗಳು

ತಮ್ಮ ಜೀವಕೋಶವನ್ನಾವರಿಸಿರುವ ಸಿಲಿಕಾಯುಕ್ತ ಕವಚದ ಬಣ್ಣ, ಆಕಾರ ಹಾಗೂ ವಿನ್ಯಾಸಗಳಿಂದಾಗಿ ನೀರಿನ ಮೆಲ್ಭಾಗದಲ್ಲಿ ಹೊಳೆಯುತ್ತಿರುವಂತೆ ಕಾಣುವ ಡಯಾಟಮ್ ಗಳನ್ನು ಈ ಕಾರಣಕ್ಕಾಗಿ "ಸಸ್ಯಲೋಕದ ಆಭರಣಗಳು" ಎಂದು ಪರಿಗಣಿಸಲಾಗುತ್ತದೆ.  

ಒಂದು ಅಂದಾಜಿನ ಪ್ರಕಾರ, ವಾತಾವರಣಕ್ಕೆ ಬಿಡುಗಡೆಯಾಗುವ ಆಕ್ಸಿಜನ್ ನ ಒಟ್ಟು ಪ್ರಮಾಣದ ಶೇ 75ರಷ್ಟನ್ನು ಈ ಡಯಾಟಮ್ ಗಳು ಉತ್ಪಾದಿಸುತ್ತವೆ. ಆಂದರೆ, ಕಳೆದ 15 ನಿಮಿಷಗಳಲ್ಲಿ ನೀವು ದೇಹದ ಒಳಗಡೆ ಎಳೆದುಕೊಂಡ ನಾಲ್ಕು ಉಸಿರಿನಲ್ಲಿ, ಒಂದು ಉಸಿರಿನಲ್ಲಿರುವಷ್ಟು ಆಕ್ಸಿಜನ್ ಡಯಾಟಮ್ ಗಳಿಂದ ಬಂದಿರುತ್ತದೆ ! ಅಲ್ಲಿಗೆ, ಇವು ಎಷ್ಟು ಉಪಯುಕ್ತ ಜೀವಿಗಳು ಎಂಬುದು ನಿಮಗೆ ಮನದಟ್ಟಾಗಿರಬೇಕು

ಡಯಾಟಮ್ ಗಳ ಸುಮಾರು 20 ಲಕ್ಷ  ಪ್ರಬೇಧಗಳು ಜಗತ್ತಿನಾದ್ಯಂತ ಹಂಚಿಹೋಗಿರಬಹುದೆಂಬ ಒಂದು ಅಂದಾಜು ಇದೆಯಾದರೂ, ಕೇವಲ 30,000 ಪ್ರಬೇಧಗಳನ್ನು ಮಾತ್ರ ಅಧಿಕೃತವಾಗಿ ಗುರುತಿಸಲು ಇದುವರೆಗೆ ವಿಜ್ಞಾನಿಗಳಿಗೆ ಸಾಧ್ಯವಾಗಿದೆ.

ನಮ್ಮ ದೇಶದಲ್ಲಿ ಡಯಾಟಮ್ ನ ಬಗೆಗಳು ಹಾಗೂ ಅವುಗಳ ಹಂಚಿಕೆಯ ವಿಸ್ತಾರದ ಬಗ್ಗೆ ಅತಿ ದೀರ್ಘ ಕಾಲ ಸಂಶೋಧನೆ ನಡೆಸಿದ ಅಪ್ಪಟ ಭಾರತೀಯ ವಿಜ್ಞಾನಿಯೊಬ್ಬರನ್ನು ನಾವು ಸಂಪೂರ್ಣವಾಗಿ ಮರೆತುಬಿಟ್ಟಿರುವುದು ಭಾರತೀಯ ವಿಜ್ಞಾನ ಕ್ಷೇತ್ರದಲ್ಲಿನ ಒಂದು ದುರಂತ.

ಪ್ರೊ.ಹೇಮೇಂದ್ರಕುಮಾರ್ ಪೃಥ್ವಿರಾಜ್ ಗಾಂಧಿ (ಹೆಚ್.ಪಿ.ಗಾಂಧಿ) 46ವರ್ಷಗಳಷ್ಟು ದೀರ್ಘಕಾಲ ದೇಶದಾದ್ಯಂತ ಸಂಚರಿಸಿ, ವಿವಿದ ಪ್ರದೇಶಗಳಲ್ಲಿ ಡಯಾಟಮ್ ಪ್ರಬೇಧಗಳನ್ನು ಸಂಗ್ರಹಿಸಿ ಅವುಗಳ ಬಗ್ಗೆ ನಿರಂತರ ಸಂಶೋಧನೆ ನಡೆಸಿದ ಮಹಾ ವಿಜ್ಞಾನಿ.


ಚಿತ್ರ 2. ಹೆಚ್.ಪಿ.ಗಾಂಧಿ 

ನಿವೃತ್ತಿಯ ನಂತರವೂ ಅವರಲ್ಲಿನ ವಿಜ್ಞಾನಿ ವಿಶ್ರಾಂತಿ ಪಡೆದಿರಲಿಲ್ಲ. ವಿಶೇಷವೆಂದರೆ, 46 ವರ್ಷಗಳ   ಅವಧಿಯಲ್ಲಿ ಗಾಂಧಿ ಅವರು ಡಯಾಟಮ್ ಗಳ 300ಕ್ಕೂ ಹೆಚ್ಚು ಹೊಸ ಪ್ರಬೇಧಗಳನ್ನು ಗುರುತಿಸಿ ಹೆಸರಿಸಿದ್ದಾರೆ !  ಇಂಥ ಒಂದು ದಾಖಲೆಯನ್ನು ಮೀರಿಸಲು ಈ ಸಂಶೋಧನಾ ಕ್ಷೇತ್ರದಲ್ಲಿ ಯಾರಿಗೂ ಸಾಧ್ಯವಾಗಿಲ್ಲ. 

ಸಸ್ಯವಿಜ್ಞಾನಿ ಹೆಚ್.ಪಿ. ಗಾಂಧಿ ಜನಿಸಿದ್ದು 1920ರ ಆಗಸ್ಟ್ 20ರಂದು,ರಾಜಾಸ್ಥಾನದ ಪ್ರತಾಪ್ ಗರ್ ನಲ್ಲಿ. ಅಲ್ಲಿಯೇ ತಮ್ಮ ಪ್ರೌಢಶಿಕ್ಷಣ ಮುಗಿಸಿ, ಆಗ್ರಾದಲ್ಲಿ ಇಂಟರ್ಮೀಡಿಯಟ್ ಶಿಕ್ಷಣ ಪೂರೈಸಿದರು. ಮುಂದೆ, ಆಗಿನ ಬಾಂಬೆಯಲ್ಲಿದ್ದ ವಿಲ್ಸನ್ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಷಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದರು. 1944ರಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿ, ಶೈವಲಗಳ ಮೇಲೆ ತಮ್ಮ ಸಂಶೋಧನೆಯನ್ನು ಪ್ರಾರಂಭಿಸಿದರು. 1960ರ ವೇಳೆಗೆ ಶೈವಲಗಳಲ್ಲಿ 40 ಹೊಸ ಜಾತಿಗಳನ್ನು,10 ಹೊಸ ಪ್ರಬೇಧಗಳನ್ನು ಹಾಗೂ 21 ಹೊಸ ತಳಿಗಳನ್ನು ಅವರು ಗುರುತಿಸಿ ದಾಖಲಿಸಿದ್ದರು ! ಈ ವೇಳೆಗಾಗಲೇ ಗಾಂಧಿ ಅವರಿಗೆ ಡಯಾಟಮ್ ಗಳ ಬಗ್ಗೆ ಒಲವು ಬೆಳೆದಿತ್ತು. ಡಯಾಟಮ್ ಗಳ ರೂಪ, ರಚನಾ ವಿನ್ಯಾಸ ಹಾಗೂ ವಿಪುಲತೆ ಅವರನ್ನು ಈ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವಂತೆ ಪ್ರೇರೇಪಿಸಿದ್ದುವು. ಡಯಾಟಮ್ ಗಳ ಬಗೆಗಿನ ಸಂಶೋಧನೆಗೆ ಗಾಂಧಿ ಅವರಿಗಿದ್ದ ಆಸಕ್ತಿಯನ್ನು ಸಹೋದ್ಯೋಗಿಗಳು ಮೆಚ್ಚಿ, ಬೆನ್ನು ತಟ್ಟುವ ಬದಲು ಆಡಿಕೊಡದ್ದೇ ಹೆಚ್ಚು. ಕೆಲವರಂತೂ, ಇವರನ್ನು ('ಆ ನೂರಿಪ್ಪತ್ತರವನು') ಎಂದೇ ಕರೆಯುತ್ತಿದ್ದರಂತೆ. ಆಗ ಗಾಂಧಿ ಅವರಿಗೆ ತಿಂಗಳಿಗೆ ನೂರಿಪ್ಪತ್ತು ರುಪಾಯಿ ಸಂಬಳ ಬರುತ್ತಿತ್ತಂತೆ !

ಗಾಂಧಿ ಅವರ ವೃತ್ತಿ ಜೀವನದ ಇನ್ನೊಂದು ದುರಂತವೆಂದರೆ, ಅವರ ಸಂಶೋಧನಾ ಮಾರ್ಗದರ್ಶಕರ ಹಾಗೂ ಸಹೋದ್ಯೋಗಿಗಳ ಜೊತೆಗೆ ಉಂಟಾಗುತ್ತಿದ್ದ ಮನಸ್ತಾಪಗಳು. ಇದರ ಪರಿಣಾಮವಾಗಿ, ಅವರು ಆಗಾಗ್ಗೆ ವರ್ಗಾವಣೆಯ ಶಾಪಕ್ಕೆ ಗುರಿಯಾಗುತ್ತಿದ್ದರು. ಇದರಿಂದ ಗಾಂಧಿ ಧೃತಿಗೆಡಲಿಲ್ಲ. ವರ್ಗಾವಣೆಗಳನ್ನೇ ಹೊಸ ಅವಕಾಶಗಳನ್ನಾಗಿ ಬಳಸಿಕೊಂಡು, ಅಲ್ಲಿನ ತಮ್ಮ ವಿದ್ಯಾರ್ಥಿಗಳ ಜೊತೆಗೆ ಕ್ಷೇತ್ರ ಭೇಟಿಗೆ(field visit) ಹೋಗಿ ಡಯಾಟಮ್ ನ ಮಾದರಿಗಳನ್ನು ಸಂಗ್ರಹಿಸಿ ಸಂಶೋಧನೆಗೆ ಬಳಸಿಕೊಳ್ಳುತ್ತಿದ್ದ ಛಲ ಅವರದಾಗಿತ್ತು.

ಯಾವುದೇ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಧನಸಹಾಯ ಪಡೆಯದೆ ತಮ್ಮ ಸಂಶೋಧನೆಯನ್ನು ಮುಂದುವರೆಸಿದ ಹೆಗ್ಗಳಿಕೆ ಗಾಂಧಿ ಅವರದ್ದು. ಹಣದ ಕೊರತೆ ಉಂಟಾದಾಗ ಸ್ಥಳೀಯ ಹಣ್ಣಿನ ಮಾರುಕಟ್ಟೆಯಿಂದ ಖಾಲಿ ಮರದ ಪೆಟ್ಟಿಗೆಗಳನ್ನು ತಂದು ಅದರಿಂದ ಸಣ್ಣ ಪೆಟ್ಟಿಗೆಗಳನ್ನು ತಾವೇ ತಯಾರಿಸಿಕೊಂಡು ಅವುಗಳಲ್ಲಿತಾವು ತಯಾರಿಸಿಟ್ಟಿದ್ದ ಸಂಶೋಧನಾ ಸ್ಲೈಡ್ ಗಳನ್ನು (slides) ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಒಂದು ಬದಿ ಖಾಲಿ ಇದ್ದ ಹಾಳೆಗಳನ್ನು ಕೊಂಡುಕೊಂಡು ಅದರಲ್ಲಿ ತಮ್ಮ ಸಂಶೋಧನೆಗೆ ಸಂಬಂಧಿಸಿದ ಚಿತ್ರಗಳನ್ನು ಹಾಗೂ ವಿವರಗಳನ್ನು  ಬರೆದಿಡುತ್ತಿದ್ದರು. 

ಆಸ್ಪತ್ರೆಗಳಿಂದ ಖಾಲಿ ವಯಲ್ ಗಳನ್ನು(vials) ಕೇಳಿ ಪಡೆದು ಅದರಲ್ಲಿ ತಾವು ಸಂಗ್ರಹಿಸಿದ ಡಯಾಟಮ್ ಮಾದರಿಗಳನ್ನು ಇಟ್ಟುಕೊಳ್ಳುತ್ತಿದ್ದರು. ಯಾವುದಕ್ಕೂ ಯಾರನ್ನೂ ದೂರದೆ ತಮ್ಮ ಸಂಶೋಧನೆಯನ್ನು ತಾಳ್ಮೆಯಿಂದ, ತಾದಾತ್ಮತೆಯಿಂದ ಮುಂದುವರೆಸಿದ ವಿಶಿಷ್ಠ ವ್ಯಕ್ತಿತ್ವ ಅವರದ್ದು.

ಇವೆಲ್ಲ ಇತಿಮಿತಿಗಳ ನಡುವೆಯೂ ತಮ್ಮ ಸಂಶೋಧನೆಗೆ ಇಲೆಕ್ಟ್ರಾನ್ ಮೈಕ್ರೋಸ್ಕೋಪ್ ಬಳಸಿದ ಭಾರತೀಯ ವಿಜ್ಞಾನಿಗಳಲ್ಲಿ ಗಾಂಧಿ ಮೊದಲಿಗರು. ಹೊಸ ಪ್ರಬೇಧಗಳ ಪತ್ತೆಯ ಜೊತೆಗೆ, ಡಯಾಟಮ್ ಗಳ ವರ್ಗೀಕರಣ, ಪರಿಸರದ ಹೊಂದಾಣಿಕೆ, ಭೌಗೋಳಿಕ ಹಂಚಿಕೆ ಮುಂತಾದ ಹಲವು ಅಂಶಗಳ ಜೊತೆಗೆ, ಶಿಲಾಪದರಗಳಲ್ಲಿನ ಪಳೆಯುಳಿಕೆ ಡಯಾಟಮ್ ಗಳ ಬಗ್ಗೆ ಗಾಂಧಿ ಅವರು ಸಂಶೋಧನೆ ನಡೆಸಿದ್ದಾರೆ. ಡಯಾಟಮ್ ಗಳಿಗೆ ಸಂಬಂಧಿಸಿದಂತೆ ಸುಮಾರು 35 ಸಂಶೋಧನಾ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆ. ಅವರ ಸಂಶೋಧನೆಯ ಪ್ರಮುಖ ಅಂಶಗಳನ್ನು ಹಲವು ದೇಶಗಳ ಖ್ಯಾತನಾಮ ವಿಜ್ಞಾನಿಗಳು ತಮ್ಮ ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ. ಖ್ಯಾತಿವೆತ್ತ ಡಯಾಟಮ್ ವಿಜ್ಞಾನಿಗಳಾದ ಹಸ್ಟೆಡ್ಟ್(Hustedt),  ಚೊಲೊನೋಕಿ (Cholonoki), ಜಾನ್ ಲಂಡ್(John Lund), ರುಥ್ ಪ್ಯಾಟ್ರಿಕ್(Ruth Patrick), ಮುಂತಾದವರು ಗಾಂಧಿ ಅವರೊಂದಿಗೆ ವಿಷಯ ವಿನಿಮಯಕ್ಕಾಗಿ ಪತ್ರಮುಖೇನ ನಿರಂತರ ಸಂಪರ್ಕದಲ್ಲಿದ್ದರು.

ಪುಣೆಯ ಅಗರ್ಕರ್ ಸಂಶೋಧನಾ ಸಂಸ್ಥೆಯಲ್ಲಿ ಡಯಾಟಮ್ ಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಕಾರ್ತಿಕ್ ಬಾಲಸುಬ್ರಮಣ್ಯಮ್ ಎಂಬ ವಿಜ್ಞಾನಿ ಗಾಂಧಿ ಅವರ ಸಂಶೋಧನೆಗಳಿಂದ ಪ್ರಭಾವಿತರಾಗಿ ಅವರನ್ನು 2006ರಲ್ಲಿ ಗುಜರಾತ್ ನ ಜುನಾಗಡ್ ನಲ್ಲಿರುವ ಅವರ ಮನೆಗೆ ಭೇಟಿ ನೀಡುತ್ತಾರೆ. ಮನೆಯಲ್ಲಿ ಹಾಸಿಗೆ ಹಿಡಿದಿದ್ದ ಗಾಂಧಿ ಅವರು ಮೊದಲಿಗೆ ಯಾವುದೇ ಮಾಹಿತಿಯನ್ನು ಕಾರ್ತಿಕ್ ಅವರೊಂದಿಗೆ ಹಂಚಿಕೊಳ್ಳಲು ನಿರಾಕರಿಸುತ್ತಾರೆ. ಕಾರ್ತಿಕ್ ತಮ್ಮ ಲ್ಯಾಪ್ ಟಾಪ್ ತೆಗೆದು ವಿವರಿಸಲು ಹೊರಟಾಗ, ಅದರಲ್ಲಿ ಸ್ಕ್ರೀನ್ ಸೇವರ್ ಆಗಿ ಅವರು ಬಳಸಿದ್ದ ವಿವಿಧ ಡಯಾಟಮ್ ಗಳ ವರ್ಣಚಿತ್ರಗಳನ್ನು ಗಮನಿಸಿದ ಗಾಂಧಿ ಅವರು ಅವುಗಳನ್ನು ಒಂದೊಂದಾಗಿ ಹೆಸರಿಸುತ್ತಾ ಹೋಗುತ್ತಾರೆ !. ಆನಂತರವೇ, ಗಾಂಧಿ ಅವರು ತಮ್ಮ ಸಂಶೋಧನೆಯ ಕಥೆ ಹಾಗೂ ವ್ಯಥೆಯನ್ನು ಕಾರ್ತಿಕ್ ಅವರ ಮುಂದೆ ಬಿಚ್ಚಿಡುತ್ತಾರೆ. ಅಷ್ಟೇ ಅಲ್ಲ, ತಾವು ಸಂಗ್ರಹಿಸಿ ಮನೆಯಲ್ಲಿಟ್ಟುಕೊಂಡಿದ್ದ ಡಯಾಟಮ್ ಮಾದರಿಗಳನ್ನು ಹಾಗು ತಯಾರಿಸಿದ್ದ ಸ್ಲೈಡ್ ಗಳನ್ನು ಕಾರ್ತಿಕ್ ಅವರಿಗೆ ಹಸ್ತಾಂತರಿಸುತ್ತಾರೆ. ತಮ್ಮ ಸಂಶೋಧನೆಗೆ ಅವುಗಳನ್ನು ಅಕರವಾಗಿ ಬಳಸಿಕೊಂಡ ಕಾರ್ತಿಕ್ ಅವರು ಆನಂತರ ಆ ಎಲ್ಲ ಅಮೂಲ್ಯ ಸಂಗ್ರಹಗಳನ್ನು ಭಾರತೀಯ ವಿಜ್ಞಾನ ಸಂಸ್ಥೆ(I.I.Sc.)ಯ ಸೆಂಟರ್ ಫಾರ್ ಇಕಲಾಜಿಕಲ್ ಸ್ಟಡೀಸ್ ಗೆ ನೀಡುತ್ತಾರೆ. ಇಡೀ ದಕ್ಷಿಣ ಏಶಿಯಾದಲ್ಲೇ ಡಯಾಟಮ್ ಸಂಶೋಧನೆಗೆ ಸಂಬಂಧಿಸಿದ ಏಕೈಕ ರೆಫೆರೆನ್ಸ್ ಆಕರವಾಗಿ ಅವೀಗ ಇಲ್ಲಿ ಸುರಕ್ಷಿತವಾಗಿವೆ. ಕಾರ್ತಿಕ್ ಅವರು ಶ್ರಮ ವಹಿಸಿ ಗಾಂಧಿ ಅವರನ್ನು ಪತ್ತೆ ಮಾಡಿ ವಿವರಗಳನ್ನು ಸಂಗ್ರಹಿಸದೇ ಹೋಗಿದ್ದಲ್ಲಿ, ಗಾಂಧಿ ಅವರ ಸಂಶೋಧನೆಯ ಪ್ರಾಮುಖ್ಯತೆ ವಿಜ್ಞಾನ ಪ್ರಪಂಚಕ್ಕೆ ದೂರವೇ ಉಳಿದಿರುತ್ತಿತ್ತು. 

ತಮ್ಮಅಪೂರ್ವ ಸಂಶೋಧನೆಗೆ ಯಾವುದೇ ಮನ್ನಣೆ, ಪುರಸ್ಕಾರಕ್ಕೆ ಪಾತ್ರರಾಗದ ಹೆಚ್.ಪಿ.ಗಾಂಧಿ ಅವರು 2008ರ ಜೂನ್ 5ರಂದು ಜುನಾಗಡ್ ನಲ್ಲಿ ನಿಧನರಾದರು. ಅವರ ನಿಧನದ ನಂತರವೇ  ಅವರ ಸಂಶೋಧನೆಗೆ ಸಂಬಂಧಿಸಿದ ವಿವರಗಳು ವಿಜ್ಞಾನ ಲೋಕಕ್ಕೆ ತಿಳಿದುಬಂದದ್ದು. ಅವರ ನಿಧನಾ ನಂತರವೇ ಅವರನ್ನು " ಭಾರತದ ಸಿಹಿನೀರಿನ ಡಯಾಟಮ್ ಗಳ ಪಿತಾಮಹ " ಎಂದು ವಿಜ್ಞಾನ ಲೋಕ ಗುರುತಿಸಲು ಪ್ರಾರಂಭಿಸಿದ್ದು ಒಂದು ವಿಪರ್ಯಾಸ ! ಇತ್ತೀಚೆಗೆ,  ಕೆಲವು ತಿಂಗಳ ಹಿಂದೆ ಗುರುತಿಸಲಾದ ಡಯಾಟಮ್ ನ ಹೊಸ ಪ್ರಬೇಧ ಒಂದಕ್ಕೆ 'ಗಾಂಧಿಯಾ ' ಎಂಬ ಹೆಸರನ್ನು ನೀಡಿ ಗೌರವಿಸಲಾಗಿದೆ.

ಗಾಂಧಿ ಅವರ ಸಮಕಾಲೀನ ಸಹೋದ್ಯೋಗಿಗಳು ಹಾಗು ವಿಜ್ಞಾನ ಲೋಕ ಅವರನ್ನು ಮರೆತಿರಬಹುದು. ಆದರೆ ಅವರನ್ನು ಡಯಾಟಮ್ ಗಳು ಮರೆಯಲು ಸಾಧ್ಯವೇ ?


ಒರಂಗುಟಾನ್‌ ಎಂಬ ಗುರುವೂ ವಿಜ್ಞಾನಿಗಳೆಂಬ ಶಿಷ್ಯಂದಿರೂ!!!

ಒರಂಗುಟಾನ್‌ ಎಂಬ ಗುರುವೂ ವಿಜ್ಞಾನಿಗಳೆಂಬ ಶಿಷ್ಯಂದಿರೂ!!!

ಲೇ : ರಾಮಚಂದ್ರ ಭಟ್‌ ಬಿ.ಜಿ.

    
        ಅದು ಶಿವಮೊಗ್ಗದಲ್ಲಿ ಬಿ.ಎಡ್‌ ಓದುತ್ತಿದ್ದ ಕಾಲ. ತರಗತಿಯಲ್ಲಿ ನಮ್ಮ AGG ಸರ್‌ ಕಲಿಕಾ ಸಿದ್ಧಾಂತಗಳ ಬಗ್ಗೆ ಹೇಳುತ್ತಾ ಒಳನೋಟ ಕಲಿಕೆಯ ಬಗ್ಗೆ ಹೇಳುತ್ತಿದ್ದರು. ಗೆಸ್ಟಾಲ್ಟ್‌ ಸೈಕಾಲಜಿಸ್ಟ್‌ ಆಗಿದ್ದ ಕೋಹ್ಲರನ ಪ್ರಯೋಗದಲ್ಲಿ ಕೋಣೆಯೊಂದರಲ್ಲಿ ಕೂಡಿ ಹಾಕಲ್ಪಟ್ಟ ಚಿಂಪಾಂಜಿ ಸುಲ್ತಾನ್‌ ಸೀಲಿಂಗ್‌ಗೆ ತೂಗು ಹಾಕಿದ ಬಾಳೆ ಹಣ್ಣನ್ನು ಪಡೆಯಲು ಮಾಡಿದ ಹಲವು ಪ್ರಯತ್ನಗಳು ಹೇಗೆ ಒಳನೋಟ ಕಲಿಕೆಗೆ ಕಾರಣವಾಗುತ್ತವೆ ಎನ್ನುವುದನ್ನು ಹೇಳುತ್ತಿದ್ದರು. ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ ಕೋಹ್ಲರ್‌ ಮಾಡಿದ ಪ್ರಯೋಗಗಳು ಕಲಿಕಾ ಸಿದ್ಧಾಂತಗಳ ರೂಪಿಸುವಿಕೆಯಲ್ಲಿ ಅದ್ಭುತ ಪ್ರಯತ್ನವೇ ಸರಿ. ಇದೆಲ್ಲವೂ ನಿಮಗೆ ತಿಳಿಯದ ವಿಷಯವೇನಲ್ಲ. ಇದ್ದಕ್ಕಿದ್ದ ಹಾಗೆ ಈ ಪ್ರಸಂಗ ನೆನಪಾಗಲು ಕಾರಣ- ಇತ್ತೀಚೆಗೆ ಸುದ್ದಿವಾಹಿನಿಯಲ್ಲಿ ಬಿತ್ತರಗೊಂಡ ವಿಷಯ!!!. ಇದು ಮತ್ತೆ ಮತ್ತೆ ನನ್ನನ್ನು ಆ ದಿನಗಳತ್ತ ಕರೆದೊಯ್ದಿತ್ತು. ಪ್ರಾಣಿಗಳ ಕಲಿಕೆಯ ವೇಗ ಮತ್ತು ಕಲಿಕಾವಿಧಾನಗಳು ನಮ್ಮ ಮಕ್ಕಳ ಕಲಿಕೆಯ ಗ್ರಹಣ ಸಾಮರ್ಥ್ಯ ಹೇಗೆ ವೃದ್ಧಿಯಾಗುತ್ತದೆ ಎನ್ನಲು ಸಾಕಷ್ಟು ಒಳನೋಟಗಳನ್ನು ಒದಗಿಸುತ್ತದೆ.
 
    ಪ್ರಕೃತಿ ಅಜೇಯ, ಅಭೇಧ್ಯ, ಅನೂಹ್ಯ, ಅಚ್ಚರಿ, ನಿಗೂಢತೆಗಳ ರಮ್ಯ ತಾಣ. ಮನುಷ್ಯ ಅದೆಷ್ಟು ಸಾಧನೆ ಮಾಡಿದರೂ ಇನ್ನೂ ಪ್ರಕೃತಿಯಿಂದ ಕಲಿಯಬೇಕಾದ್ದು ಸಾಕಷ್ಟಿದೆ. ಭೇಧಿಸಲಾಗದ ಅದೆಷ್ಟೋ ಸತ್ಯಗಳನ್ನು ತನ್ನೊಡಲೊಳಗೆ ಗುಪ್ತವಾಗಿ ಇಟ್ಟುಕೊಂಡಿದೆ. ಇವುಗಳ ಬೆಂಬತ್ತುವ ಮನುಷ್ಯನಿಗೆ ಹೆಜ್ಜೆ ಹೆಜ್ಜೆಗೂ ಅಚ್ಚರಿ!!!  ಪೃಥೆ ತನ್ನ ಅಕ್ಷಯ ತೂಣೀರದಿಂದ ಹೊಸ ಹೊಸ ಬಾಣಗಳನ್ನು ಪ್ರಯೋಗ ಮಾಡುತ್ತ, ಪದೇ ಪದೇ ನಿಗೂಢತೆಯ ಅನಾವರಣ ಮಾಡುತ್ತಲೇ ಇದ್ದಾಳೆ. ಆಸೀಮ ಸಾಹಸಿ ಮನುಷ್ಯನೂ ಇವೆಲ್ಲವನ್ನೂ ಮುಕ್ತವಾಗಿ ಸ್ವೀಕರಿಸಿ ತನ್ನ ಜ್ಞಾನಭಂಡಾರವನ್ನು ಶ್ರೀಮಂತಗೊಳಿಸುತ್ತಿದ್ದಾನೆ. ವಿಕಾಸದ ಹಾದಿಯಲ್ಲಿ ಅದೃಷ್ಟವಶಾತ್‌ ದೊರೆತ ಅನುಕೂಲತೆಗಳನ್ನು ಬಳಸಿ ಏಕಮೇವಾದ್ವಿತೀಯನಾಗಿ ಮೆರೆಯುತ್ತಿದ್ದಾನೆ. ಆಫ್ರಿಕಾದಲ್ಲಿ ವಿಕಾಸಗೊಂಡ ಹೋಮೋ ಸೇಪಿಯನ್ಸ್‌ ಅಲ್ಲಿಂದ ತನ್ನ ಜ್ಞಾತಿಗಳೊಂದಿಗೆ ಹೊರಟು ಎಲ್ಲ ಖಂಡಗಳನ್ನೂ ತಲುಪಿ ತನ್ನ ಆಳ್ವಿಕೆಯನ್ನು ಮುಂದುವರೆಸಿದ್ದಾನೆ. ಇತರ ಪ್ರಾಣಿಗಳಂತೆ ಪೊಟರೆಗಳಲ್ಲಿ ವಾಸಿಸುತ್ತಿದ್ದ ಆದಿಮಾನವ ಇಂದು ತನ್ನ ಬೌದ್ಧಿಕ ಶಕ್ತಿಯಿಂದ ತಿಂಗಳನ ಮೇಲೂ ಕಾಲಿಟ್ಟಿದ್ದಾನೆ.
    ಅದು ೨೦೨೨ರ ಜೂನ್‌ ತಿಂಗಳು. ಇಂಡೋನೇಷ್ಯಾದ ಗುನಂಗ್, ನ್ಯಾಷನಲ್‌ನ ಸುವಾಕ್ ಬಾಲಿಂಬಿಂಗ್ ಪ್ರದೇಶ ಲ್ಲಿ ಪ್ರಾಣಿಗಳ ವರ್ತನೆಯ ಬಗ್ಗೆ ಸಂಶೋಧನೆ ಮಾಡ ಹೊರಟ ವಿಜ್ಞಾನಿಗಳ ಕಣ್ಣಿಗೆ ಅಂದು ಪ್ರಕೃತಿ ಅಚ್ಚರಿಯೊಂದನ್ನು ತೋರಿತು. ಧೇನಿಸುತ್ತಾ , ಅಧ್ಯಯನ ಮಾಡುತ್ತಾ ಸಾಗಿದ ಆ ವಿಜ್ಞಾನಿಗಳಿಗೆ ಗಂಡು ಒರಾಂಗುಟಾನ್ ಒಂದು ಕಣ್ಣಿಗೆ ಬಿತ್ತು. ಇದನ್ನು ಮೊದಲು ಕಂಡದ್ದು ಅದರ ಕಿಶೋರಾವಸ್ಥೆಯಲ್ಲಿದ್ದಾಗ!! ಅದಕ್ಕೆ ರಾಕಸ್‌ ಎಂದು ನಾಮರಣ ಮಾಡಲಾಗಿತ್ತು. ಈಗ ಅದು ಯೌವ್ವನಕ್ಕೆ ಕಾಲಿಟ್ಟಿತ್ತು. ಕುದಿ ರಕ್ತ ಕೇಳಬೇಕೇ? ಹೆಂಡ ಕುಡಿದ ಕೋತಿಯಂತಾಡುವ ವಯಸ್ಸು. ಬಹುಶಃ ಯಾರೊಂದಿಗೆ ಹೊಡೆದಾಟಕ್ಕೆ ಇಳಿದಿತ್ತೋ ಏನೋ? ಒಟ್ಟಿನಲ್ಲಿ ಸಂಶೋಧಕರ ಕಣ್ಣಿಗೆ ಬಿದ್ದ ರಾಕಸ್‌ ಒರಂಗುಟಾನ್‌ನ ಕಣ್ಣಿನ ಬಳಿ ಗಾಯದಿಂದ ಆಳ ಕುಳಿಯಾಗಿತ್ತು. ಇದರ ವರ್ತನೆಯನ್ನು ಅರಿಯಲು ಅದರ ಹಿಂದೆ ಬಿತ್ತು ಸಂಶೋಧನಾ ತಂಡ.  ಅದರ ಮೇಲೆ ಕಣ್ಣಿಟ್ಟವರಿಗೆ ಕುತೂಹಲಕಾರಿ ಕೃತ್ಯವೊಂದು ಗೋಚರಿಸಿತು. ಸೂಕ್ಷ್ಮವಾಗಿ ಗಮನಿಸಿದ ವಿಜ್ಞಾನಿಗಳ ಕಣ್ಣಿಗೆ  ರಾಕಸ್‌ ತಜ್ಞ ವೈದ್ಯನಂತೆ ತನ್ನ ಮುಖದ ಮೇಲಿನ ಗಾಯಕ್ಕೆ ಔಷಧೀಯ ಸಸ್ಯದಿಂದ ತಯಾರಿಸಿದ ಲೇಪವೊಂದರ ಪಟ್ಟಿ ಕಟ್ಟಿ ಚಿಕಿತ್ಸೆ ಮಾಡುವುದು ಗಮನಕ್ಕೆ ಬಂತು!!! ತಜ್ಞ ವೈದ್ಯನಂತೆ ಚಿಕಿತ್ಸೆ ಮಾಡಿಕೊಂಡ ರಾಕಸ್‌ ಈಗ ವಿಜ್ಞಾನಿಗಳ ಪಾಲಿಗೆ ಗುರುವಾಯಿತು.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ವಿಜ್ಞಾನಿಗಳು ರಾಕಸ್‌ನ ಹಿಂದೆ ಬಿದ್ದರು. ಗುರು ವಿದ್ಯೆಯ ಪ್ರಾತ್ಯಕ್ಷಿಕೆ ತೋರುವ ತನಕ ಬಿಡೆನು ನಿನ್ನ ಪಾದ ಗುರುವೇ..“ ಎನ್ನುವಂತೆ ವಿನೀತ ಶಿಷ್ಯರಂತೆ ತಾಳ್ಮೆಯಿಂದ ಕಾದರು.  ಅದು ಜೂನ್ 25 . ಬೆಳಗ್ಗಿನ 11 ಗಂಟೆ, ಈ ರಾಕಿಂಗ್‌ ಸ್ಟಾರ್‌ ರಾಕಸ್ ಎಂಬ ಗಂಡು ಸುಮಾತ್ರಾನ್ ಒರಾಂಗುಟಾನ್ (Pongo abelii ) ತನ್ನ ಮುಖದ ಗಾಯಕ್ಕೆ Fibraurea tinctoria ಎಂಬ ವೈಜ್ಞಾನಿಕ ಹೆಸರುಳ್ಳ, ಸ್ಥಳೀಯ ಭಾಷೆಯಲ್ಲಿ ಅಕರ್ ಕುನಿಂಗ್ ಎಂದು ಕರೆಯಲಾಗುವ ಅಡರು ಬಳ್ಳಿಯ ಎಲೆಗಳನ್ನು ಅಗಿದು ಅದರ ರಸವನ್ನು ಪದೇ ಪದೇ ಹಚ್ಚುವ ಮೂಲಕ ಚಿಕಿತ್ಸೆ ನೀಡಿ ತನ್ನ ಚಿಕಿತ್ಸಾ ವಿಧಾನದ ಪ್ರಾತ್ಯಕ್ಷಿಕೆಯನ್ನು ನೀಡಿತು.

ಮೊದಲಿಗೆ ರಾಕಸ್ ಫೈಬ್ರೂರಿಯಾ ಟಿಂಕ್ಟೋರಿಯಾದ ಎಲೆಗಳನ್ನು ಜಗಿಯಲಾರಂಭಿಸಿತು. ಸುಮಾರು ಕಾಲು ಗಂಟೆ ಜಗಿದ ನಂತರ, ಬಾಯಿಯಿಂದ ಸಸ್ಯದ ರಸವನ್ನು ತನ್ನ ಮುಖದ ಗಾಯದ ಮೇಲೆ ನೇರವಾಗಿ ಹಚ್ಚಿತು. ಈ ಪ್ರಕ್ರಿಯೆ ಏಳು ನಿಮಿಷಗಳ ಕಾಲ ಪುನರಾವರ್ತನೆಯಾಯಿತು.  ಈ ಗಾಯಕ್ಕೆ ನೊಣಗಳು ಮುತ್ತಿಕೊಳ್ಳುತ್ತಿದ್ದಂತೆ  ರಾಕುಸ್ ಸಂಪೂರ್ಣ ಗಾಯವನ್ನು ಎಲೆಗಳ ಲೇಪನವನ್ನು ಹೊದಿಸಿ ಕೆಂಪು ಮಾಂಸ ಹೊರಕಾಣದಂತೆ ಪಟ್ಟಿ ಕಟ್ಟಿ ವ್ರಣವನ್ನು ಮುಚ್ಚಿತು. ಸಂಶೋಧಕರ ತಂಡ ರಾಕಸ್‌ನ ಹಿಂದೆ ಬಿದ್ದು ತನ್ನ ಪತ್ತೆದಾರಿಕೆಯನ್ನು ಮುಂದುವರೆಸಿತು.  ಗಾಯವು ಸೋಂಕಿಗೆ ಒಳಗಾಗುವ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ ಮತ್ತು ಜೂನ್ 30 ರ ಹೊತ್ತಿಗೆ ಮುಖದ ಗಾಯವು ಬಹುತೇಕ ವಾಸಿಯಾಗಿತ್ತು. ಜುಲೈ 19, 2022 ರ ಹೊತ್ತಿಗೆ, ಈ ಗಾಯವು ಸಂಪೂರ್ಣವಾಗಿ ವಾಸಿಯಾಗಿ ಮಸುಕಾದ ಗಾಯದ ಕಲೆ ಮಾತ್ರ ಉಳಿದಿತ್ತು!!! ಈ ಘಟನೆಯ ಸಂಶೋಧನಾ ವರದಿ ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ ಪ್ರಕಟವಾಯಿತು.

ಇತರ ಪ್ರೈಮೇಟ್ ಪ್ರಭೇದಗಳು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ಅಗಿಯಲು ಅಥವಾ ಗಾಯದ ಮೇಲೆ ಉಜ್ಜಲು ತಿಳಿದಿದ್ದರೂ, ರಾಕಸ್‌ನಂತೆ ಗಾಯಗಳಿಗೆ ಮುಲಾಮು ಹಚ್ಚಿ ಚಿಕಿತ್ಸೆ ನೀಡುವುದು ವಿಜ್ಞಾನಿಗಳ ಗಮನಕ್ಕೆ ಬಂದಿಲ್ಲ. ಈ ಜ್ಞಾನ ಅದಕ್ಕೆ ನೀಡಿದವರಾದರೂ ಯಾರು? ಅವೇನು ನಮ್ಮಂತೆ ಸಂಶೋಧನೆ ನಡೆಸುತ್ತವೆಯೇ? ಆಲೋಚಿಸಬೇಕಾದ ವಿಚಾರವೇ ಸರಿ.

ಫೈಬ್ರೌರಿಯಾ ಟಿಂಕ್ಟೋರಿಯಾ ಚೀನಾ, ಇಂಡೋನೇಷಿಯಾ, ಮಲೇಷ್ಯಾ, ಥೈಲ್ಯಾಂಡ್, ವಿಯೆಟ್ನಾಂ ಮತ್ತು ಆಗ್ನೇಯ ಏಷ್ಯಾದ ಇತರ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡಿದೆ. ಇದು  ನೋವು ನಿವಾರಕ, ಜ್ವರಹರ, ವಿಷಹರ ವಾಗಿದ್ದು ಮೂತ್ರಕ್ಕೆ ಸಂಬಂಧಿತ ಕಾಯಿಲೆಗಳು , ಭೇದಿ, ಮಧುಮೇಹ ಮತ್ತು ಮಲೇರಿಯಾದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ. ಇದರ ಎಲೆಗಳು, ಕಾಂಡಗಳು, ಬೇರುಗಳು ಮತ್ತು ತೊಗಟೆ ಸೇರಿದಂತೆ ಸಸ್ಯ ಎಲ್ಲಾ ಭಾಗಗಳನ್ನು ಔಷಧಿಯಾಗಿ ಬಳಸಲಾಗುತ್ತದೆ.

ಗಾಯಕ್ಕೆ ಹೇಗೆ ಚಿಕಿತ್ಸೆ ನೀಡಬೇಕೆಂದು ರಾಕಸ್ ಹೇಗೆ ಕಲಿತಿತು ಎಂಬ ಪ್ರಶ್ನೆಗೆ, ಸಂಶೋಧಕರು  ಇದೊಂದು "ಆಕಸ್ಮಿಕ ವೈಯಕ್ತಿಕ ನಾವೀನ್ಯತೆ" ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಒರಾಂಗುಟಾನ್ ಸಸ್ಯವನ್ನು ತಿನ್ನುವಾಗ ಆಕಸ್ಮಿಕವಾಗಿ ತನ್ನ ಗಾಯವನ್ನು ಸ್ಪರ್ಶಿಸಿರಬಹುದು ಮತ್ತು ಅದರ ನೋವು ನಿವಾರಕ ಪರಿಣಾಮಗಳಿಂದ ತಕ್ಷಣ ನೋವಿನಿಂದ ಉಪಶಮನ ದೊರೆತಿರಬಹುದು. ಈ ಕಲಿಕೆ ಹೊಸ ಸಂದರ್ಭದಲ್ಲಿ ಪುನರಾವರ್ತಿಸಿರಬಹುದು  ಎಂದು ಅವರು ವಿವರಿಸಿದರು.

ರಾಸಾಯನಿಕ ಪರೀಕ್ಷೆಗಳು ಈ ಸಸ್ಯದಲ್ಲಿ ಫ್ಯುರಾನೊಡೈಟರ್ಪೆನಾಯ್ಡ್ಸ್ ಎಂಬ ರಾಸಾಯನಿಕಗಳು ಇವೆ ಎಂದು ತಿಳಿಸಿವೆ.  ಇದು ಒಂದು ಅಥವಾ ಹೆಚ್ಚಿನ ಫ್ಯೂರನ್ ಉಂಗುರಾಕಾರದ ಅಣುಗಳಿಂದ  (ನಾಲ್ಕು ಇಂಗಾಲದ ಪರಮಾಣುಗಳು ಮತ್ತು ಒಂದು ಆಮ್ಲಜನಕದೊಂದಿಗೆ) ಸಂಯೋಜಿಸಲ್ಪಟ್ಟ ಸುಗಂಧಭರಿತ ಸಂಯುಕ್ತ.  ಇದು ಬ್ಯಾಕ್ಟೀರಿಯಾಹರ, ಉರಿ ನಿವಾರಕ , ಶಿಲೀಂಧ್ರನಾಶಕ, ಪ್ರತಿಉತ್ಕರ್ಷ ಮತ್ತು ಆಂಟಿಕಾರ್ಸಿನೋಜೆನಿಕ್ ಗುಣಗಳನ್ನು ಹೊಂದಿದೆ. ಫೈಬ್ರೌರಿಯಾ ಟಿಂಕ್ಟೋರಿಯಾವು ಪ್ರೊಟೊಬರ್ಬೆರಿನ್ ಆಲ್ಕಲಾಯ್ಡ್‌ಗಳು ಯಥೇಚ್ಛವಾಗಿದ್ದು, ಇದು ಉರಿಯೂತ ಮತ್ತು ನೋವು ನಿವಾರಕವಾಗಿದೆ. ತಲೆಸುತ್ತು, ಮತಿಭ್ರಾಂತಿ ನಿವಾರಕ, ನಾರ್ಕೋಟಿಕ್, ಸಂಧು ನೋವು ನಿವಾರಕ, ಅಲ್ಸರ್‌ ನಿವಾರಕ, ಪ್ರತಿಜೀವಕತೆ, ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಗುಣಗಳೂ ಸೇರಿದಂತೆ ಅನೇಕ ಬಗೆಯ ಅನ್ವಯಗಳನ್ನು ಹೊಂದಿದೆ ಎಂದು ಪತ್ತೆಯಾಗಿದೆ.

ಹೀಗೆ ತನ್ನ ಹಿಂದೆ ಬಿದ್ದ ಸಂಶೋಧಕ ಶಿಷ್ಯಂದಿರಿಗೆ ಗುರುವಾಗಿ ತನ್ನ ವೈದ್ಯಕೀಯ ಜ್ಞಾನವನ್ನು ಹಂಚಿದ  ಒರಂಗುಟಾನ್‌ ರಾಕಸ್‌ನನ್ನು ರಾಕಿಂಗ್‌ ಸ್ಟಾರ್‌ ಎನ್ನದೇ ವಿಧಿ ಇಲ್ಲ.‌ 

ವಿಶ್ವ ಪರಿಸರ ದಿನಾಚರಣೆಯ ಈ ಸಂದರ್ಭದಲ್ಲಿ ಪರಿಸರ ಪ್ರೇಮಿಗಳಿಗೆ ಈ ರಾಕಸ್ ನ ರೋಚಕ ಸುದ್ದಿ ರೋಮಾಂಚನ ಉಂಟು ಮಾಡೀತು.

ಹೆಚ್ಚಿನ ವಿವರಗಳಿಗಾಗಿ

 : https://www.nature.com/articles/s41598-024-58988-7#Fig1


 

 

 

ಅಲ್ಗೋಲ್:ಅತಿಲೋಕ ಸುಂದರಿಯೋ? ಮತಿಗೇಡಿ ರಕ್ಕಸಿಯೋ?

 

ಅಲ್ಗೋಲ್:ಅತಿಲೋಕ ಸುಂದರಿಯೋ? ಮತಿಗೇಡಿ ರಕ್ಕಸಿಯೋ?

ಲೇಖಕರು: ಸುರೇಶ ಸಂಕೃತಿ,

ನಿವೃತ್ತ ಮಖ್ಯ ಶಿಕ್ಷಕರು.

 

 ಅಲ್ಗೋಲ್‌! ಹೌದು   ಭಯಾನಕವಾದ ಈ ಹೆಸರಿನ ಮೂಲ ಅರೇಬಿಯಾ. ಅರೇಬಿಕ್‌ ಭಾಷೆಯಲ್ಲಿ ರಾಸ್‌- ಅಲ್-ಘೋಲ್ ಎಂದರೆ  ಪಿಶಾಚಿಯ ತಲೆ ಎಂದು ಅರ್ಥಇದು ಒಂದು ನಕ್ಷತ್ರ ಹೆಸರು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು  ರಾತ್ರಿಯಾಕಾಶಾದಲ್ಲಿ  ಪೆರ್ಸುಯಸ್‌ ನಕ್ಷತ್ರ ಪುಂಜದಲ್ಲಿ ಕಂಡು ಬರುವ ಒಂದು ಚಂಚಲ ತಾರೆಯ ಹೆಸರು ಅಲ್ಗೋಲ್‌! ಚಂಚಲ ತಾರೆಯೆಂದರೆ ಕಾಲ ಕಳೆಯುತ್ತಿದ್ದಂತೆ ತನ್ನ ಕಾಂತಿಯನ್ನು ಬದಲಾಯಿಸುವ ನಕ್ಷತ್ರ. ಗ್ರೀಕ್‌ ಪುರಾಣದಲ್ಲಿ ಮೆದೂಸ ಎಂಬ   ರಕ್ಕಸಿಯ ಕಥೆಯೊಂದು ಬರುತ್ತದೆ. ಇದೊಂದು  ದುರಂತಮಯ ಅಂತ್ಯವನ್ನು ಕಂಡ ಮುಗ್ದ ‌  ಅತಿಲೋಕ ಸುಂದರಿಯ  ವಿಷಾದನೀಯ   ಕಥೆ. ರಕ್ಕಸಿ ಮೆದೂಸಳ ತಲೆಯನ್ನೇ ಅಲ್ಗೋಲ್‌ ಎಂದು ಜನ ಗುರ್ತಿಸುತ್ತಾ ಬಂದಿದ್ದಾರೆ. 3200 ವರ್ಷಗಳ ಹಿಂದೆಯೆ ಈಜಿಪ್ಟಿನ ಪಂಚಾಂಗದಲ್ಲಿಯೂ  ಈ ನಕ್ಷತ್ರದ  ಪ್ರಸ್ತಾಪವನ್ನು ಮಾಡಲಾಗಿದೆಚೀನಿಯರು ಅಲ್ಗೋಲನ್ನು ಹೆಣಗಳ ರಾಶಿ ಎಂದು  ಕರೆದರು. ಭಾರತೀಯರು ಸೈಂದವನೆಂದರು.  ಹೀಗೆ ಬೇರೆ ಬೇರೆ ಸಂಸ್ಕೃತಿಗಳಲ್ಲಿ  ಅಲ್ಗೋಲಿಗೆ ಅಪಖ್ಯಾತಿಯ ಹೆಸರುಗಳನ್ನೇ ನೀಡಿದ್ದಾರೆತಲೆಯಲ್ಲಿ ಕೂದಲಿನ ಬದಲಾಗಿ ವಿಷಪೂರಿತ ಸರ್ಪಗಳೇ ತುಂಬಿರುವ ಮೆದೂಸಳನ್ನು ಹತ್ಯೆಗೈದ ಪೆರ್ಸುಯಸನನ್ನು ಧೀರ ವೀರ ಶೂರನೆಂದು ಗ್ರೀಕ್‌ ಪುರಾಣದಲ್ಲಿ ಬಣ್ಣಿಸಲಾಗತ್ತದೆ. ಖಗೋಳ ವೀಕ್ಷಕರು ಬಲು ಹಿಂದಯೇ ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಲಿ ಪೆರ್ಸುಯಸ್‌ ತಾನು ಕಡಿದ ಮೆದೂಸಳ ಶಿರವನ್ನು ಹಿಡಿದು ನಿಂತಿರುವ   ಚಿತ್ರವನ್ನು ಇಡೀ ಈ ನಕ್ಷತ್ರ ಪುಂಜವನ್ನು ಗುರ್ತಿಸಲು ಕಲ್ಪಿಸಿಕೊಂಡಿದ್ದಾರೆ .

     ಪೆರ್ಸುಯಸ್‌ ನಕ್ಷತ್ರ ಪುಂಜ ಉತ್ತರ ಧ್ರುವಕ್ಕೆ ಸಮೀಪದಲ್ಲಿರುವುದರಿಂದ ವರ್ಷವಿಡಿ ರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರ ಪುಂಜಗಳಲ್ಲಿ ಒಂದು. ಜುಲೈ ಎರಡನೇ ವಾರದಿಂದ ಆಗಸ್ಟ್‌ ಮಧ್ಯದವರೆಗೆ ಈ ನಕ್ಷತ್ರ ಪುಂಜದಲ್ಲಿ ಕಂಡು ಬರುವ ಉಲ್ಕಾವರ್ಷ ತುಂಬಾ ಪ್ರಸಿದ್ಧ. 1992ರಲ್ಲಿ ಸೂರ್ಯನನ್ನು ಅತಿ ಸಮೀಪದಿಂದ ಸುತ್ತಿ ಹಾಕಿಕೊಂಡು ಬಾಹ್ಯಾಕಾಶಕ್ಕೆ ಹಿಂತಿರುಗಿದ ಸ್ವಫ್ಟ್ ಟಟಲ್‌ ಎನ್ನುವ ಧೂಮಕೇತು ತನ್ನ ದಾರಿಯುದ್ದಕ್ಕೂ ಬಿಟ್ಟು ಹೋಗಿರುವ ಅವಶೇ಼ಷಗಳು ಅಂತರಿಕ್ಷದಲ್ಲಿ ಉಳಿದಿವೆ. ಇವು ಭೂಮಿಯು ಸೂರ್ಯನನ್ನು ಸುತ್ತವ ಪಥದಲ್ಲಿಯೂ ಹರಡಿಕೊಂಡಿವೆಭೂಮಿಯು ಸೂರ್ಯನನ್ನು ಸುತ್ತುತ್ತಾ ಈ ಅವಶೇಷಗಳಿರುವ ಪ್ರದೇಶದ ಮೂಲಕ ಹಾದು ಹೋಗುವಾಗ ಅವು ಭೂಮಿಯ ಗುರುತ್ವಾರ್ಷಣೆಗೆ ಒಳಗಾಗಿ ಭೂ ವಾಯುಮಂಡಲವನ್ನು ಪ್ರವೇಶಿಸಿ ನೆಲದಿಂದ ಬಹು ಎತ್ತರದಲ್ಲಿಯೇ ಉರಿದು ಬೂದಿಯಾಗುತ್ತವೆಈ ವಿದ್ಯಮಾನವು ಭೂಮಿಯಲ್ಲಿರುವ ನಮಗೆ ರಾತ್ರಿಯಾಕಾಶದಲ್ಲಿ ಆಗುವ ಉಲ್ಕಾವರ್ಷದಂತೆ ಕಾಣುತ್ತದೆಮತ್ತು ಈ ಉಲ್ಕಾವರ್ಷದ ಕೇಂದ್ರವು ಪೆರ್ಸುಯಸ್‌ ನಕ್ಷತ್ರ ಪುಂಜದಲ್ಲಿರುವಂತೆ ನಮಗೆ ತೋರುವುದರಿಂದ ಇದನ್ನು ಪೆರ್ಸುಯಸ್‌ ಉಲ್ಕಾಪಾತವೆಂದು ಕರೆಯಲಾಗಿದೆ. ಈ ವಿಶೇ಼ಷತೆಯೊಂದಿಗೆ ಪೆರ್ಸುಯಸ್ಸಿನ ಮುಖ್ಯ ಆಕರ್ಷಣೆ ಎಂದರೆ ಮೇಲೆ ತಿಳಿಸಿದ ಅಲ್ಕೋಲ್‌ ಎಂಬ ಚಂಚಲತಾರೆ

      ಚಂಚಲ ತಾರೆಯೆಂದರೆ ಕಾಲ ಕಳೆಯುತ್ತಿದ್ದಂತೆ ತನ್ನ ಕಾಂತಿಯನ್ನು ಬದಲಾಯಿಸುವ ನಕ್ಷತ್ರ. ತಾರೆಯೊಂದರ ಆಂತರ್ಯದಲ್ಲಿ ನಡೆಯುವ ನ್ಯೂಕ್ಲಿಯಾರ್ ಕ್ರಿಯೆಯಿಂದ ಉಂಟಾಗುವ ಅಪಾರ ಪ್ರಮಾಣದ ಉಷ್ಣ ಶಕ್ತಿ ನಕ್ಷತ್ರವನ್ನು ಹಿಗ್ಗಿಸುವ ಪ್ರಯತ್ನದಲ್ಲಿ ಸತತ ನಿರತವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಅದೇ ನಕ್ಷತ್ರದ ರಾಶಿಯ ಕಾರಣದಿಂದ ಏರ್ಪಡುವ ಗುರುತ್ವದ ಬಲ ನಕ್ಷತ್ರವು ತನ್ನ ಒಳಕ್ಕೆ ತಾನೇ ಕುಸಿಯುವಂತೆ ಮಾಡುತ್ತಿರುತ್ತದೆ.ಇದೊಂದು ರೀತಿಯ ಹಗ್ಗ ಜಗ್ಗಾಟ ಇದ್ದಂತೆ. ಉಷ್ಣ ಶಕ್ತಿಯ ಮೇಲ್ಗೈಯಾದರೆ ನಕ್ಷತ್ರ ಸಹಜವಾಗಿ ಗಾತ್ರದಲ್ಲಿ ಹಿಗ್ಗುತ್ತದೆ. ಗುರುತ್ವ ಬಲದ ಮೇಲ್ಗೈಯಾದರೆ ನಕ್ಷತ್ರ ಗಾತ್ರದಲ್ಲಿ ಕುಗ್ಗುತ್ತದೆ. ನಕ್ಷತ್ರದಲ್ಲಿ ಹೀಗೆ ಹಿಗ್ಗುವ ಮತ್ತು ಕುಗ್ಗುವ ಕ್ರಿಯೆಗಳು ನಿರಂತರವಾಗಿ ಒಂದು ಆವರ್ತದಂತೆ ಆಗುತ್ತಿದ್ದರೆ ನಕ್ಷತ್ರದ ಕಾಂತಿಯಲ್ಲಿ ಬದಲಾವಣೆಯೂ ನಿರ್ದಿಷ್ಟ ಆವರ್ತದಲ್ಲಿರುತ್ತದೆ ಮತ್ತು ಅದು ಮಿಡಿಯುವ ಚಂಚಲತಾರೆ ಎನಿಸುತ್ತದೆನಕ್ಷತ್ರದಲ್ಲಿ ಉಷ್ಣ ಶಕ್ತಿಯದೇ ಮೇಲ್ಗೈಯಾಗುತ್ತಾ ಹೋದರೆ ಮುಂದೊಂದು ದಿನ ಅದು ಸ್ಫೋಟಿಸಿ ಅದರ ಕಾಂತಿಯಲ್ಲಿ ಬದಲಾವಣೆ ಆಗಬಹುದು. ಇಂತಹವನ್ನು ಆಂತರಿಕ ಕಾರಣದಿಂದ ಉಂಟಾಗುವ ಚಂಚಲ ತಾರೆಗಳೆನ್ನುವರು.ಒಂದು ನಕ್ಷತ್ರದ ಹೊರಗಿರುವ ಒಂದು ಅಥವಾ ಹೆಚ್ಚು ನಕ್ಷತ್ರ ಅಥವಾ  ಇತರೆ ಕಾಯಗಳು ಆ ನಕ್ಷತ್ರ ಮತ್ತು ನಮ್ಮ ನೋಟದ ನಡುವೆ ಅಡ್ಡ ಬಂದು ಗ್ರಹಣವಾಗುವುದರಿಂದ ಅದರ  ಕಾಂತಿಯಲ್ಲಿ ಬದಲಾವಣೆಯಾದಂತೆ ನಮಗೆ ಅದು ತೋರಬಹುದು. ಇದು ಎರಡನೆಯ ಬಗೆಯದು, ಇದನ್ನು ಗ್ರಹಣ  ಚಂಚಲತಾರೆ ಎನ್ನುತ್ತಾರೆ.ನಕ್ಷತ್ರ ಜೀವನದ ಒಂದು ಹಂತದಲ್ಲಿ ನಕ್ಷತ್ರದ ಒಂದು ಭಾಗ ಮಾತ್ರ ಹೊಳೆಯುತ್ತಿರುತ್ತದೆ. ಉಳಿದ ಭಾಗ ಯಾವುದೇ ವಿಕಿರಣವನ್ನು ಹೊರಸೂಸದೇ ಇರಬಹುದು. ಅಂತಹ ನಕ್ಷತ್ರ ತನ್ನ ಸುತ್ತಲೇ ತಾನು ಬುಗುರಿಯಂತೆ ಗಿರಕಿ ಹೊಡೆಯುತ್ತಿದ್ದರೆ ಹೊಳೆಯುತ್ತಿರುವ ಭಾಗ ನಮ್ಮ ಕಡೆಗಿದ್ದಾಗ ನಕ್ಷತ್ರ ಗೋಚರಿಸುತ್ತದೆ. ಉಳಿದ ಸಮಯದಲ್ಲಿ ಗೋಚರಿಸುವುದಿಲ್ಲ ಅಥವಾ ಮಬ್ಬಾಗಿ ಇರಬಹುದು. ಹೀಗಾಗಿ ಅದು ಮಿಡಿಯುತ್ತಿರುವಂತೆ ತೋರುತ್ತದೆ. ಇಂತಹವನ್ನೂ ಸಹ ಚಂಚಲತಾರೆಗಳೆಂದು ಪರಿಗಣಿಸಲಾಗುತ್ತದೆ.

ಪೆರ್ಸುಯಸ್‌  ನಕ್ಷತ್ರ ಪುಂಜದಲ್ಲಿ ಗೋಚರ ಪ್ರಕಾಶದಲ್ಲಿ ಮೊದಲ ಸ್ಥಾನ  ಮಿರ್ಫಕ್ ಅಥವಾ ಆಲ್ಫಾ ಪರ್ಸಿ ನಕ್ಷತ್ರಕ್ಕೆ. ಇದರ ಕಾಂತಿಮಾನ 1.8 ಗಾತ್ರದಲ್ಲಿ ಸೂರ್ಯನ 7.2 ರಷ್ಟಿದೆಇದು ಸೂರ್ಯನಿಗಿಂತ ರಾಶಿಯಲ್ಲಿ 8.5 ಪಟ್ಟು ಮತ್ತು ಪ್ರಕಾಶಮಾನದಲ್ಲಿ 5000 ಪಟ್ಟು ಹೆಚ್ಚು ಇದ್ದು, ನಮ್ಮಿಂದ  510‌ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆನಿರ್ಭರ ಆಕಾಶದಲ್ಲಿ ದೂರದರ್ಶಕದ ಮೂಲಕ ನೋಡಿದಾಗ ಇದನ್ನು ಸುತ್ತುವರೆದಂತೆ ಒಂದು ತೆರೆದ ಗೋಳಗುಚ್ಛವು ಗೋಚರಿಸುತ್ತದೆ. ಇದರ ನಂತರ ಗೋಚರ ಪ್ರಕಾಶದಲ್ಲಿ ಎರಡನೆಯ ಸ್ಥಾನ ಅಲ್ಗೋಲ್‌ ಅಥವಾ  ಬೀಟಾ ಪರ್ಸಿಗೆಇದು ಗ್ರಹಣ ಚಂಚತಾರೆ ಮತ್ತು ನವ್ಯವಲ್ಲದ ಚಂಚಲತಾರೆಗೆ ಒಂದು ಉತ್ತಮ ಉದಾಹರಣೆ.   ಅಲ್ಗೋಲ್‌ ನಮ್ಮಿಂದ 92.95 ಜ್ಯೋತಿ ವರ್ಷಗಳಷ್ಟು ದೂರದಲ್ಲಿದೆ ಇದೊಂದು ಯುಗ್ಮ ತಾರಾ ಜೋಡಿ ಎಂದು, ಮುಖ್ಯ ನಕ್ಷತ್ರ ಮುಂದೆ ಮತ್ತೊಂದು ಕಪ್ಪು ಕಾಯವು ನಿಯಮಿತವಾಗಿ ಹಾದು ಹೋಗುವುದು ಅಲ್ಗೋಲಿನ ಚಂಚಲತೆಗೆ ಕಾರಣ ಎಂದು ಬ್ರಿಟನ್ನಿನ ಜಾನ್‌ ಗುಡ್ರಿಕ್‌ ಅಲ್ಕೋಲಿನ ವ್ಯವಸ್ಥೆಯನ್ನು 1783 ರಲ್ಲಿ ವಿವರಿಸಲು ಪ್ರಯತ್ನಿಸಿದನುವಾಸ್ತವದಲ್ಲಿ ಅಲ್ಗೋಲ್ ಒಂದು ತ್ರಿವಳಿ ನಕ್ಷತ್ರ ವ್ಯವಸ್ಥೆಯಾಗಿದ್ದು, A(ಅಥವಾβ Per Aa1 ), B(ಅಥವಾβ Per Aa2)  ಮತ್ತು c(ಅಥವಾβ Per Ab ) ಮೂರು ನಕ್ಷತ್ರಗಳಿದ್ದುಹೋಲಿಕೆಯಲ್ಲಿ ಹೆಚ್ಚು ಪ್ರಕಾಶಮಾನವಾದ A ಮತ್ತು ಮಬ್ಬಾಗಿ ಕಾಣುವ B ಪರಸ್ಪರ ಗುರುತ್ವದಿಂದ ಬಂಧಿಸಲ್ಪಟ್ಟಿವೆ. ಇಬ್ಬರು  ಮಕ್ಕಳು ತಮ್ಮ ಎರಡೆರೆಡು ಕೈ ಗಳನ್ನು ಪರಸ್ಪರ ಹಿಡಿದು ಅಪ್ಪಾಲೆ ತಿಪ್ಪಾಲೆ ಆಡುವಂತೆ ಪರಸ್ಪರ ಗುರುತ್ವ ಬಲದಿಂದ ಬಂದಿಸಲ್ಪಟ್ಟು ಒಂದನ್ನು ಮತ್ತೊಂದು ಗಿರಿಕಿ ಹೊಡೆಯುತ್ತಿವೆ. C ಇವುಗಳಿಂದ ಸಾಕಷ್ಟು ದೂರದಲ್ಲಿ ಈ ಎರಡೂ ಗಿರಕಿ ಜೋಡಿಯನ್ನು ಪರಿಭ್ರಮಿಸುತ್ತಿದೆ.

 https://www.youtube.com/watch?v=zoekfYomfjI  

ಅಲ್ಗೋಲಿನ ಪ್ರಕಾಶದಲ್ಲಿ ಆಗುವ ಬದಲಾಣೆಯನ್ನು ತೋರಿಸುವ ಅನಿಮೇ಼ಷನಿಗೆ ಮೇಲಿನ ಲಿಂಕನ್ನು ಬಳಸಿ.

      ಸೈದ್ಧಾಂತಿಕವಾಗಿ ಒಟ್ಟಿಗೆ ಜನಿಸಿದ ನಕ್ಷತ್ರಗಳ ಜೋಡಿಯಲ್ಲಿ ಹೆಚ್ಚು ರಾಶಿಯಿರುವ ನಕ್ಷತ್ರ ಕಡಿಮೆ ರಾಶಿಯಿರುವ ನಕ್ಷತ್ರಕ್ಕಿಂತ ವಿಕಾಸದಲ್ಲಿ ಮುಂದಿರಬೇಕು. ಇಲ್ಲಿ ವಿಚಿತ್ರವೆಂದರೆ ಅತಿ ಹೆಚ್ಚು ರಾಶಿ ಹೊಂದಿರುವ‌ A ಹೊಳೆಯುತ್ತಿರುವ ಯುವ ನಕ್ಷತ್ರವಾಗಿದ್ದರೆ ಕಡಿಮೆ ರಾಶಿಯಿರುವ B  ಈಗಾಗಲೆ ಮುದಿ ಅವಸ್ಥೆಯನ್ನು ತಲುಪಿದ ಗಿಂತ ವಿಕಾಸದಲ್ಲಿ ಮುಂದುವರೆದ ನಕ್ಷತ್ರವಾಗಿದೆ. ನಕ್ಷತ್ರ ವಿಕಸನ ಸಿದ್ಧಾಂತದ ಪ್ರಕಾರ ಇದೊಂದು ವಿರೋಧಾಭಾಸವಾಗಿದೆಇದನ್ನು ಅಲ್ಕೋಲ್‌ ವಿರೋಧಾಭಾಸ ಎಂತಲೇ ಖಗೋಳಶಾಸ್ತ್ರಜ್ಞರು ಹೇಳುತ್ತಾರೆ. ಅಲ್ಗೋಲಿನ ದೀರ್ಘಾಧಿಯ ಇತಿಹಾಸದಲ್ಲಿ ಒಂದು ನಕ್ಷತ್ರದಿಂದ ಮತ್ತೊಂದಕ್ಕೆ  ರಾಶಿಯ ಸಾಮೂಹಿಕ ವರ್ಗಾವಣೆಯ ಕುರುಹು ಕಂಡುಬರುತ್ತದೆ.ಮೊದಲು ಪ್ರಸ್ತುತದ ಕಡಿಮೆ ರಾಶಿಯ ಬೃಹತ್ ದ್ವಿತೀಯಕ ನಕ್ಷತ್ರ ಮೂಲತಃ ವ್ಯವಸ್ಥೆಯಲ್ಲಿ ಹೆಚ್ಚು ರಾಶಿಯ ಬೃಹತ್‌ ನಕ್ಷತ್ರವಾಗಿದ್ದಿತು. ಇದು ವಿಕಸನಗೊಂಡು ದೈತ್ಯ ನಕ್ಷತ್ರವಾದಂತೆ ತನ್ನ ಗಮನಾರ್ಹ ಪ್ರಮಾಣದ ರಾಶಿಯನ್ನು ಅಂತರಿಕ್ಷಕ್ಕೆ ಸಿಡಿಸಿತು. ಹೀಗೆ ಸಿಡಿದ ರಾಶಿಯನ್ನು ಸಮೀಪದಲ್ಲಿಯೇ ಇದ್ದ A ನಕ್ಷತ್ರವು ತನ್ನೆಡೆಗೆ ಸೆಳೆದುಕೊಂಡು ಹೆಚ್ಚು ರಾಶಿಯ ಬೃಹತ್‌ ನಕ್ಷತ್ರವಾಗಿ ಬೆಳೆಯಿತು. ಹೆಚ್ಚು ರಾಶಿಯನ್ನು ಹೀರಿದ A ನಕ್ಷತ್ರವು ಗುರುತ್ವ ಬಲವನ್ನು ಹೆಚ್ಚಿಸಿಕೊಳ್ಳುತ್ತಾ ತನ್ನ ತಾಪವನ್ನೂ ಹೆಚ್ಚಿಸಿಕೊಂಡು Bಗಿಂತ ಹೆಚ್ಚು ಹೊಳಪನ್ನು ಪಡೆಯಿತು. ರಾಶಿಯಲ್ಲಿನಈ ಸಾಮೂಹಿಕ ವರ್ಗಾವಣೆಯು ಕಕ್ಷೀಯ ಚಲನೆಯ ಮೇಲೆ ಪರಿಣಾಮ ಬೀರುತ್ತಾ ಮತ್ತು ದೀರ್ಘಾವಧಿಯಲ್ಲಿ ಗ್ರಹಣದ ಸಮಯ ಮತ್ತು ಆಳದಲ್ಲಿನ ವ್ಯತ್ಯಾಸಗಳಿಗೆ ಕಾರಣವಾಗಿರಬಹುದು.ಇದರ ನಿಯಮಿತ ಮಬ್ಬಾಗಿಸುವಿಕೆ ಮತ್ತು ಹೊಳಪಿನ ಚಕ್ರಗಳು ಸಹಸ್ರಾರು ವರ್ಷಗಳಿಂದ ಮಾನವ ಕಲ್ಪನೆಯನ್ನು ಆಕರ್ಷಿಸಿವೆ, ಕೆಲವು ಇತರ ಆಕಾಶ ವಸ್ತುಗಳು ಸಾಧ್ಯವಾಗುವ ರೀತಿಯಲ್ಲಿ ಪುರಾಣ ಮತ್ತು ವಿಜ್ಞಾನವನ್ನು ಮಿಶ್ರಣ ಮಾಡುತ್ತವೆ. ಅಲ್ಗೋಲA ಮತ್ತು B ಪರಸ್ಪರ ಪರಿಭ್ರಮಿಸುತ್ತಿರುವ ಸಮತಲವು ಭೂಮಿಯ ಮೇಲಿರುವ ನಮ್ಮ ನೋಟದ ನೇರದಲ್ಲಿರುವುದರಿಂದ ಪ್ರಕಾಶಮಾನವಾದ Aಮುಂದೆ ಮಬ್ಬಾದ B ಬಂದಾಗ ಗ್ರಹಣವಾಗಿA ಪ್ರಕಾಶ ನಮಗೆ ಕಡಿಮೆಯಾದಂತೆ ತೋರುತ್ತದೆಇಡೀ ಈ ನಕ್ಷತ್ರ ವ್ಯವಸ್ಥೆಯ ಗೋಚರ ಪ್ರಕಾಶ ಕುಂದಿದಂತೆ ಕಾಣುತ್ತದೆಹಾಗೆಯೆ Bಯ ಮುಂದೆ A ಬಂದಾಗ B ಯ ಪ್ರಕಾಶ ಮರೆಯಾಗುತ್ತದೆ. ಆಗಲೂ ವ್ಯವಸ್ಥೆಯ ಪ್ರಕಾಶ ತುಸು ಕುಗ್ಗುತ್ತದೆ. ನಮ್ಮ ನೋಟಕ್ಕೆ A ಮತ್ತು B ಗಳು ಅಕ್ಕ ಪಕ್ಕದಲ್ಲಿರುವ ಎರಡು ಸಂದರ್ಭಗಳಲ್ಲಿ ಗರಿಷ್ಟ ಪ್ರಕಾಶ ನಮಗೆ ತಲುಪುತ್ತದೆಹೀಗೆ ಗಡಿಯಾರದಂತೆಯೆ  ಪ್ರತಿ ಎರಡು ದಿನ ಇಪ್ಪತ್ತು ಗಂಟೆ ನಲ್ವತ್ತೊಂಬತ್ತು ನಿಮಿಷಗಳಿಗೊಮ್ಮೆ ಅಲ್ಗೋಲಿನ ಪ್ರಕಾಶ ನಿರಂತರ ಬದಲಾಗುತ್ತಲೇ ಇರತ್ತದೆಅಗಾಧವಾಗಿ ಬೆಳೆದಿರುವ ವಿಜ್ಞಾನ ತಂತ್ರಜ್ಞಾನಗಳ ಬಳಕೆಯಿಂದ ನಡೆಸಿರುವ ಸಂಶೋಧನೆಗಳಿಂದ ಅಲ್ಗೋಲ್‌ ನತದೃಷ್ಟದ ಸಂಕೇತವಲ್ಲ  ಇದೊಂದು ಅತಿ ಸುಂದರವಾದ ವೈಜ್ಞಾನಿಕ ವಿದ್ಯಮಾನವಾಗಿದೆ ಎಂಬುದು ಸಾಭೀತಾಗಿದೆ.ವೀಕ್ಷಣೆಗೆ ಪರಿಸ್ಥಿತಿಗಳು ಚೆನ್ನಾಗಿದ್ದಾಗ ರಾತ್ರಿ ಆಕಾಶದಲ್ಲಿ ಅಲ್ಗೋಲ್‌ ನಕ್ಷತ್ರವನ್ನು ನೀವು ಸಹ ವೀಕ್ಷಣೆಯನ್ನು ಮಾಡಿ ಆನಂದಿಸಬಹುದಾಗಿದೆ.

ಹಾಗೆಯೆ ಅಲ್ಗೋಲ್‌ ನಕ್ಷತ್ರಕ್ಕೆ  ಅಪಖ್ಯಾತಿಗೆ ಕಾರಣಳಾದ ಮೆದೂಸಳ ಕಥೆ ಹೇಳಿ ಈ ಲೇಖನಕ್ಕೆ ವಿರಾಮ ಹೇಳುತ್ತೇನೆ. ವಾಸ್ತವದಲ್ಲಿ ಮೆದೂಸ ಅತ್ಯಂತ ಸುಂದರಿ ಅಷ್ಟೇ ಅಲ್ಲ ಅತಿ ಅಮಾಯಕ ಹೆಣ್ಣು. ಈಕೆಯ ಕಥೆ ನಮ್ಮ ರಾಮಾಯಣದ ಅಹಲ್ಯೆಯ ಕಥೆಯನ್ನು ನೆನಪಿಸುತ್ತದೆ. ಅಹಲ್ಯೆಗೆ ರಾಮನ ಪಾದಸ್ಪರ್ಶದಿಂದ ಶಾಪ ವಿಮುಕ್ತಿ ಮತ್ತು  ಮುಕ್ತಿ ಎರಡೂ ದೊರೆಯುತ್ತದೆ. ಮೆದೂಸಳಿಗೆ ಅಂತಹ ಭಾಗ್ಯವಿಲ್ಲ. ಗ್ರೀಕ್‌ ಪುರಾಣದಲ್ಲಿ  ಮೆದೂಸ, ಸ್ತೆನೋ ಮತ್ತು  ಯುರಯಾಲ ಈ ಮೂವರು ಗಾರ್ಗಾನ ಸೋದರಿಯರು. ಮೆದೂಸಳ ಹೊರತು ಉಳಿದಿಬ್ಬರು ಸೋದರಿಯರು ಅಮರತ್ವದ ವರ ಪಡೆದಿರುತ್ತಾರೆಮುಗ್ದೆ, ಮೆದೂಸಳ ಸ್ನಿಗ್ದ ಸೌಂದರ್ಯಕ್ಕೆ ದೇವಾನು ದೇವತೆಗಳೇ ಮರುಳಾಗಿರುತ್ತಾರೆ. ಗ್ರೀಕ್‌ ದೇವತೆಗಳಲ್ಲಿಯೇ ಶ್ರೇಷ್ಠಳಾದ ಅಥೆನಾಳಿಗೂ  ಕೂಡ ತನ್ನ ಅರಮನೆಯ ಸೇವೆಯಲ್ಲಿರುವ ಮೆದೂಸಳ ಸೌಂದರ್ಯವನ್ನು ಕುರಿತು ಅಸೂಯೆ ಇರುತ್ತದೆ. ಹೀಗಿರಲು ಅಥೆನಾಳ ಚಿಕ್ಕಪ್ಪ ಪೊಸೈಡನ್  ಮತ್ತು ಮೆದೂಸ ಪರಸ್ಪರ ಪ್ರೀತಿಸುತ್ತಾರೆ. ಇದರಿಂದ ಕೋಪಗೊಂಡ ಅಥೆನಾ ಮೆದೂಸಳಿಗೆ "ನಿನ್ನ ಸುಂದರ ಕೇಶ ರಾಶಿಯ ಪ್ರತಿಯೊಂದು ಕೂದಲೂ ವಿಷ ಸರ್ಪವಾಗಲಿ, ನೀನು ಯಾರನ್ನು ಕಂಡರೂ ಅಥವಾ ನಿನ್ನನ್ನು ಯಾರು ನೇರವಾಗಿ ನೋಡಿದರೂ ಅವರು ಶಿಲೆಯಾಗಲಿ" ಎಂದು ಶಾಪ ನೀಡುತ್ತಾಳೆ. ಕೂಡಲೆ ತಲೆ ತುಂಬ ವಿಷ ಸರ್ಪಗಳು ತುಂಬಿರುವ  ಅತ್ಯಂತ ಕ್ರೂರ ರಾಕ್ಷಸಿಯ ರೂಪ ಮೆದೂಸ ತಾಳುತ್ತಾಳೆ.‌ ಹೀಗೆ ಶಾಪಗ್ರಸ್ತ ಮೆದೂಸ ತನ್ನಿಂದ ಬೇರೆ ಯಾರಿಗೂ ತೊಂದರೆಯಾಗಬಾರದೆಂದು ಮೆಡಟೆರೇನಿಯನ್ ಸಮುದ್ರದಲ್ಲಿನ ಸರ್ಪಡೆನ್ ಎಂಬ ಒಂದು ನಿರ್ಜನ ದ್ವೀಪದ ಗುಹೆಯೊಂದರಲ್ಲಿ  ತನ್ನ ಇಬ್ಬರು ಸಹೋದರಿಯರ ಜೊತೆ ಹೋಗಿ ನೆಲೆಸುತ್ತಾಳೆ. ರಾಮೇಶ್ವರಕ್ಕೆ ಹೋದ್ರೂ ಶನೀಶ್ವರ ಬಿಡಲಿಲ್ಲ ಅನ್ನೊ ಗಾದೆಯಂತೆ ದೂರದಲ್ಲಿ ಬಂದು ನೆಲೆಸಿದರೂ ಮೆದೂಸಳ ಕಷ್ಟಗಳು ಕೊನೆಗಾಣಲಿಲ್ಲ. ಇತ್ತ ತನ್ನ ವಿವಾಹಕ್ಕೆ ಮಗ್ಗುಲ ಮುಳ್ಳಾಗಿದ್ದ ಪೆರ್ಸುಯಸನನ್ನು ಮುಗಿಸಲು ಸೆರಿಫೋಸಿನ ದೊರೆ ಪಾಲಿಡೆಕ್ಟಸ್‌ ಒಂದು ತಂತ್ರವನ್ನು ಹೊಸೆಯುತ್ತಾನೆ. ಪಾಲಿಡೆಕ್ಟಸನು ತನಗೆ ಉಡುಗೊರೆಯಾಗಿ ಮೆದೂಸಳ ತಲೆಯನ್ನು ಕತ್ತರಿಸಿ ಉಡುಗೊರೆಯಾಗಿ ತರುವಂತೆ  ಪೆರ್ಸುಯಸನಿಗೆ  ಆಜ್ಞಾಪಿಸುತ್ತಾನೆ. ಮೆದೂಸಳ ದೃಷ್ಟಿಗೆ ಬಿದ್ದು ಪೆರ್ಸುಯಸ್ಸನು ಶಿಲೆಯಾಗಿ ಹೋಗಲಿ ಎಂದು ಅವನ ದುರುದ್ದೇಶವಾಗಿರುತ್ತದೆ. ಅದರೆ ಪೆರ್ಸುಯಸ್ಸನಿಗೆ ಅಥೆನಾಳಿಂದ ಹಾಗೆ ಇತರೆ ದೇವತೆಗಳಿಂದ ಕನ್ನಡಿಯಂತಿದ್ದ  ಹಿತ್ತಾಳೆಯ ಗುರಾಣಿ,ಒಳ್ಳೆಯ ಕತ್ತಿಹಾರಲು ರಕ್ಕೆಗಳಿರುವ ಪಾದರಕ್ಷೆ, ಧರಿಸಿದರೆ ಯಾರಿಗೂ ಕಾಣದಂತೆ ಮಾಡುವ ಮಾಯಾ ಟೋಪಿ  ದೊರೆಯುತ್ತವೆ. ಇವೆಲ್ಲವನ್ನೂ ಪಡೆದ, ಧಾರಣೆ ಮಾಡಿದ ಪರ್ಸುಯಸ್‌ನಿದ್ರಿಸುತ್ತಿರುವ ತುಂಬು ಗರ್ಭಿಣಿ ಮೆದೂಸಳ ಪ್ರತಿಬಿಂಬವನ್ನು ಕನ್ನಡಿಯಂತಿದ್ದ ತನ್ನ ಗುರಾಣಿಯಲ್ಲಿ ನೋಡುತ್ತಾ ಅವಳ ಕುತ್ತಿಗೆಯನ್ನು ಕತ್ತರಿಸಿಬಿಡುತ್ತಾನೆ. ಹಾಗೆ ತಂದ ಅವಳ ಶಿರವನ್ನು ತನಗೆ ಶತೃಗಳೆನಿಸಿದವರನ್ನು ಸಂಹರಿಸಲು ಬಳಸುತ್ತಾನೆ. ಕೊನೆಗೆ ಮೆದೂಸಳ ಶಿರ ಅಥೆನಾಳ ಅರಮನೆಯಲ್ಲಿ ಪೆಟ್ಟಿಗೆ ಸೇರಿಬಿಡುತ್ತದೆ. ಕ್ರೂರ ವ್ಯವಸ್ಥೆಗೆ ಬಲಿಯಾಗಿ ಹೋದ ಅಮಾಯಕಳಾದ ಮೆದೂಸಳ ಶಿರವನ್ನು ದುಷ್ಟರ ಕಣ್ಣು ಬೀಳದಿರಲೆಂದು ದೃಷ್ಟಿ ಬೊಂಬೆಯಂತೆ ಬಳಸುವ ಪದ್ಧತಿ ಕೆಲವು ಪಾಶ್ಚಿಮಾತ್ಯ ಸಂಸ್ಕೃತಿಗಳಲ್ಲಿ  ಇದೆಯೆಂಬ ಅಂಶ ಸ್ವಲ್ಪವಾದರೂ ಸಮಾಧಾನ ತರವಂತದ್ದು.