ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, August 4, 2024

ಭಾಗ -2 ಭಾರತದ ಮುಟ್ಟಿನ ಗಂಡು ಅರುಣಾಚಲಂ

 ಭಾಗ -೨ 
ಭಾರತದ ಮುಟ್ಟಿನ ಗಂಡು ಅರುಣಾಚಲಂ

ಡಾ. ಎಂ.ಜೆ. ಸುಂದರ ರಾಮ್ 
 
ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು
  
ಹಾಗೂ ವಿಜ್ಞಾನ ಸಂವಹನಕಾರರು


    ಹಿಂದಿನ ಲೇಖನದಲ್ಲಿ ಅರುಣಾಚಲಂನ ಹುಚ್ಚಾಟಗಳ ಬಗ್ಗೆ, ಅದರಿಂದ ಆದ ಅನಾಹುತಗಳ ಬಗ್ಗೆ ತಿಳಿದುಕೊಂಡಿರಿ. ಆತನ ಹುಚ್ಚಾಟಗಳು ಇಷ್ಟೇ ಅಲ್ಲ, ಮುಂದೆ ಓದುತ್ತಾ ಹೋದಂತೆ ಯಾರಿಗಾದರೂ ಇವನೇನು ಹುಚ್ಚನೇ? ಎಂದೆನ್ನಿಸದಿರದು!!. 
    ಪತ್ನಿ ತನ್ನನ್ನು ತೊರೆದು ಹೋದರೂ ವಿಚ್ಛೇದನ ನೀಡಿದರೂ ಅರುಣಾಚಲಂ ಎದೆಗುಂದಲಿಲ್ಲ. ತನ್ನ ಪ್ರಯೋಗವನ್ನು  ಮುಂದುವರೆಸಿದ!!!. ತನ್ನ ಪ್ಯಾಡ್‌ಗಳು ಸಮರ್ಪಕವಾಗಿ ಕೆಲಸ ಮಾಡದಿರಲು ಕಾರಣ ಅರಸಲು ಅವನಿಗೆ ಹೊಸ ಉಪಾಯ ಹೊಳೆಯಿತು. ಕಂಪೆನಿ ಪ್ಯಾಡ್‌ಗಳ ರಚನೆಯನ್ನು ಅಧ್ಯಯನ ಮಾಡಿದರೆ ತನ್ನ ಸಮಸ್ಯೆಗೆ ಪರಿಹಾರ ಸಿಗಬಹುದೆನಿಸಿತು. ಆದರೆ ಅವನ್ನು ಹೇಗೆ ಪಡೆಯುವುದು? ಹೆಂಗಸರು ಬಳಸಿ ಎಸೆದಿದ್ದ ಹಳೆಯ ಪ್ಯಾಡ್‌ಗಳನ್ನು ತಂದು, ಅವುಗಳ ರಚನೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸಲು ತೀರ್ಮಾನಿಸಿದ! ರಕ್ತಸಿಕ್ತವಾದ ಅನೇಕ ಹಳೆಯ ಪ್ಯಾಡ್‌ಗಳನ್ನು ಪ್ರತಿದಿನವೂ ಹುಡುಕಿ ತಂದು, ಯಾರಿಗೂ ಗೊತ್ತಿಲ್ಲದಂತೆ ಅವನ್ನು ಮನೆಯ ಹಿತ್ತಲಲ್ಲಿ ಗೋಣಿಚೀಲದಲ್ಲಿ ತುಂಬಿ ಗುಪ್ತವಾಗಿ ಒಂದೆಡೆ ಅವಿತಿಟ್ಟ. ಆದರೆ ಈಗಲೂ ಅವನ ಗ್ರಹಚಾರ ಸರಿಯಿರಲಿಲ್ಲ. ಒಮ್ಮೆ ಅವನ ತಾಯಿ ಸೀರೆ ಒಣಗಿಸಲು ಹಿತ್ತಲಿಗೆ ಬಂದಾಗ ಅರುಣಾಚಲಂ ಶೇಖರಿಸಿದ್ದ ಹಳೆಯ ಪ್ಯಾಡ್‌ಗಳ ಚೀಲದ ರಾಶಿ ಆಕಸ್ಮಿಕವಾಗಿ ಕಣ್ಣಿಗೆ ಬಿತ್ತು. ಅದನ್ನು ನೋಡಿ ಮಗನ ಹೀನ ಕೃತ್ಯವನ್ನು ನೆನೆದು ಬೆಚ್ಚಿ ಬಿದ್ದಳು. ಅವನು ಇಷ್ಟು ಕೀಳು ಮಟ್ಟಕ್ಕಿಳಿಯಬಹುದೆಂದು ಅವಳು ಅಂದುಕೊಂಡಿರಲಿಲ್ಲ. ಅತೀವ ದುಃಖದಿಂದ ಕೆಂಡಾಮಂಡಲವಾಗಿ ಅವನನ್ನು ಬಾಯಿಗೆ ಬಂದಂತೆ ಜರೆದು, ಬಿಕ್ಕಿ ಬಿಕ್ಕಿ ಅಳತೊಡಗಿದಳು. ಇವನೊಂದಿಗಿದ್ದರೆ ಇನ್ನೇನಾದೀತೋ ಎಂಬ ಭಯ ಕಾಡಿತು. ತಕ್ಷಣವೇ ತಾನು ಒಣಹಾಕಲು ತಂದಿದ್ದ ಒದ್ದೆ ಸೀರೆಯನ್ನು ನೆಲಕ್ಕೆ ಹರಡಿ, ತನ್ನೆಲ್ಲ ವಸ್ತುಗಳನ್ನು ಅದರಲ್ಲಿಟ್ಟು ಗಂಟು ಮೂಟೆ ಕಟ್ಟಿಕೊಂಡು ಮಗನನ್ನು ಬಿಟ್ಟು ಹೊರಟೇಬಿಟ್ಟಳು! ಎಷ್ಟೇ ಸಂತೈಸಿದರೂ ಅರುಣಾಚಲಂಗೆ ಅವಳನ್ನು ತಡೆಯಲು ಸಾಧ್ಯವಾಗಲಿಲ್ಲ. ತಾಯಿಗೇ ಮಗ ಅರ್ಥವಾಗದಿದ್ದ ಮೇಲೆ ಯಾರಾದರೂ ಇನ್ನೇನು ತಾನೇ ಹೇಳಿಯಾರು?   
ಅರುಣಾಚಲಂನ ಪೈಶಾಚಿಕ ನಡವಳಿಕೆಯಿಂದ ದೋಸಿಹೋಗಿದ್ದ ಊರ ಜನ, ಅವನಿಗೆ ದೆವ್ವ ಹಿಡಿದಿರಬೇಕೆಂದುಕೊಂಡರು. ಸರಪಾಳಿಯಿಂದ ಅವನ ಕೈಕಾಲು ಕಟ್ಟಿ, ಮರಕ್ಕೆ ತಲೆಕೆಳಕಾಗಿ ನೇತು ಹಾಕಿ, ಮಾಂತ್ರಿಕನನ್ನು ಕರೆಸಿ ದೆವ್ವ ಬಿಡಿಸಲು ಸಜ್ಜಾದರು. ಇದನ್ನರಿತ ಅರುಣಾಚಲಂ ಊರನ್ನೇ ತೊರೆದು ಪರಾರಿಯಾದ! 
ಇಷ್ಟೆಲ್ಲ ಆಘಾತಗಳಾದರೂ ಅರುಣಾಚಲಂ ಮಾತ್ರ ತನ್ನ ಹುಚ್ಚುಸಾಹಸವನ್ನು ಬಿಡಲಿಲ್ಲ. ತನ್ನ ಪ್ಯಾಡ್‌ಗಳು ಕಂಪೆನಿ ಪ್ಯಾಡ್‌ಗಳ ಗುಣಮಟ್ಟಕ್ಕೆ ಸಾಟಿಯಾಗದ್ದಕ್ಕೆ ಕಾರಣವನ್ನು ಹೇಗಾದರೂ ಪತ್ತೆಹಚ್ಚಲೇ ಬೇಕೆಂದು ನಿಶ್ಚಯಿಸಿದ. ಸುಮಾರು ಎರಡು ವರ್ಷಗಳು ಕಳೆದವು. ತಾನೊಬ್ಬ ಬಟ್ಟೆ ಗಿರಣಿ ಮಾಲೀಕನೆಂದೂ, ತನಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸುವ ವಿಶೇಷ ಆಸಕ್ತಿಯಿದ್ದು, ತನಗೆ ಸ್ಯಾನಿಟರಿ ಪ್ಯಾಡ್‌ಗಳ ಕೆಲವು ಸ್ಯಾಂಪಲ್‌ಗಳನ್ನು ಕಳಿಸಿಕೊಡಬೇಕೆಂದೂ ಅಮೆರಿಕದ ಸ್ಯಾನಿಟರಿ ಪ್ಯಾಡ್ ಕಂಪೆನಿಗೆ ಕಾಲೇಜು ಪ್ರೊಫೆಸರ್ ಮೂಲಕ ಅರುಣಾಚಲಂ ಆಂಗ್ಲದಲ್ಲಿ ಪತ್ರ ಬರೆಸಿದನು. ಕೆಲವು ದಿನಗಳಲ್ಲಿ ಅವನಿಗೆ ಅಮೆರಿಕ ಕಂಪೆನಿಯಿಂದ ಸ್ಯಾನಿಟರಿ ಪ್ಯಾಡ್‌ಗಳ ಪಾರ್ಸಲ್ ಬಂದಿತು. ಅದನ್ನು ಬಿಚ್ಚಿ ಅದರಲ್ಲಿದ್ದ ಪ್ಯಾಡ್‌ಗಳನ್ನು ಮನೆಯಲ್ಲೊಂದೆಡೆ ಜೋಪಾನವಾಗಿ ತೆಗೆದಿಟ್ಟನು. ಒಮ್ಮೆ ಅವನು ಮನೆಯಲಿಲ್ಲದಾಗ ಅವನ ನಾಯಿ ಆ ಪ್ಯಾಡ್‌ಗಳನ್ನು ಕೆದಕಿ, ಉಗುರಿನಿಂದ ಪರಚಿ, ಅವನ್ನು ಹರಿದುಬಿಟ್ಟಿತು. ಅರುಣಾಚಲಂ ನಾಯಿಯ ಮೇಲೆ ಕೆಂಡಾಮಂಡಲವಾ. ಆದರೆ ಆ ಹರಿದಿದ್ದ ಪ್ಯಾಡ್‌ಗಳಲ್ಲಿ ಸೆಲ್ಯುಲೋಸ್ ಎಳೆಗಳು ನೇತಾಡುತ್ತಿರುವ ಅಪೂರ್ವ ದೃಶ್ಯ ಅವನ ಕಣ್ಣು ಕುಕ್ಕಿತು! ನಾಯಿಯೇ ಆತನ ಸಹಾಯಕ್ಕೆ ಬಂದಂತಾಯಿತು. ಆವರೆಗೆ ಪ್ಯಾಡ್‌ಗಳ ತಯಾರಿಕೆಯಲ್ಲಿ ಸೆಲ್ಯುಲೋಸ್‌ನ ಬಳಕೆಯ ಸುಳಿವಿರಲಿಲ್ಲ. ಸ್ಯಾನಿಟರಿ ಪ್ಯಾಡ್ ರಚನೆಯ ಗುಟ್ಟು ಈಗ ನಾಯಿಯಿಂದ  ಬಹಿರಂಗವಾಯಿತು! ಸೆಲ್ಯುಲೋಸ್ ಎಳೆಗಳನ್ನು ಒತ್ತಿದರೆ ಅವು ಸ್ಪಂಜಿನಂತೆ ಮೃದುವಾಗಿ ಉಬ್ಬಿ, ಹೇರಳವಾಗಿ ದ್ರವವನ್ನು ಹೀರಿಕೊಂಡರೂ ತೇವವಿಲ್ಲದೆ ಶುಷ್ಕವಾಗಿಯೇ ಕಂಡವು!
ಅರುಣಾಚಲಂನ ಪತ್ತೆದಾರಿಕೆಯಲ್ಲಿ ಕೊನೆಗೂ ಕಳ್ಳ ಸಿಕ್ಕಿಬಿದ್ದ! ಪೀತದಾರು ವೃಕ್ಷದ ತಿರುಳಲ್ಲಿರುವ ಸೆಲ್ಯುಲೋಸ್ ನಾರುಗಳನ್ನು ಸ್ಯಾನಿಟರಿ ಪ್ಯಾಡ್ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಈ ನಾರುಗಳು ರಕ್ತವನ್ನು ಹೀರಿ, ಸೋರಿಕೆಯಾಗದಂತೆ ತಮ್ಮಲ್ಲೇ ಉಳಿಸಿಕೊಳ್ಳುತ್ತವೆ. ಜೊತೆಗೆ ಪ್ಯಾಡ್‌ಗಳ ಆಕಾರ ಸ್ವಲ್ಪವೂ ಕೆಡುವುದಿಲ್ಲ. ಪೀತದಾರು ವೃಕ್ಷದ ಸೆಲ್ಯುಲೋಸ್ ತಿರುಳನ್ನು ಪುಡಿಮಾಡಿ, ಗಟ್ಟಿಯಾಗಿ ಒತ್ತಿ ನೀಲಾತೀತ ಕಿರಣಗಳಿಂದ ನಿಷ್ಕ್ರಮೀಕರಣಗೊಳಿಸಿ ಪ್ಯಾಡ್‌ಗಳಾಗಿ ಪೊಟ್ಟಣ ಕಟ್ಟಿ ಸಿದ್ಧ ಪಡಿಸುವ ಯಂತ್ರವನ್ನು ಅರುಣಾಚಲಂ ತಯಾರಿಸಿದ. ಈಗ ಹೆಸರಾಂತ ಕಂಪನಿಗಳ ಗುಣಮಟ್ಟಕ್ಕೆ ಸರಿಸಾಟಿಯಾದ ಪ್ಯಾಡ್‌ಗಳು ತಯಾರಾದವು! 
    ಸೆಲ್ಯುಲೋಸನ್ನು ಮರದ ತೊಗಟೆಯಿಂದ ಬೇರ್ಪಡಿಸಿ, ಹದಮಾಡಿ, ಪರಿವರ್ತಿಸಿ, ಪ್ಯಾಡ್ ತಯಾರಿಸಿದಾಗ ಅವು ಅಮೆರಿಕ ಕಂಪೆನಿಯ ಪ್ಯಾಡ್‌ಗಳಷ್ಟೇ ಸಮರ್ಪಕವಾಗಿ ಕೆಲಸ ಮಾಡಿದವು. ಯಂತ್ರದ ಬೆಲೆ ೩೫೦,೦೦೦ರಿಂದ ೫೦೦,೦೦೦ ಡಾಲರ್! ಇದರ ಬೆಲೆ ಇಳಿಸಲು ಅರುಣಾಚಲಂ ನಾಲ್ಕೂವರೆ ವರ್ಷ ಸತತವಾಗಿ ದುಡಿದ. ತನ್ನ ಪ್ರಯತ್ನದಿಂದ ಯಂತ್ರವನ್ನು ತಯಾರಿಸಿ, ಅದರ ಬೆಲೆಯನ್ನು ಕೇವಲ ೬೫,೦೦೦ ರೂಪಾಯಿಗಳಿಗೆ ಇಳಿಸಿದನು! ಇದರಿಂದ ಶಾಲೆಗಳು, ಸ್ತ್ರೀ ಸ್ವಸಹಾಯ ಸಂಘಗಳು ಈ ಯಂತ್ರದ ಸಹಾಯದಿಂದ ಅಗ್ಗದ ಪ್ಯಾಡ್‌ಗಳನ್ನು ತಯಾರಿಸಲಾರಂಭಿಸಿದವು. ಒಬ್ಬ ಮಹಿಳೆಯು ಸುಮಾರು ೩ ಗಂಟೆಗಳಲ್ಲಿ ಪ್ಯಾಡ್ ತಯಾರಿಸುವ ತಾಂತ್ರಿಕತೆಯನ್ನು ಕಲಿಯುವುದರ ಜೊತೆಗೆ ತನ್ನೊಡನೆ ಇನ್ನೂ ಮೂವರಿಗೆ ಉದ್ಯೋಗ ನೀಡಬಹುದಾಗಿತ್ತು. ಅರುಣಾಚಲಂ ಪ್ರತಿ ಯಂತ್ರ ೩೦೦೦ ಹೆಣಮಕ್ಕಳು ಪ್ಯಾಡ್‌ಗಳನ್ನು ಉಪಯೋಗಿಸುವಂತೆ ಮಾಡಿ, ೧೦ ಮಹಿಳೆಯರಿಗೆ ನೌಕರಿ ಒದಗಿಸುತ್ತಿತ್ತು. ಒಂದು ಯಂತ್ರ ಒಂದು ದಿನಕ್ಕೆ ೨೦೦-೨೫೦ ಪ್ಯಾಡ್‌ಗಳನ್ನು ತಯಾರಿಸಬಲ್ಲದು. ಹೀಗೆ ತಯಾರಿಸಿದ ಪ್ರತಿ ಪ್ಯಾಡಿನ ಬೆಲೆ ಕೇವಲ ೨.೫೦ ಅಥವಾ ೩ ರೂಪಾಯಿಗಳಷ್ಟೆ! ಇದರಿಂದ ಮಹಿಳೆಯರ ಸಬಲೀಕರಣವಾಗಿ, ಅನೇಕ ಗ್ರಾಮಾಂತರ ಮಹಿಳೆಯರಿಗೆ ಉದ್ಯೋಗಾವಕಾಶ ಸಿಕ್ಕಿತು. ಇದರಿಂದ ಅವರಲ್ಲಿ ಶುಚಿತ್ವದ ಅರಿವು ಮೂಡಿ, ಆರೋಗ್ಯಕರ ಪ್ಯಾಡ್‌ಗಳನ್ನು ಬಳಸತೊಡಗಿದರು. ಗ್ರಾಮಾಂತರ ಹೆಣ್ಣು ಮಕ್ಕಳ ಆರೋಗ್ಯ ಸುಧಾರಿಸಿ, ಅವರ ಲೈಂಗಿಕ ಸಂಬಂಧಿತ ಕಾಯಿಲೆಗಳು ಮತ್ತು ಸಾವುಗಳ ಪ್ರಮಾಣ ಗಣನೀಯವಾಗಿ ಇಳಿಯಿತು!!.
    ಅರುಣಾಚಲಂನ ಯಶೋಗಾಥೆ ಅನೇಕ ಯುವಕ ಯುವತಿಯರಿಗೆ ಸ್ಫೂರ್ತಿಯಾಗಿದೆ. ಇವನ ಸಾಧನೆಯ ರೋಚಕ ಹಾದಿಯು ಒಬ್ಬ ಶ್ರೇಷ್ಟ ವಿಜ್ಞಾನಿಯ ಸಾಧನೆಗೆ ಯಾವುದೇ ರೀತಿಯಲ್ಲೂ ಕಡಿಮೆಯಲ್ಲ. ಸರಿ ಸಾಟಿಯಾಗಿದೆ. ತನಗಾಗಿ ಏನನ್ನೂ ಬಯಸದೆ, ಮೂಢನಂಬಿಕೆಯಲ್ಲಿ ಮುಳುಗಿದ್ದ ಗ್ರಾಮಾಂತರ ಮಹಿಳೆಯರನ್ನು ಮೇಲೆತ್ತಿ, ಅಗ್ಗದ ಪ್ಯಾಡ್ ತಯಾರಿಸುವ ಯಂತ್ರವನ್ನು ಜೋಡಿಸಿ, ಅದರಿಂದ ಎಲ್ಲರ ಕೈಗೆ ತಲುಪುವ ಸ್ಯಾನಿಟರಿ ಪ್ಯಾಡ್‌ಗಳನ್ನು ತಂದು ಸಾವಿರಾರು ಗ್ರಾಮಾಂತರ ಹೆಣ್ಣುಮಕ್ಕಳಿಗೆ ಉದ್ಯೋಗಾವಕಾಶ ಕಲ್ಪಿಸಿ ಕೊಟ್ಟದ್ದು ಯಾವುದೇ ಬಾಲಿವುಡ್‌ ಸಿನಿಮಾದ ಯಶೋಗಾಥೆಗೂ ಕಡಿಮೆ ಇಲ್ಲ.
ಹೆಂಡತಿ, ತಾಯಿಯಿಂದ ಶಾಪಗ್ರಸ್ತನಾಗಿ, ಛೀಮಾರಿ ಹಾಕಿಸಿಕೊಂಡ. ಊರ ಜನರು ಇವನನ್ನು ಹೀನಾಯವಾಗಿ ಜರೆದರು. ತನ್ನ ಸರ್ವಸ್ವವನ್ನೂ ಕಳೆದುಕೊಂಡು ಅವಮಾನಿತನಾಗಿ ಹುಚ್ಚನಂತೆ ಬೀದಿಗಳಲ್ಲಿ ಅಲೆದು, ತಾನೇ ಬಲಿಪಶುವಾಗಿ, ಎಲ್ಲರಿಂದಲೂ ಪೆಟ್ಟು ತಿಂದನು. ಅವನ ಸಂಶೋಧನೆಯಲ್ಲಿ ಆಡಂಬರ, ಅಹಂಕಾರದ ಹೇಳಿಕೆಗಳಾಗಲಿ, ಘೋಷಣೆಗಳಾಗಲಿ, ಪ್ರಚಾರದ ಅಬ್ಬರವಾಗಲಿ ಇರಲಿಲ್ಲ. ತನ್ನ ಪತ್ನಿಯ ಆರೋಗ್ಯ ಮತ್ತು ಶುಚಿತ್ವಕ್ಕಾಗಿ ಪ್ಯಾಡ್‌ಗಳನ್ನು ತಯಾರಿಸಿ, ಅವಳನ್ನು ಖುಷಿಪಡಿಸಬೇಕೆಂಬ ಉದ್ದೇಶದಿಂದ ಪ್ರಾರಂಭಿಸಿದ ಪ್ಯಾಡ್ ತಯಾರಿಕೆ ಅವನನ್ನು ಒಂಟಿಯಾಗಿಸಿತು. ಆದರೂ ಛಲದಂಕಮಲ್ಲನಂತೆ ಹೋರಾಡಿ, ಕೊನೆಗೆ ತನ್ನ ಗುರಿಯನ್ನು ಸಾಧಿಸಿದ ಅರುಣಾಚಲಂ ಒಬ್ಬ ಅತಿಶ್ರೇಷ್ಠ ಸಂಶೋಧಕನ ಲಕ್ಷಣಗಳು, ತಾಳ್ಮೆ, ನಾಯಕತ್ವದ ಗುಣಗಳನ್ನು ಪ್ರದರ್ಶಿಸಿ ಆದರ್ಶಪ್ರಾಯನಾಗಿದ್ದಾನೆ.    
ಅರುಣಾಚಲಂ ಸುಮಾರು ೧೫೦೦ ಯಂತ್ರಗಳನ್ನು ನಮ್ಮ ದೇಶದಲ್ಲಿ ಮಾರಿದುದಲ್ಲದೆ ಅಭಿವೃದ್ಧಿ ಹೊಂದುತ್ತಿರುವ ಹಲವು ದೇಶಗಳಿಗೂ ರಫ್ತುಮಾಡಿ ಮೌನ ಕ್ರಾಂತಿಯ ಮೂಲಕ ಉದ್ಯಮಶೀಲತೆಗೆ ನೂತನ ಭಾಷ್ಯವನ್ನು ಬರೆದಿದ್ದಾನೆ. ಅವರ ಸಾಧನೆ ಒಂದು ಸವಾಲಾಗಿ ಪ್ರಾರಂಭವಾಗಿ, ಮುಜುಗರದಲ್ಲಿ ಮುಳುಗಿಸಿ, ಮಾನವೀಯ ಗುಣಗಳೊಂದಿಗೆ ಕೊನೆಗೊಂಡಿತು! ಸುಮಾರು ಹತ್ತು ಲಕ್ಷ ಸ್ತ್ರೀಯರ ಜೀವನೋಪಾಯಕ್ಕೆ ಕಾರಣವಾಗಿ, ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯನ್ನು ಜನಪ್ರಿಯಗೊಳಿಸಿತು. ಪ್ಯಾಡ್ ಬಳಸುವ ಹೆಣ್ಣುಮಕ್ಕಳ ಸಂಖ್ಯೆಯನ್ನು ೨ರಿಂದ ೧೦೦%ಗೆ ಏರಿಸಲು ನಾನು ಮಾಡಿದ ಪ್ರಯತ್ನ ಸಫಲವಾಗಿದೆ. ಅಜ್ಞಾನಿ ಮತ್ತು ಬಡ ಹೆಣ್ಣುಮಕ್ಕಳ ಬಗ್ಗೆ ಯಾರೂ ಚಿಂತಿಸುವುದಿಲ್ಲ. ನನ್ನ ಯಂತ್ರದಿಂದ ಅವರು ಗೌರವದಿಂದ ಬಾಳುವಂತಾಗಿದೆನ್ನುತ್ತಾನೆ ಅರುಣಾಚಲಂ. ಅಂಡಿಗಳಲ್ಲಿ ಸಾಮಾನ್ಯವಾಗಿ ಪುರುಷರೇ ವ್ಯಾಪಾರ ವಹಿವಾಟನ್ನು ನಡೆಸುವುದರಿಂದ ಸ್ಯಾನಿಟರಿ ಪ್ಯಾಡ್ ಕೊಳ್ಳಲು ಹೆಣ್ಣುಮಕ್ಕಳು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಸ್ತ್ರೀಯರೇ ಪ್ಯಾಡ್ ತಯಾರಿಸಿ ಮಾರುವುದರಿಂದ ಹೆಣ್ಣುಮಕ್ಕಳು ಅವರೊಂದಿಗೆ ಮುಕ್ತವಾಗಿ ಮಾತನಾಡಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದಾರೆ.
    ೨೦೧೪ರಲ್ಲಿ ಟೈಮ್ಸ್ ಮ್ಯಾಗಜಿನ್‌ನ ವಿಶ್ವದ ೧೦೦ ಅತಿ ಪ್ರಭಾವೀ ವ್ಯಕ್ತಿಗಳ ಪಟ್ಟಿಯಲ್ಲಿ ಅರುಣಾಚಲಂ ಹೆಸರು ಸೇರಿದೆ. ಇವನ ಸಂಶೋಧನೆಯನ್ನು ಮೆಚ್ಚಿ ಕೇಂದ್ರ ಸರ್ಕಾರವು ೨೦೧೬ರಲ್ಲಿ ಇವನಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿತು. ಕೊಯಮುತ್ತೂರಿನ ರೋಟರಿ ಸಂಸ್ಥೆ ಕೊಯಮುತ್ತೂರಿನ ಆಭರಣವೆಂಬ ಬಿರುದನ್ನು ನೀಡಿ ಗೌರವಿಸಿದೆ. ಇವ ಸಾಧನೆಯನ್ನು ಅಧಿಕೃತವಾಗಿ ದಾಖಲಿಸಲು, ಜನರನ್ನು ಉತ್ತೇಜಿಸಲು ‘ಭಾರತದ ಮುಟ್ಟಿನ ಗಂಡು’ ಎಂಬ ೬೩ ನಿಮಿಷಗಳ ಕಿರುಚಿತ್ರವನ್ನು ತಯಾರಿಸಿದ್ದಾರೆ.

   ನನ್ನ ಪತಿಯು ಟಿವಿಯಲ್ಲಿ ಮಾತನಾಡುವುದನ್ನು ನೋಡಿದೆ. ಪತ್ರಿಕೆಗಳಲ್ಲಿ ಅವರ ಸಮಾಜಸೇವೆಯನ್ನು ಹೊಗಳಿ ಬರೆದಿರುವ ಲೇಖನಗಳನ್ನು ಓದಿದೆ. ಅವರ ನಿಸ್ವಾರ್ಥ ಸೇವೆಯನ್ನು ನಾನು ತಪ್ಪಾಗಿ ಗ್ರಹಿಸಿ, ಬಲು ದೊಡ್ಡ ತಪ್ಪು ಮಾಡಿಬಿಟ್ಟೆ. ನನಗೆ ಈಗ ನನ್ನ ತಪ್ಪಿನ ಅರಿವಾಗಿದೆ. ೫ ವರ್ಷಗಳ ಬಳಿಕ ಅವರೊಡನೆ ದೂರವಾಣಿಯ ಮೂಲಕ ಮಾತನಾಡುವ ಧೈರ್ಯ ಮಾಡಿದೆ. ಅಳುಕುತ್ತಲೇ ಅವರನ್ನು ಮಾತನಾಡಿಸಿದೆ. ಅವರು ಯಾವ ಕೋಪ, ಬೇಸರವಿಲ್ಲದೆ ನನ್ನೊಡನೆ ಸಹಜವಾಗಿ, ಆತ್ಮೀಯವಾಗಿ ಮಾತನಾಡಿದರು. ನನಗೆ ತುಂಬಾ ಖುಷಿಯಾಯಿತು. ನಮ್ಮಿಬ್ಬರಲ್ಲಿದ್ದ ಮನಸ್ತಾಪ, ಅಪನಂಬಿಕೆ ಮಂಜಿನಂತೆ ಕರಗಿ, ನಾವು ಮತ್ತೆ ಒಂದಾದೆವು ಎಂದು ಹೇಳುತ್ತಾಳೆ ಶಾಂತಿ. ತನ್ನ ಗ್ರಾಮದ ಯಾವುದಾದರೂ ಹೆಣ್ಣುಮಗು ಮೈನೆರೆದರೆ ಶಾಂತಿ ಅವರ ಮನೆಗೆ ಹೋಗಿ ಅರುಣಾಚಲಂ ತಯಾರಿಸಿದ ಹೊಸ ಸ್ಯಾನಿಟರಿ ಪ್ಯಾಡನ್ನು ಅವಳಿಗೆ ಬಳುವಳಿಯಾಗಿ ಕೊಟ್ಟು, ಅದನ್ನು ಬಳಸುವ ರೀತಿಯನ್ನು ವಿವರಿಸಿ ಬರುತ್ತಾಳೆ!. ಅರುಣಾಚಲಂನ ಪ್ಯಾಡ್ ತಯಾರಿಕೆ ಯಂತ್ರದ ಹಕ್ಕುಗಳನ್ನು ಪಡೆಯಲು ಅನೇಕ ಉದ್ಯಮಿಗಳು ಮುಂದಾದರು. ಆದರೆ ಅರುಣಾಚಲಂ ಇದಕ್ಕೆ ಒಪ್ಪಲಿಲ್ಲ. ‘ನಾನು ಹಣಗಳಿಸುವ ಆಸೆಯಿದ್ದರೆ ನಾನು ಯಾವತ್ತೋ ಅತಿದೊಡ್ಡ ಶ್ರೀಮಂತನಾಗಿರುತ್ತಿದ್ದೆ. ಆದರೆ ನನ್ನ ಗ್ರಾಮ ಹೆಣ್ಣುಮಕ್ಕಳ ಮೂಢನಂಬಿಕೆ ಮತ್ತು ಅಜ್ಞಾನವನ್ನು ಹೋಗಲಾಡಿಸುದೇ ನನ್ನ ಸಂಕಲ್ಪ. ಅದಕ್ಕಾಗಿಯೇ ನಾನು ಇಷ್ಟು ದಿನವೂ ದುಡಿದೆ. ನನ್ನ ಸಾಧನೆಯನ್ನು ಮಾರಿಕೊಂಡು ನನ್ನ ಮನೋ ನೆಮ್ಮದಿಯನ್ನು ಕಳೆದುಕೊಳ್ಳಲಾರೆ’ ಎಂದಿದ್ದಾನೆ ಅರುಣಾಚಲಂ. ಎಂತಹ ಉದಾತ್ತ ನಿರ್ಧಾರ!

ನಮ್ಮ ಇಸ್ರೋದ ಕೇಂದ್ರ ಕಛೇರಿಯಲ್ಲೊಂದು ದಿನ

ನಮ್ಮ ಇಸ್ರೋದ ಕೇಂದ್ರ ಕಛೇರಿಯಲ್ಲೊಂದು ದಿನ

ಲೇ :  ರಾಮಚಂದ್ರ ಭಟ್ ಬಿ.ಜಿ.

ಅದು ಆಗಸ್ಟ್‌  23 !! ಭಾರತೀಯರನ್ನು ಮಾತ್ರವಲ್ಲದೇ ವಿಶ್ವದಾದ್ಯಂತ ಜನರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ದಿನ. ಎದೆಯಲ್ಲೇನೋ ತಳಮಳ. ಕೋಟ್ಯಂತರ ಹೃದಯ ದೇಗುಲಗಳು ಅದೊಂದು ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದವು.  ಅಂತೂ ಪ್ರತೀ ಭಾರತೀಯನ ಪ್ರಾರ್ಥನೆ ಫಲಿಸಿತ್ತು. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 14 ಜುಲೈ 2023 ರಂದು ಉಡಾವಣೆಗೊಂಡ ಬಾಹ್ಯಾಕಾಶ ನೌಕೆ ವಿಕ್ರಂ ಲ್ಯಾಂಡರ್‌ ಆಗಸ್ಟ್ 5 ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿ ಆಗಸ್ಟ್ 23 ರಂದು 18:03ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ಮೊದಲ ಲ್ಯಾಂಡರ್ ಎನಿಸಿತು.  ಒಂದು 
ಹಾಲಿವುಡ್ ಸಿನಿಮ ತಯಾರಿಸಲು ಖರ್ಚು ಮಾಡುವ ಹಣಕ್ದಕಿಂತ ಕಡಿಮೆ ಖರ್ಚಿನಲ್ಲಿ ನಮ್ಮ ಇಸ್ರೋ ವಿಜ್ಞಾನಿಗಳು ಚಂದ್ರಯಾನವನ್ನು ಯಶಸ್ವಿಗೊಳಿಸುತ್ತಾರೆ ಎಂದರೆ ಅದೇನು ಸಾಮಾನ್ಯ ಸಾಧನೆಯೇ? ಚಂದ್ರಯಾನ 3 ಕ್ಕೆ ತಗಲಿದ ವೆಚ್ಚ ಸುಮಾರು 65 ಮಿಲಿಯನ್ ಡಾಲರ್  (615 ಕೋಟಿ)ಗಳು. ಇದು ಇಂಟರ್‌ಸ್ಟೆಲ್ಲಾರ್ ($165 ಮಿಲಿಯನ್), ಪ್ಯಾಸೆಂಜರ್ಸ್ ($110 ಮಿಲಿಯನ್), ದಿ ಮಾರ್ಟಿಯನ್ ($108 ಮಿಲಿಯನ್), ಗ್ರಾವಿಟಿ ($100 ಮಿಲಿಯನ್), ಓಪನ್‌ಹೈಮರ್ ($100 ಮಿಲಿಯನ್) ಮೊದಲಾದ ಅನೇಕ ಹಾಲಿವುಡ್ ಚಿತ್ರಗಳ ಬಜೆಟ್‌ಗಿಂತ ಬಹಳ ಕಡಿಮೆ!!!  

    ಚಂದ್ರಯಾನ-3 ಯೋಜನೆಯು ಇಸ್ರೋದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಯೋಜನೆಯ  ಮೂಲಕ ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಯಶಸ್ಸಿನಿಂದ ಪ್ರೇರಿತಗೊಂಡ ಪ್ರಧಾನಿ ನರೇಂದ್ರ ಮೋದಿಯವರು ಚಂದ್ರನ ಮೇಲೆ ವಿಕ್ರಮ್​ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದೂ ಚಂದ್ರಯಾನ-2 ಪತನಗೊಂಡ ಸ್ಥಳಕ್ಕೆ ತಿರಂಗ ಪಾಯಿಂಟ್​ ಎಂದೂ ಹೆಸರಿಟ್ಟರು. 
"ಈ ತಿರಂಗ ಪಾಯಿಂಟ್​​​ ಭವಿಷ್ಯದಲ್ಲಿ ಭಾರತೀಯರ ಸಾಧನೆಗಳಿಗೆ ಪ್ರೇರಣೆ ನೀಡಲಿದೆ. ಹಾಗಾಗಿ ಈ ಅದ್ಭುತ ಯಶಸ್ಸನ್ನು ಪ್ರತಿ ವರ್ಷವೂ ಆಚರಿಸೋಣ. ಹಾಗಾಗಿ  ಆಗಸ್ಟ್‌ ೨೫ನ್ನು ಇನ್ನು ಮುಂದೆ ರಾಷ್ಟ್ರೀಯ ಅಂತರಿಕ್ಷ ದಿನವನ್ನಾಗಿ ಆಚರಿಸೋಣ , ಚಂದ್ರಯಾನ-3 ಯಶಸ್ಸಿನಲ್ಲಿ ಇಸ್ರೋ ಸಾಧನೆ ದೊಡ್ಡದು. ಮೇಕ್​ ಇನ್​ ಇಂಡಿಯಾ ಈಗ ಚಂದ್ರನವರೆಗೂ ತಲುಪಿದೆ " ಎಂದು ಖುಷಿಯಿಂದ ಮುಕ್ತಕಂಠದಿಂದ ಪ್ರಧಾನಿಯವರು ಇಸ್ರೊ ವಿಜ್ಞಾನಿಗಳನ್ನು ಶ್ಲಾಘಿಸಿದ್ದು ಮನದಲ್ಲಿ ಇನ್ನೂ ಹಸಿರಾಗಿದೆ.


    ಭಾರತದ ಮೊದಲ ಕೃತಕ ಉಪಗ್ರಹ ಆರ್ಯಭಟವನ್ನು 1975ರಲ್ಲಿ ಸೋವಿಯೆಟ್ ಯೂನಿಯನ್‌ನ ಕೊಸ್ಮೋಸ್-3M ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಉಡಾವಣೆ ಮಾಡುವುದರೊಂದಿಗೆ ವಿಕ್ರಂ ಸಾರಾಭಾಯಿಯವರ ಕನಸು ನನಸಾಯಿತು. ಇದಾದ ನಂತರ ಭಾರತವು ಹಲವಾರು ಉಪಗ್ರಹಗಳನ್ನು ಉಡಾವಣೆ ಮಾಡಿತು. ಭಾರತದ ಮೊದಲ ಚಂದ್ರಯಾನ ಮಿಷನ್ ಅನ್ನು 2008ರಲ್ಲಿ ಉಡಾವಣೆ ಮಾಡಲಾಯಿತು. ಈ ಮಿಷನ್ ಚಂದ್ರನ ಕಕ್ಷೆಯನ್ನು ತಲುಪಿ ಚಂದ್ರನ ಮೇಲ್ಮೈಯ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಸಂಗ್ರಹಿಸಿತು.

2013ರಲ್ಲಿ ಭಾರತವು ಮಾರ್ಸ್ ಆರ್ಬಿಟರ್ ಮಿಷನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಈ ಮಿಷನ್‌ನ ಮೂಲಕ ಭಾರತವು ಮೊದಲ ಪ್ರಯತ್ನದಲ್ಲಿಯೇ ಮಂಗಳ ಗ್ರಹದ ಕಕ್ಷೆಯನ್ನು ತಲುಪಿದ ಕೆಲವೇ ದೇಶಗಳಲ್ಲಿ ಒಂದಾಯಿತು.

ಚಂದ್ರಯಾನ-3 ಮಿಷನ್ ಭಾರತದ ಅತ್ಯಂತ ಮಹತ್ವದ ಅಂತರಿಕ್ಷ ಮಿಷನ್‌ಗಳಲ್ಲಿ ಒಂದಾಗಿದೆ. ಈ ಮಿಷನ್‌ನ ಮುಖ್ಯ ಗುರಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವುದು ಮತ್ತು ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡುವುದು.

         ಚಂದ್ರಯಾನ-3 ಮಿಷನ್‌ನಲ್ಲಿ ವಿಕ್ರಮ್ ಎಂಬ ಲ್ಯಾಂಡರ್ ಮತ್ತು ಪ್ರಗ್ಯಾನ್ ಎಂಬ ರೋವರ್ ಇದ್ದವು. ಈ ಲ್ಯಾಂಡರ್ ಮತ್ತು ರೋವರ್‌ಗಳು ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡಲು ವಿವಿಧ ವೈಜ್ಞಾನಿಕ ಸಾಧನಗಳನ್ನು ಹೊಂದಿದ್ದವು. ಚಂದ್ರಯಾನ-3 ಮಿಷನ್‌ನ ಯಶಸ್ಸು ಭಾರತದ ಅಂತರಿಕ್ಷ ಕಾರ್ಯಕ್ರಮಕ್ಕೆ ಹೊಸ ಆಯಾಮವನ್ನು ನೀಡಿದೆ. ಈ ಮಿಷನ್‌ನ ಮೂಲಕ ಭಾರತವು ಚಂದ್ರನ ಅನ್ವೇಷಣೆಯಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ.

ಉಪಗ್ರಹ ಪ್ರಯೋಗಗಳು: ಭಾರತವು ವಿವಿಧ ಉದ್ದೇಶಗಳಿಗಾಗಿ ಹಲವು ಉಪಗ್ರಹಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದೆ. ಇವುಗಳಲ್ಲಿ ಸಂವಹನ, ದೂರಸಂವೇದಿ , ಹವಾಮಾನ ಮುನ್ಸೂಚನೆ ಮತ್ತು ನೌಕಾಪಡೆಗೆ ಸಂಬಂಧಿಸಿದ ಉಪಗ್ರಹಗಳು ಸೇರಿವೆ.

ಮಂಗಳಯಾನ: ಭಾರತವು ಮಂಗಳ ಗ್ರಹಕ್ಕೆ ಯಶಸ್ವಿಯಾಗಿ ಯಾನ ಕಳುಹಿಸಿದ ಕೆಲವೇ ದೇಶಗಳಲ್ಲಿ ಒಂದಾಗಿದೆ. ಮಂಗಳಯಾನ ಯೋಜನೆಯು ಭಾರತದ ಬಾಹ್ಯಾಕಾಶ ಸಂಶೋಧನಾ ಸಾಮರ್ಥ್ಯವನ್ನು ವಿಶ್ವಕ್ಕೆ  ಶ್ಪ್ರತೋರಿಸಿದೆ.

ನಾವಿಗೇಷನ್ ಸಿಸ್ಟಮ್: ಭಾರತದ ಸ್ವಂತ ನಾವಿಗೇಷನ್ ಸಿಸ್ಟಮ್, ನಾವಿಕ, ಅಭಿವೃದ್ಧಿಗೊಂಡಿದೆ. ಇದು ಸದ್ಯೋ ಭವಿಷ್ಯದಲ್ಲಿ GPS ನಂತಹ ವಿದೇಶಿ ವ್ಯವಸ್ಥೆಗಳಿಗೆ ಪರ್ಯಾಯವಾಗಿದೆ.

  ಕಳೆದ ವರ್ಷದ ಐತಿಹಾಸಿಕ ಸಾಧನೆಯ ಅರ್ಥಪೂರ್ಣ ಆಚರಣೆಗಾಗಿ ಇಸ್ರೋ ವರ್ಷ ಪೂರ್ತಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಅಂಗವಾಗಿ ಜುಲೈ ೨೬ ರಂದು ಇಸ್ರೋದ ಪ್ರಧಾನ ಕಛೇರಿ ಮಾನವಸಹಿತ ಬಾಹ್ಯಾಕಾಶ ಉಡಾವಣಾ ಕೇಂದ್ರ(HSFC-human Space Flight centre ) ದಲ್ಲಿ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿ ಜಿಲ್ಲೆಯಿಂದ ಇಬ್ಬರಂತೆ ಪ್ರೌಢಶಾಲಾ ಶಿಕ್ಷಕರು ಹಾಗೂ ಕಾಲೇಜು ಉಪನ್ಯಾಸಕರನ್ನು ಆಹ್ವಾನಿಸಲಾಗಿತ್ತು. ಶಿಕ್ಷಕರ ಮೂಲಕ ವಿದ್ಯಾರ್ಥಿಗಳನ್ನು ತಲುಪುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸಿದ ಶಿಕ್ಷಕರು ಮತ್ತು ಉಪನ್ಯಾಸಕರುಗಳು ‌BEL ಬಳಿಯ ಅಂತರಿಕ್ಷ ಭವನವನ್ನು ಬೆಳಗಿನ ಜಾವ ೯ ಗಂಟೆಗೆ ತಲುಪಿದೆವು. ಒಳಬರುತ್ತಿದ್ದಂತೆ ಸುರಕ್ಷಾ ಪ್ರಕ್ರಿಯೆಗಳನ್ನು ಪೂರೈಸಲಾಯಿತು. ಬಹುಶಃ ಎಲ್ಲರೂ ಮೊಬೈಲ್‌ನಲ್ಲಿ ಇಸ್ರೋದ ನೆನಪುಗಳನ್ನು ಸೆರೆ ಹಿಡಿಯುವ ಆಸೆಯನ್ನು ಹೊಂದಿದ್ದೆವು. ಸುರಕ್ಷತಾ ದೃಷ್ಟಿಯಿಂದ ಎಲ್ಲರ ಮೊಬೈಲ್‌ಗಳನ್ನು ಭದ್ತಾ ಸಿಬ್ಬಂದಿಗೆ ಹಸ್ತಾಂತರಿಸಿ ಪೆಚ್ಚಾದೆವು. ಬೆಳಗ್ಗಿನಿಂದ ಸಾಯಂಕಾಲದವರೆಗೂ ಮೊಬೈಲ್‌ ಮರೆತೇ ಬಿಟ್ಟಿದ್ದೆವು. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭಗೊಂಡಿತು. ಪ್ರಾರ್ಥನೆ ಮತ್ತು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಚ್‌ಎಸ್‌ಎಫ್‌ಸಿಯ ಸಹ ನಿರ್ದೇಶಕರಾದ ಶ್ರೀ ಕೆ ಕುಮಾರ್ ಎಲ್ಲರನ್ನು ಸ್ವಾಗತಿಸಿದರು.HSFC ನಿರ್ದೇಶಕರಾದ ಶ್ರೀ ದಿನೇಶ್‌ ಕುಮಾರ್‌ ಸಿಂಗ್ ಅವರಿಂದ ಉದ್ಘಾಟನಾ ಭಾಷಣದಲ್ಲಿ  ಶಿಕ್ಷಕರಿಗಾಗಿ ಏರ್ಪಡಿಸಿದ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶ್ರೀ ಶಾಂತನು ಭಟವ್ಡೇಕರ್ ಇಸ್ರೋದ ಸಾಧನೆಗಳ ಪರಿಚಯ ಮಾಡಿದರು. ಶ್ರೀ ಎನ್ ಎಸ್ ಗೋವಿಂದರಾಜು ಐಎಎಸ್, ನಿಯಂತ್ರಕರು, HFSC ತಾವು ತುಮಕೂರಿನ ಹಳ್ಳಿಯಂದರಿಂದ ಬಂದು IAS ಅಧಿಕಾರಿಯಾಗಲು ಪ್ರೇರಣೆ ನೀಡಿದ ಶಿಕ್ಷಕರನ್ನು ನೆನೆದರು.

ಸ್ಥಳೀಯ ಸಂಘಟನಾ ಸಮಿತಿ ವಲಯ-4ರ ಅಧ್ಯಕ್ಷರಾದ ಶ್ರೀ ಆರ್ ವಿ ನಾಡಗೌಡರವರು ಕನ್ನಡದಲ್ಲೇ ಇಸ್ರೋದ ಸಾಧನೆಯನ್ನು ಮೆಲುಕು ಹಾಕಿದರು. ಇಸ್ರೋ ಸಾಧನೆಗಳು ಹೇಗೆ ಜನೋಪಯೋಗಿಯಾಗಿವೆ ಎನ್ನುವುದನ್ನು ವಿವರಿಸಿದರು. ಚಂದ್ರಯಾನ-3 ರ ಮಿಷನ್‌ ಡೈರೆಕ್ಟರ್‌ ಆಗಿದ್ದ ಎಂ. ಶ್ರೀಕಾಂತ್‌ರವರು ಆ ಯೋಜನೆಯ ರೋಮಾಂಚಕಾರಿ ಆತಂಕ, ಸಂಭ್ರಮಗಳಿಂದ ಕೂಡಿದ ಕ್ಷಣಗಳನ್ನು ನಮ್ಮ ಮುಂದೆ ತೆರೆದಿಟ್ಟರು. 

ಇವೆಲ್ಲವೂ ಸಾಕಷ್ಟು ಕುತೂಹಲಗಳಿಂದ ಕೂಡಿದ ಮರೆಯಲಾಗದ ಅನುಭವಗಳು. ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯ ಉಪಸಮಿತಿ ವಲಯ-4ರ ಅಧ್ಯಕ್ಷರಾದ ಶ್ರೀ ಕೆ ಜಿ ವಿನೋದ್ ವಂದನಾರ್ಪಣೆ ನಡೆಸಿಕೊಟ್ಟರು.

Teachers with ISRO scientists @ ISRO HQ

    ಅಪರಾಹ್ನದ ಅಧಿವೇಷನದಲ್ಲಿ ಚಂದ್ರಯಾನ -3 ರ ಪ್ರಮುಖ ರೂವಾರಿಗಳನೆನಿಸಿದ ಹಲವಾರು ವಿಜ್ಞಾನಿಗಳು ನಮ್ಮೊಂದಿಗೆ ನೇರವಾಗಿ ಸಂವಾದ ನಡೆಸಿದರು. ಬಾಹ್ಯಾಕಾಶ ಯೋಜನೆಗಳಿಗೆ ಸಂಬಂಧಿಸಿದಂತೆ ತಮ್ಮ ವೈವಿಧ್ಯಮಯ ಅನುಭವಗಳನ್ನು ಹಂಚಿಕೊಂಡರು. ಭಾರತೀಯ ಅಂತರಿಕ್ಷ ದಿನಾಚರಣೆಯ ಅಂಗವಾಗಿ ರಾಜ್ಯದಲ್ಲಿ ವಿಶೇಷವಾಗಿ ಶಿಕ್ಷಣಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಇದರೊಂದಿಗೆ ಇಸ್ರೋ ಬೆಳೆದು ಬಂದ ಹಾದಿ, ಚಂದ್ರಯಾನ, ಭಾರತದ ಬಾಹ್ಯಾಕಾಶ ಸಂಶೋಧನೆಯ ಕುರಿತಂತೆ 3 ಕಿರು ಚಿತ್ರಗಳನ್ನು  ವಿಶಾಲ ಪರದೆಯ ಮೇಲೆ ವೀಕ್ಷಿಸಿದೆವು. ಸಂಜೆ ಚಹ ಸೇವನೆಯ ನಂತರ ನಮ್ಮೆಲ್ಲರಿಗೂ ಇಸ್ರೋದ ವಸ್ತು ಪ್ರದರ್ಶನ ವೀಕ್ಷಿಸುವ ಅವಕಾಶ. ಇಸ್ರೋ ಬೆಳೆದು ಬಂದ ದಾರಿ, ವಿವಿಧ ರಾಕೆಟ್‌ಗಳ ಹಂತ ಹಂತದ ವಿಕಾಸ, ಮಾನವ ಸಹಿತ ಗಗನಯಾನ ಯೋಜನೆ, ಅದಕ್ಕಾಗಿ ಸಿದ್ಧ ಪಡಿಸಲಾದ ಕ್ರೂ ಮಾಡ್ಯೂಲ್‌, ಮಾನವ ಸಹಿತ ಯಾನದಲ್ಲಿ  ರಷ್ಯಾದವರು ಬಳಸಿದ ಕ್ರೂ ಮಾಡ್ಯೂಲ್‌ ಎಲ್ಲವೂ ಅದ್ಭುತಗಳೇ!!!. 


ನಾವೆಲ್ಲರೂ ಭಾರತದ ಕ್ರೂ ಮಾಡ್ಯೂಲ್‌ ಮಾದರಿಯಲ್ಲಿ ಪವಡಿಸಿ ಕೆಲವು ಕ್ಷಣಗಳವರೆಗೆ ಗಗನಯಾನಿಗಳಾದೆವು!!. 

https://pixabay.com/photos/space-capsule-apollo-program-lander-516048/

    ಈ ಬಾಹ್ಯಾಕಾಶ‌ ಕ್ಯಾಪ್ಸೂಲನ್ನು ಅಪೋಲೋ ದಲ್ಲಿ ಬಳಸಲಾಗಿತ್ತು . ಇದೇ ಬಗೆಯ ಕ್ಯಾಪ್ಸೂಲಿನಲ್ಲಿ  ಗಗನಯಾತ್ರಿಗಳು ಯಾನ ಕೈಗೊಳ್ಳುತ್ತಾರೆ. ಗಂಟೆಗಟ್ಟಲೆ, ದಿನಗಟ್ಟಲೆ ಅದೇ ಸ್ಥಿತಿಯಲ್ಲಿರಲು ಯಾನಿಗಳಿಗೆ ನೀಡುವ ತರಬೇತಿ ಎಂಬ ವೃತಾಚರಣೆ ಭೀಷಣವಾದದ್ದು. ಅಳ್ಳೆದೆಯವರಿಗೆ ಅಸಾಧ್ಯವಾದ ತರಬೇತಿ ಅದು!!! ನಭಕ್ಕೇರಿದ ಭಾರತದ ಮೊದಲ ಗಗನಯಾನಿ ಸ್ಕ್ವಾಡ್ರನ್‌ ಲೀಡರ್‌ ರಾಕೇಶ್‌ಶರ್ಮರವರು ತೊಟ್ಟ ಉಡುಪನ್ನು ಸ್ಪರ್ಷಿಸಿದೆವು. ಮೈಯಲ್ಲಿ ಪುಳಕ ! ಅದೇನೋ ಅನಿರ್ವಚನೀಯ ಆನಂದ. ಭಾವುಕ ಕ್ಷಣಗಳು!!!

                              

                      https://upload.wikimedia.org/wikipedia/commons/5/5d/Nehru_Planetarium_costume_of_Rakesh_Sharma.jpg

 ‌೧೯೮೪ ರ ಏಪ್ರಿಲ್‌ 2 ರಂದು ಭಾರತದ ಪ್ರಧಾನಿ ಇಂದಿರಾ ಗಾಂಧಿಯವರು ನಿಮಗೆ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತಿದೆ ಎಂದಾಗ ಬಂದ ಉತ್ತರ ಎಂತಹ ಅದ್ಭುತ “ಸಾರೇ  ಜಹಾಂ ಸೆ ಅಚ್ಛಾ ” ಭಾರತೀಯರ ಮೈನವಿರೇಳಿಸುವ ಕ್ಷಣಗಳು. ಅಲ್ಲಿನ ಯುವ ವಿಜ್ಞಾನಿಗಳು ನಮಗೆ ಹಲವಾರು ಮಾಹಿತಿ ನೀಡಿದರು. ನಾವೂ ಇಸ್ರೋದ ಫೋಟೊಗ್ರಾಫರ್‌ಗೆ ಫೋಸ್‌ ನೀಡಿದ್ದೇ ನೀಡಿದ್ದು. ಎಲ್ಲಾ ವೀಕ್ಷಿಸಿ ನಾವೂ ನಮ್ಮ ಇಸ್ರೋದ ಕೇಂದ್ರ ಕಛೇರಿಗೆ ಭೇಟಿದ ಹೆಮ್ಮೆಯೊಂದಿಗೆ, ಸಮಾಜ ವಿಜ್ಞಾನದಿಂದ ದೂರ ಸರಿಯುತ್ತಿರುವ ಈ ಹೊತ್ತಿನಲ್ಲಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದೆಡೆಗೆ ಸೆಳೆದು ಹೊಸ ಹುರುಪನ್ನು ತುಂಬುವ ಕನಸಿನೊಂದಿಗೆ ಹೊರಬಂದೆವು. ಈ ಭೇಟಿಯು ನಮ್ಮ ಸ್ಮೃತಿಪಟಲದಲ್ಲಿ ಅಚ್ಚಳಿಯದಂತೆ ಮುದ್ರೆಯೊತ್ತಿ ಬದುಕಿನ ವಿಸ್ಮರಣೀಯ ಕ್ಷಣವಾಯಿತು. 

    ಆಗಸ್ಟ್‌ 9ರಂದು ಗದಗದಲ್ಲಿ ಇಂತಹ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲಿನ  ಪ್ರೌಢಶಾಲಾ ಶಿಕ್ಷಕರು , ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ  ಸಂಶೋಧನೆಗೆ ಸಂಬಂಧಿಸಿದಂತೆ ಕೊಲಾಜ್‌ , ಚಿತ್ರಕಲಾ ಸ್ಪರ್ಧೆಗಳು, ವಿದ್ಯಾರ್ಥಿ - ವಿಜ್ಞಾನಿ ಸಂವಾದ, ಇಸ್ರೋ ಸಾಧನೆಯನ್ನು ಪ್ರದರ್ಶಿಸುವ ವಸ್ತು ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.  ಸಮೀಪದ ಶಾಲೆ ಕಾಲೇಜುಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಇಸ್ರೋದ ಭವಿಷ್ಯದ ಯೋಜನೆಗಳು

ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO) ಭವಿಷ್ಯದಲ್ಲಿ ಹಲವಾರು ಅಂತರಿಕ್ಷ ಮಿಷನ್‌ಗಳನ್ನು ರೂಪಿಸಿ ಉಡಾವಣೆ ಮಾಡಲು ಯೋಜಿಸಿದೆ. ಇದರಲ್ಲಿ ಗಗನಯಾನ ಮಿಷನ್, ಸೂರ್ಯಯಾನ ಮಿಷನ್ ಮತ್ತು ಇತರ ಗ್ರಹಗಳ ಅನ್ವೇಷಣೆ ಮಿಷನ್‌ಗಳು ಸೇರಿವೆ. ಇವು ಹಲವು ಹಂತಗಳಲ್ಲಿ ಪ್ರಗತಿಯಲ್ಲಿವೆ. ಗಗನಯಾನ ಮಿಷನ್‌ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿಯನ್ನು ಹೊಂದಿದೆ. ಈಗಾಗಲೇ ಇದಕ್ಕೆ ಸಾಕಷ್ಟು ಸಿದ್ಧತೆ ಭರದಿಂದ ಸಾಗಿದೆ. ಆದಿತ್ಯ L-1  (Aditya-L1) ಮಿಷನ್‌ ಸೂರ್ಯನನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. ಕ್ಷ – ಕಿರಣ ಖಗೋಳ ವಿಜ್ಞಾನ ಅಧ್ಯಯನಕ್ಕಾಗಿ ಎಕ್ಸ್ಪೋ ಸ್ಯಾಟ್‌ (X-ray Astronomy XPoSat ) ಅನ್ನು  PSLV-C58 ಬಳಸಿ ಉಡಾವಣೆ ಮಾಡಲಾಗಿದೆ.

 ಚಂದ್ರಯಾನ-3 ಮಿಷನ್‌ನ ಮಹಾ ಯಶಸ್ಸು ಭಾರತದ ಅಂತರಿಕ್ಷ ಕಾರ್ಯಕ್ರಮದಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ. ಈ ಮಿಷನ್‌ನ ಮೂಲಕ ಭಾರತವು ವಿಶ್ವದ ಅತ್ಯಂತ ಪ್ರಮುಖ ಅಂತರಿಕ್ಷ ತಂತ್ರಜ್ಞಾನವುಳ್ಳ ರಾಷ್ಟ್ರವಾಗಿದೆ.  ಅಂದು ಜನಸಾಮಾನ್ಯರಿಗೆ ಯಾವುದೇ ಅನುಕೂಲವಿಲ್ಲದ ಈ ಬಾಹ್ಯಾಕಾಶ ಯೋಜನಗಳಿಗೇಕೆ ಹಣ ವ್ಯರ್ಥ ಮಾಡಬೇಕು ಎಂದು ಹೀಗಳೆಯುತ್ತಿದ್ದವರೇ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ ಇಸ್ರೋ ಈಗ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿ ಬದಲಾಗಿರುವುದು ಇಸ್ರೋದ ವಿಜ್ಞಾನಿಗಳ ಅಸಾಧಾರಣ ಕೃತುಶಕ್ತಿ ಸೈದ್ಧಾಂತಿಕ ಗೆಲುವಿನ ದ್ಯೋತಕವಾಗಿದೆ.

ಇಸ್ರೋ ನಮ್ಮ ಜೀವನಕ್ಕೆ ಒದಗಿಸಿದ ಅನುಕೂಲತೆಗಳು ಒಂದೇ ಎರಡೇ?

ಸಂವಹನ : ಇಸ್ರೋದ ಉಪಗ್ರಹಗಳಿಂದಾಗಿಯೇ ನಾವು ದೂರದರ್ಶನ ನೋಡಬಹುದು, ಮೊಬೈಲ್‌ನ ಮೂಲಕ ಬಂಧುಮಿತ್ರರನ್ನು ಸಂಪರ್ಕಿಸಬಹುದು ಮತ್ತು ಇಂಟರ್ನೆಟ್ ಬಳಸಬಹುದು. ಈ ಎಲ್ಲಾ ಸಂವಹನ ವ್ಯವಸ್ಥೆಗಳು ಇಸ್ರೋದ ಉಪಗ್ರಹಗಳನ್ನು ಅವಲಂಬಿಸಿದೆ.

ಹವಾಮಾನ ಮುನ್ಸೂಚನೆ: ಇಸ್ರೋದ ಉಪಗ್ರಹಗಳು ಹವಾಮಾನವನ್ನು ನಿಖರವಾಗಿ ಮುನ್ಸೂಚಿಸಲು ಸಹಾಯ ಮಾಡುತ್ತವೆ. ಇದರಿಂದ ಕೃಷಿಕರು ಬೆಳೆಗಳನ್ನು ಬೆಳೆಸಲು ಮತ್ತು ಪ್ರಕೃತಿ ವಿಕೋಪಗಳಿಂದ ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ. ಕೇರಳದ ವೈನಾಡಿನ ಜಲಪ್ರಳಯ, ಕರ್ನಾಟಕದಲ್ಲಿನ ಮಹಾಮಳೆ, ಉತ್ತರ ಭಾರತದಲ್ಲಿನ ಮೇಘಸ್ಫೋಟ ಇತ್ಯಾದಿಗಳ ಸಂದರ್ಭದಲ್ಲಿ ಉಪಗ್ರಹಗಳು ನೀಡಿದ ಹವಾಮಾನ ಮುನ್ಸೂಚನೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಭೂಮಿಯ ಅಧ್ಯಯನ : ಇಸ್ರೋದ ಉಪಗ್ರಹಗಳು ಭೂಮಿಯ ಮೇಲ್ಮೈಯನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತವೆ. ಇದರಿಂದ ನಾವು ನಮ್ಮ ನೈಸರ್ಗಿಕ ಸಂಪತ್ತುಗಳನ್ನು ಹೇಗೆ ಸಂರಕ್ಷಿಸಬೇಕು ಎಂಬುದನ್ನು ತಿಳಿಯಬಹುದು.

 ಸಮೀಕ್ಷೆ: ಇಸ್ರೋದ ಕಾರ್ಟೋಸ್ಯಾಟ್ನಂತಹ ಉಪಗ್ರಹಗಳನ್ನು ಭೂ ಸಮೀಕ್ಷೆ ಮಾಡಲು ಬಳಸಲಾಗುತ್ತದೆ. ಇದರಿಂದ ನಾವು ನಕ್ಷೆಗಳನ್ನು ರಚಿಸಬಹುದು ಮತ್ತು ನಮ್ಮ ದೇಶದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬಹುದು.

      ಸಂಪರ್ಕ: ದೂರದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಂಪರ್ಕ ಕಲ್ಪಿಸಲು ಇಸ್ರೋದ ಉಪಗ್ರಹಗಳು ಸಹಾಯ ಮಾಡುತ್ತವೆ.

       ವಿಪತ್ತು ನಿರ್ವಹಣೆ: ಭೂಕಂಪ, ಸುನಾಮಿ ಇತ್ಯಾದಿ ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಇಸ್ರೋದ ಉಪಗ್ರಹಗಳು ರಕ್ಷಣಾ ಕಾರ್ಯಾಚರಣೆಗಳಿಗೆ ಸಹಾಯ ಮಾಡುತ್ತವೆ.

ಇಸ್ರೋ ನಮ್ಮ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಮ್ಮೆಯ ಸಂಸ್ಥೆಯಾಗಿದೆ. ಭಾರತೀಯ ಬಾಹ್ಯಾಕಾಶ ದಿನವು ನಮ್ಮ ದೇಶದ ಬಾಹ್ಯಾಕಾಶ ಸಾಧನೆಗಳನ್ನು ಸ್ಮರಿಸುವ ದಿನವಾಗಿದೆ. ಈ ದಿನವು ಯುವ ಪೀಳಿಗೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿಯನ್ನು ಹುಟ್ಟುಹಾಕಲು ಸಹಾಯ ಮಾಡುತ್ತದೆ. ಇಸ್ರೋದ ಯಶಸ್ಸು ನಮ್ಮ ದೇಶದ ಬೌದ್ಧಿಕ, ಆರ್ಥಿಕ ಸಾಮರ್ಥ್ಯಗಳ ದ್ಯೋತಕವಾಗಿದೆ.   

ಎಲ್ಲರಿಗೂ ಭಾರತೀಯ ಅಂತರಿಕ್ಷ ದಿನದ ಶುಭಾಶಯಗಳು. ಆಗಸ್ಟ್‌ 23 ರಂದು ಆಚರಿಸಲಾಗುವ ರಾಷ್ಟ್ರೀಯ ಅಂತರಿಕ್ಷ ದಿನದ ಅರ್ಥಪೂರ್ಣ ಆಚರಣೆಯನ್ನು ಯಶಸ್ವಿಯಾಗಿಸೋಣ.


ಟ್ವಿಂಕಲ್.. ಟ್ವಿಂಕಲ್... ಲೀಥಿಯಂ ಸ್ಟಾರ್ !

ಟ್ವಿಂಕಲ್.. ಟ್ವಿಂಕಲ್...ಲೀಥಿಯಂ ಸ್ಟಾರ್ !

 ಲೇಖಕರು : ರಮೇಶ, ವಿ,ಬಳ್ಳಾ

ಅಧ್ಯಾಪಕರು, ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು

(ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ

ಮೊ: ೯೭೩೯೦೨೨೧೮೬

ಬೆಳಿಗ್ಗೆ ಪತ್ರಿಕೆಗಳನ್ನು ಓದುತ್ತಿದ್ದೆ. ಮಗ ಓಡಿ ಬಂದು ಪತ್ರಿಕೆ ಮೇಲೆ ಎಳೆದ. ಒಂದು ಪುಟದ ಅಂಚು ಸ್ವಲ್ಪ ಹರಿದು ಹೋಯಿತು. ತಕ್ಷಣ ಸಿಟ್ಟು ಮಾಡಿ ಗದರಿಸಿದೆ. ಮಗ ತಕ್ಷಣ ಏನು ತಿಳಿಯಿತೋ ಏನೊ ಓಡಿ ಹೋಗಿ ಪಕ್ಕದ ಮನೆಯಲ್ಲಿನ ಮತ್ತೆರಡು ಪತ್ರಿಕೆಗಳನ್ನು ಹಿಡಿದು ತಂದು ‘ತಗೋ ಪಪ್ಪಾ ! ಓದು’ ಎಂದು ಕೋಪದಿಂದಲೇ ಕೊಟ್ಟ. ಅಯ್ಯೋ ಇದೇನು ಕಥೆ ಎಂದು ಸುಮ್ಮನೆ ಓದಿದೆ. ಆದರೆ ಆ ದಿನದ ಅಷ್ಟೂ ಪತ್ರಿಕೆಗಳಲ್ಲಿ ಒಂದು ವಿಷಯ ಮಾತ್ರ ತುಂಬಾ ರಾರಾಜಿಸುತ್ತಿದ್ದದ್ದು ಕಣ್ಣಿಗೆ ಎದ್ದು ಕಂಡಿತು. ಹೌದು ! ಅದು ‘ಲೀಥಿಯಂ’ ಕುರಿತಾದದ್ದು. ಇತ್ತೀಚೆಗೆ ಈ ಲೀಥಿಯಂನ ನಿಕ್ಷೇಪಗಳು ಭಾರತದಲ್ಲಿ ಪತ್ತೆಯಾಗಿ ಸುದ್ಧಿ ಮಾಡಿವೆ. ಆ ಸುದ್ಧಿಯ ಗುಂಗಿನಲ್ಲಿರುವಾಗಲೇ ಮಗ ಟ್ವಿಂಕಲ್ ಟ್ವಿಂಕಲ್ ಅಂತಾ. . . ಹಾಡುತ್ತಾ ಮತ್ತೇ ಓಡೋಡಿ ಬಂದ. ಆಗ ನನ್ನ ಪತ್ರಿಕೆ ಓದಿನ ಮುಖ್ಯ ವಿಷಯ ‘ಲೀಥಿಯಂ’ ಸ್ಟಾರ್ ಆಗಿ ಹೊಳೆಯುತ್ತಿದ್ದದ್ದನ್ನು ನೋಡಿ ‘ಟ್ವಿಂಕಲ್.. ಟ್ವಿಂಕಲ್... ಲಿಥೀಯಂ ಸ್ಟಾರ್ ! ಎಂದು ಹೇಳಬೇಕೆನಿಸಿತು. ನಿಜ! ಅಷ್ಟರ ಮಟ್ಟಿಗೆ ಲೀಥಿಯಂ ಚರ್ಚೆಯಾಗುತ್ತಿದೆ.

ಲೀಥಿಯಂಗೆ ಯಾಕೆ ಇಷ್ಟು ಮಹತ್ವ ?

ಲೀಥಿಯಂ ಒಂದು ಸೀಮಿತ ಲಭ್ಯತೆ ಹೊಂದಿದ ಅತ್ಯಂತ ಉಪಯುಕ್ತ ಧಾತು. ನಮ್ಮ ಮುಂದುವರೆದ ಜ್ಞಾನ ಕ್ಷೀಪ್ರತೆಯಲ್ಲಿ ಆಧುನಿಕವಾಗಿ ಬಹಳಷ್ಟು ಆವಿಷ್ಕಾರಗಳು ಬೆಳಕಿಗೆ ಬಂದಿವೆ. ಇಂದಿನ ನಮ್ಮ ಬದಲಾದ ಜೀವನಶೈಲಿ, ತ್ವರಿತ ಕಾರ್ಯಾಚರಣೆ, ಹೆಚ್ಚಿದ ಅವಶ್ಯಕತೆಗಳು ಹೊಸ ಹೊಸದನ್ನು ಹುಡುಕುವಂತೆ ಮಾಡುತ್ತಿವೆ. ಹಾಗಾಗಿ ನಾವಿಂದು ಬಳಸುವಂತಹ ಬಹುತೇಕ ತಾಂತ್ರಿಕತೆಯ ಅದರಲ್ಲೂ ಇಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ ಉಪಕರಣಗಳು, ಬ್ಯಾಟರಿಗಳು, ಸೋಲಾರ್ ಸಾಮಗ್ರಿಗಳು, ಸಿರಾಮಿಕ್, ಗಾಜು, ಪಾಲಿಮರ್ ಮುಂತಾದವುಗಳ ತಯಾರಿಕೆಯಲ್ಲಿ ಲೀಥಿಯಂನ ಪಾತ್ರ ಬಹು ದೊಡ್ಡದಿದೆ. ಹಾಗಾಗಿ ಲೀಥಿಯಂ ಮುನ್ನಲೆಗೆ ಬಂದಿದೆ. ಆದರೆ ಅಷ್ಟೂ ಉತ್ಪಾದನೆಯ ಮೂಲ ಬೇರು ಆದ ಈ ಧಾತುವಿಗಾಗಿ ನಾವು ಇಂದು ಬೇರೆ ದೇಶಗಳನ್ನು ಆಶ್ರಯಿಸಬೇಕಾಗಿದೆ. ನಮ್ಮ ಅವಶ್ಯಕತೆಯ ೧೦೦% ರಷ್ಟು ಲೀಥಿಯಂ ವಿದೇಶಗಳಿಂದಲೇ ಆಮದಾಗುತ್ತಿರುವುದು ವಾಸ್ತವ ಸಂಗತಿ.

ಇಂತಹ ಸಂದರ್ಭದಲ್ಲಿ ಮರುಭೂಮಿಯಲ್ಲಿ ಸಿಗುವ ಚಿಕ್ಕ ಚಿಕ್ಕ ನೀರಿನ ಆಸರೆ ಓಯಸಿಸ್ ಹಾಗೇ ನಮ್ಮ ದೇಶದಲ್ಲೂ ಲೀಥಿಯಂ ದೊರೆತರೆ ಅದಕ್ಕಿಂತ ಭಾಗ್ಯ ಇನ್ನೊಂದಿರಲಿಕ್ಕಿಲ್ಲ. ಇತ್ತೀಚಿನ ಸುದ್ಧಿಯಂತೆ ಆ ಭಾಗ್ಯದ ಬಾಗಿಲು ತೆರೆದಿರುವ ಸುಳಿವು ಸಿಕ್ಕಿದೆ. ವಿಜ್ಞಾನಿಗಳಲ್ಲಿ ಕುತೂಹಲ ಹೆಚ್ಚಿಸಿ ದೇಶವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುವ ಕನಸು ಚಿಗುರಿಸಿದೆ.

ಲೀಥಿಯಂ ನಿಕ್ಷೇಪಗಳು ಎಲ್ಲಿ ?

ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಜಮ್ಮು ಕಾಶ್ಮೀರ ಪ್ರಾಂತ ಭಾಗದಲ್ಲಿ ಲೀಥಿಯಂ ನಿಕ್ಷೇಪಗಳು ಪತ್ತೆಯಾಗಿರುವುದನ್ನು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷನಾಲಯದ(Geological Survey of India) ಉನ್ನತ ಅಧ್ಯಯನ ತಂಡ ಪತ್ತೆ ಮಾಡಿದೆ. ಅತ್ಯಮೂಲ್ಯ ಖನಿಜ ಸಂಪತ್ತಾದ ಲೀಥಿಯಂ ಅಪರೂಪವೆಂಬಂತೆ ಪ್ರಸಿದ್ಧ ವೈಷ್ಣೋದೇವಿ ಪರ್ವತಗಳ ಸಾಲಿನಲ್ಲಿ ಬೆಳಕಿಗೆ ಬಂದಿದ್ದು ಜಗತ್ತಿನ ಕಣ್ಣು ಭಾರತದತ್ತ ಹೊರಳುವಂತೆ ಮಾಡಿದೆ. ಈ ನಿಕ್ಷೇಪ ಸುಮಾರು ೫೯ ಲಕ್ಷ ಟನ್‌ದಷ್ಟಿದ್ದು ಚೀನಾವನ್ನೇ ಹಿಂದಿಕ್ಕುವ ಮುನ್ಸೂಚನೆ ನೀಡಿದೆ. ಅಂತೆಯೇ ಭಾರತ ಲೀಥಿಯಂ ನಿಕ್ಷೇಪ ಹೊಂದಿರುವ ವಿಶ್ವದ ೩ನೇ ದೊಡ್ಡ ರಾಷ್ಟ್ರವಾಗಿ ಕಂಗೊಳಿಸಲಿದೆ. ಅಂದರೆ ೯೩ ಲಕ್ಷ ಟನ್ ನಿಕ್ಷೇಪ ಹೊಂದಿರುವ ಚಿಲಿ ದೇಶ ಹಾಗೂ ೬೩ ಲಕ್ಷ ಟನ್ ಹೊಂದಿರುವ ಆಸ್ಟ್ರೇಲಿಯಾ ಮೊದಲೆರಡು ಸ್ಥಾನದಲ್ಲಿವೆ. ನಂತರದಲ್ಲಿ ಭಾರತ ಗುರುತಿಸಿಕೊಳ್ಳಲಿದೆ.

ನಮ್ಮ ಇಂದಿನ ಬಹಳಷ್ಟು ಇಲೆಕ್ಟ್ರಾನಿಕ್ ಉಪಕರಣಗಳಿಗೆ ಬ್ಯಾಟರಿಯ ಅವಶ್ಯಕತೆ ಇದೆ. ಆ ಬ್ಯಾಟರಿಗಳ ಮೂಲ ಈ ಲೀಥಿಯಂ ಎಂಬ ಬಿಳಿ ಬಂಗಾರ. ನಾವಿಂದು ಬಳಸುವ ಮೊಬೈಲ್ ಫೋನ್‌ಗಳು, ಸೋಲಾರ್ ಫಲಕಗಳು, ಇಲೆಕ್ಟ್ರಿಕ್ ಕಾರುಗಳು, ಲ್ಯಾಪ್‌ಟಾಪ್‌ಗಳು ಮುಂತಾದವು ಕಾರ್ಯ ನಿರ್ವಹಿಸುವಲ್ಲಿ ಇದರ ಪಾತ್ರ ಹೆಚ್ಚಿದೆ.

ಲೀಥಿಯಂ ನಿಜವಾಗಿಯೂ ಏನು ?

ನಮ್ಮ ಆವರ್ತಕ ಕೋಷ್ಠಕದ ಪ್ರಕಾರ S ಬ್ಲಾಕ್‌ಗೆ ಸೇರಿದ ಲೀಥಿಯಂ ಮೊದಲ ಕಂಬ (group) ಸಾಲಿನ ಎರಡನೆಯ ಹಾಗೂ ಎರಡನೇ ಅಡ್ಡಸಾಲಿ (period)ನಲ್ಲಿನ ಮೊದಲ ಸದಸ್ಯ ಧಾತು. Li ಸಂಕೇತ ಹೊಂದಿರುವ ಇದರ ಪರಮಾಣು ಸಂಖ್ಯೆ (Z) ೩ ಆಗಿದ್ದು, ರಾಶಿ ಸಂಖ್ಯೆಯು (A) ೬.೯೪೧ ಆಗಿದೆ. ಲೀಥಿಯಂನಲ್ಲಿರುವ ಲಿಥೋಸ್ ಪದ ಹೇಳುವಂತೆ ಇದು ಸ್ಟೋನ್ ಎಂಬ ಅರ್ಥ ಕೊಡುತ್ತದೆ. ಇದು ಒಂದು ಬಿಳಿ ಬೆಳ್ಳಿ ಬಣ್ಣದ ಕ್ಷಾರ ಘನ ಲೋಹವಾದರೂ ಮೃದುವಾಗಿದೆ. ಎಷ್ಟು ಮೃದು ಎಂದರೆ ಚಾಕುವಿನಿಂದ ಸುಲಭವಾಗಿ ಕತ್ತರಿಸಿ ಬಿಡಬಹುದು. ಹೆಚ್ಚು ಕ್ರಿಯಾಪಟುವಾಗಿದ್ದು, ಹೊತ್ತಿಕೊಳ್ಳುವ (flammable) ಗುಣ ಹೊಂದಿರುವ ಕಾರಣ ನಿರ್ವಾತ ಪ್ರದೇಶ, ಜಡ ವಾತಾವರಣ (inert atmosphere) ಅಥವಾ ಜಡದ್ರವ (inert liquid) ಗಳಾದ ಶುದ್ಧೀಕರಿಸಿದ ಸೀಮೆಎಣ್ಣೆ (kerosene) ಯಲ್ಲಿ ಹಾಗೂ ಖನಿಜ ಎಣ್ಣೆ (mieral oil) ಯಲ್ಲಿ ಇದನ್ನು ಸಂಗ್ರಹಿಸಲಾಗುತ್ತದೆ. ಇದು ಬಹುತೇಕ ಲೋಹಗಳಂತೆ ಹೊಳೆಯುವ(lustre) ಲಕ್ಷಣವಿದ್ದರೂ, ಗಾಳಿಯೊಂದಿಗೆ ಬಹುಬೇಗ ವರ್ತಿಸಿ ಕಪ್ಪು ಬಣ್ಣಕ್ಕೆ ತಿರುಗಿ ಬದಲಾಗುತ್ತದೆ. ಬಹುತೇಕ ಕಬ್ಬಿಣದಂತೆ ತುಕ್ಕು ಹಿಡಿಯುವ ಗುಣವೂ ಇದಕ್ಕಿದೆ. ೧೮೧೭ರಲ್ಲಿ ಜೋಹಾನ್ ಅಗಷ್ಟ್ ರ‍್ಫವೆಸನ್ ಈ ಧಾತುವನ್ನು ಕಂಡುಹಿಡಿದ.

ಬ್ರಹ್ಮಾಂಡ ರೂಪುಗೊಂಡ ಪರಿಕಲ್ಪನೆಯ ಹಿಂದಿನ ಸತ್ಯ ಬಿಗ್ ಬ್ಯಾಂಗ್ ಸಿದ್ಧಾಂತ. ಆ ಸಂದರ್ಭದಲ್ಲಿ ಘಟಿಸಿದ ಘಟನಾವಳಿಗಳು ಹಲವು ಹೊಸತುಗಳಿಗೆ ನಾಂದಿ ಆದವು. ಹಾಗೇ ರೂಪುಗೊಂಡ ಹಲವು ಧಾತುಗಳಲ್ಲಿ ಲೀಥಿಯಂ ಕೂಡ ಒಂದು. ಇದು ಭೂ ಮೇಲ್ಮೆ ಮೇಲೆ ಮಾತ್ರವಲ್ಲದೇ ಮಂಗಳ ಗ್ರಹ, ಭೂಮಿಯ ಉಪಗ್ರಹವಾದ ಚಂದ್ರನಲ್ಲೂ, ಅಷ್ಟೇ ಏಕೆ ಕ್ಷುದ್ರ ಗ್ರಹಗಳ ವ್ಯಾಪ್ತಿಯಲ್ಲಿಯೂ ಆವರಿಸಿಕೊಂಡಿರುವುದು ಗೊತ್ತಾಗಿದೆ.

ಇದು ಉತ್ತಮ ಉಷ್ಣ ಹಾಗೂ ವಿದ್ಯುತ್ ವಾಹಕತೆ ಹೊಂದಿದೆ. ಇದರ ಕರಗುವ ಬಿಂದು ೧೮೦.೫೦ ಡಿಗ್ರಿ ಸೆಲ್ಸಿಯಸ್ ಮತ್ತು ಕುದಿಬಿಂದು ೧,೩೪೨ ಡಿಗ್ರಿ ಸೆಲ್ಸಿಯಸ್ ಆಗಿದೆ. ಇದೊಂದು ಅತ್ಯಂತ ಕಡಿಮೆ ಸಾಂಧ್ರತೆ (೦.೫೩೪ಗ್ರಾಂ / ಸೆಂ.ಮೀ3) ಯುಳ್ಳ ಧಾತುವಾಗಿದ್ದು ಹೋಲಿಕೆಯಲ್ಲಿ ಫೈನ್ ಮರದ ಸಾಂಧ್ರತೆಗಿಂತಲೂ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ಕೊಠಡಿ ಉಷ್ಣತೆಯಲ್ಲಿ ಕಡಿಮೆ ಸಾಂಧ್ರತೆ ಹೊಂದಿದ ಘನ ಧಾತುಗಳಲ್ಲಿ ಇದು ಕೊನೆಯದ್ದು. ಇದು ಹಗುರ ಹೈಡ್ರೋಕಾರ್ಬನ್ ತೈಲಗಳ ಮೇಲೆ ಸುಲಭವಾಗಿ ತೇಲುತ್ತದೆ. ಹಾಗೇ ನೀರಿನ ಮೇಲೆ ತೇಲುವ ಮೂರು ಲೋಹಗಳಲ್ಲಿ ಇದು ಕೂಡ ಒಂದು. ಉಳಿದಂತೆ ಆ ಇನ್ನೇರಡು ಲೋಹಗಳೆಂದರೆ ಸೋಡಿಯಂ ಮತ್ತು ಪೋಟ್ಯಾಸಿಯಂ. ಈ ಲೀಥಿಯಂ 6Li ಮತ್ತು 7Li ಎಂಬ ಸಮಾಂಗಿ (isomers) ಗಳನ್ನು ಹೊಂದಿದೆ.

ನಿಸರ್ಗದಲ್ಲಿ ಮುಕ್ತ ರೂಪದಲ್ಲಿ ದೊರೆಯದ ಲೀಥಿಯಂ ಹಲವು ಹರಳುಗಳ ದೊಡ್ಡದಾದ ಸಂಕೀರ್ಣ ಅಂತರಬಂಧದ ರಚನೆಯುಳ್ಳ ಅಗ್ನಿಶಿಲೆಯಾಗಿದೆ. ಈ ಪೆಗಮ್ಯಾಟೆಟಿಕ್ ಖನಿಜದಲ್ಲಿ ಅಡಗಿದ ಲೀಥಿಯಂ ಅದಿರು ನಾವಿಂದು ಬಳಸುವ ಲೀಥಿಯಂನ ಮುಖ್ಯ ಮೂಲವಾಗಿದೆ. ಅಲ್ಲದೇ ಸಮುದ್ರ ನೀರಿನಲ್ಲಿ ಸಾಂಧ್ರಗೊಂಡ ಲವಣಗಳಲ್ಲಿಯೂ ಇದರ ಆಯಾನಿಕ್ ಗುಣದಿಂದ ಲಭ್ಯವಾಗುತ್ತದೆ. ಆದರೆ ಸೀಮಿತ ಲಭ್ಯತೆ ಹೊಂದಿದ ಧಾತು ಇದಾಗಿದ್ದು ಭವಿಷ್ಯದಲ್ಲಿ ಇದರ ಕೊರತೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸದ್ಯದ ಮಟ್ಟಿಗೆ ನಿಕ್ಷೇಪ ದೊರೆತ ಖುಷಿಯಲ್ಲಿದ್ದು ಉದ್ಯೋಗವಕಾಶ ಹಾಗೂ ಸ್ವಾವಲಂಬನೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಬ್ಯಾಟರಿ ಆಧಾರಿತ ಉತ್ಪನ್ನಗಳ ಉತ್ಪಾದನೆಯಿಂದ ಮಾರುಕಟ್ಟೆ ವ್ಯವಸ್ಥೆ ಸುಧಾರಿಸಿ ಪ್ರಗತಿಗೆ ನಾಂದಿ ಹಾಡಬಹುದು ಎಂಬುದು ಒಂದು ಕಡೆಯಾದರೆ ಆದರ ಹಿಂದೆ ಸವಾಲುಗಳು ಬಹಳಷ್ಟಿವೆ. ನಿಕ್ಷೇಪಗಳಲ್ಲಿನ ಆ ಕಲ್ಲು ಬಂಡೆಗಳನ್ನು ಪುಡಿ ಮಾಡಿ ಅದಿರು ತೆಗೆಯುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಸಾಕಷ್ಟು ನೈಪುಣ್ಯತೆ, ಆರ್ಥಿಕ ಬೆಂಬಲ, ತಾಂತ್ರಿಕತೆಯ ಅವಶ್ಯಕತೆ ಇದೆ. ವೈಜ್ಞಾನಿಕವಾಗಿ ಆ ನಿಕ್ಷೇಪಗಳಿಂದ ಲೀಥಿಯಂ ತೆಗೆಯುವ ತಾಂತ್ರಿಕತೆ, ವಿಧಾನಗಳು, ದೊಡ್ಡ ದೊಡ್ಡ ಯಾಂತ್ರಿಕ ಸಲಕರಣೆಗಳು, ತಜ್ಞತೆ ಅಷ್ಟು ನಮ್ಮಲ್ಲಿಲ್ಲ ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಅದೇನೆ ಇರಲಿ ಕುತೂಹಲ ಹುಟ್ಟು ಹಾಕಿರುವ ಲೀಥಿಯಂ ಸದ್ಯಕ್ಕಂತೂ ಸ್ಟಾರ್ ಆಗಿ ಸುದ್ಧಿಯಾಗಿದೆ.

 

********

ಆಕರಗಳು :

ಆವರ್ತಕ ಕೋಷ್ಟಕ

ರಸಾಯನಶಾಸ್ತ್ರದ ಅರಿವು- ಸಿ. ಎನ್. ಆರ್. ರಾವ್

ಜಾಲತಾಣ

ಸುದ್ದಿ ಪತ್ರಿಕೆಗಳು


ವಿಶ್ವ ಸೊಳ್ಳೆ ದಿನ

 ವಿಶ್ವ ಸೊಳ್ಳೆ ದಿನ


ಲೇಖಕರು : ಬಿ ಎನ್ ರೂಪ, 

 ಸಹ ಶಿಕ್ಷಕರು,

ಕೆಪಿಎಸ್ ಜೀವನ್ ಭೀಮ ನಗರ,

ಬೆಂಗಳೂರು ದಕ್ಷಿಣ ವಲಯ -4.    


 ಪ್ರತಿ ವರ್ಷವೂ ವಿಶ್ವ ಸೊಳ್ಳೆ ದಿನವನ್ನು ಆಗಸ್ಟ್ 20 ರಂದು ಆಚರಿಸಲಾಗುತ್ತದೆ. 1897 ರಲ್ಲಿ ಸೊಳ್ಳೆಗಳ ಕಡಿತದಿಂದ  ಮಲೇರಿಯಾ ರೋಗ ಹರಡುತ್ತದೆ ಎಂಬುದನ್ನು  ಕಂಡುಹಿಡಿದ  ಬ್ರಿಟಿಷ್ ವೈದ್ಯ ಸರ್ ರೊನಾಲ್ಡ್ ರಾಸ್ ಅವರ ಸ್ಮರಣಾರ್ಥವಾಗಿ ಆಗಸ್ಟ್ 20 ರಂದು ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ.

ಪ್ರತಿ ವರ್ಷ ಈ ದಿನವು ಸೊಳ್ಳೆಯಿಂದ ಹರಡುವ ರೋಗಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಅರಿವು ಮೂಡಿಸಲು ಜನ ಜಾಗೃತಿಯನ್ನು ಮೂಡಿಸಲಾಗುತ್ತದೆ

“ಕೀಟ ಚಿಕ್ಕದಾದರೂ ಕಾಟ ದೊಡ್ಡದು “ ಇತ್ತೀಚಿಗಂತೂ ಈ ವಾಹಕ ಸೊಳ್ಳೆಗಳಿಂದ ಡೆಂಗಿ ಜ್ವರ, ಚಿಕುನ್ ಗುನ್ಯ, ಮೆದುಳು ಜ್ವರ ಹಳದಿ ಜ್ವರ, ಮಲೇರಿಯಾ,. ಇತ್ಯಾದಿ ಜ್ವರಗಳಿಂದ ನರಳುತ್ತಿರುವುದನ್ನು ನಾವು ಸುದ್ದಿ ಮಾಧ್ಯಮಗಳಿಂದ ತಿಳಿಯುತ್ತಿದ್ದೇವೆ.

ಪ್ರತಿ ವರ್ಷವು ಸುಮಾರು  700 ಮಿಲಿಯನ್ ಜನರಿಗೆ ವಾಹಕ ಸೊಳ್ಳೆಗಳು ವಿವಿಧ ರೋಗಗಳ ಸೋಂಕು ತಗುಲಿಸಿದರೆ, ಸೊಳ್ಳೆಯಿಂದ ಹರಡುವ ರೋಗಗಳಿಗೆ  ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ಬಲಿಯಾಗುತ್ತಿದ್ದಾರೆ.

ಪ್ಲಾಸ್ಮೋಡಿಯಂ ಪರಾವಲಂಬಿ ಮಲೇರಿಯಾಗೆ ಕಾರಣವಾಗುವ ಸೂಕ್ಷ್ಮಾಣುಜೀವಿಯಾಗಿದೆ. ಇದು ಸೋಂಕಿತ ಹೆಣ್ಣು ಅನೊಫಿಲಸ್ ಸೊಳ್ಳೆಯ ಕಚ್ಚುವಿಕೆಯಿಂದ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ಹೆಣ್ಣು ಅನೊಫಿಲಸ್ ಸೊಳ್ಳೆಯು ಈ ಪರಾವಲಂಬಿ ಜೀವಿಯ ವಾಹಕವಾಗಿದೆ.

 ಈ ಸೋಂಕಿತ ಹೆಣ್ಣು ಸೊಳ್ಳೆಯು ಕಚ್ಚಿದಾಗ ಏಕಕೋಶೀಯ ಮಲೇರಿಯಾ ರೋಗಾಣು ಪ್ಲಾಸ್ಮೊಡಿಯಂ ಆರೋಗ್ಯವಂತ ಮಾನವ ದೇಹವನ್ನು ಸೇರುತ್ತವೆ. ಈ ಪರಾವಲಂಬಿಗಳು ತಮ್ಮ ಗುರಿ ಅಂಗವಾದ ಯಕೃತ್ತನ್ನು ಪ್ರವೇಶಿಸುತ್ತದೆ. ಈ ಪರಾವಲಂಬಿಯಲ್ಲಿ ಹಲವಾರು ವಿಧಗಳಿವೆ. ಕೆಲವು ಒಂದು ವರ್ಷಕ್ಕೂ ಹೆಚ್ಚು ಕಾಲ ದೇಹದಲ್ಲಿ ಸುಪ್ತ ಸ್ಥಿತಿಯಲ್ಲಿರಬಹುದು ನಂತರ ಈ ಪರಾವಲಂಬಿಗಳು ಕ್ರಿಯಾಶೀಲವಾಗುತ್ತವೆ. ಕೆಂಪು ರಕ್ತಕಣಗಳಿಗೆ ಸೋಂಕು ತಗಲಿದಾಗ ವ್ಯಕ್ತಿಯಲ್ಲಿ ಮಲೇರಿಯಾ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. 

ಲಕ್ಷಣಗಳು :

ಸೋಂಕಿಗೆ ಒಳಗಾದ 6 ರಿಂದ 15 ದಿನಗಳಲ್ಲಿ ಮಲೇರಿಯಾದ ಚಿಹ್ನೆಗಳು ಹಾಗೂ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಪರಾವಲಂಬಿಯ ವಿಧವನ್ನು ಅವಲಂಬಿಸಿ ರೋಗಲಕ್ಷಣಗಳು ಸೌಮ್ಯ ಅಥವಾ ತೀವ್ರವಾಗಬಹುದು.

 ಸಾಮಾನ್ಯ ಲಕ್ಷಣಗಳು:-

1. ಅತಿ ಹೆಚ್ಚು ಜ್ವರ ಮತ್ತು ಬೆವರುವುದು.

2.ಚಳಿ ಜ್ವರ.

3.ಸ್ನಾಯು ನೋವು ಮತ್ತು ತಲೆನೋವು, ಆಯಾಸ.

4. ಎದೆ ನೋವು ಉಸಿರಾಟದ ತೊಂದರೆ ಕೆಮ್ಮು.

5. ವಾಕರಿಕೆ ಮತ್ತು ಅತಿಸಾರ ವಾಂತಿ .

ತೀವ್ರ ಲಕ್ಷಣಗಳು:-

1.  ಮಲದೊಂದಿಗೆ ರಕ್ತ .

2. ಮೂತ್ರಪಿಂಡ ವೈಫಲ್ಯ.

3. ರಕ್ತದಲ್ಲಿ ಸಕ್ಕರೆ ಮಟ್ಟದಲ್ಲಿ ಅಸಹಜ ಮತ್ತು ಹಠಾತ್ ಇಳಿಕೆ.

4. ಉಸಿರಾಟದ ತೊಂದರೆ.

5. ಗಾಢ ಬಣ್ಣದ ಮೂತ್ರ.

6. ಸೆಳೆತಗಳು.

7. ರಕ್ತ ಹೀನತೆ.

ಮಲೇರಿಯಾ ಪರಾವಲಂಬಿ ವಿಧಗಳು :

 ಪ್ಲಾಸ್ಮೊಡಿಯಂಗಳಲ್ಲಿ ಸೋಂಕಿಗೆ ಕಾರಣವಾಗುವ ೫ ಪ್ರಬೇಧಗಳನ್ನು ಗುರುತಿಸಲಾಗಿದೆ.  

1. ಪ್ಲಾಸ್ಮೋಡಿಯಂ ವೈವಾಕ್ಸ್

2.ಪ್ಲಾಸ್ಮೋಡಿಯಮ್ ಫಾಲ್ಸಿಪೋರಮ್

3.ಪ್ಲಾಸ್ಮೋಡಿಯಂ ಮಲೇರಿಯಾ

4.ಪ್ಲಾಸ್ಮೋಡಿಯಂ ನೋಲೇಸಿ

5. ಪ್ಲಾಸ್ಮೋಡಿಯಂ ವೇಲೆ (ಅಂಡಾಕಾರ)

ಭಾರತದಲ್ಲಿ ಪ್ಲಾಸ್ಮೋಡಿಯಂ ವೈವಾಕ್ಸ್, ಪ್ಲಾಸ್ಮೋಡಿಯಮ್ ಫಾಲ್ಸಿಪೋರಮ್ ಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಪ್ಲಾಸ್ಮೋಡಿಯಮ್ ಫಾಲ್ಸಿಪೋರಮ್  ವೇಗವಾಗಿ ಹರಡುತ್ತದೆ. ಇದು ಅತಿಯಾದ ರಕ್ತದ ನಷ್ಟಕ್ಕೆ ಕಾರಣವಾಗುತ್ತದೆ. ರಕ್ತನಾಳಗಳನ್ನು ಮುಚ್ಚಿ ಹಾಕುತ್ತದೆ ಹಾಗೂ ಅಂಗಾಂಗಗಳು ರಕ್ತ ಕೊರತೆಯಿಂದ ಹಾನಿಗೆ ಕಾರಣವಾಗುತ್ತದೆ.

ಇವುಗಳನ್ನು ಪತ್ತೆಹಚ್ಚಲು ವಿವಿಧ ಬಗೆಯ ರಕ್ತ ಪರೀಕ್ಷೆಗಳನ್ನು ನಡೆಸುತ್ತಾರೆ. ಅವೆಂದರೆ,

1. ಬಾಹ್ಯ ರಕ್ತದ ಸ್ಪಿಯರ್ ಪರೀಕ್ಷೆ .

2.ಪಿಸಿಆರ್ ನಂತಹ ಅಣ್ವಿಕ ಪರೀಕ್ಷೆ .

3. ಪರಾವಲಂಬಿ ಕಿಣ್ವ ಪ್ರತಿಜನಕ ಪರೀಕ್ಷೆ.

ಚಿಕಿತ್ಸೆ:- ಪ್ರಾರಂಭಿಕ ಹಂತದಲ್ಲೇ ಮಲೇರಿಯಾ ಚಿಕಿತ್ಸೆಯಿಂದ ಉತ್ತಮವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ದೀರ್ಘಕಾಲದವರಿಗೆ ಚಿಕಿತ್ಸೆ ನೀಡದಿದ್ದರೆ ಮಲೇರಿಯಾ ಜೀವಕ್ಕೂ ಅಪಾಯಕಾರಿಯಾಗಬಹುದು. ಪ್ಲಾಸ್ಮೊಡಿಯಂ ಫ್ಯಾಲ್ಸಿಫ್ಯಾರಂ ಪರಾವಲಂಬಿ ಸೋಂಕಿಗೆ ಒಳಗಾಗಿದ್ದರೆ ಇದು ಇನ್ನೂ ತೀವ್ರತರವಾಗಿರಬಹುದು. ವೈದ್ಯರು ಆಂಟಿಮಲೇರಿಯಾ ಔಷಧಿಗಳನ್ನು ಸೂಚಿಸುತ್ತಾರೆ.

ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮವಾಗಿದೆ.

ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರಿಂದ ಸೊಳ್ಳೆಯಿಂದ ಹರಡುವ ರೋಗಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದಾಗಿದೆ.-

1. ರೋಗ ಹರಡುವ ಪ್ರದೇಶಗಳಲ್ಲಿ ಸೊಳ್ಳೆಯ ಪರದೆ ಬಳಸುವುದು.

2. ತುಂಬುತೋಳಿನ ಬಟ್ಟೆಗಳನ್ನು ಧರಿಸುವುದು.

3. ನೀರಿನ ತೊಟ್ಟಿಗಳಲ್ಲಿ, ಭತ್ತದ ಗದ್ದೆಗಳಲ್ಲಿ ಗಾಂಬೂಸಿಯಾ ಮೀನುಗಳನ್ನು ಬಳಸಿ ಸೊಳ್ಳೆಯ ನಿರ್ಮೂಲನಕ್ಕೆ ಜೈವಿಕ ವಿಧಾನಗಳನ್ನು ಅನುಸರಿಸುವುದು.

4. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವುದು.

5. ಸ್ವಚ್ಛತೆಗೆ ಆದ್ಯತೆ ನೀಡಿ ಮನೆ, ಶಾಲಾ-ಕಾಲೇಜು, ಕಚೇರಿ, ಅಂಗಡಿ, ಸಾರ್ವಜನಿಕ ಸ್ಥಳಗಳಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿಯನ್ನು ನಿಯಂತ್ರಿಸುವುದು.

6. ಸೊಳ್ಳೆ ನಿವಾರಕಗಳನ್ನು ಬಳಸುವುದು.

7. ಸೊಳ್ಳೆಗಳು ಮೊಟ್ಟೆಗಳನ್ನು ಇಡುವುದನ್ನು ತಪ್ಪಿಸಲು ಬೇವಿನ ಎಣ್ಣೆ ಅಥವಾ ಇನ್ನಾವುದೇ ಎಣ್ಣೆಯನ್ನು ಸಿಂಪಡಿಸುವುದು.  

ಮಲೇರಿಯಾದಂತಹ ಭಯಾನಕ ರೋಗವನ್ನು ನಿಯಂತ್ರಣದಲ್ಲಿಡಲು ಸೊಳ್ಳೆಗಳ‌ ನಾಶ, ಸ್ವಚ್ಛತೆ ಕುರಿತ ಜನಜಾಗೃತಿ ಅತ್ಯಂತ ಅಗತ್ಯ