ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, April 4, 2025

ಸತ್ಯ ಮಿಥ್ಯಗಳ ಸುತ್ತ : ಅಶೋಕ ವೃಕ್ಷ

 ಸತ್ಯ ಮಿಥ್ಯಗಳ ಸುತ್ತ : ಅಶೋಕ ವೃಕ್ಷ

 

 ಲೇಖಕರು : ರಮೇಶ, ವಿ,ಬಳ್ಳಾ ,  ಅಧ್ಯಾಪಕರು

 ಬಾಲಕಿಯರ ಸರ್ಕಾರಿ ಪೂ ಕಾಲೇಜು

 (ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ

 ಮೊ: 9739022186

     ಪ್ರಕೃತಿ ಒಂದು ಸುಂದರವಾದ ಅದ್ಭುತ ಸಂಪತ್ತು. ಭೂಮಿಯ ಮೇಲಿನ ಸಕಲ ಜೀವರಾಶಿಗಳನ್ನು ಪೊರೆಯುವ ಹಾಗೂ ಕಣ್ಣುಗಳಿಗೆ ತಂಪು-ಇಂಪು ನೀಡುವ ಮಾಯಾಜಾಲ. ಇಲ್ಲಿ ಏನಿಲ್ಲ ಹೇಳಿ ? ಗಾಳಿ, ನೀರು, ನೆಲ, ಬೆಳಕು, ಜೀವವೈವಿಧ್ಯ ಇತ್ಯಾದಿಗಳೆಲ್ಲವೂ ಪ್ರಕೃತಿಯ ವೈವಿಧ್ಯತೆಗೆ ಇಂಬು ನೀಡಿವೆ. ಇಲ್ಲಿರುವ ಬಹು ಮುಖ್ಯ ಸಂಪನ್ಮೂಲಗಳಲ್ಲಿ ಹಸಿರು ಮರಗಳು ಪ್ರಾಕೃತಿಕ ಅನನ್ಯತೆಗೆ ಮೆರಗು ನೀಡಿವೆ. ನಮ್ಮ ಸುತ್ತಲಿನ ಗಿಡಮರಗಳು ನಮಗರಿವಿಲ್ಲದಂತೆಯೇ ನಮ್ಮ ನೆರವಿಗೆ ಬಂದಿವೆ. ಅವುಗಳ ಪರಿಚಯ, ಆವಾಸ, ಅನನ್ಯಗುಣ ಹಾಗೂ ಮಹತ್ವದ ಬಗ್ಗೆ ತಿಳಿಯಬೇಕಾದ್ದು ಇಂದಿನ ಅಗತ್ಯವಾಗಿದೆ. ಇಂತಹ ಉದ್ದೇಶದಿಂದಲೇ ಶಾಲೆ ಕಾಲೇಜುಗಳಲ್ಲಿ ಇಕೊ ಕ್ಲಬ್‌ಗಳು ಕೆಲಸ ಮಾಡುತ್ತಿವೆ. ಪರಿಸರದಲ್ಲಿನ ಸುಂದರವಾದ ಹಸಿರು ಗಿಡಮರಗಳು ಮಕ್ಕಳಾದಿಯಾಗಿ ಎಲ್ಲರನ್ನು ಆಕರ್ಷಿಸುತ್ತವೆ. ಶಾಲಾ ಮೈದಾನ, ಗುಡಿ ಗುಂಡಾರಗಳಲ್ಲಿ, ಗಾರ್ಡನ್, ರಸ್ತೆ ಬದಿಗಳಲ್ಲಿ, ಹೊಲ-ತೋಟದ ಬದು, ಮುಂತಾದೆಡೆ ಬೆಳೆದು ನಿಂತ ಅನೇಕ ಗಿಡಮರಗಳನ್ನು ನಾವು ನೋಡಿರುತ್ತೇವೆ. ಆದರೆ ಅವುಗಳ ಬಗೆಗಿನ ಮಾಹಿತಿ ಹಾಗೂ ಉಪಯುಕ್ತತೆಯ ಬಗ್ಗೆ ಅಷ್ಟೊಂದು ತಿಳಿದಿರುವುದಿಲ್ಲ.

ಮೊನ್ನೆ ಮೊನ್ನೆ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಪಯಣ ಹಸಿರು ನಡಿಗೆಯನ್ನು ಹಮ್ಮಿಕೊಂಡಿದ್ದೆವು. ಕಾರ್ಯಕ್ರಮದಡಿ ಗಿಡಮರಗಳ ಪರಿಚಯ ಮಾಡುತ್ತಾ ಸಮೀಪದ ಉದ್ಯಾನವೊಂದಕ್ಕೆ ಭೇಟಿ ನೀಡಿದೆವು. ಅಲ್ಲಿ ನಮ್ಮ ಶಿಕ್ಷಕರು ವಿದ್ಯಾರ್ಥಿಗಳು ಎಲ್ಲರೂ ಗಿಡಮರಗಳು, ಅದರ ಎಲೆ, ಹೂ, ಹಣ್ಣು-ಕಾಯಿ ಇತ್ಯಾದಿ ಮುಟ್ಟಿ ನೋಡಿ ಇದು ಹಾಗೆ, ಅದು ಹೀಗೆ, ಎಂತೆಲ್ಲಾ ತಮ್ಮ ತಮ್ಮಲ್ಲೆ ಚರ್ಚೆಗೆ ಇಳಿದಿದ್ದರು. ಅಲ್ಲಿ ಬೆಳೆದಿದ್ದ ಎತ್ತರದ ಕಂಬದಾಕಾರದ ಗಿಡವೊಂದನ್ನು ತೋರಿಸಿ ನಮ್ಮ ಸಹೋದ್ಯೋಗಿಯೊಬ್ಬರು ಇದು ನೋಡಿ ಅಶೋಕ ಮರ ಎಷ್ಟು ಎತ್ತರವಾಗಿದೆಯಲ್ಲ! ಎಂದು ಆಶ್ಚರ್ಯದಿಂದ ಪರಿಚಯಕ್ಕೆ ಇಳಿದಿದ್ದರು. ಇದು ನನ್ನ ಕಿವಿಗೆ ಬಿದ್ದ ತಕ್ಷಣವೇ ಮುಂದೆ ಬಂದು ವಿದ್ಯಾರ್ಥಿಗಳಿಗೆ ಮನನ ಮಾಡಿಸಿದೆ. ಮಕ್ಕಳೇ ಇದು ನಿಜವಾದ ಅಶೋಕ ಮರವಲ್ಲ. ಇದು ಮಿಥ್ಯ ಅಶೋಕ. ನೈಜ ಅಶೋಕ ವೃಕ್ಷ ಬೇರೆಯೇ ಇದೆ. ಅದು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು ಅದರ ಹಿನ್ನಲೆ ಹಾಗೂ ಪಾರಂಪರಿಕ ಮಹತ್ವವೂ ವಿಶಿಷ್ಟವಾಗಿದೆ ಎಂದು ತಿಳಿಸುತ್ತಾ ಮುಂದೆ ಮುಂದೆ ಸಾಗಿದೆವು

ಹೌದು! ಅಶೋಕ ಮರ ಎಂದಾಕ್ಷಣ ಬಹುತೇಕರು ನೆನಪಿಸಿಕೊಳ್ಳುವುದು ಅದೇ ಎತ್ತರವಾದ, ಕಂಬದಂತಹ, ಚೂಪಾದ-ಮೊನಚಾದ ಎಲೆಗಳುಳ್ಳ ಹಲವು ಗೊಂಚಲುಗಳಲ್ಲಿ ಜೋತು ಬಿದ್ದ ನೀಳವಾದ ಚಿಕ್ಕ ಚಿಕ್ಕ ಟೊಂಗೆಗಳ ಹಸಿರು ಮರವನ್ನು. ನಿಜ ಸ್ನೇಹಿತರೆ ! ಅಶೋಕ ಮರದ ಬಗ್ಗೆ ಬಹಳಷ್ಟು ಜನರಿಗೆ ಸ್ಪಷ್ಟವಾದ ತಿಳುವಳಿಕೆ ಮಾಹಿತಿ ಇಲ್ಲ. ನಾವು ನೋಡಿರುವ ನಮ್ಮ ಸುತ್ತ ಶಾಲೆ, ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸಿರುವ ಎತ್ತರದ ಕಂಬದಂತಹ ಮರ, ನೈಜವಾದ ಅಶೋಕವಲ್ಲ. ಇದರ ಸುತ್ತ ಹಲವು ತಪ್ಪು ಕಲ್ಪನೆಯ ಮುಸುಕು ಆವರಿಸಿದೆ. ವಾಸ್ತವದಲ್ಲಿ ಅಶೋಕ ಮರ ಬೇರೆಯೇ ಇದೆ.

ಅಶೋಕ ವೃಕ್ಷವನ್ನು ವೈಜ್ಞಾನಿಕ ಹಿನ್ನಲೆಯಲ್ಲಿ ನೋಡಿದಾಗ ಅನೇಕ ವ್ಯತ್ಯಾಸಗಳು ಗೋಚರಿಸುತ್ತವೆ. ಇದರ ವೈಜ್ಞಾನಿಕ ನಾಮಧೇಯ ಸರಾಕಾ ಅಸೋಕ (Saraca asoka ). ಫ್ಯಾಬೇಸಿ (fabaceae) ಕುಟುಂಬದ ಸಿಸಾಲ್ಪಿನಿಯಾಯ್ಡ್ ಉಪಕುಟುಂಬದ ಚಿಕ್ಕ ಗಾತ್ರದ ಮರ ನಾವು ಕಂಡಿರುವ ಮಿಥ್ಯ ಅಶೋಕ ಮರಕ್ಕಿಂತ ಭಿನ್ನವಾಗಿದೆ. ಇದನ್ನು ಬಟಾಣಿ (legume)   ಕುಟುಂಬ ಎಂದು ಸಹ ಕರೆಯಲಾಗುತ್ತದೆ. ಬೀ‌ನ್ಸ್‌ನಂತೆ ಬಹುಬೀಜ ಬಿಡುವ ಉದ್ದನೆ ಕಾಯಿಗಳನ್ನು ಹೊಂದಿದ್ದು, ಆವೃತ ಬೀಜ ಬಿಡುವ ಟ್ರಾಕಿಯೋಫೈಟ್ ಆಗಿದೆ. ಇದು ಕಿತ್ತಳೆ-ಕೆಂಪು ಬಣ್ಣದ ಹೂ ಬಿಡುವ ಮರವಾಗಿದೆ. ಮಿಥ್ಯ ಅಶೋಕ ವೃಕ್ಷದ ವೈಜ್ಞಾನಿಕ ನಾಮಧೇಯ ಪಾಲಿಯಾಲ್ಥಿಯಾ ಲಾಂಗಿಫೋಲಿಯಾ  ಆಗಿದೆ. ಮೆಡಿಟರೇನಿಯನ್ ಸೈಪ್ರಸ್ ಮರಗಳಂತೆ ಕಾಣುವ ಉದ್ದನೆಯ ಕಂಬದಂತಹ ಗಿಡವನ್ನು ಅಲಂಕಾರಕ್ಕಾಗಿ ಶಾಲೆ, ಕಾಲೇಜು, ಉದ್ಯಾನಗಳಲ್ಲಿ ಹೆಚ್ಚೆಚ್ಚು ಬೆಳೆಸಲಾಗುತ್ತದೆ. ಇದರ ಕಾಯಿಗಳು ಅಥವಾ ಹಣ್ಣುಗಳು ಗುಂಡಾಗಿದ್ದು ಚಿಕ್ಕದಾದ ಕೇವಲ ಒಂದು ಬೀಜವನ್ನು ಮಾತ್ರ ಹೊಂದಿರುತ್ತದೆ. ಮರದ ಹೂಗಳು ಸೇಬುವಿನ ಹಸಿರು ಬಣ್ಣದ್ದಾಗಿವೆ. ನಿಜವಾದ ಆಶೋಕ ಪ್ರಭೇದದ ಸಸ್ಯಗಳ ಆವಾಸದ ಮೂಲ ಭಾರತ ಎಂದು ಬೇಯ್ಲಿ ಎಂಬ ಸಸ್ಯಶಾಸ್ತ್ರಜ್ಞ ಪ್ರತಿಪಾದಿಸಿದ್ದಾರೆ. ಇನ್ನೊರ್ವ ಭಾರತೀಯ ಸಸ್ಯಶಾಸ್ತ್ರಜ್ಞ ರಾಂಧವರವರ ಪ್ರಕಾರ ಇದು ಭಾರತ ಹಾಗೂ ಶ್ರೀಲಂಕಾ ಮೂಲದ್ದು. ಹಾಗೆಯೇ ಚಬ್ಬರ್ ಎಂಬುವವರು ಇದನ್ನು ಅಮೇರಿಕಾದ್ದು ಎಂದು ಗುರುತಿಸುತ್ತಾರೆ. ಬಗ್ಗೆ ಕೆಲ ಮಿಶ್ರ ಅಭಿಪ್ರಾಯಗಳಿದ್ದರೂ ಭಾರತೀಯ ಉಪಖಂಡದಲ್ಲಿ ಹಾಗೂ ಉಷ್ಣವಲಯದಲ್ಲಿ ಬೆಳೆಯುವ ಅಪರೂಪ ಮರವೆಂದು ಇದಕ್ಕೆ ಹೇಳಲಾಗುತ್ತದೆ. ಉತ್ತರದ ಭೂತಾನ್, ನೇಪಾಳದಿಂದ ಹಿಡಿದು ಪಾಕಿಸ್ತಾನ ಸೇರಿ ಶುಷ್ಕ ವಾತಾವರಣದಲ್ಲಿ ತನ್ನ ಆವಾಸವನ್ನು ಇದು ವಿಸ್ತರಿಸಿಕೊಂಡಿದೆ.

ಅಶೋಕ ಮರ ಸತ್ಯ ಸಂಗತಿಗಳು

ಇದರ ವೈಜ್ಞಾನಿಕ ನಾಮ ವಿಷಯಗಳನ್ನು ತಿಳಿದಂತೆ ಮರ ಚಿಕ್ಕ ಗಾತ್ರದ್ದು ಹಾಗೂ ಭಾರತ, ಮ್ಯಾನ್ಮಾರ್ ಮತ್ತು ಶ್ರೀಲಂಕಾದ ಮೂಲವನ್ನು ಹೊಂದಿರುವುದು ಗೊತ್ತಾಗುತ್ತದೆ. ಪ್ರಾಥಮಿಕ ಮೂಲ ನಿತ್ಯ ಹರಿದ್ವರ್ಣದ ಕಾಡುಗಳು ಹಾಗೂ ಮಳೆಕಾಡುಗಳಾಗಿವೆ. ಸುಂದರವಾದ ಹೂಗೊಂಚಲು ಬಿಡುವ ಅಪರೂಪದ ಲಕ್ಷಣಗಳು ಮರಗಳಿಗಿವೆ. ವಿಶಾಲ ಚಾಮರದಂತೆ ಸುತ್ತಲೂ ಹರಡಿರುವ ರೆಂಬೆ ಕೊಂಬೆಗಳಿವೆ. ಮರಗಳು 6-8 ಮೀಟರ್ ಎತ್ತರಕ್ಕೆ ಬೆಳೆಯುವ ಮಧ್ಯಮ ಗಾತ್ರದವುಗಳಾಗಿವೆ. ಚೂಪಾದ, ಮೊನಚು ತುದಿಯ ಉದ್ದನೆಯ ಎಲೆಗಳನ್ನು ಹೊಂದಿರುವ ಇದು 4-6 ಕಿರಿದಾದ ಎಲೆಗಳನ್ನು ಎದುರು ಬದರಾಗಿ ಜೋಡಿಸಿಕೊಂಡಿದೆ. ಮರಗಳು ಸದಾ ದಟ್ಟ ಹಸುರಿನಿಂದ ಕಂಗೊಳಿಸುತ್ತವೆ. ಎಳೆಯ ಎಲೆಗಳು ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸ ಹೊಂದಿವೆ. ಕಂದು ಬಣ್ಣದ ಮರದ ತೊಗಟೆ ಗ್ಯಾಲಿಕ್ ಆಮ್ಲ ಎಂಬ ರಾಸಾಯನಿಕ ಹೊಂದಿದೆಸಣ್ಣ ಸಣ್ಣ ಕೊಂಬೆಗಳ ನಡುವೆ ಆಕರ್ಷಿಸುವ ವರ್ಣರಂಜಿತ ಪುಷ್ಪಮಂಜರಿ ವಿಶಿಷ್ಟ ಆಕರ್ಷಣೆ ಹೊಂದಿದೆ. ಆಗ ತಾನೇ ಅರಳಿದ ಹೂವಿನ ಬಣ್ಣ ಹಳದಿಯಾಗಿದ್ದು ಪರಾಗಸ್ಪರ್ಶದ ನಂತರ ಕೆಂಬಣ್ಣಕ್ಕೆ ತಿರುಗುತ್ತವೆ. ಸಂದರ್ಭದಲ್ಲಿ ಹೂ ರಾಶಿಯ ಸೊಬಗು ಹೇಳತೀರದು. ಅತ್ಯಾಕರ್ಷಕವಾದ ಇವುಗಳ ಚೆಲುವು ಅರಳುವುದು ಜನವರಿಯಿಂದ ಎಪ್ರಿಲ್, ಮೇ ತಿಂಗಳವರೆಗೆ ಮುಂದುವರೆಯುತ್ತದೆ. ಸುಮಧುರವಾದ ಸುಗಂಧಭರಿತ ಪರಿಮಳ ಬೀರುವ ಹೂಗಳ ಚೆಲುವು ಆಹ್ಲಾದತೆಯೊಂದಿಗೆ ಕಣ್ಣಿಗೆ ಹಬ್ಬ ಉಂಟು ಮಾಡುತ್ತದೆ. ಅಶೋಕಮರದ ಹೂವನ್ನು ಭಾರತದಲ್ಲಿ ಒಡಿಸ್ಸಾ ರಾಜ್ಯದ ಹೂವಾಗಿ ಅಂಗೀಕರಿಸಲಾಗಿದೆ.

ಅಶೋಕ ಮರದ ಪ್ರಾಚೀನ ಹಿನ್ನಲೆ:

ಅಶೋಕ ಮರ ಒಂದು ಕಾಡು ವೃಕ್ಷ. ಮಳೆಕಾಡಿನ ನಿತ್ಯ ಹರಿದ್ವರ್ಣದ ಸುಂದರ ಮರ. ತನ್ನ ಸುಗಂಧಭರಿತ ಹೂಗಳ ಜೊತೆಗೆ ಆಕರ್ಷಕ ಬಣ್ಣಗಳಿಂದ ಶೃಂಗಾರಗೊಂ ಹೂಗಳ ಬೆಡಗು ಬಿನ್ನಾಣ ಎಂತಹವರಲ್ಲೂ ಮೋಹಕತೆಯನ್ನು ತರುತ್ತದೆ. ಇಂತಹ ವೃಕ್ಷದ ಸುತ್ತ ಎಷ್ಟೇ ಮಿಥ್ಯಗಳು ತಳಕು ಹಾಕಿಕೊಂಡಿದ್ದರೂ ನೈಜ ಅಶೋಕ ಮರ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಅಶೋಕಹೆಸರೇ ಹೇಳುವಂತೆ ʼಶೋಕರಹಿತʼ ಎಂಬರ್ಥ ಕೊಡುತ್ತದೆ. ಭಾರತದಂತಹ ಸಂಪ್ರದಾಯಸ್ಥ ಕುಟುಂಬಗಳ ನಾರಿಯರ ದುಃಖ ದೂರ ಮಾಡುವ ಪೂಜನೀಯ ಮರವಾಗಿ ಬೆಳೆದು ನಿಂತಿದೆ. ಭಾರತ, ಶ್ರೀಲಂಕಾ, ನೇಪಾಳದಂತಹ ರಾಷ್ಟ್ರಗಳಲ್ಲಿ ಇದು ಪವಿತ್ರ (sacred) ಮರವೆಂದು ಗುರುತಿಸಲ್ಪಟ್ಟಿದೆ. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿರುವವರ ಒಡನಾಡಿಯಾಗಿ ಆಧ್ಯಾತ್ಮದ ಘಮಲನ್ನು ಅಂಟಿಸಿಕೊಂಡಿದೆ. ಧಾರ್ಮಿಕ ಮಹತ್ವದ ವೃಕ್ಷವಾಗಿ ಚೈತ್ರ ಮಾಸದಲ್ಲಿ ಪೂಜಿಸಲ್ಪಟ್ಟು ಹೆಸರಾಗಿದೆ. ಪುರಾಣ ಪುಣ್ಯ ಕಥೆಗಳಲ್ಲಿ ತನ್ನ ಸ್ಥಾನವನ್ನು ಅಚ್ಚಳಿಯದೇ ಉಳಿಸಿದೆ. ಶ್ರೇಷ್ಠ ಹಿಂದೂ, ಬೌದ್ಧ ಧರ್ಮಗಳಲ್ಲಿ ನಾನಾ ಕಾರಣಗಳಿಗಾಗಿ ವಿಭಿನ್ನ ನೆಲೆಯಲ್ಲಿ ಅಸ್ಥಿತ್ವ ಕಾಯ್ದುಕೊಂಡಿದೆ. ಬಹು ಹಿಂದಿನಿಂದಲೂ ಹಲವು ಆಚರಣೆ, ಆರಾಧನೆಗಳೊಂದಿಗೆ ರೈತಾಪಿ ವರ್ಗ, ಬುಡಕಟ್ಟು ಜನಾಂಗ, ಕಾಡಂಚಿನ ಜನಪದರ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ವೃದ್ಧಿಸಿಕೊಂಡಿದೆ.

ಶ್ರೇಷ್ಠ ಹಿಂದೂ ಕಥಾನಕಗಳಲ್ಲಿ ವರ್ಣಿಸಲ್ಪಟ್ಟ ಅಶೋಕ ವೃಕ್ಷ ದೈವತ್ವದ ನೆಲೆ ಕಂಡಿದೆ. ರಾಮಾಯಣದಂತಹ ಪುಣ್ಯಕಥೆಗಳಲ್ಲಿ ರಾಮಲಕ್ಷ್ಮಣರ ವನವಾಸದ ಸಂದರ್ಭದಲ್ಲಿ ಸೀತಾ ಮಾತೆಯ ರಕ್ಷಕ ಮರವಾಗಿ ಹಾಗೂ ರಾಮನ ಬಂ ಹನುಮಂತ ಸೀತೆಯನ್ನು ಮೊದಲು ಭೇಟಿಯಾದದ್ದು ಮರದ ಬಳಿ ಎಂಬ ಬಗ್ಗೆ ಹೇಳಲಾಗುತ್ತದೆ. ಹೋಳಿ ಹಬ್ಬ ಒಂದು ಸಡಗರದ ಹಬ್ಬ. ಸಂದರ್ಭದಲ್ಲಿ ಹಿಂದೂಗಳಿಂ ಪೂಜಿಸಲ್ಪಡುವ ಕಾಮದೇವನ ಬಗ್ಗೆ ಕೇಳಿದ್ದೇವೆ. ಅಶೋಕ ವೃಕ್ಷದ ಹೂಗಳೊಂದಿಗೆ ಕಾಮ ಸಂವೇದನೆಯ ಮಾನವ ಸಹಜ ಆಸಕ್ತಿ ತಳುಕು ಹಾಕಿಕೊಂಡಿದೆ.

ಮರಕ್ಕಿರುವ ಮಹತ್ವವನ್ನು ಇನ್ನೂ ಸುಲಭವಾಗಿ ಅರಿಯುವುದಾದರೆ ಪ್ರಾಚೀನ ರಾಜಮನೆತನಗಳು ಅರಮನೆ, ನಗರ ಸಮುಚ್ಛಯಗಳು, ಬೀದಿ ಬೀದಿಗಳಲ್ಲಿ, ದೇವಸ್ಥಾನ, ಉದ್ಯಾನಗಳು, ರಸ್ತೆಯ ಇಕ್ಕೆಲಗಳಲ್ಲಿ ಇವುಗಳನ್ನು ನೆಟ್ಟು ಪೋಷಿಸಿಕೊಂಡು ಬಂದಿರುವುದು ಕಂಡುಬರುತ್ತದೆ. ಇದು ಭಾರತೀಯ ಕಲೆ ಪರಂಪರೆಯ ಭಾಗವಾಗಿ ರೂಪಿತಗೊಂಡಿದೆ. ಪ್ರಾಚೀನ ಸ್ಮಾರಕಗಳಲ್ಲಿ, ವಾಸ್ತುಶಿಲ್ಪದ ಶಿಲಾ ಸೌಂದರ್ಯದಲ್ಲಿ ಅಶೋಕ ವೃಕ್ಷ ಮೈದಳೆದು ನಿಂತಿದೆ.

ಅಶೋಕ ವೃಕ್ಷದ ಸತ್ಯ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ವಿಷಯಾಂಶಗಳ ಅರಿವಿನ ಅಗತ್ಯತೆ ಇಂದು ಎಲ್ಲರಿಗೂ ಬೇಕಾಗಿದೆ. ವೃಕ್ಷಗಳು ನಾಡಿನ ಸಂಪತ್ತು. ಅವುಗಳ ಕುರಿತ ಸ್ಪಷ್ಟ ಜ್ಞಾನ ಕೂಡ ಅಷ್ಟೇ ಮುಖ್ಯ ಎಂಬುದನ್ನು ನಾವೆಲ್ಲರೂ ಮನಗಾಣಬೇಕಾಗಿದೆ. ಬಹು ಪ್ರಾಚೀನ ಹಾಗೂ ಪಾರಂಪರಿಕವಾಗಿ ಬೆಳೆದು ಬಂದ ಅಶೋಕ ವೃಕ್ಷದ ನಿಖರತೆ, ನೈಜತೆ ಹಾಗೂ ಪೂಜ್ಯತೆಯನ್ನು ಅದರೊಟ್ಟಿಗೆ ಅದರ ಪ್ರಸ್ತುತ ಉಪಯುಕ್ತತೆಯನ್ನು ಅರಿಯುವುದರೊಂದಿಗೆ ಧನ್ಯತೆಯನ್ನು ಕಾಣಬೇಕಾಗಿದೆ.

No comments:

Post a Comment