ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Wednesday, June 4, 2025

ತಾಂತ್ರಿಕ ಭಾರತದ ಬೆಳಗಿಗೆ ಕಾರಣವಾಗಬಲ್ಲ ಟ್ಯಾಂಟಲಮ್ ಎಂಬ ಶುಂಠ!!

 ತಾಂತ್ರಿಕ ಭಾರತದ ಬೆಳಗಿಗೆ ಕಾರಣವಾಗಬಲ್ಲ ಟ್ಯಾಂಟಲಮ್ ಎಂಬ ಶುಂಠ!!

 ಲೇಖಕರು : ರಾಮಚಂದ್ರ ಭಟ್‌ ಬಿ.ಜಿ.





ಇದ್ಯಾವ ಶುಂಠ ವಿಜ್ಞಾನದಲ್ಲಿ ಇಣುಕಿದನೆಂಬ ಅಚ್ಚರಿ ನಿಮಗಾಗಬಹುದು. ಇತಿಹಾಸದ ಪುಟದಲ್ಲಡಗಿದ ಈ ಕಥೆ ಕೇಳಿದರೆ ನಿಮಗೇ ಟ್ಯಾಂಟಾಲಂನ ಶುಂಠತನದ ಅರಿವಾದೀತು!!

ಆಂಡರ್ಸ್ ಗುಸ್ತಾವ್ ಎಕೆಬರ್ಗ್ ಎಂಬ ಸ್ವೀಡಿಷ್ ವಿಜ್ಞಾನಿ 1802ರಲ್ಲಿ  ಒಂದು ಹೊಸ ಧಾತುವನ್ನು ಸಂಸ್ಕರಿಸಿದರು. ಈ ಸಂಸ್ಕರಣೆಯೋ ಅವರ ಎಲ್ಲಾ ಸಹನೆಯನ್ನೂ ಬರಿದು ಮಾಡಿತ್ತು. ಹಾಗಾಗಿ ಅದಕ್ಕೇ ಟ್ಯಾಂಟಲಮ್ ಎಂದೇ ಹೆಸರಿಟ್ಟರು. ಅದೇನು ವಿಚಿತ್ರ ಹೆಸರು ಎಂದುಕೊಂಡಿರೋ? 

Anders_Gustaf_Ekeberg (1767- 1813)

ಗ್ರೀಕ್‌ ದೇವ  ಜೀಯಸ್ನ ಮಗನಾದ ಟ್ಯಾಂಟಲಸ್ ಲಿಡಿಯಾದ ರಾಜನಾಗಿದ್ದನು. ಈತ ದೇವತೆಗಳಿಗೆ ತನ್ನ ಮಗನ ಮಾಂಸದಡುಗೆ ಮಾಡಿಸಿ ಬಡಿಸಲು ಪ್ರಯತ್ನಿಸಿದನಂತೆ. ವಿಷಯ ತಿಳಿದ ದೇವತೆಗಳು ಮಗನನ್ನು ಬದುಕಿಸಿದರಂತೆ. ದೇವರಾಜನ ಪುತ್ರನಾಗಿದ್ದರೂ ಈತ ತನ್ನ ರಾಕ್ಷಸೀ ಕೃತ್ಯಗಳಿಂದ ದೇವತೆಗಳಿಗೇ ತಲೆನೋವಾಗಿದ್ದ. ಹೀಗಾಗಿ ಆತನಿಗೆ ಸರಿಯಾದ ಪಾಠ ಕಲಿಸಲು ಆತನಿಗೆ ಸದಾ ಹಸಿವು ನೀರಡಿಕೆಗಳಿಂದ ನರಳುವ ಶಿಕ್ಷೆ ನೀಡಲಾಯಿತು. ದಂಡನೆಗಾಗಿ, ದೇವತೆಗಳು ಅವನನ್ನು ಪಾತಾಳ ಲೋಕದಲ್ಲಿ ನೀರಿನ ಕೊಳದಲ್ಲಿ ನಿಲ್ಲುವ ಶಿಕ್ಷೆಗೆ ಒಳಪಡಿಸಿದರು. ಈತ ಹಸಿವಿನಿಂದ ಬಳಲಿದಾಗ ಕೈಯಳತೆಯಲ್ಲೇ ಇದ್ದ ಹಣ್ಣುಗಳು ಅವನಿಂದ ದೂರ ಸರಿಯುತ್ತಿದ್ದವು. ಅದೇ ರೀತಿ, ಅವನು ಬಾಯಾರಿಕೆಯಿಂದ ನೀರು ಕುಡಿಯಲು ನೀರಿನತ್ತ ಬಾಗಿದರೆ, ಕೊಳದ ನೀರು ಕೆಳಗಿಳಿದು, ಅವನಿಗೆ ತಲುಪದಂತೆ ಆಗುತ್ತಿತ್ತು!!! ‌ಕಣ್ಣೆದುರೇ ಕೈಯಳತೆಯಷ್ಟೇ ದೂರದಲ್ಲಿದ್ದರೂ ನೀರು ಆಹಾರಗಳು ಸಿಗದೇ ತೃಷೆ ಮತ್ತು ಕ್ಷುದ್ಭಾಧೆಗಳಿಂದ ನರಳಬೇಕಾಯಿತು. ಈ ರೀತಿಯಲ್ಲೇ, ಎಕೆಬರ್ಗ್‌ಗೂ ಇನ್ನೇನು ಈ ಲೋಹದ ಪತ್ತೆ ಮಾಡಿಯೇ ಬಿಟ್ಟೆ ಎನ್ನುವಷ್ಟರಲ್ಲಿ ಸುಳಿವು ಸಿಕ್ಕೂ ಸಿಗದಂತೆ ಆಗಿ ಟ್ಯಾಂಟಲಸ್‌ನ ಪರಿಸ್ಥಿತಿಯೇ ಉಂಟಾಯಿತು!!! 

Yttrotantalite 

ಎಕೆಬರ್ಗ್ ಅವರು ಸ್ವೀಡನ್‌ನ ಯಿಟರ್‌ಬೈ (Ytterby) ಎಂಬ ಸ್ಥಳದಿಂದ ಸಂಗ್ರಹಿಸಿದ ಖನಿಜದ ಮಾದರಿಯೊಂದನ್ನು  ರಾಸಾಯನಿಕವಾಗಿ ವಿಶ್ಲೇಷಿಸಿದಾಗಅದರಲ್ಲಿ ಹೊಸ ಲೋಹವೊಂದರ ಗುಣಲಕ್ಷಣಗಳನ್ನು ಕಂಡುಕೊಂಡರು. ಈ ಲೋಹವನ್ನು ಸುಲಭವಾಗಿ ದ್ರವಿಸಲಾಗದು. ಇದು ಆಮ್ಲ, ಪ್ರತ್ಯಾಮ್ಲಳೊಂದಿಗೆ ವರ್ತಿಸುತ್ತಿರಲಿಲ್ಲ.  ಇನ್ನೂ ಅನೇಕ ವಿಶೇಷವಾದ ರಾಸಾಯನಿಕ ಗುಣಗಳನ್ನುಹೊಂದಿತ್ತು. ಹಾಗಾಗಿ ಟ್ಯಾಂಟಲಸ್‌ನಂತೆ ತರಲೆ ಮಾಡುತ್ತಿದ್ದ ಧಾತುವನ್ನು ಖನಿಜದಿಂದ ಪ್ರತ್ಯೇಕಿಸಬೇಕೆಂದರೆ ಸಂಶೋಧಕರಿಗೆ ಎಂತಹ ಕಠಿಣ ಪರಿಶ್ರಮ, ಎಷ್ಟು ಸಹನೆ ಬೇಕಿತ್ತೋ? ಹಾಗಾಗಿಯೇ ಸಹನೆಗೆಟ್ಟ ಎಕೆಬರ್ಗ್‌ ಅವರು ಇದನ್ನು ಟ್ಯಾಂಟಲಮ್ ಎಂದು ನಾಮಕರಣ ಮಾಡಿ ಸಮಾಧಾನಪಟ್ಟರು. ಇಷ್ಟಕ್ಕೇ ಸಮಸ್ಯೆ ಮುಗಿಯಲಿಲ್ಲ. ಇದಕ್ಕೂ ಒಂದು ವರ್ಷ ಮೊದಲೇ ಅಂದರೆ, 1801 ರಲ್ಲಿ ಚಾರ್ಲ್ಸ್‌ ಹ್ಯಾಚೆಟ್‌ ನಿಯೋಬಿಯಮ್ ಧಾತುವನ್ನು ಗುರುತಿಸಿದ್ದರು. ಎರಡೂ ಧಾತುಗಳನ್ನು ವಿಶ್ಲೇಷಿಸಿದ ವಿಖ್ಯಾತ ಬ್ರಿಟಿಷ್ ರಸಾಯನಶಾಸ್ತ್ರಜ್ಞ ವಿಲಿಯಂ ವೋಲಸ್ಟನ್, ನಿಯೋಬಿಯಮ್‌ಗೂ ಟ್ಯಾಂಟಲಮ್‌ಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಘೋಷಿಸಿದರು.!!! ಇದಕ್ಕೆ ಹಲವು ಕಾರಣಗಳಿದ್ದವು. ನಿಯೋಬಿಯಂ ಧಾತುವನ್ನು ಸಂಶ್ಲೇಷಿಸಲಾದ ಖನಿಜದಿಂದಲೇ ಈ ಹೊಸ ದಾತುವನ್ನು  ಕಂಡುಹಿಡಿದದ್ದಲ್ಲದೇ, ಆ ಕಾಲದಲ್ಲಿನ ಪ್ರತ್ಯೇಕ ತಂತ್ರಜ್ಞಾನಗಳು ಅಪೂರ್ಣವಾಗಿದ್ದವು. ಎರಡೂ ಲೋಹಗಳ ರಾಸಾಯನಿಕ ಗುಣಧರ್ಮಗಳಿಗೂ ಬಹಳ ಸಾಮ್ಯತೆಗಳಿದ್ದವು. ಆದ್ದರಿಂದ, ಅವುಗಳನ್ನು ಪರಸ್ಪರ ವ್ಯತ್ಯಾಸಿಸುವುದು ಷ್ಟು ಸುಲಭವಾಗಿರಲಿಲ್ಲ. ಇದರಿಂದಾಗಿ ಈ ಎರಡನ್ನು ಗುರುತಿಸುವಲ್ಲಿ ತೀವ್ರ ಗೊಂದಲ ಉಂಟಾಯಿತು.

A high purity (99.999 %) tantalum single crystal, made by the floating zone process

ಅಂತಿಮವಾಗಿ 1846ರಲ್ಲಿ ಜರ್ಮನ್ ವಿಜ್ಞಾನಿ ಹೆನ್‌ರಿಚ್ ರೋಸ್ ಅವರು ಟ್ಯಾಂಟಲಮ್ ಮತ್ತು ನಿಯೋಬಿಯಮ್ ಅನ್ನು ಪ್ರತ್ಯೇಕಿಸಿ, ಇವೆರಡೂ ವಿಭಿನ್ನ ಲೋಹಗಳೆಂಬುದನ್ನು ಖಚಿತಪಡಿಸಿ ಗೊಂದಲವನ್ನು ನಿವಾರಿಸಿದರು. ಅವರು ಪ್ರತ್ಯೇಕಿಸಿದ ಟ್ಯಾಂಟಲಮ್ ಇನ್ನೂ ಸಂಪೂರ್ಣ ಶುದ್ಧವಾಗಿರಲಿಲ್ಲ. ಶುದ್ಧ ಟ್ಯಾಂಟಲಮ್ ಅನ್ನು ಮೊದಲ ಬಾರಿಗೆ 1903ರಲ್ಲಿ ವರ್ನರ್ ವಾನ್ ಬೋಲ್ಟನ್ ಎಂಬ ವಿಜ್ಞಾನಿ ಉತ್ಪಾದಿಸಿದರು. ಇದು ಟ್ಯಾಂಟಲಮ್ ಮಾಡಿದ ಶುಂಠತನ!! ಶತಮಾನದವರೆಗೂ ಕಾಡಿದ ಐತಿಹಾಸಿಕ ಕಥನ !! ಇನ್ನು ತುಂಬಾ ಶುಂಠ ತರ್ಲೆಗಳಿಗೆ ನೀವೂ ಟ್ಯಾಂಟಲಸ್‌ ಎಂದು ಕರೆಯಬಹುದೇನೋ?     ಈಗ ಇಂದಿನ ವಾಸ್ತವಕ್ಕೆ ಬರೋಣ. ಅದು ೨೦೨೩ರ ಚುಮು ಚುಮು ಚಳಿಯ ದಿನ. ಅಂದು ಎಂದಿನಂತೆ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ರೋಪರ್‌ನ ನಾಗರಿಕ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರೆಸ್ಮಿ ಸೆಬಾಸ್ಟಿಯನ್ ನೇತೃತ್ವದ ಸಂಶೋಧಕರ ತಂಡವು ಪಂಜಾಬ್‌ನ ಸಟ್ಲೆಜ್‌ ನದಿಪಾತ್ರದಲ್ಲಿ ನದಿಯ ಹರಿವಿನ ಕುರಿತು ಸಂಶೋಧನೆ ಮಾಡುತ್ತಿದ್ದರು. ನದಿಯ ಪ್ರವಾಹ ಹಾಗೂ ನದಿಯ ಹರಿಯುವ ದಿಕ್ಕಿನ ಮೇಲೆ ಪರಿಶೋಧನೆ ಮಾಡುವ ಮೂಲಕ ನದಿಯ ಅಣೆಕಟ್ಟು, ನಾಲೆಗಳು ಉಪನದಿಗಳ ಜೋಡಣೆ, ಪರಿಸರದ ಮೇಲೆ ಅದರ ಪರಿಣಾಮಗಳು ಮೊದಲಾದ ಗಹನ ವಿಚಾರಗಳ ಕುರಿತಂತೆ ಸಂಶೋಧನೆ ಮಾಡುವುದು ಅವರ ಉದ್ದೇಶವಾಗಿತ್ತು. ಆದರೆ ಅವರು ಆ ದಿನ ಅವರ ಬದುಕಿನಲ್ಲಿ, ಅಷ್ಟೇ ಏಕೆ ಭವಿಷ್ಯದಲ್ಲಿ ಭಾರತದ ತಂತ್ರಜ್ಞಾನ ಕ್ಷೇತ್ರಕ್ಕೇ ಅಪಾರ ಕೊಡುಗೆ ನೀಡಬಹುದೆಂದು ಅವರಿಗೆ ತಿಳಿದಿರಲಿಲ್ಲ. ಈ ತಂಡ ಸಟ್ಲೆಜ್‌ ನದಿಯ ಮರಳಿನಲ್ಲಿ ಟ್ಯಾಂಟಲಮ್ ಎಂಬ ಅಪರೂಪದ ಲೋಹದ ಅಸ್ತಿತ್ವವನ್ನು ಪತ್ತೆಹಚ್ಚಿತು. ಇದು ಸರೆಂಡಿಪಿಟಿಗೆ ಮತ್ತೊಂದು ಉದಾಹರಣೆ

ಟ್ಯಾಂಟಲಮ್ (Tantalum) ಧಾತುವು ಇದು ಬೂದು ಬಣ್ಣದ, ಕಡಿಮೆ ಕ್ರಿಯಾಶೀಲ, ಹೆಚ್ಚಿನ ದ್ರವನ ಬಿಂದುವುಳ್ಳ, ನಶಿಸುವಿಕೆಗೆ ಒಳಗಾಗದ ಲೋಹವಾಗಿದೆ. ಇದರ ಪರಮಾಣು ಸಂಖ್ಯೆ 73 ಆಗಿದ್ದು, ಆವರ್ತ ಕೋಷ್ಟಕದಲ್ಲಿ 6ನೇ ಆವರ್ತ , 5ನೇ ವರ್ಗಕ್ಕೆ ಸೇರಿರುವ ಇದರ ಇಲೆಕ್ಟ್ರಾನ್‌ ವಿನ್ಯಾಸ - [Xe] 4f145d36s2, ಇದರ ದ್ರವನ ಬಿಂದು 3017°C, ಕುದಿಬಿಂದು 5455°C. ಸಾಂದ್ರತೆ - 16.678 g/cm3 ಆಕ್ಸಿಜನ್‌ನೊಂದಿಗೆ ವರ್ತಿಸಿ ಮೇಲ್ಮೈಯಲ್ಲಿ ಟ್ಯಾಂಟಲಮ್ ಆಕ್ಸೈಡ್ (TaO) ಪದರವನ್ನು ಉಂಟು ಮಾಡುತ್ತದೆ.  ಇದು  300°C ಗಿಂತ ಹೆಚ್ಚಿನ ತಾಪದಲ್ಲೂ ಸ್ಥಿರವಾಗಿರುತ್ತದೆ. ಪ್ರಬಲ ಆಮ್ಲಗಳ ವರ್ತನೆಯನ್ನು ಸಹ ತಡೆಯಬಲ್ಲದು. ಈ ಗುಣವು ಟ್ಯಾಂಟಲಮ್‌ನ ರಾಸಾಯನಿಕ ಸ್ಥಿರತೆಗೆ ಕಾರಣವಾಗಿದೆ. ಇದೂ ಉತ್ತಮ ತನ್ಯ , ಕುಟ್ಯ ಗುಣವುಳ್ಳ ಲೋಹ. ಇವೇ ಇದಕ್ಕೆ ಚಿನ್ನಕ್ಕಿಂತಲೂ ಹೆಚ್ಚಿನ ಮಹತ್ವವನ್ನು ತಂದುಕೊಟ್ಟಿರುವುದು.

ಟ್ಯಾಂಟಲಮ್ ಬಳಕೆ ವ್ಯಾಪಕವಾಗಿದೆ

  • ಟ್ಯಾಂಟಲಮ್ ಬಳಕೆ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಕೆಪಾಸಿಟರ್ಸ್‌, ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಇತ್ಯಾದಿಗಳಲ್ಲಿ ಟ್ಯಾಂಟಲಮ್ ಕಪಾಸಿಟರ್‌ಗಳು ವಿದ್ಯುತ್‌ ಶೇಖರಣೆಗಾಗಿ ಬಳಸಲಾಗುತ್ತವೆ.
  • ಟ್ಯಾಂಟಲಮ್ ಅನ್ನು ಪ್ಲಾಟಿನಮ್‌ಗೆ ಬದಲಿ ಲೋಹವಾಗಿ ಬಳಸಲಾಗುತ್ತದೆ, ಏಕೆಂದರೆ ಇದು ಕಡಿಮೆ ವೆಚ್ಚದ ಮತ್ತು ಹೆಚ್ಚಿನ ಕರಗುವ ತಾಪಮಾನ ಹೊಂದಿರುವ ಲೋಹ.
  • ನ್ಯೂಕ್ಲಿಯರ್, ಏರ್‌ಕ್ರಾಫ್ಟ್, ಕ್ಷಿಪಣಿಗಳ ತಯಾರಿಕೆ ಮತ್ತು ರಾಸಾಯನಿಕ ಕಾರ್ಖಾನೆಗಳಲ್ಲಿ ಇದರ ಉಪಯೋಗ ಹೆಚ್ಚಾಗಿದೆ.
  • ಮಾನವ ದೇಹದ ದ್ರವಗಳೊಂದಿಗೆ ಇದು ವರ್ತಿಸದ ಕಾರಣದಿಂದಾಗಿ, ಶಸ್ತ್ರಚಿಕಿತ್ಸಾ ಸಾಧನಗಳು, ಕೃತಕ ಜೋಡಣಿಗಳು ತಯಾರಿಕೆಗೆ ಸಹ ಉಪಯೋಗಿಸುತ್ತಾರೆ.
  • ಟ್ಯಾಂಟಲಮ್ ಕಾರ್ಬೈಡ್ ಮತ್ತು ಗ್ರಾಫೈಟ್‌ನ ಸಂಯೋಜನೆಯನ್ನು ಯಂತ್ರೋಪಕರಣಗಳು, ಕತ್ತರಿಸುವ ಹತಾರಗಳು, ಡ್ರಿಲ್ಲಿಂಗ್‌ ಸಾಧನಗಳು ಮೊದಲಾದವುಗಳಲ್ಲಿ ಬಳಸುತ್ತಾರೆ.
  • ಟಂಗ್‌ಸ್ಟನ್‌ ಗಿಂತ ಮೊದಲು ಟ್ಯಾಂಟಲಮ್ ಅನ್ನು ಬಲ್ಬ್‌ಗಳಲ್ಲಿ ಬಳಸಲಾಗುತ್ತಿತ್ತು.

ಟ್ಯಾಂಟಲಮ್‌ನ ಬಳಕೆ

  1. ಎಲೆಕ್ಟ್ರಾನಿಕ್ಸ್: ಟ್ಯಾಂಟಲಮ್ ಕೆಪಾಸಿಟರ್‌ಗಳು ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಮತ್ತು ಕ್ಯಾಮೆರಾಗಳಲ್ಲಿ ವಿದ್ಯುತ್ ಶೇಖರಣೆಗೆ ಬಳಸಲಾಗುತ್ತವೆ.
  2. ವೈದ್ಯಕೀಯ ಕ್ಷೇತ್ರ: ಕೃತಕ ಜೋಡಣಿಗಳು, ಶಸ್ತ್ರಚಿಕಿತ್ಸಾ ಉಪಕರಣಗಳ ತಯಾರಿಕೆ.
  3. ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರ: ಕ್ಷಿಪಣಿಗಳು, ರಾಕೆಟ್ ಎಂಜಿನ್‌ಗಳ ಭಾಗಗಳಿಗೆ.
  4. ರಾಸಾಯನಿಕ ಕಾರ್ಖಾನೆಗಳು: ತುಕ್ಕು-ನಿರೋಧಕ ಲೇಪನಗಳಿಗೆ.
  5. ಪ್ಲಾಟಿನಮ್‌ಗೆ ಪರ್ಯಾಯ: ಕಡಿಮೆ ವೆಚ್ಚದ ಆಯ್ಕೆಯಾಗಿ.

ಸಟ್ಲೆಜ್‌ನ ಶೋಧನೆಯ ಮಹತ್ವ :  

  • ಆರ್ಥಿಕ ಪ್ರಯೋಜನ: ಟ್ಯಾಂಟಲಮ್‌ನ ಆತ್ಮ ನಿರ್ಭರತೆಯನ್ನು ಕಡಿಮೆ ಮಾಡಿ, ಭಾರತವನ್ನು ಸ್ವಾವಲಂಬಿಯಾಗಿಸಬಹುದು.
  • ತಾಂತ್ರಿಕ ಕ್ರಾಂತಿ: ದೇಶೀಯ ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್, ಮತ್ತು ವೈದ್ಯಕೀಯ ಉದ್ಯಮಗಳಿಗೆ ದೊಡ್ಡಬಲ ನೀಡಲಿದೆ.
  • ವೈಜ್ಞಾನಿಕ ಸಂಶೋಧನೆ: ಸಟ್ಲೆಜ್‌ನ ಭೂ- ವೈಜ್ಞಾನಿಕ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಮತ್ತು ಇತರ ಖನಿಜಗಳನ್ನು ಅನ್ವೇಷಿಸಲು ದಾರಿ.
  • ಪರಿಸರ ಸಂರಕ್ಷಣೆ: ಗಣಿಗಾರಿಕೆಯನ್ನು ಪರಿಸರ ಸ್ನೇಹಿಯಾಗಿ ನಿರ್ವಹಿಸಲು ಸಂಶೋಧನೆಗೆ ಅವಕಾಶ.

ಭವಿಷ್ಯದ ಸಾಧ್ಯತೆಗಳು

ಸಟ್ಲೆಜ್‌ನಲ್ಲಿ ಟ್ಯಾಂಟಲಮ್‌ನ ಶೋಧನೆ ಭಾರತದ ಆತ್ಮನಿರ್ಭರ ಭಾರತ’ ಕನಸಿಗೆ ಒಂದು ದೊಡ್ಡ ಹೆಜ್ಜೆ. ಈ ಲೋಹದ ಶೇಖರಣೆಯ ಪ್ರಮಾಣವನ್ನು ಖಚಿತಪಡಿಸಲು ಮತ್ತು ಗಣಿಗಾರಿಕೆಯ ಸಾಧ್ಯತೆಯನ್ನು ಮೌಲ್ಯಮಾಪನ ಮಾಡಲು IIT ರೋಪಾರ್‌ನ ತಂಡವು ಈಗ ತೀವ್ರ ಸಂಶೋಧನೆಯಲ್ಲಿ ತೊಡಗಿದೆ. ಇದು ಭಾರತವನ್ನು ಟ್ಯಾಂಟಲಮ್ ಉತ್ಪಾದನೆಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರವನ್ನಾಗಿಸಬಹುದು.

2 comments:

  1. ಲೇ ರಾಮಚಂದ್ರ ತುಂಬಾ ಮಾಹಿತಿ ಮತ್ತು ಹಾಸ್ಯಭರಿತ ಸುಂದರ ಲೇಖನ .ನಿಮ್ಮ ಈ ದೂರ ದೃಷ್ಟಿಯಿಂದ ಮುಂದೆ ಭವಿಷ್ಯದಲ್ಲಿ ಭಾರತದ ವಿಜ್ಞಾನ, ತಂತ್ರಜ್ಞಾನದ ಕ್ಷೇತ್ರದಲ್ಲಿ ಉಪಯುಕ್ತ ವಾಗಲಿ
    ಲೇರಾಮಚಂದ್ರ ನೀನ್ ಸುಪರ್

    ReplyDelete