ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Wednesday, June 4, 2025

ಹಂಸಗೀತೆಗೆ‌ ಅಣಿಯಾದ ಆರ್ದ್ರನ ಆಸು-ಪಾಸು.

  ಹಂಸಗೀತೆಗೆ‌ ಅಣಿಯಾದ ಆರ್ದ್ರನ ಆಸು-ಪಾಸು


                ಲೇಖಕರು: ಸುರೇಶಕೃಷ್ಣಮೂರ್ತಿ

 

ಮಹಾವ್ಯಾಧ ಅಥವಾ ಬೇಟಗಾರ ಅಥವಾ ಒರೆಯನ್ ನಕ್ಷತ್ರ ಪುಂಜವನ್ನು ಭಾರತದಲ್ಲಿ ಮೃಗ ಎಂದು ಕರೆಯಲಾಗುತ್ತದೆ. ಚಳಿಗಾಲದ ರಾತ್ರಿಯಾಕಾಶದಲ್ಲಿ ಅತ್ಯಂತ ಪ್ರಮುಖವಾಗಿ ಕಂಡುಬರುವ ನಕ್ಷತ್ರಪುಂಜಗಳಲ್ಲಿ ಮೃಗವೂ ಒಂದಾಗಿದೆ. ಗ್ರೀಕ್‌ ಪುರಾಣದ ಪ್ರಕಾರ ಗಾರ್ಗಾನ್‌ ಸಹೋದರಿಯರಲ್ಲಿ ಒಬ್ಬಳಾದ ಯರ್ಯಾಲಿ ಮತ್ತು ಪೊಸೈಡಾನರ ಮಗನೇ ಒರೈಯಾನ ಎಂಬವನೇ ಈ ಬೇಟೆಗಾರ.  

ಜಗತ್ತಿನಾದ್ಯಂತ ಹಲವಾರು ನಾಗರೀಕತೆಗಳಲ್ಲಿ ಪುರಾಣ, ಇತಿಹಾಸಗಳಲ್ಲಿ ಇದರ ಪ್ರಸ್ತಾಪ ಕಂಡುಬರುತ್ತದೆ. ಮಹಾವ್ಯಾದ ಅಥವಾ ಒರೆಯನ್‌ ಹಲವಾರು ಕಾರಣಗಳಿಗೆ ಗಮನ ಸೆಳೆಯುತ್ತದೆ. ಬಹಳ ಪ್ರಮುಖವಾಗಿ ಬರಿಗಣ್ಣಿಗೆ ಕಾಣುವ ಸುಪ್ರಸಿದ್ದ ಒರೈಯನ್‌ ನೀಹಾರಿಕೆ ನಕ್ಷತ್ರಗಳ ನರ್ಸರಿ ಎಂದೇ ಖಗೋಳಶಾಸ್ತ್ರದಲ್ಲಿ ಕರೆಯಲಾಗಿದೆ.ನೀಹಾರಿಕೆ(Nebula) ಎಂದರೆ ಅಂತರಿಕ್ಷದಲ್ಲಿ ಹರಡಿರುವ ಮಿಲಿಯನ್‌ ನಿಂದ ಬಿಲಿಯನ್‌ ಜ್ಯೋತಿವರ್ಷಗಳಷ್ಟು ವ್ಯಾಪ್ತಿಯಿರುವ ಅನಿಲ ಮತ್ತು ಧೂಳಿನಿಂದ ಕೂಡಿದ ಅನಿಯತಾಕಾರದ ಮೋಡ. ಇಂತಹ ಮೋಡಗಳು ಗುರುತ್ವಾಕರ್ಷಣೆಯಿಂದ ಸಾಂಧ್ರಗೊಂಡು ಹೊಸ ನಕ್ಷತ್ರಗಳ ಉಗಮವಾಗುತ್ತದೆ. ನಮ್ಮ ಸೂರ್ಯ ಮತ್ತು ಸೌರವ್ಯೂಹವು ಸಹ ಇಂತಹುದೆ ನೀಹಾರಿಕೆಯ ಫಲಶೃತಿ ಆಗಿದೆ. ಕೊನೆ ಕೊನೆಗೆ ನಕ್ಷತ್ರದ ಅವಸಾನವಾದಾಗ ಅದರ ಗಣನೀಯ ಪ್ರಮಾಣದ ದ್ರವ್ಯವು ಅಂತರಿಕ್ಷದಲ್ಲಿ ನೀಹಾರಿಕೆಯಾಗಿ ಹರಡಿಕೊಳ್ಳುತ್ತದೆ. ಪುನರಪಿ ಜನನಂ ಪುನರಪಿ ಮರಣಂ ಎನ್ನುವಂತೆ ಮತ್ತದೇ ನೀಹಾರಿಕೆಯು ನವತಾರೆಯ ಉಗಮಕ್ಕೂ ದ್ರವ್ಯವನ್ನು ಒದಗಿಸಿ ಹೊಸ ಶಿಶು ನಕ್ಷತ್ರದ ಜನನಕ್ಕೆ ಕಾರಣವಾಗುತ್ತದೆ.  ರಾತ್ರಿಯಾಕಾಶದಲ್ಲಿ ಒರೆಯನ್ ಅನ್ನು ಸುಲಭವಾಗಿ ಗುರ್ತಿಸಲು ಸಹಕರಿಸುವ ನಾಲ್ಕು ಪ್ರಕಾಶಮಾನ ನಕ್ಷತ್ರಗಳಾದ ರೀಗಲ್‌, ಸೈಫ್‌, ಬಿಟಲಗ್ಯೂಸ್‌(ಆರ್ದ್ರ) ಮತ್ತು ಬೆಲ್ಲಾಟ್ರಿಕ್ಸ್‌ಗಳು ಒಂದು ಆಕರ್ಷಕ ಅನಿಯತ ಚತುರ್ಭುಜವನ್ನು ರಚಿಸುತ್ತವೆ. ಈ ನಾಲ್ಕರಲ್ಲಿ ಅತಿ ಪ್ರಕಾಶಮಾನವಾದ ರೀಗಲ್‌ ಒಂದು ಚಂಚಲತಾರೆ ಮತ್ತು ನಾಲ್ಕು ನಕ್ಷತ್ರಗಳ ಒಂದು ಪರಿವಾರವಾಗಿದೆ. ಈ ವ್ಯವಸ್ಥೆಯಲ್ಲಿ ಪ್ರಮುಖವಾದ ರೀಗಲ್‌ A ನಕ್ಷತ್ರವನ್ನು ರೀಗಲ್‌ B ಮತ್ತು ರೀಗಲ್‌ C ಗಳು ಸುತ್ತುತ್ತಿವೆ. ವಿಶೇಷವೆಂದರೆ ರೀಗಲ್‌ B ಎಂಬುದು ಪರಸ್ಪರ ಗಿರಕಿ ಹೊಡೆಯುತ್ತಿರುವ Ba ಮತ್ತು Bb ಎಂಬ ಜೋಡಿ ನಕ್ಷತ್ರಗಳ ಒಂದು ವ್ಯವಸ್ಥೆಯಾಗಿದೆ.ಈ ವ್ಯವಸ್ಥೆಯನ್ನು C ನಕ್ಷತ್ರವು ಸುತ್ತುಹಾಕುತ್ತಾ ಒಂದು ತ್ರಿವಳಿ ವ್ಯವಸ್ಥೆ ಏರ್ಪಟ್ಟಿದೆ !

ಒರೆಯನ್‌ ಚತುರ್ಭುಜದ ನಡುವೆ ಕಂಡುಬರುವ ಅಲ್ನಿಟಾಕ್‌, ಅಲ್ನಿಲಂ ಮತ್ತು ಮಿಂಟಾಕಾ ಎಂಬ ಮೂರು ನಕ್ಷತ್ರಗಳು ರಚಿಸುವ ರೇಖೆಯನ್ನು ಬೇಟೆಗಾರನ ನಡುಪಟ್ಟಿ ಎಂದು ಕರೆಯಲಾಗುತ್ತದೆ. ಈ ನಡುಪಟ್ಟಿಯಿಂದ ತೂಗಾಡುವ ಕತ್ತಿಯೆಂದು ಕಲ್ಪಿಸಲಾದ ಮೂರು ಬೆಳಕಿನ ಸಮೂಹ ಕಂಡುಬರುತ್ತದೆ. ಮಲಿನವಿಲ್ಲದ ರಾತ್ರಿಯಾಕಾಶದಲ್ಲಿ ಈ ಸಮೂಹವನ್ನು ಬರಿಗಣ್ಣಿನಿಂದ ಸರಿಯಾಗಿ ಗಮನಿಸಿ ನೋಡಿದರೆ ಅವು ನಕ್ಷತ್ರಗಳು ಮಾತ್ರ ಅಲ್ಲವೆಂಬ ಅಂಶ ಸ್ಪಷ್ಟವಾಗುತ್ತದೆ. ಇವುಗಳಲ್ಲಿ ಮಧ್ಯದಲ್ಲಿರುವುದೇ M43 ಎಂದು ಗುರುತಿಸಲಾಗುವ ಸುಪ್ರಸಿದ್ಧ ಒರೆಯನ್‌ ನೀಹಾರಿಕೆ. ಇದರ ಜೊತೆ ಜೊತೆಗೆ M42 ಅಂದರೆ ಓಟಗಾರ ನೀಹಾರಿಕೆಯನ್ನೂ ಇಲ್ಲಿಯೇ ಕಾಣಬಹುದು.  ಬೈನಾಕ್ಯುಲರ್‌ ಮೂಲಕ ನೋಡಲು ತುಂಬಾ ಸುಂದರವಾಗಿ ಕಾಣಿಸುವ ಇದು, ನಮ್ಮ ಬರಿಗಣ್ಣಿಗೆ ಕಾಣುವ ಮತ್ತು ಸೌರವ್ಯೂಹಕ್ಕೆ ಅತಿ ಸಮೀಪದ ಅಂದರೆ 1340 ಜ್ಯೋತಿವರ್ಷಗಳಷ್ಟು ದೂರದಲ್ಲಿರುವ ನೀಹಾರಿಕೆ ಆಗಿದೆ. ಇವುಗಳಲ್ಲದೆ, ಶಕ್ತಿಶಾಲಿಯಾದ ದೂರದರ್ಶಕಗಳಿಗೆ ಮಾತ್ರ ನಿಲುಕುವ ಜ್ವಾಲಾ ನೀಹಾರಿಕೆ (NGC 2024̧) ಕುದುರೆಮುಖ ನೀಹಾರಿಕೆ(Barnard 33) ಮುಂತಾದ ಆಳಾಂತರಿಕ್ಷದ ಕಾಯಗಳು ಇಲ್ಲಿಯೇ ಕಂಡುಬರುತ್ತವೆ.

ಓಟಗಾರ ನೀಹಾರಿಕೆ ಮತ್ತು ಒರೆಯನ್‌ ಬೃಹತ್‌ ನೀಹಾರಿಕೆ‌ ಚಿತ್ರಕೃಪೆ: NASA, ESA

ಶಿವನ ರುದ್ರಾವತಾರವು ಆರ್ದ್ರ ನಕ್ಷತ್ರದಲ್ಲಿ ಆಯಿತೆಂದು ಭಾರತೀಯರ ನಂಬಿಕೆರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರಗಳಲ್ಲಿ ಆರ್ದ್ರ ನಕ್ಷತ್ರ ಗೋಚರ ಪ್ರಕಾಶದಲ್ಲಿ ಎರಡನೆಯ ಸ್ಥಾನದಲ್ಲಿದೆ.  ಇದೊಂದು ಮಹಾ ಕೆಂಪು ದೈತ್ಯ ನಕ್ಷತ್ರವಾಗಿದೆನಕ್ಷತ್ರಗಳ ಜೀವನ ಚಕ್ರದಲ್ಲಿ ಕೆಂಪು ದೈತ್ಯ ಅವಸ್ಥೆಯು ನಕ್ಷತ್ರದ ವೃದ್ಧಾಪ್ಯದ   ಸ್ಥಿತಿಯನ್ನು ಸೂಚಿಸುತ್ತದೆ ಸ್ಥಿತಿಯ ನಂತರ   ಒಂದು ನಕ್ಷತ್ರ ಮುಂದೆ ಏನಾಗುತ್ತದೆ ಎಂಬುದು ಅದರ ಆರಂಭಿಕ ರಾಶಿಯನ್ನು ಅವಲಂಬಿಸಿರುತ್ತದೆನಮ್ಮ ಸೂರ್ಯನಂತಹ ಸಾದಾರಣ ನಕ್ಷತ್ರಗಳು ತಮ್ಮ ಹೊರ ಪದರವನ್ನು ಗ್ರಹೀಯ ನೀಹಾರಿಕೆಯ ರೂಪದಲ್ಲಿ ಹೊರಚೆಲ್ಲುತ್ತಾ ಹೋಗುತ್ತವೆ ಮತ್ತು ಕೊನೆಗೆ ಅವುಗಳ ಅಂತರಾಳದ ಗರ್ಭವು         ಶ್ವೇತಕುಬ್ಜ ಎಂದು ಕರೆಯಲಾಗುವ ಅತಿ ಸಾಂಧ್ರತೆಯ ಪುಟ್ಟನಕ್ಷತ್ರವಾಗಿ ಪರಿವರ್ತಿತವಾಗುತ್ತವೆಶ್ವೇತಕುಬ್ಜದ ರಾಶಿಯು ಸೂರ್ಯನ ರಾಶಿಯ 1.44 ಅಥವಾ ಅದಕ್ಕಿಂತ ಕಡಿಮೆ ಇದ್ದಲ್ಲಿಅದು ಸ್ಥಿರವಾಗಿ ಬಹುಕಾಲ ಉಳಿಯುತ್ತದೆಇದೇ ಚಂದ್ರಶೇಖರ್‌ ಮಿತಿ ಮಿತಿಯನ್ನು ಮೀರಿ ರಾಶಿ ಹೊಂದಿದ ಶ್ವೇತಕುಬ್ಜವು ಕಾಲಕ್ರಮದಲ್ಲಿ ಸಿಡಿಯುತ್ತದೆ ವಿದ್ಯಮಾನವನ್ನು ಮಹಾನವ್ಯ ಎಂದು ಕರೆಯಲಾಗುತ್ತದೆನಕ್ಷತ್ರವು ಮಹಾನವ್ಯವಾಗಿ ಸಿಡಿಯಲು ಪ್ರಚೋದಿಸುವ ಎರಡು ಕಾರಣಗಳಿರುತ್ತವೆ ಎಂದು ಸೈದ್ಧಾಂತಿಕ ಅಧ್ಯಯನಗಳು ಸೂಚಿಸುತ್ತವೆ. ಶ್ವೇತಕುಬ್ಜ ನಕ್ಷತ್ರದಲ್ಲಿನ ಪರಮಾಣುಗಳ ಬೀಜ ಸಮ್ಮಿಳನ ಕ್ರಿಯೆಯಿಂದ ಹಠಾತ್ ಮರುದಹನ ಕ್ರಿಯೆ ಅಥವಾ  ನಕ್ಷತ್ರದ ಅತಿಯಾದ ಗುರುತ್ವಾಕರ್ಷಣೆಯ ಕಾರಣದಿಂದ ಬೃಹತ್‌ ಕ್ಷತ್ರ ಗರ್ಭದ ಹಠಾತ್ ಕುಸಿತ ಈ ಎರಡು ಮೂಲಭೂತ ಕಾರ್ಯವಿಧಾನಗಳಲ್ಲಿ ಯಾವುದಾದರೂ ಒಂದರ ಕಾರಣದಿಂದ ಮಹಾನವ್ಯ ಸಂಭವಿಸುತ್ತದೆ.

 ಹಂಸವು ತನ್ನ ಅಂತ್ಯಕಾಲದಲ್ಲಿ ಮಧುರವಾಗಿ ಹಾಡಲು ತೊಡಗುತ್ತದೆಯಂತೆ. ಈ ಚರಮಗೀತೆಯನ್ನು ಹಂಸಗೀತೆ ಎನ್ನುತ್ತದೆ ಕವಿ ಸಮಯ. ಹಾಗೆಯೇ ಒಂದು ನಕ್ಷತ್ರದ ಪ್ರಕಾಶವು ಹಠಾತ್ತಾಗಿ ಅಸಾಮಾನ್ಯ ಪ್ರಮಾಣದಲ್ಲಿ ಹೆಚ್ಚುವುದರ ಮೂಲಕ ಅತಿ ಆಕರ್ಷಕವಾಗಿ ಕಾಣುವುದು ಮಹಾನವ್ಯ ಸಂಭವವಿಸುವುದರ ಸೂಚಕವಾಗಿರುತ್ತದೆ. ಗೋಚರ ಪ್ರಕಾಶಕ್ಕಿಂತ ವೇಗದಲ್ಲಿ ಅಸಹಜವಾಗಿ ಹರಿದು ಬರುವ ನ್ಯೂಟ್ರಿನೋಗಳ ಪ್ರವಾಹವು ಮಹಾನವ್ಯವನ್ನು ಖಚಿತ ಪಡಿಸುತ್ತದೆ.  ಮಹಾನವ್ಯಗಳು ಹೊರಕ್ಕೆ ಅತಿ ವೇಗದಲ್ಲಿ ಹಲವಾರು ಸೌರರಾಶಿಯ ಪ್ರಮಾಣದ ವಿವಿಧ ವಸ್ತುಗಳನ್ನು ಸುತ್ತಮುತ್ತಲಿನ ಅಂತರಿಕ್ಷಕ್ಕೆ ಎರಚಬಹುದು, ಆಘಾತ ತರಂಗವನ್ನು ಸೂಸಬಹುದು. ಅಂತರತಾರಾ ಮಾಧ್ಯಮದಲ್ಲಿ ಆಮ್ಲಜನಕದಿಂದ ರುಬಿಡಿಯಂವರೆಗಿನ ಧಾತುಗಳು ಮತ್ತು ಕಾಸ್ಮಿಕ್ ಕಿರಣಗಳ ಪ್ರಮುಖ ಮೂಲ ಮಹಾನವ್ಯಳೇ ಆಗಿವೆ. ಅವು ಗುರುತ್ವಾಕರ್ಷಣೆಯ ಅಲೆಗಳನ್ನು ಸಹ ಉತ್ಪಾದಿಸಬಹುದು.ಇವು ವಿಸ್ತರಿಸುವ ಆಘಾತ ತರಂಗಗಳು ಹೊಸ ನಕ್ಷತ್ರಗಳ ರಚನೆಗೆ ಕಾರಣವಾಗಬಹುದು. ನಮ್ಮದೇ ಆದ ಕ್ಷೀರಪಥದಲ್ಲಿ ಬರಿಗಣ್ಣಿಗೆ ಗೋಚರಿಸುತ್ತಿದ್ದ 1572 ರಲ್ಲಿ ಟೈಕೋ ಬ್ರಾಹೆ ನೇರವಾಗಿ ಗಮನಿಸಿದ ಮಹಾನವ್ಯ (SN 1572) ಮೊದಲನೆಯದುನಂತರ 1604ರಲ್ಲಿ  ಜೋಹಾನಸ್‌ ಕೆಪ್ಲರ್‌ನು ಕಂಡ ಮಹಾನವ್ಯ (SN 1604) ಎರಡನೆಯದು ಆಗಿತ್ತು. ಇತ್ತೀಚಿಗೆ ನಮ್ಮ ಕ್ಷೀರಪಥದ ಉಪ ನಕ್ಷತ್ರಪುಂಜವಾದ ದೊಡ್ಡ ಮೆಗೆಲ್ಲಾನಿಕ್‌ ಮೋಡದಲ್ಲಿ 1987 ರಲ್ಲಿ ಗೋಚರಿಸಿದ ಮಹಾನವ್ಯ (SN 1987A) ಆಗಿತ್ತುಆಗ ಅಲ್ಲಿನ ನೀಲಿಯ ದೈತ್ಯ ನಕ್ಷತ್ರವೊಂದರ ಸ್ಫೋಟವಾಗಿತ್ತು.

SN 1987ಅವಶೇಷಚಿತ್ರಕೃಪೆ: NASA, ESA


ಮಹಾನವ್ಯ ವಿದ್ಯಮಾನದ ನಂತರ ಕೊನೆಗೆ ಅಲ್ಲಿ ಉಳಿಯುವ ಗರ್ಭವು ಅತಿ ಗುರುತ್ವಾಕರ್ಷಣೆಗೆ ಒಳಗಾಗಿ ಅತಿ ಒತ್ತಡ ಮತ್ತು ಅತಿ ತಾಪದ ಉಂಡೆಯಾಗಿ ಒತ್ತಲ್ಪಟ್ಟಿರುತ್ತದೆ.  ಇದು ಮುಂದೆ ನ್ಯೂಟ್ರಾನ್‌ ನಕ್ಷತ್ರ ಅಥವಾ ಕೃಷ್ಣಕುಹರವಾಗಿ ಪರಿವರ್ತಿತವಾಗುತ್ತದೆ.  ಸೂರ್ಯನ ರಾಶಿಯ 2-3 ರ ಪ್ರಮಾಣವನ್ನು ಟೋಲ್ಮನ್-ಒಪನಹೈಮರ್-ವೊಲ್ಕಫ್‌(TOV) ಮಿತಿ ಎಂದು ತೆಗೆದುಕೊಳ್ಳಲಾಗುತ್ತದೆ. ಮಹಾನವ್ಯ ನಂತರದ ಗರ್ಭದ ರಾಶಿಯು TOV ಮಿತಿಯ ಒಳಗೇ ಇದ್ದರೆ ಅದೊಂದು ನ್ಯೂಟ್ರಾನ್‌ ನಕ್ಷತ್ರವಾಗಿಯೆ ಬಹುಕಾಲ ಉಳಿಯುತ್ತದೆ. ಈ ಮಿತಿಯನ್ನು ಮೀರಿದರೆ ಅದು ಕಪ್ಪುರಂದ್ರ (Black Hole)ವಾಗಿ ಪರಿವರ್ತಿತವಾಗುತ್ತದೆ.

ಒಂದು ಆಕಾಶಕಾಯದ ಮೇಲಿನ ವಿಮೋಚನಾ ವೇಗ ಅದರ ರಾಶಿಯನ್ನು ಅವಲಂಬಿಸಿರುತ್ತದೆ.  ಭೂಮಿಯ ಮೇಲೆ ವಿಮೋಚನಾ ವೇಗ ಸೆಕೆಂಡಿಗೆ  11.2 ಕಿಮೀ.ಅಂದರೆ ಭೂಮಿಯ ಮೇಲೆ ನಿಂತು ಸೆಂಕೆಂಡಿಗೆ  11.2  ಕಿಮೀ ವೇಗಕ್ಕಿಂತ ಹೆಚ್ಚಿನ ವೇಗದಿಂದ ಒಂದು ವಸ್ತವನ್ನು  ಮೇಲಕ್ಕೆ ಎಸೆದರೆ, ಅದು ಭೂಮಿಯ ಗುರುತ್ವಾಕರ್ಷಣೆಯಿಂದ ವಿಮೋಚನೆ ಹೊಂದಿ ಶಾಶ್ವತವಾಗಿ ಭೂಮಿಯಿಂದ ಹೊರಗೆ ಎಸೆಯಲ್ಪಡುತ್ತದೆ. ಸೆಂಕೆಂಡಿಗೆ  11.2 ಕಿಮೀ ಕಡಿಮೆ ವೇಗದಿಂದ ಎಸೆದರೆ ಅದು ಪುನಃ ಭೂಮಿಗೇ ಮರಳುತ್ತದೆ. ತನ್ನ ಸುತ್ತಲಿನ ನಕ್ಷತ್ರ ನೀಹಾರಿಕೆ ಹೀಗೆ ಎಲ್ಲವನ್ನು ಸೆಳೆದು ತನ್ನ ಒಡಲಿಗೆ ಸೇರಿಸಿಕೊಳ್ಳುತ್ತಾ ಬೆಳೆಯುತ್ತಲೇ ಹೋಗುವ ಕಪ್ಪುರಂದ್ರದ ರಾಶಿ ಅಗಾಧವಾಗಿದ್ದು ಅದರ ಮೇಲೆ ವಿಮೋಚನಾ ವೇಗವು ಬೆಳಕಿನ ವೇಗಕ್ಕಿಂತ ಅತ್ಯಂತ ಅಧಿಕವಾಗಿರುತ್ತದೆ. ಹೀಗಾಗಿ, ಬೆಳಕು ಅದು ಎಂತಹುದೇ ಆದರೂ ಕಪ್ಪುರಂದ್ರದಿಂದ ಹೊರಬರಲು ಎಷ್ಟೇ ಪ್ರಯತ್ನಿಸದರೂ ಸಾಧ್ಯವಾಗದು, ಹೀಗಾಗಿ, ಕಪ್ಪುರಂದ್ರವು ಯಾವುದೇ ಬೆಳಕನ್ನು ಹೊರಸೂಸದು.ಹೀಗಾಗಿ, ನಕ್ಷತ್ರಗಳು ಸಹಜವಾಗಿ ಗೋಚರವಾದಂತೆ ಕಪ್ಪುರಂದ್ರವು ನಮ್ಮ ಕಣ್ಣಿಗೆ ಗೋಚರವಾಗದು. 

ಮೇಲೆ ಹೇಳಿದಂತೆ ಆರ್ದ್ರನಕ್ಷತ್ರವು ಒಂದು ಬೃಹತ್‌ ಅನಿಲ ದೈತ್ಯವಾಗಿದ್ದು ಇದರ ರಾಶಿ ಸೂರ್ಯನ ರಾಶಿಯ 20 ಪಟ್ಟು,  ಮತ್ತು ಗಾತ್ರ 724 ಪಟ್ಟು ಅಧಿಕವಾಗಿದ್ದು ಸೂರ್ಯನ ಜಾಗದಲ್ಲಿ ಇರಿಸಿದೆವು ಅಂದುಕೊಂಡರೆ, ಅದು ಬುಧ, ಶುಕ್ರ, ಭೂಮಿ ಮತ್ತು ಮಂಗಳ ಗ್ರಹಗಳನ್ನು ತನ್ನಒಡಲಿಗೆ ಸೇರಿಸಿಕೊಂಡು ಬಿಡುವಷ್ಟು ವಿಸ್ತಾರವಾಗಿದೆ. ಸೌರವ್ಯೂಹದಿಂದ ಸುಮಾರು 548 ಜ್ಯೋತಿವರ್ಷಗಳಷ್ಟು ದೂರದಲ್ಲಿದ್ದರೂ ರಾತ್ರಿಯಾಕಾಶದಲ್ಲಿ ಗೋಚರಿಸುವ ಅತ್ಯಂತ ಪ್ರಕಾಶಮಾನವಾದ ನಕ್ಷತ್ರಗಳಲ್ಲಿ ಒಂದಾಗಿದೆ. ನಮ್ಮ ಸೂರ್ಯನ ವಯಸ್ಸು. ಹತ್ತಿರ ಹತ್ತಿರ ೫೦೦ ಕೋಟಿ ವರ್ಷಗಳು. ಸೂರ್ಯ ಇನ್ನೂ ಮಧ್ಯವಯಸ್ಕನಾದರೆ ಕೇವಲ  ಒಂದು ಕೋಟಿ ವರ್ಷಗಳ ಆಯುವಿನ ಆರ್ದ್ರ ಆಗಲೇ ವೃದ್ಧನೆಂದರೆ ಆಶ್ಚರ್ಯವಾದರೂ, ವಾಸ್ತವದ ವಿಚಾರವಾಗಿದೆ. ಆರ್ದ್ರನಲ್ಲಿನ ಅಗಾಧ ಇಂಧನ, ಅಪಾರ ರಾಶಿಯಿಂದ ಏರ್ಪಡುವ ಗುರುತ್ವ ಇವೆರಡೂ ಇಂಧನವನ್ನು ಅತಿವೇಗವಾಗಿ ಉರಿಸಿ, ಖಾಲಿ ಮಾಡಿಯಾಗಿದೆ. ಹೆಚ್ಚು ಅಂದರೆ ಇನ್ನು ಒಂದು ಲಕ್ಷ ವರ್ಷಗಳು ಆರ್ದ್ರನಲ್ಲಿ ಉಳಿದಿರುವ ಇಂಧನ ಬಳಕೆಗೆ ಬರಬಹುದು ಎಂದು ಒಂದು ಲೆಕ್ಕಾಚಾರ ಇದೆ. ಈ ಮಧ್ಯೆ 2019ರಲ್ಲಿ ಅನಿರೀಕ್ಷಿತವಾಗಿ ಆರ್ದ್ರನ ಪ್ರಕಾಶ ಕಡಿಮೆಯಾಗಿ ಮತ್ತು ೨೦೨೦ರಲ್ಲಿ ಮತ್ತೆ ಸಾಮಾನ್ಯ ಸ್ಥಿತಿಗೆ ತಲುಪಿದೆ. ಈ ಬದಲಾವಣೆಯು ಅನೇಕ ಊಹೆಗಳಿಗೆ ಅನುವು ಮಾಡಿಕೊಟ್ಟಿದೆ. ಈಗಿನಿಂದ ಆರಂಭಿಸಿ ಮುಂದೆ ಯಾವಾಗಲಾದರೂ ಸರಿ ಈ ಬೃಹತ್‌ ಕೆಂಪುದೈತ್ಯ ಸಿಡಿದು ಹೋಗುವ ಸಂಭವವನ್ನು ಖಗೋಳಶಾಸ್ತ್ರಜ್ಞರು ಎದುರು ನೋಡುತ್ತಿದ್ದಾರೆ. ಆರ್ದ್ರ ಸಿಡಿದು ಮಹಾ ನವ್ಯವಾದ ಪಕ್ಷದಲ್ಲಿ ಭೂಮಿಯ ಮೇಲಿನ ನಮಗೇನಾದರೂ ಅಪಾಯವಾಗುವ ಸಂಭವವಿದೆಯೆ ಎಂಬ ಜಿಜ್ಙಾಸೆಗೂ ಇದು ಅವಕಾಶಮಾಡಿಕೊಟ್ಟಿದೆ. ಆರ್ದ್ರನ ದೈತ್ಯಾಕಾರ ಮತ್ತು ಅಗಾಧ ರಾಶಿ ಮುಂದೆ ಅದನ್ನೊಂದು ಕಪ್ಪುರಂದ್ರವನ್ನಾಗಿ ಮಾರ್ಪಡಿಸುವುದು ಸಿದ್ದಾಂತದ ಪ್ರಕಾರ ಖಚಿತ. ಅದಕ್ಕೂ ಮುನ್ನ ಅದೊಂದು ಮಹಾನವ್ಯವಾಗಬೇಕು. ಅದು ನಮ್ಮ ಜೀವಿತಾವಧಿಯಲ್ಲಿ ಆಗುವುದಾದರೆ, ನಮಗೆ ಅಪಾಯ ತರದಿದ್ದರೆ, ಹಗಲಿನಲ್ಲಿಯೇ ಅಂತಹ ಒಂದು ಮಹಾನವ್ಯವನ್ನು ವೀಕ್ಷಿಸಿದ ಸಾಕ್ಷಿಗಳಾ ಗಿನಾವು ಉಳಿಯಬಹುದೇನೋ?! ಆದರೆ ,ನೆನೆಪಿರಲಿ ಆರ್ದ್ರೆ ನಮ್ಮಿಂದ 548 ಜ್ಯೋತಿವರ್ಷಗಳಷ್ಟು ದೂರದಲ್ಲಿದೆ ಈಗಲೆ ನಮಗೆ ಅದರ ಮಹಾನವ್ಯ ಕಂಡರೂ ಅದು ಸಂಭವಿಸಿ 548 ವರ್ಷ ಕಳೆದಿರುತ್ತದೆ. ವಾಸ್ತವದಲ್ಲಿ ಅದು ಇಂದು ಸಂಭವಿಸಿದರೂ, ಅದನ್ನು ನಾವು ಕಾಣಲು ಇನ್ನೂ 548 ವರ್ಷಗಳು ಕಾಯಬೇಕಾಗುತ್ತದೆ.ಆದ್ದರಿಂದ, ನಮಗೆ ಗೋಚರವಾಗುವ ಅತಿದೂರದ ಅಂತರಿಕ್ಷದಲ್ಲಿ ನಡೆಯುವ ವಿದ್ಯಮಾನಗಳು ಯಾವುದೂ ಲೈವ್‌ ಟೆಲಿಕಾಸ್ಟ್‌ ಆಗಿರುವುದಿಲ್ಲ. ಬದಲಿಗೆ, ಸಮಯವೆಂಬ ಹಾರ್ಡ್‌ ಡಿಸ್ಕಿನಲ್ಲಿ ರೆಕಾರ್ಡ್‌ ಆಗಿರುವ ಮೀಡಿಯ ಮಾತ್ರ ಆಗಿರುತ್ತದೆ!


ಕಲಾವಿದನ ಕಲ್ಪನೆಯಲ್ಲಿ ಸಂಭವನೀಯ ಆರ್ದ್ರನ ಮಹಾನವ್ಯ, ಕೃಪೆ: NASA, ESA

1 comment:

  1. Well articulated.To be read by all students of science and common man as well

    ReplyDelete