ಮಿಂಚಿನ ಓಟದ ಮೇಲೊಂದು ನೋಟ.
ಲೇಖಕರು: ಕೃಷ್ಣಸುರೇಶ
ಅತಿವೇಗದಲ್ಲಿ ನಡೆಯುವ ಚಟುವಟಿಕೆಗಳನ್ನು ವಿವರಿಸಿ ಹೇಳುವಾಗ ಮಿಂಚಿನ ವೇಗ ಎಂಬ ಉಪಮಾನವನ್ನು ದಿನನಿತ್ಯ ನಾವು ಬಳಸುತ್ತಲೇ ಇರುತ್ತೇವೆ. ಆಕಾಶದಲ್ಲಿ ಗುಡುಗು, ಮಿಂಚುಗಳು ಉಂಟಾದಾಗ ಮೊದಲು ಬೆಳಕು ಕಾಣುತ್ತದೆ ಸ್ವಲ್ಪ ಸಮಯದ ನಂತರ ಗುಡುಗಿನ ಸದ್ದು ಕೇಳಿಸುತ್ತದೆ. ಏಕೆ ಎನ್ನುವ ಶಾಲಾ ಭೌತಶಾಸ್ತ್ರದ ಒಂದು ಹಳೆಯ ಪ್ರಶ್ನೆಯನ್ನು ನಾವುಗಳೆಲ್ಲರೂ ಎದುರುಸಿಯೇ ಇರುತ್ತೇವೆ.. ಶಬ್ದಕ್ಕಿಂತ ಬೆಳಕಿನ ವೇಗ ಹೆಚ್ಚು. ಆದ್ದರಿಂದ, ಮೊದಲು ಮಿಂಚಿನ ಬೆಳಕು ಕಾಣುತ್ತದೆ. ತದನಂತರ ಗುಡುಗಿನ ಸದ್ದು ಕೇಳುತ್ತದೆ ಎಂಬ ಉತ್ತರವನ್ನೂ ಕಂಡುಕೊಂಡಿರುತ್ತೇವೆ.
ಸೂರ್ಯನಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು 8ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಚಂದ್ರನಿಂದ ಪ್ರತಿಫಲಿಸಲ್ಪಟ್ಟ ಬೆಳಕು ಭೂಮಿಯನ್ನು ತಲುಪಲು ಒಂದು ನಿಮಿಷ ತೆಗೆದುಕೊಳ್ಳುತ್ತದೆ. ಸೌರವ್ಯೂಹಕ್ಕೆ ಅತಿ ಹತ್ತಿರದ ನಕ್ಷತ್ರ ವ್ಯವಸ್ಥೆಯಾದ ಆಲ್ಫಾಸೆಂಟಾರಿಯಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಸುಮಾರು ನಾಲ್ಕೂ ಕಾಲು ಭೌಮಿಕ ವರ್ಷಗಳನ್ನು ತೆಗದುಕೊಳ್ಳುತ್ತದೆ. ಅಂತರಿಕ್ಷದ ಕಾಯಗಳು ಮತ್ತು ನಮ್ಮ ನಡುವಿನ ದೂರವನ್ನು ಅಳೆಯಲು ಜ್ಯೋತಿವರ್ಷಗಳೆಂಬ ಮಾನವನ್ನು ಬಳಸುತ್ತೇವೆ. ಒಂದು ಜ್ಯೋತಿವರ್ಷವೆಂದರೆ ಬೆಳಕು ಒಂದು ಭೌಮಿಕ ವರ್ಷದಲ್ಲಿ ಚಲಿಸಿದ ದೂರ. ಈ ದೂರ ಎಷ್ಟು ಅಗಾಧವೆಂದರೆ, ಮಾನವರಾದ ನಾವು ವಿಮಾನದಲ್ಲಿ ಹಾರುತ್ತಾ ಗಂಟೆಗೆ ಸುಮಾರು ಒಂದು ಸಾವಿರ ಕಿಮೀ ವೇಗದಲ್ಲಿ ಚಲಿಸುತ್ತಾ ಈ ದೂರವನ್ನು ಕ್ರಮಿಸಲು ಹತ್ತು ಲಕ್ಷ ವರ್ಷಗಳು ತೆಗೆದುಕೊಳ್ಳಬೇಕಾಗುತ್ತದೆ! ಆಕಾಶದಲ್ಲಿ ನಮಗೆ ಕಾಣುವ ನಕ್ಷತ್ರ ನೀಹಾರಿಕೆ, ನಕ್ಷತ್ರಗುಚ್ಚ, ನಕ್ಷತ್ರಮಂಡಲಗಳು ನಮ್ಮಿಂದ ಕೆಲವೇ ಕೆಲವು ಜ್ಯೋತಿವರ್ಷಗಳಿಂದ ಆರಂಭಿಸಿ ಕೋಟಿಗಟ್ಟಳೆ ಜ್ಯೋತಿವರ್ಷಗಳಷ್ಟು ದೂರದಲ್ಲಿವೆ. ಅಲ್ಲಿಂದ ಹೊರಟ ಬೆಳಕು ನಮಗೆ ತಲುಪಲು ಬಿಲಿಯಾಂತರ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಇಂದು ನಾವು ಆಕಾಶದಲ್ಲಿ ಕಾಣುವ ನಕ್ಷತ್ರ ನೀಹಾರಿಕೆ ಮುಂತಾದವುಗಳ ಚಿತ್ರ ಇಂದಿನದಾಗಿರುವುದಿಲ್ಲ. ಅವುಗಳ ಇಂದಿನ ಚಿತ್ರವನ್ನು ಕಾಣಬೇಕಾದರೆ ಬಿಲಿಯಾಂತರ ವರ್ಷಗಳು ಕಾಯಬೇಕಾಗುತ್ತದೆ ಆದರೆ, ಅಂದಿಗೆ ನಾವಿರುವುದಿಲ್ಲ.
ಬೆಳಕು ಉದಯಿಸಿದ ತಕ್ಷಣ ಅಕಾಶದಲ್ಲಿ ಅನಂತವೇಗದಲ್ಲಿ ಪಸರಿಸುತ್ತದೆ ಎಂದು ಬಹಳ ಹಿಂದಿನಿಂದಲೂ ನಂಬಲಾಗಿತ್ತು. ಗೆಲಿಲಿಯೋ ಮೊಟ್ಟಮೊದಲ ಬಾರಿಗೆ ಬೆಳಕಿನ ವೇಗವನ್ನು ಅಳೆಯಲು ಪ್ರಯತ್ನಿಸದನು. ಬೆಳಕು ಒಂದು ಮೈಲಿ ದೂರವನ್ನು ಕ್ರಮಿಸಲು 0.0000054 ಸೆಕೆಂಡುಗಳ ಸಮಯವನ್ನು ತೆಗೆದುಕೊಳ್ಳುತ್ತದೆ ಎಂದೂ, ಅಪಾರ ವೇಗದ ಕಾರಣದಿಂದ ಬೆಳಕಿನ ವೇಗವನ್ನು ನಿಖರವಾಗಿ ಸದ್ಯಕ್ಕೆ ನಿರ್ಣಯಿಸಲಾಗದು ಎಂಬ ತೀರ್ಮಾನಕ್ಕೆ ಬಂದಿದ್ದನು. ಬ್ರಿಟಿನ್ನಿನ ರೋಜರ್ ಬೆಕನ್ ಮೊದಲಿಗೆ ಬೆಳಕು ಒಂದು ಬಿಂದುವಿನಿಂದ ಹೊರಟು ಮತ್ತೊಂದು ಬಿಂದು ತಲುಪಬೇಕಾದರೆ ಸಮಯ ಬೇಕಾಗುತ್ತದೆ ಎಂಬುದನ್ನು ಪ್ರತಿಪಾದಿಸಿದನು.1670ರಲ್ಲಿ ಗುರುಗ್ರಹದ ಉಪಗ್ರಹಗಳು ಗುರುಗ್ರಹವನ್ನು ಸುತ್ತಲು ತೆಗೆದುಕೊಳ್ಳುವ ಸಮಯವನ್ನು ನಿರ್ಣಯಿಸುವಾಗ ಡ್ಯಾನಿಷ್ ಖಗೋಳವೀಕ್ಷಕ ಓಲೆ ಕ್ರಿಸ್ಟೆನ್ಸನ್ ರೋಮರ್ಒಂದು ವ್ಯತ್ಯಾಸವನ್ನು ಗಮನಿಸಿದನು. ಗುರುಗ್ರಹವು ಭೂಮಿಗೆ ಅತಿ ಸಮೀಪವಿದ್ದಾಗ ಗುರುಗ್ರಹದ ಉಪಗ್ರಹಗಳು ಅದರ ಸುತ್ತ ಸುತ್ತಲು ತೆಗೆದುಕೊಳ್ಳುವ ಸಮಯಕ್ಕಿಂತ ಗುರುಗ್ರಹವು ಭೂಮಿಗೆ ಅತಿದೂರದಲ್ಲಿದ್ದಾಗ ತೆಗೆದುಕೊಳ್ಳುವ ಕಾಲವು11ನಿಮಿಷಗಳಷ್ಟು ಹೆಚ್ಚು ಇರುವುದನ್ನು ಅವನು ಗಮನಿಸಿದನು. ಇದರಿಂದ ಗುರುಗ್ರಹವು ಭೂಮಿಯಿಂದ ದೂರವಿರುವಾಗ ಬೆಳಕು ಹಚ್ಚು ದೂರವನ್ನು ಕ್ರಮಿಸಬೇಕಾಗುತ್ತದೆಯಾದ್ದರಿಂದ ಈ ವ್ಯತ್ಯಾಸವಾಗುತ್ತದೆ ಎಂದು ಅರ್ಥಮಾಡಿಕೊಂಡನು ,ಬೆಳಕು ಸಹ ದೂರವನ್ನು ಕ್ರಮಿಸಲು ಸಮಯವನ್ನು ತೆಗೆದುಕೊಳ್ಳುತ್ತದೆ ಎಂಬ ನಿರ್ಣಯಿಸಿದನು.
ಮೈಕೆಲ್ಸನ್-ಮಾರ್ಲೆಪ್ರಯೋಗ.
ಆಲ್ಬರ್ಟ್ಐನಸ್ಟೀನ್
ಅಕ್ಕಪಕ್ಕದಲ್ಲಿ ಒಂದೇ ಸ್ಥಿರವೇಗದಲ್ಲಿ ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುವ ಎರಡು ರೈಲುಬೋಗಿಗಳಲ್ಲಿ ಪ್ರಯಾಣಿಸುತ್ತಿರುವವರಿಗೆ ತಮ್ಮ ಪಕ್ಕದ ರೈಲು ಸಾಪೇಕ್ಷವಾಗಿ ನಿಶ್ಚಲವಾಗಿರುವಂತೆ ತೋರುತ್ತದೆ. ಅಂತೆ ವಿಶ್ವಖ್ಯಾತವಿಜ್ಞಾನಿ ಐನಸ್ಟೈನ್ ತಮ್ಮ ಬಾಲ್ಯದಲ್ಲಿ ಬೆಳಕಿನ ಕಿರಣದ ಜೊತೆಗೆ ಅದೇವೇಗದಲ್ಲಿ ಚಲಿಸಿದಂತೆ ಕಲ್ಪಿಸಿಕೊಂಡು ಸಂಭ್ರಮಿಸಿದ್ದರು. ಬೆಳಕು ಒಂದುವಿದ್ಯುತ್ಕಾಂತೀಯ ತರಂಗಗಳ ಪ್ರವಾಹ ಎಂಬ ವಿಚಾರವನ್ನು ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್ ವೆಲ್ ತೋರಿಸಿಕೊಟ್ಟರು. ಇದು ನ್ಯೂಟನನ ಬೆಳಕಿನ ಕಣಸಿದ್ಧಾಂತಕ್ಕೆ ವ್ಯತಿರಿಕ್ತವೆಂದು ಭಾವಿಸಲಾಗಿತ್ತು. ಬೆಳಕು ವಿದ್ಯುತ್ಕಾಂತೀಯ ವಿಕಿರಣವಾಗಿದ್ದು ಅಂತಹ ಬೆಳಕಿನ ಜೊತೆಗೆ ಅದರದೇ ವೇಗದಲ್ಲಿ ಚಲಿಸುತ್ತಾ ಇದ್ದರೆ ಆವಿಕಿರಣ ನಿಶ್ಚಲವಾಗಿದ್ದಂತೆ ತೋರಬೇಕು. ವಿಕಿರಣವೊಂದು ನಿಶ್ಚಲವಾಗಿರುವುದು ಮ್ಯಾಕ್ಸ್ ವೆಲ್ ಅವರ ಸಿದ್ಧಾಂತದ ಪ್ರಕಾರ ಒಂದು ಅವಾಸ್ತವ ಸಂಗತಿ. ಈ ವಿರೋದಾಭಾಸದಿಂದ ಹೊರಬರಲು ಐನಸ್ಟಿನರು ನೋಡುಗನು ಎಷ್ಟೇ ವೇಗದಲ್ಲಿದ್ದರೂ ಅಥವಾ ಬೆಳಕಿನ ಆಕರ ಎಷ್ಟೇ ವೇಗದಲ್ಲಿದ್ದರೂ ಬೆಳಕಿನ ವೇಗವನ್ನು ಮುಟ್ಟಲಾಗದು ಮತ್ತು ಬೆಳಕಿನ ವೇಗ ಸ್ಥಿರವಾಗಿರುತ್ತದೆ ಎಂಬ ತೀರ್ಮಾನಕ್ಕೆಬಂದರು.
ಐನಸ್ಟೀನರ ವಿಶೇಷ ಸಾಪೇಕ್ಷ ಸಿದ್ಧಾಂತದ ಪ್ರಕಾರ, ಅತಿವೇಗದಲ್ಲಿ ಚಲಿಸುವ ಒಂದು ಸ್ಕೇಲಿನ ಉದ್ದ ಕಡಿಮೆಯಾಗುತ್ತದೆ. ಅತಿ ವೇಗದಲ್ಲಿ ಚಲಿಸುವ ಗಡಿಯಾರ ನಿಧಾನವಾಗಿ ಚಲಿಸುತ್ತದೆ. ಅಂದರೆ, ಕಾಲದ ವೇಗ ಕಡಿಮೆಯಾಗುತ್ತದೆ. ಬೆಳಕಿನ ವೇಗ ತಲುಪಿದರೆ ವಸ್ತುವು ಕುಬ್ಜವಾಗಿ ಬಿಡುತ್ತದೆ.ಕಾಲವುನಿಂತುಬಿಡುತ್ತದೆ. ವಸ್ತುವಿನ ರಾಶಿ ಅನಂತವಾಗಿಬಿಡುತ್ತದೆ. ಅದನ್ನು ಚಲಿಸಲು ಅನಂತ ಪ್ರಮಾಣದ ಶಕ್ತಿ ಬೇಕಾಗುತ್ತದೆ. ಬೆಳಕಿನ ವೇಗದಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಾನೆಂದಾದರೆ ಅವನು ಕುಬ್ಜನಾಗಿ ಬಿಡುತ್ತಾನೆ .ಅವನ ಪಾಲಿಗೆ ಕಾಲವು ನಿಂತಿತು ಎನ್ನುವಷ್ಟು ನಿಧಾನವಾಗಿಬಿಡುತ್ತದೆ.ಅವನ ತೂಕ ಅನಂತವಾಗಿಬಿಡುತ್ತದೆ ಮತ್ತು ಚಲನೆಗೆ ಅನಂತ ಪ್ರಮಾಣದ ಶಕ್ತಿಯನ್ನು ಬೇಡುತ್ತದೆ. ಒಂದು ಯುವ ಅವಳಿ ಜೋಡಿಗಳಲ್ಲಿ ಒಬ್ಬರು ಬೆಳಕಿನ ವೇಗದಲ್ಲಿ ಚಲಿಸಿ ಅಂತರಿಕ್ಷಯಾನ ಮುಗಿಸಿ ಭೂಮಿಗೆ ಹಿಂತಿರುಗಿ ಬಂದರೆಂದು ಕಲ್ಪಿಸಿಕೊಳ್ಳುವುದಾದರೆ ಹಾಗೆ ಪ್ರಯಾಣಿಸಿದವರು ಕಾಲ ಕಳೆದಿಲ್ಲವಾದ್ದರಿಂದ ಇನ್ನೂ ಯುವಕರಾಗಿಯೇಉಳಿದಿರುತ್ತಾರೆ. ಆದರೆ, ಭೂಮಿಯ ಮೇಲೆಯೇ ಇದ್ದ ಅವರ ಅವಳಿ ಸಹೋದರ ಕಾಲ ಕಳೆದು ಮುದುಕನಾಗಿ ಬಿಟ್ಟಿರುತ್ತಾರೆ! ಒಟ್ಟಾರೆ, ಬೆಳಕಿನ ವೇಗವನ್ನು ಮೀರಿ ಯಾವುದು ಚಲಿಸಲಾರದು ಎಂಬುದೇ ವಿಶೇಷ ಸಾಪೇ ಕ್ಷಸಿದ್ಧಾಂತದ ನಿಯಮವಾಗಿದೆ.
ಉಗಮದ ಆರಂಭದಲ್ಲಿ ವಿಶ್ವವು ಬೆಳಕಿಗಿಂತ ಹಲವಾರು ಪಟ್ಟು ವೇಗದಲ್ಲಿ ವಿಸ್ತಾರವಾಯಿತೆಂದು. ವಿಶ್ವದ ಉಗಮ ಮತ್ತು ವಿಸ್ತಾರವನ್ನು ವಿವರಿಸುವ ಕಾಸ್ಮಾಲಜಿಯು ಹೇಳುತ್ತದೆ. ವಿಶ್ವದ ಉಗಮದೊಂದಿಗೆ ಸೃಷ್ಟಿಯಾದ ದ್ರವ್ಯ ಮತ್ತು ಅದರಿಂದಾದ ಆಕಾಶಕಾಯಗಳು ಪರಸ್ಪರ ದೂರ ಚಲಿಸಲು ತೆಗೆದುಕೊಂಡ ಕಾಲ ನಿಧಾನವಾಗಿದ್ದಿತೆ ಅಥವಾ ನಿಂತಿದ್ದಿತೆ ಅಥವಾ ಇಂದೂ ಸಹ ವಿಶ್ವವು ಬೆಳಕಿಗಿಂತ ವೇಗದಲ್ಲಿ ವಿಸ್ತಾರವಾಗುತ್ತಿರುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜವೇ ಆಗಿದೆ.. ಬೆಳಕಿನ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸುವ ನಾವು ಕಾಣುವ ಎಲ್ಲ ವಸ್ತುಗಳು ಮತ್ತು ಕಣಗಳನ್ನು ಬ್ರಾಡಿಯಾನುಗಳೆಂದೂ, ,ಬೆಳಕಿನ ವೇಗದಲ್ಲಿ ಚಲಿಸಬಲ್ಲ ಗ್ಲುಯಾನ್, ಫೋಟಾನುಗಳನ್ನು ಲಕ್ಸಾನುಗಳೆಂದೂ ಕರೆಯಲಅಗುತ್ತದೆ. ಬೆಳಕಿಗಿಂತ ವೇಗದಲ್ಲಿ ಚಲಿಸುವ ಮೆಟಾ ಪಾರ್ಟಿಕಲ್ಸ್ಎಂಬ ಕಣಗಳಿರಬಹುದೆಂದು ಅರ್ನಾಲ್ಡ್ ಸಮರ್ಪೀಲ್ಡ್ ಊಹೆ ಮಾಡಿದ್ದರು. ಬೆಳಕಿಗಿಂತ ವೇಗದಲ್ಲಿ ಚಲಿಸುವ ಕಣಗಳ ವಿಚಾರವನ್ನು ತಮ್ಮ ಸಿದ್ಧಾಂತದ ಮೂಲಕ ಜೆರಾಲ್ಡ್ ಫೈನಬರ್ಗ್ 1968ರಲ್ಲಿ ಪ್ರತಿಪಾದಿಸಿದರು .ಅವರು ಅಂತಹ ಕಣಗಳನ್ನು ಟ್ಯಾಕಿಯಾನ್ ಎಂದು ಕರೆದರು. ಆದರೂ, ಟ್ಯಾಕಿಯಾನುಗಳ ಅಸ್ತಿತ್ವದ ಬಗ್ಗೆ ವಿವರಣೆ ನೀಡಲು ಸಾಧ್ಯವಾಗಲಿಲ್ಲ. ಈ ಹಂತದಲ್ಲಿ ಭಾರತೀಯ ಸಂಜಾತ ಭೌತವಿಜ್ಞಾನಿ ಇ ಸಿ ಜಿ ಸುದರ್ಶನ್ ನಡೆಸಿದ ಸಂಶೋಧನೆಗಳು ಗಮನ ಸೆಳೆದವು. ಅವರು ಮಂಡಿಸಿದ ಸಿದ್ಧಾಂತವು ಐನಸ್ಟೀನರ ವಿಶೇಷ ಸಾಪೇಕ್ಷ ಸಿದ್ಧಾಂತವನ್ನೇ ಅಲ್ಲಗೆಳೆಯುತ್ತದೆ. ಟ್ಯಾಕಿಯಾನ್ಗಳನ್ನು ಕುರಿತು ಮತ್ತು ಒಟ್ಟಾರೆ ಭೌತಶಾಸ್ತ್ರಕ್ಕೆ ಅವರು ನೀಡಿರುವ ಕೊಡುಗೆಯನ್ನು ಗಮನಿಸಿ ಒಂಬತ್ತು ಬಾರಿ ಸುದರ್ಶನ್ ಅವರ ಹೆಸರನ್ನುನೋಬೆಲ್ ಬಹುಮಾನಕ್ಕೆ.ಶಿಫಾರಸ್ಸು ಮಾಡಿತಾದರೂ ಕೊನೆಗೂ ಅದು ಒಮ್ಮೆಯೂ ಅವರಿಗೆ ದೊರೆಯಲೇ ಇಲ್ಲ! .
ಇ ಸಿ ಜಿ ಸುದರ್ಶನ್
ಟ್ಯಾಕಿಯಾನ್ ಇರುವುದು ಸಂಶೋಧನೆಯ ಮೂಲಕ ಸಿದ್ಧವಾದರೆ, ಆಳಾಂತರಿಕ್ಷದ ಕಾಯಗಳಿಗೆ ಪ್ರಯಾಣಿಸುವ ಮಾನವನ ಕನಸು ನೆನೆಸಾಗಬಹುದು. ಕಾಲದಲ್ಲಿ ಹಿಂದಕ್ಕೆ ಪಯಣಿಸಿ ವಿಶ್ವದ ಉಗಮದಿಂದ ಸೂರ್ಯ ಮತ್ತು ಅವನ ಪರಿವಾರದ ಇತಿಹಾಸವನ್ನು ನಿಖರವಾಗಿ ತಿಳಿಯಬಹುದು ಅಷ್ಟೇಏಕೆ, ಅಳಿದ ನಮ್ಮ ಬಂಧು,ಮಿತ್ರರೊಂದಿಗೆ ಸಂಪರ್ಕವನ್ನು ಸಾಧಿಸಿ ಅವರನ್ನು ಮಾತನಾಡಿಸಬಹುದು.
ಟ್ಯಾಕಿಯಾನ್ನ ಒಂದು ಕಾಲ್ಪನಿಕ ಚಿತ್ರ.
ಪ್ರಸ್ತುತದ ಭೌತವಿಜ್ಞಾನದ ತತ್ವಗಳಿಗೆ ವ್ಯತಿರಿಕ್ತವೆಂದೇ ಪರಿಗಣಿಸಲಾಗಿರುವ ಟ್ಯಾಕಿಯಾನ್ ಅಸ್ತಿತ್ವದಲ್ಲಿರಬಹುದು, ಇಲ್ಲದಿರಬಹುದು. ಆದರೆ, ನಮ್ಮ ತಂತ್ರಜ್ಞಾನವು ಸೆರೆಹಿಡಿಯಲು ಸಾಧ್ಯವಾಗದ್ದನ್ನು ನಮ್ಮ ಮನಸ್ಸು ಸೆರೆ ಹಿಡಿಯಬಲ್ಲದು. ಸಮಯದ ಮೂಲಕ ಹಿಂದಕ್ಕೆ ಪ್ರಯಾಣಿಸುವ ಒಂದು ಕಣದ ಸಾಧ್ಯತೆಯನ್ನು ಮತ್ತು ಅದು ಸಮಯದ ಸ್ವರೂಪ, ಬ್ರಹ್ಮಾಂಡ ಮತ್ತು ಅವುಗಳನ್ನು ತುಂಬುವ ಘಟನೆಗಳ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ತಿಳಿಯುವ ಕುತೂಹಲ ಹೊಸ ಆವಿಷ್ಕಾರಕ್ಕೆ ಬುನಾದಿ ಆಗಿರುತ್ತದೆ. ಐನಸ್ಟೀನರ ಮಾತಿನಲ್ಲಿ ಹೇಳುವುದಾದರೆ :-ಗಳಿಸಿದ ಜ್ಞಾನಕ್ಕಿಂತ ಕಲ್ಪನೆ ಮುಖ್ಯ.ಗಳಿಸಿದ ಜ್ಞಾನ ಸೀಮಿತ. ಕಲ್ಪನೆಯು ಅನಂತವಾಗಿ ಈ ಜಗತ್ತನ್ನು ಆವರಿಸಿದೆ."
No comments:
Post a Comment