ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, October 4, 2025

ತಳಿಶಾಸ್ತ್ರದ ಸಿಂಡ್ರೆಲ್ಲಾ : ಡ್ರಾಸೋಫಿಲಾ

 ತಳಿಶಾಸ್ತ್ರದ  ಸಿಂಡ್ರೆಲ್ಲಾ: ಡ್ರಾಸೋಫಿಲಾ

 

   

    ಲೇಖಕರು : 

 ಬಿ.ಎನ್. ರೂಪ,       ಶಿಕ್ಷಕರು,

                                                                       ಕೆ.ಪಿ.ಎಸ‌, ಜೀವನ್‌ ಭೀಮ ನಗರ
                                                                        ಬೆಂಗಳೂರು ದಕ್ಷಿಣ ವಲಯ -4

 

ಅಡುಗೆ ಮನೆಯಲ್ಲಿ, ಕೊಳೆಯುತ್ತಿರುವ ಹಣ್ಣು, ಪಾನೀಯಗಳ ಬಳಿ ಸಾಮಾನ್ಯವಾಗಿ ಸನ್ನ ಕೀಟಗಳ ಗುಂಪೊಂದು ಆಕರ್ಷಿತವಾಗಿರುವುದನ್ನು ಗಮನಿಸಿರುತ್ತೇವೆ ಅಲ್ಲವೇ ? ಈ ಕೀಟಗಳೇ ಹಣ್ಣಿನಕೀಟ ಅಥವಾ ನೊಣ, ವಿನಿಗರ್ ನೊಣ, ಬಾಳೆನೊಣ,ಪೋಮೇಸ್ ನೊಣ ಎಂಬ ಹಲವಾರು ನಾಮಧೆಯಗಳನ್ನು ಹೊಂದಿರುವ ಡ್ರೊಸೊಫಿಲಾ ಮೆಲನೊಗ್ಯಾಸ್ಟರ್-Drosophila melanogaster ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಕನ್ನಡದ ಗಾದೆಗೆ ಸೂಕ್ತ ಅನ್ವಯವಾಗಿರುವ ಈ ಚಿಕ್ಕ ನೊಣ, ಸಂಧಿಪದಿಗಳ (Arthropoda) ಡಿಪ್ಟೆರಾ ವರ್ಗದ  ಡ್ರೋಸೋಫಿಲಿಡೇ ಕುಟುಂಬಕ್ಕೆ ಸೇರುವ ನೊಣದ ಒಂದು ಜಾತಿಯಾಗಿದೆ. ಡ್ರೋಸೋಫಿಲ ಎಂಬ ಪದವು ಗ್ರೀಕ್‌ ಭಾಷೆಯಿಂದ ನಿಷ್ಪತ್ತಿಯಾಗಿದೆ. ಗ್ರೀಕ್ ನಲ್ಲಿ ‘ಡ್ರೊಸೋಸ್’ ಅಂದರೆ ಇಬ್ಬನಿ ‘ಫಿಲಿಯ’ ಎಂದರೆ ಪ್ರೀತಿ. ಇಬ್ಬನಿಯನ್ನು ಪ್ರೀತಿಸುವ ಕೀಟ ಎಂಬ ಅರ್ಥವನ್ನು ಇದು ನೀಡುತ್ತದೆ.


ಗಾತ್ರದಲ್ಲಿ ಕಿರಿದಾದ ಕೀಟ,

ಕೀರ್ತಿಯಲ್ಲಿ ದೊಡ್ಡ ಪಟ್ಟ,

ತಳಿಶಾಸ್ತ್ರದ ಅಧ್ಯಯನದ,

ಅಭಿ಼ಷಿಕ್ತ ರಾಣಿ.

ಕೊಳೆಯುವ ಹಣ್ಣುಗಳು ನಿನ್ನ ತಾಣ,

ಹುದುಗುವ ಪಾನೀಯಕ್ಕೆ ನಿನ್ನ ಆಕರ್ಷಣೆ,

ತಳಿಶಾಸ್ತ್ರದ ಅಧ್ಯಯನದ,

ಅಭಿಷಿಕ್ತ ರಾಣಿ.

ಜೈವಿಕ ಸಂಶೋಧನೆಯಲ್ಲಿ ನಿನ್ನ ಬಳಕೆ ಅಪಾರ,

ನಾಲ್ಕು ಜೋಡಿ ವರ್ಣತಂತುಗಳ ಅಗರ,

ತಳಿಶಾಸ್ತ್ರದ ಅಧ್ಯಯನದ,

ಅಭಿಷಿಕ್ತ ರಾಣಿ.

ಈ ಕೀಟವನ್ನು ಪ್ರಥಮ ಬಾರಿಗೆ 1908ರಲ್ಲಿ ತಳಿಶಾಸ್ತ್ರದ ಅಧ್ಯಯನಕ್ಕಾಗಿ ಥಾಮಸ್‌ ಹಂಟ್‌ ಮಾರ್ಗನ್‌ (Thomas Hunt Morgan) ಎಂಬ ವಿಜ್ಞಾನಿ ಬಳಸಿಕೊಂಡರು. ಥಾಮಸ್‌ ಹಂಟ್‌ ಮಾರ್ಗನ್‌ ಅವರು ತನ್ನ ತಳಿಶಾಸ್ತ್ರ ಸಂಶೋಧನೆಗಾಗಿ ಡ್ರೊಸೊಫಿಲಾ ಮೆಲನೊಗ್ಯಾಸ್ಟರ್‌ ಅನ್ನು ಆರಿಸಿಕೊಂಡದ್ದು ಏಕೆಂದರೆ, ಈ ಹಣ್ಣಿನ ನೊಣಗಳು ಪ್ರಯೋಗಾಲಯದಲ್ಲಿ ಸಂತಾನೋತ್ಪತ್ತಿ ಮಾಡಲು ಸೂಕ್ತವಾಗಿದ್ದುವು, ಅವು ಕಡಿಮೆ ಅವಧಿಯ ಜೀವನ ಚಕ್ರವನ್ನು ಹೊಂದಿದ್ದುವು ಮತ್ತು ಪ್ರತಿ ಸಂಯೋಗಕ್ಕೆ ಅತಿ ಹೆಚ್ಚಿನ ಸಂಖ್ಯೆಯ ಸಂತತಿಯನ್ನು ಉತ್ಪಾದಿಸುತ್ತಿದ್ದುವು. ಹೆಚ್ಚುವರಿಯಾಗಿ, ಅವು ಸರಳ ಸೂಕ್ಷ್ಮದರ್ಶಕದ ಅಡಿಯಲ್ಲಿಯೂ ಸಹ ಸುಲಭವಾಗಿ ಗೋಚರಿಸುವ ವಿಶಿಷ್ಟ ಲಕ್ಷಣಗಳನ್ನು ಪ್ರದರ್ಶಿಸುತ್ತಿದ್ದುವು ಅಲ್ಲದೆ, ಸರಳವಾದ ವರ್ಣತಂತು ರಚನೆಯನ್ನು ಹೊಂದಿದ್ದುವು. ಈ ವರ್ಣತಂತುಗಳ ಅಧ್ಯಯನಕ್ಕೆ ತಗಲುವ ವೆಚ್ಚ ಬಹಳ ಕಡಿಮೆ ಈ ಎಲ್ಲಾ ಪ್ರಯೋಜನಗಳಿಂದಾಗಿ, ತಳಿಶಾಸ್ತ್ರ, ಅಂಗೀಕ ತಳಿಶಾಸ್ತ್ರ ಅಭಿವೃದ್ಧಿ ಜೀವಶಾಸ್ತ್ರದ ಕ್ಷೇತ್ರಗಳಲ್ಲಿ ಈ ಕೀಟಗಳನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಇಂದು ತಳಿಶಾಸ್ತ್ರದಲ್ಲಿ ಬಳಕೆಯಲ್ಲಿರುವ ಬಹುತೇಕ ಅನುವಂಶೀಯ ತತ್ವಗಳನ್ನು ಡ್ರಾಸೋಪಿಲಾದ ಮೇಲಿನ ಪ್ರಯೋಗಗಳಿಂದಲೇ ವಿಜ್ಞಾನಿಗಳು ಅರ್ಥಮಾಡಿಕೊಂಡಿದ್ದಾರೆ. ಅಲ್ಲಿಂದೀಚೆಗೆ, ತಳಿಶಾಸ್ತ್ರ, ಶರೀರಶಾಸ್ತ್ರ, ಸೂಕ್ಷ್ಮಜೀವಿಶಾಸ್ತ್ರ,ಮತ್ತಿತರ ಕ್ಷೇತ್ರಗಳಲ್ಲಿ ಅಧ್ಯಯನಕ್ಕಾಗಿ ಹಾಗೂ ಜೈವಿಕ ಸಂಶೋಧನೆಗಾಗಿ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ, ಈ ಕೀಟಕ್ಕೆ ʼತಳಿಶಾಸ್ತ್ರದ ಸಿಂಡ್ರೆಲಾ “ ಎಂದು ಕರೆಯಲಾಗುತ್ತದೆ.

1946ರಲ್ಲಿ ಬಾಹ್ಯಾಕಾಶಕ್ಕೆ ಉಡಾಯಿಸಲ್ಪಟ್ಟ ಮೊದಲ ಕೀಟ ಡ್ರಾಸೋಫಿಲಾ ಆಗಿತ್ತು. 2017ರಲ್ಲಿ ಡ್ರೋಸೋಫಿಲಿಸ್ಟ್ ಗಳಿಗೆ ಆರು ನೋಬಲ್ ಪ್ರಶಸ್ತಿಗಳನ್ನು ತಳಿಶಾಸ್ತ್ರದ ಮೇಲಿನ ಅಧ್ಯಯನಕ್ಕಾಗಿ ನೀಡಲಾಗಿದೆ.

ಈ ಕೀಟಗಳು ಹಳದಿ ಮಿಶ್ರಿತ ಕಂದು ಬಣ್ಣದಲ್ಲಿದ್ದು, ಕಣ್ಣುಗಳು ಕೆಂಪು ಮಿಶ್ರಿತ ಇಟ್ಟಿಗೆ ಬಣ್ಣ ಹೊಮದಿರುತ್ತವೆ. ಹೊಟ್ಟೆಯ ಮೇಲೆ ಅಡ್ಡವಾಗಿ ಕಪ್ಪುಪಟ್ಟಿಗಳನ್ನು ಹೊಂದಿವೆ. ಇವುಗಳ ದೇಹವನ್ನು ಪ್ರಮುಖವಾಗಿತಲೆ,ಎದೆಮತ್ತುಹೊಟ್ಟೆಯಭಾಗ ಎಂಬ ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ ಕಣ್ಣುಗಳು ದೃಶ್ಯ ಘಟಕಗಳಾದ ನೂರಾರು ಒಮ್ಮಟಿಡಿಯಾಗಳನ್ನು ಹೊಂದಿವೆ. ಕಣ್ಣಿನ ನಡುವೆ ಅಂಟೆನಾಗಳಿವೆ ಇವು ವಾಸನೆ ಹಾಗೂ ಗಾಳಿಯ ಕಂಪನಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ. ಮೂರು ಜೋಡಿ ಕಾಲುಗಳು ಹಾಗೂ ಒಂದು ಜೋಡಿ ರೆಕ್ಕೆಗಳನ್ನು ಹೊಂದಿವೆ. ಈ ಕೀಟಗಳು ಲೈಂಗಿಕ ದ್ವಿರೂಪತೆಯನ್ನು ಪ್ರದರ್ಶಿಸುತ್ತದೆ.

ಹೆಣ್ಣು ಕೀಟಗಳು ಸುಮಾರು 2.5 m.m ನಷ್ಟು ಉದ್ದವಾಗಿದ್ದು, ಗಂಡು ಕೀಟಗಳು ಹೆಣ್ಣು ಕೀಟಗಳಿಗಿಂತ ಚಿಕ್ಕದಾಗಿರುತ್ತವೆ. ಸೂಕ್ತ ಬೆಳವಣಿಗೆಯ ಪರಿಸ್ಥಿತಿಗಳಲ್ಲಿ ಇವುಗಳ ಜೀವಿತಾವಧಿ ಮೊಟ್ಟೆಯಿಂದ ಸಾವಿನವರೆಗೂ ಸುಮಾರು 50 ದಿನಗಳು. ಇವುಗಳ ಜೀವನ ಚಕ್ರದಲ್ಲಿ ಭ್ರೂಣ, ಲಾರ್ವ, ಪ್ಯೂಪ ಹಾಗೂ ವಯಸ್ಕ ಕೀಟ ಎಂಬ ನಾಲ್ಕುಹಂತಗಳಿವೆ, ಇವುಗಳ ಲಾರ್ವ ಸಂಪೂರ್ಣ ರೂಪಾಂತರಕ್ಕೆ ಒಳಗಾಗುತ್ತವೆ. ಹಾಗಾಗಿ,ಇವು ಹೋಲೋಮೆಟಬಾಲಸ್ (holometabolous)  ಬಗೆಯ ಕೀಟಗಳಾಗಿವೆ. 


ಇತ್ತೀಚಿನ ವರ್ಷಗಳಲ್ಲಿ, ಡ್ರೊಸೊಫಿಲಾದಲ್ಲಿ ಆನುವಂಶೀಯ ವಿಧಾನಗಳನ್ನು ಬಳಸಿಕೊಂಡು ಗ್ಲೈಕೊನ್‌ ಕಾರ್ಯಗಳ ಪರಿಣಾಮಕಾರಿ ವಿಶ್ಲೇಷಣೆ ಮಾಡಲಾಗುತ್ತಿದೆ. .ವಂಶವಾಹಿಗಳ ಕಾರ್ಯಗಳನ್ನು ಅಧ್ಯಯನ ಮಾಡಲು ಯಾದೃಚ್ಛಿಕ ನಿರ್ದೇಶಿತ ಉತ್ಪರಿವರ್ತನೆಗಳ ಮೂಲಕ ಪ್ರತ್ಯೇಕ ವಂಶವಾಹಿಗಳನ್ನು ನಿಷ್ಕ್ರಿಯಗೊಳಿಸಿ ಅಧ್ಯಯನಮಾಡಲು ಬಳಸಲಾಗುತ್ತಿದೆ. ಉತ್ಪರಿವರ್ತನೆಗಳನ್ನು ಪ್ರೇರೇಪಿಸಲು ರಾಸಾಯನಿಕಗಳನ್ನು ಬಳಸಿ ಹೊಸ ಅಂಶಗಳನ್ನು ಸಂಯೋಜಿಸಿ ರಾಸಾಯನಿಕ ಪ್ರೇರಿತ ಉತ್ಪರಿವರ್ತನೆ ಟ್ರಾನ್ಸ್ಪೋಸ್‌ ನ ಮಧ್ಯಸ್ಥಿಕೆಯ ಅಳವಡಿಕೆಯನ್ನು ಅಧ್ಯಯನ ಮಾಡಲು ಬಳಸಲಾಗುತ್ತಿದೆ .ಸಂಪೂರ್ಣ ವಂಶವಾಹಿಗಳ ಅಧ್ಯಯನ ಮಾಡಲು ಸಹ ಈ ಕೀಟಗಳನ್ನು ಬಳಸಲಾಗುತ್ತಿದೆ.

ಆರ್ ಎನ..ಎ. ಮಧ್ಯಸ್ಥಿತ ಜೀನ್‌ ಸೈಲೆನ್ಸ್ಸಿಂಗ್ ಅನ್ನು ವ್ಯಾಪಕವಾಗಿ ಸಾಧನವಾಗಿ ಬಳಸಲಾಗುತ್ತದೆ. ಔಷಧಿ ಅನ್ವೇಷಣೆ, ಜೈವಿಕಇಂಜಿನಿಯರಿಂಗ್, ಪುನರುತ್ಪಾದಕ ಜೀವಿಶಾಸ್ತ್ರ ಇವುಗಳಲ್ಲಿ ಅಧ್ಯಯನ ಮಾಡಲು ಬಳಸಿ ಇದು ರೋಮಾಂಚನಕಾರಿಯಾದ ಫಲಿತಾಂಶಗಳನ್ನು ನೀಡಿದೆ. ಹಲವು ಕ್ಷೇತ್ರಗಳ ಸಂಶೋಧನೆಯಲ್ಲಿ ಇವು ಮಾದರಿ ಜೀವಿಯಾಗಿ ಸಂಶೋಧನೆಯ ಭವಿಷ್ಯವು ಈ ಜೀವಿಗಳಿಂದ ಉಜ್ವಲವಾಗಿದೆ.



 

ಡ್ರೊಸೊಫಿಲಾವನ್ನು ಭವಿಷ್ಯದಲ್ಲಿ ರೋಗ ಮಾದರಿ ಔಷಧ ಚೇತರಿಕೆ ಮತ್ತು ವಿಷಶಾಸ್ತ್ರೀಯ (ಟಾಕ್ಸಿಕಾಲಜಿಕಲ್) ಸಂಶೋಧನೆಗೆ ಪ್ರಬಲ ಮತ್ತುವೆಚ್ಚ-ಪರಿಣಾಮಕಾರಿ ಜೀವಿಯಾಗಿನಿರಂತರಬಳಸಲಾಗುತ್ತಿದೆ. ಮಾನವನೊಂದಿಗೆ ಅದರ ವಂಶವಾಹಿಗಳ ಹೆಚ್ಚಿನ ಸಂರಕ್ಷಣೆ, CRISPR-cas9 ನಂತಹ ಸಾಧನಗಳೊಂದಿಗೆ ಆನುವಂಶೀಯ ಕುಶಲತೆ ಮತ್ತು ಅದರ ತ್ವರಿತ ಜೀವನ ಚಕ್ರದಿಂದಾಗಿ, ಹಣ್ಣಿನ ನೊಣವು ಪರಿಣಾಮಕಾರಿಯಾಗಿ ಬಳಕೆಯಲ್ಲಿದೆ. ಪ್ರಾಣಿಗಳ ಔಷಧ ತಪಾಸಣೆಗೆ ಮತ್ತು ನರಶೂಲೆ ಅಸ್ವಸ್ಥತೆಗಳಿಂದ ಕ್ಯಾನ್ಸರ್‌ ಮತ್ತು ಸಾಂಕ್ರಾಮಿಕ ರೋಗಗಳವರೆಗಿನ ಸಂಕೀರ್ಣ ಮಾನವ ಆರೋಗ್ಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಈ ಕೀಟಗಳು ಅನುವುಮಾಡಿಕೊಡುತ್ತಿವೆ.

 

 

 

 

 

 

ಜೇನ್‌ ಎಂಬ ಚಿಂಪಾಂಜಿಗಳ ಪಾಲಿನ ದೇವತೆ !!!

ಜೇನ್‌ ಎಂಬ ಚಿಂಪಾಂಜಿಗಳ ಪಾಲಿನ ದೇವತೆ !!! 

ಲೇಖಕರು :  

ರಾಮಚಂದ್ರ ಭಟ್‌ ಬಿ.ಜಿ. 

ವಿಜ್ಞಾನ ಶಿಕ್ಷಕರು


ಅದು ಅಂತಿಂಥ ಕದನವಲ್ಲ ! ಬರೋಬ್ಬರಿ ೪ ವರ್ಷಗಳ ಕಾಲ ನಡೆದ ಯುದ್ಧ!! ಅಲ್ಲಿ ಎರಡು ಚಿಂಪಾಂಜಿ ಗುಂಪುಗಳ ನಡುವೆ ಒಂದು ಸಮುದಾಯ ಸಂಪೂರ್ಣ ನಾಶವಾಗುವವರೆಗೂ ನಡೆದ ಘನಘೋರ ಕದನ!!! ಬಹುಶಃ ಮಾನವರಂತೆ, ಇವುಗಳೂ ಇತಿಹಾಸ ಬರೆಯಲು ಕಲಿತಿದ್ದರೆ ಅದೂ ದಾಖಲಾಗಬಹುದಾದ ಕದನ !!! ಇದಕ್ಕೆ ಸಾಕ್ಷಿಯಾಗಿದ್ದು ಗೊಂಬೆ ಸ್ಟ್ರೀಮ್‌ ರಾಷ್ಟ್ರೀಯ ಉದ್ಯಾನ. ಇದೇನು ಯಾವುದೋ ವಿಜ್ಞಾನದ fiction ಕಥೆಯನ್ನು ಹೇಳ ಹೊರಟಿದ್ದೇನೆ ಎಂದುಕೊಂಡಿರಾ?  ಅಂದು ಜೇನ್‌ ಅದೆಷ್ಟೇ ಹೇಳಿದರೂ ವಿಜ್ಞಾನಿಗಳೂ ನಂಬಲು ಸಿದ್ಧರಿರಲಿಲ್ಲ!!! ಜೇನ್‌ ಪದವಿಯನ್ನೇ ಪಡೆಯದ ಸಂಶೋಧಕಿ ಹಾಗಾಗಿ ಒಂದು ಬಗೆಯ ತಾತ್ಸಾರ ಜನರಲ್ಲಿತ್ತು. ಆದರೆ ಇಂತಹ ಜೇನ್‌ರ ಸಾಧನೆ ಮಾನವಕುಲವೇ ಬೆರಗುಗಣ್ಣುಗಳಿಂದ ನೋಡುವಂತದ್ದು.

ಚಿಂಪಾಂಜಿಗಳ ಸಮುದಾಯಗಳೂ ಮಾನವರಂತೆ ಕೆಲವೊಮ್ಮೆ ಹಿಂಸಾತ್ಮಕ ಹಾಗೂ ದೀರ್ಘಕಾಲದ ಸಂಘರ್ಷಗಳಲ್ಲಿ ತೊಡಗುತ್ತವೆ. ಇದರಲ್ಲೇ ಅತ್ಯಂತ ಪ್ರಸಿದ್ಧವಾದ ಉದಾಹರಣೆ ಗೊಂಬೆ ಚಿಂಪಾಂಜಿ ಯುದ್ಧ (ನೆನಪಿರಲಿ -ಗೊಂಬೆ ಎನ್ನುವುದೊಂದು ಸ್ಥಳ!!), ಇದು 1974 ರಿಂದ 1978ರ ತನಕ ಟಾಂಜಾನಿಯಾ(Gombe Stream National Park, Tanzania)ದಲ್ಲಿ ನಡೆದ ನಾಲ್ಕು ವರ್ಷದ ಭೂಪ್ರದೇಶ ಸಂಬಂಧಿ ಸಂಘರ್ಷವಾಗಿತ್ತು. ಈ ಸಂಘರ್ಷದಲ್ಲಿ ಒಂದು ಸಮುದಾಯವೇ ಸಂಪೂರ್ಣವಾಗಿ ನಾಶವಾಯಿತು ಎಂದರೆ ನೀವು ನಂಬಲೇ ಬೇಕು. ಇಂತಹ “ಯುದ್ಧಗಳು” ಸಾಮಾನ್ಯವಾಗಿ ಗಂಡು ಚಿಂಪಾಂಜಿಗಳ ಮಾರಕ ಆಕ್ರಮಣವನ್ನು ಒಳಗೊಂಡಿರುತ್ತವೆ. ಅಧಿಕಾರ, ಸಂಪನ್ಮೂಲಗಳು ಮತ್ತು ಪ್ರದೇಶದ ಸ್ವಾಮಿತ್ವಕ್ಕಾಗಿ ನಡೆಯುವ ಈ ಹೋರಾಟಗಳಲ್ಲಿ, ತಮ್ಮದೇ ಗುಂಪಿನ ಸದಸ್ಯರು ಹಾಗು ಬೇರೆ ಗುಂಪಿನ ಸದಸ್ಯರ ಹತ್ಯೆಗಳು ಸಂಭವಿಸುತ್ತವೆ. ಇಂತಹ ಅಪೂರ್ವವೆನಿಸಿದ ಚಿಂಪಾಂಜಿಗಳ ಯುದ್ಧದ ಸಂಶೋಧಕಿಯೇ 2025ರ ಅಕ್ಟೋಬರ್ 1 ರಂದು ಕ್ಯಾಲಿಫೋರ್ನಿಯಾದಲ್ಲಿ ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದ ಬ್ರಿಟಿಷ್ ಪ್ರೈಮ್ಯಾಟಾಲಜಿಸ್ಟ್ ಡೇಮ್ ಜೇನ್ ಗುಡಾಲ್ (19342025). ಇದನ್ನು ಮೊದಲು ಕೇಳುತ್ತಿದ್ದಂತೆ ನಮ್ಮ ನೆಲದ ವಿಜ್ಞಾನಿ ಕೆ.ಎನ್‌ ಗಣೇಶಯ್ಯನವರು ಸಸ್ಯಗಳಲ್ಲೂ ದಾಯಾದಿ ಮತ್ಸರ ಅದರ ಫಲಶೃತಿಯಾಗಿ ತಮ್ಮ ಜೊತೆಗೆ ಹುಟ್ಟಿದವರನ್ನೇ ನಾಶಗೈಯಲೆತ್ನಿಸುವುದನ್ನು ಸಂಶೋಧಿಸಿರುವುದು ನೆನಪಾಯಿತು. ಕುತೂಹಲ ಕೆರಳಿದರೆ “ಸಸ್ಯ ಸಗ್ಗ” ವನ್ನು ಓದಿ.  ಹಾಗೆಯೇ ನನ್ನ ಒರಾಂಗುಟಾನ್‌ ಲೇಖನವನ್ನೂ ಓದಬಹುದು.

ಡಾ. ಬೆನ್ ಗಾರೋಡ್‌ರಂತಹ ವಿಜ್ಞಾನಿಗಳು ಹೇಳುವಂತೆ, "ಐನ್‌ಸ್ಟೈನ್ ಭೌತಶಾಸ್ತ್ರಕ್ಕೆ ಏನು ಮಾಡಿದರೋ, ಜೇನ್ ಜೀವಶಾಸ್ತ್ರಕ್ಕೆ ಅದನ್ನೇ ಮಾಡಿದಳು!" ಇದೊಂದು ವಾಕ್ಯ ಆಕೆಯ ಸಾಧನೆಯನ್ನು ಸಾರಿ ಹೇಳುತ್ತದೆ.  ಮ್ಮೆ, ಜೇನ್ ಒಂದು ವೈದ್ಯಕೀಯ ಸಂಶೋಧನಾ ಲ್ಯಾಬ್‌ಗೆ ಭೇಟಿ ನೀಡಿದಾಗ, ಒಂಟಿಯಾಗಿ 15 ವರ್ಷಗಳ ಕಾಲ ಪಂಜರದಲ್ಲಿ ಬಂಧಿಯಾಗಿ ಸರಿಯಾದ ಆಹಾರವಿಲ್ಲದೆ ಮೂಳೆ ಚಕ್ಕಳವಾಗಿದ್ದ ಚಿಂಪಾಂಜಿ ಜೋ-ಜೋ ತನ್ನ ಕಣ್ಣೀರನ್ನು ಒರೆಸಿತಂತೆ! "ಇದು ಕೇವಲ ವಾನರನಲ್ಲ, ದೂ ಒಂದು ಮಿಡಿವ ಹೃದಯ!" ಎಂದು ಜೇನ್ ತೋರಿಸಿದರು.

ಜೇನ್‌ರ ಕತೆ ಆರಂಭವಾಗುವುದು ಇಂಗ್ಲೆಂಡ್‌ನ ನಗರ ಲಂಡನ್‌ನಲ್ಲಿ. ತಂದೆ ವ್ಯಾಪಾರೋದ್ಯಮಿ, ತಾಯಿ ಲೇಖಕಿ. ಕೇವಲ ಐದು ವರ್ಷದವಳಿದ್ದಾಗ, ಕೋಳಿಗೂಡಿನಲ್ಲಿ ಗಂಟೆಗಟ್ಟಲೆ ಕುಳಿತು ಕೋಳಿಗಳು ಮೊಟ್ಟೆ ಇಡುವುದನ್ನು ಗಮನಿಸುತ್ತಿದ್ದಳು! “ಇದೆಂತಹ ಕುತೂಹಲ!” ಎಂದು ತಾಯಿ ಆಶ್ಚರ್ಯಪಟ್ಟರೂ, ಜೇನ್‌ರ ಕನಸು ದೊಡ್ಡದಿತ್ತು.  ಜೇನ್‌ ಪುಟ್ಟ ಬಾಲಕಿಯಾಗಿದ್ದಾಗ, ತಂದೆ ಮಾರ್ಟಿಮರ್‌ ಗುಡಾಲ್‌ಗೆ ಅದೇ ಸ್ಫುರಣೆಯಾಯ್ತೋ ಗೊತ್ತಿಲ್ಲ . ಆತ ಮಗಳಿಗೆ ಟೆಡ್ಡಿ ಬೇರ್‌ ಗೊಂಬೆ ತಂದುಕೊಡುವ ಬದಲು ಜುಬಿಲಿ ಎಂಬ ಚಿಂಪಾಂಜಿ ಆಟಿಕೆಯನ್ನು ಕೊಟ್ಟರು!. ಇದು ಆಕೆಗೆ ಪ್ರಾಣಿಗಳ ಮೇಲೆ ಪ್ರೀತಿಯನ್ನು ಹುಟ್ಟುಹಾಕಿತು ಎಂದು ಅವರು ಹೇಳುತ್ತಾ, "ನನ್ನ ತಾಯಿಯ ಸ್ನೇಹಿತರು ಈ ಆಟಿಕೆಯನ್ನು ನೋಡಿ ಗಾಬರಿಗೊಂಡರು, ಅದು ಪುಟ್ಟಬಾಲೆಯಾದ ನನ್ನನ್ನು ಹೆದರಿಸುತ್ತದೆ ಮತ್ತು ನನಗೆ ದುಃಸ್ವಪ್ನಗಳನ್ನು ಉಂಟುಮಾಡುತ್ತದೆ ಎಂದು ಭಾವಿಸಿದರು" ಎಂದು ಹೇಳಿದರು. 2000ನೇ ಇಸವಿಯವರೆಗೂ ಜುಬಿಲಿ ಜೇನ್‌ರವರ ಜೊತೆಯಲ್ಲೇ ಇತ್ತು.

ಬೆಳೆಯುತ್ತಾ ಟಾರ್ಜನ್ ಆಫ್ ದಿ ಏಪ್ಸ್ ಮತ್ತು ಡಾಕ್ಟರ್ ಡೂಲಿಟಲ್ ಪುಸ್ತಕಗಳು ಎಳೆಯ ಜೇನ್‌ಳ ಕಲ್ಪನೆಗೆ ರೆಕ್ಕೆ ಕಟ್ಟಿದವು. “ನಾನು ಆಫ್ರಿಕಾದ ಕಾಡಿನಲ್ಲಿ ಪ್ರಾಣಿಗಳೊಂದಿಗೆ ಬದುಕುವೆ!” ಎಂದು ಆಕೆ ಕನಸು ಕಂಡಳು. ತಮಾಷೆಯಾಗಿ ಅವಳು ಹೇಳುತ್ತಿದ್ದಳು, “ಟಾರ್ಜನ್ ತಪ್ಪು ಜೇನ್‌ನ್ನು ಮದುವೆಯಾದ! ನಾನೇ ಆತನಿಗೆ ತಕ್ಕ ಜೇನ್!” ಜೇನ್‌ಳ ಪ್ರಾಣಿಗಳ ಮೇಲಿನ ಆಸಕ್ತಿ ಗಮನಿಸಿದ ತಾಯಿ ಪ್ರೋತ್ಸಾಹಿಸಿದರು. “ನಿನಗೆ ನಿಜವಾಗಿಯೂ ಆಸಕ್ತಿ ಇದ್ದರೆ, ಶ್ರಮಪಡು, ಎಂದಿಗೂ ಕೈಬಿಡಬೇಡ!”

1957ರಲ್ಲಿ, ಕೀನ್ಯಾದಲ್ಲಿ ಪುರಾತತ್ವಶಾಸ್ತ್ರಜ್ಞ ಡಾ. ಲೂಯಿಸ್ ಲೀಕಿಯವರ ಭೇಟಿ ಬದುಕಿಗೆ ತಿರುವು ನೀಡಿತು. ಯಾದಾಗ, ಜೇನ್‌ರ ಕನಸು ರೂಪ ಪಡೆಯಿತು. ಲೀಕಿ, “ಮಾನವನ ಮೂಲವನ್ನು ತಿಳಿಯಲು ಚಿಂಪಾಂಜಿಗಳ ಅಧ್ಯಯನ ಅಗತ್ಯ” ಎಂದು ನಂಬಿದವರು, ಜೇನ್‌ಗೆ ತಾಂಜಾನಿಯಾದ ಗೊಂಬೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಶೋಧನೆಗೆ ಅವಕಾಶ ನೀಡಿದರು. ಅಷ್ಟೇ ಅಲ್ಲದೇ ಲೀಕಿ ಹಣಕಾಸಿನ ವ್ಯವಸ್ಥೆಯನ್ನೂ ಮಾಡಿದರು ಮತ್ತು 1962 ರಲ್ಲಿ ಅವರು ಯಾವುದೇ ಪದವಿ ಪಡೆಯದ ಗುಡಾಲ್ ಅವರನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಕಳುಹಿಸಿದರು. ಪದವಿ ಪಡೆಯದೆ ಕೇಂಬ್ರಿಡ್ಜ್‌ನಲ್ಲಿ ಪಿಎಚ್‌ಡಿ ಅಧ್ಯಯನ ಮಾಡಲು ಅವಕಾಶ ಪಡೆದ ಎಂಟನೇ ವ್ಯಕ್ತಿ ಜೇನ್‌ !!  ಇದಕ್ಕಾಗಿ ಕೇಂಬ್ರಿಡ್ಜ್‌ನ ನ್ಯೂನ್‌ಹ್ಯಾಮ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಗೊಂಬೆ ರಿಸರ್ವ್‌ನಲ್ಲಿ, ತಮ್ಮ ಮೊದಲ ಐದು ವರ್ಷಗಳ ಅಧ್ಯಯನವನ್ನು ಚಿಂಪಾಂಜಿಗಳ ನಡವಳಿಕೆಯ (Behaviour of free-living chimpanzees) ಕುರಿತು ರಾಬರ್ಟ್ ಹಿಂಡೆ ಅವರ ಮಾರ್ಗದರ್ಶನದಲ್ಲಿ  ಪೂರ್ಣಗೊಳಿಸಿ PhD ಪಡೆದರು.

1960 ರಲ್ಲಿ ಟಾಂಜಾನಿಯಾದ ಗೊಂಬೆ ಸ್ಟ್ರೀಮ್ ರಾಷ್ಟ್ರೀಯ ಉದ್ಯಾನವನದಲ್ಲಿ ಕಸಾಕೆಲಾ ಚಿಂಪಾಂಜಿ ಸಮುದಾಯದ ಬಗ್ಗೆ ಚಿಂಪಾಂಜಿಗಳ ಸಾಮಾಜಿಕ ಮತ್ತು ಕುಟುಂಬ ಜೀವನವನ್ನು ಅವರು ಅಧ್ಯಯನ ಮಾಡಿದರು. ಮಾನವರಷ್ಟೇ ಅಲ್ಲದೇ ಚಿಂಪಾಂಜಿಗಳೂ ಸಂತೋಷ ಮತ್ತು ದುಃಖದಂತಹ ತರ್ಕಬದ್ಧ ಚಿಂತನೆ, ಭಾವನೆಗಳನ್ನು ವ್ಯಕ್ತಪಡಿಸಬಲ್ಲವು ಎಂಬುದನ್ನು ಡಾ|| ಜೇನ್ ಕಂಡುಕೊಂಡರು. ಪ್ಪುಗೆಗಳು, ಚುಂಬನಗಳು, ಬೆನ್ನು ತಟ್ಟುವುದು ಮತ್ತು ಕಚಗುಳಿ ಇಡುವುದು ಮುಂತಾದ ನಡವಳಿಕೆಗಳನ್ನು ಸಹ ಅವರು ಗಮನಿಸಿದರು. ಇವುಗಳನ್ನು ನಾವು "ಮಾನವ" ಕ್ರಿಯೆಗಳು ಎಂದು ಪರಿಗಣಿಸುತ್ತೇವೆ. ಈ ಸಂಕೇತಗಳು "ಕುಟುಂಬ ಮತ್ತು ಸಮುದಾಯದೊಳಗಿನ ಸದಸ್ಯರ ನಡುವೆ ಬೆಳೆಯುವ ನಿಕಟ ಬಂಧ ಜೀವನಪೂರ್ತಿ ಇರುತ್ತವೆ ಎನ್ನುವುದರ ಸಾಕ್ಷಿಯಾಗಿವೆ ಎನ್ನುವುದನ್ನು ಅವರು ಕಂಡುಕೊಂಡರು.

ಗೆದ್ದಲುಗಳ ದಿಬ್ಬದಲ್ಲಿ ಚಿಂಪಾಂಜಿಯೊಂದು ಪದೇ ಪದೇ ಹುಲ್ಲಿನ ಕಡ್ಡಿಗಳನ್ನು ತೂರಿಸಿ ಅದರ ಮೇಲೆ ಹತ್ತುವ ಗೆದ್ದಲುಗಳನ್ನು ಹಿಡಿದು ತಿನ್ನುತ್ತಿರುವುದನ್ನು ಅವರು ಗಮನಿಸಿದರು. ಗಾಳಹಾಕಿ ಮೀನು ಹಿಡಿದಂತೆ ಚಿಂಪಾಂಜಿ ಗೆದ್ದಲು ಹಿಡಿಯುತ್ತಿತ್ತು. ಕೆಲವೊಮ್ಮೆ ಚಿಂಪಾಂಜಿಗಳು ಮರಗಳಿಂದ ಕೊಂಬೆಗಳನ್ನು ತೆಗೆದುಕೊಂಡು ಎಲೆಗಳನ್ನು ತೆಗೆದು ಕೊಂಬೆಯನ್ನು ಹೆಚ್ಚು ಪರಿಣಾಮಕಾರಿಯಾಉಪಕರಣವಾಗಿಸುತ್ತಿತ್ತು. ನಾವು ಬಹಳ ಹಿಂದೆಯೇ "ಉಪಕರಣ ತಯಾರಕ ಮನುಷ್ಯ" ಎಂದು ಉಳಿದ ಪ್ರಾಣಿ ಸಾಮ್ರಾಜ್ಯದಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದೇವೆ. ಜೇನ್‌ರವರ ಕ್ರಾಂತಿಕಾರಿ ಸಂಶೋಧನೆಗಳು ಮಾನವರು ಮಾತ್ರ ಉಪಕರಣಗಳನ್ನು ನಿರ್ಮಿಸಿ ಬಳಸಬಲ್ಲರು ಮತ್ತು ಚಿಂಪಾಂಜಿಗಳು ಸಸ್ಯಾಹಾರಿಗಳು ಎನ್ನುವ ನಂಬಿಕೆ ಸುಳ್ಳಾಗಿಸಿತು. ಈ ಸಂಶೋಧನೆಗಳಿಗೆ ಪ್ರತಿಕ್ರಿಯೆಯಾಗಿ, ಲೂಯಿಸ್ ಲೀಕಿ, "ನಾವು ಈಗ ಮನುಷ್ಯನನ್ನು ಮತ್ತು ಉಪಕರಣವನ್ನು ಮರು ವ್ಯಾಖ್ಯಾನಿಸಬೇಕು ಅಥವಾ ಚಿಂಪಾಂಜಿಗಳನ್ನು ಮನುಷ್ಯ ಎಂದು ಸ್ವೀಕರಿಸಬೇಕು!" ಎಂದರು!!



ಚಿಂಪಾಂಜಿಗಳು ಸಾತ್ವಿಕ ಪ್ರಾಣಿಗಳು ಎಂದುಕೊಂಡಿದ್ದ ಜೇನ್‌ರವರಿಗೆ ಚಿಂಪಾಂಜಿಗಳು ತಮ್ಮ ಕ್ರೂರತೆಯ ಕರಾಳ ಪ್ರದರ್ಶನ ನೀಡಿ ಆಘಾತ ನೀಡಿದವು!!. ಚಿಂಪಾಂಜಿ ಗುಂಪುಗಳಲ್ಲಿಯೂ ಮಾನವರಲ್ಲಿದ್ದಂತೆ ಆಕ್ರಮಣಶೀಲತೆ ಮತ್ತು ಹಿಂಸಾಚಾರದ ಪ್ರವೃತ್ತಿಗಳಿದ್ದು, ಕೆಲವು ಪ್ರಬಲ ಹೆಣ್ಣು ಚಿಂಪಾಂಜಿಗಳು ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಗುಂಪಿನ ಇತರ ಹೆಣ್ಣು ಚಿಂಪಾಂಜಿಗಳ ಮರಿಗಳನ್ನು ಉದ್ದೇಶಪೂರ್ವಕವಾಗಿ ಕೊಲ್ಲುವುದನ್ನು ಅವರು ಗಮನಿಸಿದರು. ಕೆಲವೊಮ್ಮೆ ನರಭಕ್ಷಕರಂತೆ, ಭಕ್ಷಿಸುವ ಕ್ರೂರ ಮಟ್ಟಕ್ಕೂ ಹೋಗುತ್ತಿದ್ದವು. 

ಗೊಂಬೆ ಸ್ಟ್ರೀಮ್‌ನ ಚಿಂಪಾಂಜಿಗಳು ಕೊಲೊಬಸ್ ಮಂಗಗಳಂತಹ ಸಣ್ಣ ಪ್ರೈಮೇಟ್‌ಗಳನ್ನು ವ್ಯವಸ್ಥಿತವಾಗಿ ಬೇಟೆಯಾಡಿ ತಿನ್ನುತ್ತವೆ ಎನ್ನುವುದನ್ನು ಅವರು ಕಂಡುಹಿಡಿದರು. ಬೇಟೆಯಾಡುವ ಗುಂಪು, ಕೊಲೊಬಸ್ ಮಂಗವನ್ನು ಪ್ರತ್ಯೇಕಿಸಿ ಅದರ ಎಲ್ಲಾ ಸಂಭಾವ್ಯ ದಾರಿಗಳನ್ನು ತಡೆಯುತ್ತವೆ. ನಂತರ ಒಂದು ಚಿಂಪಾಂಜಿ ಮರದ ಮೇಲಕ್ಕೆತ್ತಿ ಕೊಲೊಬಸ್ ಮಂಗವನ್ನು ಸೆರೆಹಿಡಿದು ಬಲಿಹಾಕುತ್ತವೆ. ನಂತರ ತಂಡದ ಉಳಿದ ಸದಸ್ಯರು ತಮ್ಮ ತಮ್ಮ ಪಾಲನ್ನು ತಮ್ಮ ಯೋಗ್ಯತೆಯ ಅನುಸಾರ ಪಡೆದುಕೊಳ್ಳುತ್ತವೆ. ಇದು ಚಿಂಪಾಂಜಿಗಳ ಆಹಾರ ಮತ್ತು ನಡವಳಿಕೆಗೆ ಸಂಬಂಧಿಸಿದಂತೆ ಕ್ರಾಂತಿಕಾರಕ ವೈಜ್ಞಾನಿಕ ಸಂಶೋಧನೆ ಎನಿಸಿದೆ.


ಇತರ ಸಂಶೋಧಕರಿ
ಗಿಂತ ಜೇನ್‌ ಚಿಂಪಾಂಜಿಗಳೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳಲು ಮಾನವರಿಗೆ ಹೆಸರಿಡುವಂತೆ ಅವುಗಳಿಗೆ ನಾಮಕರಣ ಮಾಡುತ್ತಿದ್ದರು.  ಅವರಲ್ಲಿ ಕೆಲವು ಹೆಸರುಗಳು ಹೇಗಿವೆ. ಬೂದು ಗಲ್ಲದ ಗಂಡು ಡೇವಿಡ್ ಗ್ರೇಬಿಯರ್ಡ್ ಜೇನ್‌ರ ಗಮನ ಸೆಳೆದ ಮೊದಲಿಗ. ಗುಂಪಿನ ನಾಯಕನಾಗಿದ್ದ ಆತನ ಸ್ನೇಹಿತ ಗೋಲಿಯಾತ್, ಈತ ಭಾರೀ ಧೈರ್ಯಶಾಲಿ ಮತ್ತು ಬಲಶಾಲಿ. ತನ್ನ ದಿಟ್ಟ ಸ್ವಭಾವಕ್ಕಾಗಿ ಹೆಸರಿಡಲಾಯಿತು. ತನ್ನ ಕುತಂತ್ರ ಮತ್ತು ಸಮಯಸಾಧಕತನದಿಂದ ಗೋಲಿಯಾತ್‌ನಿಂದ ನಾಯಕತ್ವ ಕಿತ್ತುಕೊಂಡ ಮೈಕ್, ಬಲಿಷ್ಟ ಹಾಗೂ ಭಯಹುಟ್ಟಿಸುವ ರಾಕ್ಷಸ ರೂಪಿ - ಹಂಫ್ರಿ, ಯಾವುದೇ ಯುವ ಚಿಂಪಾಂಜಿಗಳ ಅಥವಾ ಮಾನವರಿಗೆ "ಅತ್ತೆ" ಎಂದು ಕರೆಸಿಕೊಂಡು ಸಂತೋಷಪಡುವ ಬೃಹತ್‌ ದೇಹಿ ಬಂಜೆ ಹೆಣ್ಣು ಗಿಗಿ!!! ಮಿಸ್ಟರ್‌ ಮೆಕ್‌ಗ್ರೆಗರ್ ಎಂಬ ಜಗಳಗಂಟ ಮುದುಕ, ಉಬ್ಬಿರುವ ಮೂಗು ಮತ್ತು ಹರಿದ ಕಿವಿಗಳನ್ನು ಹೊಂದಿರುವ ತಾಯಿಯಂತಹ, ಗುಂಪಿನಲ್ಲಿ ಉನ್ನತ ಶ್ರೇಣಿಯ ಹೆಣ್ಣು - ಫ್ಲೋ ಮತ್ತು ಆಕೆಯರಿಗಳಾದ; ಫಿಗನ್, ಫ್ಯಾಬೆನ್, ಫ್ರಾಯ್ಡ್, ಫಿಫಿ ಮತ್ತು ಫ್ಲಿಂಟ್ರವರು. ಫ್ರೋಡೊ- ಫಿಫಿಯ ಎರಡನೇ ಮರಿ. ಈತ ಶೀಘ್ರ ಕೋಪಿ. ಡಾ. ಜೇನ್‌ ಸೇರಿದಂತೆ ಮನುಷ್ಯರ ಮೇಲೂ ದಾಳಿ ಮಾಡಿದ ಆಕ್ರಮಣಕಾರಿ ಗಂಡು. ಡಾ. ಜೇನ್ ಕೇವಲ ಚಿಂಪಾಂಜಿಗಳನ್ನು ಅಧ್ಯಯನ ಮಾಡಲಿಲ್ಲ; “ಪ್ರಾಣಿಗಳಿಗೆ ಭಾವನೆಗಳಿಲ್ಲ, ಸಂಸ್ಕೃತಿಯಿಲ್ಲ” ಎಂಬ ಕಿರಿದಾದ ಚಿಂತನೆಯನ್ನು ಒಡೆದು, ಚಿಂಪಾಂಜಿಗಳಿಗೆ ದಯೆ, ಪ್ರೀತಿ, ಮತ್ತು ಸಮುದಾಯದ ಬದುಕಿದೆ ಎಂದು ತೋರಿಸಿದರು.

1986ರ ಒಂದು ಸಮ್ಮೇಳನದಲ್ಲಿ ಚಿಂಪಾಂಜಿಗಳ ಜನಸಂಖ್ಯೆ  20 ಲಕ್ಷದಿಂದ ಕೇವಲ ಎರಡು ಲಕ್ಷಕ್ಕೆ ಕುಸಿದಿರುವುದು ತಿಳಿದು ಜೇನ್ ದಿಗ್ಭ್ರಮೆಗೊಂಡರು.  ಕಾಡುಗಳು ಕಾಣೆಯಾಗುತ್ತಿದ್ದವು, ಮನುಷ್ಯರು ಚಿಂಪಾಂಜಿಗಳ ಆವಾಸಸ್ಥಾನವನ್ನು ಒತ್ತುವರಿಮಾಡಿಕೊಳ್ಳುತ್ತಿದ್ದರು, ಮತ್ತು ಮರಿಗಳಿಗಾಗಿ ತಾಯಿಗಳನ್ನು ಕೊಲ್ಲಲಾಗುತ್ತಿತ್ತು. “ನಾನು ಕೇವಲ ಗೊಂಬೆಯ ಕಾಡಿನಲ್ಲಿ ಕುಳಿತು ಇದನ್ನು ನೋಡಲಾರೆ. ಈ ಪ್ರಾಣಿಗಳ ಧ್ವನಿಯಾಗಬೇಕು!” ಎಂದು ಜೇನ್ ನಿರ್ಧರಿಸಿದರು.

ಆಕೆ ವಿಜ್ಞಾನಿಯಿಂದ ಕಾರ್ಯಕರ್ತೆಯಾದರು. 1977ರಲ್ಲಿ ಸ್ಥಾಪಿಸಿದ ಜೇನ್ ಗೂಡಾಲ್ ಇನ್‌ಸ್ಟಿಟ್ಯೂಟ್ (JGI) ವನ್ಯಜೀವಿ ಸಂರಕ್ಷಣೆ, ಮಾನವ ಕಲ್ಯಾಣ, ಮತ್ತು ಪರಿಸರ ರಕ್ಷಣೆಗೆ ಒಂದು ದಿಕ್ಸೂಚಿಯಾಯಿತು. 1991ರಲ್ಲಿ ಆರಂಭವಾದ ರೂಟ್ಸ್ ಆಂಡ್ ಶೂಟ್ಸ್ ಕಾರ್ಯಕ್ರಮವು ಯುವಕರಿಗೆ ಪರಿಸರ ಕಾಳಜಿಯ ಬೀಜ ಬಿತ್ತಿತು. ಇಂದು, 100ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಯುವಕರು ಈ ಚಳವಳಿಯ ಭಾಗವಾಗಿದ್ದಾರೆ. ಇದಕ್ಕಾಗಿ ಕೊನೊಕೊದಂತಹ  ವ್ಯಾಪಾರಿ ಸಂಸ್ಥೆಗಳ ಮನವೊಲಿಸಿ ಪರಿಸರ ರಕ್ಷಣೆಗೆ ಟೊಂಕಕಟ್ಟಿ ನಿಂತರು. ಜೇನ್‌ರ ತರ್ಕ ಸರಳವಾಗಿತ್ತು. “ಬದಲಾವಣೆ ಬೇಕಾದರೆ, ಕೆಟ್ಟವರನ್ನೇ ಒಳ್ಳೆಯ ಕಾರ್ಯಕ್ಕೆ ಒಡಗೂಡಿಸಬೇಕು!” ಚಿಂಪಾಂಜಿಗಳನ್ನು ಏರ್‌ಲಿಫ್ಟ್ ಮಾಡಿ ಸುರಕ್ಷಿತ ಪ್ರದೇಶಕ್ಕೆ ಸಾಗಿಸಲಾಯಿತು.  

Goodall in 2009 with Hungarian Roots & Shoots group members

ಸ್ಥಳೀಯ ಸಮುದಾಯಗಳಿಗೆ ಶಿಕ್ಷಣ, ಆರೋಗ್ಯ, ಮತ್ತು ಸುಸ್ಥಿರ ಜೀವನೋಪಾಯದ ಮೂಲಕ, ಜೇನ್ ಕಾಡುಗಳನ್ನು ರಕ್ಷಿಸಿದರು. ಉಪಗ್ರಹ ಚಿತ್ರಗಳನ್ನು ಬಳಸಿ, ಗ್ರಾಮಸ್ಥರು ಕಾಡಿನ ರಕ್ಷಣೆಗೆ ಸ್ವಯಂಸೇವಕರಾದರು. “ಕಾಡು ರಕ್ಷಣೆಯಿಂದ ನಮ್ಮ ಭವಿಷ್ಯವೂ ಉಳಿಯುತ್ತದೆ!” ಎಂದು ಗ್ರಾಮಸ್ಥರು ಒಪ್ಪಿಕೊಂಡರು. ಈ ಕಾರ್ಯಕ್ರಮವು ಇತರ ಸಂಸ್ಥೆಗಳಿಗೂ ಮಾದರಿಯಾಯಿತು.

ಜೇನ್‌ ಹಲವಾರು ಸಂಶೋಧನಾ ಕೃತಿಗಳನ್ನು ಬರೆದಿದ್ದಾರೆ. ಮಕ್ಕಳಿಗಾಗಿಯೂ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.  ಹಾಗೆಯೇ ಜೇನ್‌ರ ಸಾಧನೆಯನ್ನು ಕುರಿತಂತೆ ಅನೇಕ ೪೦ಕ್ಕೂ ಹೆಚ್ಚು ಸಿನಿಮಾಗಳಾಗಿವೆ!!! ಅನೇಕ ದೇಶ ವಿದೇಶಗಳ ಪ್ರತಿಷ್ಟಿತ ಪ್ರಶಸ್ತಿ, ಪುರಸ್ಕಾರಗಳನ್ನು ಗಳಿಸಿದ ಜೇನ್‌ ಮಹಾನ್‌ ಮಾನವತಾವಾದಿ ದಿಟ್ಟ ಹೆಣ್ಣು ಮಗಳು. ೫೦ಕ್ಕೂ ಹೆಚ್ಚು ವರ್ಷಗಳ ಕಾಲ ಚಿಂಪಾಂಜಿಗಳ ಪಾಲಿನ ದೇವತೆಯಾಗಿ, ಸಂಶೋಧನೆಗಾಗಿ ತನ್ನ ಜೀವನವನ್ನು ಮುಡಿಪಿಟ್ಟ ಮಾಹಾಮಾತೆ ಡಾ. ಜೇನ್‌ ಭಾಷಣಗಳಿಗಾಗಿ ಅಮೇರಿಕಾ ಪ್ರವಾಸದಲ್ಲಿದ್ದಾಗ ಕೊನೆಯಸಿರೆಳೆದರು. ೯೧ ರ ಹರೆಯದಲ್ಲೂ ಯುವಕರು ನಾಚುವಂತೆ ಕಾರ್ಯ ನಿರ್ವಹಿಸಿ, ಯುವ ಪೀಳಿಗೆಗೆ ನಿಜವಾದ ರೋಲ್‌ ಮಾಡೆಲ್‌ ಆಗಿದ್ದಾರೆ. ಅವರು ತೋರಿದ ದಾರಿಯಲ್ಲಿ ನಡೆಯುವುದು ನಾವು ಅವರಿಗೆ ನೀಡಬಹುದಾದ ಅತಿ ದೊಡ್ಡ ಗೌರವವೇ ಸರಿ.

ಚಿಕಾಗೋದ ಫೀಲ್ಡ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಹೊರಗೆ ಜೇನ್ ಗುಡಾಲ್ ಮತ್ತು ಡೇವಿಡ್ ಗ್ರೇಬಿಯರ್ಡ್ ಅವರ ಶಿಲ್ಪ.

ಇಲ್ಕೇಳಿ ! ಇದು ಉಪ್ಪಿನ ವಿಷಯ !!!


ಇಲ್ಕೇಳಿ ! ಇದು ಉಪ್ಪಿನ ವಿಷಯ !!!

ಕೆ. ಟಿ. ಶಿವಕುಮಾರ್‌ ‌

ವಿಜ್ಞಾನ ಶಿಕ್ಷಕರು




ಉಪ್ಪು ಹೇಗೆ ರುಚಿ ನೀಡುತ್ತದೆ ? ಉಪ್ಪು ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಏಕೆ ?

ನಮ್ಮ ಅಡುಗೆಮನೆಯಲ್ಲಿ ಸದ್ದಿಲ್ಲದೆ ಬಂದು ಕುಳಿತುಕೊಳ್ಳುವ ಒಂದು ವಸ್ತುವಿದ್ದರೆ ಮತ್ತು ನಮ್ಮ ರುಚಿ ಮೊಗ್ಗುಗಳನ್ನು ರಾಜನಂತೆ ಆಳುತ್ತಿದ್ದರೆ, ಅದು ಉಪ್ಪು. ಅದರ ಒಂದು ಸಣ್ಣ ಸೇರ್ಪಡೆಯು, ಸಪ್ಪೆಯಾಗಿರುವ ತಿನಿಸನ್ನು ರುಚಿಕರವಾಗಿ, ಕಹಿಯನ್ನು ಸಮತೋಲಿತ ರುಚಿಯಾಗಿ ಮತ್ತು ಸಿಹಿಯನ್ನು ಸ್ವರ್ಗೀಯ ರುಚಿಯನ್ನಾಗಿ ಪರಿವರ್ತಿಸಬಹುದು. ಆದರೆ ನೀವು ಎಂದಾದರೂ ಊಟದ ಮಧ್ಯ- ಉಪ್ಪಿನಕಾಯಿಯನ್ನ ತಿನ್ನುವುದನ್ನು ನಿಲ್ಲಿಸಿದ್ದೀರಾ ಮತ್ತು ಆಶ್ಚರ್ಯಚಕಿತರಾಗಿದ್ದೀರಾ: ಉಪ್ಪಿಗೆ ಅದರ ರುಚಿಯನ್ನು ನಿಜವಾಗಿಯೂ ನೀಡುವುದು ಯಾವುದು?

"ಉಪ್ಪು" ಅದರ ಹಿಂದಿನ ವಿಜ್ಞಾನ

ಉಪ್ಪು, ಹೇಳಬೇಕೆಂದರೆ, ಕೇವಲ ಸೋಡಿಯಂ ಕ್ಲೋರೈಡ್ (NaCl) ಎನ್ನುವ ಅಯಾನಿಕ್‌ ಸಂಯುಕ್ತ ಆಗಿದೆ. ಇದು ನಮ್ಮ ನಾಲಿಗೆಯ ಮೇಲೆ ಇಳಿದಾಗ, ಅದು ಸೋಡಿಯಂ (Na) ಮತ್ತು ಕ್ಲೋರೈಡ್ (Cl) ಅಯಾನುಗಳಾಗಿ ವಿಯೋಜನೆಗೊಳ್ಳುತ್ತದೆ.

  •  ಉಪ್ಪಿನ ರುಚಿಯ ನಿಜವಾದ ನಾಯಕ ಸೋಡಿಯಂ ಅಯಾನ್. ಇದು ನಮ್ಮ ರಸಾಂಕುರಗಳಲ್ಲಿನ ವಿಶೇಷ ಸೋಡಿಯಂ ಚಾನಲ್ ಗಳ (ಇಎನ್ ಎಸಿ) ಒಳಗೆ ಇಳಿದು ನಮ್ಮ ಮೆದುಳಿಗೆ ಕೂಗಿ ಹೇಳುತ್ತದೆ: "ಇದು ಉಪ್ಪು!"
  •  ಮತ್ತೀಗ ಕ್ಲೋರೈಡ್ ಅಯಾನ್‌ ಗಳ ಕೆಲಸವೇನು ? ಕೇವಲ ಸಹಾಯಕ ಪಾತ್ರ,. ಇದು ವಿದ್ಯುದಾವೇಶವನ್ನ ಸಮತೋಲನಗೊಳಿಸುತ್ತದೆ, ಆದರೆ ರುಚಿಯ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲ.

ನಿಮಗೆ ತಿಳಿದಿದೆಯೇ?

ನಮ್ಮ ದೇಹವು ಸೋಡಿಯಂ ಇಲ್ಲದೆ ಬದುಕಲು ಸಾಧ್ಯವಿಲ್ಲ. ಅದಿಲ್ಲದೆ, ನರಗಳು ಕೆಲಸ ಮಾಡುವುದಿಲ್ಲ ಮತ್ತು ಸ್ನಾಯುಗಳು ಸಂಕುಚಿತಗೊಳ್ಳುವುದಿಲ್ಲ. ಉಪ್ಪು ಕೇವಲ ರುಚಿಯಲ್ಲ - ಅದು ನಾವು ಬದುಕುಳಿಯುವುದರ ರಹಸ್ಯ ಸಹ.

ಉಪ್ಪು ಆಹಾರದ ರುಚಿಯನ್ನು ಏಕೆ ಉತ್ತಮಗೊಳಿಸುತ್ತದೆ ?

ಉಪ್ಪು ಹೇಗೆಂದರೆ, ಸಮಾರಂಭೊಂದರಲ್ಲಿ ಎಲ್ಲರನ್ನೂ ಮೋಡಿ ಮಾಡುವ ಸ್ನೇಹಿತನಂತೆ. ಇದು ಕೇವಲ ಆಕರ್ಷಿಸುವುದಷ್ಟೇ ಅಲ್ಲ; ಇತರ ಆಹಾರ ಪದಾರ್ಥಗಳ ರುಚಿಯನ್ನು ಪ್ರಭಾವಿಸುತ್ತದೆ.

  1. ಉಪ್ಪಿನೊಂದಿಗೆ ಕಲ್ಲಂಗಡಿ ಸಿಹಿ ಇನ್ನೂ ಹೆಚ್ಚು ಸಿಹಿಯಾಗುತ್ತದೆ? ಪಾಕಶಾಲೆಯ ಮಾಂತ್ರಿಕ ತಂತ್ರ.
  2. ಕಹಿಯ ಸದ್ದಡಗಿ ಬಿಡುತ್ತದೆ ಅದಕ್ಕಾಗಿಯೇ ಅಡುಗೆ ಮಾಡುವ ಮೊದಲು ಹಾಗಲಕಾಯಿಗೆ ಉಪ್ಪು ಹಾಕಲಾಗುತ್ತದೆ.
  3. ಹೆಚ್ಚು ಲಾಲಾರಸ = ಹೆಚ್ಚು ಪರಿಮಳ ಉಪ್ಪು ನಮ್ಮ ಬಾಯಲ್ಲಿ ನೀರೂರಿಸಿ ಬಿಡುತ್ತದೆ, ವೈಜ್ಞಾನಿಕವಾಗಿ ಹೇಳುವುದಾದರೆ, ಸುವಾಸನೆಗಳು ಹರಡಲು ಸಹಾಯ ಮಾಡುತ್ತದೆ.
  4. ವಾಸನೆ ವರ್ಧಕ ಉಪ್ಪು ಆಹಾರದ ಸುವಾಸನೆಯ ಅಣುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ, ಪರಿಮಳದ ಪರಿಣಾಮವನ್ನು ದ್ವಿಗುಣಗೊಳಿಸುತ್ತದೆ.

ತಮಾಷೆಯ ಸಂಗತಿ: ಉಪ್ಪು ಹಾಕಿದ ಸಕ್ಕರೆ ಪಾಕ ಉತ್ತಮ ರುಚಿ ನೀಡುತ್ತದೆ ಏಕೆಂದರೆ ನಮ್ಮ ಮೆದುಳು  ವ್ಯತಿರಿಕ್ತತೆಯನ್ನು ಪ್ರೀತಿಸುತ್ತದೆ. (ಸಿಹಿ + ಉಪ್ಪು) ಒಟ್ಟಿಗೆ = ನಾಲಗೆಯ ರಸಾಂಕುರಗಳ ಮೇಲೆ ರಾಸಾಯನಿಕಗಳ ಆಟದ ರೈಲು.

ಬೇರೆಬೇರೆ ಲವಣಗಳು ಏಕೆ ಬೇರೆಬೇರೆ ರುಚಿಯನ್ನು ಹೊಂದಿರುತ್ತವೆ ?

ಬಗೆಬಗೆಯ ಉಪ್ಪುಗಳು ! ನೀವು ಅಂಗಡಿಗಳಲ್ಲಿ ನೋಡುವ "ವೈವಿಧ್ಯಮಯ ಉಪ್ಪುಗಳು" 

  • ಸಾಮಾನ್ಯ ಉಪ್ಪು ಶುದ್ಧ, ತೀಕ್ಷ್ಣವಾದ, ಉಪ್ಪುಗಳ ಯಜಮಾನ. ಅಸಂಬದ್ಧ ಸೋದರಸಂಬಂಧಿ.
  • ಸಮುದ್ರ ಉಪ್ಪು ಉಪ್ಪು, ಖನಿಜ ಸಮೃದ್ಧವಾಗಿರುತ್ತದೆ. ಇದನ್ನು "ತಟ್ಟೆಯಲ್ಲಿ ಸಾಗರ" ಎಂದು ಯೋಚಿಸಬಹುದು.
  • ಹಿಮಾಲಯದ ಕೆಂಪು ಉಪ್ಪು ಇನ್ ಸ್ಟಾಗ್ರಾಮ್ ನ ನೆಚ್ಚಿನದು. ಕಬ್ಬಿಣದ ಕಾರಣದಿಂದಾಗಿ ಕೆಂಪು ಗುಲಾಬಿ ಬಣ್ಣ. ಸೌಮ್ಯ, ಸ್ವಲ್ಪ ಲೋಹೀಯ.
  • ಕಪ್ಪು ಉಪ್ಪು (ಕಾಲಾ ನಮಕ್) ಕುಚೇಷ್ಟೆಗಾರ. ಮೊಟ್ಟೆಗಳಂತೆ ವಾಸನೆ ಬರುತ್ತದೆ (ಇದರಲ್ಲಿನ ಗಂಧಕದ ಅಂಶಕ್ಕೆ ಧನ್ಯವಾದ ಹೇಳಬೇಕು). ಚಾಟ್ ಮತ್ತು ಚಟ್ನಿಗಳಲ್ಲಿ ಪರಿಪೂರ್ಣತೆ ತರುತ್ತದೆ.
  • ಕೋಶರ್ ಉಪ್ಪು ದೊಡ್ಡ ಚಕ್ಕೆಗಳು, ನಿಧಾನವಾಗಿ ಕರಗುತ್ತದೆ, ಮೃದುವಾಗಿರುತ್ತದೆ. ಬಾಣಸಿಗರ ಅಚ್ಚುಮೆಚ್ಚಿನ ಉಪ್ಪು.
  • ಫ್ಲೂರ್ ಡಿ ಸೆಲ್ ಉಪ್ಪುಗಳ ದೇವತೆ. ಕೈಯಿಂದ ತಯಾರು ಮಾಡಿದ, ಸೂಕ್ಷ್ಮ ಮತ್ತು ಸ್ವಲ್ಪ ಸಿಹಿ. ಅಲಂಕಾರಿಕ ಫಿನಿಶಿಂಗ್ ಗಾಗಿ ಬಳಸಲಾಗುತ್ತದೆ.


ಉಪ್ಪು ಫ್ಯಾಕ್ಟ್ ಬೈಟ್: ಪ್ರಾಚೀನ ರೋಮನ್ನರು ತಮ್ಮ ಸೈನಿಕರಿಗೆ ಉಪ್ಪಿನ ರೂಪದಲ್ಲಿ ಸಂಬಳ ಪಾವತಿಸುತ್ತಿದ್ದರು ಅಲ್ಲಿಂದಲೇ "ಸಂಬಳ" ಎಂಬ ಪದವು  ಬರುತ್ತದೆ. ಇದರಿಂದಾಗಿ ಉಪ್ಪು ಅಮೂಲ್ಯವೆಂದು ಭಾವಿಸುವುದರಲ್ಲಿ ಆಶ್ಚರ್ಯವಿಲ್ಲ! 

ಉಪ್ಪಿನ ಸ್ಫಟಿಕದ ಗಾತ್ರ: ದೊಡ್ಡ ಲವಣಗಳು ಸೌಮ್ಯವಾದ ರುಚಿಯನ್ನು ಹೊಂದಿರುತ್ತವೆ. ಏಕೆ ?

ಚಮತ್ಕಾರಿ ಭಾಗ ಇಲ್ಲಿದೆ: ದೊಡ್ಡ ಹರಳುಗಳು ಕಡಿಮೆ ಉಪ್ಪಿನ ರುಚಿಯನ್ನು ಹೊಂದಿರುತ್ತವೆ. ಏಕೆ? ಅವು ನಿಧಾನವಾಗಿ ಕರಗುತ್ತವೆ, ಉಪ್ಪಿನ ಪರಿಮಳವನ್ನು ಹೆಚ್ಚು ಕಾಲ ಉಳಿಸುತ್ತವೆ. ಅದಕ್ಕಾಗಿಯೇ ಒಂದು ಚಿಟಿಕೆ ಕೋಶರ್ ಉಪ್ಪು, ಸಾಮಾನ್ಯ ಅಡುಗೆ ಉಪ್ಪಿಗಿಂತ ಸೌಮ್ಯವಾಗಿರುತ್ತದೆ.

ಅಡುಗೆ ಮನೆಯ ಕಟ್ಟುಕತೆ: ಉಪ್ಪು ಹೆಚ್ಚಾಗಿರುವ ಸಾಂಬಾರಿಗೆ ಆಲೂಗಡ್ಡೆಯನ್ನು ಹಾಕುವುದರಿಂದ ಉಪ್ಪನ್ನ "ತೆಗೆದುಹಾಕಬಹುದು" ಎಂದು ಕೇಳಿದ್ದೀರಾ? ಇಲ್ಲ. ಆಲೂಗಡ್ಡೆಯು ಸಾಂಬಾರಿಗೆ ಸೇರ್ಪಡೆಯಾಗುತ್ತದಷ್ಟೇ, ಇದು ಉಪ್ಪಿನ ರುಚಿಯನ್ನ ದುರ್ಬಲಗೊಳಿಸುತ್ತದೆ.

ಅಂತಿಮ ಗುಟುಕು :

ಉಪ್ಪು ಕೇವಲ ಮಸಾಲೆ ಅಲ್ಲ. ಇದರ ಇತಿಹಾಸ, ಭೌಗೋಳಿಕತೆ, ಬದುಕುಳಿಯುವಿಕೆ ಮತ್ತು ವಿಜ್ಞಾನವನ್ನು ಹೊಳೆಯುವ ಸಣ್ಣ ಹರಳುಗಳಲ್ಲಿ ಅಡಕ ಮಾಡಲಾಗಿದೆ. ಹಿಮಾಲಯನ್ ಉಪ್ಪಿನ ಗುಲಾಬಿ ಬಣ್ಣದ ಮೋಹಕತೆಯಿಂದ ಹಿಡಿದು ಕಪ್ಪು ಉಪ್ಪಿನ ಮೊಟ್ಟೆಯ ಕಿಡಿಗೇಡಿತನದವರೆಗೆ, ಪ್ರತಿಯೊಂದು ಪ್ರಕಾರವು ತನ್ನದೇ ಆದ ಕಥೆಯನ್ನು ಹೊಂದಿದೆ.

ಆದ್ದರಿಂದ, ಮುಂದಿನ ಬಾರಿ ನೀವು ಕರಿದ ಪದಾರ್ಥಗಳು, ಪಾಪ್ ಕಾರ್ನ್ ಅಥವಾ ಸಾಂಬಾರ್ ಮೇಲೆ ಸ್ವಲ್ಪ ಉಪ್ಪನ್ನ ಸಿಂಪಡಿಸಿದಾಗ, ನೆನಪಿಸಿಕೊಳ್ಳಿ - ನೀವು ಕೇವಲ ರುಚಿ ಅಥವಾ ಪರಿಮಳವನ್ನು ಸೇರಿಸುತ್ತಿಲ್ಲ, ನಿಮ್ಮ ರುಚಿ ಮೊಗ್ಗುಗಳು ಮತ್ತು ಭೂಮಿಯ ಖನಿಜಗಳ ನಡುವಿನ ಹಳೆಯ ಪ್ರೇಮ ಸಂಬಂಧದ ಕೀಲಿಯನ್ನ ತೆರೆಯುತ್ತಿದ್ದೀರಿ.

ಅಚ್ಚರಿಯ ಸಂಗತಿಗಳು :

  • ಚೀನಾದ ಮಹಾಗೋಡೆ? ಇದರ ನಿರ್ಮಾಣಕ್ಕಾಗಿ ಭಾಗಶಃ ಉಪ್ಪಿನ ತೆರಿಗೆಯಿಂದ ಧನಸಹಾಯ ಪಡೆಯಲಾಗಿದೆಯಂತೆ.
  • "ಒಬ್ಬರ ಉಪ್ಪಿಗೆ ಯೋಗ್ಯವಾಗಿದೆ" ಅಂದರೆ ಒಬ್ಬ ವ್ಯಕ್ತಿ ತನ್ನ ವೃತ್ತಿಯಲ್ಲಿ ಸಮರ್ಥನಿದ್ದು ಅವನ ಕೂಲಿಗೆ, ಸಂಬಳಕ್ಕೆ ಅರ್ಹನಿದ್ದಾನೆ ಎಂದು ಅರ್ಥ ಕೊಡುವ ಈ ನುಡಿಗಟ್ಟು  ಪ್ರಾಚೀನ ವ್ಯಾಪಾರದಿಂದ ಬಂದಿದೆ.
  • “ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ” ಇದು ಕನ್ನಡದಲ್ಲಿ ಜನಪ್ರಿಯ ಗಾದೆ ಮಾತು.
  • ಹೆಚ್ಚು ಉಪ್ಪು? ಆರೋಗ್ಯಕ್ಕೆ ಅಪಾಯ. ತುಂಬಾ ಕಡಿಮೆ ಉಪ್ಪು? ಜೀವಕ್ಕೇ ಅಪಾಯ. ಸಮತೋಲನವೇ ಎಲ್ಲವೂ!

 ಕೊನೆಯ ನುಡಿಗಟ್ಟು : ಉಪ್ಪು ಇಲ್ಲದೆ ಹೋದರೆ, ಉಪ್ಪಿಟ್ಟು ಬರೀ ಹಿಟ್ಟು, ಪಾಪ್ ಕಾರ್ನ್ ಕೇವಲ ಪಾಪದ ಕಾರ್ನ್‌, ಮತ್ತು ಜೀವನವೂ ಸಹ ನೀರಸವೇ ಸರಿ.


"ಅಂಚೆ:ಬಾಂಧವ್ಯದ ಬೆಸುಗೆಯ ಸಂಚಯನ ಸೇವೆ"

 "ಅಂಚೆ:ಬಾಂಧವ್ಯದ ಬೆಸುಗೆಯ ಸಂಚಯನ ಸೇವೆ"



ಲೇಖನ: 
ಬಸವರಾಜ ಎಮ್ ಯರಗುಪ್ಪಿ 

ಶಿಕ್ಷಕರು, ಹವ್ಯಾಸಿ ಬರಹಗಾರರು 

ಸಾ.ಪೊ ರಾಮಗೇರಿ ತಾಲ್ಲೂಕು ಲಕ್ಷ್ಮೇಶ್ವರ ಜಿಲ್ಲಾ ಗದಗ. 

ದೂರವಾಣಿ 9742193758 

ಮಿಂಚಂಚೆ basu.ygp@gmail.com.


ಅಕ್ಟೋಬರ್ 9 – ವಿಶ್ವ ಅಂಚೆ ದಿನ

“ಅಂಚೆಯು ಹೃದಯದಿಂದ ಹೃದಯವನ್ನು ಬೆಸೆಯುವ ಸೇತುವೆ”

"ಹಿಮವಾಗಲೀ, ಮಳೆಯಾಗಲೀ, ಶಾಖವಾಗಲೀ ಅಥವಾ ರಾತ್ರಿಯ ಕತ್ತಲೆಯಾಗಲೀ ಈ ಅಂಚೆಗಳನ್ನು, ಅವರ ನಿಗದಿತ ಸುತ್ತುಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ತಲುಪಿಸುವುದನ್ನು ಯಾರಿಂದಲೂ ತಡೆಯಲಾಗುವುದಿಲ್ಲ" — ಎಂದು ಹೆರೊಡೋಟಸ್ ಹೇಳಿದರು. ಈ ಮಾತುಗಳನ್ನು ಯು.ಎಸ್. ಅಂಚೆ ಸೇವೆಯು ಧ್ಯೇಯವಾಕ್ಯವನ್ನಾಗಿ ಅಳವಡಿಸಿಕೊಂಡಿರುವುದು ಅಂಚೆಯ ಮಹತ್ವವನ್ನು ಸಾರುತ್ತದೆ.

ಪುರಾತನ ಕಾಲದ ಮೇಘಸಂದೇಶ, ಮಹಾರಾಜರ ಕಾಲದ ಪಾರಿವಾಳ ಸಂದೇಶಗಳು, ನಂತರದ ಕಾಲದ ಕುದುರೆ ಅಥವಾ ಕಾಲ್ನಡಿಗೆಯ ಸಂದೇಶವಾಹಕರಿಂದ ಆರಂಭವಾದ ಅಂಚೆ ಸೇವೆ, ಮಾನವ ಸಂವಹನದ ಹೊಸ ಅಧ್ಯಾಯವನ್ನು ಬರೆದಿತು. ಕಾಲ ಬದಲಾದಂತೆ ಅಂಚೆಯೂ ಬದಲಾಗಿತು, ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಇಂದಿಗೂ ಜನಮಾನಸದಲ್ಲಿ ತನ್ನದೇ ಆದ ಜೀವಂತ ಅಸ್ತಿತ್ವವನ್ನು ಉಳಿಸಿಕೊಂಡಿದೆ.

ಈ ಸೇವೆಯ ಮಹತ್ವವನ್ನು ನೆನಪಿಸಲು ಪ್ರತಿ ವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ.

ಇತಿಹಾಸದ ಓಲೆಗಳು

ಅಶ್ವರೋಹಿಗಳ ಮೂಲಕ ಪ್ರಾರಂಭವಾದ ಅಂಚೆ ಪದ್ಧತಿಯನ್ನು 1296ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಜಾರಿಗೆ ತಂದರು, ಶೇರ್ ಶಾ ಸುರಿ ಅದನ್ನು ಇನ್ನಷ್ಟು ವಿಸ್ತರಿಸಿದರು.
1874ರಲ್ಲಿ ಸ್ವಿಜರ್ಲ್ಯಾಂಡ್‌ನ ಬರ್ನ್ ನಗರದಲ್ಲಿ ಯೂನಿವರ್ಸಲ್ ಪೋಸ್ಟಲ್ ಯೂನಿಯನ್ (UPU) ಸ್ಥಾಪನೆಯಾದಾಗ ಅಂಚೆ ಜಾಗತಿಕ ಮುಖವನ್ನು ಕಂಡಿತು.
ಅಕ್ಟೋಬರ್ 9, 1969ರಂದು ಟೋಕಿಯೋ ನಗರದಲ್ಲಿ ಮೊದಲ ಬಾರಿ ವಿಶ್ವ ಅಂಚೆ ದಿನವನ್ನು ಆಚರಿಸಲಾಯಿತು.

ಅಂಚೆ – ನಮ್ಮ ಜೀವನದ ಮಾಧ್ಯಮ ಮಿತ್ರ

ಅಂಚೆ ಸೇವೆಯು ಜನರ ಭಾವನೆ, ಮಾಹಿತಿ, ವ್ಯವಹಾರ, ಹಾಗೂ ಸಂಬಂಧಗಳ ಸೇತುವೆಯಾಗಿದೆ. ಭಾರತದಲ್ಲಿ ಇದು ಜನಸಾಮಾನ್ಯರಿಗೇ ಹೆಚ್ಚು ಸಿಗುವ ಸಂವಹನದ ಪ್ರಮುಖ ಮಾರ್ಗವಾಗಿದ್ದು, ಅದರ ಮೂಲಕ ಹೃದಯದ ನುಡಿಗಳು ದೇಶದ ಅಂಚಿನಿಂದ ಅಂಚಿಗೆ ತಲುಪುತ್ತಿವೆ.

ಭಾರತದಲ್ಲಿನ ಅಂಚೆ ವ್ಯವಸ್ಥೆ

ಭಾರತದ ಸುಧಾರಿತ ಅಂಚೆ ಪದ್ಧತಿಗೆ ಬ್ರಿಟಿಷರ ಕಾಲವೇ ಮೂಲ. ಅವರ ವಸಾಹತು ನಿರ್ವಹಣೆಗೆ ಅಂಚೆಯ ಅಗತ್ಯವಿದ್ದ ಕಾರಣ ಅವರು ಪರಿಣಾಮಕಾರಿಯಾಗಿ ಈ ವ್ಯವಸ್ಥೆಯನ್ನು ರೂಪಿಸಿದರು.
ಆದರೆ ಅದಕ್ಕೂ ಮುನ್ನ ಚಕ್ರಾಧಿಪತಿಗಳ ಕಾಲದಲ್ಲಿ ಪಾರಿವಾಳಗಳು, ಕುದುರೆ ಸವಾರರು, ಸೇನಾಭಟರು ಪತ್ರವಹಕರಾಗಿದ್ದರು.
ಮುದ್ರಿತ ದಾಖಲೆ ಪತ್ರದ ರೂಪದಲ್ಲಿ ಅಂಚೆ ಬದಲಾದ ನಂತರ ಲಾರ್ಡ್ ಡಾಲ್ಹೌಸಿ (Lord Dalhousie) ಅಂಚೆ ಸುಧಾರಣೆಗೆ ಕಾರಣರಾದರು.

ಅಂಚೆಯ ಪ್ರಮುಖ ಸೇವೆಗಳು

ಇಂದಿನ ಅಂಚೆ ಕಚೇರಿಗಳು ಕೇವಲ ಪತ್ರ ಕಳುಹಿಸುವ ಸ್ಥಳವಲ್ಲ – ಜನಸಾಮಾನ್ಯರ ಆರ್ಥಿಕ ಜೀವನದ ಭಾಗವಾಗಿದೆ:

  • ಸುಕನ್ಯಾ ಸಮೃದ್ಧಿ ಯೋಜನೆ

  • ಆವರ್ತಿತ ಠೇವಣಿ (RD), ನಿಶ್ಚಿತ ಠೇವಣಿ (FD)

  • ಇ-ಅಂಚೆ, ಶೀಘ್ರ ಅಂಚೆ, ಪಾರ್ಸೆಲ್, ನೋಂದಾಯಿತ ಪತ್ರ

  • ಮನಿ ಆರ್ಡರ್, ಹಣ ವರ್ಗಾವಣೆ

  • ಮ್ಯುಚುಯಲ್ ಫಂಡ್, ಕಿಸಾನ್ ವಿಕಾಸ್ ಪತ್ರ

  • ರಾಷ್ಟ್ರೀಯ ಉಳಿತಾಯ ಪತ್ರ ಮುಂತಾದ ಸೇವೆಗಳು

ಭಾರತದ ಅಂಚೆ ಸೇವೆ ವಿಶ್ವದ ಅತಿ ದೊಡ್ಡ ಜಾಲವಾಗಿದ್ದು 1,55,000 ಕ್ಕೂ ಹೆಚ್ಚು ಅಂಚೆ ಕಛೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ.

ಟೆಲಿಗ್ರಾಫ್ ಮತ್ತು ಮೋರ್ಸ್ ಕೋಡ್ – ಅಂಚೆಯ ಹೊಸ ಅಧ್ಯಾಯ

ಅಂಚೆಯ ಜೊತೆಗೆ ಸಂವಹನ ಕ್ಷೇತ್ರದ ಮಹತ್ವದ ಮೈಲಿಗಲ್ಲು ಎಂದರೆ ಟೆಲಿಗ್ರಾಫ್.
1837ರಲ್ಲಿ ಸ್ಯಾಮುವೆಲ್ ಮೋರ್ಸ್ (Samuel Morse) ಅವರಿಂದ ಕಂಡುಹಿಡಿಯಲ್ಪಟ್ಟ ಮೋರ್ಸ್ ಕೋಡ್ — “ಡಾಟ್” (·) ಮತ್ತು “ಡ್ಯಾಶ್” (–) ಗಳ ಸಂಯೋಜನೆಯ ಮೂಲಕ ಸಂದೇಶ ಕಳುಹಿಸುವ ವಿಧಾನ.

ಉದಾಹರಣೆಗೆ:

  • A = · –

  • B = – · · ·

  • SOS = · · · – – – · · ·

ಈ ವ್ಯವಸ್ಥೆಯಿಂದ ಸುದ್ದಿ ಕ್ಷಣಾರ್ಧದಲ್ಲಿ ತಲುಪುವಂತಾಯಿತು. ಭಾರತದಲ್ಲಿ ಟೆಲಿಗ್ರಾಫ್ ಸೇವೆ 1851ರಲ್ಲಿ ಆರಂಭಗೊಂಡು ಶತಮಾನಕ್ಕೂ ಹೆಚ್ಚು ಕಾಲ ಜನಸಂಪರ್ಕದ ಜೀವನಾಡಿಯಾಗಿತ್ತು. ಆದರೆ ಜುಲೈ 15, 2013ರಂದು ಇದು ಇತಿಹಾಸ ಸೇರಿತು.

ಜಾಗತೀಕರಣದ ಹೊಡೆತಕ್ಕೆ ಬಲಿಯಾದ ಅಂಚೆ ಸೇವೆ

ಡಿಜಿಟಲ್ ಯುಗದ ಪ್ರಾರಂಭದೊಂದಿಗೆ ಪತ್ರಗಳಿಗಾಗಿ ಕಾಯುವ ದಿನಗಳು ಕಡಿಮೆಯಾಗಿವೆ. ಮೊಬೈಲ್, ಇಮೇಲ್, ವಾಟ್ಸಪ್, ಫೇಸ್‌ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳು ಅಂಚೆಯ ಹಳೆಯ ಪಾತ್ರವನ್ನು ಹಂಚಿಕೊಂಡಿವೆ.
ಆದರೂ ಅಂಚೆ ವ್ಯವಸ್ಥೆಯ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆ ಇನ್ನೂ ಅದ್ವಿತೀಯವಾಗಿದೆ.

ಆಧುನೀಕರಣದ ಪಥದಲ್ಲಿ ಇಂಡಿಯಾ ಪೋಸ್ಟ್

ಭಾರತೀಯ ಅಂಚೆ ಈಗ ಡಿಜಿಟಲ್ ಹಾದಿಯಲ್ಲಿ ಮುಂದಾಗಿದೆ.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಗ್ರಾಮೀಣ ಮಟ್ಟದಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ.
ಸುಕನ್ಯಾ ಸಮೃದ್ಧಿ ಯೋಜನೆ, ಡಿಜಿಟಲ್ ಪಾವತಿ ವ್ಯವಸ್ಥೆ, QR ಕೋಡ್ ಮೂಲಕ ಹಣ ವರ್ಗಾವಣೆ — ಇವುಗಳೆಲ್ಲ ಅಂಚೆಯ ಆಧುನೀಕರಣದ ನಿದರ್ಶನ.

ಅಂಚೆಯ ಹೆಸರಿನ ಸ್ವಾರಸ್ಯಕರ ಕಥೆ

"ಅಂಚೆ" ಎಂಬ ಪದದ ಅರ್ಥ ಮೊದಲು “ಹಂಸ”. ಮೈಸೂರು ಸಂಸ್ಥಾನದ ಶ್ರೀ ಚಿಕ್ಕದೇವರಾಜ ಒಡೆಯರ್ ಅವರು ಕ್ರಿ.ಶ. 1672ರಲ್ಲಿ ರಾಜ್ಯದ ಟಪಾಲು ವಿಭಾಗವನ್ನು ಸ್ಥಾಪಿಸಿದಾಗ, ನಳ-ದಮಯಂತಿಯ ಪ್ರೇಮಪತ್ರದ ಸನ್ನಿವೇಶವನ್ನು ನೆನೆದು “ಅಂಚೆ” ಎಂಬ ನಾಮಕರಣ ಮಾಡಿದರು. ಅದು ಸಂವಹನದ ಹಂಸದಂತೆ ಜನರ ಹೃದಯವನ್ನು ಸೇರುವ ಪ್ರತೀಕವಾಯಿತು.

ಕೊನೆಯ ಮಾತು

ಓಲೆಗಳಿಂದ ಮನಗಳನ್ನು ಬೆಸೆಯುತ್ತಿದ್ದ ಅಂಚೆ ವ್ಯವಸ್ಥೆ ಇಂದಿಗೂ ಭಾರತೀಯನ ಹೃದಯದ ಭಾಗವಾಗಿದೆ.
ಕಾಲ ಬದಲಾಗುತ್ತಿದ್ದರೂ ಅದರ ಮಾನವೀಯ ನಂಟು ಎಂದಿಗೂ ಕಡಿದು ಹೋಗಿಲ್ಲ.
ವಿಶ್ವ ಅಂಚೆ ದಿನದಂದು, ಆ ನಂಟನ್ನು ಕಾಪಾಡಿ ಸಾಗಿಸುತ್ತಿರುವ ಎಲ್ಲ ಅಂಚೆ ಸೇವಕರಿಗೂ ಹೃದಯಪೂರ್ವಕ ನಮನಗಳು.

“ಡಾಟ್ – ಡ್ಯಾಶ್ – ಕಾಗದದ ಓಲೆ – ಡಿಜಿಟಲ್ ಮೆಸೇಜ್, ಆದರೂ ಅಂಚೆಯ ಬಾಂಧವ್ಯ ಎಂದಿಗೂ ಅಮರ.”