ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, November 4, 2025

🌸ನವಂಬರ್‌ 2025ರ ಲೇಖನಗಳು 🌸

 🌸ನವಂಬರ್‌ 2025ರ ಲೇಖನಗಳು 🌸

🌸 ಸವಿಜ್ಞಾನ – ನವೆಂಬರ್ 2025 ರ ಸಂಚಿಕೆ 🌸 ಜ್ಞಾನದ ಸವಿ ಸವಿಯಿರಿ!

ವಿಶೇಷ ಲೇಖನಗಳು

1. ಒಮರ್ ಯಾಘಿ ಎಂಬ ಆಣ್ವಿಕ ವಾಸ್ತುಶಿಲ್ಪಿ!!! ✍️ ರಾಮಚಂದ್ರ ಭಟ್ ಬಿ.ಜಿ.

  [ಅಣುಗಳನ್ನು ಬಳಸಿ ಅದ್ಭುತ ಲೋಕವನ್ನೇ ನಿರ್ಮಿಸುವ ಆಣ್ವಿಕ ವಾಸ್ತುಶಿಲ್ಪಿ ಒಮರ್ ಯಾಘಿ ಅವರ ವಿಸ್ಮಯಕಾರಿ ಸಂಶೋಧನೆಗಳನ್ನು ಅನ್ವೇಷಿಸಿ.]

2. 💀 ಕಳೇಬರಗಳನ್ನು ಕದ್ದು ಪಾಠ ಮಾಡುತ್ತಿದ್ದ ವೈದ್ಯ!✍️ ಡಾ. ಎಮ್.ಜೆ. ಸುಂದರ ರಾಮ್

  [ವೈದ್ಯಕೀಯ ಜ್ಞಾನಾರ್ಜನೆಗಾಗಿ ಕಳೇಬರಗಳ ರಹಸ್ಯವನ್ನು ಬೇಧಿಸಿದ ವೈದ್ಯನ ರೋಮಾಂಚಕ ಮತ್ತು ಕೆಲವೊಮ್ಮೆ ಕರಾಳ ಕಥೆ.]

3. ವಿಶ್ವದಲ್ಲಿ ತಮಸ್ಸಿನದೇ ಕಾರುಬಾರು !!!✍️ ಕೃಷ್ಣ ಸುರೇಶ 

[ಕಣ್ಣಿಗೆ ಕಾಣದ, ಆದರೆ ವಿಶ್ವದ ಬಹುಭಾಗವನ್ನು ಆವರಿಸಿರುವ ತಮಸ್ಸು (Dark Matter) ಮತ್ತು ಕರಾಳ ಶಕ್ತಿ (Dark Energy) ಗಳ ರಹಸ್ಯಮಯ ಲೋಕದ ಬಗೆಗಿನ ವಿವರಣೆ.]

4. ಬೆಂಜೀನ್: ಕಮ್ಮಾರನ ಮಗ ಮತ್ತು ಬಾಲ ಕಚ್ಚಿದ ಹಾವಿನ ಕಥೆ!✍️ ತೇಜಸ್ವಿನಿ. ಎಂ.ಡಿ.

[ರಸಾಯನಶಾಸ್ತ್ರದಲ್ಲಿ ಕ್ರಾಂತಿ ಮಾಡಿದ ಬೆಂಜೀನ್ ಅಣು, ಅದರ ಆವಿಷ್ಕಾರದ ಹಿಂದಿನ ಕುತೂಹಲಕಾರಿ ಕಥೆ, ಮತ್ತು ಕೆಕುಲೆ ಕಂಡ ಕನಸಿನ ರಹಸ್ಯ.]

5. ಮೂರ್ಛೆ ರೋಗದ ಬಗ್ಗೆ; ಅಸಡ್ಡೆ ಬೇಡ ಜಾಗೃತಿ ಇರಲಿ✍️ ಬಸವರಾಜ ಎಮ್ ಯರಗುಪ್ಪಿ 

[ಮೂರ್ಛೆ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ವೈಜ್ಞಾನಿಕ ಸತ್ಯಗಳನ್ನು ತಿಳಿದು, ಜಾಗೃತರಾಗಲು ಒಂದು ಮಹತ್ವದ ಲೇಖನ.]

6. ನವೆಂಬರ್ 2025 ರ ಸೈಂಟೂನ್‌ಗಳು✍️ ಶ್ರೀಮತಿ ಜಯಶ್ರೀ ಶರ್ಮ

  [ವೈಜ್ಞಾನಿಕ ವಿಷಯಗಳನ್ನು ಹಾಸ್ಯದ ಲೇಪನದೊಂದಿಗೆ ನಿರೂಪಿಸುವ ಈ ತಿಂಗಳ ವಿಶೇಷ ಸೈಂಟೂನ್‌ಗಳನ್ನು ಆನಂದಿಸಿ!]

ಕಳೇಬರಗಳನ್ನು ಕದ್ದು ಪಾಠ ಮಾಡುತ್ತಿದ್ದ ವೈದ್ಯ!

💀 ಕಳೇಬರಗಳನ್ನು ಕದ್ದು ಪಾಠ ಮಾಡುತ್ತಿದ್ದ ವೈದ್ಯ!



ಲೇಖಕರು: ಡಾ. ಎಮ್.ಜೆ. ಸುಂದರ ರಾಮ್

ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು

ವಿಜಯ ಕಾಲೇಜು, ಬೆಂಗಳೂರು -೪



  ಮಾನವ ಶರೀರಗಳು ಪವಿತ್ರವೆಂದೂ, ಅವುಗಳ ಮರಣೋತ್ತರ ತಪಾಸಣೆ (post mortem) ಗಳು ಪಾಪಕೃತ್ಯಗಳೆಂದೂ ಹಿಂದಿನ ಕಾಲದಲ್ಲಿ ಜನ ನಂಬಿದ್ದರು. ಗ್ರೀಕರು ಹಾಗೂ ರೋಮನ್ನರ ಕಾನೂನುಗಳಲ್ಲಿ ಮಾನವ ಶರೀರದ ಕೊಯ್ತ (dissections) ಕ್ಕೆ ಅನುಮತಿ ಇರಲಿಲ್ಲ. ಆದರೆ, ಅಪರಾಧಿಗಳ ಶವಗಳನ್ನು ಮಾತ್ರ ನೇಣುಗಂಬಕ್ಕೆ ನೇತುಹಾಕಿ ದಿನಗಟ್ಟಲೆ ಹಾಗೆಯೇ ಕೊಳೆಯಲು ಬಿಡುತ್ತಿದ್ದರು. ವೈದ್ಯ ವಿದ್ಯಾರ್ಥಿಗಳಿಗೆ ಮಾನವ ಅಂಗರಚನೆ (human anatomy) ವಿಷಯವನ್ನು ಪರಿಚಯಿಸಲು ಅಂದಿನ ಅತ್ಯಂತ ಪ್ರಭಾವಶಾಲಿ ವೈದ್ಯರಾಗಿದ್ದ ಗಾಲನ್, ಹಂದಿ ಮತ್ತು ವಾನರ (apes) ಗಳ ದೇಹಗಳನ್ನು ಕೊಯ್ದು ತೋರಿಸಿ, ನಮ್ಮ ದೇಹದಲ್ಲಿಯೂ ಇದೇ ರೀತಿಯ ರಚನೆಯಿದೆ ಎಂದು ತಪ್ಪಾದ ಪಾಠ ಬೋಧಿಸುತ್ತಿದ್ದರು.

ಬೆಲ್ಜಿಯಂ ದೇಶದ ರಾಜಧಾನಿಯಾದ ಬ್ರಸೆಲ್ಸ್ (Brussels) ನಲ್ಲಿ ಜನಿಸಿದ ಆಂಡ್ರಿಯಾಸ್ ವೆಸೇಲಿಯಸ್ (Andreas Vesalius) ಎಂಬ ಕ್ರಾಂತಿಕಾರಿ ತರುಣ ತನ್ನ ಬಾಲ್ಯ ಪ್ರೌಢಿಮೆಯಿಂದ ಸಣ್ಣ ಪ್ರಾಣಿಗಳನ್ನು ಕೊಯ್ದು ದೇಹದ ಒಳರಚನೆಯನ್ನೂ ಅಂಗಾಂಗಗಳ ಜೋಡಣೆಯನ್ನೂ ವೀಕ್ಷಿಸುತ್ತಿದ್ದ. ತನ್ನ 18ನೇ ವಯಸ್ಸಿನಲ್ಲಿ ಪ್ಯಾರಿಸ್ ವಿಶ್ವವಿದ್ಯಾಲಯದ ವೈದ್ಯಶಾಸ್ತ್ರ ವಿಭಾಗದಲ್ಲಿ ಸೇರ್ಪಡೆಯಾದ. ಅಲ್ಲಿ ಹಿಪೊಕ್ರೇಟ್ಸ್ ಮತ್ತು ಗಾಲನ್ರ ಪುರಾತನ ಪಾಠಗಳನ್ನೇ ಬೋಧಿಸಲಾಗುತ್ತಿತ್ತು. ರೋಗಿಗಳನ್ನು ಸ್ಪರ್ಶ ಮಾಡುವುದು ಅವಮಾನಕರವೆಂದು ಅಂದಿನ ವೈದ್ಯರು ನಂಬಿದ್ದರು. ಕಳೇಬರಗಳನ್ನು ಕೊಯ್ದು ತೋರಿಸಲು ಸಿಬ್ಬಂದಿಗಳನ್ನು ನೇಮಿಸಿಕೊಂಡು, ಪುಸ್ತಕ ಹಿಡಿದು ಪಾಠ ಓದುತ್ತ ವಿವರಣೆ ಕೊಡುತ್ತಿದ್ದರು. ಈ ರೀತಿಯ ನೀರಸವಾದ ಪಾಠ ಪ್ರವಚನಗಳು ವೆಸೇಲಿಯಸ್‌ಗೆ ರುಚಿಸದೆ ಹತಾಶರಾದರು. ಹೆಣ ಕೊಯ್ಯಲು ಸಿದ್ಧರಾಗಿ ಕಾದಿದ್ದ ಸಿಬ್ಬಂದಿಯ ಕೈಯಿಂದ ವೈದ್ಯಚೂರಿ (Scalpel) ಯನ್ನು ಕಸಿದು ತಾವೇ ಹೆಣವನ್ನು ಅಚ್ಚುಕಟ್ಟಾಗಿ ಕೊಯ್ದು ತಮ್ಮ ಕೊಯ್ತದ ಕೌಶಲ ಹಾಗೂ ಅಂಗರಚನೆಯ ಅರಿವನ್ನೂ ಪ್ರದರ್ಶಿಸಿ ಅಲ್ಲಿದ್ದವರ ಮೆಚ್ಚುಗೆ ಪಡೆದರು. ಅತಿ ಬೇಗನೆ ಸಹಪಾಠಿಗಳು ವೆಸೇಲಿಯಸ್‌ನನ್ನು ತಮ್ಮ ಮುಖಂಡ ಎಂದು ಗುರುತಿಸಿ ಗೌರವಿಸಲಾರಂಭಿಸಿದರು. ವೆಸೇಲಿಯಸ್ ಪ್ರದರ್ಶಿಸಿದ ಆಸಕ್ತಿ, ಉತ್ಸಾಹ ಮತ್ತು ಬದ್ಧತೆಗಳನ್ನು ಗಮನಿಸಿದ ಗುರುಗಳು ವಿಸ್ಮಿತರಾದರು. ಆದರೆ, ಅವನ ವರ್ತನೆಯಿಂದ ಅವನೊಬ್ಬ ಸೊಕ್ಕಿನ ದುರಹಂಕಾರಿ ಎಂದು ಅಭಿಪ್ರಾಯಪಟ್ಟರು. ವೆಸೇಲಿಯಸ್ ತಮ್ಮ 22ನೇ ವಯಸ್ಸಿನಲ್ಲಿದ್ದಾಗಲೇ ಶವಗಳನ್ನು ಕೊಯ್ಯಲು ಪ್ರಾರಂಭಿಸಿ, ಅಸ್ಥಿಪಂಜರಗಳನ್ನು ಮುಂದಿಟ್ಟುಕೊಂಡು ಉಪನ್ಯಾಸ ಮಾಡತೊಡಗಿದರು. ಶವಗಳ ಅಧ್ಯಯನದ ಅನುಭವದಿಂದ ಅಂಗರಚನಾಶಾಸ್ತ್ರದ ಅನೇಕ ರೇಖಾಪಟಗಳನ್ನು (charts) ರಚಿಸಿ ವೈದ್ಯವಿಜ್ಞಾನವನ್ನು ಶ್ರೀಮಂತಗೊಳಿಸಿದರು.

ಗಾಲನ್‌ರ ಹೇಳಿಕೆಗಳೆಲ್ಲವನ್ನೂ ವೆಸೇಲಿಯಸ್ ಸಾರಾಸಗಟಾಗಿ ಒಪ್ಪಲಿಲ್ಲ. ಮಾನವ ದೇಹವನ್ನೇ ಕೊಯ್ದು ನಿಜಸ್ಥಿತಿಯನ್ನು ತಮ್ಮ ಸಹಪಾಠಿಗಳಿಗೆ ಬೋಧಿಸಲು ಮಾನವ ಶವಗಳಿಗಾಗಿ ಹುಡುಕಾಡಲಾರಂಭಿಸಿದರು. ಸ್ಮಶಾನಗಳಲ್ಲಿ ಕೊಳೆತು ನಾರುತ್ತಿದ್ದ ಅಪರಾಧಿಗಳ ಕಳೇಬರಗಳು ಅವರ ಗಮನ ಸೆಳೆದವು. ತಮ್ಮ ಸ್ನೇಹಿತರೊಡನೆ ಸ್ಮಶಾನಗಳಿಗೆ ರಾತ್ರಿ ವೇಳೆ ಹೋಗಿ, ಹೆಣಗಳನ್ನು ಕದ್ದು ತಂದು, ತರಗತಿಯಲ್ಲಿ ಸಹಪಾಠಿಗಳೆದುರು ಕೊಯ್ದು ತಾವೇ ಪಾಠ ಮಾಡಲಾರಂಭಿಸಿದರು.

ವೆಸೇಲಿಯಸ್ ಮಿತ್ರರೊಡನೆ ರಾತ್ರಿ ವೇಳೆ ಒಮ್ಮೊಮ್ಮೆ ಪ್ಯಾರಿಸ್‌ನ ಹೊರನಗರಗಳಿಗೂ ನುಸುಳಿದ್ದಾಗ, ಅನೇಕ ಸಲ ನಾಯಿಗಳ ಭಯಾನಕ ಆಕ್ರಮಣವನ್ನು ಎದುರಿಸಬೇಕಾಗುತ್ತಿತ್ತು. ಸುಟ್ಟು ಕರಕಲಾದಿದ್ದ ಶವಗಳಿಂದ ಹೊರಸೂಸುತ್ತಿದ್ದ ದುರ್ನಾತವನ್ನು ಮೂಗು ಮುಚ್ಚಿಕೊಂಡು ಸಹಿಸಿಕೊಳ್ಳಬೇಕಾಗುತ್ತಿತ್ತು. ಇಷ್ಟೆಲ್ಲ ಅಡೆತಡೆಗಳು ಎದುರಾದರೂ ಸ್ವಲ್ಪವೂ ಬೇಸರ ಪಡದೆ ತಮ್ಮ ದುಸ್ಸಾಸಹವನ್ನು ಬಿಡದೆ ಕಂಬಗಳಲ್ಲಿ ನೇತಾಡುತ್ತಿದ್ದ ಅರೆಬೆಂದ ಶವ ಮತ್ತು ಅಸ್ಥಿಪಂಜರಗಳನ್ನು, ಛಲಬಿಡದ ತ್ರಿವಿಕ್ರಮ ಬೇತಾಳನನ್ನು ತನ್ನ ಹೆಗಲ ಮೇಲೇರಿಸಿಕೊಂಡು ಬಂದಂತೆ ಶವಗಳನ್ನು ಹೊತ್ತು ತಂದು ಕೊಯ್ದು ಮಾನವ ಅಂಗರಚನೆಯನ್ನು ನೇರವಾಗಿ ವೀಕ್ಷಿಸಿ ವೈದ್ಯಶಾಸ್ತ್ರ ಬೋಧನೆಯಲ್ಲಿ ಹೊಸ ಕ್ರಾಂತಿಯೆಬ್ಬಿಸಿದರು.



    ಅಂದಿನ ಕಾಲದಲ್ಲಿ ಕೊಲೆಗಡುಕರನ್ನು ಸಾಮಾನ್ಯವಾಗಿ ಸೋಮವಾರ ಬೆಳಿಗ್ಗೆ 8 ಗಂಟೆ ಹೊತ್ತಿಗೆ ನೇಣು ಹಾಕಿ, ಒಂದು ಗಂಟೆ ಬಳಿಕ ಅವರ ಶವಗಳನ್ನು ವೈದ್ಯಕೀಯ ಕಾಲೇಜುಗಳಿಗೆ ರವಾನಿಸುತ್ತಿದ್ದರು. ಕಳೇಬರಗಳನ್ನು ಕದಿಯುವುದೇ ಅಂದು ಲಾಭದಾಯಕ ಕಸುಬಾಗಿತ್ತು. ಹೊಸ ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗುತ್ತಾ ಬಂದವು. ಶವಗಳನ್ನು ಬಹುಕಾಲ ಉಳಿಸಿಟ್ಟುಕೊಂಡರೆ ಅವು ಕೊಳೆತು ನಾರುತ್ತಿದ್ದುದರಿಂದ ಅವುಗಳನ್ನು ಅತಿ ಬೇಗ ಬಳಸಿ, ಎಸೆಯಬೇಕಾಗಿತ್ತು. ಈ ಕಾರಣಗಳಿಂದ ಶವಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚತೊಡಗಿತು. ಮೊದಲೊದಲು ವೈದ್ಯ ಶಿಕ್ಷಕರು, ವೈದ್ಯ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿಗಳು, ಉದ್ಯೋಗಿಗಳು ಶವಗಳನ್ನು ಕದಿಯಲು ಪ್ರಾರಂಭಿಸಿದರು. ಕ್ರಮೇಣ ಶವಗಳ್ಳರು ಹುಟ್ಟಿಕೊಂಡು ಶವಗಳನ್ನು ಕದ್ದು ಕಾಲೇಜುಗಳಿಗೆ ದುಬಾರಿ ಬೆಲೆಗೆ ಮಾರಿ, ಅಪಾರ ಹಣ ಗಳಿಸಲಾರಂಭಿಸಿದರು. ಶವಗಳ ಬೆಲೆ ಏರುತ್ತಾ ಬಂದಂತೆ ಸ್ತ್ರೀಯರೂ ಈ ಧಂಧೆಯಲ್ಲಿ ಸಕ್ರಿಯವಾಗಿ ಭಾಗವಹಿಸತೊಡಗಿದರು. ಅನಾಥ ಶವಗಳನ್ನು ಹೂಳುವಾಗ ಸ್ತ್ರೀಯರು ಅಲ್ಲಿ ಪ್ರತ್ಯಕ್ಷರಾಗಿ ಗೋಳಾಡುತ್ತಾ, ಆ ಶವಕ್ಕೆ ತಾವೇ ವಾರಸುದಾರರೆಂದು ಅತೀವ ದುಃಖವನ್ನು ತೋರ್ಪಡಿಸಿ ಅತ್ತು, ಗೋಗರೆದು ಹೆಣವನ್ನು ಪಡೆದು, ಬಳಿಕ ಅದನ್ನು ಲಾಭಕ್ಕೆ ಮಾರಿಕೊಳ್ಳುತ್ತಿದ್ದರು. ಶವಗಳ ಅಪಹರಣದ ಸುವರ್ಣಯುಗ (Golden Age of Body Snatching) ಎಂದೇ ಆ ಕಾಲ ಪ್ರಸಿದ್ಧವಾಗಿತ್ತು!

ಶವದ ಅಪಹರಣ ಕೃತ್ಯವನ್ನು ಅತಿ ಗೌಪ್ಯವಾಗಿಡಲಾಗುತ್ತಿತ್ತು. ಶವ ಹೂಳುವ ಪ್ರಕ್ರಿಯೆಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ದೃಢಪಡಿಸಿಕೊಳ್ಳಲು ಅಪರಿಚಿತ ವ್ಯಕ್ತಿಯೊಬ್ಬ ಬೇಟೆಗಾರನ ಸೋಗಿನಲ್ಲಿ ತನ್ನ ಹೆಗಲಿಗೆ ಬಂದೂಕು ನೇತುಹಾಕಿಕೊಂಡು ಹತ್ತಿರದಲ್ಲೇ ನಿಂತು, ಏನೂ ಅರಿಯದವನಂತೆ ಎಲ್ಲ ತಮಾಷೆ ನೋಡಿ, ಖಚಿತಪಡಿಸಿಕೊಳ್ಳುತ್ತಿದ್ದ. ಶವಗಳನ್ನು ಹೂಳುವ ಮಾಹಿತಿಯನ್ನು ನೇರವಾಗಿ ಶವಗಳ್ಳರಿಗೆ ಒದಗಿಸದೆ, ದೂತನ ಮೂಲಕ ಅಥವಾ ಔಷಧ ವ್ಯಾಪಾರಿಯ ಮೂಲಕ ಸಾಂಕೇತಿಕವಾಗಿ ರವಾನಿಸಿ, ಶವವನ್ನು ಯಾವ ರುದ್ರಭೂಮಿಯಲ್ಲಿ, ಯಾವ ಸಮಯ ಹೂಳುತ್ತಿದ್ದಾರೆ ಎಂಬ ಸಕಲ ಮಾಹಿತಿಯನ್ನೂ ಒದಗಿಸಲಾಗುತ್ತಿತ್ತು. ಇದರಿಂದ ರಾತ್ರಿ ವೇಳೆ ಅನವಶ್ಯಕವಾಗಿ ಶವಗಳನ್ನು ಹುಡುಕದೆ, ನೇರವಾಗಿ ಶವವಿರುವ ಸ್ಥಳಕ್ಕೆ ಬಂದು ಇಳಿಯಬಹುದಿತ್ತು. ಮಧ್ಯರಾತ್ರಿ ನಾಲ್ಕು ಜನ ಒಂದು ವಾಹನದಲ್ಲಿ ಬರುತ್ತಿದ್ದರು. ಮೂವರು ಶವ ಹೂತಿದ್ದ ಸ್ಮಶಾನ ಭಾಗದಲ್ಲಿ ಇಳಿಯುತ್ತಿದ್ದರು. ಚಾಲಕ ವಾಹನದೊಡನೆ ಸಮೀಪದಲ್ಲೇ ನಿಗದಿತ ಸ್ಥಳದಲ್ಲಿ ಸಿದ್ಧನಾಗಿ ಕಾಯುತ್ತಿದ್ದ.

ಶವಪೆಟ್ಟಿಗೆ (coffin) ಯ ಮೇಲ್ಭಾಗದಲ್ಲಿ ಸಣ್ಣದೊಂದು ರಂಧ್ರವನ್ನು ಕೊರೆದು, ಅದರ ಮೂಲಕ ಮುಚ್ಚಳವನ್ನು ಎಬ್ಬಿಸಿ ತೆಗೆದು, ಶವವನ್ನು ಹೊತ್ತು ವಾಹನದಲ್ಲಿಡುತ್ತಿದ್ದರು. ಶವವನ್ನು ಸಾಮಾನ್ಯವಾಗಿ 4-5 ಅಡಿ ಆಳದಲ್ಲಿ ಹೂಳುತ್ತಿದ್ದುದರಿಂದ ಅದನ್ನು ಹೊರತೆಗೆಯಲು ಪ್ರಯತ್ನವಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಉದ್ದವಾದ ಕೋಲಿನ ಒಂದು ತುದಿಗೆ 'ಜೆ' ಆಕಾರದ ಕೊಕ್ಕೆ ಯನ್ನು ಬಿಗಿದು, ಕೊಕ್ಕೆಯನ್ನು ಶವದ ಗಲ್ಲಕ್ಕಿಟ್ಟು ಮೀಟಿ ಮೇಲಕ್ಕೆತ್ತುತ್ತಿದ್ದರು. ಇದರಿಂದ ಶವದ ಮುಖ ಭಾಗಗಳಿಗೆ ಕೆಲವೊಮ್ಮೆ ಲಘುವಾಗಿ ಪೆಟ್ಟಾಗುತ್ತಿತ್ತು. ಶವವನ್ನೆತ್ತಿ ಹೊರತೆಗೆದ ಬಳಿಕ ಯಾರಿಗೂ ಸಂಶಯ ಬಾರದಿರಲು ಖಾಲಿ ಶವಪೆಟ್ಟಿಗೆಯನ್ನು ಮತ್ತೆ ಮೊದಲಿನಂತೆಯೇ ಮುಚ್ಚಿ ಸಮಾಧಿ ಸ್ಥಳದಲ್ಲಿಟ್ಟು ದುರಸ್ತಿಮಾಡಿ ಹೋಗುತ್ತಿದ್ದರು. ಅಲ್ಪಾವಧಿಯಲ್ಲಿ ಇಷ್ಟೆಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದ್ದವು.


1537ರಲ್ಲಿ ತಮ್ಮ ವೈದ್ಯ ವ್ಯಾಸಂಗವನ್ನು ಯಶಸ್ವಿಯಾಗಿ ಮುಗಿಸಿದ ವೆಸೇಲಿಯಸ್ ಇಟಲಿಯ ಪಡುವ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. ವೈದ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಅಂಗರಚನಾಶಾಸ್ತ್ರದ ಬಗ್ಗೆ ಸರಣಿ ಉಪನ್ಯಾಸಗಳನ್ನು ಮಾಡುತ್ತಾ ಅಸಲಿ ಮಾನವ ಶವಗಳನ್ನು ಅವರ ಮುಂದಿಟ್ಟುಕೊಂಡು ಅದನ್ನು ಕೊಯ್ದು ಪ್ರತಿಯೊಂದು ಅಂಗದ ರಚನೆ ಮತ್ತು ಕಾರ್ಯಚರಣೆಯನ್ನು ವಿಶದವಾಗಿ ವಿವರಿಸಿ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಪಾಠ ಮಾಡುತ್ತಾ ಬಂದರು. ಇದರಿಂದ ವಿದ್ಯಾರ್ಥಿಗಳಿಗೆ ಅಂಗಗಳ ಪೂರ್ಣ ಮಾಹಿತಿ ಲಭಿಸುತ್ತಿತ್ತು. ಈ ರೀತಿಯ ಉಪನ್ಯಾಸಗಳಿಂದ ವೆಸೇಲಿಯಸ್ ಎಲ್ಲರ ಅಚ್ಚುಮೆಚ್ಚಿನ ಉಪನ್ಯಾಸಕರಾಗಿ ಮಿಂಚಿದರು. ವೆಸೇಲಿಯಸ್‌ನ ಉಪನ್ಯಾಸಗಳಿಗೆ ವಿದ್ಯಾರ್ಥಿಗಳು ಹಾಗೂ ಇತರ ಪ್ರಾಧ್ಯಾಪಕರು ಪಾಠದ ಕೋಣೆಯಲ್ಲಿ ಕಿಕ್ಕಿರಿದು ನೆರೆದು ನಿಶ್ಶಬ್ದದಿಂದ ಆಲಿಸುತ್ತಿದ್ದರು. ಶವಗಳನ್ನು ತಾವಾಗಿಯೇ ಸ್ವತಃ ಕೊಯ್ದು ನಡೆಸಿದ ಅಧ್ಯಯನದಿಂದ, ಗಾಲನ್ ಬೋಧಿಸಿದ್ದ ಸುಮಾರು 200ಕ್ಕೂ ಹೆಚ್ಚು ಮಾಹಿತಿಗಳು ತಪ್ಪಾಗಿದ್ದವೆಂದು ವೆಸೇಲಿಯಸ್ ತೋರಿಸಿಕೊಟ್ಟರು.

ಹೆಣಗಳನ್ನು ಕೊಯ್ದು ಅಧ್ಯಯನ ಮಾಡುತ್ತ ಬಂದ ವೆಸೇಲಿಯಸ್‌ಗೆ ದೇಹದ ಅಂಗಾಂಗಗಳ ನಿಖರ ಮಾಹಿತಿ ಲಭ್ಯವಾಯಿತು. ಜೊತೆಗೆ ಹೆಣ ಕದಿಯುವ ಕೌಶಲವೂ ತೀಕ್ಷ್ಣವಾಯಿತು! ಈ ಎರಡೂ ತಾಂತ್ರಿಕತೆಗಳನ್ನು ವೆಸೇಲಿಯಸ್ ತಮ್ಮ ಶಿಷ್ಯರಿಗೆ ಉಪದೇಶ ಮಾಡಿದರು. ಹೆಣ ಕದಿಯುವ ಕಲೆಯಲ್ಲಿ ವಿದ್ಯಾರ್ಥಿಗಳು ಗುರುಗಳನ್ನೇ ಮೀರಿಸತೊಡಗಿದರು! ಕದ್ದುತಂದ ಹೆಣಗಳನ್ನು ಯಾರೂ ಗುರುತಿಸದಂತೆ, ಯಾರಿಗೂ ಸಂದೇಹ ಬರದಂತೆ ಅದಕ್ಕೆ ವೈದ್ಯ ಪೋಷಾಕು, ಎದೆಕವಚ (Apron) ತೊಡಿಸಿ, ಅದರ ಮೇಲೆ medicine ಸಿಂಪಡಿಸಿ, ಅಕ್ಕಪಕ್ಕದಲ್ಲಿ ಇಬ್ಬರು ವಿದ್ಯಾರ್ಥಿಗಳು ತಮ್ಮ ಹೆಗಲ ಮೇಲೆ ಒಂದು ಕೈ ಇರಿಸಿ, ತಮ್ಮ ಸಹಪಾಠಿಯೊಬ್ಬ ಅತಿಯಾಗಿ medicine ಸೇವಿಸಿ, ಅವನಿನಲ್ಲಿ ನಡೆಯಲಾರದೆ ಕುಸಿದಿದ್ದಾನೆಂದು, ಅವನನ್ನು ಪ್ರಯಾಸಪಟ್ಟು ಪ್ರಯೋಗಾಲಯಕ್ಕೆ ನಡೆಸಿಕೊಂಡು ಹೋಗುತ್ತಿರುವುದಾಗಿ ಸುಳ್ಳು ಹೇಳಿ, ಇತರ ಸಹಪಾಠಿಗಳು ಹೆಣ ಕಾಣಿಸದಂತೆ ಅದನ್ನು ಸುತ್ತುವರಿದು, ಶವವನ್ನು ನಡೆಸಿಕೊಂಡು ಹೋಗಿ, ಅಲ್ಲಿ ಅದನ್ನು ಕೊಯ್ದು ಅಧ್ಯಯನ ಮಾಡುತ್ತಿದ್ದರಂತೆ! 

ಆಡಮ್ ಎಂಬ ಒಬ್ಬ ತರುಣ ತನ್ನ ಒಂದು ಪಕ್ಕೆಲುಬನ್ನು (rib) ಮುರಿದು ಅದರಿಂದ ಈವ್ ಎಂಬ ತರುಣಿಯನ್ನು ಸೃಷ್ಟಿಸಿದನೆಂದು ಬೈಬಲ್ (Bible) ನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಪ್ರಭಾವಿತರಾಗಿದ್ದ ಗಾಲನ್, ಪುರುಷರಿಗೆ ಮಹಿಳೆಯರಿಗಿಂತ ಒಂದು ಪಕ್ಕೆಲುಬು ಕಡಿಮೆಯಿದೆ ಎಂದೇ ಅನೇಕ ವರ್ಷಗಳಿಂದಲೂ ವೈದ್ಯ ವಿದ್ಯಾರ್ಥಿಗಳಿಗೆ ಬೋಧಿಸುತ್ತಾ ಬಂದಿದ್ದರು. ಆದರೆ ಸ್ತ್ರೀ ಪುರುಷರಿಬ್ಬರಲ್ಲೂ ಪಕ್ಕೆಲುಬುಗಳ ಸಂಖ್ಯೆ ಒಂದೇ ಆಗಿದೆ ಎಂದು ವೆಸೇಲಿಯಸ್‌ನ ಶವ ಕೊಯ್ತಗಳಿಂದ ತಿಳಿಯಿತು. ಎರಡು ಹೃತ್ಕುಕ್ಷಿಗಳ ಮಧ್ಯೆ ರಕ್ತ ಪರಿಚಲನೆಯಾಗುವುದೆಂದೂ, ಕೆಳದವಡೆಯು ಒಂದಕ್ಕಿಂತ ಹೆಚ್ಚು ಮೂಳೆಗಳಿಂದ ಮಾಡಲ್ಪಟ್ಟಿದೆ ಎಂದೂ ಗಾಲನ್ ಮಾನವನ ದೇಹರಚನೆ (The Structure of the Human Body) ಎಂಬ ತಮ್ಮ ಪುಸ್ತಕದಲ್ಲಿ ಬರೆದಿದ್ದರು. ಇವೆಲ್ಲ ಮಾಹಿತಿಗಳು ತಪ್ಪಾದವೆಂದು ವೆಸೇಲಿಯಸ್ ತೋರಿಸಿಕೊಟ್ಟರು. ಗಾಲನ್‌ರ ಉಪನ್ಯಾಸಗಳನ್ನೇ ಆಧಾರವಾಗಿಟ್ಟುಕೊಂಡು ಪಾಠ ಬೋಧಿಸುತ್ತಿದ್ದ ಅನೇಕ ಶಿಕ್ಷಕರು ವೆಸೇಲಿಯಸ್‌ನ ಪಾಠಪ್ರವಚನದ ವೈಖರಿಯಿಂದ ಪ್ರೇರಿತರಾಗಿ, ಗಾಲನ್‌ರ ಅನೇಕ ತಪ್ಪು ಹೇಳಿಕೆಗಳನ್ನು ತ್ಯಜಿಸಿ ವೆಸೇಲಿಯಸ್‌ನ ಮಾಹಿತಿಯನ್ನು ಅನುಸರಿಸಿದರು. ಇದರಿಂದ ಕೋಪಗೊಂಡ ಗಾಲನ್‌ರ ಹಿಂಬಾಲಕರು, ಗಾಲನರ ವಿವರಣೆಗಳು ಸರಿಯೆಂದೂ, ಗಾಲನ್ರ ಕಾಲಕ್ಕೂ ವೆಸೇಲಿಯಸ್‌ನ ಕಾಲಕ್ಕೂ ನಡುವಿನ ಅಂತರದಲ್ಲಿ ಮಾನವನ ದೇಹ ರಚನೆಯಲ್ಲೇ ಬದಲಾವಣೆಗಳಾಗಿರುವುದರಿಂದ ಇಂತಹ ವ್ಯತ್ಯಾಸಗಳು ಸಹಜವೆಂದು ವಾದಿಸಿದರು! ಅವರು ವೆಸೇಲಿಯಸ್‌ನ ವಿಧಾನಗಳನ್ನು ಕಟುವಾಗಿ ಟೀಕಿಸಲಾರಂಭಿಸಿದರು. ಇದರಿಂದ ತೀವ್ರವಾಗಿ ಬೇಸರಗೊಂಡ ವೆಸೇಲಿಯಸ್ ತಾವು ರಚಿಸಿದ್ದ ವೈದ್ಯ ಪುಸ್ತಕಗಳೆಲ್ಲವನ್ನೂ ಬೆಂಕಿಯಲ್ಲಿ ಸುಟ್ಟು ತಮ್ಮ ವೈದ್ಯಶಾಲೆಯನ್ನು ಮುಚ್ಚಿ, ಮದುವೆಯಾಗಿ, ರಾಜವೈದ್ಯರಾಗಿ ಮುಂದುವರೆದರು.

ವೆಸೇಲಿಯಸ್ ರಾಜವೈದ್ಯರಾದದ್ದನ್ನು ಸಹಿಸದ ಇತರ ವೈದ್ಯರು ಮತ್ತು ಪಾದ್ರಿಗಳನೇಕರು, ಆಸ್ಥಾನ ಪಂಡಿತರೊಬ್ಬರನ್ನು ಹತ್ಯೆಗೈದರೆಂದು ವೆಸೇಲಿಯಸ್ ಮೇಲೆ ಸುಳ್ಳು ಆರೋಪಣೆ ಹೊರಿಸಿದರು. ರಾಜನು ವೆಸೇಲಿಯಸ್‌ನ ಶಿಕ್ಷೆಯನ್ನು ಸಡಿಲಿಸಿ, ಅವರನ್ನು ತೀರ್ಥಯಾತ್ರೆಗೆ ಕಳುಹಿಸಿಕೊಟ್ಟನು. ವೆಸೇಲಿಯಸ್ ಯಾನ ಮಾಡುತ್ತಿದ್ದ ಹಡಗು ಬಿರುಗಾಳಿಗೆ ಸಿಲುಕಿ ಮುಳುಗಿ ಹೋಯಿತು. ವೆಸೇಲಿಯಸ್‌ನನ್ನು ರಕ್ಷಿಸಿ ತರಲಾಯಿತು. ಆದರೆ, ಅವರು ಸಾವನ್ನಪ್ಪಿದರು.

ತಮ್ಮ ಜೀವನದ ಅಂತ್ಯದಲ್ಲಿ, ತಾವು ತಮ್ಮ ಶಿಷ್ಯರಿಗೆ ಹೆಣಗಳನ್ನು ಕದಿಯಲು ಪ್ರೋತ್ಸಾಹಿಸಿದ್ದ ಬಗ್ಗೆ ತಮ್ಮ ವಿಷಾದ ವ್ಯಕ್ತಪಡಿಸಿ ‘ಹೆಣಗಳನ್ನು ಹೂಳುವ ಸ್ಥಳದ ಬಗ್ಗೆ ಗಮನ ಕೊಡಬೇಕೆಂದು ನನ್ನ ಶಿಷ್ಯರಿಗೆ ನಾನು ಮಾರ್ಗದರ್ಶನ ಮಾಡಬಾರದಾಗಿತ್ತು. ಚಿಕಿತ್ಸೆಗಾಗಿ ನನ್ನನ್ನು ಹುಡುಕಿಕೊಂಡು ಬರುವ ರೋಗಿಗಳ ಆರೋಗ್ಯಸ್ಥಿತಿ ಬಗ್ಗೆ, ಅವರ ಕಳೇಬರಗಳನ್ನು ಕದಿಯಲು ಸುಲಭವಾಗುವಂತೆ ಮರಣೋತ್ತರ ಅವರನ್ನು ಹೂಳುವ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸಲು ನನ್ನ ಶಿಷ್ಯರಿಗೆ ಉಪದೇಶಿಸಬಾರದಾಗಿತ್ತು’ ಎಂದು ವೆಸೇಲಿಯಸ್ ತಮ್ಮ ಅಸಮಾಧಾನದಿಂದ ಪಶ್ಚಾತ್ತಾಪಪಟ್ಟಿದ್ದರು.

ವೆಸೇಲಿಯಸ್‌ನಂತಹ ಕ್ರಾಂತಿಕಾರಿ ವೈದ್ಯರು ಅಂದು ಜನಿಸದಿದ್ದರೆ ಶೈಶವಾವಸ್ಥೆ (Infancy) ಯಲ್ಲಿದ್ದ ವೈದ್ಯಶಾಸ್ತ್ರವು ಹೇಗೆ ಬೆಳೆಯುತ್ತಿತ್ತೋ ಎಂದು ಊಹಿಸಲೂ ಆಗದು. ಸೆರೆಂಡಿಪಿಟಿ (Serendipity) ಯು ಕಾಲಾನುಕಾಲಕ್ಕೆ ಇಂತಹ ಮೇಧಾವಿಗಳನ್ನು ಸೃಷ್ಟಿಸಿ ಮನುಕುಲವನ್ನು ರಕ್ಷಿಸುತ್ತಲೇ ಬಂದಿದೆ.

ಒಮರ್ ಯಾಘಿ ಎಂಬ ಆಣ್ವಿಕ ವಾಸ್ತು ಶಿಲ್ಪಿ!!!

ಒಮರ್ ಯಾಘಿ ಎಂಬ ಆಣ್ವಿಕ ವಾಸ್ತು ಶಿಲ್ಪಿ!!!

                   ✍️ ರಾಮಚಂದ್ರ ಭಟ್ ಬಿ.ಜಿ. 



ಸುಸುಮು ಕಿತಗಾವಾ (Susumu Kitagawa), ರಿಚರ್ಡ್ ರಾಬ್ಸನ್ (Richard Robson) ಮತ್ತು ಒಮರ್ ಎಂ. ಯಾಘಿ (Omar M. Yaghi) ಅವರಿಗೆ 2025 ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು (Nobel Prize in Chemistry 2025) ಹೊಸ ಮಾದರಿಯ ಆಣ್ವಿಕ ವಾಸ್ತುಶಿಲ್ಪದ (molecular architecture) ಅಭಿವೃದ್ಧಿಗಾಗಿ ನೀಡಲಾಗಿದೆ. 

https://cdn-hnicp.nitrocdn.com/KsPFrvaqlnWDChuafpXrQoiUQhYTrYbz/assets/images/optimized/rev-604a158/atoco.com/wp-content/uploads/2024/06/omar-yaghi-tang-prize.jpg

ವಿಜ್ಞಾನಲೋಕದಲ್ಲಿ ಮೆಟಲ್-ಆರ್ಗ್ಯಾನಿಕ್ ಫ್ರೇಮ್‌ವರ್ಕ್‌ಗಳು (MOFs) ಮತ್ತು ಕೊವೆಲೆಂಟ್-ಆರ್ಗ್ಯಾನಿಕ್ ಫ್ರೇಮ್‌ವರ್ಕ್‌ಗಳು (COFs) ಎಂಬ ಮಾಂತ್ರಿಕ ವಸ್ತುಗಳನ್ನು ಸೃಷ್ಟಿಸಿ ಕ್ರಾಂತಿ ಮಾಡಿದ ಮಹಾನ್ ವಿಜ್ಞಾನಿ ಒಮರ್ ಮ್ವಾನ್ನೆಸ್ ಯಾಘಿ ಅವರ ಪಯಣವು, ಕೇವಲ ಪ್ರಯೋಗಾಲಯದ ಸಾಧನೆಯಲ್ಲ. ಅದು ಕನಸು, ಕುತೂಹಲ, ಬದುಕಿನ ಕಡೆಗಿನ ಅದಮ್ಯ ಉತ್ಸಾಹ ಮತ್ತು ಮಾನವೀಯತೆಯನ್ನೊಳಗೊಂಡ ಕೂಡಿದ ಅದ್ಭುತ ಪ್ರೇರಣಾದಾಯಕ ಕಥೆ. 


https://cdn-hnicp.nitrocdn.com/KsPFrvaqlnWDChuafpXrQoiUQhYTrYbz/assets/images/optimized/rev-604a158/atoco.com/wp-content/uploads/2023/07/atoco-founder-square4-1200.jpg

2017: Albert Einstein World Award of Science

ಬಾಲ್ಯದ ಕಿಡಿ- ರಸಾಯನಶಾಸ್ತ್ರದೆಡೆಗೆ ಒಲವು : 

ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ ಒಮರ್ ಯಾಘಿ ಅವರ ವಿಜ್ಞಾನದ ಪಯಣ ಅನಿರೀಕ್ಷಿತ ತಿರುವಿನಿಂದ ಶುರುವಾಯಿತು. ಜೋರ್ಡಾನ್‌ನ ಅಮ್ಮಾನ್‌ನಲ್ಲಿ ವಿದ್ಯುತ್ ಹಾಗೂ ನೀರಿನ ಸೌಲಭ್ಯವಿಲ್ಲದ ಒಂದೇ ಕೋಣೆಯಲ್ಲಿ ತಮ್ಮ ಅನೇಕ ಅಣ್ಣ-ತಮ್ಮಂದಿರ ಮತ್ತು ಅಕ್ಕ-ತಂಗಿಯರೊಂದಿಗೆ ಬೆಳೆದ ಯಾಘಿಗೆ ಶಾಲೆಯೇ ಕಷ್ಟದ ಜೀವನದಲ್ಲಿ ಒಂದು ಆಶಾ ಕಿರಣವಾಯಿತು. ಹತ್ತು ವರ್ಷದ ಬಾಲಕನಾಗಿದ್ದಾಗ, ಒಮ್ಮೆ, ಬೀಗ ಹಾಕಿದ ಶಾಲಾ ಗ್ರಂಥಾಲಯಕ್ಕೆ ನುಸುಳಿ, ಶೆಲ್ಫ್‌ನಿಂದ ಒಂದು ಪುಸ್ತಕವನ್ನು ತೆಗೆದರು. ಪುಟ ತೆರೆಯುತ್ತಿದ್ದಂತೆ, ಅರ್ಥವೇ ಆಗದ ಆದರೆ ಆಕರ್ಷಕ ಚಿತ್ರಗಳು ಅವರ ಕಣ್ಣಿಗೆ ಬಿದ್ದವು ಅದು ಅಣು ರಚನೆಗಳೊಂದಿಗಿನ ಅವರ ಮೊದಲ ಪರಿಚಯವಾಗಿತ್ತು. ಈ ನೋಟವೇ Love at first sight  ಎಂಬಂತೆ ಬಿಡದ ಬಂಧವಾಯಿತು. ‘ಪ್ರಪಂಚದ ಪ್ರತಿಯೊಂದು ವಸ್ತು ಹೇಗೆ ನಿರ್ಮಿತವಾಗಿದೆ?’ ಎಂಬ ಬಾಲ್ಯದ ಪ್ರಶ್ನೆ ಮತ್ತು ಅದಕ್ಕೆ ಉತ್ತರ ಕಂಡುಕೊಳ್ಳುವ ಕುತೂಹಲವೇ ಅವರ ವಿಜ್ಞಾನ ಲೋಕದೆಡೆಗಿನ ಅವರ ಪಯಣಕ್ಕೆ ಭದ್ರ ಬುನಾದಿ ಹಾಕಿತು. ಹದಿನೈದನೆಯ ವಯಸ್ಸಿನಲ್ಲಿ, ಕುಟುಂಬದ ಒತ್ತಾಸೆಯಂತೆ, ಕುಟುಂಬದ ಉಳಿತಾಯದ ಹಣವನ್ನು ಪಡೆದುಕೊಂಡು ಅಮೆರಿಕಾಗೆ ಪ್ರಯಾಣ ಬೆಳೆಸಿದರು. ಅಲ್ಲಿ ಯಾಘಿ, ರಸಾಯನಶಾಸ್ತ್ರದತ್ತ ಆಕರ್ಷಿತರಾದರು. ಅಲ್ಲಿ ಅವರು ಪರಮಾಣುಗಳನ್ನು ಇಟ್ಟಿಗೆಗಳಂತೆ ಜೋಡಿಸಿ ಹೊಸ ಅಣುರಚನೆಗಳನ್ನು ನಿರ್ಮಿಸುವ ಕಲೆ 'ಅಣು ವಾಸ್ತುಶಿಲ್ಪ'ಹೊಸಲೋಕಕ್ಕೆ ಕಾಲಿಟ್ಟರು. ಎಲ್ಲರೂ ಹಿಡಿಯುವ ಹಾದಿ ನನಗೆ ಬೇಕಿಲ್ಲ. ನಾನು ನನ್ನದೇ ಹೊಸ ಹಾದಿಯನ್ನು ನಿರ್ಮಿಸಬೇಕು‌ ಎಂದುಕೊಂಡರು.  ಪದೇಪದೇ ಬಾಲ್ಯದ ನೋವು ಅವರನ್ನು ಕಾಡುತ್ತಿತ್ತು. ಇದರಿಂದ ತಮ್ಮ ಸಂಶೋಧನೆಗಳು ಜನಸಾಮಾನ್ಯರ ಬವಣೆಗಳನ್ನು ನಿವಾರಿಸುವಂತಿರಬೇಕು ಎನ್ನುವ ಛಲವನ್ನು ಮೈಗೂಡಿಸಿಕೊಂಡರು. ಮರಳುಗಾಡಾದ ಜೋರ್ಡಾನ್‌ನಲ್ಲಿ ಜಲಕ್ಷಾಮ ಬಹು ಸಾಮಾನ್ಯವಾಗಿತ್ತು. ಇದಕ್ಕೇನಾದರೂ ಮಾಡಲೇಬೇಕು ಎನ್ನುವ ದೃಢ ನಿರ್ಧಾರವನ್ನು ಮಾಡಿದರು. 

ನವೀನ ವಿಧಾನದ ಅನ್ವೇಷಣೆ: MOFಗಳ ಹುಟ್ಟು ಹೊಸ ವಸ್ತುಗಳನ್ನು ವಿನ್ಯಾಸಗೊಳಿಸುವ ಕಲೆಯು ಯಾಘಿ ಅವರನ್ನು ಪ್ರಭಾವಿಸಿತು. ವಿವಿಧ ರಾಸಾಯನಿಕಗಳನ್ನು ಕಾಸುವ ಪ್ರಕ್ರಿಯೆಗೆ ಒಳಪಡಿಸಿದಾಗ, ಅಪೇಕ್ಷಿತ ಅಣುವಿನೊಂದಿಗೆ ಅನೇಕ ಅನಪೇಕ್ಷಿತ ಉಪ ಉತ್ಪನ್ನಗಳೂ ಉಂಟಾಗಿ ಸಂಶೋಧನೆಗೆ ತೊಡಕನ್ನು ಒಡ್ಡುತ್ತಿದ್ದವು. ಆದರೆ ಆದರೆ ಯಾಘಿ ಅವರ ದೃಷ್ಟಿ ಸ್ಪಷ್ಟವಾಗಿತ್ತು. ಸಂಶೋಧಕನಿಗೆ ಇರಲೇಬೇಕಾದ ಅಪಾರ ತಾಳ್ಮೆ ಅವರಿಗೆ ಸಿದ್ಧಿಸಿತ್ತು. ಅಣುಗಳನ್ನು ಬಟ್ಟೆ ನೇಯುವಂತೆ ನೇಯ್ದು ಹೊಸದನ್ನು ಸೃಜಿಸುವ ಕನಸು ಕಾಣುತ್ತಿದ್ದರು. 1992ರಲ್ಲಿ ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸಂಶೋಧನಾ ತಂಡದ ಮುಖ್ಯಸ್ಥರಾಗಿ ತಮ್ಮ ಸಂಶೋಧನೆಗಳನ್ನು ಮುಂದುವರೆಸಿದರು. ಅಲ್ಲಿ ಅವರು ಹೆಚ್ಚು ನಿಯಂತ್ರಿತ ರೀತಿಯಲ್ಲಿ ವಸ್ತುಗಳನ್ನು ರಚಿಸಬಯಸಿದರು. LEGO ರಚನೆಗಳೊಂದಿಗೆ ನೀವು ಆಡಿರಬಹುದು. ಆ ತುಂಡುಗಳಂತೆ ವಿಭಿನ್ನ ರಾಸಾಯನಿಕ ಘಟಕಗಳನ್ನು ತಾರ್ಕಿಕವಾಗಿ ಜೋಡಿಸಿ ದೊಡ್ಡ ಸ್ಫಟಿಕಗಳನ್ನು ನಿರ್ಮಿಸುವ ಬಗ್ಗೆ ಸಂಶೋಧನೆಯನ್ನು ನಡೆಸಲಾರಂಭಿಸಿದರು. ಈ ಪ್ರಯತ್ನದಲ್ಲಿ ಅನೇಕ ವೈಫಲ್ಯಗಳ ನಂತರ, ಅವರು ಲೋಹದ ಅಯಾನುಗಳನ್ನು ಸಾವಯವ ಅಣುಗಳೊಂದಿಗೆ ಸಂಯೋಜಿಸಲು ಪ್ರಾರಂಭಿಸಿ ಯಶ ಗಳಿಸಿದರು. 1995ರಲ್ಲಿ ಯಾಘಿ ಎರಡು ವಿಭಿನ್ನ ದ್ವಿ-ಆಯಾಮದ ವಸ್ತುಗಳ ರಚನೆಯನ್ನು ಪ್ರಕಟಿಸಿದರು; ಇವು ತಾಮ್ರ ಅಥವಾ ಕೋಬಾಲ್ಟ್‌ನಿಂದ ಬಂಧಿಸಲ್ಪಟ್ಟ ಬಲೆಗಳಂತಿದ್ದವು. ಅವು ಅತಿಥಿ ಅಣುಗಳನ್ನು ತಮ್ಮ ರಂಧ್ರಗಳಲ್ಲಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದವು ಮತ್ತು 350°C ನಷ್ಟು ಹೆಚ್ಚಿನ ತಾಪಮಾನದಲ್ಲೂ ಸ್ಥಿರವಾಗಿದ್ದವು. ಈ ವಸ್ತುಗಳಿಗೆ ಅವರು 'ಮೆಟಲ್-ಆರ್ಗ್ಯಾನಿಕ್ ಫ್ರೇಮ್‌ವರ್ಕ್' (MOF) ಎಂಬ ಹೆಸರನ್ನು ನೀಡಿದರು.

ವಿಸ್ಮಯಕಾರಿ MOF-5 ಮತ್ತು ಅದರ ಅನ್ವಯಗಳು: 

 1999ರಲ್ಲಿ ಅವರು MOF-5 ಅನ್ನು ಜಗತ್ತಿಗೆ ಪರಿಚಯಿಸಿದರು. ಈ ವಸ್ತುವು ವಿಜ್ಞಾನ ಕ್ಷೇತ್ರದಲ್ಲಿ ಒಂದು ಉತ್ಕೃಷ್ಟ ವಸ್ತು ಎನಿಸಿಕೊಂಡಿದೆ. ಇದು ಖಾಲಿಯಾಗಿದ್ದರೂ 300°C ವರೆಗೆ ಕುಸಿಯದೆ ಸ್ಥಿರವಾಗಿರುವ, ಅಸಾಧಾರಣವಾದ ವಿಶಾಲವಾದ ಆಂತರಿಕ ಜಾಗವನ್ನು ಹೊಂದಿರುವ ಅಣು ರಚನೆಯಾಗಿತ್ತು. ಅನೇಕ ವಿಜ್ಞಾನಿಗಳನ್ನು ಬೆರಗುಗೊಳಿಸಿದ್ದು, ಈ ವಸ್ತುವಿನ ಘನ ಜಾಗದಲ್ಲಿ ಅಡಗಿರುವ ಅಗಾಧವಾದ ಮೇಲ್ಮೈ ವಿಸ್ತೀರ್ಣ. ಕೇವಲ ಕೆಲವು ಗ್ರಾಂ MOF-5 ಒಂದು ಫುಟ್‌ಬಾಲ್ ಮೈದಾನದಷ್ಟು ದೊಡ್ಡ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುತ್ತದೆ! ಇದು ಸಾಂಪ್ರದಾಯಿಕ ಜಿಯೋಲೈಟ್‌ಗಳಿಗಿಂತ (zeolites) ಅದೆಷ್ಟೋ ಪಟ್ಟು ಹೆಚ್ಚು ಅನಿಲವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ನೀಡುತ್ತದೆ. ಇದೇ ಅವಧಿಯಲ್ಲಿ ಸುಸುಮು ಕಿಟಗಾವಾ ಅವರಂತಹ ವಿಜ್ಞಾನಿಗಳು MOFಗಳನ್ನು ಜಿಗುಟು ಮತ್ತು ರೂಪ ಬದಲಾಯಿಸುವ ಗುಣವುಳ್ಳ ವಸ್ತುಗಳನ್ನಾಗಿ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದರು ಇದು ಶ್ವಾಸಕೋಶದಂತೆ ಅನಿಲವನ್ನು ಒಳಗೆಳೆದು ಹೊರಹಾಕುವ ಸಾಮರ್ಥ್ಯವನ್ನು ಹೊಂದಿತ್ತು.

 ತಾರ್ಕಿಕ ವಿನ್ಯಾಸ ಮತ್ತು ಭವಿಷ್ಯದ ಪರಿಹಾರಗಳು

Molecular weaving

ಮೆಟಲ್-ಆರ್ಗ್ಯಾನಿಕ್ ಫ್ರೇಮ್‌ವರ್ಕ್ಸ್ (MOF) ಮತ್ತು ಕೋವಲೆಂಟ್ ಆರ್ಗ್ಯಾನಿಕ್ ಫ್ರೇಮ್‌ವರ್ಕ್ಸ್ (COF) ಜೊತೆಗೆ ಆಣ್ವಿಕ ನೆಯ್ಗೆ ತಂತ್ರಜ್ಞಾನವನ್ನು (molecular weaving technologies) ಬೆಸೆದರು. ಅಜೈವಿಕ ಮತ್ತು ಸಾವಯವ ಸಂಯುಕ್ತಗಳ ಸಂಶ್ಲೇಷಣೆ, ರಚನೆ ಹಾಗೂ ಗುಣಲಕ್ಷಣಗಳು ಮತ್ತು ಹೊಸ ಸ್ಫಟಿಕದಂತಹ ವಸ್ತುಗಳ ವಿನ್ಯಾಸ ಮತ್ತು ನಿರ್ಮಾಣವನ್ನು ಅವರ ಸಂಶೋಧನೆಯು ಒಳಗೊಂಡಿದೆ. ಪರಮಾಣುವಿನ ನಿಖರತೆಯೊಂದಿಗೆ (atomic precision) ನವೀನ ವಸ್ತುಗಳನ್ನು ವಿನ್ಯಾಸಗೊಳಿಸುವ ಮತ್ತು ಅಭಿವೃದ್ಧಿಪಡಿಸಿದರು.  2002 ಮತ್ತು 2003ರಲ್ಲಿ ಯಾಘಿ, MOFಗಳನ್ನು ತಾರ್ಕಿಕವಾಗಿ ಮಾರ್ಪಡಿಸಿ ವಿವಿಧ ಗುಣಲಕ್ಷಣಗಳನ್ನು ನೀಡಲು ಸಾಧ್ಯ ಎಂದು ತೋರಿಸಿದರು. ಅವರು MOF-516 ವಿಭಿನ್ನ ರೂಪಗಳನ್ನು ಉತ್ಪಾದಿಸಿದರು. ಇವು ಮೂಲ ವಸ್ತುವಿಗಿಂತ ದೊಡ್ಡ ಮತ್ತು ಚಿಕ್ಕ ರಂಧ್ರಗಳನ್ನು ಹೊಂದಿದ್ದವು. ಒಂದು ರೂಪವು ಅಪಾರ ಪ್ರಮಾಣದ ಮೀಥೇನ್ ಅನಿಲವನ್ನು ಸಂಗ್ರಹಿಸಬಲ್ಲ ಸಾಮರ್ಥ್ಯ ಹೊಂದಿತ್ತು. ಇದು RNG-ಇಂಧನ ವಾಹನಗಳಲ್ಲಿ ಬಳಕೆಯಾಗಬಹುದು ಎಂದು ಯಾಘಿ ಸೂಚಿಸಿದ್ದರು. ಇಂದು MOFಗಳು ಜಗತ್ತನ್ನು ಆಕ್ರಮಿಸಿಕೊಂಡಿವೆ. ಯಾಘಿ ಅವರ ಸಂಶೋಧನಾ ತಂಡ ಅರಿಜೋನಾದ ಮರುಭೂಮಿಯ ಗಾಳಿಯಿಂದ ನೀರನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ರಾತ್ರಿಯ ಸಮಯದಲ್ಲಿ, ಅವರ MOF ವಸ್ತುವು ನೀರಾವಿಯನ್ನು ಹೀರಿಕೊಳ್ಳುತ್ತದೆ ಮತ್ತು ಸೂರ್ಯನ ಶಾಖದಿಂದ ಬೆಳಿಗ್ಗೆ ಶುದ್ಧ ಕುಡಿಯುವ ನೀರನ್ನು ಬಿಡುಗಡೆ ಮಾಡುತ್ತದೆ. MOF-303, MIL-101, UiO-67, ZIF-8, CALF-20, NU-1501 ನಂತಹ ನಿರ್ದಿಷ್ಟ MOFಗಳು ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುವಿಕೆ, ಕಲುಷಿತ ನೀರನ್ನು ಶುದ್ಧೀಕರಿಸುವಿಕೆ, ಅಪರೂಪದ ರೇರ್‌ ಅರ್ಥ್ ಧಾತುಗಳ ಹೊರತೆಗೆಯುವಿಕೆ, ವಿಷಕಾರಿ ಅನಿಲಗಳನ್ನು ಹೀರಿಕೆ, ಹೈಡ್ರೋಜನ್ ಸಂಗ್ರಹಣೆ ಮೊದಲಾದ ಅನ್ವಯಗಳೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಮಹತ್ವವನ್ನು ಸಾಬೀತುಪಡಿಸಿವೆ.

ವಿಜ್ಞಾನಕ್ಕಿಂತ ಹೆಚ್ಚು ಮಾನವೀಯ ಮೌಲ್ಯಗಳು : 

ಒಮರ್ ಯಾಘಿ ಅವರು ವಿಜ್ಞಾನವನ್ನು ಕೇವಲ ಒಂದು ವೃತ್ತಿಯಂತೆ ನೋಡದೆ, ಮಾನವೀಯತೆಗೆ ಪ್ರಯೋಜನವಾಗುವ ಕಲೆಯಂತೆ ಕಾಣುತ್ತಾರೆ. "ಪ್ರಕೃತಿ ಅತ್ಯುತ್ತಮ ವಿಜ್ಞಾನಿ; ನಾವು ಅದರಿಂದ ಕಲಿಯಬೇಕು," ಎಂಬುದು ಅವರ ನಂಬಿಕೆ. ಅವರ  ಪ್ರಯೋಗಾಲಯದಲ್ಲಿ ದುಬಾರಿ ರಾಸಾಯನಿಕವೊಂದು ಕೈಜಾರಿ ಚೆಲ್ಲಿ ಹೋದಾಗ, ಸಿಡಿಮಿಡಿಗೊಳ್ಳದೇ "ಇದು ಮತ್ತೆ ಹೀಗೆ ಮಾಡಬಾರದೆಂದು ಪ್ರಕೃತಿಯೇ ನಮಗೆ ಪಾಠ ಹೇಳಿದೆ!" ಎಂದು ನಗು ಸ್ನೇಹಭಾವಗಳೊಂದಿಗೆ ಉತ್ತರಿಸುವ ಅವರು ಸದಾ ತಂಡಕ್ಕೆ ಪ್ರೇರಣೆ. ಅನಿರೀಕ್ಷಿತವಾಗಿ ಹೊಸ ಸ್ಫಟಿಕ ರೂಪುಗೊಂಡಾಗ ಮಕ್ಕಳಂತೆ ಸಂಭ್ರಮಿಸುವ ಅವರ ಮನಸ್ಸು ಸಂಶೋಧನೆಯೊಳಗಿನ ಆನಂದವನ್ನು ಪ್ರತಿಬಿಂಬಿಸುತ್ತದೆ. ಶುದ್ಧ ನೀರು, ಇಂಧನ ಸಂಗ್ರಹಣೆ, ಹವಾಮಾನ ಬದಲಾವಣೆ ಮುಂತಾದ ಜಾಗತಿಕ ಸವಾಲುಗಳಿಗೆ ವಿಜ್ಞಾನದ ಮೂಲಕ ಪರಿಹಾರ ಹುಡುಕುವುದು ಅವರ ಸಂಶೋಧನೆಯ ಅಂತಿಮ ಗುರಿ. ವಿದ್ಯಾರ್ಥಿಗಳಿಗೆ ಸದಾ ಸ್ಫೂರ್ತಿಯ ಚಿಲುಮೆಯಾಗಿರುವ ಯಾಘಿ ಅವರ ವಿನಯ, ದೃಢಸಂಕಲ್ಪ ಮತ್ತು ನವಿರಾದ ಹಾಸ್ಯಭಾವಗಳ ಅವರು ಮಾರ್ಗದರ್ಶಕರಾಗಿ ವಿಶಿಷ್ಟರಾಗಿದ್ದಾರೆ. ಅವರ ಈ ಸಾಧನೆಗಳಿಗೆ ವುಲ್ಫ್ ಪ್ರಶಸ್ತಿ (ರಸಾಯನಶಾಸ್ತ್ರ) ಮತ್ತು ಕಿಂಗ್ ಫೈಸಲ್ ಅಂತರಾಷ್ಟ್ರೀಯ ಪ್ರಶಸ್ತಿ (ವಿಜ್ಞಾನ) ಸೇರಿದಂತೆ ಅನೇಕ ಅಂತರಾಷ್ಟ್ರೀಯ ಗೌರವಗಳು ಸಂದಿವೆ. 

ಭವಿಷ್ಯದ ಭರವಸೆ: 

21ನೇ ಶತಮಾನದ ವಸ್ತುಗಳು ಕೆಲವು ಸಂಶೋಧಕರು ಮೆಟಲ್-ಆರ್ಗ್ಯಾನಿಕ್ ಫ್ರೇಮ್‌ವರ್ಕ್‌ಗಳು '21ನೇ ಶತಮಾನದ ವಸ್ತು' ಆಗುವ ಸಾಮರ್ಥ್ಯ ಹೊಂದಿವೆ ಎಂದು ನಂಬುತ್ತಾರೆ. ಒಮರ್ ಯಾಘಿ, ಸುಸುಮು ಕಿಟಗಾವಾ ಮತ್ತು ರಿಚರ್ಡ್ ರಾಬ್ಸನ್ ಅವರಂತಹ ವಿಜ್ಞಾನಿಗಳು ರಸಾಯನಶಾಸ್ತ್ರಜ್ಞರಿಗೆ ನಾವು ಎದುರಿಸುತ್ತಿರುವ ಕೆಲವು ಮಹತ್ವದ ಜಾಗತಿಕ ಸವಾಲುಗಳನ್ನು ಪರಿಹರಿಸಲು ಹೊಸ ಅವಕಾಶಗಳನ್ನು ಒದಗಿಸಿದ್ದಾರೆ. ಆಲ್ಫ್ರೆಡ್ ನೋಬೆಲ್ ಅವರ ಇಚ್ಛೆಯಂತೆ, ಅವರು ಮಾನವಕುಲಕ್ಕೆ 'ಅತ್ಯಂತ ದೊಡ್ಡ ಪ್ರಯೋಜನ'ವನ್ನು ತಂದಿದ್ದಾರೆ. ಒಮರ್ ಯಾಘಿ ಅವರ ಜೀವನವು ಕೇವಲ ವೈಜ್ಞಾನಿಕ ಸಾಧನೆಯ ಕಥೆಯಲ್ಲ, ಅದು ಕನಸು, ಕುತೂಹಲ, ಸೃಜನಾತ್ಮಕತೆ ಮತ್ತು ಸದಾ ನಗುಮುಖದಿಂದ ಸವಾಲುಗಳನ್ನು ಎದುರಿಸುವ ದೃಢಸಂಕಲ್ಪದ ಪ್ರೇರಕ ಕಥೆ. ವಿಜ್ಞಾನ ಎಂದರೆ ಕೇವಲ ಪ್ರಯೋಗವಲ್ಲ, ಅದು ನಗುವಿನೊಂದಿಗೆ ಭವಿಷ್ಯದ ಕನಸು ಕಟ್ಟುವ ಅದ್ಭುತ ಕಲೆಯಾಗಿದೆ. 

ಅವರ ಮಾತಿನಲ್ಲೇ ಅವರ ಕತೆಯನ್ನು ಕೇಳಿ https://atoco.com/our-founder/ 

ವಿಶ್ವದಲ್ಲಿ ತಮಸ್ಸಿನದೇ ಕಾರುಬಾರು !!!

 ವಿಶ್ವದಲ್ಲಿ ತಮಸ್ಸಿನದೇ ಕಾರುಬಾರು !!!

 

ಲೇಖಕರು: ಕೃಷ್ಣ ಸುರೇಶ

 






 ನಾವು ಕಾಣುವ, ಕೇಳುವ ,ನಮ್ಮ ಅನುಭವಕ್ಕೆ ಬರುವ ಎಲ್ಲಾ ವಸ್ತುಗಳು ದ್ರವ್ಯವೆಂಬ ಮೂಲಭೂತ ಪದಾರ್ಧದಿಂದ ಕೂಡಿದೆ. ದ್ರವ್ಯದ ಮತ್ತೊಂದು ರೂಪವೇ ಶಕ್ತಿ ಅಥವಾ ಚೈತನ್ಯ.  ಶಕ್ತಿಗೆ ಹಲವಾರು ರೂಪಗಳು.  ಉಷ್ಣಶಕ್ತಿ. ಬೆಳಕಿನಶಕ್ತಿ, ಪರಮಾಣುಶಕ್ತಿ, ರಾಸಾಯನಿಕಬಂಧಶಕ್ತಿ, ವಿದ್ಯುಚ್ಛಕ್ತಿ, ಯಾಂತ್ರಿಕಶಕ್ತಿ ಇತ್ಯಾದಿ.. ಆಕಾಶದಲ್ಲಿ ಗ್ರಹಗಳು, ನಕ್ಷತಗಳು  ನಕ್ಷತ್ರ ಮಂಡಲಗಳು, ನೀಹಾರಿಕೆಗಳು  ಮುಂತಾಗಿ ಹತ್ತು ಹಲವಾರು ಬಗೆಯ  ಕಾಯಗಳು ನಮಗೆ ಗೋಚರಿಸುವುದು ಅವುಗಳಿಂದ ಹೊರಸೂಸಲ್ಪಡುವ ಅಥವಾ ಪ್ರತಿಫಲಿತವಾಗುವ ವಿಕಿರಣಗಳಿಂದ.   ಹಾಗೆಯೆ ನಮ್ಮ ಸುತ್ತಮುತ್ತಲಿರುವ ವಸ್ತುಗಳು ನಮಗೆ ಗೋಚರಿಸುವುದು ಬೆಳಕು ಅವುಗಳ ಮೇಲೆ ಬಿದ್ದು ಪ್ರತಿಫಲಿಸಿದಾಗ ನಮ್ಮ ಕಣ್ಣುಗಳು ಅವುಗಳನ್ನು ಗ್ರಹಿಸುತ್ತವೆ. ವಿದ್ಯತ್‌ ದೀಪ ನಮಗೆ ಕಾಣುವುದು ಅದರಿಂದ ಹೊರಬೀಳುವ ಬೆಳಕಿನಿಂದ, ಒಂದು ಕೆಂಪು ಹೂವು  ನಮ್ಮ ಕಣ್ಣಿಗೆ ಕೆಂಪಗೆ ಕಾಣಲು ಕಾರಣ ಆ ಕೆಂಪು ಹೂವು ತನ್ನ ಮೇಲೆ ಬೀಳುವ ಬಿಳಿಯ ಬೆಳಕಿನಲ್ಲಿನ ಎಲ್ಲಾ ಬಣ್ಣಗಳನ್ನು ಹೀರಿಕೊಂಡು, ಕೆಂಪು ಬಣ್ಣವನ್ನು ಮಾತ್ರ ಪ್ರತಿಫಲಿಸುವುದರಿಂದ. ಬೆಳ್ಳನೆಯ ಗೋಡೆಯು ಬಿಳಿಯ ಬೆಳಕಿನಲ್ಲಿನ ಯಾವುದೇ ಬಣ್ಣವನ್ನು ಹೀರದೆಯೆ ಎಲ್ಲವನ್ನು ಪ್ರತಿಫಲಿಸುವತ್ತದೆಯಾದ್ದರಿಂದ ಅದು ನಮಗೆ ಬೆಳ್ಳಗೆ ಕಾಣುತ್ತದೆ.ಕಪ್ಪನೆಯ ವಸ್ತುವಿನ ಮೇಲೆ ಬೀಳುವ ಬೆಳಕನ್ನು ಆ ವಸ್ತು ಪ್ರತಿಫಲಿಸದೆ ಎಲ್ಲವನ್ನೂ ಹೀರಿಕೊಳ್ಳುವುದರಿಂದ ಅದು ನಮಗೆ ಕಪ್ಪಾಗಿಯೇ ಕಾಣುತ್ತದೆ. ಅಂತೆಯೆ  ಯಾವುದೇ ಬೆಳಕನ್ನು ಹೊರಸೂಸದೆಯೆ, ಪ್ರತಿಫಲಿಸದಯೇ  ಅಥವಾ ಬೆಳಕನ್ನು ಹೀರದಿರುವ ವಸ್ತುವೊಂದು ಬಹುತೇಕ ವಿಶ್ವವನ್ನು ಆವರಿಸಿದೆ ಎಂದರೆ ಆಶ್ಚರ್ಯವಲ್ಲವೇ? ಹೌದು, ಇಂತಹ ದ್ರವ್ಯವನ್ನು ತಮೋದ್ರವ್ಯ ಅಥವಾ ಡಾರ್ಕ್‌ ಮ್ಯಾಟರ್‌ ಎಂದು ಕರೆಯಲಾಗುತ್ತದೆ. ನಮ್ಮ ವಿಶ್ವದಲ್ಲಿ  ಸಾಮಾನ್ಯ ದ್ರವ್ಯದ ಪ್ರಮಾಣ ೫%ರಷ್ಟು, ತಮೋದ್ರವ್ಯದ ಪ್ರಮಾಣ ೨೭% ರಷ್ಟು ಮತ್ತುಉಳಿದ ೭೮% ರಷ್ಟು ಮತ್ತೊಂದು ವಿಸ್ಮಯ ಎನ್ನಬಹುದಾದ ತಮೋಶಕ್ತಿ ಆವರಿಸಿದೆ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಈ  ಇಡೀ ವಿಶ್ವದಲ್ಲಿನ  ನಕ್ಷತ್ರಮಂಡಲ ನೀಹಾರಿಕೆ ಮುಂತಾದವುಗಳ ವ್ಯವಸ್ಥೆಯನ್ನು  ನಿರ್ವಹಣೆ ಮಾಡುವುದು ತಮೋದ್ರವ್ಯವೇ ಎಂದು ವಿಜ್ಞಾನಿಗಳ ಒಂದು ಊಹೆಯಾಗಿದೆ.



     ನಮ್ಮ ಸುತ್ತಲಿನ ವಸ್ತುಗಳು, ಆಕಾಶದಲ್ಲಿ ಕಾಯಗಳು ಗೋಚರ ಬೆಳಕು ಇಲ್ಲವೆ ನೇರಳಾತೀತ ವಿಕಿರಣ, ರಕ್ತಾತೀತಕಿರಣ. ಗಾಮಾಕಿರಣಗಳು, ಕ್ಷಕಿರಣ, ರೇಡಿಯೋತರಂಗಗಳನ್ನು ಇವುಗಳಲ್ಲಿ ಯಾವುದಾದರೊಂದು ಒಂದು ಅಥವಾ ಹೆಚ್ಚು ಬಗೆಯ ವಿಕಿರಣಗಳನ್ನು ಹೊರಸೂಸುವ ಇಲ್ಲವೇ ಪ್ರತಿಫಲಿಸುವ ಮೂಲಕ ತಮ್ಮ ಇರುವಿಕೆಯನ್ನು ಪ್ರಕಟಿಸುತ್ತವೆ.  ತಮೋದ್ರವ್ಯದ ವಿಶೇಷವೆಂದರೆ  ಇದು ಯಾವುದೆವಿಕಿರಣಗಳನ್ನುಹೊರಸೂಸುವ, ಪ್ರತಿಫಲಿಸುವ ಇಲ್ಲವೇ ಹೀರಿಕೊಳ್ಳುವ ಗುಣಹೊಂದಿಲ್ಲ. ಇವುಗಳ ಇರುವಿಕೆಯು ಕೇವಲ ಇವು ಉಂಟುಮಾಡುವ ಗುರುತ್ವ ಬಲದಿಂದ ಮಾತ್ರ ಪ್ರಕಟವಾಗುತ್ತದೆ. ತಮೋದ್ರವ್ಯವು ಸಾಮಾನ್ಯ ದ್ರವ್ಯದೊಂದಿಗೆ ತನ್ನ ಗುರುತ್ವ ಬಲದಿಂದ ವರ್ತಿಸುತ್ತದೆ. ತಮೋದ್ರವ್ಯಕ್ಕೆ ಸಾಮಾನ್ಯ ದ್ರವ್ಯದಂತೆಯೆ ರಾಶಿ ಮತ್ತು ಸ್ಥಳವನ್ನು ಆಕ್ರಮಿಸುವ ಗುಣಗಳಿವೆ. ಆದರೆ,ಮೇಲೆವಿವರಿಸಿದಂತೆ ಇದು ವಿಕಿರಣಗಳನ್ನು ಹೊರಸೂಸುವುದಿಲ್ಲ, ಪ್ರತಿಫಲಿಸುವುದಿಲ್ಲ..

       ತಮೋದ್ರವ್ಯವನ್ನು ಕುರಿತ ವಿಜ್ಞಾನಿಗಳ ಜಿಜ್ಞಾಸೆಗೆ ನೂರುವರ್ಷಗಳ ಇತಿಹಾಸವಿದೆ. ಫ್ರಿಟ್ಜ್‌  ಜುಕಿ ಎಂಬ ಸ್ವಿಸ್‌ ಖಗೋಳ ವಿಜ್ಞಾನಿ ೧೯೩೩ರಲ್ಲಿ ತಮ್ಮ ಒಂದು ಪ್ರಬಂಧದಲ್ಲಿ ತಾವು ಗಮನಿಸಿದ ಒಂದು ವಿಶಿಷ್ಟ ಅಂಶವನ್ನು ಪ್ರಸ್ತಾಪಿಸಿದ್ದರು.  ಆಕಾಶದಲ್ಲಿನ ಕೋಮ ಗೆಲಾಕ್ಷಿ ಗುಚ್ಛವನ್ನು ಅವರು ಅಧ್ಯಯನ ಮಾಡುತ್ತಿರುವಾಗ ಅದರಲ್ಲಿನ ಗೆಲಾಕ್ಸಿಗಳು ಸಾಮಾನ್ಯಕ್ಕಿಂತ ಅತಿ ವೇಗವಾಗಿ ಚಲಿಸುತ್ತಿರುವುದನ್ನು   ಗಮನಿಸಿದರು. ಲೆಕ್ಕಾಚಾರದಂತೆ ಅದರ ಗೋಚರ ರಾಶಿಯಿಂದಾಗುವ ಅತ್ಯಲ್ಪ  ಗುರುತ್ವಕ್ಕೆ ಹೋಲಿಸಿದರೆ ಅದರ ವೇಗಮತ್ತು ಆವೇಗದ ಕಾರಣದಿಂದ ಉಂಟಾಗುವ ಕೇಂದ್ರ ವಿಮುಖ ಬಲವು ಅತಿ ಹೆಚ್ಚು ಇತ್ತು.  ಆದರೂ, ಅದರಲ್ಲಿನ ಗೆಲಾಕ್ಸಿಗಳು ಮತ್ತು ನಕ್ಷತ್ರಗಳು ಚದುರಿಹೋಗದೆಯೇ ಗೆಲಾಕ್ಸಿ ಗುಚ್ಛಕ್ಕೆ ಅಂಟಿಕೊಂಡಿರುವುದು ವಿಸ್ಮಯವೆನಿಸಿತು. ಆಕಾಶಕಾಯಗಳ ಚಲನೆಯ ವೇಗ ಅವುಗಳ ರಾಶಿಗೆ ನೇರ ಅನುಪಾತದಲ್ಲಿರುತ್ತದೆ. ೧೯೭೦ರ ಸುಮಾರಿನಲ್ಲಿ  ವೆರಾರೂಬಿನ್‌ ಎಂಬ ಖಗೋಳಶಾಸ್ತ್ರಜ್ಞ ಸುರುಳಿ ಗೆಲಾಕ್ಸಿಗಳನ್ನು ಅಧ್ಯಯನ ಮಾಡುತ್ತಿರುವಾಗ ಇದೇ ವಿಶೇಷವನ್ನು ಮತ್ತೊಮ್ಮೆ ಗಮನಿಸಿದರು. ಸುರುಳಿ ಗೆಲಾಕ್ಸಿಗಳು ಸುತ್ತುತ್ತಿರುವ ವೇಗಕ್ಕೆ ಅದರ ಹೊರಅಂಚಿನಲ್ಲಿರುವ ನಕ್ಷತ್ರಗಳು ಕೇಂದ್ರವಿಮುಖ ಬಲದ ಕಾರಣದಿಂದ ಗೆಲಾಕ್ಸಿಗಳಿಂದ ಹೊರಕ್ಕೆ ಎಸೆಯಬೇಕಿತ್ತಾದರೂ ಆ ನಕ್ಷತ್ರಗಳು ಗೆಲಾಕ್ಸಿಗಳಿಗೆ ಅಂಟಿಕೊಂಡಿರುವುದಕ್ಕೆ ಕಾರಣ ತಿಳಿಯದಾದರು. ಆಗ  ನಾಲ್ಕು ದಶಕಗಳ ಕಾಲ ತಣ್ಣಗಾಗಿದ್ದ ತಮೋದ್ರವ್ಯದ ವಿಚಾರ ಮತ್ತೆ  ಮುನ್ನೆಲೆಗೆ ಬಂದಿತು. ಲೆಕ್ಕಾಚಾರಕ್ಕಿಂತ ಗೆಲಾಕ್ಸಿ ಗುಚ್ಛದ ಅತಿಯಾದ ವೃತ್ತೀಯ ವೇಗಕ್ಕೆ ಕಾರಣ ಆ ಗುಚ್ಛದಲ್ಲಿ ಕಾಣದೆ ಅಡಗಿ ಕುಳಿತಿರುವ ದ್ರವ್ಯವಾಗಿದೆ. ಅತಿಯಾದ ವೇಗದಿಂದ ಉಂಟಾಗುವ ಹೊರಸೆಳೆತದ ಹೊರೆತಾಗಿಯೂ ಗೆಲಾಕ್ಸಿಗಳು ಮತ್ತು ನಕ್ಷತ್ರಗಳು ಚದುರಿಚಲ್ಲಿ ಹೋಗದಂತೆ ಹಿಡಿದಿಟ್ಟಿರುವ ಗುರುತ್ವ ಬಲವನ್ನು ಬೀರುತ್ತಿರುವುದು ಅದೇ ಅಗೋಚರ ದ್ರವ್ಯವೇ ಆಗಿದೆ ಎಂಬ ತೀರ್ಮಾನಕ್ಕೆ ರೂಬಿನ್‌ಬಂದರು..ಹೀಗೆ ಬಲವಾದ ಹೊರಸೆಳೆತದ ಹೊರೆತಾಗಿಯೂ ನಕ್ಷತ್ರಗಳು ಮತ್ತು ಗೆಲಾಕ್ಸಿಯನ್ನು ಅವುಗಳ ವ್ಯವಸ್ಥೆಯ ಒಳಗಡೆಯೇ ಹಿಡಿದಿಟ್ಟಿರುವ ಒಂದು ಅಂಟಿನಂತೆ ಈ ತಮೋದ್ರವ್ಯ ವರ್ತಿಸುತ್ತದೆಎಂದುರೂಬಿನ್‌ ಊಹೆ ಮಾಡಿದರು. ರೂಬಿನ್ರರ ಈ ಸಂಶೋಧನೆ ತಮೋದ್ರವ್ಯದ ಪರಿಕಲ್ಪನೆಗೆ ಒಂದು ಬಲವಾದ ಸಾಕ್ಷ್ಯವನ್ನು ಒದಗಿಸಿದ್ದರಿಂದ ಬಹುತೇಕ ವಿಜ್ಞಾನಿಗಳು ತಮೋದ್ರವ್ಯದ ಅಸ್ತಿತ್ವವನ್ನು ಒಪ್ಪಿಕೊಳ್ಳುವಂತೆ ಆಯಿತು.


    ಕಪ್ಪು ರಂದ್ರದ ಅಪಾರ ಗುರುತ್ವದ ಕಾರಣ, ಅದರಿಂದ ಬೆಳಕೂ ಸಹ ಹೊರಬರಲಾರದು. ಹೀಗಾಗಿ, ಕಪ್ಪು ರಂದ್ರವನ್ನು ನೇರವಾಗಿ ನೋಡಲಾಗದು.  ಕಪ್ಪು ರಂದ್ರದ ಅಸ್ತಿತ್ವವನ್ನು ಅದು ಉಂಟುಮಾಡುವ ಗುರುತ್ವ ಮಸೂರದ ಪರಿಣಾಮದಿಂದ ತಿಳಿಯಬಹುದು. ಕಪ್ಪು ರಂದ್ರದ ಹಿಂದೆ ಇರುವ ನಕ್ಷತ್ರಗಳಿಂದ ನಮಗೆ ಬರುವ ಬೆಳಕಿನ ವಕ್ರೀಭವನದ ಕಾರಣದಿಂದ ಅದನ್ನು ಪತ್ತೆ ಮಾಡಲಾಗುತ್ತದೆ. ನಮಗೆಲ್ಲ ತಿಳಿದಂತೆ, ಕಪ್ಪು ರಂದ್ರದ ಅಪಾರವಾದ ಗುರುತ್ವ ಬಲ ಬೆಳಕನ್ನೂ ಸಹ ತನ್ನ ಒಳಗೆ ಸೆಳೆಯಬಲ್ಲದು. ಹೀಗಿರುವಾಗ, ಕಪ್ಪು ರಂದ್ರದ ಹಿಂದಿರುವ ನಕ್ಷತ್ರದಿಂದ ನಮಗೆ  ಬರುತ್ತಿರುವ ಬೆಳಕು ಅದರ ಪಕ್ಕದಿಂದ ಹಾದು ಬರುವಾಗ ಕಪ್ಪುರಂದ್ರದ ಗುರುತ್ವದ ಕಾರಣದಿಂದ ಅದರ ಕಡೆಗೆ ತುಸು ಬಾಗಿರುತ್ತದೆ. ಇದು, ಬೆಳಕು ಮಸೂರದ ಮೂಲಕ ಹಾದುಬರುವಾಗ ವಕ್ರೀಭವನದಿಂದ ಆಗುವ ಪರಿಣಾಮದಂತೆಯೇ ಇರುತ್ತದೆ. ಹೀಗಾಗಿ, ದೂರದ ಆಕರದಿಂದ ಬರುತ್ತಿರುವ ಬೆಳಕು

ವಕ್ರೀಭವನ ಹೊಂದಿರುವುದನ್ನು ಗಮನಿಸಿ ಆ ನೇರದಲ್ಲಿ ಕಪ್ಪು ರಂದ್ರವಿರುವುದನ್ನು  ಖಗೋಳಶಾಸ್ತ್ರಜ್ಞರು ಖಾತ್ರಿ ಮಾಡಿಕೊಳ್ಳುತ್ತಾರೆ. ತಮೋದ್ರವ್ಯ ಈ ಮೊದಲೆ ತಿಳಿಸಿದಂತೆ ಯಾವುದೇ ವಿಕಿರಣಗಳನ್ನು ಹೊರಸೂಸದು, ಪ್ರತಿಫಲಿಸದು.  ಇಂತಿರುವ ತಮೋದ್ರವ್ಯ ಗುರುತ್ವ ಬಲವನ್ನು ಮಾತ್ರ ಹೊಂದಿರುತ್ತದೆ. ಆದ್ದರಿಂದ, ಇದರ ಇರುವಿಕೆಯನ್ನು  ಪತ್ತೆಮಾಡಲು ಗುರುತ್ವ ಮಸೂರ ಪರಿಣಾಮವನ್ನು ಖಗೋಳಶಾಸ್ತ್ರಜ್ಞರು ಆಶ್ರಯಿಸುತ್ತಾರೆ.

 

ತಮೋದ್ರವ್ಯಕ್ಕೆ ಸಂಬಂಧಿಸಿದಂತೆ ವಿಜ್ಞಾನಿಗಳು ಸಾಕಷ್ಟು ಮಾಹಿತಿಯನ್ನು ಕಲೆಹಾಕಿದ್ದು,  ತಮೋದ್ರವ್ಯ ಎಂದರೆ ಏನು? ಅದು ವಿಶ್ವದಲ್ಲಿ ಎಲ್ಲೆಲ್ಲಿ, ಹೇಗೆ  ಹರಡಿದೆ? ಎಂಬುದನ್ನು ಪತ್ತೆ ಮಾಡುವ ಕಾರ್ಯದಲ್ಲಿ ನಿರತರಾರಗಿದ್ದಾರೆ. ಇಡೀ ವಿಶ್ವವನ್ನು ಅಂಟಿನಂತೆ ಬಂಧಿಸಿಟ್ಟಿರುವ ತಮೋದ್ರವ್ಯದ ರಹಸ್ಯಭೇದಿಸಿದ್ದೇ ಆದರೆ ವಿಶ್ವದ ಉಗಮ, ಬೆಳವಣಿಗೆಯನ್ನು ಅಲ್ಲದೆ ಮುಂದೆ ಈ ವಿಶ್ವ  ಏನಾಗುತ್ತದೆ ಎಂಬುದನ್ನೂ ಸಹ ನಿಖರವಾಗಿ ಊಹಿಸಲು ಸಾಧ್ಯವಾಗುತ್ತದೆ.ತಮೋದ್ರವ್ಯ ಎಂಬುದು ಬಿಸಿಯಾದ ವಸ್ತುವೇ ಇಲ್ಲವೇ ತಂಪಾದ ವಸ್ತುವೇ ಎಂಬ ಕುತೋಹಲಕರವಾದ ಒಂದು ಪ್ರಶ್ನೆ ಏಳುವುದು ಸಹಜವೇ. ಅದು ಬಿಸಿಯಾಗಿದ್ದರೆ, ಅದರೊಳಗಿನ ಕಣಗಳು ಅತಿವೇಗದ ಚಲನೆಯಲ್ಲಿರುತ್ತವೆ. ತಂಪಾಗಿದ್ದರೆ, ಕಣಗಳ ವೇಗ ತುಂಬಾ ಕಡಿಮೆಯಿರುತ್ತದೆ. ಇದನ್ನು ಸಿಮುಲೇಷನ್‌ ಮೂಲಕ ಪರೀಕ್ಷಿಸಿದ ವಿಜ್ಞಾನಿಗಳು ಬಿಸಿಯಾದ ತಮೋದ್ರವ್ಯವಿರುವ ವಿಶ್ವವು ಈಗ ನಾವು ಕಾಣುವಂತೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ, ನಾವು ಇಂದು ಕಾಣುತ್ತಿರುವ ವಿಶ್ವದಲ್ಲಿ ತಮೋದ್ರವ್ಯದಲ್ಲಿ ಕಣಗಳು ತಂಪಾಗಿದ್ದು ನಿಧಾನಗತಿಯಲ್ಲಿರುತ್ತವೆ ಎಂದು ಸದ್ಯಕ್ಕೆ ತೀರ್ಮಾನಕ್ಕೆ ಬಂದಿದ್ದಾರೆ,

 ತಮೋದ್ರವ್ಯದಲ್ಲಿರಬಹುದಾದ ಕಣಗಳ ಬಗ್ಗೆ ಹಲವಾರು ಸಿದ್ಧಾಂತಗಳನ್ನು ಮಂಡಿಸಲಾಗಿದೆ. ದುರ್ಬಲವಾಗಿ ಪ್ರತಿಸ್ಪಂದಿಸುವ ಕಣಗಳು(WIMPs) ಎಂದು ಕರೆಯಲಾಗುವ,  ನಿಧಾನವಾಗಿ ಚಲಿಸುವ, ಅಪಾರ ರಾಶಿಯ ಭಾರಿ ಕಣಗಳು ಇದಕ್ಕೆ ಒಂದು ಉದಾಹರಣೆ. ಇವು ಸಾಮಾನ್ಯ ದ್ರವ್ಯದ ಮೂಲಕ ಅಡೆತಡೆಯಿಲ್ಲದ ಚಲಿಸಬಲ್ಲವು, ಮತ್ತು ಒಂದನ್ನೊಂದು ಪ್ರತಿಸ್ಪಂದಿಸಿದಾಗ ನಾಶವಾಗಬಲ್ಲವು ಎಂಬ ಸಿದ್ಧಾಂತ ಪ್ರಚಲಿತದಲ್ಲಿದೆ.  ಹೀಗೆ ಆದಾಗ ಅವು ಗಾಮಕಿರಣಗಳನ್ನು ಹೊರಸೂಸುತ್ತವೆ. ಎಂಬ ಊಹೆಯ ಮೇರೆಗೆ ಇಂತಹ ಗಾಮಾಕಿರಣಗಳಿಗಾಗಿ ಗೆಲಾಕ್ಸಿಗಳನ್ನು ವಿಜ್ಞಾನಿಗಳು ಅಂತರಿಕ್ಷದಲ್ಲಿ ಸ್ಥಾಪಿಸಿರುವ ದೂರದರ್ಶಕಗಳನ್ನು ಬಳಸಿ ಶೋಧವನ್ನೂ ನಡೆಸುವ ಕೆಲಸದಲ್ಲಿ ತೊಡಗಿದ್ದಾರೆ.

ವಿಶ್ವದಲ್ಲಿ ನಾವು ಕೇಳುವ ,ಕಾಣುವ,ನಮ್ಮ ಅನುಭವಕ್ಕೆ ಸಿಗುವ ದ್ರವ್ಯವು ಪರಮಾಣುಗಳಿಂದ ಮಾಡಲ್ಪಟ್ಟಿವೆ. ಆ ಪರಮಾಣುಗಳು ಎಲೆಕ್ಟ್ರಾನು, ಪ್ರೋಟಾನು ಮುಂತಾಗಿ ೧೦೦ಕ್ಕೂ ಮೀರಿದ ವಿವಧ ಬಗೆಯ ಕಣಗಳು,ಉಪಪರಮಾಣ್ವಿಕ ಕಣಗಳು ಮತ್ತು ಪ್ರತಿಕಣಗಳಿಂದ ಮಾಡಲ್ಪಟ್ಟಿದೆ.  ಹಾಗಾದರೆ, ಇಡೀ ವಿಶ್ವವನ್ನು ನಿಯಂತ್ರಿಸುವ ಈ ತಮೋದ್ರವ್ಯ ಯಾವುದರಿಂದ ಮಾಡಲ್ಪಟ್ಟಿದೆಎಂಬ ಕುತೋಹಲವಿಜ್ಞಾನಿಗಳನ್ನೂಕಾಡಿದ್ದಿದೆ.
ಈವರೆಗೆ ತಮೋದ್ರವ್ಯದಲ್ಲಿನ ಕಣಗಳ ಸಂಶೋಧನೆ ಪ್ರಾಯೋಗಿಕವಾಗಿ ಆಗದಿದ್ದರೂ ಸಿದ್ಧಾಂತಗಳ ಪ್ರಕಾರ ಈ ಕೆಲವು ಕಣಗಳನ್ನು ಊಹೆಮಾಡಲಾಗಿದೆ, ಅದರಲ್ಲಿ, ಮೊದಲನೆಯದು ದುರ್ಬಲವಾಗಿ ಪ್ರತಿಸ್ಪಂದಿಸುವ ಬೃಹತ್‌ ಕಣಗಳು(
WIMPs):ಇವು, ಭಾರವಾದ, ದೊಡ್ಡಗಾತ್ರದ ಕಣಗಳು. ವಿಕಿರಣಗಳನ್ನುಹೊರಸೂಸುವುದಾಗಲಿ, ಹೀರುವುದಾಗಲಿ, ಪ್ರತಿಫಲಿಸುವುದಾಗಲಿ ಇವುಗಳಿಂದ ಸಾಧ್ಯವಿಲ್ಲ.  ಈ ಕಣಗಳು ಪರಸ್ಪರ ಪ್ರತಿಸ್ಪಂದಿಸಿ ಗಾಮಾಕಿರಣಗಳನ್ನು ಹೊರಸೂಸಿ ನಾಶವಾಗುತ್ತವೆ.  ಎರಡನೆಯದು, ಆಕ್ಷಿಯಾನುಗಳು:ಸಾಮಾನ್ಯ ದ್ರವ್ಯದ ಉಪಪರಮಾಣ್ವಿಕ ಕಣ ಮತ್ತು ಅವುಗಳ ಪ್ರತಿಕಣಗಳು ಪರಸ್ಪರ ಸಮಮಿತಿಯಲ್ಲಿದ್ದು, ಪರಸ್ಪರ ವರ್ತಿಸಿದಾಗ ನಾಶವಾಗುತ್ತವೆ ಎಂದು ಭೌತವಿಜ್ಞಾನದ ಒಂದು ಸಿದ್ಧಾಂತ ಪ್ರತಿಪಾದಿಸುತ್ತದೆ.ಅಂದರೆ, ಎಲೆಕ್ಟ್ರಾನು ಮತ್ತು ಅದರ ಪ್ರತಿಕಣ ಪಾಸಿಟ್ರಾನು, ಪ್ರೋಟಾನು ಮತ್ತು ಅದರಪ್ರತಿಕಣ ಅಂಟಿಪ್ರೋಟಾನು, ಪರಮಾಣು ಅದರ ಪ್ರತಿ ಪರಮಾಣು, ಅಂತೆಯೇ ದ್ರವ್ಯ ಮತ್ತು ಪ್ರತಿದ್ರವ್ಯ ಪರಸ್ಪರ ವರ್ತಿಸಿದಾಗ ಅವು ನಾಶವಾಗಬೇಕು. ಆದರೆ, ವಾಸ್ತವದಲ್ಲಿ ಅದು ಹಾಗೆ ಆಗುವುದಿಲ್ಲ.ಈ ವೈರುದ್ಯವನ್ನು ಕಣಭೌತವಿಜ್ಞಾನದಲ್ಲಿ ಪ್ರಬಲ ಸಿಪಿ(charge conjugation symmetry and parity symmetry) ಸಮಸ್ಯೆ ಎಂದು ಗುರ್ತಿಸಲಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಆಕ್ಸಿಯಾನುಗಳ ಸಿದ್ಧಾಂತವನ್ನು ಮುಂದಿಡಲಾಯಿತು. ತಮೋದ್ರವ್ಯವು ಇಂತಹ ಕಾಲ್ಪನಿಕ ಆಕ್ಸಿಯಾನುಗಳಿಂದ ಆಗಿರಬಹುದೆಂದು ವಿಜ್ವಾನಿಗಳ ಅಭಿಮತವಾಗಿದೆ.     ಮೂರನೆಯದು ಆದಿಮ ಕಪ್ಪುರಂದ್ರಗಳು:  ಇವು, ಪರಮಾಣಿವಿನಷ್ಟು ಚಿಕ್ಕದ್ದರಿಂದ ಆರಂಭಿಸಿ ಅತಿ ಬೃಹತ್‌ ಕಪ್ಪುರಂದ್ರದವರೆಗಿನ ಗಾತ್ರದಲ್ಲಿರಬಹುದು. ಪ್ರಸಿದ್ಧ ವಿಜ್ಞಾನಿ ಸ್ಟೀಪನ್‌ ಹಾಕಿಂಗ್‌ಪ್ರಕಾರ ವಿಶ್ವ ಉಗಮದ ಆರಂಭ ಕಾಲದಲ್ಲಿ ಸಾಮಾನ್ಯ ದ್ರವ್ಯವು ಆದಿಮ ಕಪ್ಪುರಂದ್ರಗಳಾಗಿ ತದನಂತರ ತಮೋದ್ರವ್ಯವಾಗಿ ಪರಿವರ್ತಿತವಾಗಿ ವಿಶ್ವವನ್ನು ವ್ಯಾಪಿಸಿರಬಹುದು. ವಿಶ್ವದಾದ್ಯಂತ ಹರಡಿರುವ ತಮೋದ್ರವ್ಯವು ಗೆಲಾಕ್ಸಿಗಳಲ್ಲಿನ ನಕ್ಷತ್ರಗಳು ಚದುರಿ ದೂರ ಸರಿಯದಂತೆ ಹಿಡಿದಿಟ್ಟಿರುವ ಅಂಟಿನಂತೆ ವರ್ತಿಸುತ್ತದೆ ಎಂದು ಈ ಮೇಲೆ ಹೇಳಿದೆ. ಹೀಗಿದ್ದರೂ, ಎಡ್ವಿನ್ಹಬಲ್‌ ತನ್ನ ಸಂಶೋಧನೆಯ ಮೂಲಕ ಕಂಡುಕೊಂಡಂತೆ ನಕ್ಷತ್ರಗಳು ಗೆಲಾಕ್ಸಿಗಳು ದಿನದಿಂದ ದಿನಕ್ಕೆ ನಮ್ಮಿಂದ ಮತ್ತು ಪರಸ್ಪರ ದೂರ ಸರಿಯುತ್ತಿರುವುದರ ಹಿಂದೆ ಇರುವ ಶಕ್ತಿಯಾದರೂ ಯಾವುದು? ಹೀಗೆ, ಅವು ದೂರ ಸರಿಯುವಂತೆ ಒಂದು ಕಾಣದ ಶಕ್ತಿ ಕೆಲಸ ಮಾಡುತ್ತಿರಬಹುದೆಂದು ವಿಜ್ಞಾನಿಗಳ ಊಹೆ.. ಆ ಶಕ್ತಿಯನ್ನು ಅವರು ತಮೋಶಕ್ತಿ ಎಂದು ಕರೆದಿದ್ದಾರೆ .CERN ನಂತಹ ಭೂಗತ ಕಣಗ್ರಾಹಿ ಪ್ರಯೋಗಾಲಯಗಳಲ್ಲಿ ದಶಕಗಳಿಂದ ನಡೆಸಿರುವ ಸಂಶೋಧನೆಗಳು,ಮತ್ತು ಅಂತರಿಕ್ಷದಲ್ಲಿರುವ ವಿವಿಧ ದೂರದರ್ಶಕಗಳು,ಕಂಪ್ಯೂಟರ್‌ ಬಳಸಿ ನಡೆಸಿರುವ ಸಿಮ್ಯುಲೇಷನುಗಳು ಸಂಗ್ರಹಿಸಿರುವ ಮಾಹಿತಿಯು ತಮೋದ್ರವ್ಯದ ಅಸ್ತಿತ್ವಕ್ಕೆ ಸಾಕ್ಷ್ಯಗಳನ್ನು ಒದಗಿಸುತ್ತಿವೆ. ನಾಸಾದ ಫರ್ಮಿಗ್ಯಾಮಾಕಿರಣದ ಅಂತರಿಕ್ಷ ದೂರದರ್ಶಕ ನಮ್ಮ ಗೆಲಾಕ್ಸಿ ಕ್ಷೀರಪಥದ ಕೇಂದ್ರಭಾಗದಲ್ಲಿ ವಿಸ್ಮಯಕಾರಿಯಾದ ಗ್ಯಾಮಾಕಿರಣಗಳ ಪ್ರಭೆಯೊಂದನ್ನುಪತ್ತೆಮಾಡಿದೆ. ಈ ಪ್ರಭೆಯು ತಮೋದ್ರವ್ಯದ ಹೆಜ್ಜೆಗುರುತೆಂದು ಕೆಲವರ ವಾದವಾಗಿದೆ .ಕಣ್ಣಿಗೆ ಕಾಣದ, ಕೈಗೆಎಟುಕದಿರುವ ತಮೋಶಕ್ತಿ ಮತ್ತು ತಮೋದ್ರವ್ಯಗಳು ಒಂದೇ ಅಲ್ಲದಿದ್ದರೂ ಬಿಡಿಸಲಾಗದಿರುವ ವೈಜ್ಞಾನಿಕ ವಿಸ್ಮಯಗಳೇ ಆಗಿವೆ ಎಂದರೆ ತಪ್ಪಾಗಲಾರದು.‌