ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, April 4, 2025

ಬೆಳಕನ್ನೇ ಹರಳುಗಟ್ಟಿಸಿದ ವಿಜ್ಞಾನಿಗಳು!!!

 ಬೆಳಕನ್ನೇ ಹರಳುಗಟ್ಟಿಸಿದ ವಿಜ್ಞಾನಿಗಳು!!!

                     

 ಲೇಖನ :ರಾಮಚಂದ್ರಭಟ್‌ ಬಿ.ಜಿ.


ಒಂಭತ್ತನೇ ತರಗತಿಯ ವಿಜ್ಞಾನ ಪಠ್ಯಪುಸ್ತಕವನ್ನು ಭಾಷಾಂತರಿಸುತ್ತಿದ್ದಾಗ ನನಗೆ ಇದ್ದಕ್ಕಿದ್ದಂತೆ ದ್ರವ್ಯದ ೫ನೇ ಸ್ಥಿತಿಯಾದ ಬೋಸ್-ಐನ್‌ಸ್ಟೀನ್‌ ಕಂಡನ್ಸೇಟ್‌ ಕುರಿತು ಅನೇಕ ಅನುಮಾನಗಳು ಮೂಡತೊಡಗಿದವು.  ಬೆಳಕನ್ನೂ ಹೀಗೆಯೇ ಹೆಪ್ಪುಗಟ್ಟಿಸಬಹುದೇ ? ಹೌದಾದಲ್ಲಿ, ಅದು ಹೇಗಿರಬಹುದು? ಎಂಥ ಮೂರ್ಖತನದ ಆಲೋಚನೆಗಳೊ? ಇತ್ತೀಚೆಗೆ ಬೆಳಕನ್ನೂ ಹರಳುಗಟ್ಟಿಸಿದ ವಿಜ್ಞಾನಿಗಳು ಎಂಬ ಸುದ್ದಿ ಕೇಳಿದ ಮೇಲೆ ಇನ್ನಷ್ಟುಅಚ್ಚರಿಗೆಕಾರಣವಾಯಿತು. ಇದು ವೈಜ್ಞಾನಿಕ ಜಗತ್ತಿನಲ್ಲಿ ಮಹಾನ್‌ ಅಲ್ಲೋಲಕಲ್ಲೋಲ ಹುಟ್ಟುಹಾಕಬಹುದಾದ ಸಂಶೋಧನೆಗಳಲ್ಲಿ ಒಂದು, ಎಂದೇ ಪರಿಗಣಿಸಲ್ಪಡುತ್ತದೆ.


Source : https://physics.aps.org/assets/09947a9e-c1bb-451c-9ca3-f60ad4752c79/e7_1.png  

Figure: A Bose-Einstein condensate of photons. (Top) Schmitt et al. produce a photon BEC by using an optical pump to excite dye molecules in an optical cavity. The surrounding molecules act as a heat bath and a particle reservoir. (Center) When the effective size of the reservoir is large enough, the setup produces grand-canonical conditions and Schmitt et al. observe large fluctuations in the number of particles in the condensate. (Bottom) These fluctuations disappear with a small reservoir.

ಇತ್ತೀಚಿನ ದಿನಗಳಲ್ಲಿ ವಿಜ್ಞಾನಿಗಳು ಬೆಳಕನ್ನು "ಸ್ಫಟಿಕೀಕರಿಸುವ" ಒಂದು ಅದ್ಭುತ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಇದು ಕೇವಲ ಒಂದು ಸಾಧನೆಯಲ್ಲ, ಬದಲಿಗೆ ಬೆಳಕನ್ನು ಘನವಸ್ತು ಮತ್ತು ದ್ರವದ ಗುಣಗಳನ್ನು ಒಟ್ಟಿಗೆ ಹೊಂದಿರುವ ರೀತಿಯಲ್ಲಿ ಪರಿವರ್ತಿಸುವ ಮಾಂತ್ರಿಕ ಕ್ಷಣ ! ಪೊಲಾರಿಟಾನ್ ಎಂಬ ಬೆಳಕು-ವಸ್ತು ಸಂಯೋಗದ ಮೂಲಕ ಈ ಸಾಧನೆ ಸಾಧ್ಯವಾಗಿದೆ. ಕ್ವಾಂಟಮ್ ಭೌತಶಾಸ್ತ್ರದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಕ್ವಾಂಟಮ್ ಕಂಪ್ಯೂಟಿಂಗ್, ಫೋಟೊನಿಕ್ಸ್ ಮತ್ತು ಇನ್ನೂ ಅನೇಕ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆ ತರುವ ನಿರೀಕ್ಷೆ ಇದೆ.. ಅದೆಷ್ಟು ಹೊಸ ಸಂಶೋಧನಾ ಕ್ಷೇತ್ರಗಳ ಉಗಮಕ್ಕೆಇದು ಕಾರಣವಾದೀತು. ಮಾರ್ಚ್ 5, 2025ರಂದು *ನೇಚರ್* ಪತ್ರಿಕೆಯಲ್ಲಿ ಪ್ರಕಟವಾದ ಈ ಸಂಶೋಧನೆ, ಬೆಳಕಿನ ಅಸಾಧ್ಯ ಗುಣಗಳನ್ನು ತೋರಿಸುವ ಒಂದು ರೋಮಾಂಚಕ ಕಥೆಯಾಗಿದೆ.

 ಬೆಳಕಿನ ಸ್ಫಟಿಕೀಕರಣದ ಹಿಂದಿನ ರಹಸ್ಯ : 

ಈ ಆವಿಷ್ಕಾರದ ಕೇಂದ್ರ ಬಿಂದು "ಸೂಪರ್‌ಸಾಲಿಡ್" ಎಂಬ ಅಪರೂಪದ ಮತ್ತು ವಿಚಿತ್ರವಾದ ವಸ್ತುಸ್ಥಿತಿ. ಇದು ಸ್ಫಟಿಕದಂತಹ ಘನ ರಚನೆಯನ್ನು ಹೊಂದಿದ್ದರೂ, ಸೂಪರ್‌ಫ್ಲೂಯಿಡ್‌ನಂತೆ ಘರ್ಷಣೆ ಇಲ್ಲದ ತರಲ (ಹರಿಯುವ) ಗುಣವನ್ನು ಒಳಗೊಂಡಿದೆ. ಸಾಮಾನ್ಯವಾಗಿ ಸೂಪರ್‌ಸಾಲಿಡ್‌ಗಳನ್ನು ಅತಿ ಶೀತಲ ಪರಿಸ್ಥಿತಿಯಲ್ಲಿ ಪರಮಾಣುಗಳ ಮೂಲಕ ಮಾತ್ರ ಕಾಣಬಹುದಾಗಿತ್ತು. ಆದರೆ ಇಟಲಿಯ ರಾಷ್ಟ್ರೀಯ ಸಂಶೋಧನಾ ಮಂಡಳಿಯ (CNR) ವಿಜ್ಞಾನಿಗಳ ತಂಡವು ಬೆಳಕನ್ನೇ ಈ ಪ್ರಯೋಗಕ್ಕೆ ಬಳಸಿ ಇತಿಹಾಸ ಸೃಷ್ಟಿಸಿದೆ. ಭಾರತದ IISER, ಪುಣೆಯ ಸಂಶೋಧಕರು ಕೂಡ ಫೋಟೊನಿಕ್ ಸ್ಫಟಿಕಗಳು ಮತ್ತು ಪೊಲಾರಿಟಾನ್‌ಗಳ ಕ್ವಾಂಟಮ್ ಗುಣಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. 2022ರಲ್ಲಿ ಅವರು ʼನೇಚರ್ ಫೋಟೋನಿಕ್ಸ್‌ʼನಲ್ಲಿ ಪ್ರಕಟಿಸಿದ ಲೇಖನದಲ್ಲಿ ಬೆಳಕಿನ ಕಣಗಳನ್ನು ನಿಯಂತ್ರಿಸುವ ಹೊಸ ವಿಧಾನಗಳನ್ನು ಪ್ರಸ್ತಾಪಿಸಿದ್ದರು. ಇದು ಪ್ರಸ್ತುತ ಸಂಶೋಧನೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸಾಧನೆಯಾಗಿದೆ. 

 ಇಟಲಿಯ ಸಂಶೋಧಕರು ಅಲ್ಯೂಮಿನಿಯಂ ಗ್ಯಾಲಿಯಂ ಆರ್ಸೆನೈಡ್ ಎಂಬ ಅರೆವಾಹಕ ವಸ್ತುವನ್ನು ಮೈಕ್ರೊಕ್ಯಾವಿಟಿಯಲ್ಲಿ ಇರಿಸಿ, ಬೆಳಕನ್ನು ಸೆರೆಹಿಡಿದರು. ಫೋಟಾನ್‌ಗಳು (ಬೆಳಕಿನ ಕಣಗಳು) ಮತ್ತು ಎಕ್ಸಿಟಾನ್‌ಗಳ (ಅರೆವಾಹಕದಲ್ಲಿ ಎಲೆಕ್ಟ್ರಾನ್-ರಂಧ್ರ ಜೋಡಿಗಳು) ಸಂಯೋಗದಿಂದ ಪೊಲಾರಿಟಾನ್‌ಗಳು ಉತ್ಪತ್ತಿಯಾದವು. ಈ ಪೊಲಾರಿಟಾನ್‌ಗಳನ್ನು ಫೋಟೊನಿಕ್-ಕ್ರಿಸ್ಟಲ್ ವೇವ್‌ಗೈಡ್‌ನಲ್ಲಿ ಚಲಿಸುವಂತೆ ಮಾಡಲಾಯಿತು. ಆಗ ಅವು ಸ್ವಯಂಪ್ರೇರಿತವಾಗಿ ಸ್ಫಟಿಕದಂತಹ ರಚನೆಯನ್ನು ರೂಪಿಸಿದವು. ಘರ್ಷಣೆ ಇಲ್ಲದೆ ಹರಿಯುವ ಗುಣವನ್ನು ಇವು ಕಾಯ್ದುಕೊಂಡವು. ಹೀಗೆ, ಬೆಳಕು ಸೂಪರ್‌ಸಾಲಿಡ್ ಎಂಬ ಅತಿ ಘನ ರಚನೆಯ ಜೊತೆಗೆ ತರಲಗಳ ಮಾಯಾಜಾಲ !

ಈ ಸಂಶೋಧನೆಗೆ ಸಮಾನಾಂತರವಾಗಿ, ಭಾರತೀಯ ವಿಜ್ಞಾನಿಗಳು ಕೂಡ ಕ್ವಾಂಟಮ್ ದ್ರವಗಳು ಮತ್ತು ಸೂಪರ್‌ಸಾಲಿಡ್‌ಗಳ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. 2020ರಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು ಮತ್ತು ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (TIFR)ಯ ವಿಜ್ಞಾನಿಗಳು ಬೋಸ್-ಐನ್ಸ್ಟೈನ್ ಕಂಡೆನ್ಸೇಟ್ (BEC) ಮೂಲಕ ಸೂಪರ್‌ಸಾಲಿಡ್ ಸ್ಥಿತಿಯನ್ನು ಪ್ರಯೋಗಶಾಲೆಯಲ್ಲಿ ರಚಿಸುವಲ್ಲಿ ಯಶಸ್ವಿಯಾಗಿದ್ದರು. ಈ ಸಂಶೋಧನೆ ʼಫಿಸಿಕಲ್ ರಿವ್ಯೂ ಲೆಟರ್ಸ್ʼ ನಲ್ಲಿ ಪ್ರಕಟವಾಗಿತ್ತು ಮತ್ತು ಕ್ವಾಂಟಮ್ ವಸ್ತುಗಳ ಅಸಾಧಾರಣ ಗುಣಗಳನ್ನು ಅರ್ಥಮಾಡಿಕೊಳ್ಳಲು ಹೊಸ ದಾರಿ ತೆರೆದಿತ್ತು. 

ಹಿಂದಿನ ಸಾಧನೆಗಳನ್ನು ಮೀರಿದ ಮೈಲಿಗಲ್ಲು

ಬೆಳಕನ್ನು ದ್ರವದಂತೆ ಮಾಡುವ ಪ್ರಯತ್ನ ಹೊಸದೇನಲ್ಲ. ಹತ್ತು ವರ್ಷಗಳ ಹಿಂದೆಯೇ CNR ಸಂಶೋಧಕ ಡೇನಿಯಲ್ ಸ್ಯಾನ್‌ವಿಟ್ಟೊ ಪೊಲಾರಿಟಾನ್‌ಗಳ ದ್ರವ ಗುಣವನ್ನು ತೋರಿಸಿದ್ದರು. ಆದರೆ, ಈ ಹೊಸ ಸಂಶೋಧನೆ ಒಂದು ಹೆಜ್ಜೆ ಮುಂದೆ ಹೋಗಿ, ಬೆಳಕನ್ನುಅದರ ಕ್ವಾಂಟಮ್ ಹರಿವನ್ನು ಕಳೆದುಕೊಳ್ಳದಂತೆ ಘನ ರಚನೆಯಾಗಿ ಪರಿವರ್ತಿಸಿದೆ.ಈ ಪ್ರಯೋಗದ ಸಂಕೀರ್ಣತೆಯನ್ನು ಒತ್ತಿ ಹೇಳುತ್ತಾ ಸ್ಯಾನ್‌ವಿಟ್ಟೊ "ಬೆಳಕಿನಿಂದ ಸೂಪರ್‌ಸಾಲಿಡ್ ಪಡೆದಿರುವುದು ಇದೇ ಮೊದಲು" ಎಂದು ಹೇಳಿದ್ದಾರೆ.

ಅತಿ ಶೀತಲ ಪರಮಾಣುಗಳ ಬದಲು ಅರೆವಾಹಕವನ್ನು ಬಳಸಿದ್ದು ಈ ಸಂಶೋಧನೆಯ ವಿಶೇಷತೆ. ಇದರಿಂದ ಈ ತಂತ್ರಜ್ಞಾನವನ್ನು ಸುಲಭವಾಗಿ ಬಳಸಬಹುದಾದ ತಾಪಮಾನದಲ್ಲಿ ಪರೀಕ್ಷಿಸಲು ಸಾಧ್ಯವಾಗಿದೆ. ಪೊಲಾರಿಟಾನ್‌ಗಳು ಬೆಳಕು ಮತ್ತು ದ್ರವ್ಯದ ಸೇತುವೆಯಾಗಿ, ಈ ಆವಿಷ್ಕಾರಕ್ಕೆ ದಾರಿ ಮಾಡಿಕೊಟ್ಟಿವೆ.

 ತಂತ್ರಜ್ಞಾನಕ್ಕೆ ಒಂದು ಹೊಸ ದಿಕ್ಕು:

ಬೆಳಕಿನ ಸೂಪರ್‌ಸಾಲಿಡ್ ರಚನೆ ಭವಿಷ್ಯದ ತಂತ್ರಜ್ಞಾನಗಳ ಅಭಿವೃದ್ಧಿಗೆ ಅಪೂರ್ವ ಜ್ಞಾನದ ಅಕ್ಷಯ ಗಣಿಯಾಗಬಹುದು. ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ, ಇದು ಮಾಹಿತಿಯ ಸಂಸ್ಕರಣೆ ಮತ್ತು ಸಂಗ್ರಹಣೆಗೆ ಹೊಸ ವೇದಿಕೆಯಾಗಬಹುದು.ಈಗ ಶಕ್ತಿಯ ಸಾಗಾಣಿಕೆಯಲ್ಲಿ ಶೇಕಡಾ ೪೦ರಷ್ಟು ಶಕ್ತಿಯ ನಷ್ಟವಾಗುತ್ತಿರುವುದು ಗೊತ್ತೇ ಇದೆ. ಹೊಸ ಸಂಶೋಧನೆಯಿಂದ ಘರ್ಷಣೆ ಇಲ್ಲ ಹರಿವು ಶಕ್ತಿಯನ್ನು ಅತ್ಯಂತ ಸಮರ್ಥವಾಗಿ ಸಾಗಿಸಲು ಸಹಕಾರಿಯಾಗಲಿದೆ. ಜೊತೆಗೆ ಸ್ಫಟಿಕ ರಚನೆಯಿಂದ ಸೂಕ್ಷ್ಮ ಸಂವೇದಕಗಳು ಅಥವಾ ಹೊಸ ಆಪ್ಟಿಕಲ್ ಉಪಕರಣಗಳನ್ನು ಇನ್ನಷ್ಟು ಉತ್ಕೃಷ್ಟವಾಗಿ ರೂಪಿಸಬಹುದು.

ಭಾರತೀಯ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ (ISRO) ಮತ್ತು ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (DRDO) ಈ ತಂತ್ರಜ್ಞಾನವನ್ನು ಸಂವೇದಕಗಳು ಮತ್ತು ಸುರಕ್ಷಿತ ಸಂವಹನ ವ್ಯವಸ್ಥೆಗಳಲ್ಲಿ ಬಳಸುವ ಬಗ್ಗೆ ಆಸಕ್ತಿ ತೋರಿಸಿವೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ಮತ್ತು ಸರ್ಕಾರಿ ಕ್ವಾಂಟಮ್ ತಂತ್ರಜ್ಞಾನ ಯೋಜನೆ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿವೆ. IISc, TIFR, ಮತ್ತು IISERಗಳು ಕ್ವಾಂಟಮ್ ಫೋಟೊನಿಕ್ಸ್‌ನಲ್ಲಿ ಪ್ರಪಂಚದ ಮುಂಚೂಣಿ ಸಂಸ್ಥೆಗಳಾಗಿ ಮಾರ್ಪಡುತ್ತಿವೆ.

ತಂತ್ರಜ್ಞಾನದ ಜೊತೆಗೆ, ಇದು ಶುದ್ಧ ವಿಜ್ಞಾನವಾದ ಕ್ವಾಂಟಮ್ ಭೌತಶಾಸ್ತ್ರದ ಅರಿವು ಹೆಚ್ಚಿಸಿ ಇನ್ನಷ್ಟು ಆಳವಾದ ಒಳನೋಟವನ್ನು ನೀಡುತ್ತದೆ. ಸೊರ್ಬೊನ್ ವಿಶ್ವವಿದ್ಯಾಲಯದ ಭೌತಶಾಸ್ತ್ರಜ್ಞ ಆಲ್ಬರ್ಟೊ ಬ್ರಮತಿ ಹೇಳುವಂತೆ, ಈ ಸಂಶೋಧನೆ ಕ್ವಾಂಟಮ್ ವಸ್ತುಗಳ ಸ್ಥಿತಿಗಳ ಬದಲಾವಣೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೆಳಕನ್ನೊಳಗೊಂಡ ಸೂಪರ್‌ಸಾಲಿಡ್‌ಗಳು ಭವಿಷ್ಯದಲ್ಲಿ ಇನ್ನಷ್ಟು ವಿಚಿತ್ರ ಸ್ಥಿತಿಗಳನ್ನು ಅನ್ವೇಷಿಸಲು ದಾರಿ ಮಾಡಿಕೊಡಬಹುದು.

ಮುಂದಿನ ಹಾದಿ :

ಈ ಫಲಿತಾಂಶಗಳು ರೋಮಾಂಚಕವಾಗಿದ್ದರೂ, ಈ ಹೊಸ ವಸ್ತುಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಇನ್ನಷ್ಟು ಸಂಶೋಧನೆ ಆಗಬೇಕು. ಹೆಚ್ಚಿನ ಮಾಪನಗಳು ಮತ್ತು ಪ್ರಯೋಗಗಳು ಈ ಸೂಪರ್‌ಸಾಲಿಡ್‌ನ ಗುಣಗಳನ್ನು ಸ್ಪಷ್ಟಪಡಿಸಲಿವೆ. ಮುಖ್ಯ ಸಂಶೋಧಕ ಡಿಮಿಟ್ರಿಸ್ ಟ್ರೈಪೊಗಿಯೊರ್ಗೊಸ್ ಈ  ಆಶಾಭಾವನೆ ವ್ಯಕ್ತಪಡಿಸಿದ್ದಾರೆ, "ಬೆಳಕಿನ ಹರಳುಗಳನ್ನು ಪರಮಾಣುಗಳಿಗಿಂತ ಸುಲಭವಾಗಿ ನಿಯಂತ್ರಿಸಬಹುದು" ಎಂದು ಹೇಳಿದ್ದಾರೆ.

ಕ್ವಾಂಟಮ್ ಭೌತಶಾಸ್ತ್ರದ ಈ ಪಯಣದಲ್ಲಿ, ಬೆಳಕನ್ನು ಸ್ಫಟಿಕೀಕರಿಸುವ ಈ ಸಾಧನೆ ಮಾನವ ಬುದ್ಧಿಮತ್ತೆ, ಕೃತುಶಕ್ತಿಗೆ ಸಾಕ್ಷಿಯಾಗಿದೆ. ಇದು ಕೇವಲ ಒಂದು ಪ್ರಯೋಗವಲ್ಲ, ಬದಲಿಗೆ ಭವಿಷ್ಯದಲ್ಲಿ ವಿಶ್ವದ ಮೂಲಭೂತ ತತ್ವಗಳನ್ನು ಮರುರೂಪಿಸುವ ಅಲಾದೀನನ ಮಾಂತ್ರಿಕ ದೀಪವೇ ಸರಿ!!!.  ಮುಂದಿನ ದಿನಗಳಲ್ಲಿ ಈ ಆವಿಷ್ಕಾರ ತಂತ್ರಜ್ಞಾನ ಮತ್ತು ಸತ್ಯದ ಹೊಸ ಮಾರ್ಗಗಳನ್ನು ಬೆಳಗಬಹುದು!

 

**ಉಲ್ಲೇಖಗಳು:** 

1. Nature (2025), "Light Crystallization in Quantum Materials." 

2. Physical Review Letters (2020), "Observation of Supersolidity in a Bose-Einstein Condensate." 

3. Nature Photonics (2022), "Advanced Control of Polaritons in Photonic Crystals." 

4. DST, Government of India – Quantum Mission Reports.

 

ಸತ್ಯ ಮಿಥ್ಯಗಳ ಸುತ್ತ : ಅಶೋಕ ವೃಕ್ಷ

 ಸತ್ಯ ಮಿಥ್ಯಗಳ ಸುತ್ತ : ಅಶೋಕ ವೃಕ್ಷ

 

 ಲೇಖಕರು : ರಮೇಶ, ವಿ,ಬಳ್ಳಾ ,  ಅಧ್ಯಾಪಕರು

 ಬಾಲಕಿಯರ ಸರ್ಕಾರಿ ಪೂ ಕಾಲೇಜು

 (ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ

 ಮೊ: 9739022186

     ಪ್ರಕೃತಿ ಒಂದು ಸುಂದರವಾದ ಅದ್ಭುತ ಸಂಪತ್ತು. ಭೂಮಿಯ ಮೇಲಿನ ಸಕಲ ಜೀವರಾಶಿಗಳನ್ನು ಪೊರೆಯುವ ಹಾಗೂ ಕಣ್ಣುಗಳಿಗೆ ತಂಪು-ಇಂಪು ನೀಡುವ ಮಾಯಾಜಾಲ. ಇಲ್ಲಿ ಏನಿಲ್ಲ ಹೇಳಿ ? ಗಾಳಿ, ನೀರು, ನೆಲ, ಬೆಳಕು, ಜೀವವೈವಿಧ್ಯ ಇತ್ಯಾದಿಗಳೆಲ್ಲವೂ ಪ್ರಕೃತಿಯ ವೈವಿಧ್ಯತೆಗೆ ಇಂಬು ನೀಡಿವೆ. ಇಲ್ಲಿರುವ ಬಹು ಮುಖ್ಯ ಸಂಪನ್ಮೂಲಗಳಲ್ಲಿ ಹಸಿರು ಮರಗಳು ಪ್ರಾಕೃತಿಕ ಅನನ್ಯತೆಗೆ ಮೆರಗು ನೀಡಿವೆ. ನಮ್ಮ ಸುತ್ತಲಿನ ಗಿಡಮರಗಳು ನಮಗರಿವಿಲ್ಲದಂತೆಯೇ ನಮ್ಮ ನೆರವಿಗೆ ಬಂದಿವೆ. ಅವುಗಳ ಪರಿಚಯ, ಆವಾಸ, ಅನನ್ಯಗುಣ ಹಾಗೂ ಮಹತ್ವದ ಬಗ್ಗೆ ತಿಳಿಯಬೇಕಾದ್ದು ಇಂದಿನ ಅಗತ್ಯವಾಗಿದೆ. ಇಂತಹ ಉದ್ದೇಶದಿಂದಲೇ ಶಾಲೆ ಕಾಲೇಜುಗಳಲ್ಲಿ ಇಕೊ ಕ್ಲಬ್‌ಗಳು ಕೆಲಸ ಮಾಡುತ್ತಿವೆ. ಪರಿಸರದಲ್ಲಿನ ಸುಂದರವಾದ ಹಸಿರು ಗಿಡಮರಗಳು ಮಕ್ಕಳಾದಿಯಾಗಿ ಎಲ್ಲರನ್ನು ಆಕರ್ಷಿಸುತ್ತವೆ. ಶಾಲಾ ಮೈದಾನ, ಗುಡಿ ಗುಂಡಾರಗಳಲ್ಲಿ, ಗಾರ್ಡನ್, ರಸ್ತೆ ಬದಿಗಳಲ್ಲಿ, ಹೊಲ-ತೋಟದ ಬದು, ಮುಂತಾದೆಡೆ ಬೆಳೆದು ನಿಂತ ಅನೇಕ ಗಿಡಮರಗಳನ್ನು ನಾವು ನೋಡಿರುತ್ತೇವೆ. ಆದರೆ ಅವುಗಳ ಬಗೆಗಿನ ಮಾಹಿತಿ ಹಾಗೂ ಉಪಯುಕ್ತತೆಯ ಬಗ್ಗೆ ಅಷ್ಟೊಂದು ತಿಳಿದಿರುವುದಿಲ್ಲ.

ಮೊನ್ನೆ ಮೊನ್ನೆ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಪಯಣ ಹಸಿರು ನಡಿಗೆಯನ್ನು ಹಮ್ಮಿಕೊಂಡಿದ್ದೆವು. ಕಾರ್ಯಕ್ರಮದಡಿ ಗಿಡಮರಗಳ ಪರಿಚಯ ಮಾಡುತ್ತಾ ಸಮೀಪದ ಉದ್ಯಾನವೊಂದಕ್ಕೆ ಭೇಟಿ ನೀಡಿದೆವು. ಅಲ್ಲಿ ನಮ್ಮ ಶಿಕ್ಷಕರು ವಿದ್ಯಾರ್ಥಿಗಳು ಎಲ್ಲರೂ ಗಿಡಮರಗಳು, ಅದರ ಎಲೆ, ಹೂ, ಹಣ್ಣು-ಕಾಯಿ ಇತ್ಯಾದಿ ಮುಟ್ಟಿ ನೋಡಿ ಇದು ಹಾಗೆ, ಅದು ಹೀಗೆ, ಎಂತೆಲ್ಲಾ ತಮ್ಮ ತಮ್ಮಲ್ಲೆ ಚರ್ಚೆಗೆ ಇಳಿದಿದ್ದರು. ಅಲ್ಲಿ ಬೆಳೆದಿದ್ದ ಎತ್ತರದ ಕಂಬದಾಕಾರದ ಗಿಡವೊಂದನ್ನು ತೋರಿಸಿ ನಮ್ಮ ಸಹೋದ್ಯೋಗಿಯೊಬ್ಬರು ಇದು ನೋಡಿ ಅಶೋಕ ಮರ ಎಷ್ಟು ಎತ್ತರವಾಗಿದೆಯಲ್ಲ! ಎಂದು ಆಶ್ಚರ್ಯದಿಂದ ಪರಿಚಯಕ್ಕೆ ಇಳಿದಿದ್ದರು. ಇದು ನನ್ನ ಕಿವಿಗೆ ಬಿದ್ದ ತಕ್ಷಣವೇ ಮುಂದೆ ಬಂದು ವಿದ್ಯಾರ್ಥಿಗಳಿಗೆ ಮನನ ಮಾಡಿಸಿದೆ. ಮಕ್ಕಳೇ ಇದು ನಿಜವಾದ ಅಶೋಕ ಮರವಲ್ಲ. ಇದು ಮಿಥ್ಯ ಅಶೋಕ. ನೈಜ ಅಶೋಕ ವೃಕ್ಷ ಬೇರೆಯೇ ಇದೆ. ಅದು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು ಅದರ ಹಿನ್ನಲೆ ಹಾಗೂ ಪಾರಂಪರಿಕ ಮಹತ್ವವೂ ವಿಶಿಷ್ಟವಾಗಿದೆ ಎಂದು ತಿಳಿಸುತ್ತಾ ಮುಂದೆ ಮುಂದೆ ಸಾಗಿದೆವು

ಹೌದು! ಅಶೋಕ ಮರ ಎಂದಾಕ್ಷಣ ಬಹುತೇಕರು ನೆನಪಿಸಿಕೊಳ್ಳುವುದು ಅದೇ ಎತ್ತರವಾದ, ಕಂಬದಂತಹ, ಚೂಪಾದ-ಮೊನಚಾದ ಎಲೆಗಳುಳ್ಳ ಹಲವು ಗೊಂಚಲುಗಳಲ್ಲಿ ಜೋತು ಬಿದ್ದ ನೀಳವಾದ ಚಿಕ್ಕ ಚಿಕ್ಕ ಟೊಂಗೆಗಳ ಹಸಿರು ಮರವನ್ನು. ನಿಜ ಸ್ನೇಹಿತರೆ ! ಅಶೋಕ ಮರದ ಬಗ್ಗೆ ಬಹಳಷ್ಟು ಜನರಿಗೆ ಸ್ಪಷ್ಟವಾದ ತಿಳುವಳಿಕೆ ಮಾಹಿತಿ ಇಲ್ಲ. ನಾವು ನೋಡಿರುವ ನಮ್ಮ ಸುತ್ತ ಶಾಲೆ, ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸಿರುವ ಎತ್ತರದ ಕಂಬದಂತಹ ಮರ, ನೈಜವಾದ ಅಶೋಕವಲ್ಲ. ಇದರ ಸುತ್ತ ಹಲವು ತಪ್ಪು ಕಲ್ಪನೆಯ ಮುಸುಕು ಆವರಿಸಿದೆ. ವಾಸ್ತವದಲ್ಲಿ ಅಶೋಕ ಮರ ಬೇರೆಯೇ ಇದೆ.

ಅಶೋಕ ವೃಕ್ಷವನ್ನು ವೈಜ್ಞಾನಿಕ ಹಿನ್ನಲೆಯಲ್ಲಿ ನೋಡಿದಾಗ ಅನೇಕ ವ್ಯತ್ಯಾಸಗಳು ಗೋಚರಿಸುತ್ತವೆ. ಇದರ ವೈಜ್ಞಾನಿಕ ನಾಮಧೇಯ ಸರಾಕಾ ಅಸೋಕ (Saraca asoka ). ಫ್ಯಾಬೇಸಿ (fabaceae) ಕುಟುಂಬದ ಸಿಸಾಲ್ಪಿನಿಯಾಯ್ಡ್ ಉಪಕುಟುಂಬದ ಚಿಕ್ಕ ಗಾತ್ರದ ಮರ ನಾವು ಕಂಡಿರುವ ಮಿಥ್ಯ ಅಶೋಕ ಮರಕ್ಕಿಂತ ಭಿನ್ನವಾಗಿದೆ. ಇದನ್ನು ಬಟಾಣಿ (legume)   ಕುಟುಂಬ ಎಂದು ಸಹ ಕರೆಯಲಾಗುತ್ತದೆ. ಬೀ‌ನ್ಸ್‌ನಂತೆ ಬಹುಬೀಜ ಬಿಡುವ ಉದ್ದನೆ ಕಾಯಿಗಳನ್ನು ಹೊಂದಿದ್ದು, ಆವೃತ ಬೀಜ ಬಿಡುವ ಟ್ರಾಕಿಯೋಫೈಟ್ ಆಗಿದೆ. ಇದು ಕಿತ್ತಳೆ-ಕೆಂಪು ಬಣ್ಣದ ಹೂ ಬಿಡುವ ಮರವಾಗಿದೆ. ಮಿಥ್ಯ ಅಶೋಕ ವೃಕ್ಷದ ವೈಜ್ಞಾನಿಕ ನಾಮಧೇಯ ಪಾಲಿಯಾಲ್ಥಿಯಾ ಲಾಂಗಿಫೋಲಿಯಾ  ಆಗಿದೆ. ಮೆಡಿಟರೇನಿಯನ್ ಸೈಪ್ರಸ್ ಮರಗಳಂತೆ ಕಾಣುವ ಉದ್ದನೆಯ ಕಂಬದಂತಹ ಗಿಡವನ್ನು ಅಲಂಕಾರಕ್ಕಾಗಿ ಶಾಲೆ, ಕಾಲೇಜು, ಉದ್ಯಾನಗಳಲ್ಲಿ ಹೆಚ್ಚೆಚ್ಚು ಬೆಳೆಸಲಾಗುತ್ತದೆ. ಇದರ ಕಾಯಿಗಳು ಅಥವಾ ಹಣ್ಣುಗಳು ಗುಂಡಾಗಿದ್ದು ಚಿಕ್ಕದಾದ ಕೇವಲ ಒಂದು ಬೀಜವನ್ನು ಮಾತ್ರ ಹೊಂದಿರುತ್ತದೆ. ಮರದ ಹೂಗಳು ಸೇಬುವಿನ ಹಸಿರು ಬಣ್ಣದ್ದಾಗಿವೆ. ನಿಜವಾದ ಆಶೋಕ ಪ್ರಭೇದದ ಸಸ್ಯಗಳ ಆವಾಸದ ಮೂಲ ಭಾರತ ಎಂದು ಬೇಯ್ಲಿ ಎಂಬ ಸಸ್ಯಶಾಸ್ತ್ರಜ್ಞ ಪ್ರತಿಪಾದಿಸಿದ್ದಾರೆ. ಇನ್ನೊರ್ವ ಭಾರತೀಯ ಸಸ್ಯಶಾಸ್ತ್ರಜ್ಞ ರಾಂಧವರವರ ಪ್ರಕಾರ ಇದು ಭಾರತ ಹಾಗೂ ಶ್ರೀಲಂಕಾ ಮೂಲದ್ದು. ಹಾಗೆಯೇ ಚಬ್ಬರ್ ಎಂಬುವವರು ಇದನ್ನು ಅಮೇರಿಕಾದ್ದು ಎಂದು ಗುರುತಿಸುತ್ತಾರೆ. ಬಗ್ಗೆ ಕೆಲ ಮಿಶ್ರ ಅಭಿಪ್ರಾಯಗಳಿದ್ದರೂ ಭಾರತೀಯ ಉಪಖಂಡದಲ್ಲಿ ಹಾಗೂ ಉಷ್ಣವಲಯದಲ್ಲಿ ಬೆಳೆಯುವ ಅಪರೂಪ ಮರವೆಂದು ಇದಕ್ಕೆ ಹೇಳಲಾಗುತ್ತದೆ. ಉತ್ತರದ ಭೂತಾನ್, ನೇಪಾಳದಿಂದ ಹಿಡಿದು ಪಾಕಿಸ್ತಾನ ಸೇರಿ ಶುಷ್ಕ ವಾತಾವರಣದಲ್ಲಿ ತನ್ನ ಆವಾಸವನ್ನು ಇದು ವಿಸ್ತರಿಸಿಕೊಂಡಿದೆ.

ಅಶೋಕ ಮರ ಸತ್ಯ ಸಂಗತಿಗಳು

ಇದರ ವೈಜ್ಞಾನಿಕ ನಾಮ ವಿಷಯಗಳನ್ನು ತಿಳಿದಂತೆ ಮರ ಚಿಕ್ಕ ಗಾತ್ರದ್ದು ಹಾಗೂ ಭಾರತ, ಮ್ಯಾನ್ಮಾರ್ ಮತ್ತು ಶ್ರೀಲಂಕಾದ ಮೂಲವನ್ನು ಹೊಂದಿರುವುದು ಗೊತ್ತಾಗುತ್ತದೆ. ಪ್ರಾಥಮಿಕ ಮೂಲ ನಿತ್ಯ ಹರಿದ್ವರ್ಣದ ಕಾಡುಗಳು ಹಾಗೂ ಮಳೆಕಾಡುಗಳಾಗಿವೆ. ಸುಂದರವಾದ ಹೂಗೊಂಚಲು ಬಿಡುವ ಅಪರೂಪದ ಲಕ್ಷಣಗಳು ಮರಗಳಿಗಿವೆ. ವಿಶಾಲ ಚಾಮರದಂತೆ ಸುತ್ತಲೂ ಹರಡಿರುವ ರೆಂಬೆ ಕೊಂಬೆಗಳಿವೆ. ಮರಗಳು 6-8 ಮೀಟರ್ ಎತ್ತರಕ್ಕೆ ಬೆಳೆಯುವ ಮಧ್ಯಮ ಗಾತ್ರದವುಗಳಾಗಿವೆ. ಚೂಪಾದ, ಮೊನಚು ತುದಿಯ ಉದ್ದನೆಯ ಎಲೆಗಳನ್ನು ಹೊಂದಿರುವ ಇದು 4-6 ಕಿರಿದಾದ ಎಲೆಗಳನ್ನು ಎದುರು ಬದರಾಗಿ ಜೋಡಿಸಿಕೊಂಡಿದೆ. ಮರಗಳು ಸದಾ ದಟ್ಟ ಹಸುರಿನಿಂದ ಕಂಗೊಳಿಸುತ್ತವೆ. ಎಳೆಯ ಎಲೆಗಳು ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸ ಹೊಂದಿವೆ. ಕಂದು ಬಣ್ಣದ ಮರದ ತೊಗಟೆ ಗ್ಯಾಲಿಕ್ ಆಮ್ಲ ಎಂಬ ರಾಸಾಯನಿಕ ಹೊಂದಿದೆಸಣ್ಣ ಸಣ್ಣ ಕೊಂಬೆಗಳ ನಡುವೆ ಆಕರ್ಷಿಸುವ ವರ್ಣರಂಜಿತ ಪುಷ್ಪಮಂಜರಿ ವಿಶಿಷ್ಟ ಆಕರ್ಷಣೆ ಹೊಂದಿದೆ. ಆಗ ತಾನೇ ಅರಳಿದ ಹೂವಿನ ಬಣ್ಣ ಹಳದಿಯಾಗಿದ್ದು ಪರಾಗಸ್ಪರ್ಶದ ನಂತರ ಕೆಂಬಣ್ಣಕ್ಕೆ ತಿರುಗುತ್ತವೆ. ಸಂದರ್ಭದಲ್ಲಿ ಹೂ ರಾಶಿಯ ಸೊಬಗು ಹೇಳತೀರದು. ಅತ್ಯಾಕರ್ಷಕವಾದ ಇವುಗಳ ಚೆಲುವು ಅರಳುವುದು ಜನವರಿಯಿಂದ ಎಪ್ರಿಲ್, ಮೇ ತಿಂಗಳವರೆಗೆ ಮುಂದುವರೆಯುತ್ತದೆ. ಸುಮಧುರವಾದ ಸುಗಂಧಭರಿತ ಪರಿಮಳ ಬೀರುವ ಹೂಗಳ ಚೆಲುವು ಆಹ್ಲಾದತೆಯೊಂದಿಗೆ ಕಣ್ಣಿಗೆ ಹಬ್ಬ ಉಂಟು ಮಾಡುತ್ತದೆ. ಅಶೋಕಮರದ ಹೂವನ್ನು ಭಾರತದಲ್ಲಿ ಒಡಿಸ್ಸಾ ರಾಜ್ಯದ ಹೂವಾಗಿ ಅಂಗೀಕರಿಸಲಾಗಿದೆ.

ಅಶೋಕ ಮರದ ಪ್ರಾಚೀನ ಹಿನ್ನಲೆ:

ಅಶೋಕ ಮರ ಒಂದು ಕಾಡು ವೃಕ್ಷ. ಮಳೆಕಾಡಿನ ನಿತ್ಯ ಹರಿದ್ವರ್ಣದ ಸುಂದರ ಮರ. ತನ್ನ ಸುಗಂಧಭರಿತ ಹೂಗಳ ಜೊತೆಗೆ ಆಕರ್ಷಕ ಬಣ್ಣಗಳಿಂದ ಶೃಂಗಾರಗೊಂ ಹೂಗಳ ಬೆಡಗು ಬಿನ್ನಾಣ ಎಂತಹವರಲ್ಲೂ ಮೋಹಕತೆಯನ್ನು ತರುತ್ತದೆ. ಇಂತಹ ವೃಕ್ಷದ ಸುತ್ತ ಎಷ್ಟೇ ಮಿಥ್ಯಗಳು ತಳಕು ಹಾಕಿಕೊಂಡಿದ್ದರೂ ನೈಜ ಅಶೋಕ ಮರ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಅಶೋಕಹೆಸರೇ ಹೇಳುವಂತೆ ʼಶೋಕರಹಿತʼ ಎಂಬರ್ಥ ಕೊಡುತ್ತದೆ. ಭಾರತದಂತಹ ಸಂಪ್ರದಾಯಸ್ಥ ಕುಟುಂಬಗಳ ನಾರಿಯರ ದುಃಖ ದೂರ ಮಾಡುವ ಪೂಜನೀಯ ಮರವಾಗಿ ಬೆಳೆದು ನಿಂತಿದೆ. ಭಾರತ, ಶ್ರೀಲಂಕಾ, ನೇಪಾಳದಂತಹ ರಾಷ್ಟ್ರಗಳಲ್ಲಿ ಇದು ಪವಿತ್ರ (sacred) ಮರವೆಂದು ಗುರುತಿಸಲ್ಪಟ್ಟಿದೆ. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿರುವವರ ಒಡನಾಡಿಯಾಗಿ ಆಧ್ಯಾತ್ಮದ ಘಮಲನ್ನು ಅಂಟಿಸಿಕೊಂಡಿದೆ. ಧಾರ್ಮಿಕ ಮಹತ್ವದ ವೃಕ್ಷವಾಗಿ ಚೈತ್ರ ಮಾಸದಲ್ಲಿ ಪೂಜಿಸಲ್ಪಟ್ಟು ಹೆಸರಾಗಿದೆ. ಪುರಾಣ ಪುಣ್ಯ ಕಥೆಗಳಲ್ಲಿ ತನ್ನ ಸ್ಥಾನವನ್ನು ಅಚ್ಚಳಿಯದೇ ಉಳಿಸಿದೆ. ಶ್ರೇಷ್ಠ ಹಿಂದೂ, ಬೌದ್ಧ ಧರ್ಮಗಳಲ್ಲಿ ನಾನಾ ಕಾರಣಗಳಿಗಾಗಿ ವಿಭಿನ್ನ ನೆಲೆಯಲ್ಲಿ ಅಸ್ಥಿತ್ವ ಕಾಯ್ದುಕೊಂಡಿದೆ. ಬಹು ಹಿಂದಿನಿಂದಲೂ ಹಲವು ಆಚರಣೆ, ಆರಾಧನೆಗಳೊಂದಿಗೆ ರೈತಾಪಿ ವರ್ಗ, ಬುಡಕಟ್ಟು ಜನಾಂಗ, ಕಾಡಂಚಿನ ಜನಪದರ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ವೃದ್ಧಿಸಿಕೊಂಡಿದೆ.

ಶ್ರೇಷ್ಠ ಹಿಂದೂ ಕಥಾನಕಗಳಲ್ಲಿ ವರ್ಣಿಸಲ್ಪಟ್ಟ ಅಶೋಕ ವೃಕ್ಷ ದೈವತ್ವದ ನೆಲೆ ಕಂಡಿದೆ. ರಾಮಾಯಣದಂತಹ ಪುಣ್ಯಕಥೆಗಳಲ್ಲಿ ರಾಮಲಕ್ಷ್ಮಣರ ವನವಾಸದ ಸಂದರ್ಭದಲ್ಲಿ ಸೀತಾ ಮಾತೆಯ ರಕ್ಷಕ ಮರವಾಗಿ ಹಾಗೂ ರಾಮನ ಬಂ ಹನುಮಂತ ಸೀತೆಯನ್ನು ಮೊದಲು ಭೇಟಿಯಾದದ್ದು ಮರದ ಬಳಿ ಎಂಬ ಬಗ್ಗೆ ಹೇಳಲಾಗುತ್ತದೆ. ಹೋಳಿ ಹಬ್ಬ ಒಂದು ಸಡಗರದ ಹಬ್ಬ. ಸಂದರ್ಭದಲ್ಲಿ ಹಿಂದೂಗಳಿಂ ಪೂಜಿಸಲ್ಪಡುವ ಕಾಮದೇವನ ಬಗ್ಗೆ ಕೇಳಿದ್ದೇವೆ. ಅಶೋಕ ವೃಕ್ಷದ ಹೂಗಳೊಂದಿಗೆ ಕಾಮ ಸಂವೇದನೆಯ ಮಾನವ ಸಹಜ ಆಸಕ್ತಿ ತಳುಕು ಹಾಕಿಕೊಂಡಿದೆ.

ಮರಕ್ಕಿರುವ ಮಹತ್ವವನ್ನು ಇನ್ನೂ ಸುಲಭವಾಗಿ ಅರಿಯುವುದಾದರೆ ಪ್ರಾಚೀನ ರಾಜಮನೆತನಗಳು ಅರಮನೆ, ನಗರ ಸಮುಚ್ಛಯಗಳು, ಬೀದಿ ಬೀದಿಗಳಲ್ಲಿ, ದೇವಸ್ಥಾನ, ಉದ್ಯಾನಗಳು, ರಸ್ತೆಯ ಇಕ್ಕೆಲಗಳಲ್ಲಿ ಇವುಗಳನ್ನು ನೆಟ್ಟು ಪೋಷಿಸಿಕೊಂಡು ಬಂದಿರುವುದು ಕಂಡುಬರುತ್ತದೆ. ಇದು ಭಾರತೀಯ ಕಲೆ ಪರಂಪರೆಯ ಭಾಗವಾಗಿ ರೂಪಿತಗೊಂಡಿದೆ. ಪ್ರಾಚೀನ ಸ್ಮಾರಕಗಳಲ್ಲಿ, ವಾಸ್ತುಶಿಲ್ಪದ ಶಿಲಾ ಸೌಂದರ್ಯದಲ್ಲಿ ಅಶೋಕ ವೃಕ್ಷ ಮೈದಳೆದು ನಿಂತಿದೆ.

ಅಶೋಕ ವೃಕ್ಷದ ಸತ್ಯ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ವಿಷಯಾಂಶಗಳ ಅರಿವಿನ ಅಗತ್ಯತೆ ಇಂದು ಎಲ್ಲರಿಗೂ ಬೇಕಾಗಿದೆ. ವೃಕ್ಷಗಳು ನಾಡಿನ ಸಂಪತ್ತು. ಅವುಗಳ ಕುರಿತ ಸ್ಪಷ್ಟ ಜ್ಞಾನ ಕೂಡ ಅಷ್ಟೇ ಮುಖ್ಯ ಎಂಬುದನ್ನು ನಾವೆಲ್ಲರೂ ಮನಗಾಣಬೇಕಾಗಿದೆ. ಬಹು ಪ್ರಾಚೀನ ಹಾಗೂ ಪಾರಂಪರಿಕವಾಗಿ ಬೆಳೆದು ಬಂದ ಅಶೋಕ ವೃಕ್ಷದ ನಿಖರತೆ, ನೈಜತೆ ಹಾಗೂ ಪೂಜ್ಯತೆಯನ್ನು ಅದರೊಟ್ಟಿಗೆ ಅದರ ಪ್ರಸ್ತುತ ಉಪಯುಕ್ತತೆಯನ್ನು ಅರಿಯುವುದರೊಂದಿಗೆ ಧನ್ಯತೆಯನ್ನು ಕಾಣಬೇಕಾಗಿದೆ.