ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, March 4, 2025

ಮಾರ್ಚ್‌ 2025ರ ಲೇಖನಗಳು

 ಮಾರ್ಚ್‌ 2025ರ ಲೇಖನಗಳು

1. ತಾಯಿಲ್ಯಾಂಡಿನಿಂದ ಥಾಯ್‌ಲ್ಯಾಂಡಿನವರೆಗೆ !!!: ಬಿ.ಜಿ.ರಾಮಚಂದ್ರ ಭಟ್ 

2.ಭಾರತ ಕಂಡಂತಹ ಓರ್ವ ಅಪ್ರತಿಮ ಮಹಿಳಾ ಸಾಧಕಿ ಸುಧಾ ಮೂರ್ತಿ : ಬಿ.ಎನ್.ರೂಪ

 3. ಆರೋಗ್ಯಕ್ಕೆ  ಭಾರವಾಗುವ ಭಾರ ಲೋಹಗಳು : ಗಜಾನನ ಭಟ್ಟ 

4.ಜೀವಸತ್ವಗಳ ಮಹತ್ವ ಮತ್ತು ಜೀವಸತ್ವ ಪೂರೈಕೆಯಲ್ಲಿ ಸೂಕ್ಷ್ಮಜೀವಿಗಳ ಪಾತ್ರ

 ಡಾನೇತ್ರಾವತಿವಿ 

5.ಮೊದಲಿಗರಾರುಮಲರಿ-ಇರ್ವಿನ್ನರೋ ಅಥವಾ  ಹಿಲೆರಿ-ತೇನ್ಜಿಂಗರೋ  ಸುರೇಶ ಸಂ ಕೃಷ್ಣಮೂರ್ತಿ‌

6.ಪ್ರಪಂಚದ ಮೂಲ ರೂಪವೇ ಹೆಣ್ಣು ̧ ಹೆಣ್ಣು- ಜಗದ ಕಣ್ಣು : ಬಸವರಾಜ ಯರಗುಪ್ಪಿ 

7.ಸೈಂಟೂನ್‌ ಗಳು: ಜಯಶ್ರೀ


ತಾಯಿ ಲ್ಯಾಂಡಿನಿಂದ ಥಾಯ್‌ಲ್ಯಾಂಡಿನವರೆಗೆ !!! ‌

 ತಾಯಿ ಲ್ಯಾಂಡಿನಿಂದ ಥಾಯ್ಲ್ಯಾಂಡಿನವರೆಗೆ !!!     

                ಲೇಖಕರು: ರಾಮಚಂದ್ರ ಭಟ್ ಬಿ.ಜಿ.


" ಭಾರತೀಯ ತಂಡ PACCON - 2025 ಸಮ್ಮೇಳನದಲ್ಲಿ "

 ಬಹುಷಃ ನನ್ನ ವೃತ್ತಿ ಜೀವನದಲ್ಲಿ ಇಂತಹ ಒಂದು ಅವಕಾಶ ದೊರೆತೀತು ಎಂಬ ಲವಲೇಶ ಆಲೋಚನೆಯೂ ನನಗೆ ಇದ್ದಿರಲಿಲ್ಲ. ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವ ಸುಯೋಗ ನನಗೆ ಒದಗಿ ಬಂದದ್ದು ಜೀವಮಾನದ ಸಾಧನೆಯೇ ಸರಿ.JNCASR, ಭಾರತೀಯ ವಿಜ್ಞಾನಸಂಸ್ಥೆ (ಟಾಟಾಸಂಸ್ಥೆ) ಸಹಯೋಗದಲ್ಲಿ ದೇಶದ ನೂರಕ್ಕೂ ಹೆಚ್ಚಿನ ಸಂಖ್ಯೆಯ ರಸಾಯನ ವಿಜ್ಞಾನ ಶಿಕ್ಷಕರಿಗೆ ಮೈಕ್ರೋಸ್ಕೇಲ್ಕೆಮಿಸ್ಟ್ರಿ ಎಕ್ಸ್ಪರಿಮೆಂಟ್ಸ್ಕುರಿತಂತೆ 2 ದಿನಗಳ ಅತ್ಯುತ್ತಮವಾದ, ಅಂತಾರಾಷ್ಟ್ರೀಯ ಮಟ್ಟಕ್ಕೆ ಸೂಕ್ತ ರೀತಿಯಲ್ಲಿ ಆಯೋಜಿಸಲಾಗಿತ್ತು. ಈ ತರಬೇತಿಯು ಹೊಸ ಸಾಧ್ಯತೆಗಳ ಬಾಗಿಲು ತೆರೆಯಿತು. ತರಬೇತಿ ಪೂರ್ಣಗೊಳಿಸಿದ ಶಿಕ್ಷಕರಿಗೆ ಈ ತರಬೇತಿಯನ್ನಾಧರಿಸಿ ಸ್ಪರ್ಧೆಯೊಂದನ್ನು ಏರ್ಪಡಿಸಿ ವಿಜೇತರಿಗೆ IUPAC ನಡೆಸುವ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಮತ್ತು ಪ್ರಯೋಗಗಳನ್ನು ಪ್ರಸ್ತುತ ಪಡಿಸಲು ವಿಶೇಷ ಆಹ್ವಾನವೊಂದನ್ನು ನೀಡಲಾಯಿತು. JNCASR, ಭಾರತೀಯ ವಿಜ್ಞಾನ ಸಂಸ್ಥೆ (ಟಾಟಾಸಂಸ್ಥೆ) ರಾಯಲ್ಸೊಸೈಟಿಆಫ್ಇಂಗ್ಲೆಂಡ್‌, IUPAC ,ಕೆಮಿಕಲ್ಸೊಸೈಟಿ ಆಫ್ಥಾಯ್ಲೆಂಡ್‌, ಬ್ಯಾಂಕ್ಆಫ್ಬ್ಯಾಂಕಾಕ್ಗಳ ಪ್ರಾಯೋಜಕತ್ವದಲ್ಲಿ ದಿನಾಂಕ ಫೆಬ್ರವರಿ 13 - 15, 2025 ರವರೆಗೆ ಥೈಲ್ಯಾಂಡ್ದೇಶದ ಖಾವೋಯೈ ಕನ್ವೆನ್ಷನ್ಸೆಂಟರ್‌, ನಾಖೋನ್ರಾಚಸೀಮ (Khao Yai Convention Center (KYCC) in Khao Yai, Nakhon Ratchasima, Thailand) ನಲ್ಲಿ PACCON ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಬಾರತ, ಥೈಲ್ಯಾಂಡ್‌ , ವಿಯೆಟ್ನಾಂ ಮತ್ತು ಫಿಲಿಫೈನ್ಸ್ದೇಶಗಳ ಶಿಕ್ಷಕರು ಪಾಲ್ಗೊಂಡೆವು. ಥಾಯ್ದೇಶದಬ್ಯಾಂಕ್ಆಫ್ಬ್ಯಾಂಕಾಕ್ಹಾಗೂ ಥಾಯ್ಕೆಮಿಕಲ್ಸೊಸೈಟಿ ನಮ್ಮ ಪ್ರಯಾಣದ ಸಂಪೂರ್ಣ ಖರ್ಚು ವೆಚ್ಚಗಳನ್ನು ಭರಿಸಿತ್ತು. ಈ ಕಾರ್ಯಕ್ರಮಕ್ಕೆಭಾರತದಿಂದ ಹತ್ತು ಜನ ಶಿಕ್ಷಕರನ್ನು ಸ್ಪರ್ಧೆಯ ಮೂಲಕ ಆಯ್ಕೆಮಾಡಲಾಗಿತ್ತು. ಅದರಲ್ಲಿ ನಾನೂ ಸೇರಿದಂತೆ ವಿವಿಧ ಕಾಲೇಜು, ಕೇಂದ್ರ ಪಠ್ಯಕ್ರಮದ PGT, TGT ಶಿಕ್ಷಕರು, ಶಿಕ್ಷಣ ತಜ್ಞರು ಆಯ್ಕೆಗೊಂಡಿದ್ದೆವು. ನಮ್ಮೊಂದಿಗೆ ಭಾರತದಲ್ಲಿ IUPAC ಯ ಅಧ್ಯಕ್ಷರಾದ IISc ಯಲ್ಲಿ ರಸಾಯನ ವಿಜ್ಞಾನ ಪ್ರೊಫೆಸರ್ಹಾಗೂ ಖ್ಯಾತ ಭಾರತೀಯ ರಸಾಯನ ವಿಜ್ಞಾನಿಯಾದ ಶ್ರೀ.ಉದಯ್ಮೈತ್ರ ಹಾಗೂ JNCASRನಿಂದ ತರಬೇತಿ ಕಾರ್ಯಕ್ರಮದ ಸಂಯೋಜಕರಾದ ವಿಜ್ಞಾನಿ ಡಾ|| ವಿನಾಯಕ ಪತ್ತಾರ್‌  ಅವರೂ ಇದ್ದರು .ಕರ್ನಾಟಕ ರಾಜ್ಯದ ಸರ್ಕಾರಿ ಪ್ರೌಢಶಾಲಾ ಶಿಕ್ಷಕವಲಯದಿಂದ ಪಾಲ್ಗೊಂಡ ಏಕೈಕ ಶಿಕ್ಷಕ ಎಂಬ ಹೆಗ್ಗಳಿಕೆ ನನ್ನದು.

                    ಹೊಸ ಸ್ನೇಹಿತರು ಹೊಸಪರಿಚಯ !!! ಥೈಲ್ಯಾಂಡ್‌ ಗೆ ಹೊರಟ ಭಾರತ ತಂಡ 

JNCASRನಲ್ಲಿ ನೀಡಿದ ತರಬೇತಿಯ ನಂತರ ಮೈಕ್ರೋಸ್ಕೇಲ್ಪ್ರಯೋಗಗಳಲ್ಲಿ ನಾವೀನ್ಯಯುತ ವಿಧಾನಗಳ ಪರಿಚಯ ಹಾಗೂ ಅವುಗಳನ್ನು ದೈನಂದಿನ ತರಗತಿಗಳು, ವಸ್ತು ಪ್ರದರ್ಶನ ಹಾಗೂ ಶಿಕ್ಷಕ ತರಬೇತಿಗಳಲ್ಲಿ ಅನುಷ್ಠಾನಗೊಳಿಸುತ್ತಾ ಹೊಸ ಹೊಳಹುಗಳನ್ನು ಕಂಡುಕೊಂಡೆ. ಇವು, ನನ್ನ ವೃತ್ತಿ ಬದುಕಿಗೆ ಹೊಸ ಮೆರುಗನ್ನು ನೀಡಿದ್ದು ಸುಳ್ಳಲ್ಲ. ಈ ಪ್ರಯೋಗಗಳು ಹಾಗೂ ಅನುಭವಗಳು ನನ್ನನ್ನು ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ, ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟದ ಶಿಕ್ಷಕರ ಸ್ಪರ್ಧೆಯವರೆಗೂ ಕರೆದೊಯ್ದು ಅಲ್ಲಿಯೂ ನನಗೆ ಪ್ರಥಮ ಬಹುಮಾನವನ್ನು ಗೆಲ್ಲಿಸಿಕೊಟ್ಟವು. ಅಂತಿಮವಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಗೌರವವನ್ನೂ ತಂದುಕೊಟ್ಟವು!!!

 ಬಹುತೇಕ ನಮ್ಮೆಲ್ಲರಿಗೂ ಅದು ಮೊದಲ ವಿದೇಶ ಪ್ರಯಾಣ. ರಾತ್ರಿ ೧ ಗಂಟೆಗೆ ನಮ್ಮ ವಿಮಾನವಿತ್ತು. ಎಲ್ಲರೂ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದ ೨ ನೇ ಟರ್ಮಿನಲ್ತಲುಪಿದೆವು. ಕುಟುಂಬದವರಿಂದ ಬೀಳ್ಕೊಂಡು ಒಳ ಪ್ರವೇಶಿಸಿದರೆ ಅಲ್ಲೊಂದು ಅದ್ಭುತ ಕಿನ್ನರ ಲೋಕವನ್ನೇ ಹೊಕ್ಕಂತಾಯಿತು. ಒಳಹೊಕ್ಕ ಅರ್ಧಗಂಟೆಯೊಳಗೇ ಎಲ್ಲಾ ಚೆಕ್ಇನ್ಪ್ರಕ್ರಿಯೆಗಳನ್ನು ಮುಗಿಸಿಕೊಂಡೆ.ಪ್ರತಿಯೊಂದು ಹಂತದಲ್ಲೂ ಏನೇನು ಕಿತ್ತೆಸೆಯುತ್ತಾರೋ ಎಂಬ ಭಯ ದೂರವಾಯಿತು!!! ಸಮಯ ನೋಡಿದರೆ ಇನ್ನೂ ಎರಡು ತಾಸುಗಳಿದ್ದವು!! ಅಲ್ಲಿನ ನಂದನವೇ ಧರೆಗಿಳಿದಂತಿದ್ದ ಅದ್ಭುತಲೋಕವನ್ನು ವಿಸ್ಮಯಭರಿತ ಕಣ್ಣುಗಳಿಂದ ನೋಡುತ್ತಾ, ಆಸ್ವಾದಿಸುತ್ತಾ, ಮೈಮರೆಯುತ್ತಾ ಫೋಟೋ ತೆಗೆದುಕೊಳ್ಳುತ್ತಾ ಸಾಗಿದೆವು. ಅರಸಿಕನೂ ಮೆಚ್ಚುವಂತೆ, ದೇವಶಿಲ್ಪಿಯ ನಿರ್ಮಾಣವನ್ನೂ ನಾಚಿಸುವಂತೆ ಇದ್ದ ಆ ಸುಂದರ, ಭವ್ಯ ವಾಸ್ತುಶಿಲ್ಪದ ವಿನ್ಯಾಸವನ್ನು ಮೆಚ್ಚದಿರಲು ಸಾಧ್ಯವೇ ಇರಲಿಲ್ಲ. ಹೊತ್ತು ಹೋದದ್ದೇ ತಿಳಿಯಲಿಲ್ಲ. ಮೈಲಿ ದೂರದವರೆಗೂ ವ್ಯಾಪಿಸಿಕೊಂಡ ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-೨ರ ಸೊಬಗೇ ದೀರ್ಘ ನಡಿಗೆಯ ನೋವೂ ಗೋಚರಿಸದಂತೆ ಮೋಡಿ ಮಾಡಿತ್ತು. ಅದೆಂತಹ ಸಸ್ಯಕಾಶಿ!! ಅದೆಂತಹ ವಾಸ್ತಶಿಲ್ಪ!!! ಅದೆಂತಹ ಬೆಳಕಿನ ಮಾಯಾಲೋಕ!!! ಅದೇನೋ ಕುತೂಹಲ!!! ಅಂತೂ ಥಾಯ್ಏರ್ವೇಸ್ನ ವಿಮಾನವೇರುವ ಸಮಯವಾಯಿತು. ವಿಮಾನವೇರಿದರೂ ಅದೇನೋ ದುಗುಡ, ಕಾತರ, ಕುತೂಹಲಗಳ ಸಮ್ಮಿ‌ಶ್ರಭಾವನೆಗಳು. 

                                            ಬಾನಂಚಿಂದ ಬೆಂಗಳೂರು ದರ್ಶನ  

ನಾವೆಲ್ಲರೂ ಏಷ್ಯಾ ಹೋಟೆಲ್ ತಲುಪಿದ ನಂತರ, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡೆವು. ಮಧ್ಯಾಹ್ನ 2:30 ರಂದು, ನಾವು ಬ್ಯಾಂಕ್ಆಫ್ಬ್ಯಾಂಕಾಕ್ಲಿಮಿಟೆಡ್‌ (ಬಿಬಿಎಲ್) ಕೇಂದ್ರ ಕಛೇರಿಗೆ ಭೇಟಿ ನೀಡಲು ಹೊರಟೆವು. ಬಿ.ಬಿ.ಎಲ್ ಕೇಂದ್ರ ಕಛೇರಿಯ ಸುಂದರ ಬ್ಯಾಂಕಿಂಗ್ ಹಾಲ್ನಲ್ಲಿ ಭಾರತದ ಶೈಕ್ಷಣಿಕ ರಾಯಭಾರಿಗಳಾಗಿ BBLನ ಹಲವು ಅತ್ಯುನ್ನತ ಅಧಿಕಾರಿಗಳನ್ನು ಭೇಟಿಮಾಡಿ ಸಂವಾದ ನಡೆಸಿದೆವು ಹಾಗೂ ಅಲ್ಲಿ ಫೋಟೋಸೆಷನ್ನಡೆಸಿದೆವು


ನಂತರ
IUPAC ನಡೆಸಿದ "ಗ್ಲೋಬಲ್ ವಿಮೆನ್‌ ಬ್ರೇಕ್ಫಾಸ್ಟ್ 2025" ಕಾರ್ಯಕ್ರಮದಲ್ಲಿ ಭಾಗವಹಿಸಿದೆವು. ಬಿಬಿಎಲ್ ಕಾರ್ಯನಿರ್ವಾಹಕರಿಂದ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳ ನಂತರ ಥೈಲ್ಯಾಂಡಿನ ಕೆಮಿಕಲ್ಸೊಸೈಟಿಯ ಮುಖ್ಯಸ್ಥರಾದ ಪ್ರೊ|| ವುಧಿಚಾಯ್ಪರಸುಕ್‌ (Professor Dr.VudhichaiParasuk)ಈ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದರು. ನಂತರ ನಮ್ಮೆಲ್ಲರಿಗೂ ಗಣ್ಯರಿಂದ ಪ್ರಮಾಣಪತ್ರ ವಿತರಣೆ ನಡೆಯಿತು. ಸಂಜೆಯ ಹೊತ್ತಿಗೆ ವಿಯೆಟ್ನಾಂ, ಫಿಲಿಪೈನ್ ದೇಶದ ಶಿಕ್ಷಕರು ತಮ್ಮ ತಮ್ಮ ದೇಶದ ಸಂಸ್ಕೃತಿಯನ್ನು ಅನಾವರಣಗೊಳಿಸುವ ವೈಶಿಷ್ಟ್ಯಪೂರ್ಣ ಪ್ರದರ್ಶನ ನೀಡಿದರು. ನಾವೂ ಭಾರತೀಯ ಸಂಸ್ಕೃತಿಯನ್ನು ಪ್ರದರ್ಶಿಸುವ ಉಡುಗೆತೊಟ್ಟು ವಿವಿಧ ಭಾಷೆಗಳಲ್ಲಿ ಹಾಡು ಹಾಡಿ, ಭಾರತದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದೆವು. ಇದಕ್ಕಾಗಿ ಹಲವು ದಿನಗಳಿಂದ ಅಭ್ಯಾಸವನ್ನೂ ಮಾಡಿದ್ದೆವು!!! ಇದಾದ ಬಳಿಕ BBL ನಮಗಾಗಿ ವಿಶೇಷ ಔತಣಕೂಟ ಏರ್ಪಡಿಸಿತು. ಮೊದಲ ದಿನದ ಅನುಭವಗಳು ಬಹಳ ಸ್ಫೂರ್ತಿದಾಯಕವಾಗಿದ್ದವು.ನಂತರ ನಮಗಾಗಿ ಕೊಠಡಿಗಳನ್ನು ಕಾದಿರಿಸಲಾಗಿದ್ದ ಏಷ್ಯಾಹೊಟೆಲ್ನತ್ತ ನಮ್ಮ ಪ್ರಯಾಣ ಸಾಗಿತು.

ಎರಡನೇ ದಿನ ಬೆಳಗ್ಗೆ ಏಳು ಗಂಟೆಗೇ ಉಪಹಾರ ಮುಗಿಸಿದೆವು. ನೂರಾರು ಬಗೆಯ ತಿನಿಸುಗಳು!!! ಯಾವುದನ್ನು ತಿನ್ನಬೇಕು? ಕುಡಿಯಬೇಕು? ಯಾವುದನ್ನು ಬಿಡಬೇಕು ಎನ್ನುವ ಜಿಜ್ಞಾಸೆ ಬಹುತೇಕರದ್ದು!!!.ಬೆಳಗಿನ ಉಪಹಾರದ ನಂತರ ಖೋನ್ ರಾಚಸಿಮಾ ಕಡೆಗೆ ನಮ್ಮ ಬಸ್ಪ್ರಯಾಣವು ಪ್ರಾರಂಭವಾಯಿತು. ಮಾರ್ಗಮಧ್ಯೆ ಅನೇಕ ಸುಂದರ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದೆವು

ಯುನೆಸ್ಕೋ ವಿಶ್ವ ಪಾರಂಪರಿಕ ತಾಣ (Historic City of Ayutthaya) ದಲ್ಲಿ ಭಾರತೀಯ ವಸುದೈವ ಕುಟುಂಬಕಂ  ಆಶಯದೊಂದಿಗೆ. ಇದು ೧೩ನೇ ಶತಮಾನಕ್ಕೆ ಸೇರಿದ ಸಂರಕ್ಷಿತ ತಾಣ 

  ಹೆರಿಟೇಜ್‌ ತಾಣ ನಡುವೆ ಮಧ್ಯಾಹ್ನದ ಊಟ ಮುಗಿಸಿ ಮತ್ತೆ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಸಂಜೆ ೬ಗಂಟೆಯ ಸುಮಾರಿಗೆ Greenery Resort Hotel ತಲುಪಿದೆವು. ಊಟದ ನಂತರ, ಎಲ್ಲರೂ ವಿಶ್ರಾಂತಿ ಪಡೆದೆವು.

    ಫೆಬ್ರವರಿ 13, 2025ರಂದು PACCON 2025 ಅಂತರಾಷ್ಟ್ರೀಯ ರಸಾಯನಶಾಸ್ತ್ರ ಸಮ್ಮೇದಲ್ಲಿ ಪಾಲ್ಗೊಂಡೆವು.ಏಷ್ಯಾದ ಶಿಕ್ಷಕರ ನೆಟ್ವರ್ಕಿಂಗ್ ಕಾರ್ಯಚಟುವಟಿಕೆಗಳು ನಡೆದವು. ಪ್ರಾರಂಭದಲ್ಲಿ, ಥಾಯ್ಲ್ಯಾಂಡ್ನ ಮಹಾರಾಣಿ ಹಾಗೂ ರಸಾಯನಶಾಸ್ತ್ರಜ್ಞರೂ ಆದ ಪ್ರೊ|| ಚುಲಾಭೋರ್ನ್‌(ChulabhornKrom PhraSrisavangavadhana) ಅವರು ಸಭೆಯನ್ನು ಉದ್ಘಾಟಿಸಬೇಕಿತ್ತು. ಅವರ ಪರವಾಗಿ ಅವರ ಆಶಯ ನುಡಿಗಳನ್ನು ಸಭೆಗೆ ಓದಿ ತಿಳಿಸಲಾಯಿತು. ಅನಂತರ ವಿಶ್ವದಾದ್ಯಂತ ಆಗಮಿಸಿದ ಸಂಶೋಧಕರು ತಮ್ಮ ಪ್ರಬಂಧ ಮಂಡಿಸಿದರು.

೧೩ನೇ ತಾರೀಖಿನಿಂದ ೧೫ನೇ ತಾರೀಖಿನವರೆಗೆ ನಡೆದ PACCON-೨೦೨೫ ಅಂತಾರಾಷ್ಟ್ರೀಯ ಸಮ್ಮೇಳನದ ಮುಖ್ಯ ಉದ್ದೇಶವು ರಸಾಯನಶಾಸ್ತ್ರ ಮತ್ತು ಅದರ ಉಪಶಾಖೆಗಳಲ್ಲಿ ನಡೆಯುತ್ತಿರುವ ಪ್ರಮುಖ ಸಂಶೋಧನೆಗಳು, ತಂತ್ರಜ್ಞಾನಗಳು ಮತ್ತು ಪ್ರವೃತ್ತಿಗಳನ್ನು ಚರ್ಚಿಸುವುದು. ಇದು ಜ್ಞಾನದ ವಿನಿಮಯ, ಸಹಯೋಗ ಮತ್ತು ಏಷ್ಯಾದ ರಸಾಯನಶಾಸ್ತ್ರ ಸಮುದಾಯದೊಳಗೆ ನೆಟ್ವರ್ಕಿಂಗ್ ಅನ್ನು ಉತ್ತೇಜಿಸುತ್ತದೆ.

 ಸಮ್ಮೇಳನವು ಸಾವಯವ ರಸಾಯನಶಾಸ್ತ್ರ, ನಿರವಯವ ರಸಾಯನಶಾಸ್ತ್ರ, ಭೌತ ರಸಾಯನಶಾಸ್ತ್ರ, ವಿಶ್ಲೇಷಣಾತ್ಮಕ ರಸಾಯನಶಾಸ್ತ್ರ, ಜೀವರಸಾಯನಶಾಸ್ತ್ರ, ಪರಿಸರ ರಸಾಯನಶಾಸ್ತ್ರ, ವಸ್ತುವಿಜ್ಞಾನ ಮತ್ತು ನ್ಯಾನೊತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡಿತ್ತು.ಸಮ್ಮೇಳನವು ಪ್ರಸ್ತುತಿಗಳು, ಪೋಸ್ಟರ್ಸ್ಪರ್ಧೆಗಳು, ಕೀನೋಟ್ ಭಾಷಣಗಳು ಮತ್ತು ವಿಶೇಷ ಪ್ಯಾನೆಲ್ ಚರ್ಚೆಗಳನ್ನು ಒಳಗೊಂಡಿರುತ್ತು. ಭಾಗವಹಿಸಲು ಇಚ್ಛೆಯುಳ್ಳವರು ತಮ್ಮ ಸಂಶೋಧನಾ ಕೃತಿಗಳನ್ನು ಸಲ್ಲಿಸಬಹುದು ಮತ್ತು ಅವುಗಳನ್ನು ಪರಿಶೀಲಿಸಿದ ನಂತರ ಪ್ರದರ್ಶಿಸಲು ಆಹ್ವಾನಿಸಲಾಗುತ್ತಿತ್ತು.

ಸಮ್ಮೇಳನದಂದು ಒಂದೆಡೆ ವಿವಿಧ ದೇಶಗಳ ವಿಜ್ಞಾನಿಗಳು, ಪ್ರೊಫೆಸರ್ಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಆಸಕ್ತರು ತಮಗಿಷ್ಟ ಇರುವ ವಿಷಯದ ಪ್ರಸ್ತುತಿಯನ್ನು ಕೇಳಬಹುದಿತ್ತು

ಜರ್ಮನಿಯ ಡಾ|| ಏಂಜೆಲಾ ಎಂ.ಕೋಹ್ಲರ್‌ ರವರೊಂದಿಗೆ ಭಾರತೀಯ ತಂಡ

 ಡಾ|| ಏಂಜೆಲಾ ಎಂ.ಕೋಹ್ಲರ್ ನಾಲ್ಕೂ ದೇಶದ ಶಿಕ್ಷಕರುಗಳಿಗೆ ವೇಗವರ್ಧಕಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕ ತರಬೇತಿ ನೀಡಿದರು

     ಫಿಲಿಫೈನ್‌, ಥಾಯ್ಲ್ಯಾಂಡ್‌ , ವಿಯೆಟ್ನಾಂ ದೇಶದ ಪ್ರಯೋಗದಲ್ಲಿ ನಿರತ ಶಿಕ್ಷಕರೊಂದಿಗೆ ನಾನು!!!

  ವಿವಿಧ ರಾಸಾಯನಿಕ ಕ್ರಿಯೆಗಳಲ್ಲಿ ವೇಗವರ್ಧಕ(catalyst)ಗಳ ಪಾತ್ರವನ್ನು ವಿವರಿಸಿದರು. ಎಲ್ಲಾ ನಾಲ್ಕೂ ದೇಶಗಳ ಶಿಕ್ಷಕರುಗಳು ಇರುವಂತೆ, ಶಿಕ್ಷಕರನ್ನು ೧೦ ಗುಂಪುಗಳಾಗಿಸಿ, ವಿವಿಧ ಪ್ರಯೋಗಗಳನ್ನು ನಡೆಸಿ, ಪರಸ್ಪರ ಚರ್ಚಿಸಿದೆವು.

PACCONನಲ್ಲಿ ನಮ್ಮ ದೇಶದ ತಂಡ ನಮ್ಮ ನಮ್ಮ ಪ್ರಯೋಗಗಳ ಪ್ರಾತ್ಯಕ್ಷಿಕೆ ನಡೆಸಲು ಸಿದ್ಧಗೊಂಡಿರುವುದು ಹಾಗೂ ವೀಕ್ಷಣೆಗೆ ಬಂದ ಭಾರತೀಯ ವಿಜ್ಞಾನಿಗಳೊಂದಿಗೆ

ಎಷ್ಟೆಲ್ಲ ಬಗೆಯಲ್ಲಿ ಒಂದು ವಿಷಯವನ್ನು ಸರಳಗೊಳಿಸಬಹುದು. ಒಂದು ಪರಿಕಲ್ಪನೆಗೆ ಎಷ್ಟೆಲ್ಲಾ ಆಯಾಮಗಳಿವೆ. ಅದಕ್ಕೆ ಎಷ್ಟು ಸರಳವಾದ ಪರ್ಯಾಯಗಳಿವೆ ಎನ್ನುವುದು ಈ ತರಬೇತಿಯಲ್ಲಿ ನಮ್ಮ ಗಮನಕ್ಕೆ ಬಂತು.

ದಿನಾಂಕ ೧೪ರಂದು ನಾವು ಲಕೋಲ್ ಖಾವೊಯೈ ಹೋಟೆಲ್‌ನಲ್ಲಿ "ಟ್ರೈನಿಂಗ್ ದಿ ಟ್ರೈನರ್ಸ್" ಕಾರ್ಯಕ್ರಮದಲ್ಲಿ ಭಾಗವಹಿಸಿದೆವು. ಈ ದಿನದ ಮುಖ್ಯ ಆಕರ್ಷಣೆ"Trainer Training".LacolKhaoyai Hotelನಲ್ಲಿ ಪ್ರೊಫೆಸರ್ ವುಧಿಚಾಯಿ ಪಾರಸುಕ್ ಅವರ ಉದ್ಘಾಟನಾ ಭಾಷಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ತರಬೇತಿಯ ಆರಂಭದ ಸೆಷನ್ಅನ್ನು ಥೈಲ್ಯಾಂಡ್ನ ಸುಪ್ರಸಿದ್ಧ ರಸಾಯನಶಾಸ್ತ್ರಜ್ಞರು, ಅನೇಕ ಮಹಿಳಾ ವಿಜ್ಞಾನಿಗಳಿಗೆ ಸ್ಫೂರ್ತಿಯಾಗಿರುವ ಚೂಲಾಲಾಂಗ್ಕಾರ್ನ್‌ (Chulalongkorn University) ವಿಶ್ವವಿದ್ಯಾಲಯದ ಪ್ರೊ|| ಸುಪವಾನ್ ತಂತಾಯಾನನ್ (SupawanTantayanon)ಆನ್ಲೈನ್ಮೂಲಕ ತೆಗೆದುಕೊಂಡರು. ಅವರು ಪರಿಸರ ಸ್ನೇಹಿ ರಾಸಾಯನಿಕ ಪ್ರಕ್ರಿಯೆಗಳ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ ಮತ್ತು ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಭಾರತದಲ್ಲಿ ನಮಗೆ ಮೈಕ್ರೋ ಸ್ಕೇಲ್ಪ್ರಯೋಗಗಳ ತರಬೇತಿಯನ್ನು ಅವರೇ ತಮ್ಮ ತಂಡದೊಂದಿಗೆ ನಡೆಸಿಕೊಟ್ಟಿದ್ದರು. ಪ್ರೊಫೆಸರ್ ಸುಪವಾನ್ ಅವರು "ಹಸಿರು ರಸಾಯನಶಾಸ್ತ್ರದ ಮಹತ್ವ" ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.ನಂತರ"Experimental Design-based Chemistry in STEM Learning"ಕುರಿತಂತೆ Associate Professor ಚಟ್ರಿ ಫೈಖಮ್ಟಾ ಅವರ ಉಪನ್ಯಾಸ ನೀಡುತ್ತಾ ಚರ್ಚೆ ಮುಂದುವರೆಸಿದರು. DOW ಕೆಮಿಕಲ್ಸ್ಪ್ರಾಯೋಜಿತ ತರಬೇತಿ ಕಾರ್ಯಾಗಾರದಲ್ಲಿ STEM ಮತ್ತು ಮೈಕ್ರೋಸ್ಕೇಲ್ಪ್ರಯೋಗಗಳ ಜೊತೆ ಹೇಗೆ ಮಿಳಿತಗೊಳಿಸಬಹುದು ಎನ್ನುವ ಕುರಿತು ಚರ್ಚಿಸಲಾಯಿತು.

ಥೈಲ್ಯಾಂಡಿನ ಡೌ ಕೆಮಿಕಲ್ಸ್ ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಭೌತಶಾಸ್ತ್ರವನ್ನು ಸಂಯೋಜಿಸಿ ನಾವೀನ್ಯತೆಯುತ ಉತ್ಪನ್ನಗಳನ್ನು ಸೃಷ್ಟಿಸುತ್ತದೆ. ಇದು ಥೈಲ್ಯಾಂಡಿನಲ್ಲಿ ಸ್ಥಳೀಯ ಸಮುದಾಯಗಳೊಂದಿಗೆ ಸಹಯೋಗದೊಂದಿಗೆ ಶಿಕ್ಷಣ, ಆರೋಗ್ಯ,ಪರಿಸರ ಸಂರಕ್ಷಣೆ, ಕೃಷಿ ಮತ್ತು ನೀರಿನ ನಿರ್ವಹಣೆ ಸಂಬಂಧಿಸಿದ ಯೋಜನೆಗಳನ್ನು ಹಮ್ಮಿಕೊಂಡಿದೆ.

 

ಬೆಳಿಗ್ಗೆ ಕಾರ್ಯಾಗಾರಗಳು ನಡೆದರೆ, ಮಧ್ಯಾಹ್ನ "Trainer Discussion"  ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇದರಲ್ಲಿ ಶಿಕ್ಷಕರಿಗೆ ತಂತ್ರಜ್ಞಾನ ಮತ್ತು ಸಮಕಾಲೀನ ಶಿಕ್ಷಣದ ಬಗ್ಗೆ ಚರ್ಚಿಸಲು ಅವಕಾಶವಿತ್ತು .ನಾನು ತರಬೇತಿಯ ನಾವೀನ್ಯತೆಯ ಕುರಿತಾಗಿ ನನ್ನ ಅಭಿಪ್ರಾಯ ಮಂಡಿಸಿದೆ. ಕೊನೆಯದಾಗಿ"Questions & Answers"ಸೆಷನ್ ನಡೆಯಿತು.ಅದರಲ್ಲೂ ಪಾಲ್ಗೊಂಡು ಹಿಮ್ಮಾಹಿತಿ ನೀಡಿದೆ.

5ನೇ ದಿನ, ಫೆಬ್ರವರಿ 15, 2025ರಂದು ನಾವುಬ್ಯಾಂಕಾಕ್‌ಗೆ ಹಿಂದಿರುಗಿಸುವರ್ಣಭೂಮಿವಿಮಾನ ನಿಲ್ದಾಣಕ್ಕೆ ತೆರಳಿಮರಳಿಮಾತೃಭೂಮಿಗೆಸುರಕ್ಷಿತವಾಗಿ ಹಿಂದಿರುಗಿಬಂದೆವು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಬಹಳ ಸಂತೋಷ ಮತ್ತು ಸ್ಫೂರ್ತಿಯನ್ನು ನೀಡಿದೆ. ನಾನು ಹಲವಾರು ಶಿಕ್ಷಕರು ಮತ್ತು ವಿಜ್ಞಾನಿಗಳೊಂದಿಗೆ ಸಂಪರ್ಕ ಸಾಧಿಸಿದೆ ಮತ್ತು ಅವರೊಂದಿಗೆ ಜ್ಞಾನವನ್ನು ಹಂಚಿಕೊಂಡೆ. ಈ ಕಾರ್ಯಕ್ರಮವು ನನಗೆ ಹೊಸ ದೃಷ್ಟಿಕೋನಗಳನ್ನು ನೀಡಿತು ಮತ್ತು ನನ್ನ ವೃತ್ತಿಜೀವನದಲ್ಲಿ ಹೊಸ ಮಾರ್ಗಗಳನ್ನು ತೋರಿಸಿತು. ನಾನು ಈ ಅವಕಾಶಕ್ಕಾಗಿ IISc, JNCASR,BBL, CST, IUPAC ಮತ್ತು ನಮ್ಮ ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿವರ್ಗ, ಮುಖ್ಯಶಿಕ್ಷಕರು ಹಾಗೂ ಸ್ನೇಹಿತರುಗಳಿಗೆ, ಸಂಘಟಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.