ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Sunday, January 4, 2026

2026 ಜನವರಿ ತಿಂಗಳ ಲೇಖನಗಳು

🧠🔬 ಸವಿಜ್ಞಾನ  ವಿಜ್ಞಾನ – ಸಮಾಜ – ಸಂವೇದನೆ


ಸವಿಜ್ಞಾನ – ಜನವರಿ 2026 ಸಂಚಿಕೆ,
ಈ ಸಂಚಿಕೆಯಲ್ಲಿ—

🔹 ಅಚ್ಚರಿ ಮೂಡಿಸಿರುವ ಜೀವಿಯೊಂದರ ಅನ್ವೇಷಣೆ!
ವಿಜ್ಞಾನ ಲೋಕವನ್ನೇ ತಲೆಕೆಳಗಾಗಿಸುವ ಹೊಸ ಜೀವಿಯ ಕಥನ
✍️ ಡಾ. ಟಿ. ಎ. ಬಾಲಕೃಷ್ಣ ಅಡಿಗ

🔹 ಆಧುನಿಕ ವೈದ್ಯಶಾಸ್ತ್ರಕ್ಕೆ ಪುರಾತನ ಮರಿಹುಳು ಚಿಕಿತ್ಸೆ
ಪಾರಂಪರಿಕ ಜ್ಞಾನ ಮತ್ತು ಸಮಕಾಲೀನ ವೈದ್ಯಶಾಸ್ತ್ರದ ಸಂವಾದ
✍️ ಡಾ. ಎಂ. ಜೆ. ಸುಂದರ್‌ರಾಮ್

🔹 ಜೀವದ ಸೂಕ್ಷ್ಮ ಜಗತ್ತಿಗೆ ದಿಕ್ಕು ತೋರಿದ ವಿಜ್ಞಾನ ತಪಸ್ವಿ – ಜಿ. ಎನ್. ರಾಮಚಂದ್ರನ್
ವಿಜ್ಞಾನ–ತಪಸ್ಸಿನ ಅಪರೂಪದ ವ್ಯಕ್ತಿಚಿತ್ರ
✍️ ರಾಮಚಂದ್ರ ಭಟ್‌ ಬಿ.ಜಿ.

🔹 ಬೆಂಕಿಬೆನ್ನಿನ ಹೊನ್ನಹಕ್ಕಿ
ವಿಜ್ಞಾನ–ಕಲೆ ಸಂಗಮದ ಚಿತ್ರಲೇಖನ
✍️ ಕೃಷ್ಣ ಸುರೇಶ್

🔹 ವ್ಯಕ್ತಿತ್ವ ಅಪಸಾಮಾನ್ಯತೆಗಳು
ಮನೋವಿಜ್ಞಾನದ ಸೂಕ್ಷ್ಮ ಆಯಾಮಗಳ ಪರಿಚಯ
✍️ ಬಿ. ಎನ್. ರೂಪ

🔹 ಪುಟ್ಟ ಬಾಟಲಿಯೊಳಗೆ ಅಡಗಿದ ‘ಮಹಾ’ ವಿಜ್ಞಾನ - ಒಂದು ನಳಿಕೆ, ನೂರು ಪ್ರಶ್ನೆಗಳು!
ಸರಳ ಉಪಕರಣಗಳಲ್ಲಿ ಅಡಗಿರುವ ವಿಜ್ಞಾನ ಮರ್ಮ
✍️ ರಾಮಚಂದ್ರ ಭಟ್‌ ಬಿ.ಜಿ.

🎨 ಜನವರಿ 2026ರ ಸೈಂಟೂನ್‌ಗಳು  
ವಿಜ್ಞಾನವನ್ನು ನಗೆಯೊಂದಿಗೆ ಯೋಚಿಸಲು ಪ್ರೇರೇಪಿಸುವ ದೃಶ್ಯ ಸಂವಹನ

✍️ ಶ್ರೀಮತಿ ಜಯಶ್ರೀ ಶರ್ಮ


ಸವಿಜ್ಞಾನ
ವಿಜ್ಞಾನವನ್ನು ಓದುವವರಿಗಷ್ಟೇ ಅಲ್ಲ,
ಯೋಚಿಸುವವರಿಗಷ್ಟೇ ಅಲ್ಲ,
ಅನುಭವಿಸುವ ಪ್ರತಿಯೊಬ್ಬರಿಗೂ…


ಸಂಪಾದಕೀಯ

ಸಂಪಾದಕೀಯ: 'ಸವಿಜ್ಞಾನ'ದ ಜ್ಞಾನಯಾನಕ್ಕೆ ಈಗ ಆರರ ಸಂಭ್ರಮ – ವಿಜ್ಞಾನ ಪ್ರಸಾರವಷ್ಟೇ ಅಲ್ಲ, ಅದೊಂದು ಸಾಂಸ್ಕೃತಿಕ ಆಂದೋಲನ

ಕಾಲದ ಪ್ರವಾಹದಲ್ಲಿ ಐದು ವರ್ಷಗಳು ಉರುಳಿವೆ. 2021ರ ಜನವರಿ 4ರಂದು ವಿಜ್ಞಾನದ ಕುತೂಹಲಗಳನ್ನು ಜನಸಾಮಾನ್ಯರ ಸನಿಹಕ್ಕೆ ಕೊಂಡೊಯ್ಯುವ ಆಶಯದೊಂದಿಗೆ ಆರಂಭವಾದ 'ಸವಿಜ್ಞಾನ' ಬ್ಲಾಗ್, ಇಂದು ಯಶಸ್ವಿಯಾಗಿ ಆರನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಐದು ವರ್ಷಗಳ ಪಯಣ ಕೇವಲ ಅಕ್ಷರಗಳ ಜೋಡಣೆಯಲ್ಲ; ಇದು ಜ್ಞಾನದ ಹಸಿವು ಮತ್ತು ವೈಜ್ಞಾನಿಕ ಮನೋಭಾವದ ಸಮರ್ಥ ಸಮ್ಮಿಲನ.

ಒಂದು ಭಾಷೆ ಉಳಿಯುವುದು ಮತ್ತು ಬೆಳೆಯುವುದು ಆ ಭಾಷೆಯಲ್ಲಿ ಆಧುನಿಕ ಜ್ಞಾನದ ವಿನಿಮಯವಾದಾಗ ಮಾತ್ರ. 'ಸವಿಜ್ಞಾನ' ಕಳೆದ ಐದು ವರ್ಷಗಳಿಂದ ವಿಜ್ಞಾನ, ಗಣಿತ, ತಂತ್ರಜ್ಞಾನ ಹಾಗೂ ಪರಿಸರಕ್ಕೆ ಸಂಬಂಧಿಸಿದ ಜಟಿಲ ವಿಷಯಗಳನ್ನು ಕನ್ನಡದ ಸವಿಯೊಂದಿಗೆ ಸಾಮಾನ್ಯ ಓದುಗರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ವಿಜ್ಞಾನ ಅಂದರೆ ಕೇವಲ ಪಠ್ಯಪುಸ್ತಕದ ವಿಷಯವಲ್ಲ, ಅದು ನಮ್ಮ ದಿನನಿತ್ಯದ ಬದುಕಿನ ಭಾಗ ಎಂಬ ಸತ್ಯವನ್ನು ಸಾರಿ ಹೇಳುತ್ತಾ ಬಂದಿದೆ.

ನಮ್ಮ ಈ ಸುದೀರ್ಘ ಪಯಣದಲ್ಲಿ ಅನೇಕ ವಿಜ್ಞಾನಿಗಳು, ಹಿರಿಯ ಶಿಕ್ಷಕರು, ಲೇಖಕರು ಮತ್ತು ಮುಖ್ಯವಾಗಿ ಹಿರಿಯ ಸಂಪಾದಕರಾದ ಡಾ. ಟಿ.ಎ. ಬಾಲಕೃಷ್ಣ ಅಡಿಗ ಹಾಗೂ ತಂಡದ ನಿಸ್ವಾರ್ಥ ಸೇವೆ ಬೆನ್ನಿಗಿದೆ. ಶಾಲೆ-ಕಾಲೇಜುಗಳ ಪಠ್ಯಪೂರಕ ಮಾಹಿತಿಯಿಂದ ಹಿಡಿದು, ಬಾಹ್ಯಾಕಾಶದ ಅದ್ಭುತಗಳವರೆಗೆ, ಸಸ್ಯಸಂಕುಲದ ವಿನ್ಯಾಸದಿಂದ ಹಿಡಿದು ಪರಿಸರ ಸಂರಕ್ಷಣೆಯ ಜವಾಬ್ದಾರಿಯವರೆಗೆ ಈ ಬ್ಲಾಗ್ ವಿಸ್ತರಿಸಿದೆ. ಫಿಬೊನಾಚಿ ಸಂಖ್ಯೆಗಳ ಸೌಂದರ್ಯವೋ ಅಥವಾ ಸೂಪರ್ ಅರ್ಥ್‌ನ ವಿಸ್ಮಯವೋ – ಎಲ್ಲವನ್ನೂ ಸರಳ ಕನ್ನಡದಲ್ಲಿ ಕಟ್ಟಿಕೊಡುವ ನಮ್ಮ ಹಠ ಇಂದು ಸಾವಿರಾರು ಓದುಗರ ಮನ ಗೆದ್ದಿದೆ.

ಇವತ್ತು ಇಂಟರ್ನೆಟ್ ಲೋಕದಲ್ಲಿ ಸುಳ್ಳು ಸುದ್ದಿಗಳು ಮತ್ತು ಅವೈಜ್ಞಾನಿಕ ನಂಬಿಕೆಗಳು ವೇಗವಾಗಿ ಹರಡುತ್ತಿರುವ ಕಾಲದಲ್ಲಿ, 'ಸವಿಜ್ಞಾನ'ದಂತಹ ವೇದಿಕೆಗಳು ಜ್ಞಾನ ದೀಪಗಳಂತೆ ಕೆಲಸ ಮಾಡುತ್ತಿವೆ. ನಾವು ಕೇವಲ ಮಾಹಿತಿಯನ್ನು ನೀಡುತ್ತಿಲ್ಲ; ಬದಲಿಗೆ ತರ್ಕಬದ್ಧವಾಗಿ ಆಲೋಚಿಸುವ ಗುಣವನ್ನು ಬೆಳೆಸುತ್ತಿದ್ದೇವೆ. ವೈಜ್ಞಾನಿಕ ಸಾಹಿತ್ಯವನ್ನು ಬೆಳೆಸುವುದು ನಾಡಿನ ಶ್ರೇಷ್ಠ ಸೇವೆಯೆಂದು ನಾವು ಭಾವಿಸಿದ್ದೇವೆ.

ಆರನೇ ವರ್ಷಕ್ಕೆ ಹೆಜ್ಜೆ ಇಡುತ್ತಿರುವ ಈ ಹೊತ್ತಿನಲ್ಲಿ ನಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ವಿಜ್ಞಾನದ ಗೂಢಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ, ಹೊಸ ತಂತ್ರಜ್ಞಾನದ ನೆರವಿನೊಂದಿಗೆ ಓದುಗರಿಗೆ ತಲುಪಿಸುವ ಸಂಕಲ್ಪ ನಮ್ಮದು. ಈ ಜ್ಞಾನದ ದೀವಿಗೆಗೆ ಎಣ್ಣೆಯಾಗಿ ಓದುಗರ ಪ್ರೋತ್ಸಾಹ ಮತ್ತು ಲೇಖಕರ ಬರವಣಿಗೆ ಸದಾ ಇರಲಿ ಎಂದು ಹಾರೈಸುತ್ತೇವೆ. 

ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆ, ಮೂಲ ವಿಜ್ಞಾನಕ್ಕೆ ಉತ್ತೇಜನ ಹಾಗೂ ವಿದ್ಯಾರ್ಥಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಸಲುವಾಗಿ ಸ್ಥಾಪಿತವಾದ  ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ನಮ್ಮ ಇ-ಪತ್ರಿಕೆಯನ್ನು ತಮ್ಮ ವೆಬ್‌ ಸೈಟ್‌ https://kstacademy.in/ ನಲ್ಲಿ ಪ್ರಕಟಿಸಿ ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹ , ಬೆಂಬಲ ನೀಡುತ್ತಿದ್ದು ಸಂಸ್ಥೆಯ ಆಡಳಿತ ಮಂಡಲಿ ಮತ್ತು ಕರ್ನಾಟಕ ಸರ್ಕಾರಕ್ಕೆ ಆಭಾರಿಗಳಾಗಿದ್ದೇವೆ. 

ವಿಜ್ಞಾನದ ಹಾದಿ ಕಠಿಣವಾಗಿರಬಹುದು, ಆದರೆ ಅದರ ಫಲ ಎಂದಿಗೂ ಸವಿಯೇ. ಈ 'ಸವಿಜ್ಞಾನ'ದ ಪಯಣ ಹೀಗೆಯೇ ಮುಂದುವರಿಯಲಿ.

- ಸಂಪಾದಕ ಮಂಡಳಿ, ಸವಿಜ್ಞಾನ


ಅಚ್ಚರಿ ಮೂಡಿಸಿರುವ ಜೀವಿಯೊಂದರ ಅನ್ವೇಷಣೆ !

 ಅಚ್ಚರಿ ಮೂಡಿಸಿರುವ ಜೀವಿಯೊಂದರ ಅನ್ವೇಷಣೆ !

                          ಲೇಖಕರು :  

ಡಾ. ಟಿ. ಎ. ಬಾಲಕೃಷ್ಣ ಅಡಿಗ

ಕನ್ನಡ ವಿಜ್ಞಾನ ಸಂವಹನಕಾರರು

 

ನಾವು ಓದಿರುವ ಬಹುತೇಕ ಪಠ್ಯ ಪುಸ್ತಕಗಳಲ್ಲಿ ʼಜೀವʼ ಎಂದರೇನು ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಸಿಕ್ಕಿಲ್ಲ, ಅಲ್ಲವೇ? ಆದರೆ, ಪೋಷಣೆ, ಉಸಿರಾಟ, ಚಲನೆ, ಮುಂತಾದ ಲಕ್ಷಣಗಳ ಆಧಾರದ ಮೇಲೆ ಜೀವಕ್ಕೆ ಒಂದು ನಿರೂಪಣೆಯನ್ನು ಕೊಡಲಾಗುತ್ತದೆ. ಈ ನಿರೂಪಣೆಗೆ ವೈರಾಣುಗಳು ಹೊರತಾಗಿವೆ, ಏಕೆಂದರೆ, ಅವುಗಳ ಆನುವಂಶೀಯ ವಸ್ತು ಕೇವಲ ಇನ್ನೊಂದು ಆತಿಥೇಯ ಜೀವಿಯ ದೇಹದೊಳಗೆ ಮಾತ್ರ ಸಕ್ರಿಯವಾಗುತ್ತದೆ, ಇಲ್ಲವಾದಲ್ಲಿ ನಿಷ್ಕ್ರಿಯಗೊಳ್ಳುತ್ತವೆ ಎಂಬುದನ್ನು ನಾವು ಅರಿತಿದ್ದೇವೆ.

 ಡಾಲ್‌ಹೌಸಿ ವಿಶ್ವವಿದ್ಯಾಲಯದ ರಿಯೋ ಹರಾಡ (Rio Herad) ಮತ್ತು ಸಹ ಪ್ರಾಧ್ಯಾಪಕರು ಪತ್ತೆ ಮಾಡಿದ ಒಂದು ಸೂಕ್ಷ್ಮಾಣು ಈ ನಂಬಿಕೆಯನ್ನೂ ಹುಸಿಗೊಳಿಸಿದೆ ! ಸದ್ಯಕ್ಕೆ ಸುಕುನಾರ್ಚಿಯಮ್‌ ಮಿರಾಬಿಲೆ (Sukunaarchaeum mirabile) ಎಂದು ವೈಜ್ಞಾನಿಕವಾಗಿ ನಾಮಕರಣ ಮಾಡಲಾಗಿರುವ ಈ ಸೂಕ್ಷಾಣುವನ್ನು ಜಪಾನಿನ ಕರಾವಳಿಯಲ್ಲಿನ ಪ್ಲವಕ ಪ್ರಭೇದವೊಂದರ ಡಿ.ಎನ್.ಎ.ನ ಕಣಗಳಲ್ಲಿ ಅಡಗಿದ್ದ ಸ್ಥಿತಿಯಲ್ಲಿ ಪತ್ತೆ ಮಾಡಲಾಯಿತು.

                           ಚಿತ್ರ 1 : ಸುಕುನಾರ್ಚಿಯಮ್ ಮಿರಾಬಿಲೆ

 ವೈರಾಣುಗಳಲ್ಲಿ ಜೀವಕೋಶಗಳಿಲ್ಲ ಎಂಬುದು ಈಗಾಗಲೇ ಸಾಬೀತಾಗಿರುವ ಅಂಶ. ಅವುಗಳ ಜೀನೋಮ್ (ವಂಶವಾಹಿ ಸಮೂಹ) ಬ್ಯಾಕ್ಟೀರಿಯಾಗಳ ಜೀನೋಮ್‌ಗಿಂತ ಚಿಕ್ಕದು. ಆದರೆ, ಇತ್ತೀಚಿನ ವರ್ಷಗಳಲ್ಲಿ ಪತ್ತೆ ಮಾಡಲಾದ ಕೆಲವು ಬೃಹತ್‌ ವೈರಾಣುಗಳಲ್ಲಿನ ಜೀನೋಮ್‌ನ ಗಾತ್ರ ಕೆಲವು ಬ್ಯಾಕ್ಟೀರಿಯಾಗಳ ಜೀನೋಮ್‌ ಗಿಂತ ದೊಡ್ಡದಾಗಿದೆ ಎಂಬುದು ಅಚ್ಚರಿ ಮೂಡಿಸಿದ ಅಂಶ.  

 ಈ ವಿಷಯಗಳಿಗೆ ಸಂಬಂಧಿಸಿದಂತೆ, ಸುಕುನಾರ್ಚಿಯಮ್‌  ವಿಜ್ಞಾನಿಗಳಲ್ಲಿ ಇನ್ನಷ್ಟು ಅಚ್ಚರಿಗಳನ್ನು ಮೂಡಿಸಿದೆ. ಇದರಲ್ಲಿ ಜೀವಕೋಶವಿದೆ, ಅದರೆ ಹಲವು ಲಕ್ಷಣಗಳಲ್ಲಿ ಇದು ವೈರಾಣುಗಳನ್ನು ಹೋಲುತ್ತದೆ ! ತನ್ನ ಜೀವಕೋಶದ ಬಹುತೇಕ ಕೆಲಸಗಳನ್ನು ಎಲ್ಲ ವೈರಾಣುಗಳಂತೆ ತಾನು ವಾಸಿಸುವ ಅತಿಥೇಯ ಜೀವಕೋಶಕ್ಕೆ ವಹಿಸಿಕೊಡುತ್ತದೆ. ಅದರೆ, ತನ್ನದೇ ಆದ ರೈಬೋಸೋಮ್‌ಗಳು ಹಾಗೂ ಎಂ-ಆರ್.ಎನ್.ಎ.ಗಳನ್ನು ಉತ್ಪಾದಿಸಲು ಅಗತ್ಯವಾದ ಜೀನ್‌ಗಳನ್ನು ಹೊಂದಿದೆ. ಇದು ವೈರಾಣುಗಳಲ್ಲಿ ಇಲ್ಲದ ಒಂದು ಲಕ್ಷಣ.

 ದಾಖಲೆಯ ಸಣ್ಣ ಗಾತ್ರದ ಜೀನೋಮ್‌ !

ಸುಕುನಾರ್ಚಿಯಮ್‌ ಎಂಬ ಜೀವಿಯ ಸಂಪೂರ್ಣ ಜೀನೋಮ್‌ ಕೇವಲ 2,38,000 ನೈಟ್ರೋಜನ್‌ ಬೇಸ್‌ ಜೋಡಿಗಳನ್ನು ಹೊಂದಿದೆ. ಸುರುಳಿ ಬಿಡಿಸಿದರೆ, ಇದರ ಉದ್ದ ಸುಮಾರು ಈ ಲೇಖನದಷ್ಟಿರಬಹುದು ! ಆರ್ಕಿಯಾ(Archea) ಗುಂಪಿನ ನ್ಯಾನೋಖಿಯಮ್‌ ಈಕ್ವಿಟೆನ್ಸ್‌ (nanoarchaeum equitans)ಎಂಬ ಬ್ಯಾಕ್ಟೀರಿಯಾದ ಜೀನೋಮ್‌ ನಲ್ಲಿ 4,90,000 ಬೇಸ್‌ ಜೋಡಿಗಳಿದ್ದು ಅದು ಇಲ್ಲಿಯವರೆಗೆ ಅತಿ ಸಣ್ಣ ಜೀನೋಮ್‌ ಹೊಂದಿರುವ ಜೀವಿ ಎಂದು ಭಾವಿಸಲಾಗಿತ್ತು.

ವೈರಾಣುಗಳ ಗಾತ್ರ ಎಷ್ಟೇ ಸೂಕ್ಷ್ಮವಿರಲಿ, ದೊಡ್ಡದಿರಲಿ, ಅವುಗಳಲ್ಲಿ ಪ್ರೋಟೀನ್‌ ಸಂಶ್ಲೇಷಣೆಗೆ ಅಗತ್ಯವಾದ ʼಟೂಲ್ ಕಿಟ್‌ʼ‌ ಇರುವುದಿಲ್ಲ. ಈ ಕಾರಣಕ್ಕಾಗಿ, ಹೆರಾಡ್‌ ಮತ್ತು ಅವರ ತಂಡ ಸುಕುನಾರ್ಚಿಯಮ್‌ ಅನ್ನು “ಕೇವಲ ಸ್ವಪ್ರತೀಕರಣದ‌ ತಿರುಳನ್ನು (core)‌ ಹೊಂದಿರುವ ಜಿವಕೋಶ  “ ಎಂದು ಪರಿಗಣಿಸುತ್ತಾರೆ.

 ಸುಕುನಾರ್ಚಿಯಮ್‌ ವೈರಾಣುವನ್ನು ಹೋಲುವ ಸೂಕ್ಷ್ಮಜೀವಿಯೆ ?

ತಮ್ಮ ಸಂಶೋಧನೆಯ ವರದಿಯಲ್ಲಿ ಹೆರಾಡ್‌ ನ ತಂಡದವರು ಹೇಳಿರುವ ಪ್ರಕಾರ, “ಸುಕುನಾರ್ಚಿಯಮ್‌ ನ ಜೀನೋಮ್‌ ನಲ್ಲಿ ಯಾವುದೇ ನಿರ್ದಿಷ್ಟ ಚಯಾಪಚಯ ಪಥಮಾರ್ಗಗಳಿಲ್ಲ ಹಾಗೂ ಡಿ.ಎನ.ಎ. ಸ್ವಪ್ರತೀಕರಣ,  ಹಾಗೂ ಪ್ರೋಟೀನ್‌ ಸಂಶ್ಲೇಷಣೆ ಪ್ರಕ್ರಿಯೆಗಳಿಗೆ ಅಗತ್ಯವಾದ ಕೋಶೀಯ ವ್ವವಸ್ಥೆಯೂ ಇಲ್ಲ. ಇದರ ಆನುವಂಶೀಯ ಸಂಕೇತ(genetic code) ವೈರಾಣುವೊಂದರ ಮಾಹಿತಿಯ ವ್ಯವಸ್ಥೆಯನ್ನು ಹೋಲುತ್ತದೆಯೇ ಹೊರತು, ಸುವ್ಯವಸ್ಥೆಯ ಸೂಕ್ಷ್ಮಜೀವಿಯ ವ್ಯವಸ್ಥೆಯನ್ನಲ್ಲ”.

 ಇಷ್ಟಾದರೂ, ಸುಕುನಾರ್ಚಿಯಮ್‌ ಅನ್ನು ಜೀವಿಗಳ ಪ್ರಾಥಮಿಕ ಡೊಮೈನ್‌ ಗುಂಪಾದ  ಆರ್ಕಿಯಾದಲ್ಲೇ ವರ್ಗೀಕರಿಸಲಾಗಿದೆಯೇ ಹೊರತು. ವೈರಾಣುಗಳ ಜೊತೆ ಪರಿಗಣಿಸಿಲ್ಲ. ಜೀವಿಗಳ ವಂಶೇತಿಹಾಸ ವೃಕ್ಷದಲ್ಲಿ (phylogenetic tree) ಗೊತ್ತಿರುವ ಗುಂಪಿಗೆ ಸೇರಿಸದೆ, ಪ್ರತ್ಯೇಕ ಶಾಖೆಯಲ್ಲಿಟ್ಟು ಇದನ್ನು ಪ್ರತ್ಯೇಕ ವಂಶದಲ್ಲಿ ಪರಿಗಣಿಸಬಹುದು ಎಂಬ ಅಭಿಪ್ರಾಯ ಹರಾಡ್ ಮತ್ತು ತಂಡದ ವಿಜ್ಞಾನಿಗಳದ್ದು.

 


                       ಚಿತ್ರ 2 : ವೈರಾಣುವಿನ ಜೊತೆ ಹೋಲಿಕೆ


ಈ ವಿಜ್ಞಾನಿಗಳ ತಂಡ ಸುಕುನಾರ್ಚಿಯಮ್‌ ಅನ್ನು ಆಕಸ್ಮಿವಾಗಿ ಪತ್ತೆ ಮಾಡಿದ್ದು, ಸಿತಾರೆಸ್ಟೆಸ್‌ ರೀಜಿಯಸ್ (Citharistes regius) ಎಂಬ ದ್ವಿಲೋಮಾಂಗಿ (dinoflagellate) ಸೂಕ್ಷ್ಮಜೀವಿ ಪ್ಲವಕದ  ಡಿಎನ್.ಎ. ಯ ಸರಣಿಯ ಬಗ್ಗೆ ಅನ್ವೇಷಣೆ ನಡೆಸುತ್ತಿದ್ದಾಗ.‌  ಈ ಪ್ಲವಕದ ಆನುವಂಶೀಯ ವಸ್ತುವಿನ ಕಣಗಳಲ್ಲಿ ಲೂಪ್ ಆಕಾರದಲ್ಲಿ ಕಂಡುಬಂದ  ಪರತಂತ್ರ ಡಿ.ಎನ್.ಎ. ತುಣುಕೊಂದನ್ನು ವಿಶ್ಲೇಷಿಸಿದಾಗ. ಪರಿಚಿತವಿರುವ ಯಾವುದೇ ಜೀವಿಯ ಡಿ.ಎನ್.ಎ.. ಜೊತೆಗೆ ಈ ತುಣುಕು ಹೊಂದಿಕೆಯಾಗದಿದ್ದಾಗ, ಇದೊಂದು ಅಪರಿಚಿತ ಜೀವಿಯದ್ದಿರಬಹುದೆಂಬ ಅಭಿಪ್ರಾಯಕ್ಕೆ ವಿಜ್ಙಾನಿಗಳು ಬಂದಿದ್ದರು.   ಹಲವು ಪ್ಲವಕಗಳು ತಮಗೆ ಬೇಕಾದ ವಿಟಮಿನ್‌ಗಳಿಗೆ ಬ್ಯಾಕ್ಟೀರಿಯಾಗಳನ್ನು ಆಶ್ರಯಿಸಿದರೆ, ಇನ್ನೂ ಕೆಲವು ಶೈವಲ ಜೀವಕೋಶಗಳನ್ನು ತಮ್ಮೊಳಗೆ ಇರಿಸಿಕೊಂಡು, ಅವು ನಡೆಸುವ ದ್ಯುತಿಸಂಶ್ಲೇಷಣೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತವೆ.

ಸುಕುನಾರ್ಚಿಯಮ್‌ ಈ ಒಂದು ನಿಕಟ ಸಂಬಂಧವನ್ನು ಇನ್ನೊಂದು ತುತ್ತ ತುದಿಗೆ ಕೊಂಡೊಯ್ದಿದೆ. ತನಗೆ ಅವಶ್ಯವಿಲ್ಲದ ಎಲ್ಲಾ ಜೀನ್‌ಗಳನ್ನು ಕಳೆದುಕೊಂಡು, ತಾನು ಜೀವಂತವಾಗಿ ಉಳಿಯಲು ಬೇಕಾದ  ಕೋಶೀಯ ವ್ಯವಸ್ಥೆಗೆ ಸಂಪೂರ್ಣವಾಗಿ ತನ್ನ ಆತಿಥೇಯ ಜೀವಿಯನ್ನು ಆಶ್ರಯಿಸಿಕೊಳ್ಳುತ್ತದೆ.

 ವಂಶೇತಿಹಾಸ ವೃಕ್ಷದ ಪುನಾರಚನೆಯಾಗಬೇಕೆ ?

ಸುಕುನಾರ್ಚಿಯಮ್‌ ನಲ್ಲಿ ರೈಬೋಸೋಮ್‌ಗೆ ಸಂಬಂಧಿಸಿದ ಜೀನ್‌ಗಳು ನಾಶವಾಗದೇ ಉಳಿದಿರುವುದರಿಂದ ಇದು ಕೋಶೀಯ ಜೀವಿ ಎಂಬ ಅರ್ಹತೆಯನ್ನು ಉಳಿಸಿಕೊಂಡಿದೆ. ಇದನ್ನು ಅಣ್ವಿಕ ಲಿಟ್ಮಸ್‌ ಪರೀಕ್ಷೆಯಿಂದಲೂ ಖಚಿತ ಪಡಿಸಿಕೊಳ್ಳಲಾಗಿದೆ. ಅದರ ಕುಂಠಿತ ಚಯಾಪಚಯ ಕ್ರಿಯೆಯಿಂದಾಗಿ ಎಲ್ಲ ವೈರಾಣುಗಳಲ್ಲಿರುವಂತೆ, ಪೋಷಕಾಂಶಗಳನ್ನು ಪಡೆದುಕೊಳ್ಳುವ, ಎ.ಟಿ.ಪಿ. ಬಿಡುಗಡೆ ಮಾಡುವ ಮತ್ತು ಯಾವ ಬಾಹ್ಯ ಸಹಾಯವಿಲ್ಲದೆ ಕಾರ್ಬನ್‌ ಸ್ಥಿರೀಕರಿಸುವ ಸಾಮರ್ಥ್ಯಗಳು ತಡೆ ಹಿಡಿಯಲ್ಪಟ್ಟಿವೆ.  

ವಂಶೇತಿಹಾಸಕ್ಕೆ ಸಂಬಂಧಿಸಿದ ವಿಶ್ಲೇಷಣೆಗಳು ಸುಕುನಾರ್ಚಿಯಮ್‌ ಅನ್ನು ಆರ್ಕಿಯಾ ಶಾಖೆಯಿಂದ ಆಳವಾಗಿ ಟಿಸಿಲೊಡೆದ ಪ್ರಮುಖ ಶಾಖೆ ಎಂದು ಪರಿಗಣಿಸುತ್ತವೆ. ಪಾರಿಸಾರಿಕ ಸರಣಿ ವಿಶ್ಲೇಷಣೆಯ ಮಾಹಿತಿಗಳು ಸುಕುನಾರ್ಚಿಯಮ್‌ ರೀತಿಯ ಜೀವಿಗಳ ಸರಣಿಗಳನ್ನು  ಒಂದು ವೈವಿಧ್ಯಮಯ ಮತ್ತು ಈ ಹಿಂದೆ ಪತ್ತೆ ಹಚ್ಚಿಲ್ಲದ ಸೂಕ್ಷಜೀವಿಗಳ ಗುಂಪನ್ನು ಸೂಚಿಸುತ್ತವೆ. ಹೀಗಾಗಿ, ಪ್ರಸ್ತುತ ಜೀವಿಗಳ ವಂಶೇತಿಹಾಸದ ವೃಕ್ಷವನ್ನು ಪುನಾರಚಿಸುವ ಸಂದರ್ಭ ಒದಗಿ ಬರಬಹುದು.

ಜೀವ ಒಂದು ದ್ವಿಮಾನ (binary) ಅಥವಾ ವಿಶಾಲ ವ್ಯಾಪ್ತಿಯ ಗುರುತು ಪಟ್ಟಿ ಹೊಂದಿರಬಹುದೇ ಎಂಬ ಬಗ್ಗೆ ವಿಜ್ಞಾನಿಗಳಲ್ಲಿ ಸಹಮತವಿಲ್ಲ. ಅದರೆ, ಸುಕುನಾರ್ಚಿಯಮ್‌ ವಿಶಾಲ ವ್ಯಾಪ್ತಿಯ ವಾದವನ್ನು ಮುಂತಳ್ಳಿದೆ. ಸುಕುನಾರ್ಚಿಯಮ್‌ ನಂಥ ಇನ್ನಷ್ಟು ಸೂಕ್ಷ್ಮಜೀವಿಗಳು ಇವೆ ಎಂದಾದಲ್ಲಿ, ಸ್ವತಂತ್ರವಾಗಿ ಸೂಕ್ಷ್ಮಜೀವಿಗಳನ್ನು  ವಿಶ್ಲೇಷಣೆ ಮಾಡುವ ಜೈವಿಕ ಸುರಕ್ಷತೆಯ ಶಿಷ್ಟಾಚಾರಗಳು ಸಹಜೀವನ ನಡೆಸುವ ಪರಾವಲಂಬಿಗಳ ಸಂಪೂರ್ಣ ವರ್ಗಗಳನ್ನೇ ನಿರ್ಲಕ್ಷಿಸಿರುವ ಸಾಧ್ಯತೆ ಇದೆ. ವಿಜ್ಞಾನಿಗಳು ಈಗ ಸಾಗರ ಪರಿಸರವ್ಯವಸ್ಥೆಗಳಲ್ಲಿ ಮತ್ತು ಸಹಜೀವನ ವ್ಯವಸ್ಥೆಗಳಲ್ಲಿ ಇರಬಹುದಾದ ಇನ್ನಷ್ಟು ಇಂಥ ಸೂಕ್ಷ್ಮಜೀವಿಗಳನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಜೊತೆಗೆ, ಸುಕುನಾರ್ಚಿಯಮ್‌ ಉಳಿವಿಗೆ ಪೂರಕ ಪರಿಸರ ಒದಗಿಸುತ್ತಿರುವ ನಿರ್ದಿಷ್ಟ ಅತಿಥೇಯ ಜೀವಿಯನ್ನು ಪತ್ತೆ ಮಾಡುವ ಗುರಿಯನ್ನೂ ಹೊಂದಿದ್ದಾರೆ. ಅದರಲ್ಲಿ ಅವರು ಯಶಸ್ವಿಯಾದರೆ, ಈ ರೀತಿಯ ತೀವ್ರ ಪರಾವಲಂಬನೆಯ ಹಿಂದಿರುವ ವಿಕಾಸೀಯ ಒತ್ತಡಗಳನ್ನು ಅರ್ಥ ಮಾಡಿಕೊಳ್ಳುವುದು ಸಾದ್ಯವಾಗುತ್ತದೆ. 

ಆಧುನಿಕ ವೈದ್ಯಶಾಸ್ತ್ರಕ್ಕೆ ಪುರಾತನ ಮರಿಹುಳು ಚಿಕಿತ್ಸೆ

ಆಧುನಿಕ ವೈದ್ಯಶಾಸ್ತ್ರಕ್ಕೆ ಪುರಾತನ ಮರಿಹುಳು ಚಿಕಿತ್ಸೆ

 

ಲೇಖಕರು : 

ಡಾ|| ಎಂ. ಜೆ. ಸುಂದರ್‌ರಾಮ್


    

ಸಕ್ಕರೆ ಕಾಯಿಲೆಯಿಂದ ನರಳುತ್ತಿದ್ದ ಹಿರಿಯ ರೋಗಿಯ ಕಾಲಿನಲ್ಲಿ ಭಯಾನಕ ಹುಣ್ಣಾಗಿ ರಕ್ತ ಸೋರುತ್ತಿತ್ತು. ಆಸ್ಪತ್ರೆ ಸೇರಿದ ಅವರು, ಚಿಕಿತ್ಸೆಯ ಮೂಲಕ ತಮ್ಮ ಹುಣ್ಣು ಬೇಗನೇ ಗುಣವಾಗಬಹುದು ಎಂದುಕೊಂಡಿದ್ದರು. ಆದರೆ ಕಾಲುಹುಣ್ಣು ಮತ್ತಷ್ಟು ಉಲ್ಬಣವಾಗಿ, ಗುಣವಾಗುವ ಸೂಚನೆಗಳೇ ಕಾಣಲಿಲ್ಲ.

ರೋಗಿಯನ್ನು ದೀರ್ಘವಾಗಿ ತಪಾಸಣೆ ಮಾಡಿದ ವೈದ್ಯರು ರೋಗಿಯನ್ನುದ್ದೇಶಿಸಿ, ‘ನಿಮ್ಮ ಹುಣ್ಣು ಸಧ್ಯಕ್ಕೆ ವಾಸಿಯಾಗುವಂತೆ ಕಾಣುತ್ತಿಲ್ಲ. ನಿಮ್ಮ ಜೀವ ಉಳಿಸಿಕೊಳ್ಳಲು ನಿಮಗೆ ಒಂದೇ ಒಂದು ಮಾರ್ಗವಿದೆ – ಅದು ನಿಮ್ಮ ಪಾದವನ್ನು ತುಂಡರಿಸುವುದು (amputate)’ ಎಂದರು.

ವೈದ್ಯರ ಮಾತು ಕೇಳಿದ ರೋಗಿಗೆ ಮೈಮೇಲೆಲ್ಲ ಬೆವರು ಎರಚಿತು. ರೋಗಿಯ ಸ್ಥಿತಿಯನ್ನು ಗಂಭೀರವಾಗಿ ವಿಶ್ಲೇಷಿಸಿದ ವೈದ್ಯರು,
‘ನನ್ನ ಬತ್ತಳಿಕೆಯಲ್ಲಿ ಇನ್ನೊಂದು ಕೊನೆಯ ಪ್ರಯೋಗ ಅಸ್ತ್ರ ಮಾತ್ರ ಉಳಿದಿದೆ. ನೀವು ಮನಸ್ಸು ಮಾಡಿ ಒಪ್ಪಿದರೆ ಅದನ್ನೂ ಪ್ರಯೋಗಿಸಿ ನೋಡಬಹುದು’ ಎಂದರು.

ಹುರುಪಿನಿಂದ ತಡಿಬಿಡನೆ ಸಿರಿದು ಕುಳಿತ ರೋಗಿ, 
‘ಯಾವುದು ಅಸ್ತ್ರ? ಅದರಿಂದ ನನ್ನ ಕಾಲು ಉಳಿಯುವುದೇ ಆದರೆ ಧಾರಾಳವಾಗಿ ಪ್ರಯತ್ನಿಸಿ’ ಎಂದರು.

‘ಏನಿಲ್ಲ. ನಿಮ್ಮ ಗಾಯದ ಮೇಲೆ ಸಣ್ಣ ಸಣ್ಣ ಹುಳುಗಳನ್ನು ಬಿಟ್ಟು ನೋಡೋಣವೆಂದಿದ್ದೇನೆ; ನಿಮ್ಮ ಗಾಯವನ್ನು ಅವು ಗುಣಪಡಿಸಬಹುದೇನೋ’ ಎಂದು ತುಂಟ ನಗೆ ನಗುತ್ತ ರೋಗಿಯತ್ತ ನೋಡಿದರು.

‘ವೈದ್ಯರೆ, ದಯವಿಟ್ಟು ತಮಾಷೆ ಮಾಡಬೇಡಿ. ಗಾಯಕ್ಕೆ ಹುಳು ಬಿಟ್ಟರೆ ನನ್ನ ಹುಣ್ಣು ಇನ್ನಷ್ಟು ಕೊಳೆಯುತ್ತ ಹದಗೆಡುತ್ತದೆ. ನಾನು ನನ್ನ ಕಾಲನ್ನು ಕಳೆದುಕೊಳ್ಳಬೇಕಾದೀತು. ನಿಮ್ಮ ಈ ಚೇಷ್ಟೆಯ ಪರಿಹಾರಕ್ಕೆ ನೂರು ನಮಗಳು. ದಯವಿಟ್ಟು ಹಾಗೆ ಮಾಡಬೇಡಿ’ ಎಂದು ರೋಗಿ ಕಂಗಾಲಾದರು.

‘ನಾನು ತಮಾಷೆ ಮಾಡುತ್ತಿಲ್ಲ. ಇದು ಸತ್ಯ. ಅನೇಕ ಕಡೆ ಈ ಚಿಕಿತ್ಸೆಯಿಂದ ನಂಬಲಾಗದಂತಹ ಒಳ್ಳೆಯ ಫಲಿತಾಂಶವನ್ನು ಕೊಟ್ಟ ವರದಿಗಳು ಬಂದಿವೆ. ವೈದ್ಯರು, ರೋಗಿಗಳಾಗಿ ಈ ಚಿಕಿತ್ಸೆಯನ್ನು ಸ್ವಾಗತಿಸಿದ್ದಾರೆ’ ಎಂದರು ವೈದ್ಯರು.

ಅವರ ನಂಬಿಕೆಯ ಮಾತುಗಳಿಂದ ರೋಗಿಗೆ ಹೊಸ ಚೈತನ್ಯ ಉಕ್ಕಿ ಬಂದು ಈ ‘ಭೀಕರ’ ಚಿಕಿತ್ಸೆಗೆ ಸಮ್ಮತಿಸಿದರು.

ಮರುದಿನ ವೈದ್ಯರು 1 ರಿಂದ 3 ಮಿ.ಮೀ. ಉದ್ದದ ಮರಿಹುಳುಗಳು (Maggots) ಇರುವ ತಾಮ್ರದ ಬೆಲೆಯ ಕಟ್ಟು ಪಟ್ಟಿ (copper-mesh bandage) ತಂದು ರೋಗಿಯ ಕಾಲು ಹುಣ್ಣನ್ನು ಸುತ್ತಿದರು. ಹಸಿದಿದ್ದ ಆ ಸಣ್ಣ ಮರಿಹುಳುಗಳು ಹುಣ್ಣಿನ ಸತ್ತಿರುವ ಭಾಗಗಳನ್ನೆಲ್ಲ ಬಕಾಸುರರಂತೆ ಭಕ್ಷಿಸುತ್ತೊಡಗಿದವು. ರೋಗಿಗೆ ಹುಣ್ಣಿನ ಸುತ್ತ ಕಚಗುಳಿ ಇಡುವ ಅನುಭವವಾಯಿತು. ಮೂರು ವಾರಗಳು ಕಳೆಯಿತು.

ನಂತರ ವೈದ್ಯರು ರೋಗಿಯ ಪಟ್ಟಿಯನ್ನು ಬಿಚ್ಚಿ ಪರಿಶೀಲಿಸಿದಾಗ ಹುಣ್ಣು ಪೂರ್ಣವಾಗಿ ಒಣಗಿ, ಗುಣವಾಗಿತ್ತು! ಆನಂದಾಶ್ಚರ್ಯಗಳಿಂದ ಆವೇಶಿತರಾದ ರೋಗಿ ಖುಷಿಯಿಂದ ವೈದ್ಯರಿಗೆ ನವಿಸು ಮಣೆಗೇ ದೌಡಾಯಿಸಿದರು.



ಇದು ಅಡಗೂಳಜ್ಜಿಯ ಕಥೆ ಎಂದುಕೊಳ್ಳಬೇಡಿ. ಇದೊಂದು ನವೀನ ವೈದ್ಯಚಿಕಿತ್ಸೆ. ಇದಕ್ಕೆ ಮರಿಹುಳು ಚಿಕಿತ್ಸೆ (maggot therapy) ಎಂದು ಹೆಸರಿದೆ. ಈ ಚಿಕಿತ್ಸೆಯನ್ನು ಉತ್ತರ ಅಮೆರಿಕ, ಯುರೋಪ್, ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ, ಸಿಂಗಪುರ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಇರಾನ್, ದಕ್ಷಿಣ ಆಫ್ರಿಕಾ, ಇಜಿಪ್ಟ್, ಇಸ್ರೇಲ್, ಸೌದಿ ಅರೇಬಿಯಾ, ಮೆಕ್ಸಿಕೋ, ಕೊಲಂಬಿಯಾ ಮುಂತಾದ, ತಂತ್ರಜ್ಞಾನದಲ್ಲಿ ಮುಂದಿರುವ ದೇಶಗಳು ಅಳವಡಿಸಿಕೊಂಡಿವೆ.

    ಅಮೆರಿಕದ 150ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ, ವಿಶ್ವದ ಸುಮಾರು ಸಾವಿರಕ್ಕೂ ಹೆಚ್ಚು ಚಿಕಿತ್ಸಾಕೇಂದ್ರಗಳಲ್ಲಿ ಈ ಚಿಕಿತ್ಸೆ ಪ್ರಸ್ತುತ ಬಳಕೆಯಲ್ಲಿದೆ. ಜೀವಂತ ಪ್ರಾಣಿಗಳಲ್ಲೂ ವೈದ್ಯಕೀಯ ಮೌಲ್ಯವಿದೆ ಎಂಬುದನ್ನು ಮರಿಹುಳು ಚಿಕಿತ್ಸೆ ದೃಢಪಡಿಸುತ್ತದೆ.

    ಸಕ್ಕರೆ ರೋಗಿಯ ಗಾಯದ ಸುತ್ತ ಇರುವ ನರಗಳು ದುರ್ಬಲವಾಗಿ, ರಕ್ತ ಪರಿಚಲನೆ ಕುಂದುತ್ತದೆ. ಇದರಿಂದ ಗಾಯದೊಡನೆ ಹೋರಾಡುವ ಬಿಳಿ ರಕ್ತಕಣಗಳು ಮತ್ತು ರಾಸಾಯನಿಕಗಳು ಗಾಯದ ಸ್ಥಳಕ್ಕೆ ಬರಲಾರದೆ, ಗಾಯ ದಿನೇ ದಿನೇ ಉಗ್ರವಾಗುತ್ತದೆ. ಗಾಯದ ಸುತ್ತ ಕೋಶಗಳು ಬೆಳೆಯದಂತೆ ತಡೆದು, ಗಾಯ ಒಣಗಲು ಬೇಕಾದ ಕೊಲಾಜೆನ್ ನಾರುಗಳನ್ನು ಕರಗಿಸಿಬಿಡುತ್ತವೆ. ಇದರಿಂದ ಗಾಯ ದೊಡ್ಡದಾಗಿ, ವ್ರಣವಾಗುತ್ತದೆ. ಬ್ಯಾಕ್ಟೀರಿಯಾಗಳು ಕೂಡಲೇ ಗಾಯವನ್ನು ಆಕ್ರಮಿಸಿ ತೆಳುವಾದ ಜೈವಿಕ ಪಟಲ (biofilm)ವಾಗಿ ಗಾಯವನ್ನು ಹೊದಿಕೆಯಂತೆ ಆವರಿಸುತ್ತವೆ. ಈ ಪಟಲವು ಆಂಟಿಬಯೋಟಿಕ್ ಮತ್ತು ಔಷಧಗಳು ಬ್ಯಾಕ್ಟೀರಿಯಾವನ್ನು ಸಮೀಪಿಸದಂತೆ ತಡೆಯುತ್ತದೆ. ಜೈವಿಕ ಪಟಲ ಹಾಗೂ ಸತ್ತ ಅಂಗಾಂಶಗಳಿಂದ ಆವೃತವಾಗಿರುವವರೆಗೆ ಅತ್ಯಾಧುನಿಕ ಚಿಕಿತ್ಸೆಗಳೂ ಗಾಯಗಳನ್ನು ಗುಣಪಡಿಸಲಾರವು.

ನೆಪೋಲಿಯನ್‌ನ ಫ್ರೆಂಚ್ ಸೈನ್ಯದಲ್ಲಿದ್ದ ಕೆಲವು ಸೈನಿಕರು ಯುದ್ಧದಲ್ಲಿ ತೀವ್ರವಾಗಿ ಗಾಯಗೊಂಡರು. ಅನೇಕ ಮರಿಹುಳುಗಳು (maggots) ರೋಗಿಗಳ ಗಾಯಗಳನ್ನು ಮುತ್ತಿಕೊಂಡಿರುವ ದೃಶ್ಯವನ್ನು ನೋಡಿದ ಅಮ್ರೋಯ್ಸ್ ಪಾರೆ (Amroise Pare) ಎಂಬ ಫ್ರೆಂಚ್ ಶಸ್ತ್ರಚಿಕಿತ್ಸಾ ವೈದ್ಯರು ಭಯಭೀತರಾದರು. ಇವುಗಳಿಂದ ಗಾಯಗಳಿಗೆ ಸೋಂಕಾಗಬಹುದೆಂದು ತಿಳಿದು ಮರಿಹುಳುಗಳನ್ನು ಗಾಯದಿಂದ ಬೇರ್ಪಡಿಸಿ ಶುದ್ಧಿ ಮಾಡಲಾರಂಭಿಸಿದರು. ಮತ್ತೊಬ್ಬ ರೋಗಿಯ ತಲೆಬುರುಡೆಯಲ್ಲಿ ಆಳವಾದ ಗಾಯವಾಗಿದ್ದು, ಅವನು ಬದುಕುಳಿಯಲಾರನೆಂದೆನಿಸಿತು. ಆದರೆ, ಕೆಲವು ದಿನಗಳ ನಂತರ ಅವನ ಬುರುಡೆಯ ಗಾಯ ಇತರ ಸೈನಿಕರಿಗಿಂತ ಬೇಗನೆ ಗುಣವಾಗತೊಡಗಿತು. ಕುತೂಹಲದಿಂದ ಗಮನಿಸಿದಾಗ ಅನೇಕ ಮರಿಹುಳುಗಳು ಅವನ ಬುರುಡೆಗಾಯದಿಂದ ಹೊರಬರುತ್ತಿರುವ ಅಪರೂಪದ ದೃಶ್ಯವನ್ನು ಕಂಡು ಆಶ್ಚರ್ಯಪಟ್ಟರು. ಅವನ ಗಾಯ ಬೇಗನೆ ಗುಣವಾಗಲು ಈ ಮರಿಹುಳುಗಳೇ ಕಾರಣವೆಂದು ಆಗ ಅವರಿಗೆ ಹೊಳೆಯಿತು.

ಗಾಯಗಳ ಮೇಲೆ ಹುಳುಗಳನ್ನು ಉದ್ದೇಶಪೂರ್ವಕವಾಗಿ ಲೇಪಿಸಿ ಅವುಗಳ ಕಾರ್ಯತಂತ್ರವನ್ನರಿಯುವ ಪ್ರಯತ್ನ ಅಮೆರಿಕದ ಅಂತರ್ಯುದ್ಧದ (American Civil War) ಕಾಲದಲ್ಲಿ ಕೆಲವು ವೈದ್ಯರು ಪ್ರಯತ್ನಿಸಿದರೆಂಬ ಮಾಹಿತಿಯಿದೆ. ಮೊದಲ ಮಹಾಯುದ್ಧದಲ್ಲಿ ಅನೇಕ ಸೈನಿಕರು ತೀವ್ರ ಗಾಯಗೊಂಡು, ಸೋಂಕಿನಿಂದ ನರಳುತ್ತಿದ್ದಾಗ ಅವರನ್ನು ಆರೈಕೆ ಮಾಡುತ್ತಿದ್ದ ವಿಲಿಯಂ ಬೇಯರ್ (William Baer) ಎಂಬ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವೈದ್ಯರು, ಅವರ ಗಾಯಗಳನ್ನು ಅನೇಕ ಮರಿಹುಳುಗಳು ಮುತ್ತಿಕೊಂಡಿರುವುದನ್ನು ಗಮನಿಸಿದರು. ಅಸಹ್ಯಪಡುತ್ತಾ ಅವನ್ನು ಹೊರತೆಗೆದು ಗಾಯಗಳನ್ನು ಶುದ್ಧೀಕರಿಸಲು ಹೊರಟರು. ಆಗ ಅವರಿಗೆ ಸೆರೆಂಡಿಪಿಟಿಯ ಬಾಣ ನಾಟಿತು! ಮರಿಹುಳುಗಳು ಮುತ್ತಿದ್ದ ಗಾಯಗಳಿಗೆ ಸೋಂಕು ತಗಲದೆ ಇದ್ದುದನ್ನು ಗಮನಿಸಿದರು. ಬದಲಿಗೆ, ಅವು ಬೇಗನೆ ಗುಣವಾಗುತ್ತಿದ್ದವು! ಹುಳುಗಳಿಲ್ಲದ ಗಾಯಗಳಲ್ಲಿ ಸೋಂಕು ಮತ್ತು ಊತಗಳು ಎದ್ದು ಕಾಣುತ್ತಿದ್ದವು. ಇದರಿಂದ, ಈ ಹುಳುಗಳಿಂದ ಗಾಯಗಳಿಗೆ ಸೋಂಕು ತಗುಲದೆಂದೂ, ಈ ಹುಳುಗಳಿಂದ ಗಾಯಗಳು ಬೇಗನೆ ಗುಣವಾಗುತ್ತವೆಂದೂ ಬೇಯರ್ ಅರಿತರು. ಈ ಮರಿಹುಳುಗಳಿಂದ ಸಾವಿನ ಭೀತಿಯಲ್ಲಿದ್ದ ಅನೇಕ ಸೈನಿಕರು ಸಾವಿನಿಂದ ತಪ್ಪಿಸಿಕೊಂಡು ಬದುಕುಳಿದಿದ್ದರು. ತಮ್ಮ ವೀಕ್ಷಣೆಯನ್ನು ಮುಂದುವರಿಸಿದ ಬೇಯರ್‌ಗೆ ಮರಿಹುಳುಗಳ ಮೈಸುತ್ತ ಲೋಳೆದ್ರವವು ಆವರಿಸಿರುವುದು ಕಂಡುಬಂದಿತು. ಲೋಳೆಯನ್ನು ತೆಗೆದು ಅದನ್ನು ಗಾಯಗಳ ಮೇಲೆ ಲೇಪಿಸಿದಾಗ ಗಾಯಗಳು ಬೇಗನೆ ಗುಣವಾಗತೊಡಗಿದವು. ಈ ಹುಳುಗಳು ಗಾಯದ ಕೊಳೆತು ಸತ್ತ, ಸೋಂಕಿತ ಭಾಗಗಳನ್ನು ಮಾತ್ರ ಭಕ್ಷಿಸಿ, ಆರೋಗ್ಯಕರ ಭಾಗಗಳನ್ನು ಹಾಗೆಯೇ ಉಳಿಸುತ್ತವೆಂದು ಸಂಶೋಧನೆಗಳು ತೋರಿಸಿದವು.

ಮರಿಹುಳುಗಳ ದೇಹವನ್ನು ಆವರಿಸಿರುವ ಲೋಳೆದ್ರವಕ್ಕೆ ಗಾಯವನ್ನು ಗುಣಪಡಿಸುವ ಅದ್ಭುತ ಸಾಮರ್ಥ್ಯವಿದೆ. ಹಾಲೆಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ಗ್ವೆಂಡೊಲಿನ್ ಕಜಾಂಡರ್ (Gwendolyn Cazander) ಎಂಬ ವೈದ್ಯೆ ಮತ್ತು ಅವರ ತಂಡ ಸೋಂಕಳಿಸಿದ (disinfected) ಮರಿಹುಳುಗಳ ಲೋಳೆ ದ್ರವವನ್ನು ಇಳಿಕೊಳವೆ (siphon) ಮೂಲಕ ಹೀರಿತೆಗೆದು ಮನುಷ್ಯನ ಮೇಲೆ ಸಂಶೋಧನೆ ನಡೆಸಿ, ಅವು ನಮ್ಮ ದೇಹದ ರಕ್ಷಣಾ ವ್ಯೂಹವನ್ನು ನಿಷ್ಕ್ರಿಯಗೊಳಿಸುತ್ತದೆಯೆಂದು ಕಂಡುಹಿಡಿದಿದ್ದಾರೆ.

ಸಂಶೋಧಕರು ನಾಲ್ವರು ಆರೋಗ್ಯವಂತ ರಕ್ತದಾನಿಗಳ ರಕ್ತದ ಮಾದರಿಗಳಿಗೆ ಲೋಳೆದ್ರವವನ್ನು ಬೆರೆಸಿದರು. ಆಗ ಆ ರಕ್ತಗಳ ರಕ್ಷಣಾವ್ಯೂಹ (immune system) ದುರ್ಬಲವಾದದ್ದು ಕಂಡುಬಂದಿತು. ಒಂದು ದಿನದ, ಒಂದು ವಾರದ, ಒಂದು ತಿಂಗಳ ಹಳೆಯ ಮರಿಹುಳುಗಳ ದೇಹದ್ರವವನ್ನು ಪರೀಕ್ಷಿಸಿದಾಗ ಅವು ತಮ್ಮ ಸಾಮರ್ಥ್ಯ/ಬಲುವೆ (potency)ಯನ್ನು ಕೊಂಚವೂ ಕಳೆದುಕೊಂಡಿರಲಿಲ್ಲವೆಂಬುದು ಗೊತ್ತಾಯಿತು. ದ್ರವವನ್ನು ಕುದಿಸಿ ಪ್ರಯೋಗಿಸಿದಾಗ ಅದರ ಸಾಮರ್ಥ್ಯ ಮೊದಲಿಗಿಂತಲೂ ಪ್ರಬಲವಾಗಿದ್ದುದನ್ನು ನೋಡಿ ಆಶ್ಚರ್ಯಪಟ್ಟರು. ಈ ದ್ರವವು ನಮ್ಮ ರಕ್ಷಣಾವ್ಯೂಹವನ್ನು ನಿಷ್ಕ್ರಿಯ ಗೊಳಿಸುವುದೆಂದು ಕಜಾಂಡರ್ ಕಂಡುಹಿಡಿದರು. ರಕ್ಷಣಾವ್ಯೂಹ ನಿಷ್ಕ್ರಿಯವಾಗದಿದ್ದರೆ ಅದು ಮರಿಹುಳುಗಳ ಮೇಲೆ ದಾಳಿಮಾಡಿ ಅವನ್ನು ನಾಶಮಾಡುತ್ತದೆಂದು ಕಜಾಂಡರ್ ಅಭಿಪ್ರಾಯ ಪಟ್ಟರು. ರಕ್ಷಣಾವ್ಯೂಹವನ್ನು ನಿಷ್ಕ್ರಿಯಗೊಳಿಸುವ ಆ ಅಂಶವನ್ನು ದ್ರವದಿಂದ ಬೇರ್ಪಡಿಸುವ ಕೆಲಸದಲ್ಲಿ ಸಂಶೋಧಕರು ತೊಡಗಿದ್ದಾರೆ.

1920ರಿಂದ ವೈದ್ಯರು ಅನೇಕ ದೇಶಗಳಲ್ಲಿ ಮರಿಹುಳುಗಳನ್ನು ಚಿಕಿತ್ಸೆಗೆ ಬಳಸಲಾರಂಭಿಸಿದರು. 1930ರ ವೇಳೆಗೆ ಅನೇಕ ವೈದ್ಯರು ಸೋಂಕು ತಗುಲಿದ ಮತ್ತು ನಿದುಗಾಲದ ಅಂಗಾಂಶ ಚಿಕಿತ್ಸೆಗೆ ಹುಳುಗಳನ್ನು ವ್ಯಾಪಕವಾಗಿ ಬಳಸತೊಡಗಿದರು.

ಮರಿಹುಳುಗಳ ತಯಾರಿಕೆ ಮರಿಹುಳುಗಳನ್ನು ಮೊದಲು ನಿಷ್ಕ್ರಿಮಿ (disinfect) ಗೊಳಿಸಿ, ಇವನ್ನು ಔಷಧೀಯ ಮರಿಗಳು (medicinal maggots) ಎಂದು ಕರೆಯುತ್ತಾರೆ. ಗಾಯಗಳನ್ನು ಸಾಮಾನ್ಯ ಉಪ್ಪು ನೀರಿನಿಂದ ತೊಳೆದು ಜಿಡ್ಡು, ಕೊಳೆತೆಗೆದು ಶುದ್ಧೀಕರಿಸಿ, ಹುಳುಗಳನ್ನು ಗಾಯದ ಮೇಲಿಡುತ್ತಾರೆ. ಇವು ಗಾಯಗಳಿಂದ ತಪ್ಪಿಸಿಕೊಂಡು ಹೋಗದಂತೆ ಡ್ರೆಸ್ಸಿಂಗ್ ಮಾಡಿ ಗಾಯಪಟ್ಟಿ ಕಟ್ಟುತ್ತಾರೆ.

ಪ್ರಾರಂಭದಲ್ಲಿ, ಕೈಬೆರಳ ಒಂದು ಸಣ್ಣಗಾಯಕ್ಕೆ 5ರಿಂದ 6 ಮರಿಹುಳುಗಳನ್ನೂ, ಗಂಭೀರವಾದ ದೊಡ್ಡ ಗಾಯಗಳಿಗೆ 500ರಿಂದ 600 ಮರಿಹುಳುಗಳನ್ನೂ ಬಳಸುತ್ತಿದ್ದರು. ಆದರೆ ಒಂದು ವೈಜ್ಞಾನಿಕ ಸಂಶೋಧನೆಗಳ ಬಳಿಕ, ಒಂದು ಚದರ ಸೆಂಟಿಮೀಟರ್ ಅಗಲದ ಗಾಯಕ್ಕೆ ಹತ್ತು ಮರಿಹುಳುಗಳನ್ನು ಬಿಡುತ್ತಾರೆ.

ದಿನದಿನಕ್ಕೆ, ಮರಿಹುಳು ಚಿಕಿತ್ಸೆ ಜನಪ್ರಿಯವಾಗತೊಡಗಿತು. ಆದರೆ, ಕಾಲಕ್ರಮದಲ್ಲಿ, ಇದ್ದಕ್ಕಿದ್ದಂತೆ ಈ ಚಿಕಿತ್ಸೆ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳತೊಡಗಿತು. ಇದಕ್ಕೆ ವಿಜ್ಞಾನಿಗಳು ಮೂರು ಪ್ರಮುಖ ಕಾರಣಗಳನ್ನು ಕೊಡುತ್ತಾರೆ:

  • ಗಾಯದ ಮೇಲಿನ ಮರಿಹುಳುಗಳು ತಪ್ಪಿಸಿಕೊಂಡು ಹೋಗದಂತೆ ಅವನ್ನು ಕಾಪಾಡುವುದು ಪ್ರಯಾಸದ ಕೆಲಸವಾಗಿತ್ತು.

  • ನಿಷ್ಕ್ರಿಮಿಗೊಳಿಸಿದ ಜೀವಂತ ಮರಿಹುಳುಗಳು ಸುಲಭವಾಗಿ ದೊರಕುತ್ತಿರಲಿಲ್ಲ. 

  • ಮರಿಹುಳುಗಳು ಲಭ್ಯವಿದ್ದರೂ ಅವುಗಳನ್ನು ಕೊಂಡುಕೊಳ್ಳುವುದು ಬಹಳ ದುಬಾರಿಯಾಗಿತ್ತು.

ಇದೇ ಸಮಯಕ್ಕೆ, ಆಧುನಿಕ ಪರ್ಯಾಯ ಚಿಕಿತ್ಸೆಗಳು ಬರತೊಡಗಿ, ವೈದ್ಯರನ್ನು ಚಂಚಲಗೊಳಿಸಿದವು. ಇವುಗಳಲ್ಲಿ ಅತಿಮುಖ್ಯವಾದುದು ಪೆನಿಸಿಲಿನ್. ಇದು ಒಂದು ಲೇಪನವಾಗಿ 1940ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು. ಇದರಿಂದ ಆಕರ್ಷಿತರಾದ ವೈದ್ಯರು, ಮರಿಹುಳು ಚಿಕಿತ್ಸೆ ದಿಢೀರ್ ಉಪಶಮನವನ್ನು ಕೊಡಲಾರದೆಂದೂ, ಅದು ಅಸಹ್ಯಕರವೆಂದೂ, ಘೋರವಾದುದೆಂದೂ ತಮ್ಮ ರೋಗಿಗಳಿಗೆ ಉಪದೇಶಿಸಿ ಅವರನ್ನು ನಂಬಿಸಿ ಒಪ್ಪಿಸಿದರು. ಮರಿಹುಳು ಚಿಕಿತ್ಸೆಯನ್ನು ಕ್ರಮೇಣ ಕಡೆಗಣಿಸಿ ಕೊನೆಗೆ ಪೂರ್ತಿಯಾಗಿ ಪೆನಿಸಿಲಿನ್ ಔಷಧಿಯನ್ನೇ ಅವಲಂಬಿಸಲಾರಂಭಿಸಿದರು. ಇದೇ ವೇಳೆಗೆ, ಬಹುತೇಕ ರೋಗಗಳಿಗೆ ಸೂಕ್ಷ್ಮಜೀವಿಗಳೇ ಕಾರಣವೆಂದು 19ನೇ ಶತಮಾನದ ಉತ್ತರಾರ್ಧದಲ್ಲಿ, ಲೂಯಿ ಪಾಶ್ಚರ್ ತಮ್ಮ ರೋಗಾಣುವಾದವನ್ನು ಮಂಡಿಸಿದರು. ಇದರಿಂದಲೂ ಪ್ರಭಾವಿತರಾದ ವೈದ್ಯರು, ಗಾಯಗಳಿಗೆ ಮರಿಹುಳುಗಳ ಮೂಲಕ ಸೋಂಕು ತಗಲುವ ಸಾಧ್ಯತೆಯಿರುವುದನ್ನು ಶಂಕಿಸಿ, ಮರಿಹುಳು ಚಿಕಿತ್ಸೆಯನ್ನು ಪೂರ್ತಿಯಾಗಿ ಕೈಬಿಟ್ಟರು. ಈ ಕಾರಣಗಳಿಂದ ಮರಿಹುಳು ಚಿಕಿತ್ಸೆ ಜನಪ್ರಿಯತೆಯನ್ನು ಕಳೆದುಕೊಂಡು ಸಹಜ ಸಾವನ್ನಪ್ಪಿತು.

ವರ್ಷಗಳುರುಳಿದಂತೆ ಪೆನಿಸಿಲಿನ್‌ನ ಮಾರಕ ಪ್ರಭಾವವನ್ನು ಎದುರಿಸಿ ನಿಲ್ಲಬಲ್ಲ ಬ್ಯಾಕ್ಟೀರಿಯಾಗಳು ಹುಟ್ಟಿಕೊಂಡವು. ಇದರಿಂದ ನಿಸ್ಸಹಾಯಕರಾದ ವೈದ್ಯರು ‘ಹಳೇ ಗಂಡನ ಪಾದವೇ ಗತಿ’ ಎಂಬಂತೆ, ಮತ್ತೆ ಮರಿಹುಳುಗಳ ಮೊರೆಹೋದರು. ಮರೆತುಹೋಗಿದ್ದ ಮರಿಹುಳು ಚಿಕಿತ್ಸೆ ಮತ್ತೆ ಮರುಕಳಿಸಿ ಕುದುರತೊಡಗಿತು.

1989ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವೈದ್ಯರುಗಳಾದ ರೊನಾಲ್ಡ್ ಶರ್ಮನ್ (Ronald Sherman) ಮತ್ತು ಎಡ್ವರ್ಡ್ ಪೆಕ್ಟರ್ (Edward Pechter) ಗಾಯಗಳು ಮಾಯದ ರೋಗಿಗಳಲ್ಲಿ ಮತ್ತೊಮ್ಮೆ ಮರಿಹುಳು ಚಿಕಿತ್ಸೆಯನ್ನು ಪ್ರಾರಂಭಿಸಿ ಅದಕ್ಕೆ ಮರುಜೀವ ಕೊಟ್ಟರು. ಡಯಾಬಿಟಿಸ್ ರೋಗಿಯೊಬ್ಬ ಶರ್ಮನ್‌ನಿಂದ ಚಿಕಿತ್ಸೆ ಪಡೆಯಲು ಅವರನ್ನು ಕಾಣಲು ಬಂದಿದ್ದ. ಅವನ ಕಾಲಿನಲ್ಲಿ ದೊಡ್ಡಗಾತ್ರದ ಗಾಯವಾಗಿತ್ತು. ಗಾಯವನ್ನು ಅನೇಕ ಮರಿಹುಳುಗಳು ಮುತ್ತಿಕೊಂಡಿದ್ದವು. ಅವನನ್ನು ಪರೀಕ್ಷಿಸಲು ಹೊರಟ ಶರ್ಮನ್ ಮತ್ತು ಪೆಕ್ಟರ್ ಕಾಲಿನ ಗಾಯವನ್ನು ಕಂಡು ಬೆಚ್ಚಿಬಿದ್ದು ಅಸಹ್ಯ ಪಟ್ಟರು. ಗಾಯವನ್ನು ಗಮನವಿಟ್ಟು ವೀಕ್ಷಿಸಿದಾಗ ಗಾಯದಲ್ಲಿ ಸೋಂಕಿರಲಿಲ್ಲ. ಅಷ್ಟೇ ಅಲ್ಲ, ಹೊಸ ಆರೋಗ್ಯಕರ ಅಂಗಾಂಶಗಳು ಬೆಳೆಯುತ್ತಿರುವುದು ಗೋಚರಿಸಿತು. ಈ ವಿಚಿತ್ರವನ್ನು ನೋಡಿ ಶರ್ಮನ್ ಬೆರಗಾದರು. ಅವರ ಕುತೂಹಲ ಕೆರಳಿತು. ಗಾಯವನ್ನು ಗುಣಪಡಿಸುವಲ್ಲಿ ಈ ಮರಿಹುಳುಗಳು ಪ್ರಬಲ ಪಾತ್ರವನ್ನು ವಹಿಸುತ್ತವೆ ಎಂದು ಮನಗಂಡರು.

ಕೀಟಶಾಸ್ತ್ರ (Entomology) ದಲ್ಲಿ ಪದವೀಧರರಾಗಿದ್ದ ಶರ್ಮನ್, ರೋಗಚಿಕಿತ್ಸೆಯಲ್ಲಿ ಕೀಟಗಳ ಪಾತ್ರದ ಬಗ್ಗೆ ವಿಶೇಷ ಅಧ್ಯಯನ ಮಾಡುತ್ತಿದ್ದರು. ‘ಇಂದು ಮರಿಹುಳು ಚಿಕಿತ್ಸೆ ಕಡಿಮೆ ಖರ್ಚಿನ, ಅರಿವಳಿಕೆ ಬಳಸದ, ಅಡ್ಡಪರಿಣಾಮಗಳಿಲ್ಲದ ಚಿಕಿತ್ಸೆಯಾಗಿದೆ. ಗಾಯಗಳು ಗುಣವಾದ ನಂತರ ಅತಿ ಹಗುರವಾದ ಗಾಯದ ಕಲೆಗಳು ಉಳಿಯುತ್ತವೆ’ ಎಂದು ಹೇಳಿಕೆ ಕೊಟ್ಟರು. ನಂಜುರೋಧಕ ಚಿಕಿತ್ಸೆಗೊಳಗಾದ ರೋಗಿಗಳಿಗಿಂತಲೂ ಮರಿಹುಳು ಚಿಕಿತ್ಸೆಗೊಳಗಾದ ರೋಗಿಗಳಲ್ಲಿ ಗಾಯಗಳು ಸುಮಾರು ನಾಲ್ಕು ವಾರಗಳ ಮುಂಚೆಯೇ ಗುಣವಾಗುವುದೆಂದು ತೋರಿಸಿಕೊಟ್ಟರು. ಕೈ, ಕಾಲು ತುಂಡರಿಸುವ ಸ್ಥಿತಿಯಲ್ಲಿದ್ದ ಸುಮಾರು 40ರಿಂದ 50% ರೋಗಿಗಳಲ್ಲಿ ಮರಿಹುಳು ಚಿಕಿತ್ಸೆ ಅತ್ಯಾಶ್ಚರ್ಯಕರ ರೀತಿಯಲ್ಲಿ ವರ್ತಿಸಿ ಗಾಯವನ್ನು ಸಂಪೂರ್ಣವಾಗಿ ಗುಣಪಡಿಸಿ ತುಂಡರಿಕೆಯಿಂದ ಅವರನ್ನು ಪಾರುಮಾಡಿತು.

1995ರಿಂದ ಮರಿಹುಳು ಚಿಕಿತ್ಸೆಯನ್ನು ಪುನಃಸ್ಥಾಪಿಸಿದ ವೈದ್ಯರುಗಳ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ. ಗಾಯಗಳು 2-3 ಸುತ್ತಿನಲ್ಲಿ ಸಾಂಪ್ರದಾಯಿಕ ಚಿಕಿತ್ಸೆಗಳಿಗೆ ಸ್ಪಂದಿಸದಿದ್ದರೆ, ವೈದ್ಯರು ಮರಿಹುಳು ಚಿಕಿತ್ಸೆಯತ್ತ ತಿರುಗುತ್ತಾರೆ. ಈ ಚಿಕಿತ್ಸೆಗೆ ಯಾವುದೇ ನೊಣದ ಮರಿಹುಳುಗಳನ್ನು ಬಳಸಲಾಗದು. ಆದರೆ ಹಸಿರು ಹೊಲೆನೊಣ (blowfly–Lucilia sericata) ಮತ್ತು (Protophormia terraenovae)ಗಳನ್ನು ವಿಶೇಷವಾಗಿ ಆಯ್ದುಕೊಳ್ಳುತ್ತಾರೆ. ಈ ಮರಿಹುಳುಗಳೇ ಈ ಚಿಕಿತ್ಸೆಗೆ ಸೂಕ್ತವಾಗಿವೆ. ಇವುಗಳ ಮೂತಿಯ ಮುಂಭಾಗದಲ್ಲಿ ಹಲ್ಲಿನಂತಹ ರಚನೆಗಳಿದ್ದು ಇವು ಹುಣ್ಣಿನ ಸತ್ತ ಭಾಗಗಳನ್ನು ತಿವಿದು, ಕೆರೆದು, ಬೇರ್ಪಡಿಸಿ, ಕಿಣ್ವಗಳಿರುವ ದ್ರವವನ್ನು ಹುಣ್ಣಿನ ಮೇಲೆ ಉಗುಳುತ್ತವೆ. ಹುಣ್ಣಿನ ಸುತ್ತಮುತ್ತಲ ಸತ್ತ ಅಂಗಾಂಶಗಳು ದ್ರವದಲ್ಲಿ ಕರಗುತ್ತವೆ. ಹುಳುಗಳು ಕರಗಿದ ದ್ರವವನ್ನು ಹೀರಿಕೊಳ್ಳುತ್ತವೆ.

ಮರಿಹುಳುಗಳ ಕಾರ್ಯತಂತ್ರ ಈ ಮರಿಹುಳುಗಳು ಗಾಯಗಳನ್ನು ಹೇಗೆ ಚಿಕಿತ್ಸೆ  ಮಾಡಬಲ್ಲವು? ಮರಿಹುಳು ಚಿಕಿತ್ಸೆಯಲ್ಲಿ ಮೊದಲನೇ ಹಂತ (Instar)ದ ಲಾರ್ವಾಗಳನ್ನು ಗಾಯದ ಮೇಲಿಡುತ್ತಾರೆ. 5 ನಿಮಿಷಗಳಲ್ಲಿ ಒಂದು ಲಾರ್ವಾ ತನ್ನ ದೇಹತೂಕದ ಸುಮಾರು ಅರ್ಧದಷ್ಟು ಆಹಾರವನ್ನು ಸೇವಿಸಬಲ್ಲದು. ಅವು ಗಾಯದ ಕೊಳೆತು ಸತ್ತಿರುವ ಭಾಗಗಳನ್ನು ದ್ರವವಾಗಿ ಕರಗಿಸಿಬಿಡುತ್ತವೆ. ಆದರೆ ಆರೋಗ್ಯಕರ ಅಂಗಾಂಶಗಳಿಗೆ ಕೆಡುಕು ಮಾಡದೆ, ಸೂಕ್ಷ್ಮ ಶಸ್ತ್ರಚಿಕಿತ್ಸಾ ವೈದ್ಯರ (microsurgeons) ರೀತಿಯಲ್ಲಿ ವರ್ತಿಸುತ್ತವೆ. ಇಂತಹ ಶಸ್ತ್ರಚಿಕಿತ್ಸಾ ನಿಪುಣತೆಯೊಂದಿಗೆ ಬಾಹ್ಯ ಮತ್ತು ಆಂತರಿಕ ಬ್ಯಾಕ್ಟೀರಿಯಾಗಳನ್ನು ನಿರ್ಮೂಲ ಮಾಡಿ ನಿದುಗಾಲದ ಗಾಯಗಳ ಚಿಕಿತ್ಸೆ ಮಾಡಬಲ್ಲ ಅತಿ ಪ್ರಬಲವಾದ ಅಸ್ತ್ರವಾಗಿವೆ.

ಇವು ಗಾಯದ ಮೇಲೆ ಐದು ರೀತಿಗಳಲ್ಲಿ ಕಾರ್ಯ ನಿರ್ವಹಿಸುತ್ತವೆ: (1) ಗಾಯದ ಸುತ್ತಲೂ ಇರುವ ಕೊಳೆತು ಸತ್ತ ಅಂಗಾಂಶಗಳನ್ನು ನಾಶಮಾಡಿ ಆರೋಗ್ಯಕರ ಅಂಗಾಂಶಗಳನ್ನು ಅನಾವರಣಗೊಳಿಸುತ್ತವೆ. (2) ಸೋಂಕು ನಿವಾರಣೆ (disinfect) ಮಾಡುತ್ತದೆ. (3) ಗಾಯ ಗುಣಪಡಿಸಲು ನೆರವಾಗುತ್ತದೆ. (4) ಜೈವಿಕ ಪಟಲ (biofilm) ರೂಪಗೊಳ್ಳದಂತೆ ತಡೆಯುತ್ತದೆ. (5) ಗಾಯವನ್ನು ಸ್ವಚ್ಛಗೊಳಿಸುತ್ತದೆ. ಹುಳುಗಳು ದ್ರವವೊಂದನ್ನು ಸ್ರವಿಸುತ್ತವೆ. ಇದರಲ್ಲಿ ಕಾರ್ಬಾಕ್ಸಿಪೆಪ್ಟಿಡೇಸ್, ಅಮೈನೊಪೆಪ್ಟಿಡೇಸ್, ಕೊಲಾಜಿನೇಸ್, ಟ್ರಿಪ್ಸಿನ್, ಕೈಮೊಟ್ರಿಪ್ಸಿನ್‌ನಂತಹ ಕಿಣ್ವಗಳಿರುತ್ತವೆ. ಇವು ಗಾಯದ ಸತ್ತು, ಕೊಳೆತ ಭಾಗಗಳು ಮತ್ತು ಅವುಗಳಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕರಗಿಸಿ, ಕರಗಿದ ಭಾಗಗಳನ್ನೊಳಗೊಂಡ ದ್ರವವನ್ನು ಹೀರಿಕುಡಿಯುತ್ತವೆ. ಇದರಿಂದ ಗಾಯಗಳು ಬಲುಬೇಗ ಒಣಗಲಾರಂಭಿಸುತ್ತವೆ. ಈ ವೈದ್ಯಕೀಯ ಮರಿಹುಳುಗಳು ಗಾಯದ ಆರೋಗ್ಯಕರ ಅಂಗಾಂಶಗಳನ್ನು ತಿನ್ನುವುದಿಲ್ಲ. ಗಾಯದ ಸತ್ತ ಭಾಗಗಳನ್ನು ತಿಂದ ಮೇಲೆ ಅಥವಾ ಅವುಗಳ ಹಸಿವು ನೀಗಿದ ಮೇಲೆ ಗಾಯವು ಸ್ವಚ್ಛವಾಗುತ್ತದೆ. ಆಗ ಈ ಮರಿಹುಳುಗಳು ಆ ತಾವನ್ನು ಬಿಟ್ಟು, ಬೇರೆಡೆ ಹೊರಟುಹೋಗುತ್ತವೆ. ಆದ್ದರಿಂದ ಗಾಯಗಳ ಆರೋಗ್ಯಕರ, ಜೀವಂತ, ಭಾಗಗಳಿಗೆ ತೊಂದರೆಯಾಗದು. ಶಸ್ತ್ರಚಿಕಿತ್ಸಾ ವೈದ್ಯರಿಗಿಂತ ಈ ಹುಳುಗಳು ಅತಿ ಶೀಘ್ರವಾಗಿಯೂ ಸರಳವಾಗಿಯೂ ಗಾಯವನ್ನು ಶುದ್ಧಿಮಾಡಬಲ್ಲವೆಂದು ವೈದ್ಯರು ಅಭಿಪ್ರಾಯ ಪಡುತ್ತಾರೆ. ‘ಮರಿಹುಳುಗಳು ಸೂಕ್ಷ್ಮ ಶಸ್ತ್ರಚಿಕಿತ್ಸಾ ವೈದ್ಯರಿದ್ದಂತೆ. ಶಸ್ತ್ರವೈದ್ಯರು ವೈದ್ಯಚೂರಿ (scalpel), ಕತ್ತರಿಯಿಂದ ಮಾಡಲಾಗದ ಕೆಲಸವನ್ನು ಈ ಹುಳುಗಳು ಅಚ್ಚುಕಟ್ಟಾಗಿ ಮಾಡುತ್ತವೆ’ ಎಂದು ವೈದ್ಯರು ಹೇಳುತ್ತಾರೆ.  

ಈಗಿನ ಮಾಹಿತಿಯಂತೆ, ಮೂರು ಪ್ರೋಟೀನುಲಯಕಾರಿ ಕಿಣ್ವಗಳನ್ನು (Proteolytic enzymes) ಮರಿಹುಳುಗಳ ಮಲ ಮತ್ತು ಸುರಿಕೆಗಳಲ್ಲಿ ಗುರುತಿಸಲಾಗಿದೆ. ಈ ಕಿಣ್ವಗಳು ಜೀವಕೋಶದಾಚೆಗಿನ ವಸ್ತುಗಳನ್ನು ಸ್ವಚ್ಛಗೊಳಿಸುತ್ತವೆ. ಮರಿಹುಳುಗಳ ಮಲ ಮತ್ತು ಸುರಿಕೆಗಳಲ್ಲಿ ಬ್ಯಾಕ್ಟೀರಿಯಾನಾಶಕ ವಸ್ತುಗಳಿರುವುದನ್ನು ಗುರುತಿಸಿದ್ದಾರೆ. ಒಂದು ಪರಿಕಲ್ಪನೆಯ (hypothesis) ಪ್ರಕಾರ ಮರಿಹುಳುಗಳು ಅಮೋನಿಯಾವನ್ನು ವಿಸರ್ಜಿಸಿ ಗಾಯದ ಕ್ಷಾರತೆ (pH)ಯನ್ನು ಹೆಚ್ಚಿಸಿ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪ್ರತಿಕೂಲಕರ ಪರಿಸರವನ್ನು ಸೃಷ್ಟಿಸುತ್ತದೆ.


ಮತ್ತೊಂದು ಪರಿಕಲ್ಪನೆಯ ಪ್ರಕಾರ, ಮರಿಹುಳುಗಳು ಬ್ಯಾಕ್ಟೀರಿಯಾಗಳನ್ನು ಭಕ್ಷಿಸಿ ತಮ್ಮ ಜೀರ್ಣಾಂಗವ್ಯೂಹದಲ್ಲಿ ಅವನ್ನು ಜೀರ್ಣಿಸುತ್ತವೆ. ಮರಿಹುಳುಗಳ ಗಂಟಲಿನಲ್ಲಿ 67% ಬ್ಯಾಕ್ಟೀರಿಯಾಗಳಿದ್ದು, ಜೀರ್ಣಾಂಗವ್ಯೂಹದ ಅಂತಿಮ ಭಾಗದಲ್ಲಿ ಅವು ಕೇವಲ 18%ಗೆ ಕುಸಿದಿರುವುದು ಸಂಶೋಧನೆಗಳ ಮೂಲಕ ತಿಳಿದುಬಂದಿದೆ. ಮರಿಹುಳುಗಳು ಸ್ರವಿಸುವ ದ್ರವದಲ್ಲಿ ಸೋಡಿಯಂ ಬೈಕಾರ್ಬೋನೇಟ್ ಕೂಡ ಇರುವುದರಿಂದ, ಗಾಯಗಳ ಕ್ಷಾರತೆ ಹೆಚ್ಚುತ್ತದೆ. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ. ಈ ದ್ರವ ಸ್ಟೆಫೈಲೋಕಾಕಸ್ ಮುಂತಾದ ಬ್ಯಾಕ್ಟೀರಿಯಾಗಳು ನಿರ್ಮಿಸಿರುವ ಜೈವಿಕಪಟಲವನ್ನು ಒಡೆಯಬಲ್ಲದೆಂದು ಪ್ರಯೋಗಗಳ ಮೂಲಕ ಗೊತ್ತಾಗಿದೆ.

ಗಾಯಗಳು ಗುಣವಾಗುವ ಹಂತಗಳು ಗಾಯಗಳು ಹಂತಹಂತವಾಗಿ ಗುಣವಾಗಲಾರಂಭಿಸುತ್ತವೆ. ಮೊದಲು ಗಾಯದಿಂದ ರಕ್ತ ಹರಿಯಲಾರಂಭಿಸುತ್ತದೆ. ಸ್ವಲ್ಪ ಸಮಯದ ನಂತರ ರಕ್ತ ಹೆಪ್ಪುಗಟ್ಟುತ್ತದೆ. ಆಗ ಬಿಳಿರಕ್ತ ಕಣಗಳು ಗಾಯವನ್ನು ಮುತ್ತಿ, ಸತ್ತ ಅಂಗಾಂಶಗಳನ್ನೂ ಬ್ಯಾಕ್ಟೀರಿಯಾಗಳನ್ನೂ ಭಕ್ಷಿಸುತ್ತವೆ. ಇದಾದ ನಂತರ ದೇಹವು ಕೊಲಾಜೆನ್ (collagen) ಎಂಬ ನಾರೆಳೆಗಳನ್ನು ಗಾಯದ ಮೇಲೆ ಜೋಡಿಸುತ್ತದೆ. ಗಾಯದ ಸುತ್ತಲಿರುವ ಚರ್ಮದ ಕೋಶಗಳು ವಿಭಜಿಸಿ ಗಾಯದ ಮಧ್ಯಭಾಗಕ್ಕೆ ವಲಸೆ ಹೋಗುತ್ತವೆ. ಗಾಯವನ್ನು ಈ ರೀತಿ ಹೊಸ ಕೋಶಗಳು ಆವರಿಸಿದ ನಂತರ ರಕ್ತನಾಳಗಳು ಹುಟ್ಟಿಕೊಂಡು ಹೊಸದಾಗಿ ಆದ ಅಂಗಾಂಶಗಳಿಗೆ ರಕ್ತದ ಸರಬರಾಜು ಮಾಡುತ್ತವೆ. ಗಾಯದ ಮೇಲೆ ನಿಧಾನವಾಗಿ ಗಾಯಕಲೆ ಮೂಡುತ್ತದೆ.

ಭಾರತದಲ್ಲಿ ಮರಿಹುಳು ಚಿಕಿತ್ಸೆ ಮರಿಹುಳು ಚಿಕಿತ್ಸೆ ನಮ್ಮ ದೇಶದಲ್ಲಿ ಇದೆಯೇ ಎಂದು ನಿಮ್ಮಲ್ಲಿ ಅನೇಕರು ಕೇಳಬಹುದು. ನಮ್ಮ ದೇಶದಲ್ಲೂ ಕೆಲವೆಡೆ ಮರಿಹುಳು ಚಿಕಿತ್ಸೆ ಚಾಲ್ತಿಯಲ್ಲಿದೆ. ಒಂದು ವರದಿಯ ಪ್ರಕಾರ, ಕೋಲಾರದ ಬಿ.ಆರ್. ಶ್ರೀನಿವಾಸ್ ಎಂಬ ಸಕ್ಕರೆ ರೋಗ ವೈದ್ಯರು ಸುಮಾರು 40 ವರ್ಷಗಳಿಂದ ಈ ಚಿಕಿತ್ಸೆಯಲ್ಲಿ ಕಾರ್ಯನಿರತರಾಗಿದ್ದಾರೆ. ಗ್ರಾಮಾಂತರ ಸಕ್ಕರೆ ರೋಗಿಗಳಿಗೆ ಕಾಲಿನಲ್ಲಿ ಗಾಯಗಳಾದರೆ ಅವರಿಗೆ ಅದರ ಪರಿವೆಯೇ ಇರುವುದಿಲ್ಲ. ಒಮ್ಮೆ ರೋಗಿಯೊಬ್ಬ ತನ್ನ ಕಾಲಿಗೆ 3 ಪುಸ್ತಕ ಹೊಲಿಯುವ ತಂತಿ ಹೊಲಿಗೆ (wire-stitching)ಯ ಪಿನ್‌ಗಳು ಚುಚ್ಚಿಕೊಂಡು ಪೂರ್ತಿ ಒಳಹೊಕ್ಕರೂ ಅವನಿಗೆ ಅದು ಗೊತ್ತೇ ಆಗಲಿಲ್ಲ ಎನ್ನುತ್ತಾರೆ. ಅನೇಕ ರೋಗಿಗಳು ಈ ಸ್ಥಿತಿಯಲ್ಲಿ ಚಿಕಿತ್ಸೆಗೆ ಬರುತ್ತಾರೆ.
ಇಂತಹ ಐದು ರೋಗಿಗಳನ್ನು ಮರಿಹುಳು ಚಿಕಿತ್ಸೆಗೆ ಒಳಪಡಿಸಿದಾಗ ಫಲಿತಾಂಶ ಉತ್ತೇಜಕವಾಗಿತ್ತು. ಡಾ|| ಶ್ರೀನಿವಾಸ್ ಕೂಡಲೇ ಮರಿಹುಳು ಚಿಕಿತ್ಸೆಯನ್ನು ಆಯುಷ್ (AYUSH) ಆಸ್ಪತ್ರೆಗಳು ಅಳವಡಿಸಿಕೊಳ್ಳಬೇಕೆಂದು ಕರ್ನಾಟಕದ ಆಯುಷ್ ಆಸ್ಪತ್ರೆಗಳ ನಿರ್ದೇಶಕರಿಗೆ ಪತ್ರದ ಮೂಲಕ ಸಲಹೆ ಮಾಡಿದ್ದಾರೆ.

ಬೆಂಗಳೂರಿನ ಕನಿಂಗ್‌ಹ್ಯಾಮ್ ರಸ್ತೆಯಲ್ಲಿನ ಫೋರ್ಟಿಸ್ ಆಸ್ಪತ್ರೆಯ ಸಕ್ಕರೆ ರೋಗ ತಜ್ಞ ಡಾ|| ಸಂಜಯ ರೆಡ್ಡಿಯವರ ಪ್ರಕಾರ ನಮ್ಮ ದೇಶದಲ್ಲಿ ಮರಿಹುಳು ಚಿಕಿತ್ಸೆ ಇನ್ನೂ ಸಾಕಷ್ಟು ಜನಪ್ರಿಯವಾಗಿಲ್ಲ. ರೋಗಿಗಳಿಗೆ ಈ ಚಿಕಿತ್ಸೆಯನ್ನು ಅಂಗೀಕರಿಸಬಲ್ಲ ಪಕ್ವ ಮನಃಸ್ಥಿತಿ ಇನ್ನೂ ಉಂಟಾಗಿಲ್ಲ. ಮರಿಹುಳುಗಳು ಎಲ್ಲಿ ದೊರಕುತ್ತವೆ ಎಂಬುದರ ಬಗ್ಗೆಯೂ ಯಾವುದೇ ನಿಖರ ಮಾಹಿತಿಯಿಲ್ಲ ಎನ್ನುತ್ತಾರೆ. ಮರಿಹುಳು ಚಿಕಿತ್ಸೆ ಬಗ್ಗೆ ಭಾರತೀಯ ವೈದ್ಯಕೀಯ ಕಾನೂನು ಮೌನವಾಗಿಯೇ ಇದೆ. ಈ ಚಿಕಿತ್ಸೆಯನ್ನು ಬಳಕೆಗೆ ತರಬೇಕಾದರೆ ವೈದ್ಯರು ಸ್ಥಳೀಯ ನೈತಿಕ ಸಮಿತಿ (Ethics Committee)ಯಿಂದ ಲಿಖಿತವಾಗಿ ಅನುಮತಿ ಪಡೆಯಬೇಕು. ಇಂತಹ ಇನ್ನೂ ಕೆಲವು ಕಾನೂನು ಸಮಸ್ಯೆಗಳು ನಿವಾರಣೆಯಾಗಬೇಕಾಗಿದೆ.


ಪುಟ್ಟ ಬಾಟಲಿಯೊಳಗೆ ಅಡಗಿದ 'ಮಹಾ' ವಿಜ್ಞಾನ : ಒಂದು ನಳಿಕೆ, ನೂರು ಪ್ರಶ್ನೆಗಳು!

  ಪುಟ್ಟ ಬಾಟಲಿಯೊಳಗೆ ಅಡಗಿದ 'ಮಹಾ' ವಿಜ್ಞಾನ : 
 ಒಂದು ನಳಿಕೆ, ನೂರು ಪ್ರಶ್ನೆಗಳು!

       

 ಲೇಖಕರು : ರಾಮಚಂದ್ರ ಭಟ್‌ ಬಿ.ಜಿ.

ವಿಜ್ಞಾನ ಅಂದಾಕ್ಷಣ ನಮಗೆ ನೆನಪಾಗುವುದು ಬೃಹತ್ ಪ್ರಯೋಗಾಲಯಗಳು, ದುಬಾರಿ ಉಪಕರಣಗಳು ಅಥವಾ ಸಂಕೀರ್ಣ ಸೆನ್ಸರ್‌ಗಳು. ಆದರೆ, ಎಲ್ಲಾ ಸಂದರ್ಭಗಳಲ್ಲೂ ಇದು ನಿಜವಾಗಿರಬೇಕಿಲ್ಲ. ವಿಜ್ಞಾನ ಬೋಧನೆ ಮತ್ತು ಕಲಿಕೆಗೆ ನಾವು ಸರಳ ಪರಿಕರಗಳನ್ನೇ ಬಳಸಬಹುದು.  ಇನ್‌ಸ್ಪೈರ್‌ ‌ ಅವಾರ್ಡ್‌ಗಳಲ್ಲಿ ಸರಳ ಮತ್ತು ನಾವೀನ್ಯಯುತ ಹೊಳಹಿಗೆ ಹೆಚ್ಚಿನ ಆದ್ಯತೆ ಇದೆ ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು. ವಿಜ್ಞಾನದ ಅನೇಕ ತತ್ವಗಳು ನಮ್ಮ ಸುತ್ತಲಿನ ಸರಳ ವಸ್ತುಗಳಲ್ಲಿಮತ್ತು ಅವುಗಳನ್ನು ನಾವು ನೋಡುವ ದೃಷ್ಟಿಕೋನದಲ್ಲಿ ಅಡಗಿವೆ. 

ಇದು ನಾನು ಅಂದು ನನ್ನ ತರಗತಿಯಲ್ಲಿ ಬಳಸಿದ ಒಂದು ಸರಳ ಕಲಿಕೋಪಕರಣ!!! ತರಗತಿಯಲ್ಲಿ ವಿದ್ಯಾರ್ಥಿಯೊಬ್ಬ ಕುತೂಹಲದಿಂದ ಕೇಳಿದ –ಸರ್‌, ಇದರಲ್ಲಿ ನೀರು ತಾನಾಗಿಯೇ ಮೇಲಕ್ಕೆ ಏರುತ್ತದೆಯೇ ?” ಪುಟ್ಟ ಪ್ರಶ್ನೆ, ಒಂದು ಅದ್ಭುತ ಕಲಿಕಾ ಪ್ರಯೋಗಕ್ಕೆ ನಾಂದಿ ಹಾಡಿತು. ಈ ಪ್ರಶ್ನೆಗೆ ಉತ್ತರಿಸಲು ನಮಗೆ ಬೇಕಾಗಿದ್ದು ಕೇವಲ ಮೂರು ವಸ್ತುಗಳು ಎಂದರೆ, 

  1. ಒಂದು ಪುಟ್ಟ ಗಾಜಿನ ಬಾಟಲಿ (10 mL).
  2. ಒಂದು ಕಿರು ವ್ಯಾಸದ ನಳಿಕೆ ( ಖಾಲಿಯಾದ ರಿಫಿಲ್‌)
  3. ಆಕರ್ಷಣೆಗಾಗಿ ಮತ್ತು ಕುತೂಹಲ ಹೆಚ್ಚಿಸಲು - ಬಣ್ಣದ ನೀರು.

ಒಂದು ಗಾಜಿನ ಬಾಟಲಿಗೆ ರಬ್ಬರ್ ಮುಚ್ಚಳ ಹಾಕಿ, ಅದರ ಮಧ್ಯದಲ್ಲಿ ಒಂದು ತೆಳುವಾದ ನಳಿಕೆಯನ್ನು ತೂರಿಸಲಾಗಿದೆ. ಬಾಟಲಿಯೊಳಗೆ ಸ್ವಲ್ಪ ಕೆಂಪು ಬಣ್ಣದ ನೀರಿದೆ. ಈ ಸರಳ ಮಾದರಿಯು ವಿಜ್ಞಾನದ  ಹತ್ತಾರು ಅಧ್ಯಾಯಗಳನ್ನು ಜೀವಂತಗೊಳಿಸುತ್ತದೆ!!! ಅಂದು JNCASRನಲ್ಲಿ  ನಡೆದ ಶಿಕ್ಷಕರ ತರಬೇತಿಯಲ್ಲಿ ಹಿರಿಯರಾದ ಪ್ರಭುಮಠರೂ ಇದೇ ಪುಟ್ಟ ಕಲಿಕೋಪಕರಣವನ್ನು ಪ್ರದರ್ಶಿಸಿದ್ದರು.  

ಈ ಪುಟ್ಟ ಬಾಟಲಿಯು ಅನೇಕ 'ದೊಡ್ಡ' ಪಾಠಗಳನ್ನೇ ಕಲಿಸೀತು !

ಬಾಟಲಿಯಲ್ಲಿ ಅರ್ಧದಷ್ಟು ಬಣ್ಣದ ನೀರು ತುಂಬಿ ವಿದ್ಯಾರ್ಥಿಯೊಬ್ಬನ ಕೈಗಿಟ್ಟೆ.ಆತ ಬಾಟಲಿಯನ್ನು ಅಂಗೈಯಲ್ಲಿ ಹಿಡಿದುಕೊಂಡ. ಕೆಲವೇ ಕ್ಷಣಗಳಲ್ಲಿ ನೀರು ನಳಿಕೆಯ ಮೂಲಕ ಮೇಲೇರಿ ತುದಿಗೆ ಬರುತ್ತಿದ್ದಂತೆ ಮಕ್ಕಳಲ್ಲಿ ಖುಷಿಯ ಕೇಕೆ, ಕಲರವ!! ಈಗ ಅದರ ಮೇಲೆ ತಣ್ಣೀರು ಸುರಿದೆ. ತಕ್ಷಣವೇ ನೀರಿನ ಮಟ್ಟ ಕೆಳಕ್ಕಿಳಿಯಿತು!!

ಜ್ವರದಿಂದ ಮಂಕಾಗಿ ನಿರಾಸಕ್ತಿಯಿಂದ ಕುಳಿತಿದ್ದ ಬಾಲಕಿಯನ್ನು ಈಗ ಕರೆದು ಪ್ರೋತ್ಸಾಹಿಸಿದೆ. ಆಕ ಕೈಯಿಂದ ಬಾಟಲಿಯನ್ನು  ಅವುಚಿ ಹಿಡಿಯುತ್ತಿದ್ದಂತೆ ನೀರು ಹಿಂದಿಗಿಂತ ಹೆಚ್ಚು ವೇಗವಾಗಿ ಮೇಲೇರಿತು!!! ಓಹೋ ನಿನ್ನ ಜ್ವರ ನೀರಿನ ಜೊತೆ ಓಡೋಯ್ತು ಅನ್ನುತ್ತಾ ಆಕೆ ಚಟುವಟಿಕೆಯಿಂದ ಇರುವಂತೆ ಮಾಡಿದೆ.

ಇಲ್ಲಿ ಗಾಳಿ ಮತ್ತು ನೀರಿನ ನಡುವಿನ ಜುಗಲ್‌ಬಂದಿಯನ್ನು ನೀವು ನೋಡಿದಿರಿ. ಪೂರ್ಣ ನೀರು ತುಂಬಿದ್ದಾಗ ಮತ್ತು ಅರ್ಧ ನೀರು ತುಂಬಿದ್ದಾಗ ನೀರು ಏರುವ ವೇಗ ಬೇರೆ ಬೇರೆಯಾಗಿರುತ್ತದೆ. ಅರ್ಧ ನೀರು ಇದ್ದಾಗ ನಳಿಕೆಯೊಳಗೆ ನೀರು ಬಹು ಬೇಗನೆ ವೇಗವಾಗಿ ಚಿಮ್ಮುತ್ತದೆ. ಇದಕ್ಕೆ ಕಾರಣ ಬಾಟಲಿಯೊಳಗೆ ಉಳಿದಿರುವ ಗಾಳಿಯ ಪ್ರಮಾಣ. ಗಾಳಿ ಹೆಚ್ಚಿದ್ದಷ್ಟೂ ಅದರ ವಿಸ್ತರಣೆ (Expansion) ಹೆಚ್ಚಿರುತ್ತದೆ. ಗಾಳಿ ಬಿಸಿಯಾಗುತ್ತಿದ್ದಂತೆ ಕಣಗಳ ಚಲನಶಕ್ತಿ ಹೆಚ್ಚುವುದರಿಂದ ವೇಗವಾಗಿ ಚಲಿಸುತ್ತವೆ ಹಾಗೂ ಬಾಟಲಿಯ ನೀರಿನ ಮೇಲೆ ಒತ್ತಡವನ್ನು ಏರ್ಪಡಿಸುತ್ತವೆ. ಈ ಒತ್ತಡ ದ್ರಾವಣದೊಳಗಿನ ನಳಿಕೆಯೊಳಗೆ ನೀರನ್ನು ಒತ್ತಿ ತಳ್ಳುತ್ತದೆ. ಇದನ್ನು ಗಣಿತೀಯವಾಗಿ ಒತ್ತಡ ಗಾಳಿಯ ಗಾತ್ರ ಎಂದು ವ್ಯಕ್ತಪಡಿಸಬಹುದು.

ಉಷ್ಣಶಕ್ತಿಯ ಮ್ಯಾಜಿಕ್!: ಅಂಗೈಗಳನ್ನು ಉಜ್ಜಿ ಬಾಟಲಿಯನ್ನುಹಿಡಿದಾಗ ಅಥವಾ ಬಿಸಿನೀರಿನಲ್ಲಿ ಇಟ್ಟಾಗ, ನಳಿಕೆಯಲ್ಲಿ ನೀರು ವೇಗವಾಗಿ ಮೇಲಕ್ಕೆ ಏರುತ್ತದೆ.

ಕೆ?: ಕೈಯ ಉಷ್ಣತೆಯಿಂದ ಬಾಟಲಿಯೊಳಗಿನ ಗಾಳಿ ಕ್ಷಿಪ್ರವಾಗಿ ಚಲಿಸಲಾರಂಭಿಸಿ ಒತ್ತಡವನ್ನು ಏರ್ಪಡಿಸುತ್ತದೆ .ಇದೇ ರೀತಿ ಬಿಸಿಲಿನಲ್ಲಿಟ್ಟ ಟೈರ್,  ಬಲೂನು ಅಥವಾ  ಪ್ಲಾಸ್ಟಿಕ್ ಬಾಟಲಿಗಳ ಗಾತ್ರ ಹೆಚ್ಚಿ ಉಬ್ಬುವುದರ ಹಿಂದಿನ ರಹಸ್ಯವೇ ಇದು! ಇಲ್ಲಿ ಚಾರ್ಲ್ಸ್‌  ಮತ್ತು  ಬಾಯ್ಲ್‌ರ ನಿಯಮಗಳನ್ನು ಅನ್ವಯಿಸಬಹುದೇ? ಆಲೋಚಿಸಿ!! 

ಸಸ್ಯಗಳಲ್ಲಿ ಬೇರೊತ್ತಡದಿಂದ ಮೇಲೇರುವ ನೀರಿಗೂ ಈ ಪ್ರಕ್ರಿಯೆಗೂ ಯಾವುದಾದರೂ ಸಂಬಂಧ ಕಲ್ಪಿಸಬಹುದೇ? ಯೋಚಿಸಿ ನೋಡಿ!!


ನಳಿಕೆಯ ವ್ಯಾಸ ಮತ್ತು ವೇಗ (Fluid Dynamics)

ಒಂದೇ ಬಾಟಲಿಗೆ ಕಡಿಮೆ ವ್ಯಾಸದ ನಳಿಕೆ ಮತ್ತು ಅಗಲವಾದ ನಳಿಕೆಯನ್ನು ಬಳಸಿ ನೋಡಿದಾಗ, ಕಡಿಮೆ ವ್ಯಾಸದ ನಳಿಕೆಯಲ್ಲಿ ನೀರು ಅತಿ ಎತ್ತರಕ್ಕೆ ಏರುವುದು ಕಂಡುಬರುತ್ತದೆ. ಇದು ದ್ರವಗತಿ ಶಾಸ್ತ್ರದ (Hydrodynamics) ಮೂಲ ತತ್ವವನ್ನು ಮಕ್ಕಳಿಗೆ ಸುಲಭವಾಗಿ ಅರ್ಥೈಸುತ್ತದೆ.ಗಣಿತೀಯ ಸಂಬಂಧ: ವೇಗ 1 / ನಳಿಕೆಯ ವ್ಯಾಸ.

ಈಗ ಗಾಜಿನ ನಳಿಕೆಯೊಳಗೆ ಒಂದು ಹನಿ ನೀರನ್ನು ಹಾಕಿ ಗಾಳಿಯ ಗುಳ್ಳೆಯನ್ನು ಉಂಟುಮಾಡಿ. ಈಗ ಪ್ರಯೋಗ ನಡೆಸಿ. ನೀರು ಮೇಲೇರುವ ವೇಗವನ್ನು ಗಮನಿಸಿ. ವೇಗ ಏಕೆ ಕಡಿಮೆಯಾಯಿತು?

ಗುರುತ್ವಾಕರ್ಷಣೆಯಿಂದ ನಳಿಕೆಯ ಮೇಲಿನ ನೀರ ಹನಿ ಕೆಳಮುಖವಾಗಿ ಒತ್ತಡ ಏರ್ಪಡಿಸುತ್ತದೆ. ಬಣ್ಣದ ನೀರಿನ ಮೇಲಿನ ಗಾಳಿ ಗರಿಷ್ಟವಾಗಿ ಸಂಪೀಡನೆಗೊಂಡ ನಂರವೇ ಮೇಲೇರುತ್ತದೆ. ಓವರ್‌ ಹೆಡ್‌ಟ್ಯಾಂಕ್‌ನಲ್ಲಿ ನೀರು ಖಾಲಿ ಆದಾಗ ನಲ್ಲಿಯಲ್ಲಿ ಗಾಳಿ ತುಂಬಿಕೊಳ್ಳುತ್ತದೆ. ಎಲ್ಲ ಗಾಳಿ ಹೊರಬಂದ ನಂತರವೇ ನೀರು ಹೊರ ಬರುವುದನ್ನು ಗಮನಿಸಿದ್ದೇವೆ. ಹೀಗೆ ಹತ್ತು ಹಲವು ಬಗೆಯ ವಿದ್ಯಮಾನಗಳನ್ನು ನಾವು ದೈನಂದಿನ ಬದುಕಿನಲ್ಲಿ ನೋಡುತ್ತೇವೆ.

ಒತ್ತಡದ 'ಕಾರಂಜಿ' (The Fountain Effect) : ಈಗ ಸಿರಿಂಜ್ನ ಸೂಜಿಯನ್ನು ಬಾಟಲಿಯ ರಬ್ಬರ್‌ಗೆ ಚುಚ್ಚಿ ಬಾಟಲಿ

ಯೊಳಗೆ ಗಾಳಿಯನ್ನು ಹಾಕಿ. ಬಣ್ಣದ ಕಾರಂಜಿ ಚಿಮ್ಮಿ ನೋಡುಗರಲ್ಲಿ ಅಚ್ಚರಿ ಉಂಟು ಮಾಡುತ್ತದೆ. 
ಬಾಟಲಿಯೊಳಗಿನ ಒತ್ತಡ ಹೆಚ್ಚಾಗುತ್ತಿದ್ದಂತೆ ಬಣ್ಣದ ನೀರು ನಳಿಕೆಯಲ್ಲಿ ಕಾರಂಜಿಯಂತೆ ಚಿಮ್ಮುತ್ತದೆ. ಸ್ಪ್ರೇ ಬಾಟಲಿಗಳು, ಅಗ್ನಿಶಾಮಕ ಉಪಕರಣಗಳೂ ಈ ತತ್ವದ ಅನ್ವಯ ಕಾರ್ಯ ನಿರ್ವಹಿಸುತ್ತವೆ.

ನಾನು ಯಾರಿಗೂ ಏನನ್ನೂ ಕಲಿಸಲಿಲ್ಲ, ಬದಲಿಗೆ ಎಲ್ಲವನ್ನೂ ಹೇಗೆ ನೋಡಬೇಕು ಎಂಬುದನ್ನು ಕಲಿಸಿದೆ.”ಎಂದು ಮಹಾನ್ ವಿಜ್ಞಾನಿ ಗೆಲಿಲಿಯೋ ಹೇಳಿದ್ದರು. ಇದು ವಿದ್ಯಾರ್ಥಿಗಳಿಗೆ ವಿಮರ್ಶಾತ್ಮಕ ಚಿಂತನೆ,  ಅನುಭವಾಧಾರಿತ ಕಲಿಕೆ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಉತ್ತೇಜಿಸುವ ಅವಶ್ಯಕತೆಯನ್ನು ಒತ್ತಿ ಹೇಳುತ್ತದೆ.

ಇಂಥ ಪ್ರಯೋಗಗಳು ವಿದ್ಯಾರ್ಥಿಗಳಲ್ಲಿ ಕೇವಲ ಮಾಹಿತಿಯನ್ನು ತುಂಬುವುದಿಲ್ಲ, ಬದಲಿಗೆ:

  • ಅವಲೋಕನ ಮತ್ತು ವಿಶ್ಲೇಷಣೆಗಳನ್ನು ಕಲಿಸುತ್ತದೆ.
  • ದೈನಂದಿನ ಘಟನೆಗಳನ್ನು ವಿಜ್ಞಾನದ ಸೂತ್ರಗಳಿಗೆ ಸಂಪರ್ಕಿಸುತ್ತದೆ.
  • "ಕಡಿಮೆ ವೆಚ್ಚ – ಹೆಚ್ಚಿನ ಕಲಿಕೆ" (Low Cost High Effect) ಎಂಬ ತತ್ವವನ್ನು ಸಾರುತ್ತದೆ.

ವಿಜ್ಞಾನವು ಕೇವಲ ಪಠ್ಯಪುಸ್ತಕಕ್ಕಷ್ಟೇ ಸೀಮಿತವಾಗಿಲ್ಲ.ಅದು ಕಲಿಕಾರ್ಥಿಯ ಕೈಯಲ್ಲಿರುವ ಇಂತಹ ಪುಟ್ಟ ಬಾಟಲಿಲ್ಲಿದೆ. ಯಾವಾಗ ಒಂದು ಪ್ರಶ್ನೆಯು ಪ್ರಯೋಗವಾಗಿ ಬದಲಾಗುತ್ತದೆಯೋ, ಅಂದೇ ನಿಜವಾದ 'ಸವಿಯಾದ ಜ್ಞಾನ' ಜನ್ಮತಾಳುತ್ತದೆ. ಹೀಗೆ  ಒಂದು ಸರಳ ಕಲಿಕೋಪಕರಣ ಹಲವು ಅಂಶಗಳನ್ನು ವಿವಿಧ ಸ್ತರದ ಕಲಿಕೆಯನ್ನು ಅಂದರೆ ಪ್ರಾಥಮಿಕ ತರಗತಿಗಳಿಂದ ಪಿ.ಜಿ ಕಲಿಕೆಯವರೆಗೂ ವಿಸ್ತರಿಸಬಲ್ಲದು.