ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Wednesday, June 4, 2025

ಜೂನ್‌ 2025 ರ ಲೇಖನಗಳು

 ಜೂನ್‌  2025 ರ ಲೇಖನಗಳು

1. ದೇಶದ ನೀಲಿ ಕ್ರಾಂತಿಯ ಹರಿಕಾರ-ಡಾ.ಎಸ್. ಅಯ್ಯಪ್ಪನ್  : ಡಾ. ಟಿ. ಎ. ಬಾಲಕೃಷ್ಣ ಅಡಿಗ



ದೇಶದ ನೀಲಿ ಕ್ರಾಂತಿಯ ಹರಿಕಾರ-ಡಾ.ಎಸ್. ಅಯ್ಯಪ್ಪನ್

 ದೇಶದ ನೀಲಿ ಕ್ರಾಂತಿಯ ಹರಿಕಾರ-ಡಾ.ಎಸ್. ಅಯ್ಯಪ್ಪನ್

         ಲೇಖಕರು : ಡಾ.ಟಿ.ಎ.ಬಾಲಕೃಷ್ಣ ಅಡಿಗ
                     ವಿಜ್ಞಾನ ಸಂವಹನಕಾರರು


 ಕಳೆದ ಮೇ ತಿಂಗಳ 10ರಂದು ನಮ್ಮನ್ನಗಲಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಸುಬ್ಬಣ್ಣ ಅಯ್ಯಪ್ಪನ್ ಕರ್ನಾಟಕದಲ್ಲಷ್ಟೇ ಅಲ್ಲ, ದೇಶದ ವಿಜ್ಞಾನ ಕ್ಷೇತ್ರದ ಧ್ರುವ ತಾರೆಗಳಲ್ಲಿ ಒಬ್ಬರು. ತಮ್ಮ ಸರಳತೆ ಹಾಗೂ ಸಜ್ಜನಿಕೆಗಳಿಂದಾಗಿ ದೇಶದುದ್ದಕ್ಕೂ ಅಪಾರ ಅಭಿಮಾನಿಗಳನ್ನು ಹೊಂದಿದ್ದವರು. ಪಿ.ಹೆಚ್‌ಡಿ ಸಂಶೋಧನೆಯ ಅವಧಿಯಲ್ಲಿ ಅವರ ಸಹಪಾಠಿಯಾಗಿದ್ದ ಹೆಮ್ಮೆ ನನ್ನದು.


ಡಿಸೆಂಬರ್‌ 10, 1955ರಲ್ಲಿ ಜನಿಸಿದ ಅಯ್ಯಪ್ಪನ್‌ ಅವರು ಬೆಂಗಳೂರಿನ  ನ್ಯಾಷನಲ್‌ ಕಾಲೇಜಿನಲ್ಲಿ ಪದವಿ ಅಧ್ಯಯನ ಮಾಡಿ, ಮುಂದೆ  ಮಂಗಳೂರಿನ  ಫಿಶರೀಸ್‌ ಕಾಲೇಜಿನಲ್ಲಿ ಮೀನುಗಾರಿಕೆ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದ  ಪ್ರಾಣಿಶಾಸ್ತ್ರ ವಿಭಾಗದಲ್ಲಿ  ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿ ಪಿ.ಹೆಚ್.ಡಿ ಪದವಿಗೆ ಪಾತ್ರರಾದರು. ನನ್ನ ಮತ್ತು ಅವರ ಒಡನಾಟ ಪ್ರಾರಂಭವಾಗಿದ್ದು ಇಲ್ಲಿಯೇ. ಅತ್ಯಂತ ಮಿತಭಾಷಿಯಾಗಿದ್ದರೂ, ಅಯ್ಯಪ್ಪನ್‌ ಅವರು ತಮ್ಮ ಕಾರ್ಯತತ್ಪರತೆಯಿಂದಾಗಿ ನಮ್ಮ ಸಂಶೋಧನಾ ಗುಂಪಿನಲ್ಲಿದ್ದ  ಎಲ್ಲ ಸಹೋದ್ಯೋಗಿಗಳ ಪ್ರೀತಿ, ವಿಶ್ವಾಸಗಳಿಗೆ ಪಾತ್ರರಾಗಿದ್ದರು.

1978ರಲ್ಲಿ  ದೇಶದ ಕೃಷಿ ಸಂಶೋಧನೆಯ  ಪ್ರಮುಖ ಸಂಸ್ಥೆಯಾದ ಐ.ಸಿ.ಎ.ಆರ್‌ ನಲ್ಲಿ ವಿಜ್ಞಾನಿಯಾಗಿ  ವೃತ್ತಿ ಜೀವನ ಪ್ರಾರಂಭಿಸಿದ ಅಯ್ಯಪ್ಪನ್‌, ಮುಂದೆ ಹಲವಾರು ಸಂಸ್ಥೆಗಳಲ್ಲಿ ತಮ್ಮ ನಿಸ್ಪೃಹ ಸೇವೆ ಸಲ್ಲಿಸಿದ್ದಾರೆ. 2006-2008ರ ಅವಧಿಯಲ್ಲಿ ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಸಿ.ಇ.ಒ. ಆಗಿ ಸೇವೆ ಸಲ್ಲಿಸಿದ್ದಾರೆ. 2010ರಲ್ಲಿ ಕೇಂದ್ರ ಸರ್ಕಾರದ ಕೃಷಿ ಸಂಶೋಧನಾ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡರು.

ಸಾಮಾನ್ಯವಾಗಿ ಬೆಳೆವಿಜ್ಞಾನಿಗಳೇ ಮಹಾನಿರ್ದೇಶಕರಾಗಿ ನೇಮಕಗೊಳ್ಳುತ್ತಿದ್ದ, ಐ.ಸಿ.ಎ.ಆರ್.‌  ಸಂಸ್ಥೆಗೆ ಮೊದಲ ಬಾರಿಗೆ ಮೀನುಗಾರಿಕೆ ಕ್ಷೇತ್ರದ ವಿಜ್ಞಾನಿ ಅಯ್ಯಪ್ಪನ್‌  ಮಹಾ ನಿರ್ದೇಶಕರಾಗಿ 2010ರಲ್ಲಿ ನೇಮಕಗೊಂಡು ಇತಿಹಾಸ ನಿರ್ಮಿಸಿದರು . ಅಲ್ಲಿ 2016ರ ವರೆಗೆ ದಕ್ಷತೆಯಿಂದ ಸೇವೆ ಸಲ್ಲಿಸಿದರು.

ಇಂಫಾಲ್‌ನಲ್ಲಿರುವ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿಯೂ ಸಹ  ನೇಮಕಗೊಂಡಿದ್ದರು. ಭುವನೇಶ್ವರದ ಸಿ.ಐ.ಎಫ್.ಎ. ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು. ನ್ಯಾಷನಲ್‌ ಅಕ್ರೆಡಿಷನ್‌ ಬೋರ್ಡ್‌ ಫಾರ್‌ ಟೆಸ್ಟಿಂಗ್‌ ಅಂಡ್‌ ಕ್ಯಾಲಿಬ್ರೇಷನ್‌
(ಎನ್‌ ಎ.ಬಿ.ಎಲ್)ನ ಅಧ್ಯಕ್ಷರಾಗಿಯೂ ನೇಮಕಗೊಂಡಿದ್ದರು.

 ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಸಂಶೋಧನೆಗಳಿಗೆ ಖ್ಯಾತಿ ಪಡೆದಿರುವ ಇಂಥ ಹಲವಾರು ಪ್ರತಿಷ್ಟಿತ ಸಂಸ್ಥೆಗಳಿಗೆ ಡಾ.ಅಯ್ಯಪ್ಪನ್‌ ಒದಗಿಸಿದ ನಾಯಕತ್ವ ಅತ್ಯಂತ ಅನುಕರಣೀಯ. ಅಲ್ಲಿ ಅವರು ಪ್ರಾರಂಭಿಸಿದ ಕೆಲವು ಯೋಜನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಸಂಬಂಧಿತ ಮಾಹಿತಿಗಳನ್ನು  ಪರಸ್ಪರ ಹಂಚಿಕೊಳ್ಳುವ ರಾಷ್ಟ್ರಗಳ ಒಕ್ಕೂಟದಲ್ಲಿ ಭಾರತವನ್ನು ಅಗ್ರ ಪಂಕ್ತಿಯಲ್ಲಿ ನಿಲ್ಲಿಸಲು ನೆರವಾದವು.

ತಾವು ತೊಡಗಿಸಿಕೊಂಡ ವಿವಿಧ  ಕಾರ್ಯಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾದ ಯಾವುದೇ ರೀತಿಯ ಸಲಹೆಗಳನ್ನು ಇತರರಿಂದ ಸ್ವೀಕರಿಸುವಲ್ಲಿ ಅಯಪ್ಪನ್ ಅವರದ್ದು ಸದಾ ಮುಕ್ತ ಮನಸ್ಸು. ಯುವ ವಿಜ್ಞಾನಿಗಳ ಹಾಗೂ ತಂತ್ರಜ್ಞಾನಿಗಳ ಜೊತೆ ಸುಲಭವಾಗಿ ಬೆರೆತು, ಅವರ ಅಭಿಪ್ರಾಯಗಳಿಗೆ ಕಿವಿಗೊಡುತ್ತಿದ್ದ ಅವರ ಸರಳತೆ ಅನನ್ಯವಾದುದು. ಕೃಷಿ ಕ್ಷೇತೆದಲ್ಲಿ ಐ.ಸಿ.ಟಿ.ಯ ಬಳಕೆ, ದತ್ತಾಂಶ ದೊರಕಿಸುವ ವ್ಯವಸ್ಥೆಯ ಉನ್ನತೀಕರಣ, ಬಹುಶಿಸ್ತೀಯ ಸಂಶೋಧನೆಗಳಿಗೆ ಉತ್ತೇಜನ, ಮುಂತಾದ ತಮ್ಮ ದೂರದರ್ಶಿತ್ವ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಂಶೋಧನಾ  ಕ್ಷೇತ್ರಕ್ಕೆ‌ ಗಣನೀಯ ಕೊಡುಗೆ ನೀಡಿದ ಹೆಗ್ಗಳಿಕೆ ಅವರದ್ದು.

ದೇಶದ ಮೀನುಗಾರಿಕೆ ಹಾಗೂ ಜಲಚರ ಕೃಷಿ ಕ್ಷೇತ್ರಗಳಿಗೆ ತಮ್ಮ ಸಂಶೋಧನೆಗಳ, ದಕ್ಷ ಆಡಳಿತದ ಹಾಗೂ ಮಾರ್ಗದರ್ಶನಗಳ ಮೂಲಕ ದೇಶದಲ್ಲಿ ಮೀನುಗಳ ಉತ್ಪಾದನೆಯನ್ನು ದಾಖಲೆ ಮಟ್ಟಕ್ಕೆ ಹೆಚ್ಚಿಸುವಲ್ಲಿ  ಮಹತ್ತರ ಕೊಡುಗೆಗಳನ್ನು ಅಯ್ಯಪ್ಪನ್‌ ಅವರು ನೀಡಿದ್ದಾರೆ. ಕರಾವಳಿ ಮತ್ತು ಒಳನಾಡಿನ ಪ್ರದೇಶಗಳಲ್ಲಿ  ಗ್ರಾಮೀಣ ಜೀವನೋಪಾಯವನ್ನು ಸುಧಾರಿಸುವಲ್ಲಿ ಹಾಗೂ ಆಹಾರ ಭಧ್ರತೆಯನ್ನು ಖಾತ್ರಿ ಪಡಿಸುವಲ್ಲಿ ಅವರ ಈ ಕೊಡುಗೆಗಳು ಪ್ರಮುಖ ಎನ್ನಿಸಿವೆ. ಈ ಕಾರಣಕ್ಕಾಗಿ ಅವರನ್ನು “ದೇಶದ ನೀಲಿ ಕ್ರಾಂತಿಯ ಹರಿಕಾರಎಂದು ಗೌರವಿಸಲಾಗುತ್ತದೆ.

ಅಯ್ಯಪ್ಪನ್‌ ಅವರಿಗೆ ಸಂದಿರುವ ಹಲವಾರು ಗೌರವಾದರಗಳು ಅವರ ಕಾರ್ಯಕ್ಷಮತೆಗೆ, ದಕ್ಷತೆಗೆ ಹಾಗೂ ನಿಸ್ಪೃಹ ಸೇವೆಗೆ ಜ್ವಲಂತ ಸಾಕ್ಷಿ. ಇದಕ್ಕೆ ಕಿರೀಟಪ್ರಾಯವಾಗಿ ಬಂದದ್ದು 2022 ರಲ್ಲಿ ಅವರಿಗೆ ಕೇಂದ್ರ ಸರ್ಕಾರ ನೀಡಿ ಗೌರವಿಸಿದ “ಪದ್ಮಶ್ರೀ” ಪ್ರಶಸ್ತಿ.

ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಮಂಡಳಿಗೆ (ಕೆ.ಎಸ್.ಟಿ.ಎ.) ಅಧ್ಯಕ್ಷರಾಗಿ ನೇಮಕಗೊಂಡ ಅಯ್ಯಪ್ಪನ್ ಅಲ್ಲಿಯೂ ತಮ್ಮ ವಿಶಿಷ್ಟ ಹಾಗೂ ವಿನೂತನ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಯಶಸ್ವಿಯಾದರು. ಈ ಅವಧಿಯಲ್ಲಿ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ನೆರವಾಗುವ ದೃಷ್ಟಿಯಿಂದ ಅವರ ವಿಜ್ಞಾನ ಪಠ್ಯದಲ್ಲಿದ್ದ ಅಧ್ಯಾಯಗಳಿಗೆ ಕನ್ನಡದಲ್ಲಿ ಕೆ.ಎಸ್‌.ಟಿ.ಎ. ವತಿಯಿಂದ ವಿಡಿಯೋಗಳನ್ನು ತಯಾರಿಸುವ ಯೋಜನೆಯೊಂದನ್ನು ಹಾಕಿಕೊಂಡಿದ್ದರು. ಅವರ ಆಹ್ವಾನದ ಮೇರೆಗೆ ಜೀವಶಾಸ್ತ್ರಕ್ಕೆ ಸಂಬಂಧಿಸಿದ ಹಲವು ವೀಡಿಯೋಗಳನ್ನು ಮಾಡಿಕೊಡುವ ಜವಾಬ್ದಾರಿಯನ್ನು ಅಯ್ಯಪ್ಪನ್‌ ಅವರು ನನಗೆ ವಹಿಸಿದ್ದರು. ಇದೇ ಅವಧಿಯಲ್ಲಿ, ಬ್ಲಾಗ್‌ ರೂಪದಲ್ಲಿ ಪ್ರಕಟವಾಗುತ್ತಿದ್ದ ನಮ್ಮ “ಸವಿಜ್ಞಾನ” ಇ-ಪತ್ರಿಕೆಯನ್ನು ಅವರಿಗೆ ಪರಿಚಯಿಸಿದ್ದೆ. ನಮ್ಮ ಶಿಕ್ಷಕರ ತಂಡದ ಈ ಪ್ರಯತ್ನವನ್ನು ಅವರು ಮನಸಾರೆ ಮೆಚ್ಚಿಕೊಂಡಿದ್ದರು. ʼಸವಿಜ್ಞಾನʼ ದ ಮೊದಲ ವಾರ್ಷಿಕ ಸಂಚಿಕೆಗೆ ತಮ್ಮ ಸಂದೇಶವನ್ನೂ ನೀಡಿದ್ದರು.

ಅವರ ಅಗಲಿಕೆಯಿಂದ ಭಾರತೀಯ ಕೃಷಿ ವಿಜ್ಞಾನ ಕ್ಷೇತ್ರದಲ್ಲಿ  ಮತ್ತು ಸಾರ್ವಜನಿಕ ಸೇವಾ ವಲಯಗಳಲ್ಲಿ ಉಂಟಾಗಿರುವ ಶೂನ್ಯ ಭರಿಸಲಾಗದ್ದು. ಅವರು ಹುಟ್ಟು ಹಾಕಿದ ಮುಕ್ತ ಜ್ಞಾನ ವೇದಿಕೆಗಳಲ್ಲಿ ಮತ್ತು ಅವರು ಬೆಳೆಸಿ, ಪೋಷಿಸಿದ ಸಂಶೋಧನಾ ಸಮುದಾಯಗಳಲ್ಲಿ ಅವರ ಮಹತ್ತರ ಕೊಡುಗೆಗಳು ಸದಾ ರಿಂಗಣಿಸುತ್ತಿರುತ್ತವೆ. “ ಸವಿಜ್ಞಾನ” ತಂಡದ ಎಲ್ಲ ಶಿಕ್ಷಕರ ಪರವಾಗಿ ಡಾ. ಅಯ್ಯಪ್ಪನ್‌ ಅವರಿಗೆ ನಮ್ಮ “ಆಶ್ರು ತರ್ಪಣ”

ತಾಂತ್ರಿಕ ಭಾರತದ ಬೆಳಗಿಗೆ ಕಾರಣವಾಗಬಲ್ಲ ಟ್ಯಾಂಟಲಮ್ ಎಂಬ ಶುಂಠ!!

 ತಾಂತ್ರಿಕ ಭಾರತದ ಬೆಳಗಿಗೆ ಕಾರಣವಾಗಬಲ್ಲ ಟ್ಯಾಂಟಲಮ್ ಎಂಬ ಶುಂಠ!!

 ಲೇಖಕರು : ರಾಮಚಂದ್ರ ಭಟ್‌ ಬಿ.ಜಿ.





ಇದ್ಯಾವ ಶುಂಠ ವಿಜ್ಞಾನದಲ್ಲಿ ಇಣುಕಿದನೆಂಬ ಅಚ್ಚರಿ ನಿಮಗಾಗಬಹುದು. ಇತಿಹಾಸದ ಪುಟದಲ್ಲಡಗಿದ ಈ ಕಥೆ ಕೇಳಿದರೆ ನಿಮಗೇ ಟ್ಯಾಂಟಾಲಂನ ಶುಂಠತನದ ಅರಿವಾದೀತು!!

ಆಂಡರ್ಸ್ ಗುಸ್ತಾವ್ ಎಕೆಬರ್ಗ್ ಎಂಬ ಸ್ವೀಡಿಷ್ ವಿಜ್ಞಾನಿ 1802ರಲ್ಲಿ  ಒಂದು ಹೊಸ ಧಾತುವನ್ನು ಸಂಸ್ಕರಿಸಿದರು. ಈ ಸಂಸ್ಕರಣೆಯೋ ಅವರ ಎಲ್ಲಾ ಸಹನೆಯನ್ನೂ ಬರಿದು ಮಾಡಿತ್ತು. ಹಾಗಾಗಿ ಅದಕ್ಕೇ ಟ್ಯಾಂಟಲಮ್ ಎಂದೇ ಹೆಸರಿಟ್ಟರು. ಅದೇನು ವಿಚಿತ್ರ ಹೆಸರು ಎಂದುಕೊಂಡಿರೋ? 

Anders_Gustaf_Ekeberg (1767- 1813)

ಗ್ರೀಕ್‌ ದೇವ  ಜೀಯಸ್ನ ಮಗನಾದ ಟ್ಯಾಂಟಲಸ್ ಲಿಡಿಯಾದ ರಾಜನಾಗಿದ್ದನು. ಈತ ದೇವತೆಗಳಿಗೆ ತನ್ನ ಮಗನ ಮಾಂಸದಡುಗೆ ಮಾಡಿಸಿ ಬಡಿಸಲು ಪ್ರಯತ್ನಿಸಿದನಂತೆ. ವಿಷಯ ತಿಳಿದ ದೇವತೆಗಳು ಮಗನನ್ನು ಬದುಕಿಸಿದರಂತೆ. ದೇವರಾಜನ ಪುತ್ರನಾಗಿದ್ದರೂ ಈತ ತನ್ನ ರಾಕ್ಷಸೀ ಕೃತ್ಯಗಳಿಂದ ದೇವತೆಗಳಿಗೇ ತಲೆನೋವಾಗಿದ್ದ. ಹೀಗಾಗಿ ಆತನಿಗೆ ಸರಿಯಾದ ಪಾಠ ಕಲಿಸಲು ಆತನಿಗೆ ಸದಾ ಹಸಿವು ನೀರಡಿಕೆಗಳಿಂದ ನರಳುವ ಶಿಕ್ಷೆ ನೀಡಲಾಯಿತು. ದಂಡನೆಗಾಗಿ, ದೇವತೆಗಳು ಅವನನ್ನು ಪಾತಾಳ ಲೋಕದಲ್ಲಿ ನೀರಿನ ಕೊಳದಲ್ಲಿ ನಿಲ್ಲುವ ಶಿಕ್ಷೆಗೆ ಒಳಪಡಿಸಿದರು. ಈತ ಹಸಿವಿನಿಂದ ಬಳಲಿದಾಗ ಕೈಯಳತೆಯಲ್ಲೇ ಇದ್ದ ಹಣ್ಣುಗಳು ಅವನಿಂದ ದೂರ ಸರಿಯುತ್ತಿದ್ದವು. ಅದೇ ರೀತಿ, ಅವನು ಬಾಯಾರಿಕೆಯಿಂದ ನೀರು ಕುಡಿಯಲು ನೀರಿನತ್ತ ಬಾಗಿದರೆ, ಕೊಳದ ನೀರು ಕೆಳಗಿಳಿದು, ಅವನಿಗೆ ತಲುಪದಂತೆ ಆಗುತ್ತಿತ್ತು!!! ‌ಕಣ್ಣೆದುರೇ ಕೈಯಳತೆಯಷ್ಟೇ ದೂರದಲ್ಲಿದ್ದರೂ ನೀರು ಆಹಾರಗಳು ಸಿಗದೇ ತೃಷೆ ಮತ್ತು ಕ್ಷುದ್ಭಾಧೆಗಳಿಂದ ನರಳಬೇಕಾಯಿತು. ಈ ರೀತಿಯಲ್ಲೇ, ಎಕೆಬರ್ಗ್‌ಗೂ ಇನ್ನೇನು ಈ ಲೋಹದ ಪತ್ತೆ ಮಾಡಿಯೇ ಬಿಟ್ಟೆ ಎನ್ನುವಷ್ಟರಲ್ಲಿ ಸುಳಿವು ಸಿಕ್ಕೂ ಸಿಗದಂತೆ ಆಗಿ ಟ್ಯಾಂಟಲಸ್‌ನ ಪರಿಸ್ಥಿತಿಯೇ ಉಂಟಾಯಿತು!!! 

Yttrotantalite 

ಎಕೆಬರ್ಗ್ ಅವರು ಸ್ವೀಡನ್‌ನ ಯಿಟರ್‌ಬೈ (Ytterby) ಎಂಬ ಸ್ಥಳದಿಂದ ಸಂಗ್ರಹಿಸಿದ ಖನಿಜದ ಮಾದರಿಯೊಂದನ್ನು  ರಾಸಾಯನಿಕವಾಗಿ ವಿಶ್ಲೇಷಿಸಿದಾಗಅದರಲ್ಲಿ ಹೊಸ ಲೋಹವೊಂದರ ಗುಣಲಕ್ಷಣಗಳನ್ನು ಕಂಡುಕೊಂಡರು. ಈ ಲೋಹವನ್ನು ಸುಲಭವಾಗಿ ದ್ರವಿಸಲಾಗದು. ಇದು ಆಮ್ಲ, ಪ್ರತ್ಯಾಮ್ಲಳೊಂದಿಗೆ ವರ್ತಿಸುತ್ತಿರಲಿಲ್ಲ.  ಇನ್ನೂ ಅನೇಕ ವಿಶೇಷವಾದ ರಾಸಾಯನಿಕ ಗುಣಗಳನ್ನುಹೊಂದಿತ್ತು. ಹಾಗಾಗಿ ಟ್ಯಾಂಟಲಸ್‌ನಂತೆ ತರಲೆ ಮಾಡುತ್ತಿದ್ದ ಧಾತುವನ್ನು ಖನಿಜದಿಂದ ಪ್ರತ್ಯೇಕಿಸಬೇಕೆಂದರೆ ಸಂಶೋಧಕರಿಗೆ ಎಂತಹ ಕಠಿಣ ಪರಿಶ್ರಮ, ಎಷ್ಟು ಸಹನೆ ಬೇಕಿತ್ತೋ? ಹಾಗಾಗಿಯೇ ಸಹನೆಗೆಟ್ಟ ಎಕೆಬರ್ಗ್‌ ಅವರು ಇದನ್ನು ಟ್ಯಾಂಟಲಮ್ ಎಂದು ನಾಮಕರಣ ಮಾಡಿ ಸಮಾಧಾನಪಟ್ಟರು. ಇಷ್ಟಕ್ಕೇ ಸಮಸ್ಯೆ ಮುಗಿಯಲಿಲ್ಲ. ಇದಕ್ಕೂ ಒಂದು ವರ್ಷ ಮೊದಲೇ ಅಂದರೆ, 1801 ರಲ್ಲಿ ಚಾರ್ಲ್ಸ್‌ ಹ್ಯಾಚೆಟ್‌ ನಿಯೋಬಿಯಮ್ ಧಾತುವನ್ನು ಗುರುತಿಸಿದ್ದರು. ಎರಡೂ ಧಾತುಗಳನ್ನು ವಿಶ್ಲೇಷಿಸಿದ ವಿಖ್ಯಾತ ಬ್ರಿಟಿಷ್ ರಸಾಯನಶಾಸ್ತ್ರಜ್ಞ ವಿಲಿಯಂ ವೋಲಸ್ಟನ್, ನಿಯೋಬಿಯಮ್‌ಗೂ ಟ್ಯಾಂಟಲಮ್‌ಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಘೋಷಿಸಿದರು.!!! ಇದಕ್ಕೆ ಹಲವು ಕಾರಣಗಳಿದ್ದವು. ನಿಯೋಬಿಯಂ ಧಾತುವನ್ನು ಸಂಶ್ಲೇಷಿಸಲಾದ ಖನಿಜದಿಂದಲೇ ಈ ಹೊಸ ದಾತುವನ್ನು  ಕಂಡುಹಿಡಿದದ್ದಲ್ಲದೇ, ಆ ಕಾಲದಲ್ಲಿನ ಪ್ರತ್ಯೇಕ ತಂತ್ರಜ್ಞಾನಗಳು ಅಪೂರ್ಣವಾಗಿದ್ದವು. ಎರಡೂ ಲೋಹಗಳ ರಾಸಾಯನಿಕ ಗುಣಧರ್ಮಗಳಿಗೂ ಬಹಳ ಸಾಮ್ಯತೆಗಳಿದ್ದವು. ಆದ್ದರಿಂದ, ಅವುಗಳನ್ನು ಪರಸ್ಪರ ವ್ಯತ್ಯಾಸಿಸುವುದು ಷ್ಟು ಸುಲಭವಾಗಿರಲಿಲ್ಲ. ಇದರಿಂದಾಗಿ ಈ ಎರಡನ್ನು ಗುರುತಿಸುವಲ್ಲಿ ತೀವ್ರ ಗೊಂದಲ ಉಂಟಾಯಿತು.

A high purity (99.999 %) tantalum single crystal, made by the floating zone process

ಅಂತಿಮವಾಗಿ 1846ರಲ್ಲಿ ಜರ್ಮನ್ ವಿಜ್ಞಾನಿ ಹೆನ್‌ರಿಚ್ ರೋಸ್ ಅವರು ಟ್ಯಾಂಟಲಮ್ ಮತ್ತು ನಿಯೋಬಿಯಮ್ ಅನ್ನು ಪ್ರತ್ಯೇಕಿಸಿ, ಇವೆರಡೂ ವಿಭಿನ್ನ ಲೋಹಗಳೆಂಬುದನ್ನು ಖಚಿತಪಡಿಸಿ ಗೊಂದಲವನ್ನು ನಿವಾರಿಸಿದರು. ಅವರು ಪ್ರತ್ಯೇಕಿಸಿದ ಟ್ಯಾಂಟಲಮ್ ಇನ್ನೂ ಸಂಪೂರ್ಣ ಶುದ್ಧವಾಗಿರಲಿಲ್ಲ. ಶುದ್ಧ ಟ್ಯಾಂಟಲಮ್ ಅನ್ನು ಮೊದಲ ಬಾರಿಗೆ 1903ರಲ್ಲಿ ವರ್ನರ್ ವಾನ್ ಬೋಲ್ಟನ್ ಎಂಬ ವಿಜ್ಞಾನಿ ಉತ್ಪಾದಿಸಿದರು. ಇದು ಟ್ಯಾಂಟಲಮ್ ಮಾಡಿದ ಶುಂಠತನ!! ಶತಮಾನದವರೆಗೂ ಕಾಡಿದ ಐತಿಹಾಸಿಕ ಕಥನ !! ಇನ್ನು ತುಂಬಾ ಶುಂಠ ತರ್ಲೆಗಳಿಗೆ ನೀವೂ ಟ್ಯಾಂಟಲಸ್‌ ಎಂದು ಕರೆಯಬಹುದೇನೋ?     ಈಗ ಇಂದಿನ ವಾಸ್ತವಕ್ಕೆ ಬರೋಣ. ಅದು ೨೦೨೩ರ ಚುಮು ಚುಮು ಚಳಿಯ ದಿನ. ಅಂದು ಎಂದಿನಂತೆ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ರೋಪರ್‌ನ ನಾಗರಿಕ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರೆಸ್ಮಿ ಸೆಬಾಸ್ಟಿಯನ್ ನೇತೃತ್ವದ ಸಂಶೋಧಕರ ತಂಡವು ಪಂಜಾಬ್‌ನ ಸಟ್ಲೆಜ್‌ ನದಿಪಾತ್ರದಲ್ಲಿ ನದಿಯ ಹರಿವಿನ ಕುರಿತು ಸಂಶೋಧನೆ ಮಾಡುತ್ತಿದ್ದರು. ನದಿಯ ಪ್ರವಾಹ ಹಾಗೂ ನದಿಯ ಹರಿಯುವ ದಿಕ್ಕಿನ ಮೇಲೆ ಪರಿಶೋಧನೆ ಮಾಡುವ ಮೂಲಕ ನದಿಯ ಅಣೆಕಟ್ಟು, ನಾಲೆಗಳು ಉಪನದಿಗಳ ಜೋಡಣೆ, ಪರಿಸರದ ಮೇಲೆ ಅದರ ಪರಿಣಾಮಗಳು ಮೊದಲಾದ ಗಹನ ವಿಚಾರಗಳ ಕುರಿತಂತೆ ಸಂಶೋಧನೆ ಮಾಡುವುದು ಅವರ ಉದ್ದೇಶವಾಗಿತ್ತು. ಆದರೆ ಅವರು ಆ ದಿನ ಅವರ ಬದುಕಿನಲ್ಲಿ, ಅಷ್ಟೇ ಏಕೆ ಭವಿಷ್ಯದಲ್ಲಿ ಭಾರತದ ತಂತ್ರಜ್ಞಾನ ಕ್ಷೇತ್ರಕ್ಕೇ ಅಪಾರ ಕೊಡುಗೆ ನೀಡಬಹುದೆಂದು ಅವರಿಗೆ ತಿಳಿದಿರಲಿಲ್ಲ. ಈ ತಂಡ ಸಟ್ಲೆಜ್‌ ನದಿಯ ಮರಳಿನಲ್ಲಿ ಟ್ಯಾಂಟಲಮ್ ಎಂಬ ಅಪರೂಪದ ಲೋಹದ ಅಸ್ತಿತ್ವವನ್ನು ಪತ್ತೆಹಚ್ಚಿತು. ಇದು ಸರೆಂಡಿಪಿಟಿಗೆ ಮತ್ತೊಂದು ಉದಾಹರಣೆ

ಟ್ಯಾಂಟಲಮ್ (Tantalum) ಧಾತುವು ಇದು ಬೂದು ಬಣ್ಣದ, ಕಡಿಮೆ ಕ್ರಿಯಾಶೀಲ, ಹೆಚ್ಚಿನ ದ್ರವನ ಬಿಂದುವುಳ್ಳ, ನಶಿಸುವಿಕೆಗೆ ಒಳಗಾಗದ ಲೋಹವಾಗಿದೆ. ಇದರ ಪರಮಾಣು ಸಂಖ್ಯೆ 73 ಆಗಿದ್ದು, ಆವರ್ತ ಕೋಷ್ಟಕದಲ್ಲಿ 6ನೇ ಆವರ್ತ , 5ನೇ ವರ್ಗಕ್ಕೆ ಸೇರಿರುವ ಇದರ ಇಲೆಕ್ಟ್ರಾನ್‌ ವಿನ್ಯಾಸ - [Xe] 4f145d36s2, ಇದರ ದ್ರವನ ಬಿಂದು 3017°C, ಕುದಿಬಿಂದು 5455°C. ಸಾಂದ್ರತೆ - 16.678 g/cm3 ಆಕ್ಸಿಜನ್‌ನೊಂದಿಗೆ ವರ್ತಿಸಿ ಮೇಲ್ಮೈಯಲ್ಲಿ ಟ್ಯಾಂಟಲಮ್ ಆಕ್ಸೈಡ್ (TaO) ಪದರವನ್ನು ಉಂಟು ಮಾಡುತ್ತದೆ.  ಇದು  300°C ಗಿಂತ ಹೆಚ್ಚಿನ ತಾಪದಲ್ಲೂ ಸ್ಥಿರವಾಗಿರುತ್ತದೆ. ಪ್ರಬಲ ಆಮ್ಲಗಳ ವರ್ತನೆಯನ್ನು ಸಹ ತಡೆಯಬಲ್ಲದು. ಈ ಗುಣವು ಟ್ಯಾಂಟಲಮ್‌ನ ರಾಸಾಯನಿಕ ಸ್ಥಿರತೆಗೆ ಕಾರಣವಾಗಿದೆ. ಇದೂ ಉತ್ತಮ ತನ್ಯ , ಕುಟ್ಯ ಗುಣವುಳ್ಳ ಲೋಹ. ಇವೇ ಇದಕ್ಕೆ ಚಿನ್ನಕ್ಕಿಂತಲೂ ಹೆಚ್ಚಿನ ಮಹತ್ವವನ್ನು ತಂದುಕೊಟ್ಟಿರುವುದು.

ಟ್ಯಾಂಟಲಮ್ ಬಳಕೆ ವ್ಯಾಪಕವಾಗಿದೆ

  • ಟ್ಯಾಂಟಲಮ್ ಬಳಕೆ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಕೆಪಾಸಿಟರ್ಸ್‌, ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಇತ್ಯಾದಿಗಳಲ್ಲಿ ಟ್ಯಾಂಟಲಮ್ ಕಪಾಸಿಟರ್‌ಗಳು ವಿದ್ಯುತ್‌ ಶೇಖರಣೆಗಾಗಿ ಬಳಸಲಾಗುತ್ತವೆ.
  • ಟ್ಯಾಂಟಲಮ್ ಅನ್ನು ಪ್ಲಾಟಿನಮ್‌ಗೆ ಬದಲಿ ಲೋಹವಾಗಿ ಬಳಸಲಾಗುತ್ತದೆ, ಏಕೆಂದರೆ ಇದು ಕಡಿಮೆ ವೆಚ್ಚದ ಮತ್ತು ಹೆಚ್ಚಿನ ಕರಗುವ ತಾಪಮಾನ ಹೊಂದಿರುವ ಲೋಹ.
  • ನ್ಯೂಕ್ಲಿಯರ್, ಏರ್‌ಕ್ರಾಫ್ಟ್, ಕ್ಷಿಪಣಿಗಳ ತಯಾರಿಕೆ ಮತ್ತು ರಾಸಾಯನಿಕ ಕಾರ್ಖಾನೆಗಳಲ್ಲಿ ಇದರ ಉಪಯೋಗ ಹೆಚ್ಚಾಗಿದೆ.
  • ಮಾನವ ದೇಹದ ದ್ರವಗಳೊಂದಿಗೆ ಇದು ವರ್ತಿಸದ ಕಾರಣದಿಂದಾಗಿ, ಶಸ್ತ್ರಚಿಕಿತ್ಸಾ ಸಾಧನಗಳು, ಕೃತಕ ಜೋಡಣಿಗಳು ತಯಾರಿಕೆಗೆ ಸಹ ಉಪಯೋಗಿಸುತ್ತಾರೆ.
  • ಟ್ಯಾಂಟಲಮ್ ಕಾರ್ಬೈಡ್ ಮತ್ತು ಗ್ರಾಫೈಟ್‌ನ ಸಂಯೋಜನೆಯನ್ನು ಯಂತ್ರೋಪಕರಣಗಳು, ಕತ್ತರಿಸುವ ಹತಾರಗಳು, ಡ್ರಿಲ್ಲಿಂಗ್‌ ಸಾಧನಗಳು ಮೊದಲಾದವುಗಳಲ್ಲಿ ಬಳಸುತ್ತಾರೆ.
  • ಟಂಗ್‌ಸ್ಟನ್‌ ಗಿಂತ ಮೊದಲು ಟ್ಯಾಂಟಲಮ್ ಅನ್ನು ಬಲ್ಬ್‌ಗಳಲ್ಲಿ ಬಳಸಲಾಗುತ್ತಿತ್ತು.

ಟ್ಯಾಂಟಲಮ್‌ನ ಬಳಕೆ

  1. ಎಲೆಕ್ಟ್ರಾನಿಕ್ಸ್: ಟ್ಯಾಂಟಲಮ್ ಕೆಪಾಸಿಟರ್‌ಗಳು ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಮತ್ತು ಕ್ಯಾಮೆರಾಗಳಲ್ಲಿ ವಿದ್ಯುತ್ ಶೇಖರಣೆಗೆ ಬಳಸಲಾಗುತ್ತವೆ.
  2. ವೈದ್ಯಕೀಯ ಕ್ಷೇತ್ರ: ಕೃತಕ ಜೋಡಣಿಗಳು, ಶಸ್ತ್ರಚಿಕಿತ್ಸಾ ಉಪಕರಣಗಳ ತಯಾರಿಕೆ.
  3. ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರ: ಕ್ಷಿಪಣಿಗಳು, ರಾಕೆಟ್ ಎಂಜಿನ್‌ಗಳ ಭಾಗಗಳಿಗೆ.
  4. ರಾಸಾಯನಿಕ ಕಾರ್ಖಾನೆಗಳು: ತುಕ್ಕು-ನಿರೋಧಕ ಲೇಪನಗಳಿಗೆ.
  5. ಪ್ಲಾಟಿನಮ್‌ಗೆ ಪರ್ಯಾಯ: ಕಡಿಮೆ ವೆಚ್ಚದ ಆಯ್ಕೆಯಾಗಿ.

ಸಟ್ಲೆಜ್‌ನ ಶೋಧನೆಯ ಮಹತ್ವ :  

  • ಆರ್ಥಿಕ ಪ್ರಯೋಜನ: ಟ್ಯಾಂಟಲಮ್‌ನ ಆತ್ಮ ನಿರ್ಭರತೆಯನ್ನು ಕಡಿಮೆ ಮಾಡಿ, ಭಾರತವನ್ನು ಸ್ವಾವಲಂಬಿಯಾಗಿಸಬಹುದು.
  • ತಾಂತ್ರಿಕ ಕ್ರಾಂತಿ: ದೇಶೀಯ ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್, ಮತ್ತು ವೈದ್ಯಕೀಯ ಉದ್ಯಮಗಳಿಗೆ ದೊಡ್ಡಬಲ ನೀಡಲಿದೆ.
  • ವೈಜ್ಞಾನಿಕ ಸಂಶೋಧನೆ: ಸಟ್ಲೆಜ್‌ನ ಭೂ- ವೈಜ್ಞಾನಿಕ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಮತ್ತು ಇತರ ಖನಿಜಗಳನ್ನು ಅನ್ವೇಷಿಸಲು ದಾರಿ.
  • ಪರಿಸರ ಸಂರಕ್ಷಣೆ: ಗಣಿಗಾರಿಕೆಯನ್ನು ಪರಿಸರ ಸ್ನೇಹಿಯಾಗಿ ನಿರ್ವಹಿಸಲು ಸಂಶೋಧನೆಗೆ ಅವಕಾಶ.

ಭವಿಷ್ಯದ ಸಾಧ್ಯತೆಗಳು

ಸಟ್ಲೆಜ್‌ನಲ್ಲಿ ಟ್ಯಾಂಟಲಮ್‌ನ ಶೋಧನೆ ಭಾರತದ ಆತ್ಮನಿರ್ಭರ ಭಾರತ’ ಕನಸಿಗೆ ಒಂದು ದೊಡ್ಡ ಹೆಜ್ಜೆ. ಈ ಲೋಹದ ಶೇಖರಣೆಯ ಪ್ರಮಾಣವನ್ನು ಖಚಿತಪಡಿಸಲು ಮತ್ತು ಗಣಿಗಾರಿಕೆಯ ಸಾಧ್ಯತೆಯನ್ನು ಮೌಲ್ಯಮಾಪನ ಮಾಡಲು IIT ರೋಪಾರ್‌ನ ತಂಡವು ಈಗ ತೀವ್ರ ಸಂಶೋಧನೆಯಲ್ಲಿ ತೊಡಗಿದೆ. ಇದು ಭಾರತವನ್ನು ಟ್ಯಾಂಟಲಮ್ ಉತ್ಪಾದನೆಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರವನ್ನಾಗಿಸಬಹುದು.

ಹಂಸಗೀತೆಗೆ‌ ಅಣಿಯಾದ ಆರ್ದ್ರನ ಆಸು-ಪಾಸು.

  ಹಂಸಗೀತೆಗೆ‌ ಅಣಿಯಾದ ಆರ್ದ್ರನ ಆಸು-ಪಾಸು


                ಲೇಖಕರು: ಸುರೇಶಕೃಷ್ಣಮೂರ್ತಿ

 

ಮಹಾವ್ಯಾಧ ಅಥವಾ ಬೇಟಗಾರ ಅಥವಾ ಒರೆಯನ್ ನಕ್ಷತ್ರ ಪುಂಜವನ್ನು ಭಾರತದಲ್ಲಿ ಮೃಗ ಎಂದು ಕರೆಯಲಾಗುತ್ತದೆ. ಚಳಿಗಾಲದ ರಾತ್ರಿಯಾಕಾಶದಲ್ಲಿ ಅತ್ಯಂತ ಪ್ರಮುಖವಾಗಿ ಕಂಡುಬರುವ ನಕ್ಷತ್ರಪುಂಜಗಳಲ್ಲಿ ಮೃಗವೂ ಒಂದಾಗಿದೆ. ಗ್ರೀಕ್‌ ಪುರಾಣದ ಪ್ರಕಾರ ಗಾರ್ಗಾನ್‌ ಸಹೋದರಿಯರಲ್ಲಿ ಒಬ್ಬಳಾದ ಯರ್ಯಾಲಿ ಮತ್ತು ಪೊಸೈಡಾನರ ಮಗನೇ ಒರೈಯಾನ ಎಂಬವನೇ ಈ ಬೇಟೆಗಾರ.  

ಜಗತ್ತಿನಾದ್ಯಂತ ಹಲವಾರು ನಾಗರೀಕತೆಗಳಲ್ಲಿ ಪುರಾಣ, ಇತಿಹಾಸಗಳಲ್ಲಿ ಇದರ ಪ್ರಸ್ತಾಪ ಕಂಡುಬರುತ್ತದೆ. ಮಹಾವ್ಯಾದ ಅಥವಾ ಒರೆಯನ್‌ ಹಲವಾರು ಕಾರಣಗಳಿಗೆ ಗಮನ ಸೆಳೆಯುತ್ತದೆ. ಬಹಳ ಪ್ರಮುಖವಾಗಿ ಬರಿಗಣ್ಣಿಗೆ ಕಾಣುವ ಸುಪ್ರಸಿದ್ದ ಒರೈಯನ್‌ ನೀಹಾರಿಕೆ ನಕ್ಷತ್ರಗಳ ನರ್ಸರಿ ಎಂದೇ ಖಗೋಳಶಾಸ್ತ್ರದಲ್ಲಿ ಕರೆಯಲಾಗಿದೆ.ನೀಹಾರಿಕೆ(Nebula) ಎಂದರೆ ಅಂತರಿಕ್ಷದಲ್ಲಿ ಹರಡಿರುವ ಮಿಲಿಯನ್‌ ನಿಂದ ಬಿಲಿಯನ್‌ ಜ್ಯೋತಿವರ್ಷಗಳಷ್ಟು ವ್ಯಾಪ್ತಿಯಿರುವ ಅನಿಲ ಮತ್ತು ಧೂಳಿನಿಂದ ಕೂಡಿದ ಅನಿಯತಾಕಾರದ ಮೋಡ. ಇಂತಹ ಮೋಡಗಳು ಗುರುತ್ವಾಕರ್ಷಣೆಯಿಂದ ಸಾಂಧ್ರಗೊಂಡು ಹೊಸ ನಕ್ಷತ್ರಗಳ ಉಗಮವಾಗುತ್ತದೆ. ನಮ್ಮ ಸೂರ್ಯ ಮತ್ತು ಸೌರವ್ಯೂಹವು ಸಹ ಇಂತಹುದೆ ನೀಹಾರಿಕೆಯ ಫಲಶೃತಿ ಆಗಿದೆ. ಕೊನೆ ಕೊನೆಗೆ ನಕ್ಷತ್ರದ ಅವಸಾನವಾದಾಗ ಅದರ ಗಣನೀಯ ಪ್ರಮಾಣದ ದ್ರವ್ಯವು ಅಂತರಿಕ್ಷದಲ್ಲಿ ನೀಹಾರಿಕೆಯಾಗಿ ಹರಡಿಕೊಳ್ಳುತ್ತದೆ. ಪುನರಪಿ ಜನನಂ ಪುನರಪಿ ಮರಣಂ ಎನ್ನುವಂತೆ ಮತ್ತದೇ ನೀಹಾರಿಕೆಯು ನವತಾರೆಯ ಉಗಮಕ್ಕೂ ದ್ರವ್ಯವನ್ನು ಒದಗಿಸಿ ಹೊಸ ಶಿಶು ನಕ್ಷತ್ರದ ಜನನಕ್ಕೆ ಕಾರಣವಾಗುತ್ತದೆ.  ರಾತ್ರಿಯಾಕಾಶದಲ್ಲಿ ಒರೆಯನ್ ಅನ್ನು ಸುಲಭವಾಗಿ ಗುರ್ತಿಸಲು ಸಹಕರಿಸುವ ನಾಲ್ಕು ಪ್ರಕಾಶಮಾನ ನಕ್ಷತ್ರಗಳಾದ ರೀಗಲ್‌, ಸೈಫ್‌, ಬಿಟಲಗ್ಯೂಸ್‌(ಆರ್ದ್ರ) ಮತ್ತು ಬೆಲ್ಲಾಟ್ರಿಕ್ಸ್‌ಗಳು ಒಂದು ಆಕರ್ಷಕ ಅನಿಯತ ಚತುರ್ಭುಜವನ್ನು ರಚಿಸುತ್ತವೆ. ಈ ನಾಲ್ಕರಲ್ಲಿ ಅತಿ ಪ್ರಕಾಶಮಾನವಾದ ರೀಗಲ್‌ ಒಂದು ಚಂಚಲತಾರೆ ಮತ್ತು ನಾಲ್ಕು ನಕ್ಷತ್ರಗಳ ಒಂದು ಪರಿವಾರವಾಗಿದೆ. ಈ ವ್ಯವಸ್ಥೆಯಲ್ಲಿ ಪ್ರಮುಖವಾದ ರೀಗಲ್‌ A ನಕ್ಷತ್ರವನ್ನು ರೀಗಲ್‌ B ಮತ್ತು ರೀಗಲ್‌ C ಗಳು ಸುತ್ತುತ್ತಿವೆ. ವಿಶೇಷವೆಂದರೆ ರೀಗಲ್‌ B ಎಂಬುದು ಪರಸ್ಪರ ಗಿರಕಿ ಹೊಡೆಯುತ್ತಿರುವ Ba ಮತ್ತು Bb ಎಂಬ ಜೋಡಿ ನಕ್ಷತ್ರಗಳ ಒಂದು ವ್ಯವಸ್ಥೆಯಾಗಿದೆ.ಈ ವ್ಯವಸ್ಥೆಯನ್ನು C ನಕ್ಷತ್ರವು ಸುತ್ತುಹಾಕುತ್ತಾ ಒಂದು ತ್ರಿವಳಿ ವ್ಯವಸ್ಥೆ ಏರ್ಪಟ್ಟಿದೆ !

ಒರೆಯನ್‌ ಚತುರ್ಭುಜದ ನಡುವೆ ಕಂಡುಬರುವ ಅಲ್ನಿಟಾಕ್‌, ಅಲ್ನಿಲಂ ಮತ್ತು ಮಿಂಟಾಕಾ ಎಂಬ ಮೂರು ನಕ್ಷತ್ರಗಳು ರಚಿಸುವ ರೇಖೆಯನ್ನು ಬೇಟೆಗಾರನ ನಡುಪಟ್ಟಿ ಎಂದು ಕರೆಯಲಾಗುತ್ತದೆ. ಈ ನಡುಪಟ್ಟಿಯಿಂದ ತೂಗಾಡುವ ಕತ್ತಿಯೆಂದು ಕಲ್ಪಿಸಲಾದ ಮೂರು ಬೆಳಕಿನ ಸಮೂಹ ಕಂಡುಬರುತ್ತದೆ. ಮಲಿನವಿಲ್ಲದ ರಾತ್ರಿಯಾಕಾಶದಲ್ಲಿ ಈ ಸಮೂಹವನ್ನು ಬರಿಗಣ್ಣಿನಿಂದ ಸರಿಯಾಗಿ ಗಮನಿಸಿ ನೋಡಿದರೆ ಅವು ನಕ್ಷತ್ರಗಳು ಮಾತ್ರ ಅಲ್ಲವೆಂಬ ಅಂಶ ಸ್ಪಷ್ಟವಾಗುತ್ತದೆ. ಇವುಗಳಲ್ಲಿ ಮಧ್ಯದಲ್ಲಿರುವುದೇ M43 ಎಂದು ಗುರುತಿಸಲಾಗುವ ಸುಪ್ರಸಿದ್ಧ ಒರೆಯನ್‌ ನೀಹಾರಿಕೆ. ಇದರ ಜೊತೆ ಜೊತೆಗೆ M42 ಅಂದರೆ ಓಟಗಾರ ನೀಹಾರಿಕೆಯನ್ನೂ ಇಲ್ಲಿಯೇ ಕಾಣಬಹುದು.  ಬೈನಾಕ್ಯುಲರ್‌ ಮೂಲಕ ನೋಡಲು ತುಂಬಾ ಸುಂದರವಾಗಿ ಕಾಣಿಸುವ ಇದು, ನಮ್ಮ ಬರಿಗಣ್ಣಿಗೆ ಕಾಣುವ ಮತ್ತು ಸೌರವ್ಯೂಹಕ್ಕೆ ಅತಿ ಸಮೀಪದ ಅಂದರೆ 1340 ಜ್ಯೋತಿವರ್ಷಗಳಷ್ಟು ದೂರದಲ್ಲಿರುವ ನೀಹಾರಿಕೆ ಆಗಿದೆ. ಇವುಗಳಲ್ಲದೆ, ಶಕ್ತಿಶಾಲಿಯಾದ ದೂರದರ್ಶಕಗಳಿಗೆ ಮಾತ್ರ ನಿಲುಕುವ ಜ್ವಾಲಾ ನೀಹಾರಿಕೆ (NGC 2024̧) ಕುದುರೆಮುಖ ನೀಹಾರಿಕೆ(Barnard 33) ಮುಂತಾದ ಆಳಾಂತರಿಕ್ಷದ ಕಾಯಗಳು ಇಲ್ಲಿಯೇ ಕಂಡುಬರುತ್ತವೆ.

ಓಟಗಾರ ನೀಹಾರಿಕೆ ಮತ್ತು ಒರೆಯನ್‌ ಬೃಹತ್‌ ನೀಹಾರಿಕೆ‌ ಚಿತ್ರಕೃಪೆ: NASA, ESA

ಶಿವನ ರುದ್ರಾವತಾರವು ಆರ್ದ್ರ ನಕ್ಷತ್ರದಲ್ಲಿ ಆಯಿತೆಂದು ಭಾರತೀಯರ ನಂಬಿಕೆರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರಗಳಲ್ಲಿ ಆರ್ದ್ರ ನಕ್ಷತ್ರ ಗೋಚರ ಪ್ರಕಾಶದಲ್ಲಿ ಎರಡನೆಯ ಸ್ಥಾನದಲ್ಲಿದೆ.  ಇದೊಂದು ಮಹಾ ಕೆಂಪು ದೈತ್ಯ ನಕ್ಷತ್ರವಾಗಿದೆನಕ್ಷತ್ರಗಳ ಜೀವನ ಚಕ್ರದಲ್ಲಿ ಕೆಂಪು ದೈತ್ಯ ಅವಸ್ಥೆಯು ನಕ್ಷತ್ರದ ವೃದ್ಧಾಪ್ಯದ   ಸ್ಥಿತಿಯನ್ನು ಸೂಚಿಸುತ್ತದೆ ಸ್ಥಿತಿಯ ನಂತರ   ಒಂದು ನಕ್ಷತ್ರ ಮುಂದೆ ಏನಾಗುತ್ತದೆ ಎಂಬುದು ಅದರ ಆರಂಭಿಕ ರಾಶಿಯನ್ನು ಅವಲಂಬಿಸಿರುತ್ತದೆನಮ್ಮ ಸೂರ್ಯನಂತಹ ಸಾದಾರಣ ನಕ್ಷತ್ರಗಳು ತಮ್ಮ ಹೊರ ಪದರವನ್ನು ಗ್ರಹೀಯ ನೀಹಾರಿಕೆಯ ರೂಪದಲ್ಲಿ ಹೊರಚೆಲ್ಲುತ್ತಾ ಹೋಗುತ್ತವೆ ಮತ್ತು ಕೊನೆಗೆ ಅವುಗಳ ಅಂತರಾಳದ ಗರ್ಭವು         ಶ್ವೇತಕುಬ್ಜ ಎಂದು ಕರೆಯಲಾಗುವ ಅತಿ ಸಾಂಧ್ರತೆಯ ಪುಟ್ಟನಕ್ಷತ್ರವಾಗಿ ಪರಿವರ್ತಿತವಾಗುತ್ತವೆಶ್ವೇತಕುಬ್ಜದ ರಾಶಿಯು ಸೂರ್ಯನ ರಾಶಿಯ 1.44 ಅಥವಾ ಅದಕ್ಕಿಂತ ಕಡಿಮೆ ಇದ್ದಲ್ಲಿಅದು ಸ್ಥಿರವಾಗಿ ಬಹುಕಾಲ ಉಳಿಯುತ್ತದೆಇದೇ ಚಂದ್ರಶೇಖರ್‌ ಮಿತಿ ಮಿತಿಯನ್ನು ಮೀರಿ ರಾಶಿ ಹೊಂದಿದ ಶ್ವೇತಕುಬ್ಜವು ಕಾಲಕ್ರಮದಲ್ಲಿ ಸಿಡಿಯುತ್ತದೆ ವಿದ್ಯಮಾನವನ್ನು ಮಹಾನವ್ಯ ಎಂದು ಕರೆಯಲಾಗುತ್ತದೆನಕ್ಷತ್ರವು ಮಹಾನವ್ಯವಾಗಿ ಸಿಡಿಯಲು ಪ್ರಚೋದಿಸುವ ಎರಡು ಕಾರಣಗಳಿರುತ್ತವೆ ಎಂದು ಸೈದ್ಧಾಂತಿಕ ಅಧ್ಯಯನಗಳು ಸೂಚಿಸುತ್ತವೆ. ಶ್ವೇತಕುಬ್ಜ ನಕ್ಷತ್ರದಲ್ಲಿನ ಪರಮಾಣುಗಳ ಬೀಜ ಸಮ್ಮಿಳನ ಕ್ರಿಯೆಯಿಂದ ಹಠಾತ್ ಮರುದಹನ ಕ್ರಿಯೆ ಅಥವಾ  ನಕ್ಷತ್ರದ ಅತಿಯಾದ ಗುರುತ್ವಾಕರ್ಷಣೆಯ ಕಾರಣದಿಂದ ಬೃಹತ್‌ ಕ್ಷತ್ರ ಗರ್ಭದ ಹಠಾತ್ ಕುಸಿತ ಈ ಎರಡು ಮೂಲಭೂತ ಕಾರ್ಯವಿಧಾನಗಳಲ್ಲಿ ಯಾವುದಾದರೂ ಒಂದರ ಕಾರಣದಿಂದ ಮಹಾನವ್ಯ ಸಂಭವಿಸುತ್ತದೆ.

 ಹಂಸವು ತನ್ನ ಅಂತ್ಯಕಾಲದಲ್ಲಿ ಮಧುರವಾಗಿ ಹಾಡಲು ತೊಡಗುತ್ತದೆಯಂತೆ. ಈ ಚರಮಗೀತೆಯನ್ನು ಹಂಸಗೀತೆ ಎನ್ನುತ್ತದೆ ಕವಿ ಸಮಯ. ಹಾಗೆಯೇ ಒಂದು ನಕ್ಷತ್ರದ ಪ್ರಕಾಶವು ಹಠಾತ್ತಾಗಿ ಅಸಾಮಾನ್ಯ ಪ್ರಮಾಣದಲ್ಲಿ ಹೆಚ್ಚುವುದರ ಮೂಲಕ ಅತಿ ಆಕರ್ಷಕವಾಗಿ ಕಾಣುವುದು ಮಹಾನವ್ಯ ಸಂಭವವಿಸುವುದರ ಸೂಚಕವಾಗಿರುತ್ತದೆ. ಗೋಚರ ಪ್ರಕಾಶಕ್ಕಿಂತ ವೇಗದಲ್ಲಿ ಅಸಹಜವಾಗಿ ಹರಿದು ಬರುವ ನ್ಯೂಟ್ರಿನೋಗಳ ಪ್ರವಾಹವು ಮಹಾನವ್ಯವನ್ನು ಖಚಿತ ಪಡಿಸುತ್ತದೆ.  ಮಹಾನವ್ಯಗಳು ಹೊರಕ್ಕೆ ಅತಿ ವೇಗದಲ್ಲಿ ಹಲವಾರು ಸೌರರಾಶಿಯ ಪ್ರಮಾಣದ ವಿವಿಧ ವಸ್ತುಗಳನ್ನು ಸುತ್ತಮುತ್ತಲಿನ ಅಂತರಿಕ್ಷಕ್ಕೆ ಎರಚಬಹುದು, ಆಘಾತ ತರಂಗವನ್ನು ಸೂಸಬಹುದು. ಅಂತರತಾರಾ ಮಾಧ್ಯಮದಲ್ಲಿ ಆಮ್ಲಜನಕದಿಂದ ರುಬಿಡಿಯಂವರೆಗಿನ ಧಾತುಗಳು ಮತ್ತು ಕಾಸ್ಮಿಕ್ ಕಿರಣಗಳ ಪ್ರಮುಖ ಮೂಲ ಮಹಾನವ್ಯಳೇ ಆಗಿವೆ. ಅವು ಗುರುತ್ವಾಕರ್ಷಣೆಯ ಅಲೆಗಳನ್ನು ಸಹ ಉತ್ಪಾದಿಸಬಹುದು.ಇವು ವಿಸ್ತರಿಸುವ ಆಘಾತ ತರಂಗಗಳು ಹೊಸ ನಕ್ಷತ್ರಗಳ ರಚನೆಗೆ ಕಾರಣವಾಗಬಹುದು. ನಮ್ಮದೇ ಆದ ಕ್ಷೀರಪಥದಲ್ಲಿ ಬರಿಗಣ್ಣಿಗೆ ಗೋಚರಿಸುತ್ತಿದ್ದ 1572 ರಲ್ಲಿ ಟೈಕೋ ಬ್ರಾಹೆ ನೇರವಾಗಿ ಗಮನಿಸಿದ ಮಹಾನವ್ಯ (SN 1572) ಮೊದಲನೆಯದುನಂತರ 1604ರಲ್ಲಿ  ಜೋಹಾನಸ್‌ ಕೆಪ್ಲರ್‌ನು ಕಂಡ ಮಹಾನವ್ಯ (SN 1604) ಎರಡನೆಯದು ಆಗಿತ್ತು. ಇತ್ತೀಚಿಗೆ ನಮ್ಮ ಕ್ಷೀರಪಥದ ಉಪ ನಕ್ಷತ್ರಪುಂಜವಾದ ದೊಡ್ಡ ಮೆಗೆಲ್ಲಾನಿಕ್‌ ಮೋಡದಲ್ಲಿ 1987 ರಲ್ಲಿ ಗೋಚರಿಸಿದ ಮಹಾನವ್ಯ (SN 1987A) ಆಗಿತ್ತುಆಗ ಅಲ್ಲಿನ ನೀಲಿಯ ದೈತ್ಯ ನಕ್ಷತ್ರವೊಂದರ ಸ್ಫೋಟವಾಗಿತ್ತು.

SN 1987ಅವಶೇಷಚಿತ್ರಕೃಪೆ: NASA, ESA


ಮಹಾನವ್ಯ ವಿದ್ಯಮಾನದ ನಂತರ ಕೊನೆಗೆ ಅಲ್ಲಿ ಉಳಿಯುವ ಗರ್ಭವು ಅತಿ ಗುರುತ್ವಾಕರ್ಷಣೆಗೆ ಒಳಗಾಗಿ ಅತಿ ಒತ್ತಡ ಮತ್ತು ಅತಿ ತಾಪದ ಉಂಡೆಯಾಗಿ ಒತ್ತಲ್ಪಟ್ಟಿರುತ್ತದೆ.  ಇದು ಮುಂದೆ ನ್ಯೂಟ್ರಾನ್‌ ನಕ್ಷತ್ರ ಅಥವಾ ಕೃಷ್ಣಕುಹರವಾಗಿ ಪರಿವರ್ತಿತವಾಗುತ್ತದೆ.  ಸೂರ್ಯನ ರಾಶಿಯ 2-3 ರ ಪ್ರಮಾಣವನ್ನು ಟೋಲ್ಮನ್-ಒಪನಹೈಮರ್-ವೊಲ್ಕಫ್‌(TOV) ಮಿತಿ ಎಂದು ತೆಗೆದುಕೊಳ್ಳಲಾಗುತ್ತದೆ. ಮಹಾನವ್ಯ ನಂತರದ ಗರ್ಭದ ರಾಶಿಯು TOV ಮಿತಿಯ ಒಳಗೇ ಇದ್ದರೆ ಅದೊಂದು ನ್ಯೂಟ್ರಾನ್‌ ನಕ್ಷತ್ರವಾಗಿಯೆ ಬಹುಕಾಲ ಉಳಿಯುತ್ತದೆ. ಈ ಮಿತಿಯನ್ನು ಮೀರಿದರೆ ಅದು ಕಪ್ಪುರಂದ್ರ (Black Hole)ವಾಗಿ ಪರಿವರ್ತಿತವಾಗುತ್ತದೆ.

ಒಂದು ಆಕಾಶಕಾಯದ ಮೇಲಿನ ವಿಮೋಚನಾ ವೇಗ ಅದರ ರಾಶಿಯನ್ನು ಅವಲಂಬಿಸಿರುತ್ತದೆ.  ಭೂಮಿಯ ಮೇಲೆ ವಿಮೋಚನಾ ವೇಗ ಸೆಕೆಂಡಿಗೆ  11.2 ಕಿಮೀ.ಅಂದರೆ ಭೂಮಿಯ ಮೇಲೆ ನಿಂತು ಸೆಂಕೆಂಡಿಗೆ  11.2  ಕಿಮೀ ವೇಗಕ್ಕಿಂತ ಹೆಚ್ಚಿನ ವೇಗದಿಂದ ಒಂದು ವಸ್ತವನ್ನು  ಮೇಲಕ್ಕೆ ಎಸೆದರೆ, ಅದು ಭೂಮಿಯ ಗುರುತ್ವಾಕರ್ಷಣೆಯಿಂದ ವಿಮೋಚನೆ ಹೊಂದಿ ಶಾಶ್ವತವಾಗಿ ಭೂಮಿಯಿಂದ ಹೊರಗೆ ಎಸೆಯಲ್ಪಡುತ್ತದೆ. ಸೆಂಕೆಂಡಿಗೆ  11.2 ಕಿಮೀ ಕಡಿಮೆ ವೇಗದಿಂದ ಎಸೆದರೆ ಅದು ಪುನಃ ಭೂಮಿಗೇ ಮರಳುತ್ತದೆ. ತನ್ನ ಸುತ್ತಲಿನ ನಕ್ಷತ್ರ ನೀಹಾರಿಕೆ ಹೀಗೆ ಎಲ್ಲವನ್ನು ಸೆಳೆದು ತನ್ನ ಒಡಲಿಗೆ ಸೇರಿಸಿಕೊಳ್ಳುತ್ತಾ ಬೆಳೆಯುತ್ತಲೇ ಹೋಗುವ ಕಪ್ಪುರಂದ್ರದ ರಾಶಿ ಅಗಾಧವಾಗಿದ್ದು ಅದರ ಮೇಲೆ ವಿಮೋಚನಾ ವೇಗವು ಬೆಳಕಿನ ವೇಗಕ್ಕಿಂತ ಅತ್ಯಂತ ಅಧಿಕವಾಗಿರುತ್ತದೆ. ಹೀಗಾಗಿ, ಬೆಳಕು ಅದು ಎಂತಹುದೇ ಆದರೂ ಕಪ್ಪುರಂದ್ರದಿಂದ ಹೊರಬರಲು ಎಷ್ಟೇ ಪ್ರಯತ್ನಿಸದರೂ ಸಾಧ್ಯವಾಗದು, ಹೀಗಾಗಿ, ಕಪ್ಪುರಂದ್ರವು ಯಾವುದೇ ಬೆಳಕನ್ನು ಹೊರಸೂಸದು.ಹೀಗಾಗಿ, ನಕ್ಷತ್ರಗಳು ಸಹಜವಾಗಿ ಗೋಚರವಾದಂತೆ ಕಪ್ಪುರಂದ್ರವು ನಮ್ಮ ಕಣ್ಣಿಗೆ ಗೋಚರವಾಗದು. 

ಮೇಲೆ ಹೇಳಿದಂತೆ ಆರ್ದ್ರನಕ್ಷತ್ರವು ಒಂದು ಬೃಹತ್‌ ಅನಿಲ ದೈತ್ಯವಾಗಿದ್ದು ಇದರ ರಾಶಿ ಸೂರ್ಯನ ರಾಶಿಯ 20 ಪಟ್ಟು,  ಮತ್ತು ಗಾತ್ರ 724 ಪಟ್ಟು ಅಧಿಕವಾಗಿದ್ದು ಸೂರ್ಯನ ಜಾಗದಲ್ಲಿ ಇರಿಸಿದೆವು ಅಂದುಕೊಂಡರೆ, ಅದು ಬುಧ, ಶುಕ್ರ, ಭೂಮಿ ಮತ್ತು ಮಂಗಳ ಗ್ರಹಗಳನ್ನು ತನ್ನಒಡಲಿಗೆ ಸೇರಿಸಿಕೊಂಡು ಬಿಡುವಷ್ಟು ವಿಸ್ತಾರವಾಗಿದೆ. ಸೌರವ್ಯೂಹದಿಂದ ಸುಮಾರು 548 ಜ್ಯೋತಿವರ್ಷಗಳಷ್ಟು ದೂರದಲ್ಲಿದ್ದರೂ ರಾತ್ರಿಯಾಕಾಶದಲ್ಲಿ ಗೋಚರಿಸುವ ಅತ್ಯಂತ ಪ್ರಕಾಶಮಾನವಾದ ನಕ್ಷತ್ರಗಳಲ್ಲಿ ಒಂದಾಗಿದೆ. ನಮ್ಮ ಸೂರ್ಯನ ವಯಸ್ಸು. ಹತ್ತಿರ ಹತ್ತಿರ ೫೦೦ ಕೋಟಿ ವರ್ಷಗಳು. ಸೂರ್ಯ ಇನ್ನೂ ಮಧ್ಯವಯಸ್ಕನಾದರೆ ಕೇವಲ  ಒಂದು ಕೋಟಿ ವರ್ಷಗಳ ಆಯುವಿನ ಆರ್ದ್ರ ಆಗಲೇ ವೃದ್ಧನೆಂದರೆ ಆಶ್ಚರ್ಯವಾದರೂ, ವಾಸ್ತವದ ವಿಚಾರವಾಗಿದೆ. ಆರ್ದ್ರನಲ್ಲಿನ ಅಗಾಧ ಇಂಧನ, ಅಪಾರ ರಾಶಿಯಿಂದ ಏರ್ಪಡುವ ಗುರುತ್ವ ಇವೆರಡೂ ಇಂಧನವನ್ನು ಅತಿವೇಗವಾಗಿ ಉರಿಸಿ, ಖಾಲಿ ಮಾಡಿಯಾಗಿದೆ. ಹೆಚ್ಚು ಅಂದರೆ ಇನ್ನು ಒಂದು ಲಕ್ಷ ವರ್ಷಗಳು ಆರ್ದ್ರನಲ್ಲಿ ಉಳಿದಿರುವ ಇಂಧನ ಬಳಕೆಗೆ ಬರಬಹುದು ಎಂದು ಒಂದು ಲೆಕ್ಕಾಚಾರ ಇದೆ. ಈ ಮಧ್ಯೆ 2019ರಲ್ಲಿ ಅನಿರೀಕ್ಷಿತವಾಗಿ ಆರ್ದ್ರನ ಪ್ರಕಾಶ ಕಡಿಮೆಯಾಗಿ ಮತ್ತು ೨೦೨೦ರಲ್ಲಿ ಮತ್ತೆ ಸಾಮಾನ್ಯ ಸ್ಥಿತಿಗೆ ತಲುಪಿದೆ. ಈ ಬದಲಾವಣೆಯು ಅನೇಕ ಊಹೆಗಳಿಗೆ ಅನುವು ಮಾಡಿಕೊಟ್ಟಿದೆ. ಈಗಿನಿಂದ ಆರಂಭಿಸಿ ಮುಂದೆ ಯಾವಾಗಲಾದರೂ ಸರಿ ಈ ಬೃಹತ್‌ ಕೆಂಪುದೈತ್ಯ ಸಿಡಿದು ಹೋಗುವ ಸಂಭವವನ್ನು ಖಗೋಳಶಾಸ್ತ್ರಜ್ಞರು ಎದುರು ನೋಡುತ್ತಿದ್ದಾರೆ. ಆರ್ದ್ರ ಸಿಡಿದು ಮಹಾ ನವ್ಯವಾದ ಪಕ್ಷದಲ್ಲಿ ಭೂಮಿಯ ಮೇಲಿನ ನಮಗೇನಾದರೂ ಅಪಾಯವಾಗುವ ಸಂಭವವಿದೆಯೆ ಎಂಬ ಜಿಜ್ಙಾಸೆಗೂ ಇದು ಅವಕಾಶಮಾಡಿಕೊಟ್ಟಿದೆ. ಆರ್ದ್ರನ ದೈತ್ಯಾಕಾರ ಮತ್ತು ಅಗಾಧ ರಾಶಿ ಮುಂದೆ ಅದನ್ನೊಂದು ಕಪ್ಪುರಂದ್ರವನ್ನಾಗಿ ಮಾರ್ಪಡಿಸುವುದು ಸಿದ್ದಾಂತದ ಪ್ರಕಾರ ಖಚಿತ. ಅದಕ್ಕೂ ಮುನ್ನ ಅದೊಂದು ಮಹಾನವ್ಯವಾಗಬೇಕು. ಅದು ನಮ್ಮ ಜೀವಿತಾವಧಿಯಲ್ಲಿ ಆಗುವುದಾದರೆ, ನಮಗೆ ಅಪಾಯ ತರದಿದ್ದರೆ, ಹಗಲಿನಲ್ಲಿಯೇ ಅಂತಹ ಒಂದು ಮಹಾನವ್ಯವನ್ನು ವೀಕ್ಷಿಸಿದ ಸಾಕ್ಷಿಗಳಾ ಗಿನಾವು ಉಳಿಯಬಹುದೇನೋ?! ಆದರೆ ,ನೆನೆಪಿರಲಿ ಆರ್ದ್ರೆ ನಮ್ಮಿಂದ 548 ಜ್ಯೋತಿವರ್ಷಗಳಷ್ಟು ದೂರದಲ್ಲಿದೆ ಈಗಲೆ ನಮಗೆ ಅದರ ಮಹಾನವ್ಯ ಕಂಡರೂ ಅದು ಸಂಭವಿಸಿ 548 ವರ್ಷ ಕಳೆದಿರುತ್ತದೆ. ವಾಸ್ತವದಲ್ಲಿ ಅದು ಇಂದು ಸಂಭವಿಸಿದರೂ, ಅದನ್ನು ನಾವು ಕಾಣಲು ಇನ್ನೂ 548 ವರ್ಷಗಳು ಕಾಯಬೇಕಾಗುತ್ತದೆ.ಆದ್ದರಿಂದ, ನಮಗೆ ಗೋಚರವಾಗುವ ಅತಿದೂರದ ಅಂತರಿಕ್ಷದಲ್ಲಿ ನಡೆಯುವ ವಿದ್ಯಮಾನಗಳು ಯಾವುದೂ ಲೈವ್‌ ಟೆಲಿಕಾಸ್ಟ್‌ ಆಗಿರುವುದಿಲ್ಲ. ಬದಲಿಗೆ, ಸಮಯವೆಂಬ ಹಾರ್ಡ್‌ ಡಿಸ್ಕಿನಲ್ಲಿ ರೆಕಾರ್ಡ್‌ ಆಗಿರುವ ಮೀಡಿಯ ಮಾತ್ರ ಆಗಿರುತ್ತದೆ!


ಕಲಾವಿದನ ಕಲ್ಪನೆಯಲ್ಲಿ ಸಂಭವನೀಯ ಆರ್ದ್ರನ ಮಹಾನವ್ಯ, ಕೃಪೆ: NASA, ESA

ವಾವ್! ಜೇನು ನೊಣ! ಏನಿದು ನಿನ್ನ ವಿಸ್ಮಯಕಾರಿ ಜೀವನ!

 ವಾವ್!  ಜೇನು ನೊಣ! ಏನಿದು ನಿನ್ನ ವಿಸ್ಮಯಕಾರಿ ಜೀವನ!

 ಲೇಖಕರು: ಡಾ. ಶಶಿಕುಮಾರ್. ಎಲ್ 
ವೈಜ್ಞಾನಿಕ ಅಧಿಕಾರಿ, ಜೀವಶಾಸ್ತ್ರ ವಿಭಾಗ
ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ 
ಜಲಪುರಿ ಕೆಪಿಎ ಆವರಣ ಮೈಸೂರು.
7204932795

ಜೇನುನೊಣಗಳು ಭೂಮಿಯ ಮೇಲಿನ ಅತಿ ದೊಡ್ಡ ಬೆಳೆ ಪರಾಗಸ್ಪರ್ಶಕಗಳಾಗಿವೆ. ನಾವು ಬದುಕಿರಲು , ಇತರ ಪ್ರಾಣಿಗಳು ಬದುಕಿರಲು  ಮತ್ತು ನಮಗೆ ತಿಳಿದಿರುವಂತೆ ಭೂಮಿಯ ಮೇಲೆ ಜೀವವು ಉಳಿಯಲು ಅವು ಬಹುತೇಕ  ಕಾರಣ.  ಜೇನುನೊಣಗಳ ಸಂತತಿ ಎಂದು ನಾಶವಾಗುವುದೋ ಅಂದಿಗೇ ಮನುಕುಲಗೂ ನಾಶವಾಗುತ್ತದೆ ಎಂದಿದ್ದಾನೆ  ಜಗತ್ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್. ಈ ಮಾತು ಮಾತು ನೂರಕ್ಕೆ ನೂರರಷ್ಟು ಸತ್ಯ. 
    ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ  ಜೇನುನೊಣಗಳದ್ದು ಬಹುದೊಡ್ಡ ಪಾತ್ರವಿದೆ. ನಾವೆಲ್ಲ ಉಪಯೋಗಿಸುವ ಬಹುತೇಕ ಹಣ್ಣು, ಹಂಪಲು, ತರಕಾರಿ ಸೇರಿದಂತೆ ಎಲ್ಲಾ ಆಹಾರಗಳ ಹಿಂದಿರುವುದು ಇದೇ ಜೇನುನೊಣಗಳ ಪರಾಗ ಸ್ಪರ್ಶದ ಅವಿರತ ಪ್ರಯತ್ನ. ಮನುಷ್ಯ ಸೇವಿಸುವ ಶೇಕಡ 70% ರಷ್ಟು ಆಹಾರ ಜೇನುನೊಣಗಳನ್ನೇ ಅವಲಂಬಿಸಿದೆ ಎನ್ನುವುದರಿಂದಲೇ  ಇವುಗಳ ಮಹತ್ವ ಎಂತಹದ್ದು ಎಂಬುದು ನಮಗೆ ಗೊತ್ತಾಗುತ್ತದೆ. ಹೀಗಾಗಿ ಜೇನುನೊಣಗಳು ಇಲ್ಲದೆ ಇದ್ದರೆ ನಾವು ತಿನ್ನುವ ಯಾವ ಆಹಾರ ಪದಾರ್ಥವೂ ನಮ್ಮ ಉದರ ಸೇರದು! ಇತ್ತೀಚಿನ ದಿನಗಳಲ್ಲಿ ಜೇನುನೊಣಗಳ ಸಂಖ್ಯೆಯು ಕಡಿಮೆಯಾಗುತ್ತಿದೆ ಎನ್ನುವ ವಿಚಾರ ಪರಿಸರ ಪ್ರಿಯರು, ರೈತರೂ ಸೇರಿದಂತೆ ಎಲ್ಲರ ಮನಸ್ಸಿಗೆ ಆತಂಕವನ್ನುಂಟು ಮಾಡಿದೆ ಎಂಬುದರಲ್ಲಿ ಉತ್ಪ್ರೇಕ್ಷೆ  ಇಲ್ಲ.

     ಪ್ರಪಂಚದಲ್ಲಿ ಅಂದಾಜು 20,000 ಜಾತಿಯ ಜೇನುನೊಣಗಳಿವೆ. ತಮ್ಮ ಆಹಾರಕ್ಕಾಗಿ ಹೂಗಳ ಮಕರಂದವನ್ನು ಹೀರುವ ಜೇನು ಹುಳುವಿನ ಪ್ರಕ್ರಿಯೆಯು ಪರಾಗಸ್ಪರ್ಶಕ್ಕೆ ಕಾರಣವಾಗುತ್ತದೆ. ಜೇನುಗಳ ಪರಾಗಸ್ಪರ್ಶದಿಂದಾಗಿ ಬೆಳೆಯ ಇಳುವರಿಯು ಮಾಮೂಲಿಗಿಂತ ಶೇಕಡ 20ರಷ್ಟು ಹೆಚ್ಚಾಗುತ್ತದೆ. ಜೇನು ಹಾಗೂ ಜೇನುನೊಣಗಳು ಮಾನವ ಸಂಕುಲಕ್ಕೆ ಪ್ರಕೃತಿದತ್ತವಾಗಿ ಸಿಕ್ಕಿರುವ ವರ. ಆದರೆ ಮಾನವನ ಚಟುವಟಿಕೆಗಳಿಂದಾಗಿ ಹಲವು ಬಗೆಯ ಜೇನುನೊಣಗಳು ಅಳಿವಿನ ಅಂಚಿನಲ್ಲಿವೆ. ತಜ್ಞರ ಪ್ರಕಾರ, ನಮ್ಮ ಪರಿಸರ ವ್ಯವಸ್ಥೆಯ ಉಳಿವು ಹೆಚ್ಚಾಗಿ ಪರಾಗಸ್ಪರ್ಶದ ಮೂಲಭೂತ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ. ಹೂ ಬಿಡುವ ಹೆಚ್ಚಿನ ಸಸ್ಯ ಪ್ರಭೇದಗಳು ಸಂಪೂರ್ಣವಾಗಿ ಅಥವಾ ಭಾಗಶಃ ಜೇನುನೊಣಗಳ ಪರಾಗಸ್ಪರ್ಶವನ್ನು ಅವಲಂಬಿಸಿವೆ. ಅಷ್ಟೇ ಅಲ್ಲ, ಜೇನುನೊಣಗಳು ಆಹಾರ ಸುಸ್ಥಿರತೆ  ಮತ್ತು ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಸಹಕರಿಸುತ್ತವೆ ಎಂಬುದು ನಮಗೆ ತಿಳಿದಿರುವ ವಿಚಾರವಾಗಿದೆ. 

           ಜೇನುನೊಣಗಳ ಪ್ರಾಮುಖ್ಯತೆ, ಅವು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸುಸ್ಥಿರ ಅಭಿವೃದ್ಧಿಗೆ ಅವು ನೀಡಿದ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸಲು “ವಿಶ್ವ ಜೇನುನೊಣ ದಿನ” ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ವಿಶ್ವ ಜೇನುನೊಣ ದಿನಾಚರಣೆಯನ್ನು ಈ ಬಾರಿ ೨೦೨೫ರ ಮೇ 20ರಂದು ಆಚರಿಸಲಾಗಿದೆ. ಜೇನು ಸಾಕಣೆಯ ಕೌಶಲ್ಯವನ್ನು ಕರಗತ ಮಾಡಿಕೊಂಡ ಆಂಟನ್ ಜಾನ್ಸ ಅವರ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸಲು ಈ ದಿನದಂದು ವಿಶ್ವ ಜೇನುನೊಣ ದಿನವನ್ನಾಗಿ ಸಂಭ್ರಮಿಸಲಾಗುತ್ತದೆ. "ಪ್ರಕೃತಿಯಿಂದ  ಪ್ರೇರಿತವಾದ ಜೇನುನೊಣ ನಮ್ಮೆಲ್ಲರನ್ನು ಪೋಷಿಸುತ್ತದೆ" ಎಂಬ ಈ ವರ್ಷದ ಘೋಷವಾಕ್ಯವು ಕೃಷಿ ಆಹಾರ ವ್ಯವಸ್ಥೆಗಳು ಮತ್ತು ನಮ್ಮ ಗ್ರಹದ ಪರಿಸರ ವ್ಯವಸ್ಥೆಗಳ ಆರೋಗ್ಯವನ್ನು ಜೇನುನೊಣಗಳು ಮತ್ತು ಇತರ ಪರಾಗಸ್ಪರ್ಶಕಾರಕಗಳು ವಹಿಸುವ ನಿರ್ಣಾಯಕ ಪಾತ್ರಗಳನ್ನು ಎತ್ತಿ ತೋರಿಸುತ್ತದೆ ಮತ್ತು ಅವುಗಳ ಭವಿಷ್ಯವನ್ನು ರಕ್ಷಿಸಲು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುತ್ತದೆ ಎಂಬುದನ್ನು ಹೇಳಲಾಗಿದೆ. 


      ಜೇನಿನಲ್ಲಿ ಹಲವು ಬಗೆಗಳಿವೆ. ಹೆಜ್ಜೇನು, ಕೋಲು ಜೇನು, ತೊಡವೆ ಜೇನು, ಯುರೋಪಿಯನ್ ಜೇನು.. ಹೀಗೆ ಆಯಾ ಪ್ರದೇಶಕ್ಕೆ ಸೀಮಿತವಾಗುವ ಸಂತತಿಗಳು ಇರುತ್ತವೆ. ಜೇನುತುಪ್ಪವವನ್ನು ಆದಿಕಾಲದಿಂದಲೂ ದಿವ್ಯ ನೈಸರ್ಗಿಕ ಔಷಧಿಯಾಗಿ ಬಳಸಲಾಗುತ್ತಿದೆ. ಸುಟ್ಟಗಾಯ ಹಾಗೂ ಹುಣ್ಣು ವಾಸಿ ಮಾಡಲು ಜೇನನ್ನು ಲೇಪಿಸಬಹುದಾಗಿದೆ. ಕೆಂಪು ರಕ್ತ ಕಣಗಳನ್ನು ವೃದ್ಧಿಸಿ ರಕ್ತದಲ್ಲಿನ ಹೀಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ ರಕ್ತ ಹೀನತೆಯನ್ನು ನಿವಾರಿಸಲು ಜೇನುತುಪ್ಪ ಸಹಕಾರಿಯಾಗಿದೆ. ಬಿಸಿ ನೀರಿನ ಜೊತೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿದರೆ ದೇಹದ ತೂಕ ಕಡಿಮೆಯಾಗುತ್ತದೆ. ಇನ್ನು ಉಸಿರಾಟದ ಸೋಂಕು, ಕಫ ಮತ್ತು ಅಸ್ತಮಾದಂತಹ ಸಮಸ್ಯೆಗಳಿಗೆ ಜೇನುತುಪ್ಪ ರಾಮಬಾಣ ಎಂದರೆ ತಪ್ಪಾಗಲಾರದು. 


           ಜೇನುನೊಣಗಳು ಪರಿಸರ ಆರೋಗ್ಯದ ಸೂಚಕಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಅಲ್ಲದೇ ಪರಿಸರ ವ್ಯವಸ್ಥೆಗಳು ಮತ್ತು ಹವಾಮಾನದ ಬಗ್ಗೆ ಒಳನೋಟಗಳನ್ನು ಒದಗಿಸುತ್ತವೆ. ಪರಾಗಸ್ಪರ್ಶ ಮಾಡುವ  ಜೇನುನೊಣಗಳನ್ನು ರಕ್ಷಿಸುವುದರಿಂದ ಮಣ್ಣಿನ ಫಲವತ್ತತೆ, ಕೀಟ ನಿಯಂತ್ರಣ ಮತ್ತು ಗಾಳಿ ಹಾಗೂ ನೀರಿನ ನಿಯಂತ್ರಣದಂತಹ ನಿರ್ಣಾಯಕ ಪರಿಸರ ವ್ಯವಸ್ಥೆಯ ಸೇವೆಗಳು ಹೆಚ್ಚಾಗುತ್ತವೆ. ಜೊತೆಯಲ್ಲಿ ಆಹಾರ ಕೊರತೆ ಮತ್ತು ಪರಿಸರದಲ್ಲಿನ  ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತವೆ. 

            ಅನೇಕ ಸಸ್ಯ ಪ್ರಭೇದಗಳ ಉಳಿವಿಗೆ ಕಾರಣವಾಗುವ ಮೂಲಕ ಜೇನುನೊಣಗಳು ಪರಿಸರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಜೀವನೋಪಾಯವನ್ನು ಒದಗಿಸುವಲ್ಲಿ ಜೇನು ಸಾಕಣೆ ಅತ್ಯಂತ ಸಹಕಾರಿ ಕೂಡ. ದೂರದೃಷ್ಟವಶಾತ್,  ಆವಾಸಸ್ಥಾನ ನಷ್ಟ, ಸುಸ್ಥಿರವಲ್ಲದ ಕೃಷಿ ಪದ್ಧತಿಗಳು, ಹವಾಮಾನ ಬದಲಾವಣೆ, ಮಾಲಿನ್ಯ, ಅರಣ್ಯ ಬೆಂಕಿ, ಕೀಟನಾಶಕ ಬಳಕೆ ಮತ್ತು ಮಿತಿಮೀರಿದ ನಗರೀಕರಣದಂಥ ಸಮಸ್ಯೆಗಳಿಂದಾಗಿ ಜೇನುನೊಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ವಿಶ್ವ ಜೇನುನೊಣ ದಿನವು ಈ ಅಗತ್ಯ ಜೀವಿಗಳನ್ನು ರಕ್ಷಿಸುವ ಇಂಗಿತವನ್ನು ಎತ್ತಿ ತೋರಿಸಿದೆ. ವಿಶ್ವಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ, ವಿಶ್ವ ಜೇನುನೊಣ ದಿನಾಚರಣೆಯು ಜಾಗತಿಕ ಆಹಾರ ಪೂರೈಕೆ ಸರಪಳಿಗ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಹಸಿವನ್ನು ಹೋಗಲಾಡಿಸಲು ಗಮನಾರ್ಹವಾಗಿ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ. 

ಜೇನಿನ ಉತ್ಪತ್ತಿಗಾಗಿ ಲಕ್ಷಾಂತರ ಹೂಗಳನ್ನು ಸ್ಪರ್ಶಿಸಿ ಬರುವ ಏಕಮೇವ ಕೀಟ ಜೇನುನೊಣ. ಆದ್ದರಿಂದ ಹೆಚ್ಚು ವೈವಿದ್ಯಮಯ ಹೂಗಳನ್ನು ಹೊಂದಿರುವ ಗಿಡಮರಗಳನ್ನು ತುರ್ತಾಗಿ ರಕ್ಷಿಸಬೇಕಾಗಿದೆ. ರೈತರು ಆದಷ್ಟು ತಮ್ಮ  ಕೃಷಿಯಲ್ಲಿ ಜೇನುನೊಣಗಳಿಗೆ ಹಾನಿ ಮಾಡದ ಕೀಟನಾಶಗಳನ್ನು ಬಳಸಬೇಕಾಗಿದೆ. ಪ್ರಪಂಚಾದ್ಯಂತ 90ಕ್ಕೂ ಅಧಿಕ ಪ್ರಮುಖ ಆಹಾರ ಬೆಳೆಗಳು ಜೇನುನೊಣಗಳ ಪರಾಗಸ್ಪರ್ಶವನ್ನು ಅವಲಂಬಿಸಿವೆ. ಪ್ರಕೃತಿಯ ಆಹಾರ ಸರಪಳಿಯಲ್ಲಿ ಮೇಲುಸ್ತರದ ಜೀವಿಗಳಿಗೆ ಆಹಾರದ ಮೂಲವಾಗಿರುವ ಜೇನುನೊಣಗಳ ಸಂತತಿಯನ್ನು ಸಂರಕ್ಷಿಸುವುದು ಅನಿವಾರ್ಯ ಹಾಗೂ ಅವಶ್ಯಕವಾಗಿದೆ. “ಕರ್ನಾಟಕದ ರಾಜ್ಯ ಕೀಟ” ಎಂದೇ ಹೆಸರಾಗಿರುವ ಜೇನುನೋಣವನ್ನು ಉಳಿಸಿ ಕಾಪಾಡಿಕೊಳ್ಳಬೇಕಾದ ಅಗತ್ಯವನ್ನು ನಾವು ತುರ್ತಾಗಿ ಅರಿಯಬೇಕಾಗಿದೆ. ಜೇನುನೊಣಗಳು ನೋಡಲು ಚಿಕ್ಕದಿರಬಹುದು ಆದರೆ ಜೇನುನೊಣಗಳ ಮೇಲೆಯೇ ಮನುಷ್ಯನ ಬದುಕು ಅವಲಂಬಿತವಾಗಿದೆ ಎಂಬುದು ಸೂರ್ಯ ಚಂದ್ರರಷ್ಟೇ ಸತ್ಯ.