ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Saturday, September 5, 2026

2026 ರ ರಾಷ್ಟ್ರಪ್ರಶಸ್ತಿ ಪುರಸ್ಕತ ಶಿಕ್ಷಕಿ – ಶ್ರೀಮತಿ ರತ್ನಕುಮಾರಿ. ಎಸ್.

ಕನ್ನಡ ನೆಲದ ರಾಷ್ಟ್ರರತ್ನ ಶ್ರೀಮತಿ ರತ್ನಕುಮಾರಿ ಎಸ್. 

— ಶಶಿಕುಮಾರ್ ಬಿ. ಎಸ್. 

ರಾಷ್ಟ್ರ ಪ್ರಶಸ್ತಿ (2019) ಪುರಸ್ಕೃತ ಶಿಕ್ಷಕ 

ಸರ್ಕಾರಿ ಪದವಿಪೂರ್ವ ಕಾಲೇಜು 

                                ಪ್ರೌಢಶಾಲಾ ವಿಭಾಗ,                                                                                                                                                     ಮಸ್ಕಲ್, ತುಮಕೂರು                                                      

(2026ರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ  ಶ್ರೀಮತಿ ರತ್ನಕುಮಾರಿ ಎಸ್. ರವರ ಪರಿಚಯ. )



“ನನ್ನ ವಿದ್ಯಾರ್ಥಿಯೇ ನನ್ನ ಗುರು” — ಶ್ರೀಮತಿ ರತ್ನಕುಮಾರಿ ಎಸ್.

ಒಂದು ಶಿಕ್ಷಕಿ ಮನಸ್ಸು ಮಾಡಿದರೆ ಒಂದು ತರಗತಿಯನ್ನು ಮಾತ್ರವಲ್ಲ, ಇಡೀ ಶಾಲೆಯನ್ನು; ಒಂದು ಶಾಲೆಯನ್ನು ಮಾತ್ರವಲ್ಲ, ಇಡೀ ಸಮುದಾಯವನ್ನೇ ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ ಶ್ರೀಮತಿ ರತ್ನಕುಮಾರಿ ಎಸ್. ಅವರು.



ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹುಂಚ ಹೋಬಳಿಯ ಸಮಟಗಾರು ಎಂಬ ಗ್ರಾಮೀಣ ಪರಿಸರದಿಂದ ರಾಷ್ಟ್ರ ರಾಜಧಾನಿ ದೆಹಲಿಯವರೆಗೆ ಅವರ ಶಿಕ್ಷಣ ಸೇವೆಯ ಪಯಣ, ಸಮರ್ಪಣೆ, ಸೃಜನಶೀಲತೆ ಮತ್ತು ಸಾಮಾಜಿಕ ಬದ್ಧತೆಯ ಅಪೂರ್ವ ಕಥನವಾಗಿದೆ.

ವೃತ್ತಿಪರ ಪರಿಚಯ

ಹುದ್ದೆ ಮತ್ತು ಶಾಲೆ: ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಮಟಗಾರು, ಕಡೂರು ಪೋಸ್ಟ್ – 577436, ಹುಂಚ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ಕರ್ನಾಟಕ.
DISE ಕೋಡ್: 29150214003
ಪ್ರಸ್ತುತ ಶಾಲೆಯಲ್ಲಿ ಸೇವೆ: 24 ವರ್ಷಗಳ ಸಮರ್ಪಿತ ಸೇವೆ
ಬೋಧನಾ ತತ್ವ: “ನನ್ನ ವಿದ್ಯಾರ್ಥಿಯೇ ನನ್ನ ಗುರು”

ನಾಲ್ವರು ಶಿಕ್ಷಕರು ಹಾಗೂ 56 ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯ ಬಹುತೇಕ ವಿದ್ಯಾರ್ಥಿಗಳು ಸುತ್ತಮುತ್ತಲಿನ ಗ್ರಾಮಗಳಿಂದ 10–12 ಕಿ.ಮೀ. ದೂರ ಕ್ರಮಿಸಿ ಶಾಲೆಗೆ ಆಗಮಿಸುತ್ತಾರೆ. ಗ್ರಾಮದಲ್ಲಿ ಕೇವಲ ನಾಲ್ವರು ವಿದ್ಯಾರ್ಥಿಗಳು ವಾಸಿಸುತ್ತಿದ್ದರೂ, ಇತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗದಂತೆ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಹಾಗೂ ಮೇಲ್ವಿಚಾರಣಾ ಸಮಿತಿ (SMC) ಸಹಕಾರದಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಿರುವುದು ಶಾಲೆಯ ಮೇಲಿನ ಸಮುದಾಯದ ಕಾಳಜಿಗೆ ಸಾಕ್ಷಿಯಾಗಿದೆ.

ಗ್ರಾಮೀಣ ಶಾಲೆಯೊಂದು ಸಂಪನ್ಮೂಲಭರಿತ ಕಲಿಕಾ ಕೇಂದ್ರವಾಗಿ...

ಶ್ರೀಮತಿ ರತ್ನಕುಮಾರಿ ಅವರ ಸೇವೆಯ ವಿಶೇಷತೆ ಕೇವಲ ತರಗತಿಯ ನಾಲ್ಕು ಗೋಡೆಗಳೊಳಗಿನ ಬೋಧನೆಗೆ ಸೀಮಿತವಾಗಿಲ್ಲ. ತಮ್ಮ ಶಾಲೆಯ ಆವರಣವನ್ನೇ ಮಕ್ಕಳಿಗೆ ನೋಡಿ, ಮಾಡಿ, ಅನುಭವಿಸಿ ಮತ್ತು ಆನಂದದಿಂದ ಕಲಿಯುವ ಮುಕ್ತ ಕಲಿಕಾ ಪ್ರಯೋಗಾಲಯವನ್ನಾಗಿ ಪರಿವರ್ತಿಸಿದ್ದಾರೆ.

ಸಮುದಾಯದ ಸಹಕಾರ – ಅಭಿವೃದ್ಧಿಯ ಶಕ್ತಿ

ಶಾಲೆಯ ಮೂಲಸೌಕರ್ಯ ಅಭಿವೃದ್ಧಿ, ಅಕ್ಷರ ದಾಸೋಹ ಭೋಜನ ಕೋಣೆಯ ನಿರ್ಮಾಣ, ವಿದ್ಯಾರ್ಥಿಗಳ ಸೌಲಭ್ಯಗಳು ಹಾಗೂ ವಿವಿಧ ಕಲಿಕಾ ಸಂಪನ್ಮೂಲಗಳಿಗಾಗಿ ವಸುಧೈವ ಕುಟುಂಬಕಂ ಚಾರಿಟೆಬಲ್ ಟ್ರಸ್ಟ್ ಸೇರಿದಂತೆ ವಿವಿಧ ಸರ್ಕಾರೇತರ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಪಾಲುದಾರರಿಂದ ಸುಮಾರು ₹40 ಲಕ್ಷಕ್ಕೂ ಅಧಿಕ ಅನುದಾನ ಮತ್ತು ದೇಣಿಗೆಯನ್ನು ಸಂಗ್ರಹಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಕೇವಲ ಹಣ ಸಂಗ್ರಹಣೆಯ ಸಾಧನೆಯಲ್ಲ; “ಶಾಲೆ ನಮ್ಮದು, ಮಕ್ಕಳ ಭವಿಷ್ಯ ನಮ್ಮೆಲ್ಲರ ಹೊಣೆ” ಎಂಬ ಭಾವನೆಯನ್ನು ಸಮುದಾಯದಲ್ಲಿ ಮೂಡಿಸಿದ ಪ್ರಯತ್ನವಾಗಿದೆ.

ಶಾಲೆಯೇ ಒಂದು ತೆರೆದ ಪಠ್ಯಪುಸ್ತಕ

🌿 ನೈಮಿಷ ಔಷಧೀಯ ಸಸ್ಯಗಳ ಉದ್ಯಾನ : ಶಾಲಾ ಆವರಣದಲ್ಲಿರುವ ಔಷಧೀಯ ಸಸ್ಯಗಳ ಉದ್ಯಾನ ಮಕ್ಕಳಿಗೆ ಪ್ರಕೃತಿಯೊಂದಿಗೆ ನೇರ ಸಂವಾದ ಕಲ್ಪಿಸುತ್ತದೆ. ವಿವಿಧ ಗಿಡಮೂಲಿಕೆಗಳ ಹೆಸರು, ಸ್ವರೂಪ ಮತ್ತು ಅವುಗಳ ಸಾಂಪ್ರದಾಯಿಕ ಔಷಧೀಯ ಉಪಯೋಗಗಳನ್ನು ಮಕ್ಕಳು ಪುಸ್ತಕದಲ್ಲಿ ಓದುವುದಕ್ಕಿಂತ ನೇರವಾಗಿ ಸಸ್ಯಗಳನ್ನು ಕಂಡು, ಮುಟ್ಟಿ, ಗುರುತಿಸಿ ಕಲಿಯುತ್ತಾರೆ.

🔢 ಗಣಿತ ಮತ್ತು ವಿಜ್ಞಾನ ಉದ್ಯಾನ

ಅಮೂರ್ತ ಪರಿಕಲ್ಪನೆಗಳನ್ನು ಸರಳ ಮತ್ತು ಸ್ಪಷ್ಟಗೊಳಿಸಲು ಜ್ಯಾಮಿತೀಯ ಮಾದರಿಗಳು, ತೂಕ–ಅಳತೆ ಉಪಕರಣಗಳು ಹಾಗೂ ಪರಿಕಲ್ಪನಾ ಆಧಾರಿತ ಕಲಿಕಾ ವ್ಯವಸ್ಥೆಗಳನ್ನು ಬಳಸಲಾಗಿದೆ. ಹೀಗಾಗಿ ಗಣಿತ ಮತ್ತು ವಿಜ್ಞಾನವು ಪಠ್ಯಪುಸ್ತಕದಿಂದ ಹೊರಬಂದು ಶಾಲಾ ಆವರಣದಲ್ಲೇ ಜೀವಂತವಾಗುತ್ತದೆ.

🎭 ಶ್ರೀಶಾದಲೆ ರಂಗಮಂದಿರ : ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮುದಾಯದ ಸಭೆಗಳು, ನಾಟಕಗಳು ಮತ್ತು ವಿವಿಧ ಕಲಾ ಪ್ರದರ್ಶನಗಳಿಗೆ ಮುಕ್ತ ವೇದಿಕೆಯಾಗಿ ಕಾರ್ಯನಿರ್ವಹಿಸುವ ಈ ರಂಗಮಂದಿರವು ಶಾಲೆಯನ್ನು ಸಮುದಾಯದ ಸಾಂಸ್ಕೃತಿಕ ಕೇಂದ್ರವಾಗಿಯೂ ರೂಪಿಸಿದೆ.

“ಕಸದಿಂದ ರಸ” – ತ್ಯಾಜ್ಯಕ್ಕೆ ಹೊಸ ಬದುಕು

ರತ್ನಕುಮಾರಿ ಅವರ ಸೃಜನಶೀಲತೆಯ ಮತ್ತೊಂದು ವಿಶಿಷ್ಟ ಆಯಾಮ “ಕಸದಿಂದ ರಸ” ಪರಿಕಲ್ಪನೆ.

ಬಳಸಿ ಎಸೆಯುವ ಪ್ಲಾಸ್ಟಿಕ್ ಕಂಟೈನರ್‌ಗಳು, ತೈಲದ ಡಬ್ಬಿಗಳು ಹಾಗೂ ಹಳೆಯ ವಾಹನಗಳ ಟೈರ್‌ಗಳನ್ನು ಕಸದಂತೆ ಕಾಣದೆ, ಅವುಗಳನ್ನು ಕಲಿಕೋಪಕರಣಗಳು (TLM), ಸ್ಟೂಲ್‌ಗಳು, ಆಟಿಕೆಗಳು ಹಾಗೂ ಲಂಬ ಹೂಕುಂಡಗಳಾಗಿ ಮರುಬಳಕೆ ಮಾಡಲಾಗಿದೆ. ಇದರ ಮೂಲಕ ಮಕ್ಕಳಿಗೆ ಒಂದೇ ಸಮಯದಲ್ಲಿ ಸೃಜನಶೀಲತೆ ಮತ್ತು ಪರಿಸರ ಸಂರಕ್ಷಣೆ ಎಂಬ ಎರಡು ಪಾಠಗಳು ದೊರೆಯುತ್ತವೆ.

ನೈಜ ಜೀವನವೇ ಕಲಿಕೆಯ ಪ್ರಯೋಗಾಲಯ - “ಸಂತೆ” – ತರಗತಿಯಿಂದ ನೈಜ ಜಗತ್ತಿಗೆ 

ವಿದ್ಯಾರ್ಥಿಗಳಲ್ಲಿ ಗಣಿತ, ಭಾಷೆ, ಸಂವಹನ ಮತ್ತು ಆರ್ಥಿಕ ಸಾಕ್ಷರತೆಯನ್ನು ಬೆಳೆಸಲು “ಸಂತೆ” ಪರಿಕಲ್ಪನೆಯನ್ನು ಬಳಸಲಾಗಿದೆ. ತೂಕ ಮಾಡುವುದು, ಬೆಲೆ ನಿಗದಿಪಡಿಸುವುದು, ಬಿಲ್ ತಯಾರಿಸುವುದು, ಹಣ ಸ್ವೀಕರಿಸುವುದು, ಉಳಿಕೆ ಹಣ ನೀಡುವುದು ಹಾಗೂ ಗ್ರಾಹಕರೊಂದಿಗೆ ಸಂವಹನ ನಡೆಸುವುದು—ಇವೆಲ್ಲವನ್ನೂ ಮಕ್ಕಳು ಸ್ವತಃ ನಿರ್ವಹಿಸುತ್ತಾರೆ. ಇದು ಕೇವಲ ಆಟವಲ್ಲ; ನೈಜ ಜೀವನದ ಸನ್ನಿವೇಶದಲ್ಲಿ ಕಲಿಕೆಯ ಅತ್ಯುತ್ತಮ ಮಾದರಿ.

🌾 ಕೃಷಿ ಮತ್ತು ಕ್ಷೇತ್ರಾನುಭವ

ಸಾಂಪ್ರದಾಯಿಕ ಭತ್ತ ನಾಟಿ ಸೇರಿದಂತೆ ಸ್ಥಳೀಯ ಕೃಷಿ ಪದ್ಧತಿಗಳಲ್ಲಿ ವಿದ್ಯಾರ್ಥಿಗಳನ್ನು ನೇರವಾಗಿ ತೊಡಗಿಸುವ ಮೂಲಕ ನಮ್ಮ ನೆಲ, ಕೃಷಿ ಮತ್ತು ಗ್ರಾಮೀಣ ಪರಂಪರೆಯೊಂದಿಗೆ ಮಕ್ಕಳ ಸಂಬಂಧವನ್ನು ಗಟ್ಟಿಗೊಳಿಸಲಾಗಿದೆ.

ತಂತ್ರಜ್ಞಾನವೂ – ಪರಂಪರೆಯೂ ಜೊತೆಯಾಗಿ : ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸ್ಮಾರ್ಟ್ ತರಗತಿಗಳು, ಇಂಟರ್ನೆಟ್, ಡಿಜಿಟಲ್ ಪ್ರೊಜೆಕ್ಟರ್‌ಗಳು ಮತ್ತು ಕಂಪ್ಯೂಟರ್‌ಗಳ ಮೂಲಕ ದೃಶ್ಯಾಧಾರಿತ ಹಾಗೂ ಡಿಜಿಟಲ್ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮಕ್ಕಳಿಗೆ ಅನುಭವದ ಮೂಲಕ ಕಲಿಸಲು ವಿಶೇಷ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಡಿಜಿಟಲ್ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಆಯೋಜಿಸಲಾಗಿದೆ. ಮತದಾನ, ನಾಯಕತ್ವ, ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವ—ಇವೆಲ್ಲವನ್ನೂ ಮಕ್ಕಳು ತರಗತಿಯಲ್ಲಿ ಕೇಳುವುದಕ್ಕಿಂತ ಸ್ವತಃ ಅನುಭವಿಸುವಂತೆ ಮಾಡಲಾಗಿದೆ.

FLN – ಕಲಿಕೆಯ ಬುನಾದಿಗೆ ಬಲ  : 

ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (FLN) ಅಭಿವೃದ್ಧಿಗೆ ಬಹು-ಸಂವೇದನಾಶೀಲ ಕಲಿಕಾ ಉಪಕರಣಗಳು, ಭಾಷಾ ಪ್ರಯೋಗಾಲಯಗಳು, ಸ್ಥಳೀಯ ಭಾಷೆಯಲ್ಲಿ ವಿದ್ಯಾರ್ಥಿಗಳೇ ಸಂಪಾದಿಸುವ ಹಸ್ತಪ್ರತಿ “ಚಿಣ್ಣರಲೋಕ”, ಇಂಗ್ಲಿಷ್ ಕಲಿಕಾ ಬೆಂಚ್‌ಗಳು ಹಾಗೂ ಪರಿಕಲ್ಪನಾ ಆಧಾರಿತ ಗೋಡೆಚಿತ್ರಗಳಂತಹ ವೈವಿಧ್ಯಮಯ ಕಲಿಕಾ ವ್ಯವಸ್ಥೆಗಳನ್ನು ಬಳಸಲಾಗಿದೆ. ಇದರಿಂದ “ಪ್ರತಿ ಮಗು ಕಲಿಯಬೇಕು; ಕಲಿಕೆ ಆನಂದದಾಯಕವಾಗಿರಬೇಕು” ಎಂಬ ಆಶಯ ಸಾಕಾರಗೊಳ್ಳುತ್ತದೆ.

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ

ರತ್ನಕುಮಾರಿ ಅವರ ಶಿಕ್ಷಣದ ದೃಷ್ಟಿಕೋನವು ಕೇವಲ ಶೈಕ್ಷಣಿಕ ಸಾಧನೆಗೆ ಸೀಮಿತವಾಗಿಲ್ಲ. ದೈಹಿಕ ಆರೋಗ್ಯ, ಕ್ರೀಡೆ, ಯೋಗ, ಕಲೆ, ಸಂಸ್ಕೃತಿ, ಆರೋಗ್ಯ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನೂ ಸಮಾನವಾಗಿ ಒಳಗೊಂಡಿದೆ.

🧘 ಯೋಗ, ಕ್ರೀಡೆ ಮತ್ತು ಆರೋಗ್ಯ

ನಿಯಮಿತ ದೈಹಿಕ ಚಟುವಟಿಕೆ, ಯೋಗ ಹಾಗೂ ಅಥ್ಲೆಟಿಕ್ಸ್ ತರಬೇತಿಗೆ ಒತ್ತು ನೀಡಲಾಗಿದೆ. ಇದರ ಫಲವಾಗಿ ವಿದ್ಯಾರ್ಥಿನಿ ರಕ್ಷಿತಾ ಅವರು 100 ಮೀಟರ್ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಗಮನಾರ್ಹ ಸಾಧನೆಯಾಗಿದೆ.

🎶 ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆ

ಯಕ್ಷಗಾನ, ಶಾಸ್ತ್ರೀಯ ನೃತ್ಯ, ಸಂಗೀತ, ನಾಟಕ ಹಾಗೂ ಏಕಪಾತ್ರಾಭಿನಯದಂತಹ ಸಾಂಪ್ರದಾಯಿಕ ಮತ್ತು ಪ್ರದರ್ಶನ ಕಲೆಗಳಿಗೆ ಶಾಲೆಯಲ್ಲಿ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ.

ಇದರ ಮೂಲಕ ಮಕ್ಕಳು ಕೇವಲ ಪಾಠ ಕಲಿಯುವುದಲ್ಲ; ತಮ್ಮ ನೆಲ, ನುಡಿ ಮತ್ತು ಸಂಸ್ಕೃತಿಯನ್ನು ಅರಿತು ಬೆಳೆಸಿಕೊಳ್ಳುತ್ತಾರೆ.

🍎 ಆರೋಗ್ಯ ಮತ್ತು ಪೌಷ್ಟಿಕಾಂಶ ಜಾಗೃತಿ

ಪೋಷಣ ಅಭಿಯಾನ ಸೇರಿದಂತೆ ವಿವಿಧ ಆರೋಗ್ಯ ಮತ್ತು ಪೌಷ್ಟಿಕಾಂಶ ಆಧಾರಿತ ಕಾರ್ಯಕ್ರಮಗಳು ಹಾಗೂ ಪ್ರದರ್ಶನಗಳನ್ನು ಆಯೋಜಿಸಿ, ಆರೋಗ್ಯಕರ ಜೀವನಶೈಲಿಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲಾಗಿದೆ.

ಶಾಲೆ–ಪೋಷಕರು–ಸಮುದಾಯ: 

ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರು ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಗೆ ರತ್ನಕುಮಾರಿ ಅವರು ವಿಶೇಷ ಆದ್ಯತೆ ನೀಡಿದ್ದಾರೆ. ಮನೆಭೇಟಿಗಳು, ವಿದ್ಯಾರ್ಥಿಗಳ ಪೋರ್ಟ್‌ಫೋಲಿಯೋ ಕುರಿತು ಸಂವಾದ, ಸ್ವಯಂಸೇವಕ ಚಟುವಟಿಕೆಗಳು, ಶಾಲಾ ಆವರಣದ ಅಭಿವೃದ್ಧಿ ಕಾರ್ಯಗಳು ಹಾಗೂ ಸಹಭಾಗಿತ್ವದ ಶಾಲಾ ಆಡಳಿತದ ಮೂಲಕ ಪೋಷಕರು ಮತ್ತು ತಾಯಂದಿರ ಸಮಿತಿಯ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಶಾಲೆ ಕೇವಲ “ಮಕ್ಕಳು ಬರುವ ಸ್ಥಳ”ವಾಗಿರದೆ, “ಇಡೀ ಸಮುದಾಯದ ಶಾಲೆ”ಯಾಗಿ ರೂಪುಗೊಂಡಿದೆ.

ಸಮಟಗಾರುವಿನಿಂದ ದೆಹಲಿಯವರೆಗೆ...

ಅನೇಕ ಕಲಿಕಾ ಪೂರಕ ಚಟುವಟಿಕೆಗಳನ್ನು ನಿರಂತರವಾಗಿ ರೂಪಿಸಿ, ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಶ್ರೀಮತಿ ರತ್ನಕುಮಾರಿ ಅವರು ತಮ್ಮ ವಿದ್ಯಾರ್ಥಿಗಳ ಬದುಕಿನಲ್ಲಿ ಬದಲಾವಣೆಯನ್ನು ತಂದಿದ್ದಾರೆ. ಸುತ್ತಮುತ್ತಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೂ ಅವರು ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದಾರೆ.

ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ಮನಸ್ಸು ಮಾಡಿದರೆ ಒಂದು ಶಾಲೆಯ ರೂಪವನ್ನೇ ಬದಲಾಯಿಸಬಹುದು; ಒಂದು ಶಾಲೆಯನ್ನು ಬದಲಾಯಿಸಿದರೆ ಒಂದು ಗ್ರಾಮದ ಭವಿಷ್ಯವನ್ನೇ ಬದಲಾಯಿಸಬಹುದು ಎಂಬುದಕ್ಕೆ ರತ್ನಕುಮಾರಿ ಮೇಡಂ ಅವರ ಸೇವಾ ಪಯಣ ಅತ್ಯುತ್ತಮ ನಿದರ್ಶನ.

ಸಮಟಗಾರು ಎಂಬ ಪುಟ್ಟ ಗ್ರಾಮೀಣ ಶಾಲೆಯ ಮಣ್ಣಿನಿಂದ ಆರಂಭವಾದ ಅವರ ಪಯಣ, ರಾಷ್ಟ್ರಮಟ್ಟದ ಗೌರವದ ದೆಹಲಿ ವೇದಿಕೆಯವರೆಗೆ ತಲುಪಿರುವುದು ಕರ್ನಾಟಕದ ಶಿಕ್ಷಕ ಸಮುದಾಯವೇ ಹೆಮ್ಮೆ ಪಡುವ ಸಂಗತಿ.

ಇದು ಕೇವಲ ಒಬ್ಬ ಶಿಕ್ಷಕಿಗೆ ಸಂದ ರಾಷ್ಟ್ರ ಪ್ರಶಸ್ತಿಯ ಕಥೆಯಲ್ಲ. ಇದು ಗ್ರಾಮೀಣ ಶಿಕ್ಷಣದ ಶಕ್ತಿ, ಶಿಕ್ಷಕರ ಸಂಕಲ್ಪ, ಸಮುದಾಯದ ಸಹಕಾರ ಮತ್ತು ಮಕ್ಕಳ ಮೇಲಿನ ಅಪಾರ ಪ್ರೀತಿಯ ಕಥೆ. ಸಮಟಗಾರುವಿನಿಂದ ದೆಹಲಿಯವರೆಗೆ ಸಾಗಿದ ಈ ಸಾರ್ಥಕ ಪಯಣವನ್ನು “ಸವಿಜ್ಞಾನ” ಓದುಗರೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡಿದ ರತ್ನಕುಮಾರಿ ಮೇಡಂ ಅವರಿಗೆ ಹಾಗೂ ಈ ವರದಿಯನ್ನು ರೂಪಿಸಲು ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಅನಂತ ಧನ್ಯವಾದಗಳು.

ಶ್ರೀಮತಿ ರತ್ನಕುಮಾರಿ ಎಸ್. ಅವರಿಗೆ ಹಾರ್ದಿಕ ಅಭಿನಂದನೆಗಳು.

ನಿಮ್ಮ ಸಾಧನೆ ಗ್ರಾಮೀಣ ಭಾರತದ ಸಾವಿರಾರು ಶಿಕ್ಷಕರಿಗೆ ಪ್ರೇರಣೆಯಾಗಲಿ; ನಿಮ್ಮ ಶಾಲೆ ಇನ್ನೂ ಸಾವಿರಾರು ಮಕ್ಕಳ ಕನಸುಗಳಿಗೆ ರೆಕ್ಕೆಗಳಾಗಲಿ.



No comments:

Post a Comment